ಭಾಷಾ ಸಂಗಾತಿ
ಜಯಲಕ್ಷ್ಮಿ ಮಡಿಕೇರಿ.
ಮಾಧ್ಯಮಗಳು ಭಾಷೆಯ
ಆರೋಗ್ಯ ಕಾಪಾಡುವ ವೈದ್ಯರಾಗಬೇಕು


ಮನುಷ್ಯನ ಅತಿ ದೊಡ್ಡ ಸಂಶೋಧನೆಗಳಲ್ಲಿ ಭಾಷೆ ಕೂಡಾ ಒಂದು. ಹಾಗಾಗಿ ಭಾಷೆಯನ್ನು ಬೆಳಕಿಗೆ ಹೋಲಿಸಲಾಗಿದೆ, ಅದಕ್ಕೆ ಬೆಳಕಿನ ಪಟ್ಟವನ್ನು ನೀಡಲಾಗಿದೆ.
ಜಗತ್ತಿನಲ್ಲಿ ಸಹಸ್ರಾರು ಭಾಷೆಗಳಿದ್ದರೂ ಕನ್ನಡಕ್ಕೆ ಒಂದು ವಿಶೇಷ ಸ್ಥಾನಮಾನವಿದೆ. ಕವಿರತ್ನತ್ರಯರಿಂದ ಬೆಳೆದು ಬಂದು ಅದ್ವಿತೀಯ ಸಾಹಿತ್ಯ ರಚನೆಗಳನ್ನು ಸಾರಸ್ಕೃತ ಲೋಕಕ್ಕೆ ನೀಡಿದ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ನಮ್ಮ ಭಾಷೆಗಿದೆ.
ಇದು ಮಾಧ್ಯಮಗಳ ಯುಗ. ಪುಲಿಗೆರೆಯ ಸೋಮನಾಥ ಹೇಳುವಂತೆ ” ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ ಕೆಲವಂ ಮಾಳ್ಪವರಿಂದ ಕೆಲವಂ ಸುಜ್ಞಾನದಿಂದ, ಅರಿತುಕೊಂಡು ಬೆಳೆಯಲು ಯಾರಿಗೂ ಸಮಯವಾಗಲಿ ವ್ಯವಧಾನವಾಗಲಿ ಇಲ್ಲ. ಮುದ್ರಣ ಮಾಧ್ಯಮದಲ್ಲಿ ಪ್ರಧಾನ ಪಾತ್ರವಹಿಸಿರುವ ಪುಸ್ತಕಗಳ ಓದು ಬದಿಗೆ ಸರಿದ ಕಾಲವಿದು. ಸ್ವಚ್ಛ ಶುದ್ಧ ಭಾಷೆಯ ಬೆಳವಣಿಗೆಗೆ ಪೂರಕವಾಗಿರುವ ರೇಡಿಯೋ, ಸೃಜನಶೀಲ ಬರಹಗಳು, ಪತ್ರಿಕೆಗಳು ನಿಯತಕಾಲಿಕೆಗಳು ಇವೆಲ್ಲವುಗಳನ್ನು ಮೀರಿ ಟಿವಿ ಸಿನಿಮಾ ಇಂಟರ್ನೆಟ್ ವಾಟ್ಸಪ್ ಫೇಸ್ಬುಕ್ ಇತ್ಯಾದಿಗಳಿಗೆ ಜನ ಮುಗಿ ಬೀಳುವ ಕಾಲಘಟ್ಟವಿದು.
ಒಂದೆಡೆ ಇಂಗ್ಲಿಷ್ ಭಾಷೆಯನ್ನು ಬಳಸಿ ಮಾತನಾಡುವುದೇ ಒಂದು ಹೆಗ್ಗಳಿಕೆ ಎಂಬ ಭ್ರಮೆಯಲ್ಲಿರುವ ಕನ್ನಡಿಗರು, ಇನ್ನೊಂದೆಡೆ ತಾವು ಬಳಸಿದ್ದೇ ಭಾಷೆ ಎನ್ನುವಂತೆ ಕನ್ನಡ ಭಾಷೆ ಗೌರವಕ್ಕೆ ಚ್ಯುತಿ ತರುವಂತೆ ಪ್ರತಿ ದಿನ ತಪ್ಪುಗಳನ್ನೇ ತೋರುವ ಹೇಳುವ ಕೆಲ ದೃಶ್ಯ ಮಾಧ್ಯಮಗಳು. ಇವುಗಳಿಂದ ಕನ್ನಡ ಭಾಷೆ ತನ್ನ ಅಂದ ಚಂದವನ್ನು, ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದ್ದು ನಮ್ಮ ಭಾಷಾ ಸಹಜತೆಯನ್ನು ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೃಶ್ಯ ಮಾಧ್ಯಮಗಳಲ್ಲಿ ಅತಿ ದೊಡ್ಡದಾಗಿ ಬಿತ್ತರ ವಾಗುವ ತಪ್ಪು ತಪ್ಪಾದ ಪದಗಳನ್ನು ಚಿತ್ತಬಿತ್ತಿಯಲ್ಲಿ ಮುದ್ರಿಸಿಕೊಳ್ಳುವ ಮಕ್ಕಳು ಅದುವೇ ಸರಿಯಾದ ಕನ್ನಡ ಎಂದು ತಿಳಿದು ಅದನ್ನೇ ಕಲಿಯುತ್ತಾರೆ. ಭಾಷಾ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸ ತಕ್ಕಂತಹ ಪಾ.ವೆಂ. ಆಚಾರ್ಯರ ‘ಪದಾರ್ಥ ಚಿಂತಾಮಣಿ ‘ , ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ” ಇಗೋ ಕನ್ನಡ “, ಕೊಕ್ಕಡ ವೆಂಕಟರಮಣ ಭಟ್ಟರ ” ಸರಿಗನ್ನಡ ಸರಿಕನ್ನಡ ” ಶುದ್ಧ ಕನ್ನಡದ ಬಗ್ಗೆ ನಮಗೆ ಅರಿವಾಗುತ್ತದೆ ಮತ್ತು ಮುದ್ರಣ ಮಾಧ್ಯಮ ಭಾಷ ಕ್ಷೇತ್ರದಲ್ಲಿ ಮೂಡಿಸಿದ ಜಾಗೃತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಹಿರಿಯರು ಪುಸ್ತಕಗಳನ್ನು ಓದುವ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕಿದೆ. ಅಧಿಕಾರ ಸ್ಥಾನದಲ್ಲಿ ಇರುವವರು, ಶಿಕ್ಷಕರು, ಪೋಷಕರು ಮಾಧ್ಯಮ ಬಂಧುಗಳು ಕನ್ನಡ ಭಾಷಾ ಶುದ್ಧಿಯನ್ನು ಕಾಪಾಡಿಕೊಂಡು ಬರಬೇಕಿದೆ
ಹೊಂಬೆಳಕು ಮಾಸಿಕ ಕಾರ್ಯಕ್ರಮದ ಮೂಲಕ ಹಲವಾರು ತತ್ವ ಚಿಂತನೆಗಳು ಮಠದಲ್ಲಿ ನಡೆಯುತ್ತಿದ್ದು ಹಲವಾರು ಪುಸ್ತಕಗಳು ಕೂಡ ಈ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಬಗ್ಗೆ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಂತಸ ವ್ಯಕ್ತಪಡಿಸಿದರು. ತಮ್ಮ ಅಮೃತ ಹಸ್ತದಿಂದ ಕೆ ಜಯಲಕ್ಷ್ಮಿ ಅವರ ‘ ನಡೆದಷ್ಟೂ ದಾರಿ ‘ ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಕೋರಿದರಲ್ಲದೆ ಶರಣ ಶರಣೆಯರ ಜೀವನ ಆದರ್ಶಗಳ ಬಗ್ಗೆ ಹೇಳುತ್ತಾ ವಚನಗಳ ಸಾರ್ವಕಾಲಿಕ ಮೌಲ್ಯಗಳ ಬಗ್ಗೆ ವಿವರಿಸಿದರು. ನೆರೆದಿರುವ ಭಕ್ತ ವೃಂದಕ್ಕೆ ಆಶೀರ್ವಚನ ನೀಡಿದರು .

ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿಜಿ ಅನಂತಶಯನ ರವರು ಸಾಮಾಜಿಕ ಧಾರ್ಮಿಕ ಕ್ಷೇತ್ರಕ್ಕೆ ಅರಮೇರಿ ಮಠದ ಪರಮಪೂಜ್ಯ ಗುರುಗಳು ನೀಡುತ್ತಾ ಬರುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಶಿಕ್ಷಕಿ ಸಾಹಿತಿ ಸುನಿತಾ ಕುಶಾಲನಗರ ಅವರು ಜಯಲಕ್ಷ್ಮಿ ಕೆ ಯವರ” ನಡೆದಷ್ಟೂ ದಾರಿ ” ತೃತೀಯ ಬಗ್ಗೆ ಮಾತನಾಡುತ್ತಾ ಓದುವ ಕುತೂಹಲವನ್ನು ಕೆರಳಿಸುವ , ವಿಚಾರಧಾರೆಗಳ ಸ್ಪಷ್ಟ ನಿರೂಪಣೆಯ ಪುಸ್ತಕವಿದು. ಲೇಖಕಿ ಬಳಸಿದ ಭಾಷೆ ಸರಳ ಸ್ವಚ್ಛ ಸುಂದರ ಎಂದರು.ಉದಾತ್ತ ವ್ಯಕ್ತಿಗಳ ಜೀವನ ಚರಿತ್ರೆಯನ್ನು ವಿವರಿಸಿತ್ತ ವಾಸ್ತವದಲ್ಲಿ ಬದುಕುವ ಚಿಂತನೆ ಉತ್ತಮ ಎಂದರು. ಪೊನ್ನಂಪೇಟೆ ಸಿ ಐ ಟಿ ಕಾಲೇಜಿನ ಉಪನ್ಯಾಸಕಿ ಸುಶ್ಮಿತಾ ರವರು ಜಯಲಕ್ಷ್ಮಿ ಅವರ ಕೆಲವು ಲೇಖನಗಳ ಬಗ್ಗೆ ಮಾತನಾಡಿದರು.ಕುಮಾರಿ ಮಿನುಗು ಪ್ರಾರ್ಥಿಸಿದಳು. ಕಿಗ್ಗಾಲ್ ಹರೀಶ್ ನಿರೂಪಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೇಶವ ಕಾಮತ್, ಮಾಜಿ ಅಧ್ಯಕ್ಷರಾದ ಶ್ರೀ ಲೋಕೇಶ್ ಸಾಗರ್, ಸಾಹಿತಿ ಕಿಗ್ಗಾಲ್ ಗಿರೀಶ್, ಡಾಕ್ಟರ್ ಸತೀಶ್, ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.




