ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ”

ಕಾವ್ಯ ಸಂಗಾತಿ ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ” ಸುರಿದಿದೆ ಸೋನೆಯುಮುತ್ತುಗಳಂದದಿಮುಂಗಾರಿನ ಮಳೆಯುಇಳಿಯುತ ಬಳುಕಿಹಾಲ್ನೊರೆಯಂದದಿಇಳೆಯೊಡಲಿಗೆ  ಧಾರೆಯು… ಬೀಸಿದೆ ಮೆಲ್ಲನೆಸುಳಿಗಾಳಿಯು ಸುತ್ತಲೂತೂಗಿವೆ  ಬೆಳೆಗಳುತಲೆ  ಎತ್ತುತಲಿಹಸಿರಿನ ಶಾಲನುಹೊದೆದಿದೆ  ಕಾನುಬೆಚ್ಚಗೆ ನಿದ್ರೆಯ ಮಾಡುವೊಲು… ಸುಂದರ  ಸಂಜೆಯಜಿಟಿ  ಜಿಟಿ  ಮಳೆಯಲಿಸಾಗುವಾ ಜೊತೆಯಲಿದೂರದ ನಮ್ಮೊಲವಿನ ಮನೆಗೆ… ಹಮೀದಾಬೇಗಂ ದೇಸಾಯಿ

ಹಮೀದಾಬೇಗಂ ದೇಸಾಯಿ “ಮಳೆಯಲಿ,ಜೊತೆಯಲಿ” Read Post »

ಕಾವ್ಯಯಾನ

ಡಾ.ಭಾರತಿ ಅಶೋಕ್‌ ಅವರ ಕವಿತೆ “ಮದ್ದಾಗಬಹುದಿತ್ತು”

ಕಾವ್ಯ ಸಂಗಾತಿ ಡಾ.ಭಾರತಿ ಅಶೋಕ್‌ “ಮದ್ದಾಗಬಹುದಿತ್ತು” ಈ ಹೊತ್ತಿಗುನಿನಗು ಹೇಳದಮಾತೊಂದು ಎದೆಯಲ್ಲೇಉಳಿದು ಮುಳ್ಳಾಗಿ ಚುಚ್ಚು ತ್ತಿದೆ ಆಮಾತು ಏನೆಂದು ಕೇಳುವಸಹನೆ ಹೋಗಲಿ ಅಲ್ಲೇ ಉಳಿದು ಚುಚ್ಚಿದಗಾಯಕ್ಕಾದರೂ ಮದ್ದಾಗಬಹುದಿತ್ತು ಅದೆಲ್ಲಾ ಬಿಡುನಾನು ಹೇಳದೇ ಉಳಿದ ಮಾತೊಂದು ನನ್ನಲ್ಲೇ ಉಳಿದುಗಾಯವಾಗಿ ಈಗ ಬದುಕನ್ನೇಬಲಿ ಕೇಳುತ್ತಿದೆಎನ್ನುವ ಸತ್ಯದ ಅರಿವು ನಿನಗಿಲ್ಲ ನನಗೋಸತ್ಯ ಅರುಹಿ ಗಾಯ ವಾಸಿ ಮಾಡಿಕೊಂಡು ಬದುಕನ್ನುಬದುಕಿಸಿಬಿಡುವ ತಹತಹಿಕೆ ಈಗಬದುಕಿನ ಬದಲಾಗಿನೀನೇ ಕೇಳಲಿ, ತಿಳಿಯಲಿ ಅರಿಯಲಿ ಎನ್ನುವ ಅಹಂನ್ನುಬಲಿ ಕೊಡವೆ. ಆ ಮಾತನ್ನು ನಿನ್ನಲ್ಲಿ ಹೇಳಿ ಬದುಕಿನೊಟ್ಟಿಗೆನಾನೂ ಗೆದ್ದುಬಿಡುವೆ ಡಾ.ಭಾರತಿ ಅಶೋಕ್

ಡಾ.ಭಾರತಿ ಅಶೋಕ್‌ ಅವರ ಕವಿತೆ “ಮದ್ದಾಗಬಹುದಿತ್ತು” Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಕಂಡ ಕನಸುಗಳು ನನಸಾಗಬೇಕು ಎಂದೇನೂ ಇಲ್ಲಬಯಸಿದುದೆಲ್ಲಾ ಸಿಕ್ಕು ಬಿಡಬೇಕು ಎಂದೇನೂ ಇಲ್ಲ ಅವ ಬಂದಾಗ ನಕ್ಕು ಹೋಗುವಾಗ ಅಳುವ ಕಾಲ ಕಳೆದಿದೆಸಮಯ ಎಂದಿಗೂ ನನ್ನ ಪರವಿರಬೇಕು ಎಂದೇನೂ ಇಲ್ಲ ಮೌನಕ್ಕೆ ಅಗಾಧವಾದ ಶಕ್ತಿಯಿದೆಯೆಂದು ನನಗೆ ತಿಳಿದಿದೆಮನದ ಭಾವಗಳ ಮಾತಲ್ಲೇ ಹೇಳಬೇಕು ಎಂದೇನೂ ಇಲ್ಲ ಮಾತಾಡಿದ ಮಾತು ಮರೆತಿಲ್ಲ ಮನದ ತುಂಬಾ ತುಂಬಿದೆರೂಪು ಕಣ್ಣಲ್ಲಿದೆ ಕಣ್ಣೆದುರೇ ಇರಬೇಕು ಎಂದೇನೂ ಇಲ್ಲ ಬದುಕನ್ನು ಬಂದಂತೆ ಸ್ವೀಕರಿಸುತ್ತಾ ಬಂದಿದ್ದಾಳೆ ಅರುಣಾಎಲ್ಲಾ ಕಥೆಗಳು ಸುಖಾಂತ್ಯವಾಗಬೇಕು ಎಂದೇನೂ ಇಲ್ಲ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ ಗಜಲ್ ಮಳೆಯ ಹನಿಯೊಂದು ಮುತ್ತಿಕ್ಕಿತ್ತು ಧರೆಗೆಕಾನನದ ಹೂವೊಂದು ಅರಳಿತ್ತು ಕೊನೆಗೆ ಪ್ರಕೃತಿ ಸೊಬಗ ಸವಿಯಲು ಕಾದು ನಿಂತಿಹೆಹರ್ಷದಿ ನವಿಲೊಂದು ನರ್ತಿಸಿತ್ತು ಮಳೆಗೆ ಅಲ್ಲೊಂದು ಕುಹೂ ಗಾನ ಮೈಮರೆಸಿತ್ತು ಕ್ಷಣನಿನ್ನೊಲವಿನ ಓಲೆಯೊಂದು ತಲುಪಿತ್ತು ನನಗೆ ಮೇಘ ಸಂದೇಶದೊಳು ರವಾನಿಸುವ ತವಕಪ್ರೇಮದ ಬಾಣವೊಂದು ಚುಚ್ಚುತ್ತಿತ್ತು ಎದೆಗೆ ಒಲವಿನ ಜಾಲದೊಳು ಸಿಲುಕಿಹಳು ರೇಖೂಮಳೆಬಿಲ್ಲ ಬಣ್ಣವೊಂದು ಸಿಂಗರಿಸಿತ್ತು ಮುಡಿಗೆ ರೇಖಾಕ್ಷರ 

ಡಾ.ರೇಖಾ ಉದಯ ಅವರ ಗಜಲ್ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಹೈದರಾಬಾದ ಕರ್ನಾಟಕ ವಿಮೋಚನಾ ಸಂಘಟನೆ   ರಜಾಕಾರರ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಹೈದರಾಬಾದ ಕರ್ನಾಟಕ ಭಾಗದ ಜನರು ತಮ್ಮ ಜೀವ ಮತ್ತು ಮಾನವನ್ನು ಉಳಿಸಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇಂಥ ಸಂದರ್ಭದಲ್ಲಿ *ಹೈದರಾಬಾದ ಕರ್ನಾಟಕ ವಿಮೋಚನಾ* ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಗಡಿ ಶಿಬಿರಗಳನ್ನು ಸ್ಥಾಪಿಸಲಾಯಿತು. ಈ ಶಿಬಿರಗಳು ಕೇವಲ ಆಶ್ರಯ ಕೇಂದ್ರಗಳಾಗಿರದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ತರಬೇತಿ, ಸಂಘಟನೆ ಮತ್ತು ಜನಜಾಗೃತಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದವು. ಬೀದರ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆದ ಈ ಗಡಿ ಶಿಬಿರಗಳಲ್ಲಿ ಆರ. ವಿ. ಬಿಡಪ್ಪ, ಭೀಮಣ್ಣ ಕಂಡ್ರೆ, ಕಿಸಾನ್ ರಾವ ಚಿಡುಗುಪ್ಕರ, ಪ್ರಭುರಾವ ಕಂಬಳಿವಾಲೆ, ಸಂಗ್ರಾಮಪ್ಪ ಶಟಗಾರ ಮೊದಲಾದ ಧೀಮಂತ ನಾಯಕರು ಪ್ರಮುಖ ಪಾತ್ರ ವಹಿಸಿದರು. ಅವರ ದೇಶಭಕ್ತಿ, ತ್ಯಾಗ ಮತ್ತು ಸಂಘಟನಾ ಸಾಮರ್ಥ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿತು. ಈ ನಾಯಕರಿಗೆ  ಜಯದೇವಿ ತಾಯಿಯವರು ಪ್ರೇರಣೆಯಾಗಿದ್ದರು. ಹೈದರಾಬಾದ ವಿಮೋಚನ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮುಂದಾದರು. ಗಡಿ ಶಿಬಿರಗಳಲ್ಲಿ ನಡೆಯುತ್ತಿದ್ದ ಸಭೆಗಳು, ತರಬೇತಿಗಳು ಮತ್ತು ಸ್ವಾತಂತ್ರ್ಯದ ಸಂದೇಶಗಳು ಅವರಲ್ಲಿ ದೇಶಪ್ರೇಮದ ಕಿಚ್ಚನ್ನು ಇನ್ನಷ್ಟು ಪ್ರಜ್ವಲಿಸಿದವು. ಹೋರಾಟವು ಪುರುಷರಿಗೆ ಮಾತ್ರ ಸೀಮಿತವಲ್ಲ, ಮಹಿಳೆಯರೂ ಸಮಾನವಾಗಿ ರಾಷ್ಟ್ರಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂಬ ದೃಢ ಸಂಕಲ್ಪ ಅವರಲ್ಲಿ ಮೂಡಿತು. ಹೀಗಾಗಿ, ರಜಾಕಾರರ ದೌರ್ಜನ್ಯದಿಂದ ಉದ್ಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಗಡಿ ಶಿಬಿರಗಳ ಸ್ಥಾಪನೆಗೆ ಕಾರಣವಾದರೆ, ಶಿಬಿರಗಳಲ್ಲಿ ನಡೆದ ಸಂಘಟನೆ ಮತ್ತು ನಾಯಕರ ಮಾರ್ಗದರ್ಶನವೇ ಜಯದೇವಿ ತಾಯಿಯವರನ್ನು ಹೈದರಾಬಾದ ವಿಮೋಚನ ಹೋರಾಟದ ಸಕ್ರಿಯ ಹೋರಾಟಗಾರ್ತಿಯನ್ನಾಗಿ ರೂಪಿಸಿತು. ಕರ್ನಾಟಕದ ಏಕೀಕರಣಕ್ಕೆ ನಾಂದಿ ಹಾಡಿತು. ವಿ.ಎನ. ಪಾಟೀಲ, ಸಿಧ್ಧಲಿಂಗಪ್ಪ ಕಾಕನಾಳೆ, ಮಹದೇವಪ್ಪ ಮೀಸೆ, ಮೊದಲಾದವರು ಸೇರಿ ಜಿಲ್ಲಾಮಟ್ಟದಲ್ಲಿ *ಕರ್ನಾಟಕ ಏಕೀಕರಣ ಸಮಿತಿಯ ಘಟಕವನ್ನು* ಹುಟ್ಟುಹಾಕಿದರು ಮುಂದೆ ಜಿಲ್ಲಾ ಸಮಿತಿಯು ತಾಲೂಕ ಸಮಿತಿಯ ರಚನೆಯ ಪ್ರಕ್ರಿಯೆ ಯಾಗಿ ಪ್ರಾರಂಭಿಸಿತು .ಜಯದೇವಿ ತಾಯಿಯವರು ಈ ಸಮಿತಿಯ ಕಾರ್ಯಗಳನ್ನು ನಿರಂತರವಾಗಿ ಭಾಗವಹಿಸುತ್ತಿದ್ದರು. ಜಯದೇವಿ ತಾಯಿಯವರ ನೇತೃತ್ವದಲ್ಲಿ ಕರ್ನಾಟಕ ಏಕೀಕರಣ ಸಮಿತಿಯ ಸಭೆಯನ್ನು ಕರೆಯಲಾಯಿತು.*ಕನ್ನಡ ಮಕ್ಕಳು ಕನವರಿಸಿ ಕರೆದಾಗಇನ್ನಾವ ನೆವ ಹೇಳದೆ ನನ ಮನತನ್ನಿಂದ ತಾನೇ ಎಳದಿತ್ತ* ಎಂದೆನ್ನುತ ಜಯದೇವಿತಾಯಿ ಅವರುಕನ್ನಡದ ಮಕ್ಕಳು, ಕನ್ನಡ ನಾಡು ಹಾಗೂ ಕನ್ನಡದ ಹಿತಕ್ಕಾಗಿ ಹೋರಾಟಕ್ಕೆ ಕರೆ ನೀಡಿದಾಗ, ಯಾವುದೇ ಕಾರಣ ಅಥವಾ ನೆಪ ಹೇಳದೆ ಅವರ ಮನಸ್ಸು ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗವಹಿಸಲು ಮುಂದಾರು ಎನ್ನುತ್ತಾರೆ. ಇದು ಕನ್ನಡದ ಮೇಲಿನ ಅವರ ಅಪಾರ ಅಭಿಮಾನ, ನಾಡಿನ ಬಗ್ಗೆ ಇರುವ ಜವಾಬ್ದಾರಿ ಮತ್ತು  ಮನೋಭಾವವನ್ನು ಪ್ರತಿಬಿಂಬಿಸುತ್ತದೆ.ಜಯದೇವಿ ತಾಯಿಯವರು ಕನ್ನಡ ಭಾಷೆ, ಗಡಿಭಾಗ ಹಾಗೂ ಕನ್ನಡಿಗರ ಹಕ್ಕುಗಳಿಗಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೋರಾಟದ ಸಮಯದಲ್ಲಿ ಕನ್ನಡಿಗರ ನೋವು, ಅವರ ಆಶಯಗಳು ಮತ್ತು ಏಕತೆಯ ಕರೆಗೆ ಸ್ಪಂದಿಸಿದ ಅವರು ದೇಶಪ್ರೇಮ, ಕನ್ನಡಾಭಿಮಾನ ಮತ್ತು ನಿಸ್ವಾರ್ಥ ಸೇವೆಯ ಸಂಕೇತವಾಗಿವೆ.  ಕನ್ನಡಿಗರ ಕರೆಯ ಮುಂದೆ ಯಾವುದೇ ವೈಯಕ್ತಿಕ ನೆಪಕ್ಕೂ ಅವಕಾಶ ನೀಡದೆ, ಕನ್ನಡ ನಾಡಿನ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಜಯದೇವಿ ತಾಯಿಯವರ ಹೋರಾಟದ ಮನೋಭಾವವನ್ನು  ವ್ಯಕ್ತಪಡಿಸುತ್ತವೆ. ಸ್ವಾತಂತ್ರ್ಯಾನಂತರವೂ ಹೈದರಾಬಾದ ಸಂಸ್ಥಾನದ ಆಡಳಿತದ ಅವಶೇಷಗಳು ಅನೇಕ ಪ್ರದೇಶಗಳ ಜನರ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದವು. ಅದರಲ್ಲೂ ಕನ್ನಡ ಭಾಷಿಕರೇ ಹೆಚ್ಚಾಗಿ ವಾಸಿಸುತ್ತಿದ್ದ ಬೀದರ ಜಿಲ್ಲೆಯ ಭಾಲ್ಕಿ ಮತ್ತು ಉದಗೀರ ತಾಲೂಕಿನ ಜೆವರಗಿ ಪ್ರದೇಶಗಳ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸಿದರು.  ಕನ್ನಡ ಪ್ರದೇಶದ ಜನರ ಮೇಲೆ ಸೇಡು ತೀರಿಸುವ ಕ್ರಮವೆಂಬಂತೆ, ಈ ಭಾಗದ ಜಾಗೀರು ಜಮೀನುಗಳ ಮೇಲೆ ಒಂದಕ್ಕೆ ಮೂರು ಪಟ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಯಿತು. ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರೈತರಿಗೆ ಈ ಭಾರೀ ತೆರಿಗೆ ಜೀವನಾಡಿಯನ್ನೇ ಕಸಿದುಕೊಳ್ಳುವಂತಾಯಿತು. ಸಾಲದ ಹೊರೆಯಲ್ಲಿ ಸಿಲುಕಿದ ರೈತರು ತಮ್ಮ ಕುಟುಂಬಗಳನ್ನು ಸಾಕುವುದು, ಕೃಷಿ ನಡೆಸುವುದು ಕೂಡ ಕಷ್ಟಕರವಾಯಿತು.ಈ ಸಂದರ್ಭದಲ್ಲಿ ಜನರ ಆಶಾಕಿರಣವಾಗಿ ಮುಂದೆ ಬಂದವರು ಜಯದೇವಿ ತಾಯಿ. ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಸಮಾಜಸೇವಕಿಯಾಗಿ ಮತ್ತು ಜನಪರ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅವರ ಮೇಲೆ ಜನರಿಗೆ ಅಪಾರ ವಿಶ್ವಾಸವಿತ್ತು. ತಮ್ಮ ಸಂಕಷ್ಟವನ್ನು ಪರಿಹರಿಸಬಲ್ಲ ನಾಯಕತ್ವ ಅವರಲ್ಲಿದೆ ಎಂಬ ನಂಬಿಕೆಯಿಂದ ಭಾಲ್ಕಿ ಮತ್ತು ಉದಗೀರ ಭಾಗದ ರೈತರು ಜಯದೇವಿ ತಾಯಿಯವರನ್ನು ಸಂಪರ್ಕಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.ಜನರ ನೋವನ್ನು ತಮ್ಮದೇ ನೋವೆಂದು ಭಾವಿಸಿದ ಜಯದೇವಿ ತಾಯಿ ಸಮಸ್ಯೆಯನ್ನು  ವೈಯಕ್ತಿಕ ಮನವಿಯಾಗಿ ಪರಿಗಣಿಸಿ…. ಮೊದಲು ದೊಡ್ಡ ಸಾರ್ವಜನಿಕ ಸಭೆಯನ್ನು ಕರೆದು ರೈತರ ಸವಾಲುಗಳನ್ನು ಆಲಿಸಿದರು. ತೆರಿಗೆಯಿಂದ ಉಂಟಾದ ಅನ್ಯಾಯ, ರೈತರ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು. ನಂತರ ಜನರು ಒಮ್ಮತವನ್ನು ಪಡೆದು ಸರ್ಕಾರಕ್ಕೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡರು. ಜನರಿಂದ ಸಹಿಗಳನ್ನು ಸಂಗ್ರಹಿಸಿ, ತೆರಿಗೆ ಕಡಿತಕ್ಕೆ ಸಂಬಂಧಿಸಿದ ಮನವಿಯನ್ನು ಸಿದ್ಧಪಡಿಸಿ ಸರ್ಕಾರದ ಮುಂದೆ ಮಂಡಿಸಲು ಮುಂದಾದರು.ಆ ಸಂದರ್ಭದಲ್ಲಿ ಹೈದರಾಬಾದ ರಾಜ್ಯದ *ಮುಖ್ಯಮಂತ್ರಿಯಾಗಿದ್ದ ಶ್ರೀ ಎಂ. ಕೆ. ವೆಲ್ಲೋಡಿ* ಅವರನ್ನು ಜಯದೇವಿ ತಾಯಿ ಭೇಟಿ ಮಾಡಿದರು. ರೈತರ ಪರವಾಗಿ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿ, ಹೆಚ್ಚುವರಿ ತೆರಿಗೆ ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ವಿವರಿಸಿದರು. ಕನ್ನಡ ಪ್ರದೇಶದ ರೈತರು ಎದುರಿಸುತ್ತಿದ್ದ ಸಂಕಷ್ಟವನ್ನು ಅಂಕಿ-ಅಂಶಗಳೊಂದಿಗೆ ಸರ್ಕಾರದ ಗಮನಕ್ಕೆ ತಂದರು. ಅವರ ಪ್ರಾಮಾಣಿಕತೆ, ಧೈರ್ಯ ಮತ್ತು ಜನಪರ ನಿಲುವಿನಿಂದ ಪ್ರಭಾವಿತರಾದ ವೆಲ್ಲೋಡಿ ಅವರು ತೆರಿಗೆಯನ್ನು ಶೇಕಡಾ 25ರಷ್ಟು ಕಡಿಮೆ ಮಾಡುವ ಭರವಸೆಯನ್ನು ನೀಡಿದರು. ಈ ಆಶ್ವಾಸನೆ ರೈತರಿಗೆ ದೊಡ್ಡ ನಿರಾಳತೆಯನ್ನು ತಂದಿತು. ಜಯದೇವಿ ತಾಯಿಯವರ ಪ್ರಯತ್ನದಿಂದ ಸಾವಿರಾರು ರೈತ ಕುಟುಂಬಗಳಿಗೆ ಆರ್ಥಿಕ ಹೊರೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಹರಕರಬಿ ಮೈಮ್ಯಾಲ |ಗಾಳಿ ಬಿಸಿಲು ಮಳಿಅರ ಹೊಟ್ಟೀಲಿ ಉಂಡು ದುಡಿತಾನ- ನೆಲದವ್ವ ಮರಮರ ಮರಗ್ಯಾಳ ಮನದಾಗ||  ರೈತನು ಗಾಳಿ, ಬಿಸಿಲು, ಮಳೆ ಎಂಬ ಪ್ರಕೃತಿಯ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು, ಅರ್ಧ ಹೊಟ್ಟೆ ಊಟ ಮಾಡಿಕೊಂಡೇ ಹೊಲದಲ್ಲಿ ದುಡಿಯುವ ಸ್ಥಿತಿಯನ್ನು ಬಿಂಬಿಸಿದ್ದಾರೆ.. ರೈತನು ತನ್ನ ಬದುಕನ್ನೇ ಭೂಮಿಗೆ ಅರ್ಪಿಸಿದರೂ, ಬೆಳೆ ಹಾಳಾದರೂ, ಸಾಲದ ಹೊರೆ, ಬೆಲೆಯ ಕೊರತೆ ಮುಂತಾದ ಸಮಸ್ಯೆಗಳಿದ್ದರೂ ದುಡಿಯುತ್ತಲೇ ಇರುತ್ತಾನೆ. ಅವನ  ನಿರಂತರವಾದ ಸಮಸ್ಯೆಗಳನ್ನು ನೋಡುತ್ತಿದ್ದ ಭೂತಾಯಿಯೇ ಮರ ಮರ ಮರುವುಳೆಂದು ವರ್ಣಿಸುತ್ತಾರೆ. ಕೆಸರಾಯ್ತು ಕೈಯ|ಬಾಯಿಯೂ ಕೆಸರಾಯ್ತು ಮೊಸರು ಕಡಿತ ಸಿಗಲಿಲ್ಲ -ರೈತಣ್ಣಉಸ್ಸೆಂದಾನ ತನ್ನ ಬಾಳೇಕ|| ರೈತನ ಶ್ರಮ, ತ್ಯಾಗ, ನೋವು ಮತ್ತು ಸಂಕಷ್ಟಮಯ ಜೀವನವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಿತ ಹೇಳತಾರೆ. ಹಾಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಮೇಲೆ ಹೇರಿದ ಕೇರಿಗೆಯನ್ನು ಆದಷ್ಟು ಕಡಿಮೆ ಮಾಡಿಕೊಟ್ಟು ಹಿಂದಿರುಗುತ್ತಾರೆ. ಜಯದೇವಿ ತಾಯಿಯವರ ಈ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವದ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಯಾವುದೇ ಹಿಂಸಾತ್ಮಕ ಮಾರ್ಗವನ್ನು ಅನುಸರಿಸಲಿಲ್ಲ.  ಮನವಿ, ಸಾರ್ವಜನಿಕ ಸಭೆಗಳು, ಜನಜಾಗೃತಿ ಮತ್ತು ಸಂವಾದದ ಮೂಲಕವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.ಸತ್ಯ, ಅಹಿಂಸೆ ಮತ್ತು ನ್ಯಾಯ ಎಂಬ ಗಾಂಧೀಜಿ ಬೋಧಿಸಿದ ಮೌಲ್ಯಗಳನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸರ್ಕಾರದ ವಿರುದ್ಧ ದ್ವೇಷ ಅಥವಾ ಪ್ರತೀಕಾರದ ಮನೋಭಾವವಿಲ್ಲದೆ, ನ್ಯಾಯಯುತ ಬೇಡಿಕೆಗಳನ್ನು ಶಾಂತಿಯುತವಾಗಿ ಮಂಡಿಸಿ ಜನರ ಹಕ್ಕುಗಳನ್ನು ಕಾಪಾಡಿದರು.  ಜಯದೇವಿ ತಾಯಿಯವರು  ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಹೋರಾಡಿದರೆ.. ಸ್ವಾತಂತ್ರ್ಯಾನಂತರವೂ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಜನನಾಯಕಿ ಆಗಿದ್ದರು, ಎಂಬುವದ ಸಾಬೀತುಪಡಿಸುತ್ತದೆ. ರೈತರ ಪರವಾಗಿ ನಿಂತು, ಅವರ ಸಮಸ್ಯೆಯನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಪರಿಹಾರ ದೊರಕಿಸಿಕೊಟ್ಟ ಅವರ ನಾಯಕತ್ವ, ಸಾಮಾಜಿಕ ಬದ್ಧತೆ ಮತ್ತು ಅಹಿಂಸಾ ಮಾರ್ಗದ ಮೇಲಿನ ನಂಬಿಕೆ ಇಂದಿಗೂ ಜನಸೇವೆಗೆ ಆದರ್ಶವಾಗಿದೆ. ಸವಿತಾ ದೇಶಮುಖ

Read Post »

ಜೀವನ

“ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಕೆ.ಎಂ. ಕಾವ್ಯ ಪ್ರಸಾದ್

ಸಂಬಂಧಗಳ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಸಂಬಂಧಗಳನ್ನು ಕಟ್ಟುವುದು ಪ್ರೀತಿಯಿಂದ, ಆದರೆ ಅವನ್ನು ಉಳಿಸುವುದು ನಂಬಿಕೆಯಿಂದ. ಪ್ರೀತಿ ಎಷ್ಟೇ ಆಳವಾಗಿದ್ದರೂ, ಒಂದು ಕ್ಷಣದ ಅನುಮಾನ ಅದರ ಬೇರುಗಳನ್ನು ಅಲ್ಲಾಡಿಸಬಲ್ಲದು. ಕೆಲವೊಮ್ಮೆ ತಪ್ಪು ನಡೆದಿರಲೂಬಹುದು, ಕೆಲವೊಮ್ಮೆ ತಪ್ಪೇ ಇರದೇ ಇರಬಹುದು. ಆದರೆ ಒಮ್ಮೆ ಮನಸ್ಸಿನಲ್ಲಿ ಅನುಮಾನದ ಬೀಜ ಬಿದ್ದರೆ, ಅದು ನಿಧಾನವಾಗಿ ಸಂಬಂಧದ ಪ್ರತಿಯೊಂದು ಕೊಂಬೆಯನ್ನೂ ಒಣಗಿಸಲು ಆರಂಭಿಸುತ್ತದೆ. ಜೀವಂತವಾಗಿರುವ ಮನುಷ್ಯನನ್ನು ಸತ್ತವನಂತೆ ಮಾಡುವ ಶಕ್ತಿ ಕತ್ತಿಗೆ ಇಲ್ಲ; ಅನುಮಾನಕ್ಕೆ ಇದೆ. ದೇಹ ಉಸಿರಾಡುತ್ತಿರಬಹುದು, ಆದರೆ ಮನಸ್ಸು ಪ್ರತಿದಿನ ಸಾಯುತ್ತಿರುತ್ತದೆ. ಒಮ್ಮೆ ಕಳೆದುಹೋದ ನಂಬಿಕೆಯನ್ನು ಮರಳಿ ಕಟ್ಟುವುದು ಮನೆ ಕಟ್ಟುವುದಕ್ಕಿಂತ ಕಷ್ಟ. ಒಡೆದ ಗಾಜನ್ನು ಅಂಟಿಸಬಹುದು, ಆದರೆ ಅದರ ಬಿರುಕು ಎಂದಿಗೂ ಕಾಣದಂತೆ ಮಾಡಲಾಗುವುದಿಲ್ಲ. ಅದೇ ರೀತಿ ಒಡೆದ ವಿಶ್ವಾಸ ಮತ್ತೆ ಹುಟ್ಟಿದರೂ, ಅದರ ಗಾಯದ ಗುರುತು ಮನಸ್ಸಿನಲ್ಲಿ ಉಳಿಯುತ್ತದೆ. ಪ್ರತಿಯೊಬ್ಬ ಮನುಷ್ಯನೂ ತಪ್ಪು ಮಾಡಬಹುದು. ತಪ್ಪು ಮಾಡದವರು ಯಾರೂ ಇಲ್ಲ. ಆದರೆ ಒಮ್ಮೆ ನಡೆದ ತಪ್ಪನ್ನು ಜೀವಮಾನವಿಡೀ ಹಿಡಿದುಕೊಂಡು ಪ್ರತಿದಿನ ಅವಮಾನಿಸುವುದು, ಮಾತಿನ ಮೂಲಕ ಕಿರುಕುಳ ಕೊಡುವುದು, ಕುಟುಂಬದವರನ್ನೂ ಕೀಳಾಗಿ ಕಾಣುವುದು ನ್ಯಾಯವಲ್ಲ. ಕ್ಷಮೆ ಎನ್ನುವುದು ತಪ್ಪನ್ನು ಮರೆತಂತೆ ಅಲ್ಲ; ಮತ್ತೊಬ್ಬರ ಮಾನವೀಯತೆಯನ್ನು ಗೌರವಿಸಿದಂತೆ. ಮಾತುಗಳಿಗೆ ಗಾಯಗೊಳಿಸುವ ಶಕ್ತಿ ಇದೆ. ಕತ್ತಿಯಿಂದ ಆದ ಗಾಯಕ್ಕೆ ಔಷಧ ಸಿಗುತ್ತದೆ. ಆದರೆ ಮಾತಿನಿಂದ ಆದ ಗಾಯಕ್ಕೆ ಔಷಧವೇ ಇರುವುದಿಲ್ಲ. ಕೆಲವರು ಒಂದು ದಿನ ಅತ್ತು ಮರೆತುಬಿಡುತ್ತಾರೆ. ಆದರೆ ಇನ್ನೂ ಕೆಲವರು ಪ್ರತಿದಿನ ನಗುವ ಮುಖವಾಡ ಧರಿಸಿ ಬದುಕುತ್ತಾರೆ. ಹೊರಗೆ ನಗುವರು, ಒಳಗೆ ಮಾತ್ರ ಸಾವಿರ ಬಾರಿ ಮುರಿಯುತ್ತಾರೆ. ಆ ನಗುವಿನ ಹಿಂದೆ ಎಷ್ಟು ಕಣ್ಣೀರು, ಎಷ್ಟು ಮೌನ, ಎಷ್ಟು ನೋವು ಅಡಗಿದೆ ಎಂಬುದು ಯಾರಿಗೂ ಕಾಣುವುದಿಲ್ಲ. ಸಂಸಾರವೆಂದರೆ ಇಬ್ಬರು ಮನುಷ್ಯರ ಒಪ್ಪಂದವಲ್ಲ; ಅದು ಎರಡು ಹೃದಯಗಳ ಜವಾಬ್ದಾರಿ. ಅಲ್ಲಿ ಗಂಡನಿಗೂ ಗೌರವ ಬೇಕು, ಹೆಂಡತಿಗೂ ಗೌರವ ಬೇಕು. ಇಬ್ಬರಿಗೂ ತಮ್ಮ ಭಾವನೆ ಹೇಳುವ ಹಕ್ಕು ಇದೆ. ಇಬ್ಬರಿಗೂ ಸ್ವಾತಂತ್ರ್ಯ ಇದೆ. ಯಾರನ್ನೂ ಸದಾ ಅನುಮಾನದಿಂದ ನೋಡುತ್ತಾ, ಅವರ ವ್ಯಕ್ತಿತ್ವವನ್ನು ಕುಗ್ಗಿಸುತ್ತಾ ಬದುಕಿಸುವುದು ಸಂಬಂಧವಲ್ಲ; ಅದು ಮನಸ್ಸಿನ ಬಂಧನ. ಒಮ್ಮೆ ಕಳೆದುಕೊಂಡ ನಂಬಿಕೆ ಮರಳಿ ಬರಬಹುದು. ಆದರೆ ಅದಕ್ಕೆ ಸಮಯ, ಪ್ರಾಮಾಣಿಕತೆ, ಪರಸ್ಪರ ಗೌರವ ಮತ್ತು ನಿಜವಾದ ಬದಲಾವಣೆ ಬೇಕು. ಪ್ರತಿದಿನ ಹಳೆಯ ಗಾಯವನ್ನು ಕೆದಕುತ್ತಾ ಹೋದರೆ ಅದು ಎಂದಿಗೂ ಮಾಯವಾಗುವುದಿಲ್ಲ. ಗಾಯ ಗುಣವಾಗಬೇಕಾದರೆ ಅದನ್ನು ಮರುಮರು ಹರಿಯಬಿಡಬಾರದು. ಮಕ್ಕಳು ಮನೆಯ ಗೋಡೆಗಳನ್ನು ಮಾತ್ರ ನೋಡುವುದಿಲ್ಲ; ತಂದೆ-ತಾಯಿಯ ಮಾತುಗಳನ್ನು, ವರ್ತನೆಯನ್ನು, ಪರಸ್ಪರ ಗೌರವವನ್ನು ನೋಡಿ ಬದುಕು ಕಲಿಯುತ್ತಾರೆ. ಪ್ರೀತಿಗಿಂತ ಹೆಚ್ಚು ಅವರಿಗೆ ಬೇಕಾಗಿರುವುದು ಸುರಕ್ಷಿತವಾದ ವಾತಾವರಣ. ಪ್ರತಿದಿನ ಜಗಳ, ಅನುಮಾನ, ಅವಮಾನ ಇರುವ ಮನೆಯಲ್ಲಿ ಬೆಳೆದ ಮನಸ್ಸು ನಿಧಾನವಾಗಿ ತನ್ನ ನಗುವನ್ನೇ ಕಳೆದುಕೊಳ್ಳುತ್ತದೆ. ಕೆಲವು ನೋವುಗಳು ಕಾಲದೊಂದಿಗೆ ಮಾಸುತ್ತವೆ. ಆದರೆ ಕೆಲವು ನೋವುಗಳು ಪ್ರತಿದಿನ ಜೀವಂತವಾಗಿಯೇ ಉಳಿಯುತ್ತವೆ. ಅವು ಕಣ್ಣಿಗೆ ಕಾಣುವುದಿಲ್ಲ, ಆದರೆ ಹೃದಯವನ್ನು ನಿಧಾನವಾಗಿ ಕರಗಿಸುತ್ತವೆ. ಅದಕ್ಕಾಗಿಯೇ ಸಂಬಂಧದಲ್ಲಿ ಗೆಲ್ಲುವುದು ಮುಖ್ಯವಲ್ಲ; ಒಬ್ಬರ ಮನಸ್ಸನ್ನು ಮತ್ತೊಬ್ಬರು ಕಾಪಾಡುವುದು ಮುಖ್ಯ. ಒಳ್ಳೆಯ ವ್ಯಕ್ತಿ ಎಂದರೆ ಎಂದಿಗೂ ತಪ್ಪು ಮಾಡದವನು ಅಲ್ಲ. ತನ್ನ ತಪ್ಪನ್ನು ಅರಿತು ತಿದ್ದಿಕೊಳ್ಳುವವನು, ಎದುರಾಳಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವವನು, ಕ್ಷಮೆ ಕೇಳಬೇಕಾದಲ್ಲಿ ಕೇಳುವವನು, ಕ್ಷಮಿಸಬೇಕಾದಲ್ಲಿ ಕ್ಷಮಿಸುವವನು. ಜೀವನದ ಕೊನೆಯಲ್ಲಿ ಜನರು ನೆನಪಿಡುವುದು ಯಾರು ಗೆದ್ದರು ಎಂಬುದಲ್ಲ. ಯಾರು ಪ್ರೀತಿಸಿದರು, ಯಾರು ಕಾಪಾಡಿದರು, ಯಾರು ಕಣ್ಣೀರನ್ನು ಒರೆಸಿದರು ಎಂಬುದನ್ನು. ನಂಬಿಕೆ ಇದ್ದರೆ ಸಂಬಂಧಗಳು ಅರಳುತ್ತವೆ.ಗೌರವ ಇದ್ದರೆ ಸಂಸಾರ ಉಳಿಯುತ್ತದೆ.ಕ್ಷಮೆ ಇದ್ದರೆ ಗಾಯಗಳು ಗುಣವಾಗುತ್ತವೆ.ಪ್ರೀತಿ ಇದ್ದರೆ ಜೀವನ ಸುಂದರವಾಗುತ್ತದೆ.*ಯಾಕೆಂದರೆ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಭಾವನೆಗಳಿವೆ, ತನ್ನ ಕನಸುಗಳಿವೆ, ತನ್ನ ಗೌರವವಿದೆ, ತನ್ನ ಹಕ್ಕು ಮತ್ತು ಸ್ವಾತಂತ್ರ್ಯವಿದೆ. ಆ ಗೌರವವನ್ನು ಕಾಪಾಡಿದಾಗ ಮಾತ್ರ ಯಾವುದೇ ಸಂಬಂಧ ನಿಜವಾದ “ಸರಿಯಾದ ವ್ಯಕ್ತಿ”ಯ ಸಂಬಂಧವಾಗುತ್ತದೆ.* ಕೆ.ಎಂ. ಕಾವ್ಯ ಪ್ರಸಾದ್

“ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಕೆ.ಎಂ. ಕಾವ್ಯ ಪ್ರಸಾದ್ Read Post »

ಇತರೆ

“ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗೊರೂರು ಅನಂತರಾಜು

ಗ್ರಂಥಾಲಯ ಸಂಗಾತಿ ಗೊರೂರು ಅನಂತರಾಜು “ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗ್ರಂಥಾಲಯ ಪರಿಕಲ್ಪನೆ ರಾಜಕೇಂದ್ರಿತವಾಗಿತ್ತು ಅದನ್ನು ಮೊದಲು ಮುರಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್: ಡಾ. ಕುಶಾಲ್ ಬರಗೂರು ಗ್ರಂಥಾಲಯದ ಚಾರಿತ್ರಿಕ ಪರಿಕಲ್ಪನೆ ನಗರ ಕೇಂದ್ರಿತವಾದದ್ದು, ರಾಜ ಪ್ರಣೀತವಾದದ್ದಾಗಿತ್ತು. ಅದನ್ನು ಮೊದಲು ಮುರಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು, ಕನ್ನಡ ಪ್ರಾಧ್ಯಾಪಕರು ಡಾ. ಕುಶಾಲ್ ಬರಗೂರು ತಿಳಿಸಿದರು. ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ, ಹಾಸನ ಜಿಲ್ಲೆ  ವತಿಯಿಂದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವು ಡಾ.ಬಿ.ಡಿ.ಕುಮಾರ್, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬಾಗೇಶಪುರ ಗುಡ್ಡದಮನೆ ಇಲ್ಲಿ ಏರ್ಪಡಿಸಿ ಪ್ರಾಸ್ತವಿಕವಾಗಿ ಅವರು ಮಾತನಾಡುತ್ತಿದ್ದರು.  ನಗರದಲ್ಲಿ ಇದ್ದದ್ದನ್ನು ತಮ್ಮ ಮನೆಯಲ್ಲೆ ಗ್ರಂಥಾಲಯ ಮಾಡಿ, ಮನೆಯನ್ನೆ ಜ್ಞಾನಕೇಂದ್ರ ಮಾಡಿ, ರಾಜಗೃಹ ಎಂದು ಹೆಸರಿಟ್ಟ ಪ್ರಥಮ ಜ್ಞಾನಿ. ಆ ದಾರಿಯ ಹಾದಿ ಹಿಡಿದವರು ಡಾ. ಬಿ.ಡಿ.ಕುಮಾರ್  ತಮ್ಮ ಮನೆಯನ್ನು ಹಳ್ಳಿಗಾಡಿನಲ್ಲಿ ಮಾಡಿ ಅದನ್ನು ಸಾಹಿತ್ಯ ಚರ್ಚಾ ಕ್ಷೇತ್ರವನ್ನಾಗಿ ಮಾಡಿರುವರು. ಕ್ಷೇತ್ರಕಾರ್ಯ ಸಂಶೋಧಕರಾಗಿ ನಾನಾ ಪ್ರಾಚೀನ ಕೃತಿಗಳನ್ನು ಸಂಪಾದಿಸಿ ಸಂಗ್ರಹಿಸಿಟ್ಟಿದ್ದಾರೆ.  ಇದು ಕನ್ನಡ ಸಾಹಿತ್ಯ ಸಂಶೋಧಕರಿಗೆ ಆಧಾರ ಮಾಹಿತಿ ಕೇಂದ್ರವಾಗಿದೆ. ಅಂದು ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಪಾದಿಸಿದಂತೆ, ಹಲಸಂಗಿ ಗೆಳೆಯರು, ಜೀ.ಶಂ.ಪ, ಕ್ಯಾತನಹಳ್ಳಿ ರಾಮಣ್ಣ, ಪಿ.ಕೆ.ರಾಜಶೇಖರ್ ಮುಂತಾದವರು  ಜಾನಪದ ಕ್ಷೇತ್ರ ಕಾರ್ಯ ಮಾಡಿದಂತೆ   ಕುಮಾರ್ ತಮ್ಮ ಮನೆಯನ್ನು ಮಾಹಿತಿ ಕಣಜ ಮಾಡಿದ್ದಾರೆ. ಇದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಮಾದರಿ  ಪ್ರೇರಣಿಯೂ ಹೌದು.  ಇಲ್ಲಿ 18,000 ಪುಸ್ತಕ, ಪತ್ರಿಕೆ, ಸಂಚಿಕೆ, ಹಸ್ತಪ್ರತಿ ಇನ್ನಿತರೆ ಸಾಹಿತ್ಯ ಗ್ರಂಥಗಳಿವೆ ಎನ್ನುತ್ತಾರೆ.  ಇಂತಹ ಶೋಧನಾ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ.ಮಾನಸ ಮತ್ತು ಅವರ ಜೊತೆಗೂಡಿ  ಪ್ರಾಧಿಕಾರ ಸದಸ್ಯರು   ಮಾಡುತ್ತಿರುವರು.  ಈ ಕಾರ್ಯಕ್ರಮ ಈಗ  ರಾಜ್ಯ ಅಷ್ಟೇ ಅಲ್ಲ ಹೊರ ರಾಜ್ಯಗಳಲ್ಲೂ, ಪಾಶ್ಚಿಮಾತ್ಯ ರಾಷ್ಟ್ರಗಳ ಗಮನವನ್ನು  ಸೆಳೆದಿದೆ ಎಂದರು.ಡಾ.ಬಿ.ಡಿ.ಕುಮಾರ್ ಅವರು ಸಂಗ್ರಹಿಸಿ ಕಾಪಾಡಿಟ್ಟಿರುವ ತಾಳೆಗರಿ ಗ್ರಂಥ ರಾಮಾಯಣ ಕಟ್ಟುಗಳ ಕಟ್ಟು ಬಿಚ್ಚಿ  ಉದ್ಘಾಟನಾ ಭಾಷಣ  ಮಾಡಿದ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಅವರು ತಾವು ಕನ್ನಡ ಪುಸ್ತಕ ಪ್ರಾಧಿಕಾರದ 10ನೇ ಅಧ್ಯಕ್ಷರು. ಮೊದಲನೇ ಅಧ್ಯಕ್ಷರು   ಎಲ್.ಎನ್. ಶೇಷಗಿರಿರಾವ್ ಅವರು.  ಅಂದಿನಿಂದ ಪ್ರಾಧಿಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಪುಸ್ತಕ ಪ್ರಕಾಶಕರು, ಮುದ್ರಕರನ್ನುಪ್ರೋತ್ಸಾಹಿಸಲು ಪುಸ್ತಕ ಸೊಗಸು ಪ್ರಶಸ್ತಿ, ನಗದು ಬಹುಮಾನ ಯೋಜನೆ ಇದೆ.  ಪುಸ್ತಕ ಓದುಗರನ್ನು ಗುರುತಿಸಿ ಪ್ರೋತ್ಸಾಹಿಸಲು ವಲಯವಾರು    ನಾಲ್ಕು ಪ್ರಶಸ್ತಿಗಳನ್ನು 25000 ನಗದು ಬಹುಮಾನ ನೀಡಲಾಗುವುದು ಎಂದರು.  ಡಾ. ಬಿ ಡಿ. ಕುಮಾರ್ ಅವರ ಅಭಿನಂದನಾ ಗ್ರಂಥ ಅಕ್ಷರ ಕೃಷಿಕ ಪುಸ್ತಕದ ಸಂಪಾದಕರು ಹಾಗೂ ಕನ್ನಡ ಪ್ರಾಧ್ಯಾಪಕರು ಡಾ. ಹರೀಶ್ ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರಸೀಕೆರೆ ಕೃತಿ ಪರಿಚಯಿಸಿ ಮಾತನಾಡಿ ಕುಮಾರ್  ಅವರು ಅರಸೀಕೆರೆಯಲ್ಲಿ ಬಹು ಧೀರ್ಘಕಾಲ  ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿ, ಕಲಾವಿದರಾಗಿ ದೆಹಲಿಯಲ್ಲಿ ಜನಪದ ಕಾರ್ಯಕ್ರಮ ನೀಡಿ ಬಂದಿದ್ದಾರೆ. ಪ್ರಗತಿಪರ  ಕೃಷಿಕರಾಗಿ ಹಳ್ಳಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ,  ಇವರ ಜೀವನಶೈಲಿ ಇಂದಿನ ಸಮಾಜಕ್ಕೆ ಮಾದರಿ ಎಂದು ಪ್ರಶಂಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಸಾಹಿತಿ ಗೊರೂರು ಅನಂತರಾಜು     ಬಾರೆ ನೆಲದಲ್ಲಿ ಗುಡ್ಡದ ಮನೆ  ಮಾಡಿ, ಉತ್ತು ಭಿತ್ತಿ ಹಸನಾದ, ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿರುವ ಪ್ರಗತಿಶೀಲ ಕುಮಾರ್ ಅವರ ತೋಟದ ಮನೆ, ಪ್ರಾಚೀನ ತಾಳೆಗರಿ, ಹಳೆಯ ಬೆಲೆ ಬಾಳುವ ಮೌಲ್ಯಯುತ ಪುಸ್ತಕಗಳ ಸಂಗ್ರಹ ಸಂರಕ್ಷಣೆ ನೋಡುತ್ತಿದ್ದರೆ ಬಂಗಾರದ ಮನುಷ್ಯ ಚಿತ್ರ ನನಗೆ ನೆನಪಾಗುತ್ತದೆ. ಈ ಗ್ರಂಥಾಲಯವನ್ನು ಸಂರಕ್ಷಿಸುವುದು ಅಗತ್ಯವಾಗಿದೆ.  ಇದು ಕನ್ನಡ ಸಂಶೋಧಕ ವಿದ್ಯಾರ್ಥಿಗಳಿಗೆ,  ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಬೇಕಿದೆ. ಈ ದಿಶೆಯಲ್ಲಿ, ಸಂಘ ಸಂಸ್ಥೆಗಳು ಅವರಿಗೆ ಸಹಕರಿಸಿ ನೆರವಾಗಬೇಕಿದೆ ಎಂದರು.  ಜಿಲ್ಲಾ ಜಾಗೃತ ಸಮಿತಿ ಸದಸ್ಯರು ಡಾ. ಬರಾಳು ಶಿವರಾಮ ಚನ್ನರಾಯಪಟ್ಟಣ,  ಸುಂದರೇಶ್ ಡಿ ಉಡುವಾರೆ, ರೈತ ಹೋರಾಟಗಾರರು ಮನೋಹರ್ ಪಾಟೀಲ್, ತಿಪಟೂರು, ಕವಿ ಎನ್.ಎಲ್. ಚನ್ನೇಗೌಡ, ಕೊಬ್ಬರಿ ಕೆತ್ತನೆ  ಕಲಾವಿದರು ಅರಸೀಕೆರೆ ಹರೀಶ್ ಕುಮಾರ್, ಹರ್ಷ ಇದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ  ಕುಮಾರ್  ದಂಪತಿಗಳನ್ನು  ಶಾಲು ಓದಿಸಿ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಡಾ.ಬಿ.ಡಿ..ಕುಮಾರ್ ಜನಪದ ಗೀತೆ ಹಾಡಿ ಪ್ರಾರ್ಥಿಸಿದರು. ಗೊರೂರು ಅನಂತರಾಜು

“ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗೊರೂರು ಅನಂತರಾಜು Read Post »

ಕಾವ್ಯಯಾನ

ಎನ್.ಜಯಚಂದ್ರನ್ ದಾಂಡೇಲಿ ಅವರ ಕವಿತೆ”ಕಣ್ಣೆದುರಿನ ಸತ್ಯ”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ ದಾಂಡೇಲಿ “ಕಣ್ಣೆದುರಿನ ಸತ್ಯ” ಕೇಳಿ…!ಇದು ಕಥೆಯಲ್ಲ…ಕಲ್ಪನೆಯೂ ಅಲ್ಲ…ನಮ್ಮ ಕಣ್ಣೆದುರೇ ಪ್ರತಿದಿನ ನಡೆಯುವಕಟು ಸತ್ಯ! ರಸ್ತೆಯ ಬದಿಯಲ್ಲಿಹಸಿವಿನಿಂದ ಅಳುವ ಮಗುವನ್ನುನೋಡಿದ ಕಣ್ಣುಗಳೇ…ಮೊಬೈಲ್ ಪರದೆಯ ಮೇಲೆನಗುವಿನ ಚಿಹ್ನೆಗಳನ್ನು ಹುಡುಕುತ್ತಿವೆ! ಒಂದು ಕಡೆಅನ್ನ ಕಸದ ಬುಟ್ಟಿಗೆ ಬೀಳುತ್ತಿದೆ…ಮತ್ತೊಂದು ಕಡೆಒಂದು ತುತ್ತಿಗಾಗಿಪ್ರಾಣವೇ ಒಣಗುತ್ತಿದೆ! ಹೆಣ್ಣಿನ ಕಣ್ಣೀರಿಗೆಬೆಲೆ ಕಟ್ಟುವ ಸಮಾಜ…ಅವಳ ಕನಸುಗಳಿಗೆ ಮಾತ್ರಬೆಲೆಯೇ ಇಲ್ಲ!ನ್ಯಾಯದ ಮಾತು ದೊಡ್ಡದು…ನ್ಯಾಯದ ನಡೆ ಮಾತ್ರಇನ್ನೂ ಕುಂಟುತ್ತಲೇ ಇದೆ! ಮರವನ್ನು ಕಡಿಯುವ ಕೊಡಲಿಯೇಬಿಸಿಲಿಗೆ ನೆರಳು ಹುಡುಕುತ್ತಿದೆ.ಪ್ರಕೃತಿಯನ್ನು ಗಾಯಗೊಳಿಸಿದ ಮನುಷ್ಯ,ಪ್ರಳಯ ಬಂದಾಗಆಕಾಶವನ್ನೇ ಪ್ರಶ್ನಿಸುತ್ತಿದ್ದಾನೆ! ಧರ್ಮದ ಹೆಸರಿನಲ್ಲಿಗೋಡೆಗಳನ್ನು ಕಟ್ಟಿದ್ದೇವೆ…ಮಾನವೀಯತೆಯ ಹೆಸರಿನಲ್ಲಿಒಂದು ಸೇತುವೆಯನ್ನಾದರೂ ಕಟ್ಟಿದ್ದೇವೆಯೇ? ಕಣ್ಣೆದುರಿನ ಸತ್ಯವನ್ನುಮುಚ್ಚಲು ಸಾಧ್ಯವಿಲ್ಲ!ಮೌನದಿಂದಬದಲಾವಣೆ ಬರಲಾರದು! ಎದ್ದೇಳಿ!ಪ್ರಶ್ನಿಸಿ!ಅನ್ಯಾಯದ ಮುಂದೆತಲೆಬಾಗಬೇಡಿ! ಒಂದು ಧ್ವನಿಸಾವಿರ ಧ್ವನಿಗಳಿಗೆ ದಾರಿ.ಒಂದು ಹೆಜ್ಜೆಹೊಸ ಸಮಾಜದ ಆರಂಭ. ನೆನಪಿರಲಿ…ಸತ್ಯಕ್ಕೆ ಕಣ್ಣುಗಳಿಲ್ಲ,ಆದರೆಅದನ್ನು ನೋಡುವ ಕಣ್ಣುಗಳುನಮ್ಮಲ್ಲಿರಬೇಕು! ಕಣ್ಣೆದುರಿನ ಸತ್ಯವನ್ನುಕಂಡು ಮೌನವಾಗಬೇಡಿ…ಕಂಡು ಬದಲಾಗಿ…ಕಂಡು ಬದಲಾಯಿಸಿ…ಏಕೆಂದರೆ,ನಾಳೆಯ ಇತಿಹಾಸನಮ್ಮ ಇಂದಿನ ಧೈರ್ಯದಿಂದಲೇ ಬರೆಯಲ್ಪಡುತ್ತದೆ! ಎನ್.ಜಯಚಂದ್ರನ್. ದಾಂಡೇಲಿ

ಎನ್.ಜಯಚಂದ್ರನ್ ದಾಂಡೇಲಿ ಅವರ ಕವಿತೆ”ಕಣ್ಣೆದುರಿನ ಸತ್ಯ” Read Post »

ಕಾವ್ಯಯಾನ

“ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ

ಕಾವ್ಯ ಸಂಗಾತಿ “ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ ಬಿಕರಿಯಾದ ಪ್ರೀತಿ ಅಂದ್ರೆ ಗೊತ್ತೇನು!ಇದ್ದದ್ದೆಲ್ಲವನ್ನೂ ಕೊಟ್ಟುಒಂದು ನಗುವಿಗೆ ಕಾಯೋದುಅದು ಬರದಾಗ ಎದೆ ಖಾಲಿ ಆಗೋದು. ನಿನಗೊ ಪ್ರತಿ ಮಾತಿಗೂ ಅರ್ಥಕಂಡುಕೊಳ್ಳುವ ತವಕಅವರೊ ಪ್ರತಿ ಮಾತಿಗೂ ಬೆಲೆ ಕಟ್ಟಿದ್ರುನೀನು ಕಣ್ಣೀರಲ್ಲಿ ಹೆಸರು ಬರೆದೆಅವರು ಅದನ್ನ ಮಳೆಗೆ ಕೊಟ್ಟು ಹೋದ್ರು. ಒಲವಿನ ಪ್ರೀತಿ ಕೇಳಿದ್ದೇನು?ಸಿಗೋದು ಸುಳ್ಳಿನ ವ್ಯಾಪಾರ ಆಯ್ತು.ನಾನಿಲ್ಲವಾ ಎಂದಿದ್ದ ಕೈ,ಬಿಟ್ಟು ಹೋಗೋವಾಗ “ನಿನ್ನ ತಪ್ಪು”ಅಂದಿತ್ತು ಅದರಲ್ಲಿ ಅಚ್ಚರಿ ಏನಿಲ್ಲ. ಆದ್ರೂ ನಿನಗೆ ಗೊತ್ತಾ?ಬಿಕರಿಯಾದ ಪ್ರೀತಿ ನಿನ್ನನ್ನು ಚಿಕ್ಕದಾಗಿಸಲ್ಲಅದು ನಿನ್ನ ದೊಡ್ಡತನಕ್ಕೆ ಸಾಕ್ಷಿಯಾಕಂದ್ರೆ ಪ್ರೀತಿಸೋಕೆ ಧೈರ್ಯಬೇಕಲ್ಲವೆ ಮೋಸ ಮಾಡೋಕೆ ಅಲ್ಲ. ಅದಕೇಕೆ ಅಳುವೆ ಅಳುವುದಾದರೆಮನಸಾರೆ ಎದೆ ಹಗುರಾಗುವವರೆಗೆ ಅಳುಆಮೇಲೆ ಆ ಕಣ್ಣೀರನ್ನೇ ಶಕ್ತಿಮಾಡ್ಕೊಂಡು ಬಿಡು ಅದರಲ್ಲೆನಗೋದನ್ನ ಕಲಿತುಬಿಡು. ಬಿಕರಿಯಾದ ಪ್ರೀತಿಗೇಕೆ ಅಳುವೆನಿನ್ನನ್ನು ನಿಜವಾಗಿ ಪ್ರೀತಿಸೋಒಲವಿಗಾಗಿ ಕಾಯೋದಾ?ಕಾಯುವುದಾದರೆ ಇನ್ನೆಷ್ಟು ದಿನ.!?ಬರಬಹುದೆಂಬ ಊಹೆಯ ಬಿಟ್ಟು ಬಿಡು. ಊಹಿಸಿರೊದೆಲ್ಲವೂ ಇಲ್ಲಿ ನೈಜವಾಗಿನಡೆಯುವುದಿಲ್ಲ ಊಹೆಯೊಳುಬದುಕುತ್ತಿದ್ದರೆ ಅದು ಬದುಕಲ್ಲಬದುಕಿನ್ನು ಬಿಕರಿಯಾಗುವುದಕ್ಕಿಂತಮೊದಲೆ ನಿನ್ನ ನೀನು ಪ್ರೀತಿಸುವುದನ್ನಕಲಿತುಬಿಡು. ಕಲ್ಪನಾ ಎಸ್ ಪಾಟೀಲಕಾವ್ಯಧರೆ

“ಬಿಕರಿಯಾದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ Read Post »

ಇತರೆ

 “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ

ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ  “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ  ಗೃಹಿಣಿ…. ಅಯ್ಯೋ ಈ ಮನೆ ಕೆಲಸ ಮುಗಿಯೋದೇ ಇಲ್ಲ ಇದರ ಮೇಲೆ ಮಕ್ಕಳು ಗಂಡ ಹೇಳಿದ್ದನ್ನೆಲ್ಲ ಮಾಡಿ ಹಾಕಬೇಕು. ಅತ್ತೆ ಮಾವನ ಕಾಳಜಿ ಮಾಡಬೇಕು. ನನ್ನ ಬದುಕು ಪೂರ್ತಿ ಗಂಡ ಮನೆ ಮಕ್ಕಳು ಅಂತ ಅವರ ಸುತ್ತಲೇ ಸುತ್ತುತ್ತದೆ ಅಂತ ಅನಿಸುತ್ತದೆ ನನಗೋಸ್ಕರ ಒಂದಷ್ಟು ಟೈಮ್ ಮಾಡ್ಕೋಬೇಕು  ನಾನು ಕೂಡ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನೋ ಆಸೆ ನನಗೂ ಇದೆ ಆದರೆ ಏನು ಮಾಡೋದು ? ಯಾವುದೂ ಆಗ್ತಾ ಇಲ್ಲ…. ಪಕ್ಕದ ಮನೆಯ ಲೀಲಾ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡ್ತಾಳೆ ದೊಡ್ಡ ಸಂಬಳ ಬರದೇ ಇರಬಹುದು, ನಿಜ ಆದರೆ ಆಕೆ ಪ್ರತಿದಿನ ಸಮಯಕ್ಕೆ ಸರಿಯಾಗಿ ತಯಾರಾಗಿ ಶಾಲೆಗೆ ಹೋಗುವಾಗ ಆಕೆಯ ಮುಖದಲ್ಲಿರುವ ಸಂತಸ ಹೆಮ್ಮೆ ನೋಡಿದರೆ ನನಗೆ ಖುಷಿಯಾಗುತ್ತೆ. ಕೆಲಸ ಜೊತೆ ಕೆಲಸ ಆಯ್ತು ಶಾಲೆಯಲ್ಲಿ ನಡೆಯೋ ಎಲ್ಲಾ ಆಕ್ಟಿವಿಟೀಸ್ ಗಳಲ್ಲಿ ಅವರು ಪಾರ್ಟಿಸಿಪೇಟ್ ಮಾಡ್ತಾರೆ ಜನರ ಜೊತೆ ಸಂಪರ್ಕ ಇರುತ್ತೆ. ಮಕ್ಕಳ ಜೊತೆ ನಕ್ಕು ನಲೀತಾರೆ ಜೊತೆಗೆ ಒಂದಷ್ಟು ಪಾಕೆಟ್ ಮನಿ ರೀತಿಯಲ್ಲಿ ಹಣ ಕೂಡ ಸಂಪಾದಿಸುತ್ತಾರೆ.ತಾವು ಖರೀದಿಸಿದ ಬಟ್ಟೆಗಳನ್ನ, ಒಡವೆಗಳನ್ನ ಆಯಾ ಕಾರ್ಯಕ್ರಮಗಳಿಗೆ ತಕ್ಕಂತೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೋತಾರೆ. ಶಾಲೆಯಲ್ಲಿ ಮಕ್ಕಳೊಟ್ಟಿಗೆ, ನಂತರ ಸಹೋದ್ಯೋಗಿಗಳೊಂದಿಗೆ ವಿವಿಧ ಬಗೆಯ ಕಾರ್ಯಕ್ರಮಗಳನ್ನ ಅಟೆಂಡ್ ಮಾಡ್ತಾರೆ ಪ್ರವಾಸ ಹೋಗ್ತಾರೆ, ಬದುಕನ್ನ ಪರಿಪೂರ್ಣವಾಗಿ ಎಂಜಾಯ್ ಮಾಡ್ತಾರೆ….  ಒಟ್ಟಿನಲ್ಲಿ ನೆಮ್ಮದಿಯ ಬದುಕು ಅವರದು.ಲೀಲಾ ಟೀಚರ್…. ಅಯ್ಯೋ ನಮ್ಮನೆಯವರು ಚೆನ್ನಾಗಿ ದುಡಿತಾ ಇದ್ರೆ, ನಾನ್ ಯಾಕ್ರೀ ಈ ಚಾಕರಿಗೆ ಬರ್ತಾ ಇದ್ದೆ. ಮನೆಯಲ್ಲಿ ಒಂದು ಇದ್ದರೆ ಒಂದು ಇರಲ್ಲ… ಆರ್ಥಿಕವಾಗಿ ಅನುಕೂಲ ಇದ್ರೆ ಎಲ್ಲವೂ ಚೆನ್ನ. ಅದಕ್ಕೆ ಅದೆಷ್ಟೇ ಕಷ್ಟ ಆದರೂ ಪರವಾಗಿಲ್ಲ ಅಂತ ಈ ಕೆಲಸಕ್ಕೆ ಸೇರಿಕೊಂಡಿದೀನಿ. ತಕ್ಕಮಟ್ಟಿಗೆ ಸಂಬಳಾನು ಸಿಗುತ್ತೆ ಅನ್ನಿ.ಆದರೆ ಏನು ಮಾಡೋದು….ಕೆಲಸಕ್ಕೆ ಹೋಗೋ ಅವಸರದಲ್ಲಿ ಗಡಿಬಿಡಿಯಿಂದ ಮನೆಯ ಎಲ್ಲಾ ಕೆಲಸ ಮುಗಿಸಿ ಸ್ನಾನ ಮಾಡಿ ತಿಂಡಿ ತಿಂದು ಶಾಲೆಗೆ ಓಡಿ ಹೋಗುವಷ್ಟರಲ್ಲಿ ಅಬ್ಬಾ! ಸಾಕು ಈ ಧಾವಂತದ ಬದುಕು ಅನ್ಸುತ್ತೆ. ಇನ್ನು ಇಡೀ ದಿನ ಎಲ್ಲಾ ಶಾಲೆಯಲ್ಲಿ ಕಳೆದು ಹೋಗುತ್ತೆ. ಖಾಸಗಿ ಶಾಲೆ ಆಗಿರೋದ್ರಿಂದ ಎಲ್ಲರ ಮರ್ಜಿ ಕಾಯಬೇಕು. ಆಡಳಿತ ಮಂಡಳಿಯವರ ಕಣ್ಣಿಗೆ ಕಿಸುರಾಾಗಬಾರದು. ಪ್ರಿನ್ಸಿಪಾಲ್ ಹೇಳಿದ ರೀತಿಯಲ್ಲಿ ಕ್ಲಾಸ್ಗಳನ್ನ ತಗೋಬೇಕು. ಚೋಟುದ್ದ ಮಕ್ಕಳ ಧಿಮಾಕು ತುಸು ಹೆಚ್ಚೇ ಇರುತ್ತೆ ಅವರನ್ನು ಸರಿದಾರಿಗೆ ತರೋದಕ್ಕೆ ನಮ್ಮೆಲ್ಲಾ ಶ್ರಮವನ್ನ ಹಾಕಬೇಕು. ಇನ್ನು ಅವರ ಪಾಲಕರ ಮಾತನ್ನು ಕೂಡ ಕೇಳಬೇಕು… ಅವರು ಹೇಳ್ತಾರೆ ತಮ್ಮ ಮಕ್ಕಳು ಮನೆಯಲ್ಲಿ ಮಾತ್ರ ಗಲಾಟೆ ಮಾಡುತ್ತಾರೆ ಅವರನ್ನು ಹಿಡಿಯೋಕಾಗಲ್ಲ ಅಂತ. ಆದ್ರೆ ಶಾಲೆಯಲ್ಲಿ ಅವರಂತಹ ಒಳ್ಳೆಯವರೇ ಇಲ್ಲ ಅನ್ನೋ ರೀತಿ ಅವರ ವರ್ತನೆ ಇರುತ್ತದೆ.ಇನ್ನು ಈ ಮಕ್ಕಳು ತಮ್ಮ ಹೆತ್ತವರ ಮುಂದೆ ತುಂಬಾ ಮುಗ್ಧರು ಅನ್ನೋ ರೀತಿ ವರ್ತಿಸ್ತಾರೆ ಆದರೆ ಅವರದು ಪ್ರಳಯಾಂತಕ ಬುದ್ಧಿ.ಮನೆಯಿಂದ ಹೊರಗೆ ನಾಲ್ಕು ಜನರ ಮಧ್ಯದಲ್ಲಿ ಓಡಾಡೋದ್ರಿಂದ ಸಮಾಜದಲ್ಲಿ ಒಂದಷ್ಟು ಗೌರವ, ನಮ್ಮ ಮಕ್ಕಳ ಶಿಕ್ಷಕರು ಎಂಬ ಪ್ರೀತಿ,ವಿಶ್ವಾಸ ಇರುತ್ತದೆ. ಆದರೆ ದೇಹಕ್ಕೆ ಮನಸ್ಸಿಗೆ ವಿಶ್ರಾಂತಿ ಎಂಬುದು ಕನಸಿನ ಮಾತು. ಇದಕ್ಕಿಂತ ಸರ್ಕಾರಿ ಶಾಲೆ, ಟೀಚರ್ ಆದ್ರೆ ಒಳ್ಳೆ ಸಂಬಳನೂ ಬರುತ್ತೆ ಯಾವುದೇ ಅಭದ್ರತೆ ಕಾಡೋದಿಲ್ಲ… ಏನು ಮಾಡೋದು ಎಲ್ಲಾನು ಪಡ್ಕೊಂಡು ಬಂದಿರಬೇಕಲ್ವೇ ?ಸರ್ಕಾರಿ ಶಾಲೆ ಶಿಕ್ಷಕಿ….. ಹೌದು ರೀ ಹೇಳೋದಕ್ಕೆ ಸರ್ಕಾರಿ ನೌಕರಿ, ಸರ್ಕಾರಿ ಸಂಬಳ ಎಲ್ಲವೂ ಚೆನ್ನಾಗಿ ಕಾಣಿಸುತ್ತೆ. ಆದರೆ ಸರ್ಕಾರಿ ಕೆಲಸ ಒಂದು ರೀತಿ ಕತ್ತೆ ಚಾಕರಿ ಇದ್ದಹಾಗೆ ಅನ್ನೋದು ಜನರಿಗೆ ಗೊತ್ತಾಗಲ್ಲ. ಏನು ಕೆಲಸ ಮಾಡ್ತೀರಿ ? ಅಂತ ಕೇಳಿದ ಜನ ನಮ್ಮ ಉತ್ತರ ಕೇಳಿ ಗೌರ್ಮೆಂಟ್ ಸ್ಕೂಲ್ ಟೀಚರ್ರಾ, ಬಿಡಿ ಕೆಲಸ ಮಾಡಿದ್ರೂ ಸಂಬಳ ಬರುತ್ತೆ, ಮಾಡದೆ ಇದ್ರೂ ಬರುತ್ತೆ ಎಂದು ಮೂಗು ಮುರಿದಾಗ ಅದೆಷ್ಟು ನೋವಾಗುತ್ತೆ ಗೊತ್ತಾ ? ನಾವು ಶಾಲೆಗಳಲ್ಲಿ ಓದಿಸುವ ಮಕ್ಕಳು ಸಂಪೂರ್ಣ ಶಿಕ್ಷಿತರಲ್ಲದವರ ಮಕ್ಕಳು. ಮಕ್ಕಳಿಗೆ ಶಾಲೆಯಲ್ಲಿ ಪಾಠ ಹೇಳಿಕೊಡುವುದರ ಜೊತೆಗೆ ಮನೆಯಲ್ಲಿ ಮನೆ ಪಾಠವನ್ನು ನಾವು ಕೊಡುತ್ತೇವೆ, ನಿಜ….ಆದರೆ ಅದನ್ನು ಮಾಡಿಸೋರು ಯಾರು ? ಯಾಕೆಂದರೆ ಪಾಲಕರಿಗೆ ಅಯ್ಯೋ! ಅದೆಲ್ಲ ನಮಗೆ ಗೊತ್ತಾಗೋದಿಲ್ಲ ಅಂತ ಕೈ ಒದರೋದು ಮಾತ್ರ ಗೊತ್ತು. ಮಕ್ಕಳಿಗೆ ಒಂಚೂರು ಕಟ್ಟುನಿಟ್ಟು  ಮಾಡಿದಾಗ  ಓಡೋಡಿ ಬಂದು ನಾವೇ ನಮ್ಮ ಮಕ್ಕಳಿಗೆ ಏನೂ ಹೇಳೊಲ್ಲ, ಒಂದೇಟು ಹೊಡೆಯಲ್ಲ… ಅದು ಹೇಗೆ ರೀ ನೀವು ನಮ್ಮ ಮಕ್ಕಳಿಗೆ ಬಯ್ಯೋದು ಅಂತ ನಮ್ಮನ್ನ  ದಬಾಯಿಸ್ತಾರೆ.ತೆಗೆದುಕೊಟ್ಟುಬಿಡಿ ನಮ್ಮ ಮಕ್ಕಳ ಟಿ ಸಿ ನ ಅಂತ ಗುರುಗುಟ್ಟತಾರೆ.ಇನ್ನು ನಮ್ಮ ಸರ್ಕಾರಗಳು ಜನಗಣತಿಯಿಂದ ಹಿಡಿದು ದನಗಣತಿಯವರೆಗೆ ಎಲ್ಲ ಕೆಲಸಕ್ಕೂ ನಮ್ಮನ್ನೇ ಬಳಸಿಕೊಳ್ಳುತ್ತಾರೆ. ರಜಾ ದಿನಗಳಲ್ಲಂತೂ ಸರಿ… ಶಾಲೆ ಇದ್ದಾಗಲೂ ಈ ಕಾರ್ಯ ಮಾಡೋದು ಅಂದ್ರೆ ಮಕ್ಕಳ ಸಿಲಬಸ್ ಹೇಗೆ ಪೂರ್ಣಗೊಳಿಸಬೇಕು ಹೇಳಿ ?ಇದರ ಮೇಲೆ ಬಿಸಿಊಟದ ವ್ಯವಸ್ಥೆ ನಮ್ಮ ನಮ್ಮ ತರಗತಿಯಲ್ಲಿ ಆ ದಿನ ಬಂದಿರುವ ವಿದ್ಯಾರ್ಥಿಗಳ ಸಂಖ್ಯೆ ಹೇಳಬೇಕು, ಹುಡುಗರು ಎಷ್ಟು ಹುಡುಗಿಯರು ಎಷ್ಟು ಯಾರು ಮೊಟ್ಟೆ ತಿಂತಾರೆ ? ಯಾರು ಬಾಳೆಹಣ್ಣು ತಿಂತಾರೆ ಎಂದೆಲ್ಲ ಲೆಕ್ಕ ಕೊಡಬೇಕು. ಅವರಿಗೆ ಮಾಡುವ ಅಡುಗೆ ಪೌಷ್ಟಿಕವಾಗಿದೆಯೇ? ತರಕಾರಿಗಳನ್ನು ಹಾಕಿ ಮಾಡಿದ್ದಾರೆಯೇ? ಹಾಲು ಚೆನ್ನಾಗಿ ಕಾಯಿಸಿದ್ದಾರೆಯೇ ಅನ್ನೋದನ್ನ ನೋಡ್ಕೋಬೇಕು. ಯಾರಿಗೆ ಬೇಕಪ್ಪ ಈ ಸರ್ಕಾರಿ ಶಿಕ್ಷಕರ ಕೆಲಸ. ಚೆನ್ನಾಗಿ ಓದಿ ಇಂಜಿನಿಯರಿಂಗ್ ಮಾಡಿದ್ರೆ ಎಸಿ ರೂಮಲ್ಲಿ ಕುತ್ಕೊಂಡು ಲ್ಯಾಪ್ಟಾಪ್ ಅಲ್ಲಿ ಕುಟ್ತಾ ಜುಮ್ ಅಂತ ನೌಕರಿ ಮಾಡ್ಕೊಂಡು ವೀಕೆಂಡ್ ಗಳಲ್ಲಿ ಫ್ರೆಂಡ್ಸ್ ಜೊತೆ ಪಾರ್ಟಿ, ಪಿಕ್ನಿಕ್ ಅಂತ ಹೋಗಬಹುದಿತ್ತು…. ಎಲ್ಲಾನು ಪಡ್ಕೊಂಡು ಬರೋಕೆ ಹಣೆಲಿ ಬರ್ದಿರ್ಬೇಕಲ್ಲ.ಸಾಫ್ಟ್ ವೇರ್ ಇಂಜಿನಿಯರ್…. ನಿಜ ನಮ್ಮ ಬದುಕು ನೋಡಲು ಅತ್ಯಂತ ಆಕರ್ಷಕ. ಎಸಿ ರೂಮುಗಳಲ್ಲಿ ಬೋರ್ಡ್ ಮೀಟಿಂಗ್ ಗಳಲ್ಲಿ, ಆಕರ್ಷಕವಾದ ವಾತಾವರಣದಲ್ಲಿ ಠಾಕು ಠೀಕಾದ ಬಟ್ಟೆ ಧರಿಸಿ ಅದಕ್ಕೆ ತಕ್ಕಂತೆ ಶೂ ಇಲ್ಲವೇ ಚಪ್ಪಲಿ ಹಾಕಿಕೊಂಡು ಆತ್ಮವಿಶ್ವಾಸದಿಂದ ಎದೆ ಉಬ್ಬಿಸಿ ನಡೆಯುತ್ತಾ ಇದ್ದರೆ ಎಲ್ಲರೂ ನಮ್ಮನ್ನೇ ನೋಡಿ ಬೆಕ್ಕಸ ಬರಗಾಗುವಂತಹ ಬದುಕು ನಮ್ಮದು. ಆದರೆ ದೀಪದ ಅಡಿಯಲ್ಲಿ ಕತ್ತಲು ಎಂಬಂತೆ ಒಂದೇ ಸಮನೆ ಲ್ಯಾಪ್ಟಾಪ್ ನೋಡಿ ಕೆಲಸ ಮಾಡುವ ನಮಗೆ ವಿಪರೀತ ದೈಹಿಕ ತೊಂದರೆಗಳು ಕಾಡುತ್ತವೆ. ಎಲ್ಲರಿಗೂ ನಲವತ್ತಕ್ಕೆ ಕನ್ನಡಕ ಬಂದರೆ ನಮಗೆ ನೌಕರಿ ಸೇರಿದ ಕೆಲವೇ ತಿಂಗಳುಗಳಲ್ಲಿ ಕಣ್ಣಿಗೆ ಕನ್ನಡಕ ಕಡ್ಡಾಯ. ಸದಾ ಕುಳಿತು ಕೆಲಸ ಮಾಡುವುದರಿಂದ ಕಣ್ಣುಗಳು ಡ್ರೈ ಆಗುವ, ಕುತ್ತಿಗೆ ಬೆನ್ನುಗಳಲ್ಲಿ ವಿಪರೀತ ನೋವು ಸಹಜ. ನಮ್ಮ ಒಡನಾಟ ಹೈ ಲೆವೆಲ್ ಕಾರ್ಪೊರೇಟ್ ಜನರೊಂದಿಗೆ ಇರುವುದರಿಂದ ಅಲ್ಲಿಯ ಊಟ ತಿಂಡಿಗೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವ ಕಾರಣ ದೇಹದಲ್ಲಿ ಅನವಶ್ಯಕ ಬೊಜ್ಜು ಸೇರಿಕೊಳ್ಳುತ್ತದೆ. ಪರಿಣಾಮವಾಗಿ 60ರ ನನ್ನ ಅಮ್ಮ ಇನ್ನೂ ಚಿರ ಯುವತಿಯಂತೆ ಓಡಾಡಿಕೊಂಡಿದ್ದರೆ ಅವರ ಮುಂದೆ ನಾನು ಸದಾ ಬಂದಿಲ್ಲೊಂದು ನೋವುಗಳನ್ನು ಹೇಳಿಕೊಂಡು ತಿರುಗುತ್ತೇನೆ. ಪ್ರಾರಂಭದ ಒಂದೆರಡು ವರ್ಷ ಜನ ಎಲ್ಲ ನೋಡೋ ಹಾಗೆ ಒಳ್ಳೆ ಕೆಲಸ, ಫ್ರೆಂಡ್ಸು, ವೀಕೆಂಡ್ ಮೋಜು ಮಜಾ ಅಂತ ಕಾಲ ಕಳೆಯಿತು…. ನಂತರ ಅಪ್ಪ-ಅಮ್ಮನ ವರಾತ ಶುರುವಾಗಿ ನನ್ನದೇ ಸಾಫ್ಟ ವೇರ್ ಫೀಲ್ಡಿನ ಯುವಕನೊಂದಿಗೆ ನನ್ನ ಮದುವೆಯೂ ಆಯಿತು. ಯವ್ವನದ ಹಸಿ ಬಿಸಿ ಆಸೆ ಆಕಾಂಕ್ಷೆಗಳ, ಕನಸುಗಳ ಹಂಚಿಕೆಯೂ ಆಗಿ, ಮದುವೆಯ ಹನಿಮೂನ್ ಅವಧಿ ಮುಗಿದು ಕೆಲಸಕ್ಕೆ ಮತ್ತೆ ಜಾಯಿನ್ ಆದದ್ದೇ ಬಂತು. ನಾವು ಪರಸ್ಪರ ಜೊತೆಯಾಗಿ ಇರಲು ಮಾತನಾಡಲು ಕೂಡ ವೀಕೆಂಡ್ಗಳಿಗಾಗಿ ಕಾಯಬೇಕು. ಇನ್ನು ವಿಪರೀತ ಒತ್ತಡದ ಕೆಲಸದ ನಂತರ ಬರುವ ವೀಕೆಂಡ್ ಗಳಲ್ಲಿ ಮನೆಯ ರಾಶಿ ಕೆಲಸಗಳು ಕಾಯುತ್ತಿರುತ್ತವೆ… ಅದೆಲ್ಲವನ್ನು ಹೇಗೋ ಮ್ಯಾನೇಜ್ ಮಾಡಿ ಉಸ್ತಪ್ಪ ಅಂತ ಸೋಫಾದಲ್ಲಿ ಕುಳಿತುಕೊಂಡರೆ ಅರಿವಿಲ್ಲದೆ ನಿದ್ರೆ ಆವರಿಸಿಕೊಳ್ಳುತ್ತದೆ. ನಾವಿಬ್ಬರೂ ಬದುಕಿನ ಪಯಣದಲ್ಲಿ ಕಂಪನಿಯಲ್ಲಿ ನೀಡುವ ಪ್ರಾಜೆಕ್ಟ್ ಗಳನ್ನು ಕಂಪ್ಲೀಟ್ ಮಾಡಲು ಒಂದೇ ಸಮನೆ ಓಡುತ್ತಿದ್ದೇವೆ… ನನಗೆ ಕೊಂಚ ಬಿಡುವ ದೊರೆತಾಗ ನನ್ನವನಿಗೆ ವಿಪರೀತ ಕೆಲಸದ ಒತ್ತಡ, ಮಾತಾಡಿದರೆ ಸಿಡಾರ್ ಎಂದು ಸಿಡುಕಬಹುದು ಎಂಬ ಅಳುಕು… ಕಾರಣ ಕೆಲಸದ ಒತ್ತಡ, ಭದ್ರತೆ ಅವನಂತೆ ನನಗೂ ಇದೆ ಅಲ್ಲವೇ ? ಇದರ ಮಧ್ಯದಲ್ಲಿ ಮಗುವಾದರೆ ಅದರೊಂದಿಗೆ ಎಂಜಾಯ್ ಮಾಡಲು ಕೂಡ ಆಗದೇ ಇರುವಷ್ಟು ಮುಂದಿನ ಬದುಕಿನ ಕುರಿತ ಕಾಳಜಿ. ಐದಾರು ತಿಂಗಳ ಮೆಟರ್ನಿಟಿ ಲೀವ್ ದೊರೆಯುತ್ತದೆ ನಿಜ… ಆದರೆ ನಾಗಾಲೋಟದಲ್ಲಿ ಬದಲಾಗುತ್ತಿರುವ ಐ ಟಿ ಕ್ಷೇತ್ರದ ಅಭಿವೃದ್ಧಿ ಪಥಕ್ಕೆ ನಾನು ಸರಿ ಹೊಂದದೆ ಎಲ್ಲಿ ಹಿಂದೆ ಉಳಿದುಬಿಡುವೆನೋ ಎಂಬ ಆತಂಕ, ಭಯ ನನ್ನನ್ನು ಇನ್ನಿಲ್ಲದಂತೆ ಕಾಡುತ್ತದೆ. ಒಂದು ವೇಳೆ ಹಾಗಾದಾಗ ನನಗೆ ನನ್ನ ಯೋಗ್ಯತೆಗೆ ತಕ್ಕ ಕೆಲಸ ದೊರೆಯದೆ ಹಿಂದುಳಿದು ಬಿಟ್ಟರೆ? ನನ್ನನ್ನು ಕೆಲಸದಿಂದ ತೆಗೆದುಹಾಕಿದರೆ ಎಂಬ ಆತಂಕ…. ಇದರ ಜೊತೆಗೆ ಸಹಜವಾಗಿಯೇ ನನ್ನಮ್ಮ, ಅತ್ತೆಯಂತೆ ನಾನು ಕುಟುಂಬಕ್ಕೆ ನನ್ನ ಸಮಯವನ್ನು ನೀಡುತ್ತಿಲ್ಲ, ಮಕ್ಕಳಿಗೆ ನೀಡಬೇಕಾದ ಅಗತ್ಯ ಕಾಳಜಿಯನ್ನು ವಹಿಸಲಾಗುತ್ತಿಲ್ಲ ಎಂಬ ಭಾವ ನನ್ನನ್ನು ಸದಾ ಹಿಂಡಿ ಹಿಪ್ಪೆ ಮಾಡುತ್ತದೆ. ಅತ್ತ ಕೌಟುಂಬಿಕವಾಗಿ ಎಲ್ಲರನ್ನೂ ಮೆಚ್ಚಿಸಲಾಗದೆ, ಔದ್ಯೋಗಿಕವಾಗಿಯೂ ಎಲ್ಲವನ್ನು ನಿರ್ವಹಿಸಲಾಗದೆ ಎಲ್ಲಿಯೂ ಸಲ್ಲದವರಾಗಿ ಬಿಡುತ್ತೇವೆ ಎಂಬ ಭಯ. ಹೋಗಲಿ ಬಿಡು…, ಇಬ್ಬರಲ್ಲಿ ಒಬ್ಬರು ದುಡಿಯುತ್ತೇವಲ್ಲ ನೌಕರಿ ಬಿಟ್ಟರೆ ಆಯ್ತು ಅಂದುಕೊಳ್ಳಲು ಕಂತಿನಲ್ಲಿ ಖರೀದಿಸಿದ ಕಾರು, ಮನೆಗಳ ಸಾಲಗಳು… ಇನ್ನೂ ನಮ್ಮ ಬಾಕಿ ಇದೆ ಎಂದು ತಟ್ಟಿ ನಮ್ಮನ್ನು ಎಚ್ಚರಿಸುತ್ತವೆ. ಇದೆಲ್ಲಾ ನೋಡಿದರೆ ಹಳ್ಳಿಯಲ್ಲಿ ಆರಾಮಾಗಿ ಇರುವ ನನ್ನಮ್ಮನ ಹಾಗೆ ಬದುಕನ್ನು ಅದು ಇರುವಂತೆ ಸಾಗಿಸಿಕೊಂಡು ಹೋಗುವುದರಲ್ಲಿ ಅದೆಷ್ಟು ಸುಖವಿದೆ ಅಂತ ಅನ್ಸುತ್ತೆ… ಏನು ಮಾಡೋದು ಎಲ್ಲವೂ ನಮ್ಮ ಕೈಯಲ್ಲಿ ಇಲ್ಲ. ಪರಿಸ್ಥಿತಿ ಬಂದ ಹಾಗೆ ನಮ್ಮನ್ನು ನಾವು ಹೊಂದಿಸಿಕೊಂಡು ಹೋಗಬೇಕು ಇಲ್ಲದೆ ಹೋದರೆ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾಗುತ್ತದೆ. ಹಳ್ಳಿಯಲ್ಲಿರುವ ಅಮ್ಮ…. ಅಯ್ಯೋ ನಮ್ಮದು ಒಂದು ಬದುಕೇ?  ನಾನು ಅಂತ ಇಷ್ಟು ದಿನ ಹೊಂದಿಕೊಂಡು ಹೋದೆ. ನಮ್ಮ ಹಳ್ಳಿಯ ಮನೆಗಳು ಕತ್ತಲ ಗೂಡುಗಳು ಕಣ್ಣು ಮುಚ್ಚಾಲೆ ಆಡೋ ಕರೆಂಟು, ಬಾವಿಯ ನೀರು ಸೇದಿ ಬಳಸಬೇಕು ಇಲ್ಲವೇ ಹಳ್ಳಕ್ಕೆ ಹೋಗಬೇಕು… ಇನ್ನು ಮನೆ ಮನೆಗೆ ನೀರಿನ ವ್ಯವಸ್ಥೆ ನಮ್ಮ ಹಳ್ಳಿಗೆ  ಬಂದಿಲ್ಲ. ಹೊಲದಲ್ಲಿ ಸಾಕಷ್ಟು ಕಟ್ಟಿಗೆ ಇರುತ್ತೆ ಅದನ್ನೇ ಬಳಸುವ ಅಂತ ಯಜಮಾನ್ರು ಹೇಳ್ತಾರೆ ಅದು ನಿಜಾನೆ ಹೌದು. ಆದರೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ, ಅದರ ಹೊಗೆ ಕುಡಿದು ಅಸ್ತಮಾ, ಕೆಮ್ಮು ದಮ್ಮು ಎಂದು ಒದ್ದಾಡೋದು ನನ್ನ ಹಣೆಯಲ್ಲಿ ಬರೆದಿದೆ. ಈಗೀಗ ಎಲ್ಲದಕ್ಕೂ ಗ್ಯಾಸ್ ಒಲೆಯನ್ನೇ ಬಳಸ್ತೀನಿ… ನಾನಾದ್ರೂ ಎಷ್ಟು ಅಂತ ಮಾಡ್ಲಿ.ಈ ಹಿಂದೆ ಮನೆಯಲ್ಲಿ ದನ ಕರು ಅಂತ ಸಾಕಷ್ಟು ಹಾಲು ಹಯಿನಿನ ಸಮೃದ್ಧಿ ಇತ್ತು ನಿಜ… ಆದರೆ ಈಗ ಎಲ್ಲಾ ಕೆಲಸ ನಾವೇ ಮಾಡಿಕೊಳ್ಳಬೇಕು. ಈ ಮುಂಚಿನಂತೆ ಆಳುಗಳು ಸಿಗೋದಿಲ್ಲ, ಅವರು ಕೇಳೋವಷ್ಟು ಸಂಬಳ ಕೊಟ್ಟು ಕೆಲಸ ಮಾಡಿಸಿಕೊಳ್ಳೋದಕ್ಕೆ ನಮಗೆ ಆಗೋದಿಲ್ಲ. ಅದಕ್ಕೆ ನಾವು ತಿನ್ನುವುದಾದರೂ ಎಷ್ಟು ಎಂದು

 “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ Read Post »

You cannot copy content of this page

Scroll to Top