ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಮತಿ ನಿರಂಜನ ಅವರ ಕವಿತೆ “ದೂರದ ಪಯಣ”

ಕಾವ್ಯ ಸಂಗಾತಿ ಸುಮತಿ ನಿರಂಜನ “ದೂರದ ಪಯಣ” ಬಂದಿಹೆವು ಬಹುದೂರ ಗೆಳತೀನೋಡೊಮ್ಮೆ ಹಿಂದೆ…ಇದೆ ಹಾದಿಯಲಿ ಹಾದು ಹೋದವರು…ಜೀತದೆತ್ತುಗಳೂ ನಮ್ಮವಂತೆಯೆಘಣ ಘಣ ಗಂಟೆಯ ಮಾಲೆಘಮ ಘಮ ಮಲ್ಲಿಗೆ ಕೊರಳಲೆಅರಿಶಿನ ಕುಂಕುಮ ನೊಸಲಲಿಕೊಂಬಿಗೆ ಗೊಂಡೆಯ ಚೆಂಡು… ಒಳಗೆ…ಉಸಿರೊತ್ತುವ ವಜ್ರದ ನತ್ತುಕೊರಳೆಳೆವ ಮುತ್ತಿನ ಹಾರಕೈ ತುಂಬ ಬಳೆಭಾರಮಣ ಭಾರ ಒಡ್ಯಾಣಗುಟ್ಟು ಬಿಟ್ಟು ಕೊಡುವುದಣ್ಣಬೆಳ್ಳಿ ಬಿಗಿ ಕಾಲಂದುಗೆಕಳ್ಳ ಕಾಕರ ಭಯಮಾನನಷ್ಟದ ಭಯಸೊಲ್ಲೆತ್ತಿದರೆ ಗೋಣುಮುರಿವರೆನ್ನುವ ಭಯಪಟ್ಟೆಸೀರೆಯನುಟ್ಟು ಮುದುರಿಕುಳಿತವರು ಮೂಲೆಯಲಿಸೆರಗೊಳಗೆ ಸದ್ದಾಗದಂತ್ತವರುತಮ್ಮ ಸಾರ್ಥದ ಗಮ್ಯವೆತ್ತ ?ಉಸಿರೆತ್ತಿ ಕೇಳಲಾರದೆಹೊದ್ದ ಮುಸುಕಿನೊಳಗೆಕಾಲಕ್ಕೆ ಸಂದುಹೋದವರು ಇಂದು –ನಮಗಿಲ್ಲ ಒಡವೆ ಹೆಣ ಭಾರಬಿಚ್ಚು ನಗುವೆ ನಮ್ಮ ಕಂಠೀಹಾರಧೈರ್ಯ ಸ್ಥೈರ್ಯವೆ ಷೋಡಶ ಸಿಂಗಾರಕಾವ ದೇವರದು ವಿದ್ಯೆಬುದ್ಧಿಯ ಸಾರಹರಿದು ಬಂದೆವು ಗೆಳತೀಆ ಕಪ್ಪು ಭೀತಿಯ ಪರದೆಹೀರೋಣವೀ ಸ್ವಚ್ಛಂದ ಗಾಳಿಹೂಡೋಣ ನಮ್ಮ ಎತ್ತುಗಳ ನಾವೆಕಟ್ಟೋಣ ನಮ್ಮ ಇಹಪರಾರ್ಥವ ನಾವೆಸವೆಸೋಣ ಏರುಪೇರಿನ ದಾರಿಸೇರೋಣ ನಮ್ಮ ಗಂತವ್ಯ ನಾವೇ ಸುಮತಿ ನಿರಂಜನ 

ಸುಮತಿ ನಿರಂಜನ ಅವರ ಕವಿತೆ “ದೂರದ ಪಯಣ” Read Post »

ಅರ್ಜುನ ಉವಾಚ

ಧಾರಾವಾಹಿ ಸಂಗಾತಿ ಅರ್ಜುನ ಉವಾಚ ವಿಶ್ವನಾಥ್‌ ಎನ್ ನೇರಳೆಕಟ್ಟೆ ಕೃಷ್ಣದರ್ಶನದ ಹಂಬಲವದು ಕುದುರೆಯನು ಕಟ್ಟಿಸಿತು ಚಂಪಕಾನಗರಿಯ ಅರಸ ಹಂಸಧ್ವಜ. ನಿಷ್ಠೆ ನಿಯಮಗಳಿಗೆ ನಿಜಾರ್ಥದ ದೊರೆಯಾಗಿದ್ದವನು. ಇಡಿಯ ಚಂಪಕಾಪುರಕ್ಕೆ ಸರಿಹೊಂದುವ ನಿಯಮಾವಳಿಯನ್ನವನು ರೂಪಿಸಿದ್ದ. ಎಲ್ಲಾ ಪ್ರಜೆಗಳು ಏಕಪತ್ನೀವ್ರತವನ್ನು ಪಾಲಿಸಬೇಕಿತ್ತು. ಕೃಷ್ಣಪೂಜೆಯನ್ನು ಗೈಯ್ಯಬೇಕಿತ್ತು. ದಾನಧರ್ಮಗಳನ್ನು ನಡೆಸಬೇಕಿತ್ತು. ಹೀಗೆ ರಾಜಕೃತ ನಿಯಮಾವಳಿಗಳನ್ನು ಯಾರೂ ಮೀರುವುದಕ್ಕೆ ಸಾಧ್ಯವೇ ಇರಲಿಲ್ಲ. ಪ್ರಜೆಗಳ ಕೆಡುಕಿನ ವರ್ತನೆಯನ್ನು ಸಹಿಸದವನಾಗಿದ್ದ ಹಂಸಧ್ವಜ. ಹಾಗೆಂದು ಕೇವಲ ಪ್ರಜೆಗಳ ಮೇಲೆ ನಿರ್ಬಂಧ ಹೇರಿ ಸುಮ್ಮನಿರುವವನಲ್ಲ ಆತ. ಪ್ರಜೆಗಳಿಗೆ ಇವುಗಳನ್ನು ಬೋಧಿಸುವುದಕ್ಕೂ ಮೊದಲು ತಾನೇ ಪಾಲಿಸಿದವನಾಗಿದ್ದ. ‘ಯಥಾ ರಾಜ ತಥಾ ಪ್ರಜಾ’ ಎಂಬ ಮಾತಿನಂತೆ ಹಂಸಧ್ವಜನ ಸುಗುಣಗಳನ್ನು ಅಲ್ಲಿನ ಪ್ರಜೆಗಳಲ್ಲಿಯೂ ಕಾಣಬಹುದಾಗಿತ್ತು. ಎಲ್ಲರೂ ಏಕಪತ್ನೀವ್ರತಸ್ಥರಾಗಿದ್ದರು. ಕೃಷ್ಣಪೂಜೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ತಮ್ಮಲ್ಲಿರುವ ಸಂಪತ್ತಿನಲ್ಲಿ ಒಂದಷ್ಟು ಭಾಗವನ್ನು ಅವಶ್ಯಕತೆ ಇರುವವರಿಗೆ ಕೊಟ್ಟು ಧನ್ಯಭಾವವನ್ನು ಅನುಭವಿಸುತ್ತಿದ್ದರು. ಹೀಗಿತ್ತು ಚಂಪಕಾನಗರಿ, ನಮ್ಮ ಯಾಗದ ಕುದುರೆ ಅಲ್ಲಿಯ ಧರಣಿಯ ಮೇಲೆ ಕಾಲನ್ನಿರಿಸಿದಾಗ.     ಏಳು ಮಂದಿ ತಮ್ಮಂದಿರಿದ್ದರು ಹಂಸಧ್ವಜನಿಗೆ. ಸುದರ್ಶನ, ಸುಧನ್ವ, ಸುಮನಸ, ಸುರಥ ಎಂಬ ನಾಮಾಂಕಿತ ನಾಲ್ಕು ಮಂದಿ ವೀರ ಪುತ್ರರಿದ್ದರು. ಶಂಖ ಲಿಖಿತ ಎಂಬ ಅಣ್ಣತಮ್ಮಂದಿರು ಹಂಸಧ್ವಜನ ಪುರೋಹಿತರೆನಿಸಿಕೊಂಡಿದ್ದರು. ಇವರಿಬ್ಬರಿಗೂ ಶಾಸ್ತçಪಾಲನೆಯ ವಿಚಾರ ಬಂದಾಗ ಬಾಂಧವ್ಯವಾಗಲೀ, ಆತ್ಮೀಯತೆಯಾಗಲೀ ಮುಖ್ಯವಾಗುತ್ತಿರಲಿಲ್ಲ. ಅದೊಂದು ಸಲ ಲಿಖಿತನ ಆಶ್ರಮಕ್ಕೆ ಬಂದ ಶಂಖ ಅವನಲ್ಲಿ ಕೇಳದೆಯೇ ನೆಲದಲ್ಲಿ ಬಿದ್ದಿದ್ದ ಹಣ್ಣನ್ನು ಎತ್ತಿಕೊಂಡು ತಿಂದ. ಶಂಖನ ವರ್ತನೆಯದು ದೋಷ ಎಂದು ತೀರ್ಮಾನಿಸಿದ ಲಿಖಿತ ಸಹೋದರ ಎನ್ನುವುದನ್ನೂ ಪರಿಗಣಿಸದೆ ಶಿಕ್ಷೆ ಕೊಡಿಸಲು ಹಂಸಧ್ವಜನ ಆಸ್ಥಾನಕ್ಕೆ ಕರೆತಂದಿದ್ದ. ಶಂಖನ ಕೈಗಳನ್ನು ಕತ್ತರಿಸಿಹಾಕುವ ಶಿಕ್ಷೆ ಪ್ರಕಟವಾಯಿತು ಹಂಸಧ್ವಜನ ಕಡೆಯಿಂದ. ಹೀಗೆ ಶಿಕ್ಷೆಗೆ ಒಳಗಾದ ಶಂಖನಿಗೆ ತಪೋಬಲದಿಂದ ಮತ್ತೆ ಕೈ ಮೂಡುವಂತೆ ಮಾಡಿದ ಲಿಖಿತ. ಹೀಗೆ ಸರಿ ತಪ್ಪುಗಳ ವಿವೇಚನೆಗಿಳಿದರೆ ಬೇರಾವುದಕ್ಕೂ ಎಡಗೊಡದ ಕಟ್ಟುನಿಟ್ಟಿನ ಚಿತ್ತದ ಅಣ್ಣತಮ್ಮಂದಿರು ಪುರೋಹಿತರೆನಿಸಿಕೊಂಡು ಹಂಸಧ್ವಜನಿಗೆ ಮಾರ್ಗದರ್ಶನ ನೀಡುತ್ತಿದ್ದರು.   ಕುದುರೆಯ ರಕ್ಷಣೆಗಾಗಿ ಚಂಪಕಾನಗರಿಯನ್ನು ಸೇರಿಕೊಂಡ ನಾನು ಪಟ್ಟಣದ ಜನರನ್ನೂ ಹಾಗೆಯೇ ಒಮ್ಮೆ ನೋಡಿದೆ. ಉಣ್ಣುವುದಕ್ಕೆ ಉಡುವುದಕ್ಕೆ ಯಾವ ಕೊರತೆಯೂ ಅಲ್ಲಿನ ಜನರಿಗಿರಲಿಲ್ಲ. ವಸ್ತçಭೂಷಣಗಳಿಂದ, ಅಲಂಕಾರ- ಸುಗಂಧ ದ್ರವ್ಯಗಳಿಂದ ಶೋಭಿಸುತ್ತಿದ್ದರು. ವೀರರು ಎನ್ನುವುದು ಅವರ ನಿಲುವಿನಲ್ಲಿಯೇ ಗೊತ್ತಾಗುವಂತಿತ್ತು.     ಹಾಗೆ ನಾನು ಈಕ್ಷಿಸುತ್ತಿದ್ದಾಗಲೇ ಡಂಗುರದ ದನಿ ಕೇಳಿಬಂತು. ನಮ್ಮ ಕುದುರೆಯನ್ನು ಕಟ್ಟಿಹಾಕುವ ನಿರ್ಧಾರ ಮಾಡಿದ್ದ ಹಂಸಧ್ವಜ. ಅವನು ನಮ್ಮ ಜೊತೆಗಿನ ಯುದ್ಧಕ್ಕೆ ಮನಸ್ಸು ಮಾಡಿದ್ದೇಕೆ ಎಂಬ ವಿಷಯವೂ ಸ್ವಲ್ಪ ಸಮಯದಲ್ಲಿಯೇ ನನ್ನ ಸೇವಕರ ಮೂಲಕ ತಿಳಿದುಬಂತು. ನಮ್ಮ ಯಾಗದ ಕುದುರೆ ಅವನ ನಗರಿಯನ್ನು ಪ್ರವೇಶಿಸಿದ ತಕ್ಷಣವೇ ತನ್ನ ಆಪ್ತ ಸಚಿವರ ಸಭೆಯನ್ನು ಕರೆದನಂತೆ. “ಪಾಂಡವರ ಯಾಗದ ಕುದುರೆಯನ್ನು ಕಟ್ಟಿ ಅರ್ಜುನನ ಜೊತೆ ಸಂಘರ್ಷಕ್ಕಿಳಿದರೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ನಮ್ಮ ಈ ಭೂಮಿಯಲ್ಲಿ ಪ್ರತ್ಯಕ್ಷನಾಗುತ್ತಾನೆ. ಇಷ್ಟರವರೆಗೂ ನಾವು ಯಾರೂ ಕೃಷ್ಣನನ್ನು ಕಂಡವರಲ್ಲ. ಈಗ ಕಾಣುವ ಸುಯೋಗ ಒದಗಿಬಂದಿದೆ. ಕೃಷ್ಣ ಪ್ರತ್ಯಕ್ಷನಾಗಿ ನಮ್ಮನ್ನು ವಿರೋಧಿಸಿದರೂ ಅದು ನಮಗೆ ಸಂತಸವೇ. ಅದಕ್ಕಾಗಿ ಕುದುರೆಯನ್ನು ಕಟ್ಟಿಹಾಕಬೇಕಿದೆ” ಎಂದನಂತೆ. ಅಂದರೆ, ಕೃಷ್ಣದರ್ಶನದ ಹಂಬಲದಿಂದಲೇ ಅವನು ನಮ್ಮ ಯಾಗದ ಕುದುರೆಯ ಚಲನೆಗೆ ತಡೆಯೊಡ್ಡಿದ್ದ. ರಾಜಾಜ್ಞೆ ಹೊರಟ ಮೇಲೆ ಯುದ್ಧ ನಿಶ್ಚಯ ಎನ್ನುವುದು ನನಗೆ ಸ್ಪಷ್ಟವಾಯಿತು.     ಅವನ ಜೊತೆಗೆ ಯುದ್ಧವನ್ನು ಆರಂಭಿಸುವುದಕ್ಕೂ ಮೊದಲು ಅವನ ಬಲಾಬಲಗಳನ್ನು ಅರಿತುಕೊಳ್ಳುವುದು ಬಲುಮುಖ್ಯ ಎನಿಸಿತು. ತಿಳಿದುಕೊಂಡೆ. ಎಪ್ಪತ್ತು ಮಂದಿ ದಳಪತಿಗಳಿದ್ದರು ಅವನ ಸೇನೆಯಲ್ಲಿ. ಒಬ್ಬೊಬ್ಬ ದಳಪತಿಗಳು ಎಪ್ಪತ್ತೊಂದು ಸಾವಿರ ರಥಗಳಿಗೆ, ಇಪ್ಪತ್ತೊಂದು ಸಾವಿರ ಆನೆಗಳಿಗೆ, ಲಕ್ಷ ಕುದುರೆಗಳಿಗೆ, ಲಕ್ಷ ಸೈನಿಕರಿಗೆ ಅಧಿಪತಿಗಳೆನಿಸಿಕೊಂಡಿದ್ದರು. ಹಿರಿದು ಸೈನ್ಯವನ್ನೇ ಎದುರುಹಾಕಿಕೊಳ್ಳಬೇಕಿದೆ ನಾವು ಎನ್ನುವುದು ದೃಢವಾಯಿತು ನನಗೆ.    ಹಂಸಧ್ವಜನೆAಬ ಪ್ರಜಾಪರ ರಾಜನ ಡಂಗುರವನ್ನು ಅಲ್ಲಿನ ಪ್ರಜೆಗಳು ಒಡನೆಯೇ ಪಾಲಿಸಿದರು. ಚತುರಂಗ ಬಲಗಳು ಸಿದ್ಧಗೊಂಡವು. ಯುದ್ಧ ನಡೆಯುವ ತಾಣದೆಡೆಗೆ ನಡೆದುಬರತೊಡಗಿದವು.    ನನಗೆ ವಿಸ್ಮಯ ಮೂಡಿದ್ದು ಯುದ್ಧಕ್ಕೆ ಬರುತ್ತಿದ್ದ ಸೈನಿಕರ ಮೊಗದ ಭಾವನೆಯನ್ನು ಕಂಡಾಗ. ಸಾಮಾನ್ಯವಾಗಿ ಯುದ್ಧಕ್ಕೆ ಬರುವ ಸೈನಿಕರಲ್ಲಿ ವೀರತ್ವ ಮನೆಮಾಡಿರುತ್ತದೆ. ಜೊತೆಗೆ ಅಂಜಿಕೆಯೂ ಇರುತ್ತದೆ. ಆದರೆ ಚಂಪಕಾನಗರಿಯ ಸೈನಿಕರ ಮೊಗದಲ್ಲಿ ಹರ್ಷಭಾವ ತುಂಬಿ ತುಳುಕುತ್ತಿತ್ತು. ಅದರ ಹಿಂದಿನ ಕಾರಣವನ್ನು ತಿಳಿದುಕೊಂಡೆ. ಕೃಷ್ಣ ಪ್ರತ್ಯಕ್ಷವಾಗದೆ ನನಗೆ ಸೋಲುವವನಲ್ಲ ಹಂಸಧ್ವಜ ಎನ್ನುವುದು ಸೈನಿಕರಿಗೆ ಖಚಿತವಾಗಿತ್ತು. ಕೃಷ್ಣದರ್ಶನ ತಮಗೆ ಲಭಿಸುತ್ತದೆ. ತಮ್ಮ ಜನ್ಮ ಸಾರ್ಥಕವಾಗುತ್ತದೆ ಎಂಬ ಭಕ್ತಿಭಾವದ ಶರಧಿಯಲ್ಲಿ ತೇಲುತ್ತಾ, ಸೊಗಭಾವ ಅನುಭವಿಸುತ್ತಿದ್ದರು ಆ ಸೈನಿಕರು.     ಹೀಗೆ ಯುದ್ಧರಂಗದೆಡೆಗೆ ನಡೆದುಬರುತ್ತಿದ್ದ ಸೈನಿಕರನ್ನು ನೋಡುತ್ತಿದ್ದರು ಉಪ್ಪರಿಗೆಗಳಲ್ಲಿ ನಿಂತ ಅಂಗನೆಯರು. ರಣರಂಗದ ಮೇಲಿನ ಯುದ್ಧಕ್ಕೂ ಮೊದಲು ಶಯನಗೃಹದ ಸರಸಕಾಳಗದೆಡೆಗೆ ಗಂಡನ ಮನಸ್ಸನ್ನು ಸೆಳೆದ ಅದೆಷ್ಟೋ ಕಾಮಿನಿಯರು ಯುದ್ಧ ಮಾಡುವುದಕ್ಕೆ ಬೇಕಾದ ಭರಪೂರ ಉತ್ಸಾಹವನ್ನು ಅವರಲ್ಲಿ ತುಂಬಿ ಕಳುಹಿಸಿಕೊಟ್ಟಿದ್ದರು.     ಯುದ್ಧಕ್ಕೆ ಸಿದ್ಧವಾಗಿ ನಾವೂ ನಿಂತೆವು. ಹಂಸಧ್ವಜನ ಸೇನೆಯೂ ನಿಂತಿತು. ಯಾರದೋ ಆಗಮನಕ್ಕೆ ಕಾಯುತ್ತಿರುವಂತೆ, ಅವನೇಕೆ ಇನ್ನೂ ಬಂದಿಲ್ಲ ಎಂದು ಅತ್ತಿತ್ತ ನೋಡುತ್ತಿರುವಂತೆ ಹಂಸಧ್ವಜನ ವರ್ತನೆಯಿತ್ತು. ರಣಕಹಳೆ ಇನ್ನೂ ಮೊಳಗಿರಲಿಲ್ಲ. ಯಾರಿಗಾಗಿ ಕಾಯುತ್ತಿದ್ದಾನೆ ಹಂಸಧ್ವಜ?! ನನಗೆ ಅರ್ಥವಾಗಲಿಲ್ಲ.                                                  ಡಾ. ವಿಶ್ವನಾಥ ಎನ್ ನೇರಳಕಟ್ಟೆ     

Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ ಬೊಮ್ಮಾ ಯುದ್ದಕಾಲೇ ವಿಪರೀತ ಬುದ್ದಿ. ನಮ್ಮ ಕಡಿ ಬಿಸಿಲಿನ ಕಾವು ಏರಲತರ ಆ ಕಡಿ ಯುದ್ದದ ಕಾವು ಎರಲತದ.ಯುದ್ದ ಅಂದ್ರ ನಾವು ಸಣ್ಣವರಾಗಿದ್ದಾಗ ಪುಸ್ತಕದಾಗ ಓದಿದ್ದು ಒಬ್ಬ ರಾಜ ಮತ್ತೊಬ್ಬ ರಾಜನ ಮ್ಯಾಲ ಯುದ್ದ ಮಾಡಿ ಅವನ ರಾಜ್ಯ ವಶಪಡಿಸಿಕೊಳ್ಳೊದು ಅಂತ ಓದಿದ್ದೆವು. ಕಲ್ಪನೆ ಮಾಡಕೊಳ್ಳಕೊ ಆಗದ ವಯಸ್ಸು ಅದು. ಆಮ್ಯಾಲ ರಾಮಾಯಣ ಮಹಾಭಾರತ ಧಾರಾವಾಹಿಗಳದಾಗ ಯುದ್ದ ಅಂದ್ರ ಹಿಂಗಿರತದ ಅಂತ ತಿಳಕೊಂಡೆವು.ಆ ಕಡೆಯಿಂದ ಸಾವಿರಾರು ಜನ ಈ ಕಡಿಯಿಂದ ಸಾವಿರಾರು ಜನ , ಯಾರು ಯಾರಿಗಿ ಹೊಡಿಲತಾರ ಕಡಿಲತಾರ ಎಂದು ತಿಳಕೊಳ್ಳೊವಷ್ಟರಲ್ಲಿ ಯುದ್ದ ಮುಗಿದಿರತಿತ್ತು. ಕತ್ತಿ , ಚೂರಿ , ಕೊಡಲಿ ಇಂತಹ ಆಯುಧಗಳಿಂದ ಯುದ್ದ ಮಾಡತಾರ ಅಂದಕೊಂಡಿದ್ದೆವು.ಪೌರಾಣಿಕ ಸಿನಿಮಾದೊಳಗ , ಇತಿಹಾಸ ತಿಳಸೋ ಸಿನಿಮಾದೊಳಗೆಲ್ಲ ಇಂತಹ ಯುದ್ದ ತೊರಿಸ್ತಿದ್ರು. ಮತ್ತ ನಮೂನಿ ನಮೂನಿ ಬಿಲ್ಲು ಬಾಣಗಳು.ರಾಮಾಯಣ ಮಹಾಭಾರತ ಧಾರಾವಾಹಿದೊಳಗ ಅದೇಷ್ಟು ನಮೂನಿ ಬಾಣಗಳು ತೊರಿಸ್ತಿದ್ರು ಅಂದ್ರ , ಬೆಂಕಿ ಉಗೊಳೋ ಬಾಣಗಳು , ಕಬ್ಬಿಣದ ಮಳಿ ಉಗೊಳೊ ಬಾಣಗಳು , ಹುಲಿ ಮುಖದ ಬಾಣಗಳು , ಹಾವಿನ ಮುಖದ ಬಾಣಗಳು. ಅವುಗಳನ್ನು ನೋಡ್ತ ಎಷ್ಟು ಕೂತುಹಲದಿಂದ ಕೂಡ್ತಿದ್ದಿವಂದ್ರ ಧಾರಾವಾಹಿ ಮುಗದ ಮ್ಯಾಲ ಬಾಳ ಬ್ಯಾಸರ ಆಗ್ತಿತ್ತು. ಹೈಸ್ಕೂಲ್ ಗೆ ಬಂದ ಮ್ಯಾಲ ಸಮಾಜ ವಿಜ್ಞಾನ ಪಠ್ಯ ದಾಗ ಓದಿದ ಯುದ್ದಗಳ ಕಲ್ಪನೆ ಸ್ವಲ್ಪ ಅಪ್ಗ್ರೆಡ್ ಆಗಿತ್ತು.ಮೊದಲನೆ ಮಹಾಯುದ್ದದಲ್ಲಿ ಮೊಟ್ಟಮೊದಲ ಬಾರಿಗೆ ಯುದ್ದ ವಿಮಾನಗಳು,  ಯುದ್ದ ನೌಕೆಗಳು , ಟ್ಯಾಂಕರ್ ಗಳು , ಜಲಾಂತರ್ಗಾಮಿ ಗಳು ಬಳಸಲಾಯಿತು . ಅಲ್ಲಿವರೆಗೂ ಯುದ್ದಗಳೆಂದರೆ ಎರಡು ಪಡೆಗಳು ಕೈಯಿಂದ ಹೊಡೆದಾಡಿಕೊಳ್ಳುವದು ಎಂದು ತಿಳಿದಿದ್ದ ನಮಗೆ ಹೊಸ ಯುದ್ಧ ರೀತಿ ತಿಳಿಯಿತು. ಒಂದನೆ ಮಹಾಯುದ್ದ , ಎರಡನೇ ಮಹಾಯಯದ್ದ , ಹಿರೋಷಿಮಾ ನಾಗಾ ಸಾಕಿ ಮೇಲೆ ಹಾಕಿದ ಅಣುಬಾಂಬ್ ಅದರ ಪರಿಣಾಮಗಳು ಇವೆಲ್ಲವೂ ಪಠ್ಯ ದಲ್ಲಿ ಓದಿ ತಿಳಿದ ವಯಸ್ಸಿನಲ್ಲಿ ಯುದ್ದ ಯಾತಕ್ಕಾಗಿ ಮಾಡ್ತಾರೆ ಎಂಬ ಯೋಚನೆ ಅಷ್ಟು ಕಾಡ್ತಿರಲಿಲ್ಲ. ಯುದ್ದ ಮಾಡುವದರ ಮುಖ್ಯ ಉದ್ದೇಶ ಮಹತ್ವಾಕಾಂಕ್ಷೆ ಮತ್ತು ಹಕ್ಕಿನ ಹೋರಾಟಕ್ಕಾಗಿ.ಎರಡೂ ಪಡೆಗಳು ತಮ್ಮ ತಮ್ಮ ಜಾಗದಾಗ ಸರಿ ಅಂತ ನಿರ್ಣಯಿಸಿದ ಮ್ಯಾಲ ಯುದ್ದಕ್ಕ ಮಾಡ್ಲಕ್ಕ ಕಾರಣಗಳು ಬೇಕಾದಷ್ಟು ಸಿಗತಾವ. ನಮ್ಮ ಮನುಕುಲಕ್ಕ ಅಣುಬಾಂಬ್ ಯಾಕ್ ಬೇಕು.ಇದರಿಂದ ಉಪಯೋಗ ಏನು. ಇದು ಜಗತ್ತಿಗಿ ಘಾತಕ ಅಂತ ಗೊತ್ತಿದ್ರು ದೇಶಗಳು ಇದನ್ನು ಯಾಕ ತಯ್ಯಾರಿಸ್ತಾರ. ಎಲ್ಲಾ ದೇಶದವ್ರಿಗೂ ತಮ್ಮ ತಮ್ಮ ದೇಶದ ಬಲ ತೋರಿಸಿಕೊಳ್ಳಕ್ಕ.ದೊಡ್ಡಸ್ತಿಕೆಗಾಗಿ ಮಾತ್ರ. ಒಂದು ದುರ್ಬಲ ಸಂದರ್ಭದಲ್ಲಿ ಅಣುಬಾಂಬ್ ಪ್ರಯೋಗಿಸಿದ್ರು ಅಂತಿಟ್ಟಕೊಳ್ಳೊಣ.ಅದರ ಪರಿಣಾಮ ಎಲ್ರಿಗೂ ಗೊತ್ತು.ಜಪಾನಿನ ನಾಗಾಸಾಕಿ ಪ್ರದೇಶ ಇನ್ನೂ ಆ ಘಟನೆಯಿಂದ ಚೇತರಿಸಿಕೊಳ್ಳತಿಲ್ಲ.ಎಷ್ಟು ತಲೆಮಾರು ದಾಟಿದ್ರು ಅಂಗವಿಕಲತೆ ತೊಲಗಸಲ್ಕಿಕ್ಕೆ ಆಗತಿಲ್ಲ. ಇಂತಹ ಒಡಲೊಳಗೆ ಕೆಂಡ ಇಟ್ಟಕೊಂಡ ದೇಶಗಳು ಎನನ್ನ ಸಾಧಿಸಬಹುದು. ಯುದ್ದಗಳು ನಮ್ಮ ಜಗತ್ತಿನ ಪ್ರಗತಿಯನ್ನು ಐವತ್ತು ವರ್ಷ ಹಿಂದಕ್ಕ ದೂಡತಾವ.ಮನುಷ್ಯ ತನ್ನ ಬುದ್ದಿ ಉಪಯೋಗಿಸಿ ಏನೆಲ್ಲ ಸಾಧಿಸಿ ಗಳಿಸಿದ್ದ ಎಲ್ಲವೂ ಯುದ್ದ ನಾಶ ಮಾಡ್ತದ.ಆದ್ರು ದೇಶಗಳಿಗೆ ತಮ್ಮ ಪ್ರತಿಷ್ಟೆ ಮುಖ್ಯ. ಒಬ್ಬರ ಮೇಲೊಬ್ಬರು ಬಾಂಬ್ ಎಸೆದು ಎಲ್ಲಾ ನೆಲಸಮ ಮಾಡಿ ಹೆಮ್ಮೆಯಿಂದ ಬೀಗತಾರ.ಅದು ಪರಿಣಮ ಬೀರೋದು ಜನಸಾಮಾನ್ಯರ ಮ್ಯಾಲ. ನೆಲ ಆಸ್ತಿ ಜೀವ ಕಳಕೊಂಡವರ ಪಾಡು ಯಾರಿಗೂ ಕಾಣಲ್ಲ.ಬರೀ ದೇಶಗಳ ಸೋಲು ಗೆಲವು ಮಾತ್ರ ವಿಷಯ ಆಗ್ತದ. ಈ ವಿಶ್ವ ಸಂಸ್ಥೆ ಇರುವದು ಎಲ್ಲಾ ದೇಶಗಳು ಪರಸ್ಪರ ಶಾಂತಿ ಸಹಬಾಳ್ವೆಯಿಂದ ತಂಟೆ ತಕರಾರು ಇಲ್ಲದೆ ಬದುಕಲು ತಿಳಿಸುವದಕ್ಕಾಗಿ ಇರತದ. ಈಗ ಈ ಸಂಸ್ಥೆ ಏನು ಮಾಡ್ತಿದೆ ಅಂತ ಪ್ರಶ್ನೆ ಕಾಡತದ.ಒಂದಿಲ್ಲೊಂದು ಯುದ್ದ ನಡಿತಾನೆ ಅವ. ಸುಮ್ಮನೆ ಇದ್ದ ಇರಾನ್ ಮ್ಯಾಲ್ ಅದ್ಯಾಕ ಅಮೇರಿಕಾ ಕಾಲಕೆರಕೊಂಡು ಜಗಳಕ್ಕ ನಿಂತು. ಅಣುಬಾಂಬ್ ಇರಾನ ದೇಶದಾಗಷ್ಟೆ ಅದ ಏನು. ಬೇರೆ ಅದೇಷೋ ದೇಶಗಳದಾಗೂ ಅವ.ಇಸ್ರೆಲ್ , ಪ್ಯಾಲೆಸ್ಟೈನ್ ಜಗಳಕ್ಕ ಒಂದು ಕಾರಣ ಇತ್ತು.ಸಮರ್ಥನೆ ಅವರವರು ಯಾವಾಗ್ಲೂ ಮಾಡಿಕೊಳ್ಳತಾನೆ ಇರತಾರ.ಇದು ಎಲ್ಲಾ ಜಗಳದಾಗೂ ಇರತದ . ಆದ್ರ ಸ್ವಲ್ಪ ವಿವೇಚನೆ ಯಿಂದ ವಿಚಾರ ಮಾಡ್ದರ ಪ್ರಬಲರು ದುರ್ಬಲರ ಮ್ಯಾಲ ಯುದ್ದ ಮಾಡೋದು ಪೌರುಷ ಅನಿಸಿಕೊಳ್ಳಲ್ಲ.ಭಯೋತ್ಪಾದಕ ದಂತ ಕೃತ್ಯ ತಡೆಗಟ್ಟಬೇಕಾದ್ರ ಕೆಲವೊಮ್ಮೆ ಮಾರಕ ನಿರ್ಣಯ ಗಳನ್ನು ತಗೋಬೇಕಾಗತದ.ಭಯೋತ್ಪಾದ ನೆ ತಡೆಗಟ್ಟಲು ಪ್ರಯತ್ನಿಸತಿದ್ದರಂದ್ರೆ ಬೆಂಬಲಿಸೊಣ. ಆದ್ರ ಈ ಅಮೇರಿಕಾ ಕಾಲ ಕೆರದು ಜಗಳಕ್ಕ ಬರೊದು ಖಂಡಿಸಲೇಬೇಕು. ಯುದ್ದ ಗಳು ಎರಡು ದೇಶದ ನಡುವೆ ನಡೆದ್ರು ಪರಿಣಾಮ ಇಡೀ ಜಗತ್ತು ಎದುರಿಸಬೇಕಾಗತದ.ದೇಶಗಳು ಖಂಡಗಳು ದೂರ ದೂರ ಇದ್ರೂ ಗಾಳಿ ಬೆಳಕು ಎಲ್ಲ ಕಡೆ ಹಬ್ಬಿದಂಗ ನಮ್ಮ ದೈನಂದಿನ ಕೆಲಸಗಳಿಗಿ ಬೇಕಾದ ವಸ್ತುಗಳು ಇಡೀ ಜಗತ್ತಿನ ಎಲ್ಲಾ ಭಾಗಗಳಿಗೂ ಹರಿದಾಡತಾವ.ಯುದ್ದಗಳಿಂದ ಇಂತಹ ವಸ್ತು ಗಳ ಆಮದು ರಪ್ತು ಕಾರ್ಯಗಳು ನಿಂತು ಜನಸಾಮಾನ್ಯರು ಹೈರಾಣ ಆಗಬೇಕಾಗತದ. ಯುದ್ದ ನಡಿತಿರೋ ದೇಶಗಳ ಚಿತ್ರಣ ನೋಡಿದ್ರ ಮನಸ್ಸು ವಿಷಾದ ಆಗತದ.ಎಂತೆಂಥ ದೊಡ್ಡ ದೊಡ್ಡ ಕಡ್ಡಡಗಳೆಲ್ಲ ನೆಲಸಮ ಮಾಡ್ತಿದ್ದಾರ.ಈಗ ಒಂದು ಸಮಾಧಾನ ಅಂದ್ರ ಯುದ್ದದ ಸೂಚನೆ ಸಿಗ್ತಂದ್ರ ಜನರಿಗೆ ತಾವಿರುವ ಸ್ಥಳ ಖಾಲಿ ಮಾಡ್ಸಿ ಬ್ಯಾರೆ ಸುರಕ್ಷಿತ ಸ್ಥಳ ಕ್ಕ ಕಳ್ಸತಾರಂತ.ಜೀವ ಉಳದ್ರ ಸಾಕು ಅನ್ನಕೊಂಡ್ರ ತಮ್ಮ ಎಲ್ಲಾ ಜೀವಮಾನದ ಗಳಿಕಿ ಕಳಕೊಂಡು ಅವ್ರ ಬದುಕು ಉಹಿಸಿಕೊಳ್ಳಕ್ಕ ಆಗಲ್ಲ.ಕ್ಷೀಪಣಿಗಳು ಒಬ್ಬರ ದೇಶದ ಮ್ಯಾಲ ಒಬ್ಬರು ಹಾರಿಸಿ ಇಡೀ ಊರೆಲ್ಲ ನೆಲಸಮ ಮಾಡೊದ್ರಾಗ ಯಾವ ಪುರುಷಾರ್ಥ ಅದ..ಸಣ್ಣ ಮಕ್ಕಳು ಕಲಿಯೋ ಸಾಲಿಮ್ಯಾಲ್ ಬಾಂಬ್ ಹಾಕಿ ಮಕ್ಕಳ ಸಾವಿಗಿ ಕಾರಣ ಆಗೊ ದೇಶಗಳ ವಿಕೃತಿಗೆ ಧಿಕ್ಕಾರ. ಅಲ್ಲೆಲ್ಲೊ ಯುದ್ದ ಆಗತಿದ್ರ ಅದರ ಪರಿಣಾಮ ನಮ್ಮ ದೇಶದವ್ರು ಅನುಭವಿಸಬೇಕಾಗ್ಯಾದ.ಬರಿ ನಮ್ಮ ದೇಶ ಅಷ್ಟೇ ಅಲ್ಲ. ಇಡೀ ಮನುಕುಲಕ್ಕೆ ತೊಂದರೆ ಆಗಲತದ.ನಮ್ಮ ಜನರು ಸಿಲಿಂಡರ್ ಸಲುವಾಗಿ ಕಷ್ಡಪಡತಿದ್ದಾರ.ಕಾಡು ಕಡದು ಕಟ್ಟಿಗಿ ಉಪಯೊಗಿಸಿ ಕಾಡು ಹಾಳು ಮಾಡಬ್ಯಾಡ್ರಿ ಅಂತ ಕಾಡಿನ ಅಕ್ಕಪಕ್ಕದ ಜನಕ್ಕ ಸರ್ಕಾರ ಉಚಿತ ಗ್ಯಾಸ ಸಿಲಿಂಡರ್ ವ್ಯವಸ್ಥೆ ಮಾಡಿತ್ತು. ಈಗ ಬಹುತೇಕ ಮನಿ ಗಳಲ್ಲಿ ಕಟ್ಟಗಿ ಉಪಯೋಗಿಸೋದು ಕಮ್ಮಿ ಆಗ್ಯಾದ  ಈ ಯುದ್ದದ ಪರಿಣಾಮದಿಂದ ಗ್ಯಾಸ್ ಅಭಾವವಾಗಿ ಮತ್ತ ಜನ ಕಟ್ಟಿಗಿಗಿ ಮೊರೆ ಹೋಗಬೇಕಾಗ್ಯಾದ.ಈಗ ಮತ್ತೊಮ್ಮೆ ಕೋವಿಡ್ ದಾಗ ಅನುಭವಿಸಿದ ಸಂಕಟ ನೆನಪಿಗೆ ಬರಲತದ.ಈ ಯುದ್ದಗಳು ಹಿಂಗ ಮುಂದುವರೆದ್ರ ಇನ್ನೂ ಎನೇನು ಅಭಾವ ಎದುರಿಸಬೇಕೋ ಎನೋ. ಈ ಯುದ್ದಗಳಿಂದ ಜಗತ್ತಿಗೆ ಉಪಯೋಗ ಇಲ್ಲ.ಆದ್ರೂ ಮತ್ತೊಬ್ಬರ ಜೋಡಿ ಜಗಳ ಆಡೋದೇ ದೊಡ್ಡಸ್ತಿಕೆ ಅನ್ನಕೊಳ್ಳೋ ಮೂರ್ಖರು ಇರೊ ತನಕ ಇವು ಹಿಂಗ ನಡಿತಾವ.ಎಲ್ಲೊ ಕುಂತು ಯುದ್ದಕ್ಕ ಪ್ರೇರಣೆ ನಿಡೋರು ಸುರಕ್ಷಿತ ವಾಗೆ ಇರತಾರ.ಸಾಮಾನ್ಯರ ಪಾಡು ಅನ್ನಲಕ್ಕ ಆಗಲ್ಲ ಆಡಲಕ್ಕ ಆಗಲ್ಲ.ದೇಶಗಳು ದೊಡ್ಡಸ್ತಿಕಿಯಿಂದ ಬೆನ್ನತಟ್ಟಕೊಳ್ಳತಾವ , ದೇಶವಾಸಿಗಳು ಯುದ್ಧದ ಕಾರ್ಮೊಡದೊಳಗ ಕಾಣೆಯಾಗತಾರ. ಜ್ಯೋತಿ , ಡಿ.ಬೊಮ್ಮಾ. ಜ್ಯೋತಿ ಡಿ , ಬೊಮ್ಮಾ ಅವರು ಕಲಬುರಗಿ ಜಿಲ್ಲೆಯವರು. ನಾಲ್ಕು ಕವನ ಸಂಕಲನಗಳು , ಎರಡು ಪ್ರಭಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳು ಸಂಗಾತಿ ಪತ್ರಿಕೆಗಾಗಿ ಅವರ ದೇಸಿ ನುಡಿಗಟ್ಟಿನಲ್ಲಿ ಅಂಕಣ ಬರಹವನ್ನು ಪ್ರಕಟಿಸುತ್ತಾರೆ.

Read Post »

ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಸಮರಸವು ಮೂಡಲಿ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಸಮರಸವು ಮೂಡಲಿ” ಈ ನೆಲದ ಭಾಷೆಯಿದುಬುದ್ಧ ಬಸವರ ವಚನಗಳುಸತ್ಯ ಸಮತೆ ಶಾಂತಿ ಪ್ರೀತಿಮನುಜ ಪಥದ ಮಂತ್ರವು ನಾನು ಹುಟ್ಟಿ ನಾವು ಬೆಳೆದುನಾಡ ಗೋಡೆ ಕಟ್ಟ ಬೇಕುವರ್ಗ ವರ್ಣ ಬೇಧ ಅಳೆದುದೇಶ ಒಂದೇ ಎನ್ನ ಬೇಕು ನೇಯ್ಗೆ ಕೃಷಿ ಗ್ರಾಮ ರಾಜ್ಯಬಾಪು ಕನಸಿನ ಭಾರತಭಗತ ಸಿಂಗರ ತ್ಯಾಗ ನೆಲದಬಾಬಾಸಾಹೇಬರ ಭಾರತ ದ್ವೇಷ ಮತ್ಸರ ಕರಗಿ ಹೋಗಲಿಮಮತೆ ಪ್ರೀತಿ ಅರಳಲಿಕೊಲೆ ಹಿಂಸೆ ಮಾಯವಾಗಿಸಮರಸವು ಮೂಡಲಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಸಮರಸವು ಮೂಡಲಿ” Read Post »

ಕಾವ್ಯಯಾನ, ಗಝಲ್

ಇಂದಿರಾ ಕೆ ಅವರ ಗಜಲ್

ಕಾವ್ಯ ಸಂಗಾತಿ ಇಂದಿರಾ ಕೆ ಗಜಲ್ ದೇಶ – ದೇಶ ನಡುವೆ ದ್ವೇಷ ಜ್ವಾಲೆ ಆರಿಸುವವರು ಯಾರಿಲ್ಲಿಮುಗಿಲು ಮುಟ್ಟಿದ ಅಳಲು ಆಕ್ರಂದನ ಆಲಿಸುವವರು ಯಾರಿಲ್ಲಿ ಯುದ್ಧ ರಣಾರ್ಭಟಕೆ ಬೆಚ್ಚಿ ಬಿದ್ದಿದೆ ಮನುಕುಲವುಜಗದಗಲ ಹರಡಿದ ಅಶಾಂತಿಯ ಅಳಿಸುವವರು ಯಾರಿಲ್ಲಿ ಬಲಿಷ್ಠತೆ ಮೆರೆದು ದೀನರಿಲ್ಲಿ ಬಲಿಪಶುಗಳಾದರುರಕ್ತ- ಸಿಕ್ತದಲಿ ಸಿಕ್ಕ ಹೆಣಗಳ ಎಣಿಸುವವರು ಯಾರಿಲ್ಲಿ ಅಸೂಯೆ ಅಹಂನ ಪ್ರದರ್ಶನ ಕರಾಮತ್ತೋಅಮಾಯಕರ ಜೀವ ಬೆಲೆ ತಿಳಿಸುವವರು ಯಾರಿಲ್ಲಿ ಕ್ರಾಂತಿ ಕಹಳೆ ಹೊತ್ತಿಸಿ ಕ್ಷಿಪಣಿಗಳ ಮಳೆಗೈಯುತಿವೆಹಲ್ಲೋಲ- ಕಲ್ಲೋಲ ಜಗತ್ತು ದಂಡಿಸುವವರು ಯಾರಿಲ್ಲಿ ಭಯದ ಭೀತಿ ಆವರಿಸಿದೆ ಅಳಿದುಳಿದ ಮನಗಳಲಿ  ವಿರಾಮವಿಲ್ಲದೆ ವಿರಾಜಿಸುತಿದೆ ವಿನಾಶ ಕದನ ತ್ಯಜಿಸುವವರು ಯಾರಿಲ್ಲಿ ವಿಶ್ವದಾದ್ಯಂತ ಶಾಂತಿ ಸ್ನೇಹ – ಭಾತೃತ್ವ ನೆಲೆಸಲೆಂದು ಪ್ರಾರ್ಥಿಸಿಬೇಕಿದೆ ಇಂದಿರೆದಾಳಿ – ಪ್ರತಿದಾಳಿಗೆ ನಲುಗಿದವರ ರಕ್ಷಿಸುವವರು ಯಾರಿಲ್ಲಿ ಇಂದಿರಾ ಕೆ

ಇಂದಿರಾ ಕೆ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಕಲ್ಪನಾ ಎಸ್‌ ಪಾಟೀಲ್‌ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ ಗಜಲ್ ತೆರೆದ ಎದೆಯ ಕದವ ಬಡೆಯುತಲೆ ಇದ್ದೆಅದಾವ ಊರ ಕನಸಿನೊಡೆಯನೊನೀನಾಗಿದ್ದೆ ಕನಸಲೆ ಕನಸುಗಳು ಬಹುದೂರದಿ ಸಾಗುತಲೆ ಇದ್ದವುನೀನು ಹೋದ ದೂರದೂರಿನ ದಾರಿಯಬೆನ್ನಟ್ಟಿಯೆ ಇದ್ದವು ನೀ ದಾರಿ ತಪ್ಪಿಸಿದರೂ ನೀನು ಕ್ರಮಿಸುವದಾರಿಯ ಮರೆಯದಂತೆ ಮಾಡಿದ್ದವು ಕನಸೆ ಗುರಿಯಾಗಿಸಿಕೊಂಡು ನಡೆದಿದ್ದೆ ನೀನುಆ ಕನಸೆ ಗುರಿಯ ತೀರ ತಲುಪಿಸಿದನು ಮರೆತೆ ಏನು ನನ್ನ ಕನಸೆ ನೀನು ನಿನ್ನ ಕನಸಿಗಾಗಿ ನಾನೆ ಎಂದೆನೀ ಬರಿ ಕನಸ ಕಂಡರೆ ಕಾವ್ಯಧರೆಗೆ ಕನಸೆ ನೀನಾಗಿದ್ದೆ ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ್‌ ಅವರ ಗಜಲ್ Read Post »

ಕಾವ್ಯಯಾನ

ಪ್ರಶಾಂತ್ ಬೆಳತೂರು ಅವರ ಕವಿತೆ ” ಅವ್ವನಂತಹ ಹುಡುಗಿ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ಅವ್ವನಂತಹ ಹುಡುಗಿ” pic̲:gemini ಇವಳ ಕುರಿತುಹೆಚ್ಚೇನೂ ಹೇಳಬೇಕಿಲ್ಲ…! ಅವ್ವನಂತಹ ಹುಡುಗಿಕಣ್ಣ ಬೊಗಸೆ ತುಂಬಾಪ್ರೀತಿ ಹೊತ್ತು ನಿಂತಿರುತ್ತಾಳೆ…! ಬೆಳ್ಳಂಬೆಳಗ್ಗೆ ಅವ್ವನೇಎಲ್ಲರಿಗಿಂತ ಮೊದಲೆದ್ದುಮನೆಯ ಉಸಾಬರಿ ವಹಿಸಲುಹಾಜರಾಗುವಂತೆರೂಮಿನ ಬಾಗಿಲು ತೆರೆದಾಗೆಲ್ಲಾಕಣ್ಮುಂದೆ ಕಾಣಿಸಿಕೊಳ್ಳುತ್ತಾಳೆಒಂಟಿ ದೋಣಿಯೊಂದುಯಾವುದೋ ದೂರ ತೀರಕೆಹಾತೊರೆದು ಹರಿಯುತ್ತಿರುವಂತೆ..! ನನ್ನೆದೆಯೊಳಗೂಒಮ್ಮೆಲೇ ರಭಸವಾಗಿ ನುಗ್ಗಿ ಬಿಡುತ್ತಾಳೆಅವ್ವನ ಪ್ರತಿರೂಪದಂತಾಗಿಹರಿದಾಡುತ್ತಾಳೆಮುಗ್ಧತೆಯಲ್ಲಿ ಮೂಗು ತಿರುವುತ್ತಾಒಳಗೊಳಗೆ ಅಸಹನೆಯಲ್ಲಿಉಕ್ಕುವ ಅಲೆಗಳಂತೆ ಸಿಡುಕಿತನ್ನಷ್ಟಕ್ಕೆ ತಾನೇ ತಣ್ಣಗಾಗುತ್ತಾಳೆಪ್ರೇಮಮಯಿ ಆಗಿಬಿಡುತ್ತಾಳೆ..! ಸಂತೈಸುತ್ತದೆ ನನ್ನನ್ನುಅವಳ ಒಂದು ನಿಷ್ಕಲ್ಮಶ ಮುಗ್ಧ ನಗು..!ಅವ್ವ ಮಗಳಾಗಿ ಬಂದಳೇನೋ ಎಂಬಅಚ್ಚರಿಯೊಂದು ಗೊತ್ತಾಗದಂತೆಹೃದಯದ ಭಾವವನ್ನುಲಯ ತಪ್ಪದಂತೆಮಧುರ ದನಿಯಲ್ಲಿ ಹೊತ್ತಿಸಿ ಬಿಡುತ್ತಾಳೆ..! ಅದ್ಯಾವ ಕಾಲದಲ್ಲಿಮಣ್ಣಲ್ಲಿ ಮಣ್ಣಾದ ನನ್ನವ್ವಈ ಅಪರಿಚಿತ ಹುಡುಗಿಯ ಕಂಗಳಲಿಮಳೆಯಾಗಿ ಜಿನುಗಿಬಿಟ್ಟಳು..!ತುಸು ಹಸುರಾಗಿಹೀಗೆ ಅರಿಯದಒಲವೊಂದನ್ನು ಚಿಗುರಿಸಿಬಿಟ್ಟಳು..! ತಿಳಿಯುತ್ತಿಲ್ಲ..ಇವಳ ಕುರಿತು ಹೆಚ್ಚೇನೂ..!ಆದರೆಅವ್ವನಂತಹ ಹುಡುಗಿಮೊನ್ನೆಮತ್ತೆ ತಿರುಗಿ ಬಂದಿದ್ದಳು..! ಬದುಕಿನ ಯುಗಾದಿಗಳೆಲ್ಲಾಮಂಕು ಕವಿದುಮುಗಿದು ಹೋಗುತ್ತಿರುವಾಗಬೆಳಕಾಗುವನನ್ನವ್ವನ ನೆನಪುಗಳನ್ನೆಲ್ಲಾಮರುಕಳಿಸುವಂತೆತನ್ನ ಹೋಳಿಗೆಯ ಡಬ್ಬಿಯಲ್ಲಿಜತನವಾಗಿ ತುಂಬಿಅಕ್ಕರೆಯಿಂದ ಕೈಗಿರಿಸುತ್ತಾತಾಯೊಡಲಿನ ಕನಸೊಂದುನಿಜವಾದಂತೆನಗುತ್ತಾ..ಅವ್ವನಾಗಿ ನಿಂತುಬಿಟ್ಟಿದ್ದಳು..! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ ” ಅವ್ವನಂತಹ ಹುಡುಗಿ” Read Post »

ನಿಮ್ಮೊಂದಿಗೆ

ಗೊರೂರು ಅನಂತರಾಜು ಅವರ ಕವಿತೆ ” ಕವಿ ಕಾಡಿಗೆ ಹೋದ”

ಕಾವ್ಯ ಸಂಗಾತಿ ಗೊರೂರು ಅನಂತರಾಜು ” ಕವಿ ಕಾಡಿಗೆ ಹೋದ” ಬಾರಯ್ಯ ಕವಿ ಕಾಡಿಗೆ ಈಗ ಬಂದೆಗ್ಯಾಸ್ ಮುಗಿದಿದೆಯೇಇಲ್ಲ ವನದೇವ ಸೌದೆ ಒಲೆಗೆ ಬೆಂಕಿ ಹಾಕಿ ಬಹಳ ದಿನಗಳಾದವುವಿಶ್ವ ಗುರುಗಳು ಯುದ್ಧಕ್ಕೆ ಅಲ್ಪ ವಿರಾಮ ಹಾಕಿದ್ದಾರೆರಾಮನಾಮ ಜಪಿಸುತ್ತಾ ವನವಾಸಕ್ಕೆ ಬಂದೆಮರ ಕಡಿಯಲು ಬಂದೆಯಾ ಮೂರ್ಖಹನುಮಂತನು ಲಂಕೆಗೆ ಬೆಂಕಿ ಇಟ್ಟನುಇವರು ಅಲ್ಲಿ ಬಾಂಬ್ ಬಿಟ್ಟರುಮನೆಯಲ್ಲಿ ಗ್ಯಾಸ್ ಟ್ರಬಲ್  ಮಕ್ಕಳು ಉಪವಾಸಹೆಂಡತಿ ಓಡಿಸಿದ್ದಾಳೆ ಅದಕ್ಕೆ ನಿನಗೆ ವನವಾಸಶ್ರೀಕೃಷ್ಣ ರಾಯಬಾರಿಗೆ ಪ್ರಾರ್ಥಿಸಿಕೊಅವರಿಗೆ ಭಗವದ್ಗೀತೆ ಬೋಧಿಸಿ ಯುದ್ಧ ನಿಲ್ಲಿಸಲಿ. ಗೊರೂರು ಅನಂತರಾಜು

ಗೊರೂರು ಅನಂತರಾಜು ಅವರ ಕವಿತೆ ” ಕವಿ ಕಾಡಿಗೆ ಹೋದ” Read Post »

ಪುಸ್ತಕ ಸಂಗಾತಿ

ಡಿ.ನಳಿನಾ ಅವರ ಅಂಕಣ ಬರಹಗಳ ಸಂಕಲನ “ಮನೋಮಂಥನ” ಕೃತಿಯ ಅವಲೋಕನ ಡಾ. ಅಶೋಕ ನರೋಡೆ ಅವರಿಂದ

ಪುಸ್ತಕ ಸಂಗಾತಿ ಡಾ. ಅಶೋಕ ನರೋಡೆ ಡಿ.ನಳಿನಾ “ಮನೋಮಂಥನ” ಕೃತಿಯ ಅವಲೋಕನ “ಮನೋಮಂಥನ ” ಡಿ.ನಳಿನಾ ಅವರ ವ್ಯಕ್ತಿತ್ವದ ವಿಕಸನದ ಕೃತಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಮಕ್ಕಳ ಮನೋ ವೈಜ್ಞಾನಿಕ ಅಂಕಣಗಳ ಸಂಕಲನ ಮೈಸೂರು ಆನಂದಿ ಪ್ರಕಾಶನವು ೨೦೨೫ ರಲ್ಲಿ ಪ್ರಕಟಿಸಿದೆ.” ಇಂದೀನ ಮಕ್ಕಳೆ ನಾಳಿನ ಪ್ರಜೆಗಳು. ಆರೋಗ್ಯವಂತ ಸಮಾಜ ರೂಪು ಗೊಳ್ಳಲು ಆರೋಗ್ಯವಂತ ಸಮಾಜ ತತ್ಪರವಾಗಿರಬೇಕು. ಅದಕ್ಕಾಗಿಯೇ ವೇದಗಳಾದಿಯಾಗಿ ಯೋಗಿಗಳು, ಋಷಿಮುನಿಗಳು, ಪ್ರಾಜ್ಞರು, ಪಂಡಿತರು, ಸಂಶೋಧಕರು, ವಿಜ್ಞಾನಿಗಳು, ಸಮಾಜಸುಧಾರಕರು, ಶಿಕ್ಷಕರು ನಿರಂತರ ದುಡಿಯುತ್ತಿದ್ದಾರೆ ಭಾರತೀಯ ಯೋಗ ಪರಂಪರೆಯ ಯಮ ನಿಯಮ  ಜನರ ಅಂತರಂಗ ಬಹಿರಂಗ ಶುದ್ಧಿಗೆ ಸಹಕರಿಸುತ್ತದೆ.” ಎಂಬುದು ಗಮನಾರ್ಹವಾಗಿದೆ. ಸುವಿಖ್ಯಾತ  ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರರ ಮೌಲಿಕ ಮುನ್ನುಡಿ  ಪುಸ್ತಕ ಕನ್ನಡಿಯಾಗಿದೆ. ಪ್ರಸ್ತುತ ಮನೋಮಂಥನ ಗ್ರಂಥದಲ್ಲಿ -ಜವಾಬ್ದಾರಿಯ ಮಕ್ಕಳು, ಕುಟುಂಬ ಮೌಲ್ಯಗಳು ಬೆಳೆಯಲಿ, ಮಕ್ಕಳ ಜಾಹೀರಾತು, ಮಕ್ಕಳನ್ನು ಬಯಲಿಗೆ ಒಡ್ಡಿ, ಮಕ್ಕಳಿಗೆ ಅವಮಾನ ಅನಿಸಿದರೆ ನಿಲ್ಲಿಸಿ, ಮಕ್ಕಳಿಗೆ ಕೋಟು ಹಾಕಿಸುವ ಪರಿಣಾಮ, ಮಕ್ಕಳಿಗೆ ವರ್ತನೆ ಕಲಿಸಿ, ಪಿರಿಯಡ್ಸ್ ಬಗ್ಗೆ ಅರಿವು ಮೂಡಿಸಿ, ಶಿಕ್ಷಕರು ಗೇಲಿ ಮಾಡಬಾರದು, ತಂದೆಗೆ ಇದು ಗೊತ್ತಿರಲಿ, ವಿವೇಚನೆಯೇ ಮದ್ದು, ಆರೋಗ್ಯಕರ ಸಂಬಂಧ ಬೆಳೆಸಿ, ಮಕ್ಕಳ ಸ್ನೇಹಿ ಪಾಲಕರಾಗಿ, ಮಕ್ಕಳಲ್ಲಿ ಮೌಲ್ಯ ಬೆಳೆಸೋಣ,ಮಕ್ಕಳ ಮನಸ್ಸು ಅರಿಯೋಣ, ಬೆಳೆವ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯ, ಮಕ್ಕಳ ಮನೋಬಲ ವೃದ್ಧಿಸಿ, ಮಕ್ಕಳ ನ್ನು ಮುಕ್ತವಾಗಿ ಬೆಳೆಯಲು ಬಿಡಿ, ಮಕ್ಕಳೇ ಮನೆ ಬೆಳಕು, ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸಿ, ಮಕ್ಕಳಿಗೆ ಬೇಕಿದೆ ಆಸರೆ, ಕುಟುಂಬದ ಸಾಮರ್ಥ್ಯವೇ ಸದಸ್ಯರ ನೈತಿಕ ಶಕ್ತಿ, ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು, ಮಕ್ಕಳ ಶ್ರಮ ಗೌರವಿಸಿ, ಮಕ್ಕಳ ಮನಸ್ಸನ್ನು ಗೆಲ್ಲಿ, ಮಕ್ಕಳಲ್ಲಿ ದ್ವೇಷ ಬಿತ್ತ ಬಾರದು, ಏಕಾಗ್ರತೆ ವಿದ್ಯಾರ್ಥಿ ಹಂತ ದಲ್ಲಿ ಬೆಳಕು, ಮಕ್ಕಳಲ್ಲಿನ ಕುತೂಹಲ ತಣಿಸಬೇಕು, ಮಕ್ಕಳಲ್ಲಿ ಎದೆಗಾರಿಕೆ ಬೆಳೆಸುವುದು ಹೇಗೆ?, ಪರೀಕ್ಷೆ ಬರೆಸೋಣ ಧೈರ್ಯವಾಗಿ, ಮಕ್ಕಳ ಮೇಲೆ ನಿಗಾ ಇರಲಿ, ಮಕ್ಕಳನ್ನು ಥಳಿಸದೇ ಕಲಿಸುವ ಜಾಣ್ಮೆ, ಮಕ್ಕಳ ಮೇಲೆ ಕರುಣೆ ಉಕ್ಕಲಿ, ಮಕ್ಕಳು ನಿರೀಕ್ಷಿಸುವ ಗುಣಗಳು ನಮ್ಮಲ್ಲಿ ಇರಲಿ,ಮಕ್ಕಳಿಗೆ ಸಾಹಿತ್ಯದ ಪುಸ್ತಕ ಓದಲು ಕಲಿಸಿ, ಆನಲೈನ್ ವಂಚನೆ ಮಕ್ಕಳನ್ನು ಬಾಧಿಸದಿರಲಿ, ಮಕ್ಕಳಲ್ಲಿ ಸಭಾಕಂಪನ ತೊಲಗಿಸಲು ಶ್ರಮಿಸಿ, ಮಕ್ಕಳನ್ನು ನೀರಿನೊಂದಿಗೆ ಚೆಲ್ಲಾಟಕೆ ಬಿಡಬೇಡಿ, ಮಕ್ಕಳು ಜೀವನ್ಮಖತೆ ಮೈಗೂಡಿಸಿಕೊಳ್ಳಲು ಸಹಕರಿಸಿ, ಶಾರ್ಟ್ ಕಟ್ – ಕಟ್ ಕಟ್, ಮಕ್ಕಳನ್ನು ಟಾರ್ಗೆಟ್ ಮಾಡಬಾರದು, ಮಕ್ಕಳಿಗೆ ಉಳಿತಾಯದ ಮಹತ್ವ ತಿಳಿಸಿ, ಮಕ್ಕಳಲ್ಲಿ ಪರೀಕ್ಷಾ ಭೀತಿ ತೊಲಗಿ ಸುವುದು ಹೇಗೆ ?, ಮಕ್ಕಳಿಗೆ ಶಾಲೆಯ ಸಾಮಾಜಿಕ ಜೀವನ ಅಗತ್ಯ, ಶಿಸ್ತು ಶಿಕ್ಷೆ ಆಗಬಾರದು,ಹಾರ್ಮೋನ್ಸ್ ಬದಲಾ ವಣೆ- ಬೇಕು ತಿಳುವಳಿಕೆ, ಮಕ್ಕಳಿಗೆ ಪಾಲಕರೆ ಆದರ್ಶ, ವಿಶೇಷ ಚೇತನರ ಮೇಲೆ ಗೌರವ- ಪ್ರೀತಿ ಅಚ್ಚಳಿಯ ದಂತಿರಲಿ,ಮಕ್ಕಳಿಗೆ ಸಂಸ್ಕೃತಿ ಕಲಿಸ ಲೇಬೇಕಾದ ಅನಿವಾರ್ಯತೆ, ಮಕ್ಕಳೆದುರು ಪಾಲಕರು ಮೋಬೈಲ್ ದೂರವಿರಿಸಿ,ಹುಡುಗಾಟದಿಂದ ಭವಿಷ್ಯ ಬಡಿದಾಟ,ಹರೆಯದ ವಿದ್ಯಾರ್ಥಿಗಳ ನಡುವೆ ಸಲುಗೆ ಸಲ್ಲ, ಮಕ್ಕಳಲ್ಲಿ ಕಲಾಭಿರುಚಿ, ಮಕ್ಕಳಿಗೆ ಕಣ್ಣೀರು ಹಾಕಿಸಬಾರದು, ಬೇಸಿಗೆ ರಜೆ ಹಾಯಾಗಿರಲಿ, ಬಿಸಿಲು ಜಾಗ್ರತೆ ಅವಶ್ಯ, ದೇಹ ರಕ್ಷಣಾ ಕೌಶಲ್ಯ ತರಬೇತಿ  ಅಗತ್ಯ, ಡ್ರಗ್ಸ್ ವಿಷವುಣಿಸುವ ವರಿದ್ದಾರೆ ಎಚ್ಚರ!, ಪರೀಕ್ಷೆ ದಿಟ್ಟತನ ದಿಂದ ಎದುರಿಸೋಣ, ಪರೀಕ್ಷಾ ಫೋಬೀಯಾ ಓಡಿಸಿ,ಮಕ್ಕಳ ಆದ್ಯತೆಗೆ ಗಮನವಿರಲಿ, ಮಕ್ಕಳನ್ನು ಗ್ರಾಮದ ಅನುಭವಗಳಿಗೆ ಒಡ್ಡಿ, ಮಕ್ಕಳಿಗೆ ವಿವೇಚನೆಯಿಂದ ತಿನ್ನಿಸಿ, ಮಕ್ಕಳು  ಫೇಲಾದರೆ ಅವರ ತಪ್ಪೇ ?, ಪಾಲಕರೆ ಅಪ್ರಾಪ್ತರಿಗೆ ವಾಹನ ನೀಡದಿರಿ, ಶಿಕ್ಷಣ ಉದ್ಯಮದೊಳಗೆ ಪಾಲಕರು ಕಂಗಾಲು ಮುಂತಾದ ಎಪ್ಪತ್ತೊಂದು ಸೊಗಸಾದ ಬರಹಗಳಿವೆ.”ಶ್ರೀಮತಿ ನಳಿನಾ ಅವರು ಮಕ್ಕಳ ಪುಟ್ಟ ಪುಟ್ಟ ಹೆಜ್ಜೆಗಳಂತೆ; ಪುಟ್ಟ ಪುಟ್ಟ ಲೇಖನಗಳ ಸರಮಾಲೆ ಯನ್ನು ಸಿದ್ದಪಡಿಸಿ, ಮನೋಮಂಥನ ಸುಂದರ  ಪುಸ್ತಕವನ್ನು ಕೈಗಿತ್ತಿದ್ದಾರೆ.” ಓದುವುದೇ ಚೇತೋಹಾರಿ ಅನುಭವ. ಬರವಣಿಗೆ ಸರಳ ಸಹಜ ಸುಂದರ ವಾಗಿ ಬಂದಿದೆ.ಮಕ್ಕಳು ಮಾತ್ರವಲ್ಲ, ಪಾಲಕರು, ಶಿಕ್ಷಕರು, ಅಧಿಕಾರಿ ವರ್ಗ, ಆಡಳಿತ‌ ಮಂಡಳಿಯವರು ಓದ ಲೇಬೇಕಾದ ಮಹತ್ವದ ಲೇಖನಗಳ ಗೊಂಚಲಿದು. ನಳಿನ ರಸವತ್ತಾಗಿ ಬರೆದಿದ್ದಾರೆ. ಘಟನೆಗಳು ಹೃದಯ ತಟ್ಟುತ್ತ್ತವೆ. ನಿರೂಪಣಾ ಶೈಲಿಯು ಚಿತ್ತಾಕರ್ಷಕವಾಗಿದೆ. ಪಾಲಕರ ಜವಾಬ್ದಾರಿ, ಶಿಕ್ಷಕರ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ವಿಕಾಸಕ್ಕೆ ರಹದಾರಿಯಾಗು ವಂತಹ ಕೃತಿ. “ಮನೋಮಂಥನ ಇಂದಿನ ಕಾಲದ ಪಾಲಕರ ಕೈಪಿಡಿಯಾಗಿ ರೂಪುಗೊಂಡಿದೆ. ವರ್ತಮಾನದಲ್ಲಿ ಪಾಲಕರು ವಿದ್ಯಾರ್ಥಿಗಳು, ಶಿಕ್ಷಕರು ತ್ರೀಕೋನೀ ಯ ಸಂಬಂಧಿತ ಸವಾಲುಗಳನ್ನು ಸಮಸ್ಯೆಗಳನ್ನು ಪರಿಹಾರಗಳನ್ನು ಬಹಳ ಆಪ್ತತೆಯ ದೃಷ್ಟಿಯಿಂದ ಮಾತೃ ವಾತ್ಸಲ್ಯದ ಕಕ್ಕುಲಾತಿಯಿಂದ ನೀಡ ಲಾಗಿದೆ.” ಎಂಬ ಯೋಗಿ ದೇವರಾಜ ಅವರ ಅಭಿಪ್ರಾಯವು ಪ್ರಸ್ತುತ ಪುಸ್ತಕದ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತದೆ.” ಕಳೆದ ಹದಿನೈದು ವರ್ಷಗಳ ಹಿಂದಿನಿಂದಲೂ ನಳಿನಾ ಅವರ ಬರಹಗಳು ಮಾನವೀಯ ಮೊರೆತವನ್ನು ಹೊಂದಿದ್ದು ಸಮಾಜದ ಒಳಿತಿಗಾಗಿ ತುಡಿಯುತ್ತಿವೆ.ಇಂತಹ ಸಕಾರಾತ್ಮಕ ಕೃತಿಗಳು ನಾಡಿನ ಪಾಲಕರ ಕೈಗೆ ತಲುಪಿ, ಮಕ್ಕಳ ಬದುಕು ಹಸನಾಗಲಿ” ಎಂದು ಹಾರೈಸಿದ್ದು ಸಮಂಜಸವಾಗಿದೆ.ಸದಾ ಲೋಕಕಲ್ಯಾಣದ ಚಿಂತನೆಗಳಿಂದ ಕೆಲಸ ಮಾಡುವ ಲೇಖಕಿ, ನಳಿನಾ ಅವರ ಮನೋಮಂಥನ ಮಕ್ಕಳ ಮನೋವಿಕಾಸಕೆ ರಹದಾರಿಯಾಗಲಿ.  ಡಾ. ಅಶೋಕ ನರೋಡೆ   ಡಾ. ಅಶೋಕ ನರೋಡೆ

ಡಿ.ನಳಿನಾ ಅವರ ಅಂಕಣ ಬರಹಗಳ ಸಂಕಲನ “ಮನೋಮಂಥನ” ಕೃತಿಯ ಅವಲೋಕನ ಡಾ. ಅಶೋಕ ನರೋಡೆ ಅವರಿಂದ Read Post »

ಇತರೆ

“ಡಾ.ಹೇಮಾ ಪಟ್ಟಣಶೆಟ್ಟಿಯವರಿಗೆ ಒಲಿದು ಬಂದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ” ಸುಭಾಷ್ ಹೇಮಣ್ಣಾ ಚವ್ಹಾಣ

ಸಾಹಿತಿ ಸಂಗಾತಿ “ಡಾ.ಹೇಮಾ ಪಟ್ಟಣಶೆಟ್ಟಿಯವರಿಗೆ ಒಲಿದು ಬಂದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ” ಸಮಾಜ ಮುಖಿ ಸಂವೇದನಾಶೀಲ ಲೇಖಕಿ ಡಾ. ಹೇಮಾ ಸಿ. ಪಟ್ಟಣಶೆಟ್ಟಿಯವರಿಗೆ ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದ ಸಾರಥ್ಯ (ಕೌಟುಂಬಿಕ ಜನತಾ ನ್ಯಾಯಾಲಯದ ಪ್ರಥಮ ಆಯೋಜಕಿ, ಸಾಹಿತ್ಯ ಮತ್ತು ಸಂಘಟನೆಯ ರಾಯಭಾರಿ, ಉತ್ತರ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆಯಾದಿಯಾಗಿ ಬಹುಶೃತ ಕಾರ್ಯಫಲದಾತೆ, ಅನನ್ಯ ಪ್ರಕಾಶನದ ಒಡತಿ, ಸಮರ್ಥ ಅನುವಾದಕಿ, 4೦ ವೈವಿಧ್ಯಮಯ ಕೃತಿತಾರೆಗಳ ಧಾರನಗರಿಯ ಹೆಸರಾಂತ ಲೇಖಕಿ, ರಂಗನಟಿ, ಸಮಾಜಮುಖಿ ಸಕ್ರಿಯ ಕಾರ್ಯಕರ್ತೆ, ಬಹುಭಾಷಾ ಕವಯತ್ರಿ, ಮನಃಶಾಸ್ತ್ರದ ಕನ್ನಡ ಉಪನ್ಯಾಸಕಿ, ಮಕ್ಕಳ ನಾಟಕ ರಚನಾಕಾರ್ತಿ, ಸಶಕ್ತ ಸಮಾಜದ ಸಂಸ್ಕೃತಿ ಚಿಂತಕಿ, ಸ್ತ್ರೀ ದೌರ್ಜನ್ಯದ ವಿಮೋಚಕಿ, ಸಬಲ ಮಹಿಳಾ ಲೋಕದ ಸಂಚಾಲಕಿ, ನೊಂದ ವನಿತೆಯರ ಸಾಂತ್ವನ ಸಮಾತಾ ಸಶಕ್ತ ಧ್ವನಿ, ದೇವದಾಸಿ ಪದ್ಧತಿ ನಿರ್ಮೂಲನಾ ಸಂಪನ್ಮೂಲ ವ್ಯಕ್ತಿ, ಧಾರವಾಡ ಹೈಕೋರ್ಟ್ ಪೀಠ ಸ್ಥಾಪನಾ ಉಪವಾಸ ಸತ್ಯಾಗ್ರಹಿ, ಸ್ತ್ರೀ ಮೀಸಲಾತಿಯ ಸ್ವಯಂ ಸೇವಕಿ, ಲಿಂಗ ಸಂವೇದನಾ ಜಾಗೃತಿಯ ರೂವಾರಿ, ವನಿತೆಯರ ಬಹುವಿಧ ಸಮಸ್ಯೆಗಳ ನಿವಾರಕಿ, ಮಾನವೀಯ ಸಂವೇದನೆಯ ಮಾತೃಹೃದಯಿ, ಹೆಣ್ಣು ಧಾರಕ ಬೀದಿ ನಾಟಕದ ರೂಪಕಿ, ಕಾವ್ಯ ಕಮ್ಮಟ, ಅನುವಾದ ಕಮ್ಮಟ, ಪ್ರಕಾಶನ ಕಮ್ಮಟ, ಕವಿಸಂಘದ ಉಪಾಧ್ಯಕ್ಷರು, ಹೆಣ್ಣು ಭ್ರೂಣ ಹತ್ಯೆಯ ಭೇದಕಿ, ವಿಚಾರ ಸಂಕಿರಣ, ಪರಿಸರ ವ ಜಲ ಸಂವರ್ಧಕಿ, ಖ್ಯಾತ ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಯವರ ಧರ್ಮಪತ್ನಿ ಡಾ. ಹೇಮಾ ಸಿದ್ಧಲಿಂಗ ಪಟ್ಟಣಶೆಟ್ಟಿ ಇವರ ಸಾಮಾಜಿಕ ಸೇವೆ – ಸಾಂಸ್ಕೃತಿಕ ಅನುಸಂಧಾನಕ್ಕಾಗಿ ಕರ್ನಾಟಕ ಘನ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2೦24 – ೨೫ನೇ ಸಾಲಿನ ಮಹಾಶರಣೆ ‘ಅಕ್ಕಮಹಾದೇವಿ ರಾಜ್ಯ ಮಟ್ಟದ ಪ್ರಶಸ್ತಿ’ ಪುರಸ್ಕೃತರಾದ ಡಾ. ಹೇಮಾ ಸಿದ್ದಲಿಂಗ ಪಟ್ಟಣಶೆಟ್ಟಿ ಯವರಿಗೆ ಧಾರವಾಡ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು,  30, 31 ಮಾರ್ಚ 2026ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜನೆಯಾಗಿದೆ ಸಕಾರಣ ಮಹನೀಯರ ಕನ್ನಡ ಸಾಹಿತ್ಯ ಸೇವೆ, ಸಮಾಜ ವ ಸಾಂಸ್ಕೃತಿಕ ಜೀವನ ಸಾಧನೆಯ ಮೇಲೆ ಬೆಳಕು ಚೆಲ್ಲುವ ಕಿರು ಲೇಖನ) *ಸಮತಾ ಸಮಾಜದ ಸಂಚಾಲಕಿ ಡಾ. ಹೇಮಾ ಪಟ್ಟಣಶೆಟ್ಟಿ ಅವರ ಬಾಲ್ಯ, ಶಿಕ್ಷಣ, ಪರಿವಾರ ವೃತ್ತಿ ಕುರಿತು ಕಿರು ಮಾಹಿತಿ* ವೈಚಾರಿಕ ನಿಲುವಿನ ಹೇಮಾರವರು 1954ರ ಫೆಬ್ರುವರಿ 10ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಚಂದ್ರಶೇಖರಸ್ವಾಮಿ ಹೊನ್ನಾಪುರಮಠರವರು ವಕೀಲರಾಗಿದ್ದರು. ತಾಯಿ ಗೌರಾಂಬಿಕಾ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದರು. ಸಾಹಿತ್ಯಿಕ ಪರಿವಾರದಿಂದ ಬಂದ ಹೇಮಾ ಅವರು ಎಂ. ಎ. (ಮನೋವಿಜ್ಞಾನ) ಮತ್ತು ಎಂ. ಎ. (ಕನ್ನಡ) ಸಾಧನೆಗಳ ಜೊತೆಗೆ ‘ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು’ ಎಂಬ ಮಹಾಪ್ರಬಂಧ ಮಂಡಿಸಿ ಪಿ. ಎಚ್. ಡಿ ಪದವಿಗೆ ಪಾತ್ರರಾದ ಇವರು ಮಹಿಳಾ ಸಶಕ್ತಿಕರಣದ ಸಂಕೇತವಾಗಿದ್ದಾರೆ. ಡಾ. ಹೇಮಾ ಪಟ್ಟಣಶೆಟ್ಟಿ ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಂತ ಲೇಖಕಿ. ಲೇಖನಗಳಲ್ಲದೆ ಅನುವಾದಕಿಯಾಗಿಯೂ, ರಂಗನಟಿಯಾಗಿಯೂ ಹಾಗೂ ಸಮಾಜ ಕಾರ್ಯಕರ್ತೆಯಾಗಿಯೂ ಪ್ರಸಿದ್ದರು. ಆರು ವರ್ಷ ಮನ:ಶಾಸ್ತ್ರದಲ್ಲೂ ನಾಲ್ಕು ವರ್ಷ ಕನ್ನಡಲ್ಲೂ ಉಪನ್ಯಾಸಕಿಯಾಗಿ ಧಾರವಾಡ ಕರ್ನಾಟಕ ಕಲಾ ಮಹಾವಿದ್ಯಾಲಯ ಮತ್ತು ಕಿತ್ತೂರಿನ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಮಂಗಳೂರಿನ ಆಕಾಶವಾಣಿಯಲ್ಲಿ ಪ್ರೊಡಕ್ಷನ್ಸ್ ಅಸಿಸ್ಟೆಂಟ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. “ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು -ಸ್ತ್ರೀವಾದಿ ದೃಷ್ಟಿಕೋನ” ಎಂಬುದು ಇವರ ಸಂಶೋದನಾ ಪ್ರಬಂಧ. ನೀನಾ ಕೃತಿ ಖ್ಯಾತಿಯ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಧರ್ಮ ಪತ್ನಿಯಾಗಿ ಹೂವೆಂಬ ಮಗಳು ಸಮುದ್ರವೆಂಬ ಮಗನನ್ನು ಪಡೆದಿರುವ ಇವರು ಸದಾ ಮಹಿಳಾ ಕಲ್ಯಾಣ ಮತ್ತು ಸಮಾಜೋದ್ಧಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.  *ಮಹಿಳಾ ದೌರ್ಜನ್ಯ ವಿಮೋಚಕಿ ಡಾ. ಹೇಮಾ ಪಟ್ಟಣಶೆಟ್ಟಿಯವರ ಅಸಾಧಾರಣ ಅಪರಿಮಿತ ಸಮಾಜಮುಖಿ ಕಾರ್ಯಕಲಾಪಗಳು* ಡಾ. ಹೇಮಾ ಪಟ್ಟಣಶೆಟ್ಟಿ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಠ್ಯ ರಚನಾ ಸಲಹಾ ಸಮಿತಿ ಸದಸ್ಯರಾಗಿ, ಕರ್ನಾಟಕ ಸರಕಾರದ ಜಲ ಸಂವರ್ಧನೆ ಯೋಜನಾ ಸಂಘದ ಆಡಳಿತ ಮಂಡಳಿ ಸದಸ್ಯರಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ರಾಷ್ಟ್ರೀಯ – ಅಂತಾರಾಷ್ಟ್ರೀಯ ಮಹತ್ವದ ಕಥಾ ಹಾಗೂ ಕಾವ್ಯ ಸಂಪುಟಗಳಲ್ಲಿ ಇವರ ಕಥೆ, ಕವಿತೆಗಳು ಪ್ರಕಟಗೊಂಡಿವೆ. ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಬಹುಭಾಷಾ ಲೇಖಕಿಯರ ಸಂವಾದದ ಜೊತೆಗೆ ವಿಚಾರ ಮಂಡನೆ ಮಾಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಕೋಶಾಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ,‍ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ‘ರಂಗಭೂಮಿಕಾ’ ಹವ್ಯಾಸಿ ನಾಟಕ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.              ಹೇಮಾ ಪಟ್ಟಣಶೆಟ್ಟಿ ಅವರು ಮಹಿಳಾ ಸಂಬಂಧೀ ಕಾರ್ಯಗಳಲ್ಲಿ ರಾಷ್ಟ್ರಮಟ್ಟದ ‘ಜಾಯಿಂಟ್ ವಿಮೆನ್ಸ್ ಪ್ರೋಗ್ರಾಂ’ ಸಂಸ್ಥೆಯ ಉತ್ತರ ಕರ್ನಾಟಕದ ಸಂಚಾಲಕರಾಗಿ, ‘ಸಾಂತ್ವನ’ ಕೌಟುಂಬಿಕ ಸಲಹೆ – ಸಹಾಯ ಕೇಂದ್ರದ ನಿರ್ದೇಶಕರಾಗಿ,  ರಾಷ್ಟ್ರಮಟ್ಟದಲ್ಲಿ ಮಹಿಳೆ ಮತ್ತು ಬಾಲಕಿಯರ ಸಾಗಾಣಿಕೆ ತಡೆಗಟ್ಟುವ ಸಮಿತಿ ಸದಸ್ಯರಾಗಿ, ಮಹಿಳಾ ಜಾಗೃತಿ ವೇದಿಕೆ ಸ್ಥಾಪಕ ಕಾರ್ಯದರ್ಶಿಯಾಗಿ ಹೀಗೆ ಆನೇಕ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ದೇವದಾಸಿ ಮಹಿಳೆಯರ ಮೇಲೆ ಸರಕಾರಿ ನೀತಿ ಮತ್ತು ಯೋಜನಾ ಸೌಲಭ್ಯಗಳ ಪರಿಣಾಮ ಹಾಗೂ ಅವರ ಸ್ಥಾನಮಾನ ಕುರಿತು ಪುನರ್ಮೌಲ್ಯೀಕರಣ ಅಧ್ಯಯನ ಮಾಡಿದ್ದಾರೆ.‍ ಪೊಲೀಸ್ ಅಧಿಕಾರಿಗಳಿಗೆ ಲಿಂಗ ಸಂವೇದನಾ ಜಾಗೃತಿ ಕಾರ್ಯಾಗಾರವನ್ನು ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಸಂಘಟಿಸಿದ್ದಾರೆ. ಕೌಟುಂಬಿಕ ಜನತಾ ನ್ಯಾಯಾಲಯ ಆಯೋಜಿಸಿ – ಧಾರವಾಡ, ಬೆಳಗಾವ, ಅಥಣಿ – ನ್ಯಾಯಾಲಯಗಳಲ್ಲಿ ಉಳಿದು ಹೋದ ಪ್ರಕರಣಗಳಲ್ಲಿ 85 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ. ಅಮ್ಮಿನಭಾವಿ,  ಉಪ್ಪಿನಬೆಟಗೇರಿ, ಬ್ಯಾಹಟ್ಟಿ  ಗ್ರಾಮಗಳಲ್ಲಿ ಪ್ರತೀ ಗ್ರಾಮದಲ್ಲಿ 50 ಮಹಿಳೆಯರಿಗೆ ‘ಸಶಕ್ತೀಕರಣ’ದ ತರಬೇತಿಯನ್ನು 22 ತಿಂಗಳ ಕಾಲ ನೀಡಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರ,  ಪ್ರತಿಭಟನಾ ಮೆರವಣಿಗೆ, ಉಪವಾಸ ಸತ್ಯಾಗ್ರಹಗಳಲ್ಲಿ ಭಾಗವಹಿ ಸಮಾಜ ಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಶ್ರಮಿಸಿದ್ದಾರೆ. *ಡಾ ಹೇಮಾರವರ ಅನನ್ಯ ಪ್ರಕಾಶನದಡಿಯಲ್ಲಿ ಜನಾರ್ಪಣೆಗೊಂಡ ಅವರ ಕೃತಿ ವೈವಿಧ್ಯ ನೋಟ* ೧೯೭೯ ರಲ್ಲಿ ‘ಅನನ್ಯ’ ಪ್ರಕಾಶನವನ್ನು ಸ್ಥಾಪಿಸಿ ಕನ್ನಡ ಖ್ಯಾತ ಲೇಖಕರ ೧೫೦ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ಸಾಹಿತ್ಯಿಕ ದ್ವೈ ಮಾಸಿಕ ‘ಸಂಕಲನ’ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.              ಹೇಮಾ ಪಟ್ಟಣಶೆಟ್ಟಿ ಅವರು ಇದುವರೆವಿಗೂ ಸುಮಾರು 40 ಸಾಹಿತ್ಯ ಕೃತಿಗಳನ್ನು ಮೂಡಿಸಿದ್ದಾರೆ. ಮುಸುಕಿದೀ ಮಬ್ಬಿನಲಿ ಅವರ ಕಥಾ ಸಂಕಲನ. ವಿರಹೋತ್ಸವ(೧೯೮೩), ಹೊಸ ಹಾಡು(೧೯೮೬), ಕಣ್ಣುಗಳಲಿ ಕನಸು ತುಂಬಿ(೧೯೯೩), ಉಸಿರ ಬದುವಿನ ಗುಂಟ(೨೦೦೭), ಬಾಳೆ ಗರ್ಭದಲಿ (೨೦೧೧) ಅವರ ಕಾವ್ಯ ಸಂಕಲನಗಳು. ತುಂಟ ಮಕ್ಕಳ ತಂಟೆ, ಬಗಾಟ ಬಗರಿ, ಹೆಣ್ಣು ಹೆಜ್ಜೆ, ಚೆಕಾವ್ ಟು ಶಾಂಪೇನ್ ಮಕ್ಕಳ ನಾಟಕಗಳು. ಅವರ ವೈಚಾರಿಕ  ಕೃತಿಗಳಲ್ಲಿ ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ, ರಂಗದಂಗಳ, ಆಕಲನ, ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ, ರಂಗ ವೃತ್ತಾಂತ,ಅಕ್ಕರದ ಸುಯಿಧಾನ ಸೇರಿವೆ. ಪ್ರಸನ್ನ, ಸಾಲಿ ರಾಮಚಂದ್ರರಾಯ ಇವರು ರಚಿಸಿದ ಜೀವನ ಚರಿತ್ರೆಗಳು.  ಹೊನ್ನಪುರ, ಕತೆಗಳು; ನನ್ನ ಅವ್ವ ನನ್ನ ಅಪ್ಪ -೧, ನನ್ನ ಅವ್ವ ನನ್ನ ಅಪ್ಪ-೨, ನನ್ನ ಶಾಲಾ ಗುರುಗಳು ಇವರ‍ ಸಂಪಾದನೆಗಳು. ಡಾ. ಲೋಹಿಯ, ಅದೃಶ್ಯ ವ್ಯಕ್ತಿಯ ಆತ್ಮಹತ್ಯೆ, ವಾತ್ಸಲ್ಯ ವಿಷ, ಮಾಡು ಸಿಕ್ಕದಲ್ಲಾ, ಜಾತಿಯವನೇ ಬೇಕು, ಅಪ್ಪಾಜಿ ಕಳೆದು ಹೋಗಿದ್ದಾರೆ, ಬೆವರು! ಬೆವರು!, ಬಾಬಿ, ಸೀಗಲ್, ಪೇಶಂಟ್ ಪಾರ್ಕಿಂಗ್, ಅನಿವಾಸಿ ಭಾರತೀಯರು, ತೆಂಡುಲಕರ ಮಕ್ಕಳ ನಾಟಕಗಳು, ರಕ್ತ ಪುಷ್ಪ,  ಹೋಳಿ ಮುಂತಾದವು ಇತರ ಭಾಷೆಗಳಿಂದ ಮೂಡಿ ಬಂದ ಇವರ ಅನುವಾದ ಕರತಿಗಳು. ವಿಶ್ವದ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿ ವಿಫುಲ ಅನುಭವ ಗಳಿಸಿದ್ದಾರೆ. *ಡಾ ಹೇಮಾರವರ ಸಂಸ್ಕೃತಿ ಚಿಂತನೆ ಮಹಿಳಾ ಹೋರಾಟ ಸಾಹಿತಿಕ ಸೇವೆಗೆ ಸಂದಿರುವ ಪ್ರಶಸ್ತಿ, ಪುರಸ್ಕಾರ, ಗೌರವಾಧಾರ, ಮಾನ – ಸನ್ಮಾನಗಳು*    ​       2007ರಲ್ಲಿ ಡಾ. ಹೇಮಾ ಪಟ್ಟಣಶೆಟ್ಟಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ (ಮುಸಕಿದೀ ಮಬ್ಬಿನಲಿ), ಮುದ್ದಣ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ವಿರಹೋತ್ಸವ), ಎರಡು ಸಲ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ಅನುಲೇಖ), ರತ್ನಮ್ಮ ಹೆಗ್ಗಡೆ ಬಹುಮಾನ (ಹೊಸ ಹಾಡು, ಕಣ್ಣುಗಳಲಿ ಕನಸು ತುಂಬಿ, ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ, ಉಸಿರ ಬದುವಿನ ಗುಂಟ ಕೃತಿಗಳಿಗೆ) ಮಹಿಳಾ ಪ್ರಕಾಶಕ ಪ್ರಶಸ್ತಿ- ಕರ್ನಾಟಕ ಲೇಖಕಿಯರ ಸಂಘದ ಪ್ರೇಮಾ ಭಟ್ ಪ್ರಕಾಶಕ ಪ್ರಶಸ್ತಿ, ಮಹಿಳಾ ಸಾಧಕರ ಪ್ರಶಸ್ತಿ – ಸಾಹಿತ್ಯ ಪ್ರತಿಷ್ಠಾನ – ಬೆಳಗಾವಿ, ಸೀತಾಸುತ ಸಾಹಿತ್ಯ ಪ್ರಶಸ್ತಿ, ಕೀರಂ ಪ್ರಶಸ್ತಿ, ಹೊಸ ಹಾಡು ಕೃತಿಗೆ ೧೯೮೩ ರ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ ದೊರೆತಿದೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮಕ್ಕಳ ಚಂದಿರ ಪ್ರಶಸ್ತಿ, ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಇವರು ಕೊಡಮಾಡುವ ಅಕ್ಕ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ಧಾರವಾಡ ತಾಲ್ಲೂಕು ಸಾಹಿತ್ಯ ಸಮ್ಮೇಳನ-7 ರ ಸರ್ವಾಧ್ಯಕ್ಷತೆ, ದಸರಾ ಕವಿಗೋಷ್ಠಿ ಅಧ್ಯಕ್ಷತೆ, ಧಾರವಾಡ ಜಿಲ್ಲಾ ಉತ್ಸವ-೮ ಸಾಂಸ್ಕೃತಿಕ ಸಮಿತಿ ಅಧ್ಯಕ್ಷತೆ, ದಸರಾ ವಿಶಿಷ್ಟ ಕವಿಗೋಷ್ಠಿ ಅಧ್ಯಕ್ಷತೆ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಧಾರವಾಡದ ಇನ್ನರ್ ವ್ಹೀಲ್ ಕ್ಲಬ್ ಇವರಿಗೆ ಉತ್ಕೃಷ್ಟ ಸಮಾಜ ಕಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.               ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕೀರ್ಣ ಕಾರ್ಯಗಾರ ಪ್ರತಿಭಟನಾ ಮೆರವಣಿಗೆ ಉಪವಾಸ ಸತ್ಯಾಗ್ರಗಳಲ್ಲಿ ಭಾಗವಹಿಸಿರುವ ಹೇಮಾ ರವರ ಸಾಧನೆ ಅವಿಸ್ಮರಣೆಯ ಅವುಗಳಲ್ಲಿ ಮುಖ್ಯವಾದವು ಬೆಳಗಾವಿ ನಮ್ಮದು – 1970, ಜೆ. ಪಿ ಚಳುವಳಿ -1975, ಧಾರವಾಡದ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ – 1995, 33 ಪರ್ಸೆಂಟ್ ಮಹಿಳಾ ಮಿಸಲಾತಿಗಾಗಿ ದಿಲ್ಲಿ ಸಂಸತ್ ಭವನದ ಎದುರು ಧರಣಿ – 1998, ಮಂತಾದ ಚಳುವಳಿಗಳಲ್ಲಿ ಭಾಗವಹಿಸಿ ನಾಡಿನ ಕಲ್ಯಾಣಕ್ಕಾಗಿ ಅವಿರತ ಹೋರಾಟ ಮಾಡಿದ್ದಾರೆ. ೨೦೧೩ರಲ್ಲಿ ನಡೆದ ಧಾರವಾಡ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿದ್ದ ಡಾ.ಹೇಮಾ ಪಟ್ಟಣಶೆಟ್ಟಿ ಅವರಿಗೆ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಲಭಿಸಲಿ, ಇವರ ಸಾಮಾಜಿಕ ಹಾಗೂ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಅರಸಿಬಂದಿವೆ. ಪ್ರಸ್ತುತ ಕರ್ನಾಟಕ ಘನ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2024 – 25ನೇ ಸಾಲಿನ ಅಕ್ಕಮಹಾದೇವಿ ರಾಜ್ಯ ಪ್ರಶಸ್ತಿಯನ್ನು 3 ಮಾರ್ಚ್ 2೦25ರಂದು ಪ್ರದಾನ ಮಾಡಿರುವುದು ಅಭಿಮಾನದ ಸಂಗತಿಯೂ ಹೌದು ಮಹಿಳಾ ಸಬಲೀಕರಣಕ್ಕೆ ಸಂಧ ಗೌರವವು ಹೌದು. ಆದಾಗ್ಯೂ ಇವರ ಸಮಾಜಮುಖಿ ಸಂಘಟನೆ, ಸಂಸ್ಕೃತಿ ಚಿಂತನೆ, ಅಮೂಲ್ಯ ಸಾಹಿತ್ಯ ಸೇವೆಗೆ ಪದ್ಮಶ್ರೀ ಗೌರವ, ನಾಡೋಜ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಒಲಿದು ಬರಲಿ. ಗೌರವ ಡಾಕ್ಟರೇಟ್ ಪದವಿಗಳು ಸೇರಿದಂತೆ ಇನ್ನೂ ಮುಂತಾದ ಗೌರವ ಪ್ರಶಸ್ತಿ – ಪುರಸ್ಕಾರಗಳು ಇವರ ಅವಿಸ್ಮರಣೀಯ ನಾಡ ಸೇವೆಗೆ ಭೂಷಣಪ್ರಾಯವಾಗಲಿ ಎಂದು ಶುಭ ಹಾರೈಸುವೆನು. ಡಾ ಹೇಮಾ ಪಟ್ಟಣ ಶೆಟ್ಟಿಯವರ ಸಾಹಿತ್ಯ ಕೃಷಿ, ಸಮಾಜ ಸೇವೆ, ಸಂಸ್ಕೃತಿ ಸಂಘಟನೆಗಳ ಅಮೋಘ ಸೇವೆ

“ಡಾ.ಹೇಮಾ ಪಟ್ಟಣಶೆಟ್ಟಿಯವರಿಗೆ ಒಲಿದು ಬಂದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ” ಸುಭಾಷ್ ಹೇಮಣ್ಣಾ ಚವ್ಹಾಣ Read Post »

You cannot copy content of this page

Scroll to Top