ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-22 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಸುಧನ್ವನ ಸಾಹಸವದು ಸೂರೆಗೊಂಡಿತು ನಮ್ಮ ಸೇನೆಯನು                 ಈಗ ಪಶ್ಚಾತ್ತಾಪ ಭಾವ ಮೂಡಿತು ಪುರೋಹಿತ ಲಿಖಿತನಲ್ಲಿ. ಕೃಷ್ಣಭಕ್ತನಾದ ಸುಧನ್ವನಿಗೆ ತೊಂದರೆ ಆಗಲೆಂದು ಬಯಸಿದ ತನಗೆ ಮರಣವೇ ಸರಿಯಾದ ಶಿಕ್ಷೆ ಎಂಬ ಭಾವನೆ ಮೂಡಿತ್ತು ಅವನಲ್ಲಿ. ಸುಧನ್ವನಿದ್ದ ಆ ಎಣ್ಣೆ ಕೊಪ್ಪರಿಗೆಗೆ ಜಿಗಿದ. ಕೃಷ್ಣಭಕ್ತನ ಸಂಗದ ಘನಪರಿಣಾಮದಲಿ ಉಷ್ಣಾತಿಉಷ್ಣ ತೈಲದಲಿ ಬಿದ್ದರೂ ಸಹ ಲಿಖಿತ ಉಷ್ಣರಹಿತ ಸ್ಥಿತಿಯನ್ನು ಅನುಭವಿಸಿದ. ತಂಪುತಂಪಾದ ಕೊಳದಂತೆ ಭಾಸವಾಯಿತು ಆ ಕೊಪ್ಪರಿಗೆಯ ಒಳಗು ಅವನಿಗೆ.      ಅರಸ ಹಂಸಧ್ವಜನಿಗೆ ನಂಬಲಸಾಧ್ಯವಾದ ವಿಸ್ಮಯವಾಯಿತು. ಒಡನೆ ಬಂದವನು ಸುಧನ್ವ ಲಿಖಿತ ಇಬ್ಬರನ್ನೂ ಪ್ರೀತಿಯಿಂದ ಆಲಂಗಿಸಿಕೊAಡ. “ನಿನ್ನ ಮಗನ ದೆಸೆಯಿಂದ ನಮ್ಮ ಈ ನಗರ ಧನ್ಯವಾಯಿತಿಂದು” ಎಂದು ಹಂಸಧ್ವಜನಲ್ಲಿ ಸುಧನ್ವನನ್ನು ಮನಸಾರೆ ಹೊಗಳಿದ ಲಿಖಿತ.     ಕೃಷ್ಣಲೀಲೆಗೆ ಪಾತ್ರನಾದ ಸುಧನ್ವ ಈಗ ವೀರಾಗ್ರಣಿಯ ಪಾತ್ರ ಧರಿಸಿ ರಣರಂಗಪ್ರವೇಶ ಮಾಡಿದ. ಈ ಮೊದಲು ಮಗನನ್ನು ತೆಗಳಿದ್ದ ಹಂಸಧ್ವಜನಲ್ಲಿ ಈಗ ಅದೇ ಮಗನ ಬಗೆಗೆ ಹೆಮ್ಮೆಯ ಭಾವನೆಯಿತ್ತು. ಮಕ್ಕಳಾದವರ ಬದುಕಿನ ನಿಜ ಸಾರ್ಥಕತೆಯಿದು ಎನಿಸಿತು ನನಗೆ ಆ ಕ್ಷಣದಲ್ಲಿ. ತಂದೆ ತಾಯಿ ಅವರಿವರಲ್ಲಿ ಹೇಳಿಕೊಂಡು ಹೆಮ್ಮೆಪಡುವಂತಹ ರೀತಿಯಲ್ಲಿ ಬದುಕುವುದಕ್ಕಿಂತ ಮಿಗಿಲಾದದ್ದು ಏನಿದೆ ಮಕ್ಕಳ ಪಾಲಿಗೆ! ಹಂಸಧ್ವಜನ ಆ ಪ್ರೌಢ ಮೊಗದಲ್ಲಿ ಸಂತಸದ ಭಾವ ತಾಂಡವವಾಡುತ್ತಿತ್ತು.     ತಂದೆಯ ಚರಣಕ್ಕೆ ನಮಿಸಿದ ಸುಧನ್ವ ಯುದ್ಧಕ್ಕೆ ಸಿದ್ಧನಾಗಿ ಚತುರಂಗ ಬಲವನ್ನು ನಮ್ಮೆಡೆಗೆ ಮುನ್ನಡೆಸಿದ. ಮುಂದೆ ಮುಂದೆ ಬಂದ ಸೇನೆ ನಮ್ಮ ಕುದುರೆಯನ್ನು ಹಿಡಿಯಿತು. ತಕ್ಷಣವೇ ಪದ್ಮವ್ಯೂಹವನ್ನು ರಚಿಸಿದರು ಚಂಪಕಾಪುರಿಯ ಸೈನಿಕರು. ಆ ವ್ಯೂಹದೊಳಗೆ ಬಂಧಿಯಾಯಿತು ನಮ್ಮ ಕುದುರೆ.     ಈ ವಿಚಾರ ತಿಳಿದ ತಕ್ಷಣವೇ ನಾನು ಹೊರಳಿದ್ದು ಶ್ರೀಕೃಷ್ಣ ಸುತನೆಡೆಗೆ. ವಿಷಯ ತಿಳಿಸಿದೆ. ಮಾಡಬಹುದೇನೀಗ ಎಂದು ಕೇಳಿದೆ. ಕೆಲವೊಮ್ಮೆ ಹಾಗೆಯೇ, ಬದುಕೆಂಬ ಯುದ್ಧರಂಗದಲ್ಲಿ ಅನುಭವಕ್ಕಿಂತಲೂ ಕಿರಿಯರ ತಕ್ಷಣದ ಸಲಹೆಯೇ ಮುಖ್ಯ ಎನಿಸಿಬಿಡುತ್ತದೆ. ತಾನೊಬ್ಬನೇ ಪದ್ಮವ್ಯೂಹವನ್ನು ಹೊಕ್ಕು ಕುದುರೆಯನ್ನು ಬಿಡಿಸಿ ತರುತ್ತೇನೆ ಎಂಬ ಧೀರನುಡಿಯನ್ನಾಡಿದ ಪ್ರದ್ಯುಮ್ನ. ಅವನಿಗೊಂದು ಅವಕಾಶ ಕೊಟ್ಟುನೋಡುವುದು ಒಳ್ಳೆಯದು ಎನಿಸಿತು.     ಅಷ್ಟರಲ್ಲಿ ಬಳಿಬಂದ ಕರ್ಣಸುತ ವೃಷಕೇತು “ಇಂದಿನ ಯುದ್ಧವಿದು ನನ್ನನ್ನು ಸೆಳೆಯುತ್ತಿದೆ. ಶತ್ರುಸೇನೆಯನ್ನು ಪುಡಿಗಟ್ಟಿ ಕುದುರೆಯನ್ನು ತಾರದೇ ಹೋದರೆ ನಾನು ಕರ್ಣನಿಗೆ ಜನಿಸಿದವನೇ ಅಲ್ಲ” ಎಂದ. ಪ್ರದ್ಯುಮ್ನನ ಮಾತಿಗಿಂತಲೂ ಇವನ ಮಾತಿನಲ್ಲಿ ಬಿರುಸು ಅಧಿಕವಿದೆ ಎನಿಸಿತು. ಅವನನ್ನೇ ಕಳುಹಿಸಿಕೊಟ್ಟೆ ಸುಧನ್ವನಿಗೆ ಎದುರಾಗಿ.     ಯುದ್ಧಕ್ಕೆ ಹೋದ ವೃಷಕೇತುವಿನ ಗುರುತು ಮೊದಲಿಗೆ ಸಿಗಲಿಲ್ಲ ಸುಧನ್ವನಿಗೆ. ಕೇಳಿದ. “ನೀನಾರು? ಯಾರ ಮಗ? ಯಾವ ಕುಲ ನಿನ್ನದು?”     ಕುಲದ ಪ್ರಶ್ನೆಯೆತ್ತಿದ್ದಕ್ಕೆ ಘಟಾನುಘಟಿಗಳ ಎದುರೇ ಸಿಡಿದುನಿಂತವನು ಕರ್ಣ. ಅವನ ಮಗನಾದ ವೃಷಕೇತುವಿನಲ್ಲಿಯೂ ಕಾಣಿಸಿಕೊಂಡಿತು ಅದೇ ಬಗೆಯ ಅಸಮಾಧಾನ, ಸುಧನ್ವ ಪ್ರಶ್ನೆ ಕೇಳಿದಾಗ. “ನಯನಕ್ಕೆ ಅಗೋಚರವಾಗಿರುವ ಹೂವೊಂದು ಪರಿಮಳವನ್ನು ಪಸರಿಸುತ್ತದೆ. ಕುಲ ಯಾವುದು ಎನ್ನುವುದು ಅರಿವಿಗೆ ಬರಬೇಕಾದದ್ದು ಪೌರುಷದಿಂದಲೇ ಹೊರತು ಬೇರಾವುದರಿಂದಲೂ ಅಲ್ಲ. ನಿನಗೆ ನನ್ನ ಗುರುತು ಇಲ್ಲವೆಂದ ಮಾತ್ರಕ್ಕೆ ನಾನು ಪರಾಕ್ರಮ ತೋರಿಸದೇ ಇರುವವನಲ್ಲ” ಎಂದ ಕರ್ಣತನಯ.     ನನಗವನ ಮಾತು ಸರಿಯೆಂದು ತೋರಿತು. ಕುಲದ ಪ್ರಶ್ನೆಯನ್ನು ಮುಂದಿಟ್ಟುಕೊAಡು ಅವಕಾಶವನ್ನು ಕೊಡುವುದಾಗಲೀ, ಅವಕಾಶವನ್ನು ನಿರಾಕರಿಸುವುದಾಗಲೀ ಸರಿಯಲ್ಲ. ಕುಲವನ್ನು ಇನ್ನೊಬ್ಬರು ಹೇಳಿಕೊಳ್ಳಬೇಕಾದ ಅಗತ್ಯವೂ ಇಲ್ಲ.    ಯುದ್ಧಕ್ಕಿಳಿದರು ಸುಧನ್ವ ವೃಷಕೇತು. ಇದ್ದವರೆಲ್ಲರೂ ಅಚ್ಚರಿಯಿಂದ ನೋಡುವ ತೆರದಲ್ಲಿ ಶೌರ್ಯಭರಿತವಾಗಿ ಕದನ ನಡೆಯಿತು. ಹಂಸಧ್ವಜಸುತ ಪ್ರಯೋಗಿಸಿದ ಬಾಣಗಳು ಕರ್ಣಸುತನ ಶರೀರದೆಲ್ಲೆಡೆ ನಾಟಿ ಅವನನ್ನು ಅತೀವವಾಗಿ ಜರ್ಜರಿತಗೊಳಿಸಿದವು. ಪ್ರಜ್ಞೆ ಕಳೆದುಕೊಂಡ ವೃಷಕೇತು. ಸುಧನ್ವನ ಗೆಲುವಿಗೆ ಪ್ರಜ್ಞೆಬಂತು. ರಥವನ್ನು ತಿರುಗಿಸಿದ ಸಾರಥಿ ವೃಷಕೇತುವಿನ ಜೀವವನ್ನು ಉಳಿಸಿದ.    ಆಗಲೇ ಸುಧನ್ವನೆದುರು ಹೋಗಿ ಕದನಕ್ಕೆ ಮನಮಾಡಿದ ಪ್ರದ್ಯುಮ್ನ. ಎಂಟು ಬಾಣಗಳು ಸಿಡಿದು ಬಂದವು ಕೃಷ್ಣಪುತ್ರನೆಡೆಗೆ, ಹಂಸಧ್ವಜಪುತ್ರನ ಬಿಲ್ಲಿನಿಂದ. ಪ್ರದ್ಯುಮ್ನನೂ ಅದೇ ಬಗೆಯ ಉತ್ತರವಿತ್ತ. ಅವನ ಪ್ರತಿಕ್ರಿಯೆಯನ್ನು ಸಹಿಸುವುದಕ್ಕಾಗಲಿಲ್ಲ ಸುಧನ್ವನಿಗೆ. “ಕೃಷ್ಣಸುತ ನೀನೆಂದು ಇದುವರೆಗೂ ಸಹಿಸಿದೆ. ಇನ್ನು ನಾನು ಸಹಿಸುವವನಲ್ಲ. ನನ್ನ ಬಾಣವದು ಬಾಯಾರಿದೆ. ನಿನ್ನೊಡಲಲ್ಲಿ ಕೆಂಪುಜಲವಿದೆ. ನನ್ನ ಬಾಣಕ್ಕೆ ಆ ಜಲವನ್ನು ಕುಡಿಸದೆ ಬಿಡುವವನಲ್ಲ” ಎಂದು ಹೇಳುತ್ತಲೇ ಪ್ರದ್ಯುಮ್ನನ ಬಾಣವನ್ನು ಏಳು ತುಂಡುಗಳಾಗಿ ಕತ್ತರಿಸಿದ. ಸುಧನ್ವ ಶೌರ್ಯದ ಮುಂದೆ ಪ್ರದ್ಯುಮ್ನ ಪರಾಕ್ರಮವದು ಕಳೆಗುಂದಿತು.     ಸುಧನ್ವನನ್ನು ಸೋಲಿಸದೆಯೇ ಮರಳುವವರಲ್ಲ ಎಂದು ವೀರಾವೇಷದಿಂದ ಹೋದ ಕೃತವರ್ಮ ಸೋಲಿನ ಮುಖ ಹೊತ್ತು ಮರಳುವಂತಾಯಿತು. ಅನುಸಾಲ್ವನ ಸಾಮರ್ಥ್ಯವದು ಸಾಲದೇ ಹೋಯಿತು. ನಮ್ಮ ಸೇನೆಯನ್ನು ಸಂಪೂರ್ಣವಾಗಿ ಸೂರೆಗೊಳ್ಳುವ ಹುಮ್ಮಸ್ಸಿನಲ್ಲಿದ್ದಾನೆ ಆತ ಎನ್ನುವುದು ಗೊತ್ತಾಗುತ್ತಿತ್ತು. ನಮ್ಮ ಕಡೆಯ ವೀರಾಧಿವೀರರನ್ನು ಬಹುಬೇಗ ಕೊನೆಗಾಣಿಸಿ ಕ್ಷಿಪ್ರವಾಗಿ ಕೃಷ್ಣದರ್ಶನಗೈಯ್ಯುವ ಉತ್ಸುಕತೆ ಸುಧನ್ವನಲ್ಲಿ ಇದ್ದಂತಿತ್ತು. ಜೀವ ಕಳೆದುಕೊಂಡು ನೆಲದ ಮೇಲೆ ಬಿದ್ದಿದ್ದ ನಮ್ಮ ಸೇನೆಯ ಆನೆ ಕುದುರೆ ರಥ ಸೈನಿಕರು ಎಲ್ಲವೂ ಎಲ್ಲರೂ ಸಾರಿ ಸಾರಿ ಹೇಳುತ್ತಿದ್ದುದು ಗಗನದೆತ್ತರವಾಗಿದ್ದ ಸುಧನ್ವ ಪರಾಕ್ರಮವನ್ನು. ಬರಿಯ ಕೃಷ್ಣಭಕ್ತ ಇವನಲ್ಲ, ಯುದ್ಧದಲ್ಲಿ ಸರ್ವಶಕ್ತ ಎಂದೆನಿಸಿತು ನನಗೆ. ಆದರೂ ನನ್ನ ಶಕ್ತಿಗೆ ಸಮನಲ್ಲ ಎಂಬ ಮೇಲರಿಮೆಯ ಭಾವವೂ ಮೂಡಿತು.    ಇನ್ನು ನಾನು ಯುದ್ಧರಂಗವನ್ನು ಪ್ರವೇಶಿಸದಿದ್ದರೆ ಗೆಲುವು ದೊರೆಯುವಂಥದ್ದಲ್ಲ ಎಂದು ಹೇಳುತ್ತಿತ್ತು ನನ್ನ ಅಂತರಂಗ. ಸುಧನ್ವನನ್ನು ಎದುರಿಸಲು ಸಜ್ಜಾದೆ…      ಡಾ. ವಿಶ್ವನಾಥ ಎನ್ ನೇರಳಕಟ್ಟೆ         

Read Post »

ಇತರೆ, ಜೀವನ

“ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್

ವಿಶೇಷ ಸಂಗಾತಿ “ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್ ನಮ್ಮ ಪುಣ್ಯ ಭರತ ಭೂಮಿಯ ಹಳ್ಳಿಯೊಂದರಲ್ಲಿ ಓರ್ವ ರೈತ ವಾಸವಾಗಿದ್ದ. ಆತನ ಕೈಗಳು ಭೂಮಿಯಿಂದ ಆತನನ್ನು ಎಳೆದು ತೆಗೆದಂತೆ ತಿರುಚಿದ್ದವು ಆತನ ಬೆನ್ನು ಬಿಲ್ಲಿನಂತೆಬಾಗಿತ್ತು. ಅತ್ಯಂತ ವಯಸ್ಸಾಗಿದ್ದ ಆತ ಒಬ್ಬನೇ ವಾಸಿಸುತ್ತಿದ್ದ. ತನ್ನವರೆಲ್ಲರನ್ನು ಕಳೆದುಕೊಂಡ ಆತನಿಗೆ ಒಂಟಿ ಜೀವನ ಅಭ್ಯಾಸವಾಗಿತ್ತು.ಅದೊಂದು ಸುಗ್ಗಿಯ ದಿನ ಸತತವಾಗಿ ಕೆಲಸ ಮಾಡಿ ಮರಳಿಮನೆಗೆ ಬಂದ ಆತನ ದೇಹದಿಂದ ಬೆವರಿನ ವಾಸನೆ ಹಾಗೂ ಆತನ ಬಟ್ಟೆಗೆ ಮೆತ್ತಿದ ಹಸಿ ಮಣ್ಣಿನ ವಾಸನೆ ಇನ್ನಿಲ್ಲದಂತೆ ಅಂಟಿಕೊಂಡಿತ್ತು. ಮನೆಯ ಹಿತ್ತಲಿನ ಬಾವಿಯ ಬಳಿ ಕೈಕಾಲು ಮುಖವನ್ನು ತೊಳೆದ ಆತ ತನ್ನ ಸ್ನೇಹಿತನಿಗೂ ನೀರು ಕೊಟ್ಟು ಉಪಚರಿಸಿದ… ನಂತರ ಸ್ನೇಹಿತನೊಂದಿಗೆ ಅಡುಗೆಮನೆಯ ಮೇಜಿನ ಮೇಲೆ ಕುಳಿತ. ಮುಂಜಾನೆ ತಾನೇ ಮಾಡಿಟ್ಟ ಅಡುಗೆ ಅಲ್ಲಿತ್ತು.ತಟ್ಟೆಯಲ್ಲಿ ಬಡಿಸಿಕೊಂಡ ಆತ ಊಟವನ್ನು ಸೇವಿಸುವ ಮುನ್ನ ಎಂದಿನಂತೆ ತನ್ನ ತಲೆಯನ್ನು ಬಾಗಿಸಿ ಕೆಲ ಪ್ರಾರ್ಥನೆಯ ಮಂತ್ರಗಳನ್ನು ನಿಧಾನವಾಗಿ ಪಠಿಸಿದ. ನಂತರ ತನ್ನ ಜೊತೆಗೆ ಬಂದಿದ್ದ ಸ್ನೇಹಿತನೊಂದಿಗೆ ಕುಳಿತು ಊಟ ಮಾಡಿದ. ಊಟಕ್ಕೂ ಮುನ್ನ ತಮ್ಮ ರೈತ ಸ್ನೇಹಿತ ತಲೆಬಾಗಿ ಪ್ರಾರ್ಥನೆ ಮಾಡಿದ್ದನ್ನು ನೋಡಿದ ಆತನ ಸ್ನೇಹಿತನಿಗೆ ಇನ್ನು ತಡೆಯಲಾಗಲಿಲ್ಲ..ಗೆಳೆಯ… ಊಟಕ್ಕೆ ಮುನ್ನ ಪ್ರಾರ್ಥನೆಯ ಅಗತ್ಯ ಇದೆಯೇ? ಇದೆಲ್ಲವನ್ನು ನೀನು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಪಡೆದದ್ದು ಮತ್ತೇಕೆ ದೇವರನ್ನು ಪ್ರಾರ್ಥಿಸುವೆ ಎಂದು ಗೆಳೆಯನನ್ನು ಪ್ರಶ್ನಿಸಿದ.ತಾನು ಕುಳಿತುಕೊಂಡಿದ್ದ ಸಾಕಷ್ಟು ಶಿಥಿಲವಾಗಿದ್ದ ಕುರ್ಚಿಯಿಂದ ತುಸು ಮುಂದಕ್ಕೆ ಬಾಗಿದ ಆ ರೈತ ನಿಧಾನವಾಗಿ ಎದ್ದು ನಿಂತನು. ಕಿಟಕಿಯ ಬಳಿ ತೆರಳಿ ತನ್ನ ಎರಡು ಕೈಗಳನ್ನು ಬಳಸಿ ಕಿಟಕಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದನು. ಮುಖದಲ್ಲಿ ಪುಟ್ಟದಾದ ನಗುವೊಂದನ್ನು ಹೊತ್ತು ದೂರದಲ್ಲಿ ಕಾಣುತ್ತಿದ್ದ ತನ್ನ ಹೊಲವನ್ನು ಸ್ನೇಹಿತನಿಗೆ ತೋರಿಸಿ ಅತ್ಯಂತ ಶಾಂತವಾಗಿ ಹೇಳಿದ. ಗೆಳೆಯ…ನಾನು ಹೊಲದಲ್ಲಿ ಕೆಲಸ ಮಾಡಲು ಸಾಧ್ಯ, ಆದರೆ ಮಳೆ ಬರಿಸಲು ನನ್ನಿಂದ ಸಾಧ್ಯವಿಲ್ಲ. ನನಗೆ ಬೀಜವನ್ನು ಬಿತ್ತಲು ಸಾಧ್ಯ ಆದರೆ ಆ ಬೀಜಕ್ಕೆ ಮೊಳೆತು ಬೆಳೆ ಎಂದು ಅಜ್ಞಾಪಿಸಲು ಸಾಧ್ಯವಿಲ್ಲ. ನನ್ನ ಕೈಗಳು ಕೆಲಸವನ್ನು ನಿರ್ವಹಿಸುತ್ತದೆ ಎಂಬುದೇನೋ ಖಂಡಿತವಾಗಿಯೂ ನಿಜ, ಆದರೆ ಚಮತ್ಕಾರವನ್ನು ಮಾಡಲು ಅಗೋಚರ ಶಕ್ತಿಗೆ ಮಾತ್ರ ಸಾಧ್ಯ ಎಂದು ಹೇಳಿ ದೀರ್ಘವಾದ ಉಸಿರನ್ನು ತೆಗೆದುಕೊಂಡ.ಆತನ ಕಣ್ಣುಗಳಲ್ಲಿ ಪ್ರಶಾಂತತೆ ತುಂಬಿ ತುಳುಕುತ್ತಿತ್ತು.ಒಂದೆರಡು ಕ್ಷಣಗಳ ವಿರಾಮವನ್ನು ತೆಗೆದುಕೊಂಡ ಆತ ಇದೆಲ್ಲ ಚಮತ್ಕಾರವನ್ನು ಬೇರೊಬ್ಬರು  ಮಾಡುತ್ತಿದ್ದಾರೆ…. ಪ್ರಾರ್ಥಿಸುವ ಮೂಲಕ ನಾನು ನನ್ನ ಕೆಲಸ ಯಾವುದು ಎಂಬುದನ್ನು ಅರಿತುಕೊಳ್ಳುತ್ತೇನೆ. ಉಪಕಾರ ಸ್ಮರಣೆ ಮಾಡುವುದರ ಮೂಲಕ ನನ್ನ ಮೇಲೆ ಕೃಪೆಯನ್ನು ತೋರುವ ಆ ಭಗವಂತನನ್ನು ನಾನು ನೆನೆಯದಿದ್ದರೆ ಹೇಗೆ ? ಆದ್ದರಿಂದಲೇ ಆ ಕಾಣದ ಕೈಗಳಿಗೆ, ಅಗೋಚರ ಶಕ್ತಿಗೆ ಪ್ರಾರ್ಥನೆಯ ಮಾಡುವ ಮೂಲಕ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಇದು ನನ್ನ ಆದ್ಯ ಕರ್ತವ್ಯ ಎಂದು ತನ್ನ ಮಾತನ್ನು ಪೂರ್ಣಗೊಳಿಸಿದನು.ಆತ ಹೇಳಿದ ಮಾತುಗಳನ್ನು ನಾವೆಂದೂ ಮರೆಯಬಾರದು. ಎಲ್ಲರ ಬದುಕು ಅಷ್ಟೇ ಸರಳವಾಗಿ ಇರುವುದಿಲ್ಲ. ಅದರಲ್ಲೂ ಬಿರುಗಾಳಿ, ನೆರೆ, ಭೀಕರ ಕ್ಷಾಮ ಇದ್ದೇ ಇರುತ್ತವೆ. ರೈತನ ಬದುಕಂತೂ ಅನಿಶ್ಚಿತತೆಯ ಹಾದಿಯಲ್ಲಿ ಸಾಗುತ್ತದೆ. ಬಿತ್ತಿದ ಬೆಳೆಗೆ ಸಾಕಷ್ಟು ಮಳೆ ಬೀಳದೆ ಹೋಗಬಹುದು ಫಸಲು ಕೈಗೆ ಬರುವುದರಲ್ಲಿಯೇ ಹಾಳಾಗಿ ಹೋಗಬಹುದು ಫಸಲಿಗೆ ಒಳ್ಳೆಯ ಬೆಲೆ ಸಿಕ್ಕದೆ ಹೋಗಬಹುದು. ಆತನ ಹೊರೆಗಳು ಮತ್ತಷ್ಟು ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗುವುದು ಸಾಧ್ಯವಿಲ್ಲ…ಆದರೂ ಕೂಡ ಪ್ರತಿದಿನ ಮುಂಜಾನೆ ಆತ ಬೇಗನೆ ಏಳುವುದನ್ನು ತಪ್ಪಿಸುವುದಿಲ್ಲ. ತನ್ನ ಅನಿಶ್ಚಿತ ಬದುಕಿನ ಕುರಿತು ಆತನಿಗೆ ಬೇಸರವಿಲ್ಲ… ಆದರೂ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ತನಗೆ ಉಸಿರು ಕೊಟ್ಟದ್ದಕ್ಕಾಗಿ, ತನ್ನಲ್ಲಿ ಸಾಮರ್ಥ್ಯವನ್ನು ತುಂಬಿದ್ದಕ್ಕಾಗಿ ಮತ್ತೆ ತನ್ನ ಹೊಲದಲ್ಲಿ ತಾನು ನಡೆದು ಓಡಾಡಲು ಅವಕಾಶವನ್ನು ಕಲ್ಪಿಸಿದ್ದಕ್ಕಾಗಿ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ಅಂತಹ ಒಂದು ಶಾಂತವಾದ, ಸಂತೃಪ್ತವಾದ, ಕೃತಜ್ಞತಾ ಭಾವದ ಮನಸ್ಥಿತಿಯಲ್ಲಿ ಆತ ತನ್ನ ಬದುಕಿನಲ್ಲಿ ಅದೆಷ್ಟೇ ದೊಡ್ಡ ಪ್ರಮಾಣದ ಬಿರುಗಾಳಿ ಬೀಸಿದರೂ ಅಚಲವಾಗಿ ನಿಲ್ಲುವ ಸಾಮರ್ಥ್ಯವನ್ನು ಹೊಂದುತ್ತಾನೆ. ಸ್ನೇಹಿತರೆ, ಕೃತಜ್ಞತೆ ಎನ್ನುವುದು ನಮಗೆ ಬಲಹೀನತೆಯಾಗಿ ತೋರಬೇಕಾಗಿಲ್ಲ ಕೃತಜ್ಞತೆಯನ್ನು ತೋರುವುದು ಅಂಧ ವಿಶ್ವಾಸವಂತೂ ಖಂಡಿತವಾಗಿ ಅಲ್ಲ. ಎಲ್ಲಾ ಆಶಾಶ್ವತತೆಗಳ ನಡುವೆ ಅತ್ಯಂತ ವಿನಮ್ರತೆಯಿಂದ ರೂಪುಗೊಂಡ ಶಕ್ತಿ ಹಾಗೂ ಸಾಮರ್ಥ್ಯವೇ ಕೃತಜ್ಞತೆಯಾಗಿರುತ್ತದೆ. ಬದುಕಿನ ಅನಿಶ್ಚಿತತೆಗಳ ನಡುವೆಯೂ ಕೂಡ ನಮಗೆ ಬದುಕು ಕೊಟ್ಟ ಎಲ್ಲ ಅವಕಾಶಗಳನ್ನು ಗೌರವ ಪೂರ್ವಕವಾಗಿ ನೆನೆಯಲು ನಾವು ಆಯ್ದುಕೊಳ್ಳುವ ಒಂದು ವಿಧಾನವಾಗಿರುತ್ತದೆ. ಏನಂತೀರಾ ಸ್ನೇಹಿತರೆ ? ವೀಣಾ ಹೇಮಂತ್ ಗೌಡ ಪಾಟೀಲ್

“ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಕಾವ್ಯಯಾನ

“ಸಂಗಮ”ತೆಲುಗು ಕವಿತೆ,ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ “ಸಂಗಮ” ತೆಲುಗು ಕವಿತೆ, ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು  ಒಂದೊಂದು ಪದವನ್ನೇ ಆಯ್ದುಕೊಳ್ಳುತ್ತಾ  ಆಯ್ದುಕೊಳ್ಳುತ್ತಾ ಪುಟ್ಟಮಗು ಬೆಂಕಿಪೆಟ್ಟಿಗೆಯ ರೈಲುಗಾಡಿಯನ್ನು ತಯಾರುಮಾಡಿದಂತೆ ನಾನೊಂದುಬ ವಾಕ್ಯವನ್ನು ತಯಾರುಮಾಡುತ್ತೇನೆ ವಿಚಿತ್ರ?  ಅದು ತಯಾರಾದಕೂಡಲೇ ದ್ರವರೂಪವನ್ನು ಅಳವಡಿಸಿಕೊಳ್ಳುತ್ತದೆ ಅಷ್ಟೇಅಲ್ಲ, ಪ್ರವಾಹವೇಗದಿಂದ ಸಾಗುತ್ತದೆ ಅದರಜೊತೆಗೆ  ನಾನೋ, ನನ್ನಜೊತೆಗೆ ಅದೋ ತಿಳಿಯದಂತೆ ನಾವಿಬ್ಬರೂ ಕವನ ಸಮುದ್ರದಲ್ಲಿ   ಭೇಟಿ ಆಗುತ್ತೇವೆ ಮನಸ್ಸಿನಲ್ಲಿ ಸುಳಿಗಳು ತಿರುಗಿ ತಿರುಗಿ, ಕಟ್ಟೆ  ಒಡೆದು ಹಾಳೆಯ ಮೇಲೆ ಪ್ರವಹಿಸಿದ ನದಿ ಕವನ ಸಮುದ್ರದಲ್ಲಿ ಸೇರದೆ ಏನಾಗುತ್ತದೆ?  ವೈಯಕ್ತಿಕ ಭಾವನಗಳೆಲ್ಲವೂ ಕಳೆದುಕೊಂಡಿರುವೆನೆಂದು ನನ್ನವು ನನ್ನವಾಗದೆ ಹೋಗಿವೆ ಎಂದು ಯಾವುದೋ ಕೊರೆತೆಯಿಂದ , ಯಾವುದೊ ದಿಗಿಲಿನಿಂದ ಬೆಪ್ಪುಮೂರೇ ಹಾಕಿಕೊಂಡು  ಮುಗ್ಧವಾಗಿ ಗುಕ್ಕುಹಿಡಿಯುತ್ತೇನೆ ಆಗ ಕವನ ಸಮುದ್ರದಲ್ಲಿ  ಕದುಲುತ್ತಿರುವ ಒಬ್ಬ ಓದುಗ ಋಷಿ ನನ್ನನ್ನು  ಅಪ್ಪಿಕೊಂಡು ಸಂತೈಸುತ್ತಾನೆನೀನೀಗ ಕವಿ-ಎನ್ನುತ್ತಾನೆ ರಚನೆಯ – ರವಿಎನ್ನುತ್ತಾನೆ ನಿನ್ನದೆಂದುಕೊಳ್ಳುವುದು ನಿನ್ನದಲ್ಲ,  ಅದು ಸಾಮಾಜಿಕ- ಎನ್ನುತ್ತಾನೆ ನಿನ್ನ ಒಣ ಭಾವನೆಗಳು ಈಗ ಆಳಗಳನ್ನು ಅಳವಡಿಸಿಕೊಂಡು ವಿಸ್ತಾರಗೊಂಡು  ವಿಶ್ವವವೆಲ್ಲಾ ವ್ಯಾಪಿಸಿದ ಕವನವು – ಎನ್ನುತ್ತಾನೆ ಇಲ್ಲಿನೋಡು, ಈ ನೆಗೆಯುತ್ತಿರುವ ಅಲೆಗಳ ಆರ್ಭಟ? ನಿನ್ನ ಅಮೃತಮಯ ಸೃಜನಶೀಲತೆಯಲ್ಲಿ  ನಾನೀಗ ಅನಂತತ್ವವನ್ನು, ಅಮರತ್ವವನ್ನು ಪಡೆಯುತ್ತಿದ್ದೇನೆ- ಎನ್ನುತ್ತಾನೆ ಎನ್ನುತ್ತಲೇ- ಕರುಣೆಯಿಂದ ನನ್ನನ್ನು ದಡಕ್ಕೆ ಸೇರಿಸುತ್ತಾನೇ  ನಾನೊಂದು ಮೌನ ಸಮುದ್ರಯಾಗುತ್ತೇನೆ ಕವನದ ಸಮುದ್ರದ ಅಲೆಗಳು ನನ್ನಲ್ಲಿ ಎದ್ದು ಬೀಳುತ್ತಿರುತ್ತವೆ! ತೆಲುಗು ಮೂಲ : ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು

“ಸಂಗಮ”ತೆಲುಗು ಕವಿತೆ,ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು Read Post »

You cannot copy content of this page

Scroll to Top