![](https://sangaati.in/wp-content/uploads/2022/04/WhatsApp-Image-2022-04-01-at-09.26.39-1.jpeg)
ಯುಗಾದಿ ವಿಶೇಷ
ರಾಜ ವಸಂತ ಬಂದ
ನೂತನ ಕುಲಕರ್ಣಿ
![](https://sangaati.in/wp-content/uploads/2022/04/image-1.jpeg)
ಮಾಮರದ ಚಿಗುರಿನೊಳಗ
ಸುಯ್ಯಂತ ತೂಗಿ ತೂಗಿ ,
ಕಹುಕುಹೂ ಕೂಗಿ ಕೂಗಿ ,
ಏನ ಹಾಡುವಿ ಕೋಗಿಲೆ ?
"ಅದೋ ಬಂದ ಅತ್ತಲಿಂದ
ರಾಜ ವಸಂತ ಗತ್ತಿನಿಂದ;
ಹಾಡುತಿರುವೆ ಪರಾಕು ಗೆಳತೀ
ಸಾವರಿಸು , ಸಡಗರಿಸು .
ರಾಜ ಬರುವ ಹಾದಿಯೊಳಗ
ಚಿಗುರು ತಳಿರು ತೋರಣ ,
ಬಣ್ಣದ್ಹೂಗಳ ಅಂದಣ .
ಭುವಿಯ ಸೀರಿ ಸೆರಗಿಗೆ
ಬಂಗಾರದ ಬೆಳಿ ಬಾಗಿಣ .
ಅವನ ಹಿಂದ ಮುಂದ ಎಲ್ಲಾ
ಶಾಂತಿ ಸುಖದ ದಿಬ್ಬಣ !
ವಸಂತನ ಒಡ್ಡೋಲಗದಾಗ
ಹಕ್ಕಿ ಪಿಕ್ಕಿ ನದಿ ಗಾಳಿಯ
ಮುದ ಮೀರಿದ ಗಾಯನ .
ಚಲುವು ಒಲವು ಯೌವ್ವನದ
ಮದವೇರಿದ ನರ್ತನ .
ಸಂಗೀತ ಸಾಹಿತ್ಯ ಕಲೆಯ
ನಿತ್ಯ ಮತ್ತ ಮಧುಪಾನ !
ಅವನ ರಾಜ್ಯಭಾರದೊಳಗ
ಸುಖಕಿಲ್ಲ ಚೂರೂ ಕೊರತಿ .
ಅಲ್ಲು , ಇಲ್ಲು , ಎಲ್ಲೆಲ್ಲೂ
ಹರುಷ ಉಕ್ಕಿ ಹರಿವ ಒರತಿ .
ಅವನಿದ್ದ ಕಡೆಗೆಂದೂ ಇಲ್ಲ
ಸಾವು ನೋವು ಯುದ್ಧ ಭೀತಿ
ಬರೀ ಪ್ರೀತಿ , ಪ್ರೀತಿ , ಪ್ರೀತಿ !!
ಇನ್ಯಾತಕ ಬೇಕ ಚಿಂತಿ ?
ರಾಜ ವಸಂತ ಬಂದ ಗೆಳತೀ :
ಸಾವರಿಸು , ಸಡಗರಿಸು !!"
![](https://sangaati.in/wp-content/uploads/2022/04/83f33b7b-14fa-4557-b182-7789fd8c4576-2.jpg)
ಎಂಥಾ ರಮ್ಯ ಕಲ್ಪನೆ….ನೂತನ್ ಮೇಡಂ….ಈ ಬೆಸರಿಕೆಗೆ ಇಂಥದೊಂದು ಚೆಲುವೆ ಕಲ್ಪನೆ ಬೇಕಿತ್ತು….
Thanks Mamata.