ಆಕಾಶಯಾನವೂ ಆಧ್ಯಾತ್ಮಿಕ ಚಿಂತನೆಯೂ

ಲೇಖನ

ಚಂದಕಚರ್ಲ ರಮೇಶ ಬಾಬು

ತಲೆಬರಹ ನೋಡಿಯೇ ಇದೇನಪ್ಪ ಇವನು ಯಾವುದನ್ನ ಯಾವುದಕ್ಕೋ ಜೋಡಿಸ ತೊಡಗಿದ್ದಾನೆ ಎನ್ನುತ್ತೀರಾ !

ಕರ್ಮಸಿದ್ಧಾಂತಕ್ಕೂ ನಾವು ಕೈಗೊಳ್ಳುವ ವಿಮಾನಯಾನಕ್ಕೂ ಎಲ್ಲಿಯ ಸಾಪತ್ಯ ವೆನ್ನುತ್ತೀರಾ !. ಏನೋ ಹೇಳಲು ಹೋಗಿ ಏನೋ ಹೇಳ್ತಿದೀನಿ ಅಂತ ಅನ್ನಿಸ್ತಿದೆಯಾ ? ಅದೇನೂ ಅಲ್ಲ. ನಾನು ನಿಮಗೆ ಅನುಭವಗಳ ದೃಷ್ಟಾಂತಗಳನ್ನು ಕೊಡುತ್ತಾ ಹೋದಾಗ ನೀವೇ ಒಪ್ತೀರಾ ! ಆದ್ರೆ ಒಂದು. ಇದು ಹೊಂದೋದು ವಿದೇಶೀ ವಿಮಾನಯಾನಕ್ಕೆ ಮಾತ್ರ. 

ಈಗ ನಾವು ಇದರ ಚರ್ಚೆಗೆ ಬರೋಣ. ನೀವು ನಮ್ಮ ದೇಶದ ಯಾವುದೋ ವಿಮಾನ ನಿಲ್ದಾಣದಿಂದ ವಿದೇಶೀಯಾನಕ್ಕೆ ತಯಾರಾಗಿದ್ದೀರಿ. ನಿಮ್ಮನ್ನ ಬೀಳ್ಕೊಡಲು ನಿಮ್ಮವರೆಲ್ಲಾ ಬಂದಿದ್ದಾರೆ. ನಿಮ್ಮನ್ನ ಅಪ್ಪಿಕೊಂಡು ಕನ್ನಡದಲ್ಲೋ ಇಂಗ್ಲೀಷಿನಲ್ಲೋ ಶುಭಯಾತ್ರೆ ಹೇಳುತ್ತಾರೆ. ನೀವು ಒಳಗಡೆಗೆ ಸಾಗುತ್ತೀರಿ ಕೈಬೀಸುತ್ತಾ. ಅವರು ಅಲ್ಲೇನಿಲ್ಲುತ್ತಾರೆ. ಕ್ರಮೇಣ ಅವರು ಕಣ್ಮರೆಯಾಗುತ್ತಾರೆ. ಅಲ್ಲಿಂದ ಮೊದಲಾಗುತ್ತದೆ ನಿಮ್ಮ ಕರ್ಮಕಾಂಡ. ಇಲ್ಲಿಂದ ಹಿಡಿದು ನೀವು ಅದ್ಯಾವುದೋ ದೇಶದ ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುವ ವರೆಗೂ ನಿಮಗಾಗುವ ಅನುಭವ ನಿಮಗೊಂದು ಹೊಸ ಜನ್ಮ ತಾಳಿ ಬಂದಂತೆ ಎಂದು ನನ್ನ ಅನಿಸಿಕೆ. ಈ ಪ್ರಯಾಣದಲ್ಲಿ ನಿಮಗೆ ಸಿಗುವ ಅನುಭವಗಳು ನೀವು ಮಾಡಿದ ಪಾಪ ಪುಣ್ಯಗಳ ಮೇಲೆ ಅಂದರೇ ಕರ್ಮ ಸಿದ್ಧಾಂತದ ಮೇಲೆ ಅವಲಂಬಿಸಿರುತ್ತವೆ ಎಂದು ನನ್ನ ಭಾವನೆ.

ಮುಂಚೆ ನಾವೆಲ್ಲಾ ವಿಮಾನಯಾತ್ರೆ ಮಾಡುತ್ತೇವೆಂದು ಎಣಿಸಿದವರಲ್ಲ. ನಮ್ಮ ಚಿಕ್ಕಂದಿನ ದಿನಗಳಲ್ಲಿ ( ನಾನೀಗ ೬೬ ವರ್ಷದವ ) ಮೇಲೆ ಹಾರುತ್ತಿದ್ದ ವಿಮಾನವನ್ನು ತಲೆ ಎತ್ತಿ  ನೋಡುತ್ತಾ ಕೈ ಬೀಸುವುದೊಂದೇ ನಮಗೆ ಗೊತ್ತಿತ್ತು. ನಾವು ಬೀಸುವ ಆ ಕೈ ಅಲ್ಲಿಯವರಿಗೆ ಕಾಣುವುದಿಲ್ಲ ಅಂತ ಸಹ ನಮಗೆ ಆಗ ತಿಳಿದಿರಲಿಲ್ಲ. ಕೆಲಸಕ್ಕೆ ಸೇರಿ ಪದವಿಗಳಲ್ಲಿ ಮೇಲೇರಿ ಒಂದು ಹಂತ ತಲುಪಿದಾಗ ಕಚೇರಿಯ ವತಿಯಿಂದ ವಿಮಾನಯಾನದ ಸವಲತ್ತು ದೊರೆಯಿತು. ಎಷ್ಟೋ ಸರ್ತಿ ನಾನಿರುವ ಹೈದರಾಬಾದಿನಿಂದ  ಬೆಂಗಳೂರು, ಚೆನ್ನೈ, ಮುಂಬೈ, ಕಲಕತ್ತಾ, ಭುವನೇಶ್ವರ್, ದಿಲ್ಲಿ ಮುಂತಾದ ಊರುಗಳಿಗೆ ವಿಮಾನಗಳಲ್ಲಿ ಹೋದದ್ದು ಇದೆ. ಅಲ್ಲೂ ಸಹ ಮೊದಲ ಸಲ ಪ್ರಯಾಣ ಮಾಡುವಾಗ ಕೆಲ ಅನುಭವಗಳಾಗಿದ್ದರೂ ಅವ್ಯಾವೂ ಮೆಲಕು ಹಾಕುವಂಥವುಗಳಾಗಿರಲಿಲ್ಲ. ಮತ್ತೂ ಈ ಥರದ ವೇದಂತ ಧೋರಣಿಯನ್ನು ಅವಲಂಬಿಸುವಷ್ಟು ತೀಕ್ಷ್ಣವಾಗಿರಲಿಲ್ಲ.

ನನ್ನ ಮಗಳ ಮದುವೆ ಅಮೆರಿಕಾ ಹುಡುಗನೊಂದಿಗೆ ಆದಾಗ ಮಾತ್ರ ನಮ್ಮ ಅಮೆರಿಕಾ ಪ್ರವಾಸ ಕರಾರು ಆದಂತಿತ್ತು.  ಹೊರಡಬೇಕೆಂದು ನಿರ್ಧಾರವಾದಾಗ ವೀಸಾ ಅನುಮತಿ ಪಡೆಯಲು ಮಾಡಬೇಕಾದ ಪದ್ಧತಿಗಳ ಬಗ್ಗೆ ನನ್ನ ಮಗಳು ಮತ್ತು ಅಳಿಯ ತುಂಬಾ ಶ್ರದ್ಧೆ ವಹಿಸಿ ಅದಕ್ಕೆ ಬೇಕಾದ ಕ್ರಮದ ಬಗ್ಗೆ ನಮಗೆ ತಿಳಿಸಿ ಹೇಳಿದರು.  ನಮಗೆ ಆ ಪ್ರಶ್ನೋತ್ತರದ ತರಬೇತಿ ನೋಡಿಯೇ ಒಂಥರಾ ಕಳವಳ ಪ್ರಾರಂಭವಾಗಿತ್ತು. ಒಳ್ಳೆ ಪರೀಕ್ಷೆಗೆ ತಯಾರಿ ನಡೆಸಿದ ಹಾಗೆ ನಡೆದಿತ್ತು. ನಡುವಿನಲ್ಲಿ ನನ್ನ ಮಗಳ ಅಣಕು ಸಂದರ್ಶನ ಸಹ ನಡೆದಿತ್ತು.   ವೀಸಾ ಕಚೇರಿಯಲ್ಲಿ ನಡೆದ ಸಂದರ್ಶನದಲ್ಲಿ ಅಲ್ಲಲಿ ಸ್ವಲ್ಪ ತಡವರಿಸಿದರೂ ಮೊದಲನೇ ಸಂದರ್ಶನದಲ್ಲೇ ವೀಸಾ  ಪಡೆಯಲು ಯಶಸ್ವಿಯಾದೆವು. ಅಲ್ಲಿಂದ ಪ್ರಾರಂಭವಾಯಿತು ನಮ್ಮ ಪ್ರಯಾಣದ ಸಿದ್ದತೆ. ನಾವು ಕೊಂಡೊಯ್ಯಬೇಕಾದ ನಾಲ್ಕು ಪೆಟ್ಟಿಗೆಗಳ ಸರಿಯಾದ ಅಳತೆ, ಅವುಗಳ ಒಂದೊಂದರ ಭಾರ, ತೆಗೆದುಕೊಂಡು ಹೋಗಬೇಕಾದ ವಸ್ತುಗಳ ಪಟ್ಟಿ, ಮತ್ತೆ ಅಮೆರಿಕಾಗೆ ತರಬಾರದ ವಸ್ತುಗಳ ಬಗ್ಗೆ ನಮಗೆ ತಿಳಿಹೇಳುತ್ತಾ ಮಗಳು ಅಳಿಯ ನಮಗೆ  ಮನದಟ್ಟು ಮಾಡಿಸಿದರು. ನಾವು ಸಹ ಅಂತರ್ಜಾಲದಲ್ಲಿ ಹುಡುಕಿ, ನಿಷಿದ್ಧವಾದ ವಸ್ತುಗಳನ್ನ ಬಿಟ್ಟು ಉಳಿದದ್ದನ್ನೇ ಕಟ್ಟಿಕೊಂಡೆವು, ಅಥವಾ ಹಾಗೆ ಅಂದುಕೊಂಡೆವು. ಎರಡೆರಡು ಸರ್ತಿ ಸರಿ ನೋಡಿಕೊಂಡು ಸಿದ್ದರಾದೆವು. ಅವರ ಮಾರ್ಗದರ್ಶನದಲ್ಲಿ ಏನೂ ಸಮಸ್ಯೆ ಬರಲಿಕ್ಕಿಲ್ಲ ಎಂದು ಮುಂದುವರೆಸಿದೆವು. ನಾವು ಹೈದರಾಬಾದಿನಿಂದ ಹೊರಟು ದುಬೈನಲ್ಲಿ ವಿಮಾನ ಬದಲಿಸಬೇಕಿತ್ತು.  ಹೈದರಾಬಾದ್ ನಲ್ಲಿ ಮತ್ತೆ ದುಬೈನಲ್ಲಿ ಯಾವುದೇ ತರದ ಅಡಚಣೆಯಾಗಲಿಲ್ಲ. ದುಬೈನಲ್ಲಿ ನಮ್ಮ ಗೇಟ್ ಹುಡುಕಲು ತುಂಬಾ ತಡವಾಗಿ ಏನೂ ತಿನ್ನದೇ ವಿಮಾನದೊಳಗೆ ಹಸಗೊಂಡು ಕೂತು ಅವರು ಯಾವಾಗ ತಿನ್ನಲು ಕೊಡುತ್ತಾರೋ ಎಂದು ಕಾದದ್ದು ಬಿಟ್ಟರೇ ಮತ್ಯಾವ ತೊಂದರೆಯೂ ಆಗಿರಲಿಲ್ಲ. ಸಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿದು  ಅಲ್ಲಿಯ ವಲಸೆ ಬರುವವರನ್ನು ಪ್ರಶ್ನಿಸುವ ಕಿಡಿಕಿಯಲ್ಲಿ ಮತ್ತೆ ಸ್ವಲ್ಪ ತಡವರಸಿ ಉತ್ತರಕೊಟ್ಟು ಕಿಡಿಕಿಯ ಹಿಂದಿನ ಅಧಿಕಾರಿಯ ಕೊಂಕು ನಗೆಯನ್ನು ಸಹಿಸಿ  ನಮ್ಮ ನಾಲ್ಕು ಪೆಟ್ಟಿಗೆಗಳನ್ನ ಟ್ರಾಲಿ ಮೇಲೆ ಕಷ್ಟಪಟ್ಟು ಸೇರಿಸಿ ಅವರು ಹೋಗು ಎಂದ ಕಡೆಗೆ  ಹೊರಟೆವು. ಎಲ್ಲವೂ ಸಲೀಸಾಗಿ ಸಾಗುತ್ತಿದೆ ಎನಿಸಿತ್ತು. ಅದು ಬರೀ ಭ್ರಮೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.

ನಮ್ಮ ಪೆಟ್ಟಿಗೆಗಳು ಕ್ಷಕಿರಣದ ಪರೀಕ್ಷೆಗೆ ಒಳಪಡಬೇಕೆಂದು ಬರೆಯಲಾಗಿತ್ತು. ಮೊದಲನೆ ಸಲ ಅಮೆರಿಕಾಗೆ ಬಂದ ನಮ್ಮಂತ ಹಿರಿಯರ ಪೆಟ್ಟಿಗೆಗಳು ಕಡ್ಡಾಯವಾಗಿ ತಪಾಸನೆಗೊಳಗಾಗುತ್ತವೆ ಅಂತ ನಂತರ ನನ್ನ ಮಗಳು ಹೇಳಿದಳು. ಅಮೆರಿಕದವರಿಗೆ ಭಾರತೀಯರ ಕೌಟುಂಬಿಕ ಒಲವಿನ ಬಗ್ಗೆ ತುಂಬಾ ಗುಮಾನಿಯಂತೆ. ಅದರಲ್ಲೂ ಇಲ್ಲಿಯ ತಿಂಡಿಗಳನ್ನು ತಮ್ಮ ಮಕ್ಕಳ ಸಲುವಾಗಿ ತಂದೇ ತರುತ್ತಾರೆ ಅಂತ ಅವರಿಗೆ ಖಾತರಿಯಂತೆ. ಹಾಗಾಗಿ ತಪಾಸನಾ ಮಶೀನಿಗೆ ಪೆಟ್ಟಿಗೆಗಳನ್ನ ಕಷ್ಟದಿಂದ ಟ್ರಾಲಿಯಿಂದ ಹಾಕಿ ಈಚೆ ಬಂದು ನಿಂತೆವು. ಒಂದೊದೇ ಪೆಟ್ಟಿಗೆಯನ್ನ  ತೆಗೆಯಲು ಹೇಳಿ ಅವುಗಳಳೊಗಿನ ಪದಾರ್ಥಗಳನ್ನು ತಪಾಶಿಸುತ್ತಿದ್ದರು. ನಾವು ಇಲ್ಲಿಂದ ಹೊತ್ತ ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಸಿಹಿತಿಂಡಿ ಇವುಗಳೆಲ್ಲಾ ಅವರ ಪರೀಕ್ಷೆಗೆ ಒಳಗಾದವು. ನಮಗೆ ನಮ್ಮ ಮೇಲೆ ಭರವಸೆ. ಅಂಥದ್ದೇನೂ ತಂದಿಲ್ಲವಾದ್ದರಿಂದ ಬೇಗ ಮುಗಿಯಬಹುದೆಂದು. ಕೊನೆಯಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಿಡಿದು ಬೆಕ್ಕಿನ ಮರಿಯನ್ನು ಎತ್ತುವ ಹಾಗೆ ಎತ್ತಿ, ನಮಗೆ ತೋರಿಸುತ್ತಾ “ಇದೇನಿದು “ ಎಂದರು ಇಂಗ್ಲೀಷ್ ನಲ್ಲಿ. ಅವರ ಮುಖಚರ್ಯೆ ನೋಡಿದರೇ ನಮ್ಮ ಭಾರತದವರೇ ಎನಿಸಿತು. ನಮ್ಮವರೇ ಆದಕಾರಣ ಅವರನ್ನು ಸಮಜಾಯಿಸಬಹುದು ಎಂದುಕೊಳ್ಳುತ್ತಾ “ ಇದು ಬದರೀನಾರಾಯಣನ ಪ್ರಸಾದ ಮೇಡಮ್ “ ಎಂದೆವು. ಅವರು ಇನ್ನೇನು ನಮ್ಮ ಈ ಸಮಜಾಯಿಷಿಗೆ ಒಪ್ಪೇ ಬಿಡುತ್ತಾರೆ ಎನ್ನುವ ಭರವಸೆ ನಮ್ಮದು. ಆದರೇ ಹಾಗೆ ಆಗಲಿಲ್ಲ. ಅವರು ತಮ್ಮ ಮುಖಭಾವವನ್ನ ಒಂಚೂರೂ ಬದಲಿಸದೇ “ ಸೋ ಆದರೇನಂತೆ . ಇದರಲ್ಲಿರುವುದು ಅಕ್ಕಿ ಮತ್ತು ಕಡಲೇಬೇಳೆ ತಾನೇ ? ಇದು ಅಮೆರಿಕಾಕ್ಕೆ ತರಬಾರದು ಅಂತ ನಿಮಗೆ ಗೊತ್ತಿಲ್ವಾ ?  ಹೀಗೆ ತಂದವರಿಗೆ ಮುನ್ನೂರು ಡಾಲರ್ ಜುರ್ಮಾನೆ ಬೀಳುತ್ತೆ. ಗೊತ್ತಾ ? “ ಎಂದರು. ನಾನು ಸ್ವಲ್ಪ ಅಧಿಕ ಪ್ರಸಂಗತನ ಮಾಡುತ್ತಾ “ ಮ್ಯಾಡಮ್ ! ಬೀಜಗಳು ತರಬಾರದು ಅಂತ ಬರೆದಿದ್ದಾರೆ. ಇವುಗಳು ಬೀಜ ಅಲ್ಲವಲ್ಲ. ಇವುಗಳನ್ನ ಬಿತ್ತಿದರೇ ಮೊಳಕೆ ಬರುವುದಿಲ್ಲ “ ಎಂದೆ. ಅದಕ್ಕವರು ಕೂಲಾಗಿ “ ಇಲ್ಲಿಯ ಸರಕಾರದಲ್ಲಿ ಕೆಲಸ ಮಾಡುವವರು ನೀವೋ ನಾನೋ ? ಇಲ್ಲಿಗೆ ಯಾವುದು ತರಬೇಕು ಯಾವುದು ಬೇಡ ಅಂತ ನಾನು ನಿಮ್ಮಿಂದ ತಿಳಿಯಬೇಕಿಲ್ಲ. ದಿಸೀಜ್ ನಾಟ್ ಅಲೋಡ್ “ ಎನ್ನುತ್ತಾ ಆ ಚೀಲವನ್ನ ಕಸದ ಬುಟ್ಟಿಗೆ ಹಾಕಿದರು. ನನ್ನ ಹೆಂಡತಿ “ ಅಯ್ಯೋ” ಎಂದಳು . “ಪಾಪೀ” ಎನ್ನುವ ಕೂಗು ಅವಳ ಕೊರಳಲ್ಲೇ ಹೂತುಹೋಗಿತ್ತು..  ಅವಳ ಕೈ ಅಮುಕುತ್ತಾ ಅಲ್ಲಲ್ಲಿ ಹರಡಿದ ಉಳಿದ ಸಾಮಾನನ್ನು ಮತ್ತೆ ಪೆಟ್ಟಿಗೆಗಳೊಳಗೆ ಜೋಡಿಸಿ ನಾವು ಹೊರಬಂದೆವು. ನನ್ನ ಹೆಂಡತಿಯಂತೂ  ಪ್ರಸಾದ ಕಸದ ಬುಟ್ಟಿಗೆ ಬಿದ್ದ ಶಾಕಿನಿಂದ ಹೊರಬಂದಿರಲಿಲ್ಲ. ಹೊರಗೆ ಸಿಕ್ಕ ನನ್ನ ಮಗಳು ಮತ್ತು ಅಳಿಯಂದಿರೊಡನೆ “ ನಿಮ್ಮ ಅಮೆರಿಕಾ ಏನ್ ಚೆನ್ನಾಗಿಲ್ಲ. ಅವಳ್ಯಾರೋ ನಮ್ಮದೇಶದವಳೇ ಆದ್ರೂ ಪ್ರಸಾದ ಅಂತ ಹೇಳ್ತಿದ್ರೂ ಕಸದ ಬುಟ್ಟಿಗೆ ಹಾಕಿದ್ಲು. “ ಅಂತ ಹಾರಾಡಿದ್ಲು. ಈಗ ಹೇಳಿ. ಎಲ್ಲಾ ತರ ನಾವು ತರಬೇತಿ ಪಡೆದರೂ ಸಹ ನಮಗೀ ಅನುಭವ ಬೇಕಿತ್ತೇ ? ಅದಕ್ಕೇ ನಾನು ಹೇಳಿದ್ದು. ವಿಮಾನಾಶ್ರಯದ ಒಳಗೆ ಹೊಕ್ಕಾಗಿನಿಂದ ಮತ್ತೆ ಹೊರಗೆ ಬರುವವರೆಗೆನ  ಪ್ರಯಾಣ ನಮ್ಮ ಮಾನವ ಜನ್ಮದ ತರಾ. ಮನುಷ್ಯರಾಗಿ ನಾವು ಏನೆಲ್ಲಾ ಕಷ್ಟ ಸುಖ ಅನುಭವಿಸಿರುತ್ತೇವೋ ಇಲ್ಲಿ ಸಹ ಹಾಗೇನೇ. ಏನೇನು ಅನುಭವ ಕಾದಿರುತ್ತಾವೋ ಗೊತ್ತಾಗುವುದಿಲ್ಲ. ಒಟ್ಟಾರೆ ನಮ್ಮಪುಣ್ಯ. ಅಥವಾ ಪಾಪ  ಅಂತಿಟ್ಕೊಳ್ಳಿ.

ಒಂದು ಅನುಭವಕ್ಕೇ ನಾನಿಷ್ಟು ವೇದಾಂತಿಯಾಗಬೇಕಾಗಿಲ್ಲ ಅಂತ ನೀವನ್ನಬಹುದು. ಮುಂದೆ ಕೇಳಿ. ನಾವುಗಳು ಬಂದಮೇಲೆ ನಮ್ಮ ಬೀಗರು ಅಮೆರಿಕಾಕ್ಕೆ ಹೊರಟರು. ನಮ್ಮ ಅನುಭವವನ್ನೆಲ್ಲಾ ಅವರಿಗೆ ತಿಳಿಸಿ, ಅವರಿಗೆ ಟ್ರೈನಿಂಗ್ ಕೊಟ್ಟೆವು. ಅವರು ಇಂಥ ಅನುಭವಕ್ಕೆ ತಯಾರಾಗಿ ಹೋದರು. ಅವರಿಗಾದ ಅನುಭವವೇ ಬೇರೇ. ನಮಗೆ ಮೊಮ್ಮಗಳು ಹುಟ್ಟಿದ್ದರಿಂದ ಅವರು ಮಗುವಿಗೆ ಬೆಳ್ಳಿ ಗೆಜ್ಜೆ, ಕಾಲ್ಗಡಗ, ಉಡಿದಾರ, ಹಾಲುಡಿಗೆ, ಚಂದನದ ಬಟ್ಟಲು ಮೊದಲಾದವುಗಳನ್ನೆಲ್ಲಾ ಹೊತ್ತು ಸಾಗಿದ್ದರು. ನಮ್ಮ ತಪಾಸಣೆಯಲ್ಲಿ ಬಂಗಾರದ ಒಡವೆ ಮತ್ತು ಬೆಳ್ಳಿ ವಸ್ತುಗಳ ಮೇಲೆ ಅವರ ನಿಶಿತ ದೃಷ್ಟಿ ಬಿದ್ದಿರಲಿಲ್ಲ. ಆದರೇ ನಮ್ಮ ಬೀಗರ ಅನುಭವ ಬೇರೇ ಆಗಿತ್ತು. ಅಷ್ಟು ಬೆಳ್ಳಿ ಸಾಮಾನುಗಳನ್ನ ನೋಡಿ “ ನೀವು ಇಷ್ಟು ಸಾಮಾನು ಯಾತಕ್ಕೆ ತಂದಿದೀರಾ ? ಮಾರಾಟಕ್ಕಾ ? “ ಅಂತ ಕೇಳಿದರಂತೆ. ಇವರು ಕಂಗಾಲಾಗಿ ಇಲ್ಲ ಅಂತ ಎಷ್ಟು ಹೇಳಿದರೂ ಕೇಳದೇ ಅವರು ಹೇಳಿಕೆ ಪತ್ರದಲ್ಲಿ ಬರೆದುಕೊಟ್ಟಹಾಗೆ ಅವುಗಳ ತೂಕ ಸರಿಯಾಗಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿದರಂತೆ. ಇದೆಲ್ಲಾ ಆಗಿ ಮುಗಿಯುವಾಗ ಒಂದು ಗಂಟೆ ತಡ. ಎಲ್ಲ ಸೂಟ್ ಕೇಸುಗಳು ಬಾಯಿತೆಗೆದು, ತಮ್ಮ ಮುಂದೆ. ಇಳಿಯುತ್ತಿದ್ದ ಬೆವರು. ಸುಸ್ತಾಗಿ ಹೋದೆವು ಅಂತ ನಮಗೆ ಹೇಳಿದರು. ಈಗ ಹೇಳಿ. ಯಾರ ಯಾರ ಅನುಭವ ಅವರದು. ಯಾರ ಯಾರ ಅನಾನುಕೂಲ ಅವರದು. ಅಲ್ಲವೇ ? ಜೀವನ ಸಹ ಅದೇ ರೀತಿ ಅಲ್ಲವೇ ? ಅವರವರ ಕಷ್ಟ ಸುಖ ಅವರವರು ಮಾಡಿದ ಪುಣ್ಯ ಪಾಪಗಳ ಮೇಲೆ ಆಧಾರಪಟ್ಟಿರುತ್ತೆ. ಅಂದರೇ ಅದೇ ಕರ್ಮ ಸಿದ್ಧಾಂತ.

ಸರಿ. ಇವುಗಳಿಗೆ ಪುಷ್ಟಿಕೊಡುವ ಅನುಭವ ಮತ್ತೊಂದು ನನ್ನ ಮಗಳು ಹೇಳಿದ್ದು. ಅದೂ ತಿಳಿಸಿಬಿಡುತ್ತೇನೆ ನಿಮಗೆ. ಅವರ ಸ್ನೇಹಿತೆಯ ತಾಯಿ ಒಬ್ಬರೇ ಬಂದಿಳಿದರಂತೆ ಅಮೆರಿಕಾಗೆ. ಅವರ ಸಾಮಾನನ್ನು ತಪಾಸಿಸುವಾಗ ಆರು ಸುಲಿದ ತೆಂಗಿನಕಾಯಿ ಕಂಡುಬಂದವಂತೆ. ಅವುಗಳನ್ನು ಅವರು ಅಮೆರಿಕದೊಳಗೆ ಬಿಡಲೊಪ್ಪಲಿಲ್ಲವಂತೆ. ಅವರ ವಾದ ಅವುಗಳು ಕೊಳೆಯುವ ಪದಾರ್ಥಗಳು ನಾಟ್ ಅಲೋಡ್ ಎಂದು. ಇವರ ವಾದ ಒಂದೇ ಒಡೆದರೇ ಮಾತ್ರ ಅವುಗಳು ಹಾಳಾಗುತ್ತವೆ. ಅವುಗಳು ಇಡೀಯಾಗಿವೆಯಲ್ಲ. ಅವುಗಳು ಪೆರಿಷಬಲ್ ಅಲ್ಲ ಅಂತ. ಮತ್ತೆ ಅವರ ರಾಮಬಾಣ ವಾದ ಅದೇ “ನಿಮಗ್ಗೊತ್ತಾ ನನಗ್ಗೊತ್ತಾ”  ಅಂತ ಹೇಳಿ ಅವುಗಳನ್ನ ತಮ್ಮ ಪಕ್ಕದಲ್ಲಿದ್ದ ಕ.ಬು.ಗೆ ಹಾಕಿದರಂತೆ. ನಮ್ಮ ಆ ಹಿರಿಯ ಹೆಂಗಸಿನ ವಾದ ಸರಿಯೆನಿಸಿದರೂ ಅವರಿಗೆ ನ್ಯಾಯ ಸಿಕ್ಕಲಿಲ್ಲ. ಜೀವನದಲ್ಲೂ ಹಾಗೇ ಅಲ್ಲವೇ ? ನೀವು ಎಷ್ಟೇ ನಿಯತ್ತಿನಿಂದ ಇದ್ದರೂ ನಿಮಗೆ ಕಷ್ಟ ತಪ್ಪಲ್ಲ. ಆದಕಾರಣ ನಾನು ಹೇಳುವುದು ಎರಡು ವಿಮಾನಾಶ್ರಯಗಳ ನಡುವಿನ ಆ ಪ್ರಯಾಣ ಯಾವ ಜೀವನದ ಪ್ರಯಾಣಕ್ಕಿಂತ ಕಮ್ಮಿ ಏನಲ್ಲ ಅಂತ.

                                                ******************************

6 thoughts on “ಆಕಾಶಯಾನವೂ ಆಧ್ಯಾತ್ಮಿಕ ಚಿಂತನೆಯೂ

  1. ಅನುಭವಗಳ ಸಾರ…. ಈ ಜೀವನ. ಚೆನ್ನಾಗಿದೆ ಅಣ್ಣಾ

  2. ತಿಳಿ ಹಾಸದ ಲಘುಲೇಪನದಿಂದ ಲೇಖನ ಓದಿಸಿಕೊಂಡು ಹೋಗುತ್ತದೆ.

Leave a Reply

Back To Top