ಕಾವ್ಯಯಾನ
ಕೊರತೆ ಜ್ಯೋತಿ ಡಿ.ಬೊಮ್ಮಾ ಧರ್ಮ ದೇವರುಗಳೆಲ್ಲ ಕಿರುಚಾಟದ ಸರಕುಗಳಾದವು.. ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳಲಿರುವ ಕಚ್ಚಾ ವಸ್ತುಗಳಾದವು.. ಜಾತಿಯ ಹೆಸರಲ್ಲಿ ರಂಪಾಟವೆಬ್ಬಿಸುವ ಕ್ಷುಲ್ಲಕ ಕಾರಣಗಳಾಗಿರುವವು.. ಈ ವಿಷಯಗಳೆ ಈಗ ಪ್ರಚಲಿತ ವಿದ್ಯಾಮಾನವಾಗಿರುವವು.. ಮನುಷ್ಯರ ಮನಸ್ಸುಗಳ ಮದ್ಯ ಗೋಡೆಗಳೆದ್ದವು ಬಣ್ಣಗಳು ಹಗೆ ಸಾಧಿಸುವ ಸಾಧನಗಳಾದವು ದೇಶ ಗಡಿಗಳು ಇವುಗಳಡಿ ನರಳಾಡಿದವು ಮನುಷ್ಯರೆಲ್ಲ ಮುಖವಾಡಗಳಡಿ ಬಳಲುವ ಚಮರಗೀತೆಗಳಾದರು.. ಆರಂಭ ಎಲ್ಲಿಂದ. .ಅಂತ್ಯ ಯಾವದು.. ಗೊತು ಗುರಿಯಿಲ್ಲದ ವಿಚಾರ ಧಾರೆಗಳು.. ಒಬ್ಬರ ವಾದ ಮತ್ತೊಬ್ಬರು ಒಪ್ಪಬಾರದೆಂಬ ಹಠ ಪ್ರತಿಯೊಬ್ಬರಲ್ಲೂ.. ಈಗ ಮಂದಿರ ಮಜ್ಜಿದ ಎರಡರ ಗೋಡೆಗಳು ಮೌನವಾಗಿ ಆಲಿಸುತ್ತಿರುವವು..ಎರಡರಲ್ಲೂ ಬೆರೆಯುವದು ಕಲ್ಲು ಮಣ್ಣೆ ಮತ್ತೆಕೆ ಕಚ್ಚಾಡುತ್ತಿರುವರವರು..! ದೂರದ ಪ್ರತಿಮೆಗಳಲ್ಲಿ ಗಾಂಧಿ ,ಅಂಬೇಡ್ಕರ್ ನಿಶ್ಯಬ್ದ ವಾಗಿ ನಿಂತಿರುವರು.. ತಾವು ಸಾರಿದ ತತ್ವಗಳು ಇವರು ಬಳಸಿಕೊಳ್ಳುತ್ತಿರುವ ಪರಿ ಕಂಡು.. ಬುದ್ದ ಬಸವಣ್ಣರು ಅಚ್ಚರಿಗೊಂಡಿರುವರು ತಾವು ಜಗಕ್ಕೆ ಸಾರಿದ ಸಮಾನತೆ ಮಂತ್ರವೆ ನಶಿಸಿ ಅಸಮಾನತೆ ಹೋಗೆ ಎಲ್ಲೆಲ್ಲೂ ಹರಡಿರುವದು ಕಂಡು.. ಮಹಾನುಭಾವರ ತತ್ವಗಳೆಲ್ಲ ಪುಸ್ತಕದಲ್ಲೆ ಉಳಿದುಹೋದವು.. ಅವರ ಹೆಸರುಗಳು ಮಾತ್ರ ನಮ್ಮ ಸ್ವಂತದ್ದಾದವು.. ಬುಧ್ದ ಬಸವ ಅಂಬೇಡ್ಕರ್ ಮುಖದಲ್ಲಿ ಈಗಲೂ ಮಂದಹಾಸವಿದೆ.. ಮನುಜ ಕುಲವೊಂದೆ ವಲಂ. ಎಂದು ಕಾಣುವ ಉತ್ಕಟ ಬಯಕೆ ಇದೆ. ಆದರೆ…ಆಚರಿಸುವ ನಮ್ಮಲೆ ಎನೋ ಕೊರತೆ ಇದೆ. *******
ಕಾವ್ಯಯಾನ
ನೀನಿಲ್ಲದ ಈ ಹೊತ್ತು ಬಿದಲೋಟಿ ರಂಗನಾಥ್ ದೇಶ ಸುಡುವ ಕಣ್ಣುಗಳ ನಡುವೆ ನಿನ್ನ ಹೆಜ್ಜೆಗಳ ಸವಾರಿ ಹೋಗುತ್ತಲೇ ಇದೆ ಬಿಸಿಲು ಬೇಗೆಗೆ ಸೊಪ್ಪಾಕದೆ ಬರೆದ ಸಂವಿಧಾನ ಕರುಳು ನೋಯುತ್ತಿದೆ ಸೂಜಿಗೆ ದಾರ ಸೇರಿಸಿ ನಾಟಾಕುವ ಕೈಗಳಿಗೆ ಹೆದರಿ ನಿನ್ನುಸಿರನು ಸೇರಿಸಿ ಬರೆದ ಬೇರು ಸಂವಿಧಾನದಲಿ ನಿನ್ನ ನಿನ್ನವರ ಕನಸುಗಳು ಆಯಾಸವಿಲ್ಲದೆ ಆಡುತ್ತಿದ್ದವು ಆದರೇ ಕತ್ತರಿ ತೋರಿಸುತ್ತಲೇ ಇವೆ ಹಿಡಿಗಾತ್ರದ ಮನಸುಗಳು ಬರೆದ ಸಂವಿಧಾನದ ಪುಟಗಳ ಚೂರು ಮಾಡಲು ಬೆವರಲೇ ಬೆಂದ ನಿನ್ನ ಜನರ ಆಶಾಗೋಪುರಕೆ ನೀನೆ ಬೇಲುದಾರ ಸುಡುವ ಮನಸುಗಳ ದಾರಿಯ ಮೇಲೆ ನಿನ್ನೆಜ್ಜೆಗಳ ಸಾಂತ್ವಾನದ ಉಸಿರಾಟ ಬೆವರ ಬಿಕ್ಕಳಿಕೆಯಲಿ ನಿನ್ನುಟ್ಟೆ ಜೀವ ಜಲ ನೀನಿಲ್ಲದೇ ಹೋಗಿದ್ದರೆ ಮೌಢ್ಯತೆಯ ಬೆಂಕಿ ಉರಿದು ಎಷ್ಟೊಂದು ಮುಗ್ಧ ಮನಸುಗಳ ಆಹುತಿಗೆ ಬಲಿಯಾಗುತ್ತಿದ್ದವೋ ಆದರೇ ನಿನ್ನ ಹೆಜ್ಜೆಗಳ ಮೇಲೆ ನಡೆದ ಜಾತಿ ಸುಟ್ಟ ಮನಸುಳಿಗೂ ಬೆನ್ನು ನೋವು ನೀನಿಲ್ಲದ ಈ ಹೊತ್ತು ********
ಕಾವ್ಯಯಾನ
ಮೂಕ ಭಾರತದ ನಾಯಕ ನಾಗರಾಜ ಹರಪನಹಳ್ಳಿ ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ || ಪಲ್ಲವಿ|| ನನ್ನ ಅವ್ವಂದಿರ ಅಕ್ಷರದ ಬೆಳಕು ನೀನೋ ಬಡ ಭಾರತದ ಬಾಬಾ ಸಾಹೇಬ ನೀನೋ ಜಾತಿವಾದಿಗಳ ಕೈಯ ಬೊಗಸೆ ಕೆಂಡ ನೀನೋ ಮನುಷ್ಯವಾದಿಗಳ ಬದುಕ ಬೆಳದಿಂಗಳೊ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ|| ಬಡವರ ಪಾಲಿನ ಬೆಳಕು ನೀನೋ ಬಹುತ್ವ ಭಾರತವನ್ನು ತಿಳಿದವ ನೀನೋ ಮನುವಾದಿಗಳ ಕಣ್ಣು ತೆರೆಸಿದವ ನೀನೋ ಬ್ರಿಟಿಷರ ಮನಮನ ಗೆದ್ದವ ನೀನೋ ಷಾಹು ರಾಜನ ಹೃದಯ ಆಳ್ದವ ನೀನೋ ಮೂಕ ಭಾರತದ ಮೂಕನಾಯಕ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ|| ಬಹಿಷ್ಕೃತ ಭಾರತದ ಕಣ್ಮಣಿ ನೀನೋ ಜನುಮ ಜನುಮಕೂ ನಾಯಕ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ|| *********
ಕಾವ್ಯಯಾನ
ಬಾಬಾಸಾಹೇಬ ತಾವು ದೇವರಾದರೆ! ಡಿ. ಎಮ್.ನದಾಫ್. ಗುಲಾಮಗಿರಿಯನ್ನು ಬುಡ ಸಮೇತ ಕಿತ್ತು ಅಜ್ಞಾನ, ಅವಮಾನಗಳನ್ನು ಧೈರ್ಯದಿಂದ ಒದ್ದು ದಿಕ್ಕಿಲ್ಲದವರಿಗೆ ಧವಳ ಕೀರ್ತಿ ತಂದುಕೊಟ್ಟು ಮಾನವತೆಯನ್ನು ಮರಳಿ ಸ್ಥಾಪಿಸಿದ ಅಂಬೇಡ್ಕರ್ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ. ಯಜ್ಞ-ಯಾಗ ಪ್ರಯಾಗಗಳನ್ನೆಲ್ಲ ಪ್ರಜ್ಞೆ, ಕರುಣೆ ಶೀಲದಲ್ಲಿ ಕಂಡವನೇ ಸ್ವರ್ಗ,ಮುಕ್ತಿ,ಬಂಧನಗಳನ್ನೆಲ್ಲ ಜ್ಞಾನ,ಸಮಾನತೆ,ಸೇವೆಯಲ್ಲಿ ಮಿಂದವನೇ ಮತ್ತೆ ನೀ ದೇವರಾದಾಗ ಬಾಯಿಗೆ ಉಗುಳುಬಟ್ಟಲು,ಬಾರಿಗೆ ನೆನಪಾಗುತ್ತವೆ. ಶಾಸ್ತ್ರ, ಪುರಾಣ ಆಗಮಗಳಿಗೆ ಬೀಗ ಹಾಕಿ ಶತಶತಮಾನಗಳ “ಕರ್ಮಫಲ”ಗಳ ನೊಗ ಕಿತ್ತು ಹಾಕಿ ಪಟ್ಟ ಭದ್ರರಿಗೆ ಬೆಟ್ಟದಂಥ ಸವಾಲಾದವನೇ ನೀ ದೇವರಾಗಬೇಡ ನೀ ದೇವರಾದರೆ ಮತ್ತೆ ಕಿವಿಯಲ್ಲಿ ಕಾದ ಸೀಸ ಹೊಯ್ದಂತೆ ನಾಲಿಗೆ ಸೀಳಿ ಬಗೆದಂತೆ ಕನಸು ಬೀಳುತ್ತದೆ. ಅದಕ್ಕಾಗಿ ಅಂಬೇಡ್ಕರ್ ದೇವರಾಗಬೇಡ,ದೊರೆಯಾಗಬೇಡ, ಗುರುವಾಗು,ಮಾರ್ಗದರ್ಶಿಯಾಗು,ನಮಗೆ ತತ್ವ ಜ್ಞಾನಿಯಾಗು ಅಂಬೇಡ್ಕರ್ ನೀ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ. ********
ಕಾವ್ಯಯಾನ
ದಲಿತ ಚೇತನ ಮನುಶ್ರೀ ಸಿದ್ದಾಪುರ ಓ ದಲಿತರ ಮಹಾಚೇತನವೇ ಇಗೋ ನಿನಗೆನ್ನಯ ನಮನ ಕಷ್ಟ-ಕಾರ್ಪಣ್ಯಗಳ ಬಳ್ಳಿಯಲಿ ಅರಳಿ ನಗುವ ಚೆಲ್ಲಿದೆ ಗುಲಾಬಿ ಯಂತೆ. ನರನಾಡಿಗಳ ಬತ್ತಿಯಾಗಿ ತಾನುರಿದು ಸುತ್ತಲೂ ಜ್ಞಾನದ ಬೆಳಕು ಹರಡಿದೆ. ಶೋಷಿತರ ದನಿಗೆ ಮೂಕನಾಯಕನಾಗಿ ಸೆಟೆದು ನಿಂತೆ ದೀನ ದಲಿತರ ಬದುಕಿನ ಉದ್ದಾರಕೆ. ಕಗ್ಗಲ್ಲಿನಲಿ ಮೂಡಿದೆ ಉಜ್ವಲ ಮೂರ್ತಿಯಾಗಿ ಕೂಗಿ ಕರೆದು ತೋರಿಸಿದೆ ಮಹಾಮನೆಯ ಬಿರುಕನು ಶಿಕ್ಷಣ ಸಂಘಟನೆ ಹೋರಾಟದ ತ್ರಿಪಟಿಕ ಸೂತ್ರ ದಲಿತರ ಬದುಕಿನ ಪಾವನದಿ ಸಾಗಿಬಂದ ಮಹಾಪಾತ್ರ. ಹೊನ್ನ ಚರಿತೆಯ ಮಹಾಪುರುಷರಲಿ ನೀನಾದೆ ಪುರುಷೋತ್ತಮ ವಿಶ್ವವೇ ಸಾರಿದೆ ನೀ ಎಂದಿಗೂ ಭಾರತಾಂಭೆಯ ಭಾರತರತ್ನ.. ******
ಕಾವ್ಯಯಾನ
ಅಂಬೇಡ್ಕರ್ ಸ್ವಗತ ಮಧುಕುಮಾರ ಸಿ ಎಚ್ ಯಾವುದು ಆಗಬಾರದೆಂದು ನಾ ಎಣಿಸಿದೆನೋ ಅದು ಆಗಿಯೇ ತೀರಿದೆ ಅದಕ್ಕಾಗಿ ವಿಷಾದಿಸುತ್ತೇನೆ. ವ್ಯಕ್ತಿಪೂಜೆ ಬೇಡವೆಂದ ಮಾತು ಹಳ್ಳ ಹಿಡಿದು ಇಲ್ಲಿ ಈ ದಿನ ಪ್ರತಿಮೆಗೆ ಹಾರ ತುರಾಯಿ ಹಾಕಿ ಜೈಕಾರ ಮೊಳಗಿಸಿ ಅಭಿಮಾನ ತೋರುವ ಆಚರಣೆ ವಿಜೃಂಭಣೆಯಿಂದಲೇ ನಡೆದಿದೆ. ನಾಲ್ಕು ತಿಂಗಳು ಕಳೆದ ಬಳಿಕ ಅಲ್ಲಲ್ಲಿ ‘ಗಣೇಶನ’ ಕೂರಿಸಿ ಮತ್ತದೇ ಹಾರ ತುರಾಯಿ ಹಾಕಿ ಜೈಕಾರ ಮೊಳಗಿಸಿ ಕುಡಿದು ಕುಣಿದು ಕುಪ್ಪಳಿಸುವುದು ತಪ್ಪದೇ ನಡೆಯುವುದಿದೆ. ಎಡ-ಬಲ ಎರಡೆರಡು ಹೋಳಾಗಿ ಒಳಗೊಳಗೊಂದು ಬಣ ಕಟ್ಟಿ ಒಣ ಪ್ರತಿಷ್ಟೆ ಹೆಚ್ಚಾಗಿ ಗದ್ದುಗೆಗಾಗಿ ಸ್ವಾಭಿಮಾನ ಬದಿಗೆ ತಳ್ಳುತ ಹಲ್ಲು ಕಿಸಿಯುವವರ ಮಧ್ಯೆ ಒಂದಷ್ಟು ಜನರ ಕೂಗಾಟ ಹೆಣಗಾಟ ಇದ್ದೇ ಇದೆ. ಅಂಟು ಜಾಡ್ಯದ ಮಂಕು ಕವಿದು ಮೇಲೆ ನಗು ಒಳಗೆ ಕಿಚ್ಚು ಒಬ್ಬರನ್ನೊಬ್ಬರು ಬೀಳಿಸುವ ಹುಚ್ಚು ಹೊಟ್ಟೆ ತುಂಬಿದವರಿಗೆ ನಿದ್ರೆಯ ಮಂಪರು ಹಸಿದವರಿಗೆ ನಿದ್ರೆ ಬಾರದ ತೊಡರು ಮುಂದೆ ಒಂದು ದಿನ ದೇಗುಲ ಕಟ್ಟಿ ಹಾಲು ಅಭಿಷೇಕ ಜಾತ್ರೆ ರಥೋತ್ಸವ ಅನ್ನಸಂತರ್ಪಣೆ ನೃತ್ಯ ಕಾರ್ಯಕ್ರಮ ಒಂದಷ್ಟು ಗುಣಗಾನ ಸನ್ಮಾನ ಮತ್ತಿನ್ನೇನೋ……? ********
ಕಾವ್ಯಯಾನ
ಬಾಬಾರವರ ನೆನಪಲ್ಲಿ ಹೆಚ್ ರಾಠೋಡ ಬಾಬಾ ನಿನ್ನ ನೆರಳಿನಲ್ಲಿಭರತಖಂಡ ನಡೆದಿದೆ ಶ್ರೇಷ್ಠ ಭಾರತದೇಶ ಎಂಬ ಹೆಗ್ಗಳಿಕೆಯು ಪಡೆದಿದೆ ಭರತ ಭೂಮಿ ನಿತ್ಯ ನಿನ್ನ ನೆನೆದು ಹೆಜ್ಜೆ ಇಡುತ್ತಿದೆ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಧನ್ಯ ಸಾರ್ಥಕತೆ ಮೆರೆದಿದೆ ನೀನುಹಾಕಿಕೊಟ್ಟ ದಾರಿಯಲ್ಲೇ ಇಂದು ದೇಶ ಸಾಗಿದೆ ನಿನ್ನ ಜ್ಞಾನ ಪಾಂಡಿತ್ಯಕ್ಕೆ ವಿಶ್ವವೇ ತಲೆದೂಗಿದೆ ಸಮಾನತೆಯ ಭಾವದಲ್ಲಿ ಸಂವಿಧಾನ ರಚಿಸಿದೆ ಶ್ರೇಷ್ಠ ಸಂವಿಧಾನ ರಚಿಸಿದ ಶಿಲ್ಪಿ ಎಂದೆನಿಸಿದೆ ಭಾರತೀಯರ ಎದೆಯಲ್ಲಿ ನಿನ್ನ ಪ್ರತಿಮೆ ನಿಂತಿದೆ ಅಂಬೇಡ್ಕರ್ ಎಂಬ ನಾಮ ಅಜರಾಮರವಾಗಿದೆ ಭೀಮನೆಂಬ ನಾಮ ಸ್ಮರಣೆ ನಾಲಿಗೆಯಲಿನಲಿತಿದೆ ದೀನ ದಲಿತರುಳವಿಗಾಗಿ ಕಾನೂನು ರೂಪ ನೀಡಿದೆ ಹಲವು ದೇಶ-ಕೋಶ ಓದಿ ಜ್ಞಾನ ಕಣಜ ಎನಿಸಿದೆ ಲೆಕ್ಕವಿಲ್ಲದಷ್ಟು ಪದವಿ ಪುರಸ್ಕಾರ ಗಳಿಸಿದೆ ತೋರು ಬೆರಳು ತೋರಿ ಪ್ರತಿಮೆ ಕೈ ಎತ್ತಿ ನಿಂತಿದೆ ತಮ್ಮ ಪಡೆದ ಭರತಮಾತೆ ವಿಶ್ವಮಾತೆಯ ಎನಿಸಿದೆ ಪುಟಕ್ಕಿಟ್ಟ ಬಂಗಾರವಾಗಿ ಭಾರತ ರತ್ನ ಎನಿಸಿದೆ ಸದಾ ಜೈ ಭೀಮ ಎಂಬ ಘೋಷವಾಕ್ಯ ಮೊಳಗಿದೆ ********
ಕಾವ್ಯಯಾನ
ಬಡವರ ಆಕರ ರಾಹು ಅಲಂದಾರ ಓ ಬಡವರ ಆಕಾರ ದೀನ ದಲಿತರ ಸಾಹುಕಾರ ಜಗಜ್ಯೋತಿ ಅಂಬೇಡ್ಕರ್ ಹಾಕುವೆ ನಿಮಗೆ ನಮಸ್ಕಾರ ಬಡವರ ಉತ್ತರಕ್ಕಾಗಿ ದುಡಿದೆ ದೀನ ದಲಿತರ ಹಿತಕ್ಕಾಗಿ ನಡೆದೆ ಸಮಾನತೆಯನ್ನೇ ನುಡಿದೆ ಜನತೆಯ ಏಳಿಗೆಗಾಗಿ ಮಡಿದೆ ರಚಿಸಿದೆ ನೀ ಸಂವಿಧಾನ ಆಯಿತು ಸರ್ವರಿಗೂ ಅನುದಾನ ಕನಸಿಟ್ಟೆ ನೀ ಎಲ್ಲರಲ್ಲೂ ಸಮಾನ ನಮಗೆಲ್ಲಾ ನೀ ಆಶಾಕಿರಣ ಉಳಿದೆ ಎಲ್ಲರ ಮನದಲ್ಲಿ ಸಮಾನತೆಯನ್ನೋ ಬೆಳಕು ಚೆಲ್ಲಿ ನೆನಪಿಸುವರು ಜನತೆ ಬಾಳಲ್ಲಿ ಹುಟ್ಟಿ ಬಾ ಇನ್ನೊಮ್ಮೆ ಜಗದಲ್ಲಿ **********
ಕಾವ್ಯಯಾನ
ನನ್ನದಲ್ಲ ಬಿಡು ನೀ.ಶ್ರೀಶೈಲ ಹುಲ್ಲೂರು ಭಾರವಾದ ಹೆಜ್ಜೆಗಳಿಗೆ ಗೆಜ್ಜೆ ಏತಕೋ ನೊಂದುಬೆಂದ ಜೀವಕೀಗ ಅಂದವೇತಕೋ? ಕೋಪ ತಾಪ ಎಲ್ಲ ಬಿಡು ರೋಷವೇತಕೋ ನಮ್ಮ ಹಾಗೆ ಪರರ ತಿಳಿ ವಿರಸವೇತಕೋ? ನಮ್ಮ ನಡುವೆ ಕೊಳ್ಳಿ ಇಡುವ ಸುಳ್ಳು ಏತಕೋ ಅರಿತು ಬೆರೆವ ಮನಕೆ ಇರಿತ ದುರಿತವೇತಕೋ? ಅಳುವಿನಲೇ ನಲಿವ ಬದುಕು ಚಿಂತೆ ಏತಕೋ ನಾಕವಿಲ್ಲಿ ನರಕವಿಲ್ಲಿ ಕೊರಗು ಏತಕೋ? ನಾನು ನನದು ಎನುವ ಜನುಮ ಇನ್ನು ಏತಕೋ ಅವನ ಜೀವ ಅವನ ಕಾಯ ನನಗೆ ಏತಕೋ? *******
ಕಾವ್ಯಯಾನ
ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಾವೆಲ್ಲ ಕಂದಿಲ ಮಂದತೆಯಲಿ ಹೊಸ ಕನಸುಗಳ ಕಂಡಿರುವೆವು ಕತ್ತಲ ಕೂಪದಿಂದ ಹೊರಬರಲು ಕಂದಿಲು ಹಿಡಿದು ಬಂದಿರುವೆವು ನಾಳೆಗಳು ನಮಗೂ ಬರಬಹುದೆಂಬ ಹೊಸ ಆಸೆಯ ಹೊತ್ತು ಬದುಕು ಬೆಳಕಿನಾಟದಲಿ ಕಳೆದು ಹೋದ ದಿನಗಳ ನೊಂದಿರುವೆವು ಮರೆಯಲಾಗದು ಹಚ್ಚಿಟ್ಟ ಕಂದಿಲು ಆರುವ ಮುನ್ನ ಉಂಡ ದಿನಗಳ ಎಣ್ಣೆ ಮುಗಿದಿತೆಂಬ ಭಯದಿಂದ ದಿನವು ನೊಂದ್ದಿದ್ದು ಕಂಡಿರುವೆವು ಬಡತನ ಸಿರಿತನ ಹಂಗುಗಳಿಲ್ಲದ ಕಂದಿಲು ಕತ್ತಲೆಯ ಕಳೆದಿದೆ ಮುಸ್ಸಂಜೆಯ ಗುಡಿಸಲು ಅರಮನೆಗಳಲಿ ಚೆಲ್ಲುವುದ ನೋಡಿರುವೆವು ಭರವಸೆಯೊಂದಿಗೆ ಕರಿ ಕತ್ತಲೆಯ ಕಳೆದು ಬಿಡುವೇಯಾ ಸಾಕಿ ನಿನ್ನೊಂದಿಗೆ ನಮ್ಮ ಸಂಭಂಧ ಉಸಿರಿರುವ ತನಕ ಇರುವುದೆಂದು ನಂಬಿರುವೆವು ******
