ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-36 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾನ್‌ ಚೇತನ ಅಖಂಡ ಕರ್ನಾಟಕ ಹೋರಾಟ ಅಖಂಡ ಕರ್ನಾಟಕದ ಕನಸಿನ ತುಡಿತ ಹೆಚ್ಚುತಿದ್ದಂತಕನ್ನಡದ ಅಭಿಮಾನಿಗಳು, ಕನ್ನಡದ ಸಾಹಿತಿಗಳು, ಕನ್ನಡಪರ ಸಂಘಟನೆಗಳು ಒಂದಾಗಿ ಎತ್ತಿಕೊಂಡಿದ್ದ ಹೋರಾಟದ ಧ್ವನಿ ನಿಧಾನವಾಗಿ ರಾಜಕೀಯದ ಗಾಳಿಯಲ್ಲಿ ಸಿಲುಕಿ ದಿಕ್ಕು ತಪ್ಪಿದುದನ್ನು ಕಣ್ಣಾರೆ ಕಂಡರೂ, ಅದನ್ನು ತಡೆಯಲಾಗದ ಅಸಹಾಯಕ ಸ್ಥಿತಿಗೆ ಸಾಹಿತಿಗಳು, ಕನ್ನಡ ಸಂಘಟನೆಗಳು ಮತ್ತು ಕನ್ನಡಾಭಿಮಾನಿಗಳು ಬಂದು ತಲುಪಿದ್ದರು. ಅಖಂಡ ಕರ್ನಾಟಕ ಹೋರಾಟವು ಒಂದು ಭೌಗೋಳಿಕ ಪ್ರದೇಶವನ್ನು ಒಂದಾಗಿಸುವುದರ ಜೊತೆಗೆ ಕನ್ನಡಿಗರ ಹೃದಯಗಳನ್ನು ಒಂದಾಗಿಸುವ ಕನಸಾಗಿತ್ತು. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ, ಕರಾವಳಿಯಿಂದ ಮಲೆನಾಡಿನವರೆಗೆ……ಕನ್ನಡದ ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಭಾವನೆ ನಮ್ಮನ್ನು ಒಂದೇ ನಾಡಿನ ಮಕ್ಕಳನ್ನಾಗಿ ಮಾಡಬೇಕು ಎಂಬುದು ಕನ್ನಡಿಗರ ಬಹುದಿನಗಳ ಕನಸಾಗಿತ್ತು….. ಆದರೆ ಅಖಂಡ ಕರ್ನಾಟಕದ ಬದಲಾಗಿ ಕರ್ನಾಟಕವನ್ನು ವಿಭಜಿಸುವ ಮಾತುಗಳು ಬಲ ಪಡೆಯತೊಡಗಿದವು. ಜನರ ಮನದಾಳದಲ್ಲಿ ಬೆಳೆದಿದ್ದ ಏಕೀಕರಣದ ಆಶಯಕ್ಕಿಂತ ರಾಜಕೀಯ ಲೆಕ್ಕಾಚಾರಗಳು ಮೇಲುಗೈ ಸಾಧಿಸಿದವು. ಭಾಷಾವಾರು ರಾಜ್ಯಗಳ ರಚನೆಯ ಪರವಾಗಿ ದೇಶದ ರಾಷ್ಟ್ರೀಯ ನಾಯಕರು ಮುಂದುವರಿದಿದ್ದರೂ, ಕರ್ನಾಟಕ ಒಂದಾಗಬೇಕು ಎಂಬ ಜನಮನದ ಬಯಕೆಯನ್ನು ರಾಜಕೀಯ ನಾಯಕತ್ವ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ವಿಫಲವಾಯಿತು. ಕೇಂದ್ರ ರಾಜಕಾರಣದ ಒತ್ತಡಗಳಿಗೆ ಕರ್ನಾಟಕದ ಅನೇಕ ರಾಜಕಾರಣಿಗಳು ಮಣಿದರು. ಹಿಂದೆ ಜನರಿಗೆ ನೀಡಿದ್ದ ಭರವಸೆಗಳು, ಆಡಿದ್ದ ಮಾತುಗಳು ಬದಲಾಗತೊಡಗಿದವು. ರಾಜಕೀಯ ಪಕ್ಷಗಳ ಹಿತಾಸಕ್ತಿಗಳು ಕನ್ನಡ ನಾಡಿನ ಒಗ್ಗಟ್ಟಿನ ಕನಸಿಗಿಂತ ದೊಡ್ಡದಾಗಿ ಕಾಣಿಸಿಕೊಂಡವು. ಹೋರಾಟದ ಉತ್ಸಾಹವೂ ಕ್ರಮೇಣ ಕುಗ್ಗತೊಡಗಿತು. ಇದನ್ನೆಲ್ಲ ಕಂಡ ಕನ್ನಡ ಅಭಿಮಾನಿಗಳು, ಕನ್ನಡ ಸಾಹಿತಿಗಳ ಮನಸ್ಸಿನಲ್ಲಿ ನೋವು ಮಡುಗಟ್ಟಿತು. ಕನ್ನಡಕ್ಕಾಗಿ ಎತ್ತಿದ ಧ್ವನಿ ರಾಜಕೀಯದ ಗದ್ದಲದಲ್ಲಿ ಕೇಳಿಸದಂತಾಯಿತು. ಕನ್ನಡಿಗರ ಭಾವೈಕ್ಯತೆಯ ಕನಸು ಕಣ್ಣೆದುರೇ ಮಸುಕಾಗುತ್ತಿರುವುದನ್ನು ಕಂಡರೂ, ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು. ….. ಎಲ್ಲೆಲ್ಲಿ ಕನ್ನಡದ ನುಡಿ ಕೇಳಿಸುತ್ತದೆಯೋ, ಅಲ್ಲೆಲ್ಲ ಕನ್ನಡಿಗರ ಹೃದಯ ಒಂದೇ ಬಡಿತದಲ್ಲಿ ಮಿಡಿಯಬೇಕು. ಪ್ರಾದೇಶಿಕ ಭಿನ್ನತೆಗಳನ್ನು ಮೀರಿ, ರಾಜಕೀಯ ಗಡಿಗಳನ್ನು ದಾಟಿ, ಕನ್ನಡದ ಹೆಸರಿನಲ್ಲಿ ಎಲ್ಲರೂ ಒಂದಾಗಬೇಕು….ಎನ್ನುವ ಕರೆ ಕೊಟ್ಟರು  ಜಯದೇವಿ ತಾಯಿಯವರು ಜನತೆಗೆ ಕರೆಕೊಟ್ಟರು. ಕನ್ನಡದ ನೆಲ-ನುಡಿ-ಸಂಸ್ಕೃತಿಯ ಭಾವೈಕ್ಯತೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಾಗಿತ್ತು….ಅಖಂಡ ಕರ್ನಾಟಕವೆಂದರೆ ಒಂದು ನಾಡಿನ  ಕೋಟ್ಯಂತರ ಕನ್ನಡಿಗರ ಹೃದಯದ ಕನಸು. ಆ ಕನಸು ಉಳಿಯುವವರೆಗೂ ಕನ್ನಡದ ಏಕತೆಯ ಜ್ಯೋತಿ ಎಂದಿಗೂ ಆರದಂತೆ ಜಯದೇವಿ ತಾಯಿಯವರು ಸತತವಾಗಿ ಹೋರಾಟಕ್ಕಿ ನಿಂತು ಕೊಂಡರು.ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಜಯದೇವಿ ತಾಯಿಯವರು ಹೆಜ್ಜೆ ಸೊಲ್ಲಾಪುರ ಸಹಿತ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಮಾಡುವದಾಗಿತ್ತು.    ೧೯೫೩ರಲ್ಲಿ ಆರ್ ವಿ ಬೀಡಪ್ಪ ,ಭೀಮಣ್ಣ ಖಂಡ್ರೆ, ಪ್ರಭುರಾಜ ಕಂಬಳಿವಾಲೆ ಮೊದಲಾದವರು ಸೇರಿ *ಪ್ರಜಾ ಸೋಶಿಯಾಲಿಸ್ಟಿಕ*ಪಾರ್ಟಿಯನ್ನು ಸ್ಥಾಪಿಸಿದ್ದರು…… ಜಮದೇವಿ ತಾಯಿಯವರು ಅವರೊಂದಿಗೆ ಪಕ್ಷ ಸಂಘಟನೆ ತೊಡಗಿಕೊಂಡಿದ್ದರು. ಇವರ ಒಡನಾಟದೊಂದಿಗೆ ಲೋಹಿಯಾ, ಜಯಪ್ರಕಾಶ ನಾರಾಯಣ, ಶಾಂತವೇರಿ ಗೋಪಾಲಗೌಡರ ಪ್ರಭಾವಕ್ಕೆ ಒಳಗಾಗಿದ್ದರು. ಈ ಮೂಲಕ ಒಬ್ಬ ಸಮಾಜವಾದಿಯಾಗಿ ಗುರುತಿಸಿಕೊಂಡರು ಮುಂದೆ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ(ಅ.ಕ.ರಾ.ನಿ) ಉಪಾಧ್ಯಕ್ಷವಾಗಿ ಕೆಲಸ ನಿರ್ವಹಿಸಿದರು. ೧೯-೪-೧೯೫೨ರಂದು ಹುಬ್ಬಳ್ಳಿಯ ಪುರಸಭಾ ಭವನದಲ್ಲಿ ನಡೆದ ಕೆಪಿಸಿಸಿ ಕಾರ್ಯಕಾರಿ ಸಭೆಯ ಕಾಂಗ್ರೆಸ್ಸಿನ ಎಲ್ಲ ಮುಖಂಡರು ಪಾಲ್ಗೊಳ್ಳುತ್ತಿದ್ದು ಅಂದೆ ಗಲಭೆಯು ನಡೆಯಿತು ಇದೆ ಹುಬ್ಬಳ್ಳಿಯ ಗಲಭೆ ಎಂದು ಹೆಸರಾಯಿತು. ಆಂಧ್ರದ ಹೋರಾಟಗಾರರಾದ ಪೊಟ್ಟು ಶ್ರೀರಾಮುಲು ಅವರ ಪ್ರೇರಣೆಯಿಂದ…. ಕರ್ನಾಟಕದ ಏಕೀಕರಣ ಆಗಲೇಬೇಕೆಂದು ಶಂಕರ ಗೌಡ ಪಾಟೀಲರು ಆ ಮರಣ ಉಪವಾಸ ಕುಳಿತದ್ದು ಈ ಉಪವಾಸವನ್ನು ನಿಲ್ಲಿಸಿ ಏಕೀಕರಣದ ಆಶಯವನ್ನು ಈಡೇರಿಸುವ ಕನಸು ಕಂಡಿದ್ದ ಜನತೆಗೆ ನಿರಾಸೆಗೊಳಿಸಿದ್ದು ಜಯದೇವಿ ತಾಯಿಯವರು ಮನನೋಯಿತು…. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಜಯದೇವಿ ತಾಯಿಯವರ ರಾಜಕೀಯ ಬದುಕಿನಲ್ಲಿ ಮಹತ್ವದ ತಿರುವು ಕಾಣಿಸಿಕೊಂಡಿತು. ಕಾಂಗ್ರೆಸಿನ ಸಾಂಪ್ರದಾಯಿಕ ರಾಜಕಾರಣದಿಂದ ಹೊರಬಂದು, ಜನಪರವಾದ ಹಾಗೂ ಸಮಾಜಮುಖಿ ಚಿಂತನೆಗಳಿಗೆ ಅವರು ಹೆಚ್ಚು ಒತ್ತು ನೀಡತೊಡಗಿದರು. ಇದೇ ಸಂದರ್ಭದಲ್ಲಿ ಸೊಲ್ಲಾಪುರ ಸೇರಿದಂತೆ ಕನ್ನಡ ಭಾಷಿಕ ಪ್ರದೇಶಗಳನ್ನು ಒಳಗೊಂಡ ಅಖಂಡ ಕರ್ನಾಟಕ ರಾಜ್ಯದ ನಿರ್ಮಾಣದ ಆಶಯ ಅವರ ರಾಜಕೀಯ ಚಟುವಟಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತು.. ಈ ಹೊಸ ರಾಜಕೀಯ ವೇದಿಕೆ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನಪರ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸಿತು.ಜಯದೇವಿ ತಾಯಿಯವರು ಈ ನಾಯಕರೊಂದಿಗೆ ನಿಕಟವಾಗಿ ಸಂಪರ್ಕ ಬೆಳೆಸಿಕೊಂಡು ಪಕ್ಷ ಸಂಘಟನೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಗ್ರಾಮೀಣ ಪ್ರದೇಶಗಳ ಜನರು, ಮಹಿಳೆಯರು ಹಾಗೂ ಸಾಮಾನ್ಯ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಿ ಪಕ್ಷದ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದರು  ಸಮಾಜವಾದಿ ನಾಯಕರ ಪ್ರಭಾವಪ್ರಜಾ ಸೋಶಿಯಲಿಸ್ಟ್ ಪಕ್ಷದ ಸಂಘಟನಾ ಕಾರ್ಯದ ಸಂದರ್ಭದಲ್ಲಿ ಜಯದೇವಿ ತಾಯಿಯವರಿಗೆ ದೇಶದ ಪ್ರಮುಖ ಸಮಾಜವಾದಿ ನಾಯಕರ ಚಿಂತನೆಗಳನ್ನು ಹತ್ತಿರದಿಂದ ಅರಿಯುವ ಅವಕಾಶ ದೊರೆಯಿತು.ವಿಶೇಷವಾಗಿ ಡಾ. ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ ಮತ್ತು ಶಾಂತವೇರಿ ಗೋಪಾಲಗೌಡ ಅವರ ವಿಚಾರಗಳು ಅವರ ಮೇಲೆ ಗಾಢವಾದ ಪ್ರಭಾವ ಬೀರಿದವು.ಲೋಹಿಯಾ ಅವರ ಸಾಮಾಜಿಕ ಸಮಾನತೆ, ಹಿಂದುಳಿದ ವರ್ಗಗಳ ಪ್ರಗತಿ ಮತ್ತು ಅಧಿಕಾರದ ಕೇಂದ್ರೀಕರಣದ ವಿರೋಧದ ಚಿಂತನೆಗಳು ಜಯದೇವಿ ತಾಯಿಯವರನ್ನು ಆಕರ್ಷಿಸಿದವು. ಜಯಪ್ರಕಾಶ ನಾರಾಯಣ ಅವರ ಜನಪರ ರಾಜಕಾರಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳು ಅವರ ರಾಜಕೀಯ ದೃಷ್ಟಿಕೋನವನ್ನು ಮತ್ತಷ್ಟು ವಿಸ್ತರಿಸಿದವು.ಅದೇ ರೀತಿ ಶಾಂತವೇರಿ ಗೋಪಾಲಗೌಡರ ಸರಳ ಜೀವನ, ರೈತಪರ ನಿಲುವು, ಸಮಾಜವಾದಿ ಬದ್ಧತೆ ಮತ್ತು ಜನರೊಂದಿಗೆ ಬೆರೆತು ಹೋರಾಟ ನಡೆಸುವ ಗುಣಗಳು ಜಯದೇವಿ ತಾಯಿಯವರ ಮೇಲೆ ಪರಿಣಾಮ ಬೀರಿದವು. ಸಮಾಜವಾದಿಯಾಗಿ ರೂಪುಗೊಂಡ ಜಯದೇವಿ ತಾಯಿಯವರು ಸಮಾಜವಾದಿ ನಾಯಕರ ಒಡನಾಟ ಮತ್ತು ಅವರ ವಿಚಾರಧಾರೆಯ ಅಧ್ಯಯನದಿಂದ ಜಯದೇವಿ ತಾಯಿಯವರ ರಾಜಕೀಯ ವ್ಯಕ್ತಿತ್ವ ಹೊಸ ರೂಪ ಪಡೆದುಕೊಂಡಿತು. ರಾಜಕೀಯವೆಂದರೆ  ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರುವ ಸಾಧನ ಎಂಬ ನಂಬಿಕೆ ಅವರಲ್ಲಿ ಗಟ್ಟಿಯಾಯಿತು. ಸಾಮಾಜಿಕ ಅಸಮಾನತೆ, ಶೋಷಣೆ, ಬಡತನ, ಮಹಿಳೆಯರ ಸಮಸ್ಯೆಗಳು ಮತ್ತು ಹಿಂದುಳಿದ ಜನಸಮುದಾಯಗಳ ಹಕ್ಕುಗಳಂತಹ ವಿಚಾರಗಳ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸಿದರು. ಈ ಹಂತದಲ್ಲಿ ಅವರು ಒಬ್ಬ ಬದ್ಧ ಸಮಾಜವಾದಿ ನಾಯಕಿಯಾಗಿ ತಮ್ಮದೇ ಆದ ಗುರುತನ್ನು ರೂಪಿಸಿಕೊಂಡರು.ಅಖಂಡ ಕರ್ನಾಟಕದ ಆಶಯದೊಂದಿಗೆ ಸಮಾಜವಾದಿ ಚಿಂತನೆಜಯದೇವಿ ತಾಯಿಯವರ ರಾಜಕೀಯ ಚಿಂತನೆಗಳಲ್ಲಿ ಸಮಾಜವಾದ ಮತ್ತು ಅಖಂಡ ಕರ್ನಾಟಕದ ಹೋರಾಟ ಪರಸ್ಪರ ಬೆಸೆದುಕೊಂಡಿದ್ದವು. ಕರ್ನಾಟಕದ ವಿವಿಧ ಭಾಗಗಳಲ್ಲಿ ಚದುರಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತಾತ್ಮಕ ಘಟಕವಾಗಿ ಸೇರಬೇಕು ಎಂಬುದು ಅವರ ಪ್ರಮುಖ ಆಶಯವಾಗಿತ್ತು.ಅವರ ದೃಷ್ಟಿಯಲ್ಲಿ ಕರ್ನಾಟಕ ಏಕೀಕರಣವೆಂದರೆ ಕರ್ನಾಟಕದ ಪ್ರತಿಯೊಂದು ಭಾಗದ ಜನರಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ದೊರೆಯಬೇಕು ಎಂಬುದೂ ಅದರ ಭಾಗವಾಗಿತ್ತು. ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನಲ್ಲಿ ಜವಾಬ್ದಾರಿ ಹಂತದಲ್ಲಿ ಜಯದೇವಿ ತಾಯಿಯವರು ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ (ಅ.ಕ.ರಾ.ನಿ.) ಉಪಾಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡರು. ಇಂಥ ಸ್ಥಾನವು ಅವರ ರಾಜಕೀಯ ಜೀವನದ ಮಹತ್ವದ ಘಟ್ಟವಾಗಿತ್ತು. ಈ ಹುದ್ದೆಯ ಮೂಲಕ ಅವರು ಅಖಂಡ ಕರ್ನಾಟಕದ ವಿಚಾರವನ್ನು ಜನರ ಮುಂದೆ ನಿರಂತರವಾಗಿ ಪ್ರಸ್ತಾಪಿಸಿದರು. ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣ, ಕನ್ನಡಿಗರ ಹಕ್ಕುಗಳು ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯ ಪರವಾಗಿ ಧ್ವನಿ ಎತ್ತಿದರು. ಹೋರಾಟ ಮತ್ತು ವಿಚಾರಧಾರೆಯ ಸಂಗಮಜಯದೇವಿ ತಾಯಿಯವರ ರಾಜಕೀಯ ಪಯಣವನ್ನು ಗಮನಿಸಿದಾಗ, ಅವರ ಬದುಕಿನಲ್ಲಿ ಕನ್ನಡದ ಮೇಲಿನ ಅಭಿಮಾನ, ಅಖಂಡ ಕರ್ನಾಟಕದ ಕನಸು ಮತ್ತು ಸಮಾಜವಾದಿ ವಿಚಾರಧಾರೆ ಒಂದಕ್ಕೊಂದು ಪೂರಕವಾಗಿ ಬೆಳೆದಿರುವುದು ಕಾಣಿಸುತ್ತದೆ.ಕಾಂಗ್ರೆಸ್‌ನಿಂದ ಹೊರಬಂದ ನಂತರ ಅವರು ಆಯ್ದುಕೊಂಡ ದಾರಿ ಸುಲಭವಾದದ್ದಾಗಿರಲಿಲ್ಲ. ಆದರೆ ಅಧಿಕಾರದ ರಾಜಕಾರಣಕ್ಕಿಂತ ತತ್ವ, ಜನಪರತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ  ಬದುಕನ್ನು ಅವರು ಕಟ್ಟಿಕೊಂಡರು.ಹೀಗಾಗಿ ಜಯದೇವಿ ತಾಯಿಯವರು ಅಖಂಡ ಕರ್ನಾಟಕದ ಕನಸನ್ನು ಹೊತ್ತ ಕನ್ನಡತಿ, ಸಮಾಜವಾದಿ ಚಿಂತನೆಯ ಹೋರಾಟಗಾರ್ತಿ ಮತ್ತು ಜನಪರ  ಪ್ರತಿನಿಧಿಯಾಗಿ ಗುರುತಿಸುವುದು ಹೆಚ್ಚು ಸೂಕ್ತವಾಗಿದೆ. ಸವಿತಾ ದೇಶಮುಖ

Read Post »