ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ

ಪುಸ್ತಕ ಸಂಗಾತಿ ಡಾ. ಸಂಗಮೇಶ ಎಸ್. ಗಣಿ ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಮೌನ ಧ್ಯಾನಗಳ ಫಲ ಮೌನೇಶ್ ರ ‘ಬಿಸಿಲೇ ಬೆಳದಿಂಗಳು’        ಬಯಲು ಸೀಮೆಯ ಬಿಸಿಲನ್ನು ಬೆಳದಿಂಗಳಾಗಿಸುವ ಆಶಯವನ್ನು ಹೊತ್ತುಕೊಂಡಿರುವ ಕವಿ ಬಡಿಗೇರ ಮೌನೇಶ್ ಅವರ ‘ಬಿಸಿಲೇ ಬೆಳದಿಂಗಳು’ ಕವನ ಸಂಕಲನವು ಮಾನವ ಕುಲದ ಬೇಗುದಿಗಳನ್ನು ಬಯಲು ಮಾಡುತ್ತಲೇ ಬಾಳಿನಲ್ಲಿ ಬೆಳದಿಂಗಳಾಗುವ ಹಂಬಲವನ್ನು ಪ್ರಕಟಿಸುತ್ತದೆ.       ಬಿಸಿಲೇ ಬೆಳದಿಂಗಳಲ್ಲಿ ಒಟ್ಟು 36 ಕವಿತೆಗಳಿವೆ. ಇಲ್ಲಿ ಪ್ರೀತಿ, ಪ್ರೇಮ, ವಿರಹ, ಸ್ನೇಹ, ಅಪ್ಪ-ಅಮ್ಮ ಮಗಳು,ಮನುಷ್ಯ ಸಂಬಂಧಗಳು, ಮನುಷ್ಯನ ಮುಖವಾಡ, ಮನಸ್ಸಿನ ಸಂಕಟ, ತಲ್ಲಣ, ತಳಮಳ, ಕನಸು ಕನವರಿಕೆ, ಪರಿಸರ,  ನಾಡು ನುಡಿ ಅಭಿಮಾನ, ಯುದ್ಧ, ಬುದ್ಧ,  ಅಂಬೇಡ್ಕರ್, ಸ್ತ್ರೀ ಸಂವೇದನೆ, ಮನಸ್ಸಿನ ವೇದನೆ, ಸಂಕಟ, ಸಂಭ್ರಮ, ಸಂಘರ್ಷ, ಬದುಕು, ಬೆಳಕು ಎಲ್ಲವೂ ಇವರ ಕಾವ್ಯಕ್ಕೆ ವಸ್ತುಗಳಾಗಿ ಒದಗಿ ಬಂದಿವೆ.         ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮುಖ್ಯ ಅವಸ್ಥೆಗಳಲ್ಲಿ ತಾರುಣ್ಯವೂ ಒಂದು ಹೊಸ ಹುರುಪು ಮತ್ತು ಕನಸು, ಕನವರಿಕೆ, ಉನ್ಮಾದ ಉದ್ವೇಗಗಳೆಲ್ಲವೂ ಇರುವ ಈ ಹಂತದಲ್ಲಿ ಜಾಗರೂಕತೆ ಅಗತ್ಯ ಎಂಬುದನ್ನು ಅರಿತ ಕವಿತಾರುಣ್ಯಸಪ್ತಸಾಗರಗಳ ದಾಟಿಮುಗಿಲ ನಕ್ಷತ್ರಗಳ ತರುವವ್ಯರ್ಥ ಕನಸಲ್ಲಅವಕಾಶ ಸಿಕ್ಕರೆಆಕಾಶಕ್ಕೆ ಏಣಿ ಹಾಕುವಸಾರ್ಥಕ ಹೊಂಗನಸು  (ತಾರುಣ್ಯ) ಎಂದು ಹೇಳುತ್ತಲೇ ‘ಅದು ದೇಹ ಸಂಬಂಧಿಯಲ್ಲ ಆತ್ಮ ಮನಸುಗಳ ಬಂಧಿ, ಅಸಾಧ್ಯವ ಸಾಧ್ಯವಾಗಿಸುವ ಭಾವಾಂಬುಧಿ’ ಎನ್ನುತ್ತಾನೆ. ಅವಳಿಲ್ಲದೆ ಅವನಿಲ್ಲ. ಅವನಿಗೆ ಅವಳೇ ಎಲ್ಲ. ಅವಳೆಂದರೆ ಅವನ ಪಾಲಿಗೆ ಕವಿತೆ. ಕವಿತೆ ವ್ಯಾಖ್ಯಾನಕ್ಕೆ ಒಗ್ಗದ್ದು, ಹಾಗೆಯೇ ಅವಳೂ ಸಹ ಅರಿತಷ್ಟು ಆಳ, ಅರಿವಿಗೆ ನಿಲುಕದ ಅವಳು ನಿಗೂಢ. ಮೊದಲಲ್ಲಿ;   ಅವಳೆಂದರೆಎಂದೋ ಬರೆದು ಮುಚ್ಚಿಟ್ಟ ಅನಂತ ನೆನಪುಗಳು ತುಂಬಿದ್ದ ಆತ್ಮಕಥೆಯಂತೆಸನಿಹವಿದ್ದರೂ ಕೈಗೆಟುಕದ ಕೊನೆಯಾಗದ ಖುಷಿಯಂತೆ (ಅವಳೆಂದರೆ)     ಎನ್ನುವ ಕವಿಗೆ ಸನಿಹವಿದ್ದದ್ದೆಲ್ಲ ಸವಿಯಾದುದು, ಸಹ್ಯವಾದುದು. ಆತ್ಮಕಥೆಯಲ್ಲಿ ಎಲ್ಲ ವಿವರಗಳು ಆಪ್ತ, ನಿಚ್ಚಳ. ಅದೇ ರೀತಿಯಲ್ಲಿ ಆರಂಭದಲ್ಲಿ ಅವಳ ಸಾಮೀಪ್ಯ, ಸಖ್ಯ ಹಿತವಾದುದು. ಕ್ರಮೇಣ ಅವಳೆಂದರೆ ಬದುಕಿನ ಮರುಭೂಮಿಯ ಮರೀಚಿಕೆ, ಹಿಂಬಾಲಿಸುವ ನೆರಳು ಎಂಬಂತಾಗುತ್ತದೆ. ಕೊನೆಗೆ; ಅವಳೆಂದರೆಎಷ್ಟು ಬಾರಿ ಓದಿದರೂಅರಿವಿಗೆ ನಿಲುಕದಅರ್ಥವಾಗದ ಕವಿತೆಯಂತೆ (ಅದೇ)   ಎಂಬುದಾಗಿ ಶರಾ ಬರೆಯುವನು. ಆತ್ಮಕಥೆ ಮತ್ತು ಕಾವ್ಯ  ಪರಿಭಾಷೆಗಳಲ್ಲಿ ಪ್ರೇಮದ ಸ್ವರೂಪವನ್ನು ನಿರೂಪಿಸುವುದು ಇಲ್ಲಿ ವಿಶೇಷ. ಬದುಕಿನಲ್ಲಿ ಅವಳ ಇರುವಿಕೆ ಶ್ರಾವಣ ಮಾಸದಂತೆ ಸಂತಸ ಸಂಭ್ರಮವನ್ನು ಹೊತ್ತು ತರುತ್ತದೆ.   ಧನ್ಯನಾದೆ ಮಾನ್ಯನಾದೆ   ಗೆಳತಿ ನಿನ್ನ ಸನಿಹಕೆ    ಇಷ್ಟು ದಿನದ ವಿರಹ ಬೇಗೆ    ಎಲ್ಲ ಮರೆತೆ ಇಂದಿಗೆ (ಮತ್ತೆ ಬಂತು ಶ್ರಾವಣ) ಎನ್ನುವ ಕವಿಗೆ ಅವಳ ಸಾಮೀಪ್ಯದ ಸುಖದೊಳಗೆ ವಿರಹದ ಬೇಗೆಯಲ್ಲ ಆರಿ ತಣ್ಣಗಾಗುತ್ತದೆ. ಅವಳಿಗಾಗಿ ಪಟ್ಟ ಪಾಡು, ವೇದನೆಗಳೆಲ್ಲ ಈಗ ಮಾಯವಾಗಿದೆ. ಹಿಂದಿನದನ್ನೆಲ್ಲ ಮತ್ತೆ ಮರು ನೆನಪಿಸಿಕೊಳ್ಳುವುದು ಬೇಡ ಎಂದು ತಿಳಿದು ;ಕಳೆದ ಕಾಲದ ಮಾತದೇಕೆ ಲೆಕ್ಕವಿಲ್ಲದ ವೇದನಎಲ್ಲ ಮರೆಸಿ ಚಿಗುರಿ ನಿಂತುಮತ್ತೆ ಬಂತು ಶ್ರಾವಣ (ಅದೇ) ಎಂಬುದಾಗಿ ಹೇಳುತ್ತಾ, ಕಳೆದ ಕಾಲದ ನೆನಪುಗಳ ಗೊಡವೆಗೆ ಹೋಗದೆ ನೋವು ನಲಿವುಗಳನ್ನು ಸಮವಾಗಿ ಸ್ವೀಕರಿಸುವ ಸಮತೋಲನ ಭಾವ ಮುಖ್ಯ ಎಂಬುದನ್ನು ಅರುಹುತ್ತಾನೆ.  ನೀನು ಒಲವಿನೂರಿನ ಸಿರಿಯ ತೋರಲುಕೈಹಿಡಿದು ಹೊರಟೆನಾನು ಹಿಂಬಾಲಿಸಿದೆ (ಒಲವಿನ ಹಾದಿ) ಎನ್ನುವ ಕವಿಗೆ ‘ನನ್ನ ಮೌನಕ್ಕೆ ಮಾತಾಗಿ, ಮಾತುಗಳಿಗೆ ದನಿಯಾಗಿ ಸುಂದರ ಹಾಡಾದ ಪರಿ’ ಅನನ್ಯ. ಪ್ರೇಮದ ದಾರಿಯಲ್ಲಿ ನಡೆಯುವುದೇ ಸಿಹಿಯಾದ ಅನುಭೂತಿ. ‘ಒಲವು ನಡೆಸಿದ ಈ ಹಾದಿ ಖಂಡಿತ ಕಹಿಯಲ್ಲ ಹಿತವಾಗಿ ಕಾಡುವ ಇಂಪಾದ ಹಾಡು’ ಎನಿಸುತ್ತದೆ. ಹೀಗೆ ಪ್ರೇಮದ ಪರಿಯನ್ನು ಪರಿಚಯಿಸುವ ಕವಿಗೆ ಅದೊಂದು ಸುಂದರ ಅನುಭೂತಿ. ಕಾವ್ಯದ ಸಾಮಾಜಿಕ ಪ್ರಜ್ಞೆ   ಸಾಮಾಜಿಕ ಸನ್ನಿವೇಶಗಳೊಂದಿಗೆ ಸಂವಹಿಸದ ಸಾಹಿತ್ಯ ಸಾಯುತ್ತದೆ. ಈ ಹಿನ್ನೆಲೆಯಲ್ಲಿ ಕವಿ ಸಾಮಾಜಿಕ ಪ್ರಜ್ಞೆ ಮೆರೆಯುತ್ತಾನೆ. ದೇಶಕ್ಕಾಗಿ ದುಡಿಯುವ ಪ್ರಾಮಾಣಿಕ ಸೈನಿಕರ ಅಗತ್ಯತೆಯನ್ನು  ಪ್ರತಿಪಾದಿಸುವುದರ ಜೊತೆಗೆ ‘ಕದನ ಬಯಸುವ ಕೇಡಿಗಳಲ್ಲ ನಾವು ದೇಶದ ಏಳ್ಗೆಗೆ ನಿಷ್ಠೆಯಿಂದ ದುಡಿವ ಶ್ರಮ ಜೀವಿಗಳು’ (ನಾವು) ಎನ್ನುವುದು ವಿಶೇಷ. ಶಾಂತಿ ಕದಡುವ ಕಿಡಿಗೇಡಿಗಳೆಲ್ಲ ನಾವುಬಂಜರೆದೆಗಳ ಮೇಲೆಶಾಂತಿಯ ಹೂ ಗಿಡಗಳ ಬೆಳೆಸುವ ಕುಶಾಗ್ರಮತಿಗಳುಜಗಕೆ ಶಾಂತಿ ಸಾರುವ ಭಾರತೀಯರು ನಾವು (ಅದೇ)     ದೇಶಭಕ್ತಿ,  ಅಭಿಮಾನ, ರಾಷ್ಟ್ರಪ್ರೇಮ ಎನ್ನುವುದು ಬರೀ ಮಾತು ಭಾಷಣಗಳಿಗೆ ಸೀಮಿತವಾಗದೆ ಅದು ಬದುಕಿನ ಭಾಗವಾಗಬೇಕೆಂಬ ಅದಮ್ಯ ಬಯಕೆ ಕವಿಯದು. ಸೈನಿಕರ ತ್ಯಾಗ, ಬಲಿದಾನಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ಬದಲಾಗಿ ಸಾರ್ಥಕ ಭಾವವಾಗಿ ಜೀವ ಚೈತನ್ಯವಾಗಿ ಮನಸ್ಸಿನಾಳದಲ್ಲಿ ಜೀವಂತವಾಗಿರುತ್ತವೆ . ಹೀಗಾಗಿ ಕವಿವ್ಯರ್ಥವಾಗದು ಬಲಿದಾನ ಸಾರ್ಥಕವು ಪ್ರಾಣಾರ್ಪಣ (ಅಮರ ನಿಮ್ಮ ಜೀವನ)  ಎಂದು ಹೆಮ್ಮೆ,  ಅಭಿಮಾನದಿಂದ ಹೇಳುತ್ತಾನೆ. ಬಂಜರಾದ ಎದೆಗಳಲ್ಲಿ ಶಾಂತಿಯ ಹೂಗಳನ್ನು ಅರಳಿಸುವ ಮಹತ್ವಾಕಾಂಕ್ಷೆ ಪ್ರಕಟಿಸುವ ಕವಿತೆ ಹೃದಯದಲ್ಲಿ ವಿಕೃತಿ ವಿಕಾರ ವಿಲಕ್ಷಣಗಳಿಗೆ ಜಾಗವಿಲ್ಲ. ಯುದ್ಧದ ಭೀತಿಯಲ್ಲಿ ಕರಾಳ ಕತ್ತಲೆಯಲ್ಲಿ ಅಮಾಯಕರ ನೋವು, ನರಳಾಟಕ್ಕೆ ಕೊನೆ ಇರುವುದಿಲ್ಲ. ಇಂತಹ ವಿಷಮ ಗಳಿಗೆಯಲ್ಲಿಯೇ ಕವಿ ಮಾನವೀಯತೆಗಾಗಿ ಹಂಬಲಿಸುವುದು;  ಅಮಾನುಷ ಹಿಂಸೆಗೆ ಸಿಕ್ಕ ಅಮಾಯಕ ಗಾಯಾಳುಗಳ ಕಂಡು ಮರುಗಿದ ಮಮತಾಮಯಿ….ಜೀವ ಕಾರುಣ್ಯದ ಮಡುವು.. (ಆರದ ದೀಪ) ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ನೆನಪಿಸುವ ಕವಿ ಈ ಕರಾಳ ಕತ್ತಲಮಯ ಜಗತ್ತಿಗೆ ಆರದ ದೀಪವಾಗಿ ಒದಗಿ ಬರಬೇಕು ಎಂದು ಆಶಿಸುತ್ತಾನೆ.    ಜಾತಿ ಮತ ಪಂಗಡ ಇವೆಲ್ಲವೂ ಈ ಸಮಾಜಕ್ಕೆ ಅಂಟಿದ ರೋಗಗಳು. ಇವು ಎಂದಿಗೂ ಮನುಷ್ಯ ಬದುಕನ್ನು ನುಂಗಿ ನೀರು ಕುಡಿಯುತ್ತಿವೆ.   ಆಪೋಷಣೆ ಮಾಡುತ್ತಿವೆ. ಇಡೀ ವಿಶ್ವವೇಒಂದು ಗೂಡಾದರೆ ಎಷ್ಟು ಚೆಂದ! ಕೂಡಿ ಬದುಕಿದರೆ ಅದರೊಳಗೆ ಜಗದ ಜನರಲ್ಲ ಭೇದ ವಿರದ ಹಕ್ಕಿಗಳ ಹಾಗೆ ಎಷ್ಟು ಚಂದ! (ಎಷ್ಟು ಚಂದ!) ಎಂಬುದಾಗಿ ಸೌಹಾರ್ದ, ಸಹಬಾಳ್ವೆಗೆ ಹಂಬಲಿಸುವ ಕವಿ ಸಮಾಜ, ದೇಶ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವನ್ನೂ ಸೂಚಿಸುವುದು ಹೀಗೆ;  ಶೋಷಣೆ ವರ್ಣದ್ವೇಷಗಳ ಪೊರೆ ಕಳಚಿಯುದ್ಧ, ಭಯೋತ್ಪಾದನೆಗಳ ಭಯ ಬಿಡಿಸಿಧರ್ಮಾoಧತೆ, ಕೋಮುದಳ್ಳುರಿಯ ದಹಿಸಿ ಅಸಮಾನತೆಯ ತೆರೆಸರಿಸಿ ಸಮಾನತೆಯ ರೆಕ್ಕೆಗಳ ಚಾಚಿ ಸ್ವೇಚ್ಛೆಯಲಿ ಹಾರಿದರೆ ಸ್ವಚ್ಛoದ ಮುಗಿಲೆತ್ತರ ನಾವೆಲ್ಲ (ಅದೇ)   ಎನ್ನುವುದು ವಿವೇಚನಾರ್ಹ. ಸಮಾಜದ ಅನೇಕ ಸಮಸ್ಯೆಗಳಿಗೆ ಬುದ್ಧ, ಬಸವ, ಪಂಪ, ಗಾಂಧೀಜಿ, ಅಂಬೇಡ್ಕರ್, ಮದ್ದಾಗಿ ಒದಗುತ್ತಾರೆ. ಈ ಬಗ್ಗೆ ಕವಿ ದಮನಿತರಿಗೆ, ದಲಿತರಿಗೆ ದನಿಯ ನೀಡಿದ ದ್ರಷ್ಟಾರಜಾತಿ ಗೋಡೆಯ ಕುಟ್ಟಿ ಕೆಡವಲು ಕರೆಯಕೊಟ್ಟ ದಿಟ್ಟ ಧೀರ  ‘ತುಳಿಯುವವರ ನೆತ್ತಿಯ ಮೇಲೆ ಕಾಲಿಟ್ಟು ಬೆಳೆದೆ ಬಲು ಎತ್ತರ’ (ದಮನಿತರ ನೇಸರ) ಎಂಬುದಾಗಿ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವನು. ಅಲ್ಲದೆ ಅವರನ್ನು ‘ನೊಂದು ಬೆಂದವರೆದೆಗೆ ಭರವಸೆಯ ಬಿತ್ತಿದ ಮಾನವತೆಯ ಆಗರ..’ ಎಂಬುದಾಗಿ ಬಣ್ಣಿಸುವನು. ದೇವರನ್ನೇ ದೂರುವ ಧೈರ್ಯದಿಂದ ಪ್ರಶ್ನೆ ಮಾಡುವ ಕವಿ ಅವತರಿಸಿ ಬರುವುದಾದರೆ, ಚಳಿಗಾಳಿಗೆ ಮೈಯೊಡ್ಡಿ ದುಡಿಯುವ ಬಡವರ ಗೋಳು ನೋಡಲು ಬಾ ಎಂದು (ಅವತರಿಸಿ ಬಾ) ಕರೆಯುವುದು ಕವಿಯ ಸಾಮಾಜಿಕ ಕಳಕಳಿಯ ದ್ಯೋತಕವಾಗಿದೆ. ಗಾಂಧೀಜಿ ಅಪಮೌಲ್ಯಕ್ಕೆ ಒಳಗಾಗುತ್ತಿರುವ ಈ ಹೊತ್ತಿನಲ್ಲಿ ಕವಿ ಪ್ರಿಯ ಗಾಂಧಿ!ನೀನು ಹುಟ್ಟಿದ ದಿನ ಮಾತ್ರ ನೆನೆಯುತ್ತೇವೆ ನಿನ್ನ, ತತ್ವಸಾರವನನುಪತ್ರಿಕೆಯ ಲೇಖನಗಳಲಿ ವೇದಿಕೆಯ ಭಾಷಣಗಳಲಿ.. (ಪ್ರಿಯ ಗಾಂಧಿ) ತತ್ವಾನುಷ್ಠಾನದ ಅಗತ್ಯತೆಯನ್ನು ಮನಗಾಣಿಸುತ್ತಾರೆ. ಧರ್ಮ ಒಂದು ಬಗೆಯ ಅಫೀಮು. ಅದು ಎಲ್ಲರನ್ನೂ ಮಂಪರು ಮಾಡುತ್ತಿದೆ. ಧರ್ಮ ಮಾನವ ಒಳಿತಿಗಿರಬೇಕೆ ಹೊರತು ಕೇಡಿಗಲ್ಲ. ನಮಗೆ ಎಂಥ ಮನುಷ್ಯರ ಅಗತ್ಯವಿದೆ ಎಂಬುದನ್ನುಧರ್ಮದ ಅಫೀಮನ್ನು ತಲೆಗೇರಿಸಿಕೊಡುದ್ವೇಷದ ಕಿಡಿ ಉಗುಳುವವ್ಯಗ್ರ ಮನುಷ್ಯರಲ್ಲ ನಮಗೆ ಬೇಕಿರುವುದು…. (ನಮಗೆ ಬೇಕಿರುವುದು) ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನುಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಬುದ್ಧನಂಥ ಕರುಣಾಮಯಿಗಳ ಅವಶ್ಯಕತೆ ಇದೆ. ಎಂಬುದನ್ನು ಸಾರಿದ್ದಾನೆ. ಸಾಮರಸ್ಯದ ಬಾಳಿಗೆ ಸಹನೆ, ಸೌಹಾರ್ದತೆ ಅತ್ಯಗತ್ಯ.  ಸಹನೆ, ಸೌಹಾರ್ದತೆಗಳಿಲ್ಲದ ಬರಡು ಹೃದಯದೊಳಗೆ ಹರಿದಾಡಿಹಸಿರು ಚಿಗುರಿ ಜೀವ ತುಂಬಿ ಸಮೃದ್ಧವಾಗಿ ತೊನೆಯಲು ಮನಸ್ಸು ನದಿಯಾಗಬೇಕು (ಮನಸ್ಸು ನದಿಯಾಗಬೇಕು) ತನ್ನೆಲ್ಲಾ ಮಿತಿಗಳನ್ನು ಮೀರಿಕೊಳ್ಳಲು ಮನುಷ್ಯ ನದಿಯಾಗಬೇಕು ಎಂದು ಆಶಿಸುವುದು ಬಹಳ ದೊಡ್ಡ ಮೌಲ್ಯ.  ಕಾವ್ಯದಲ್ಲಿ ಜೀವನ ಜಿಜ್ಞಾಸೆ      ಈ ಜೀವನವೇ ಸೋಜಿಗ ಅರ್ಥಮಾಡಿಕೊಳ್ಳಲು ಹೋದಷ್ಟು ನಿಗೂಢ. ಆದ್ದರಿಂದ ಕವಿಗೂ ಈ ಜಿಜ್ಞಾಸೆ ತೀವ್ರವಾಗಿ ಕಾಡಿದೆ.ಓ ಬದುಕೇ!ಎಷ್ಟೊಂದು ವಿಸ್ಮಯ ನಿನ್ನೊಡಲು ಆಳ ವಿಸ್ತಾರಗಳರಿಯದ ಕಡಲು! (ಓ ಬದುಕೇ! ) ಅನೇಕ ದಾರ್ಶನಿಕರು, ಸಾಧು ಸಂತರು, ಶರಣರು ಎಲ್ಲರೂ ಈ ಬದುಕಿನ ಬಗೆಯನ್ನು ಬೆದಕಿದವರೇ. ಆದರೆ ಅರ್ಥ ಮಾತ್ರ ಸಿಕ್ಕಿಲ್ಲ. ಈ ಬದುಕೇ ಅಚ್ಚರಿಯ ಆಗರ. ಮನುಷ್ಯ ಮುಖವಾಡಗಳನ್ನೇ ಹಾಕಿಕೊಂಡಿರುವುದರ  ಕುರಿತು ಕಳವಳಿಸುವ ಕವಿ, ಅದನ್ನು ಕಾಳಜಿ, ಪ್ರಾಮಾಣಿಕ, ಪರಿಶುದ್ಧ ಹೃದಯದಿಂದ,  ಮಾನವೀಯ ಅಂತಃಕರಣದಿಂದ ಬಾಳಬೇಕೆಂಬ ನಿಲುವನ್ನು ತಾಳುತ್ತಾನೆ. ಕರುಣೆಗಳೆಲ್ಲ ಕಕ್ಕುಲತೆಗಳೆಲ್ಲ ಮುಖವಾಡಗಳ ಗೋಸಂಬಿ ತನಕೆ ಮೋಸ ಹೋಗಿವೆನಿಷ್ಠೆ, ಪ್ರಾಮಾಣಿಕತೆಗಳು ದೆಸೆಗಟ್ಟು ಓಡುತಿವೆ ನಿಜ ಬದುಕಿಗೆಲ್ಲಿ ಬೆಲೆ (ಮುಖವಾಡದ ಬದುಕು) , ನ್ಯಾಯ, ನಿಷ್ಠೆ,  ಪ್ರಾಮಾಣಿಕತೆಗಳಿಂದಲೇ ಈ ಬದುಕಿಗೆ ಬೆಲೆ ಇಲ್ಲದಿದ್ದರೆ ಅದು ನಿರರ್ಥಕವಾಗುತ್ತದೆ ಎಂಬುದನ್ನು ಕವಿ ಸ್ಪಷ್ಟಪಡಿಸಿದ್ದಾನೆ. ಈ ಜೀವನ ಅನಿಶ್ಚಿತತೆ,  ಅಸ್ಥಿರತೆಗಳಿಂದ ಕೂಡಿದ್ದು, ಮನುಷ್ಯನನ್ನು ಕಂಗೆಡಿಸುತ್ತದೆ. ಆದರೆ ಧೃತಿಗೆಡದಂತೆ ಬಾಳಲು ಎಚ್ಚರಿಸುವ ಕವಿ ‘ಸೋತಷ್ಟು ಸತಾಯಿಸುವ ಬದುಕಿದು ಅತ್ತಷ್ಟು ಅಳಿಸುವ ಜಗವಿದು ಬೆದರದೆ ಬೆಚ್ಚಗೆ ಕಲ್ಲಾಗಿಸು ಎದೆಯ ತಿಳಿ ಈ ಸಮಯ ಸ್ಥಿರವಲ್ಲವೆಂಬ ನೀತಿಯ’ (ನೀರ ಮೇಲಣ ಗುಳ್ಳೆ) ಸಾರ್ವಕಾಲಿಕ ಸತ್ಯವನ್ನು ನುಡಿಯುತ್ತಾನೆ. ಬದುಕುವ ಛಲ ತುಂಬುತ್ತಾನೆ. ಅಲ್ಲದೆ ಈ ಜಗತ್ತಿನಲ್ಲಿ ವಿಚಿತ್ರ ಜನರು ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ.  ಕಾವ್ಯದಲ್ಲಿ ಸ್ತ್ರೀ ಚೇತನ      ಈ ಸಮಾಜದಲ್ಲಿ ವೇಶ್ಯೆಯರನ್ನು ಕಾಣುವ ದೃಷ್ಟಿಯೇ ಕೀಳಾದುದು. ಮೈಮಾರಿಕೊಂಡು ಬದುಕುವ ಹೆಣ್ಣಿನ ಬಗ್ಗೆ ಮರುಕ ಪಡುವ ಕವಿ ‘ಅವಳು ಬೀದಿಯಲ್ಲರಳಿ ಮಸಣಕೆ ಶೃಂಗಾರವಾದ ಮಸಣದ ಹೂ’ ಎಂಬುದಾಗಿ ಅವಳ ದಯನೀಯ ಸ್ಥಿತಿಯನ್ನು ಅನಾವರಣ ಮಾಡಿದ್ದಾನೆ.     ತಾಯಿಯು ತನ್ನ ಮಗುವನ್ನೇ ಬೆಳದಿಂಗಳು ಎಂದು ಭಾವಿಸುವ ಸಂಕಲನದ ಶೀರ್ಷಿಕೆಯುಳ್ಳ ಕವನ ‘ಬಿಸಿಲೇ ಬೆಳದಿಂಗಳು’ ಕವಿಯ ಸಂವೇದನಾಶೀಲತೆಗೆ ಸಾಕ್ಷಿ. ದುಡಿಮೆ ಮಾಡಿ ಮಗುವನ್ನು ಸಾಕುವ ಸಮಸ್ತ ತಾಯಂದಿರ ಕಷ್ಟ ಪರಂಪರೆಯನ್ನು ಕಣ್ಮುಂದೆ ತಂದು ನಿಲ್ಲಿಸುವ ಕವಿ ;ಸಿಕ್ಕತಂಗಳೆ ಮೃಷ್ಟಾನ್ನಬೀಸೋ ಗಾಳಿಯೇ ಸುವ್ವಾಲಿ ಹಕ್ಕಿಗಳುಲಿಯೇ ಗಿಲಗಿಂಚಿನಾದಬಿಸಿಲೇ ಬೆಳದಿಂಗಳವಗೆ… ( ಬಿಸಿಲೇ ಬೆಳದಿಂಗಳು ) ಪ್ರಕೃತಿಯ ಎಲ್ಲ ವ್ಯವಹಾರಗಳೂ  ಮನುಷ್ಯ ಬದುಕಿನ ಭರವಸೆಯಾಗಿ ಹಾಗೂ ಪ್ರಕೃತಿ ಮಾತೆಯೇ ಪುರುಷನ ಪೋಷಣೆಗೆ ನಿಂತಿರುವುದನ್ನು ತಿಳಿಸುವ ಕವಿ ಪುರುಷ ಮತ್ತು ಪ್ರಕೃತಿ ನಡುವಿನ ನಂಟನ್ನು ತಾಯಿ ಮಗುವಿನ ಸಂಬಂಧದೊಂದಿಗೆ ಸಮೀಕರಿಸಿ ಒಂದು ರೂಪಕದ ಮೂಲಕ ಕಟ್ಟಿಕೊಟ್ಟಿರುವುದು ಗಮನಾರ್ಹ.     ಮೌನ ಮತ್ತು ಧ್ಯಾನಗಳ ಮೂಲಕ ಕವಿತ್ವವನ್ನು ದಕ್ಕಿಸಿಕೊಳ್ಳುತ್ತಿರುವ ಮೌನೇಶ್ ಅವರು ಬಾಳಿನಲ್ಲಿರುವ ಬಿಸಿಲನ್ನೇ ಬೆಳದಿಂಗಳಾಗಿ ಭಾವಿಸುವ ಧನಾತ್ಮಕ ನಿಲುವು ಮತ್ತು ಆಶಯವನ್ನು ಪ್ರಕಟಿಸಿರುವುದು ವಿಶೇಷ. ಅವರಿಗೆ ಶುಭವಾಗಲಿ. ಡಾ. ಸಂಗಮೇಶ ಎಸ್. ಗಣಿಕನ್ನಡ ಪ್ರಾಧ್ಯಾಪಕರು, ಬೆಂಗಳೂರು.ಮೊಬೈಲ್ :9743171324

ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ್‌ ಗಜಲ್ ಕೂಡಿಟ್ಟ ದುಃಖವ ಹೊರ ಹಾಕಿದ್ದೇನೆ ನೀ ಕಂಡ ಕ್ಷಣದಲ್ಲಿಹಿಡಿದಿಟ್ಟ ನೋವಿನಿಂದ ಅತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕು ಶೂನ್ಯತೆಯ ಭಾವ ಮರೆಸಿ ಹೊಸತನ ಮೂಡಿಸಿದೆ ಈಗನೀ ಬಿಟ್ಟ ಸವಿ ನೆನಪುಗಳಿಂದ ನಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಎಷ್ಟೋ ಮಾತುಗಳು ಹೇಳದೆ ಮೌನದಲ್ಲಿ ಮರೆಯಾಗಿವೆನೋಡಬಾರದೆಂದಾಗಲೇ ಸಿಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಆಗಸದ ನಕ್ಷತ್ರಕ್ಕೂ ಒಮ್ಮೊಮ್ಮೆ ಕರಿಛಾಯೆ ಬಿಳಬಹುದು ಉಸಿರು ಬಿಗಿ ಹಿಡಿದು ಬದುಕಿ ಸತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕಿನ ರಂಗಮಂದಿರದಲ್ಲಿ ಅವನೇ ಖಳನಾಯಕನಂತಾಗಿಹರೇಖೂ ಬಾಳ ನೌಕೆಯಲಿ ಗೆದ್ದು ಸೋತಿದ್ದೇನೆ ನೀ ಕಂಡ ಕ್ಷಣದಲ್ಲಿ ಡಾ.ರೇಖಾಉದಯ್

ಡಾ.ರೇಖಾ ಉದಯ್‌ ಅವರ ಗಜಲ್ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-23 ಅರ್ಜುನ ಉವಾಚ ವಿಶ್ವನಾಥ ಎನ್‌ ನೇರಳೆಕಟ್ಟೆ ನನ್ನ ಆತ್ಮಬಂಧು ಕೃಷ್ಣ ಬಂದನಂದು ನಾನೀಗ ಸುಧನ್ವನ ಎದುರು ನಿಂತಿದ್ದೆ. ಅವನ ಹೋರಾಟದ ಪರಿಯನ್ನು ಇದುವರೆಗೂ ಕಂಡಿದ್ದ ನಾನು ಈಗ ಅವನನ್ನು ತೀರಾ ಸನಿಹದಿಂದ ಕಂಡೆ. ನನಗೆ ಎಷ್ಟರವನಿವನು ಎನಿಸಿತು. ನನ್ನ ಯುದ್ಧಾನುಭವವೇನು! ಇವನ ವಯಸ್ಸೇನು! ಹೋರಾಡಬೇಕೇ ನಾನಿವನಲ್ಲಿ! ನಾನು ಗೆಲುವನ್ನು ಪಡೆಯುವುದಂತೂ ದಿಟ. ಗೆದ್ದರೂ ಸಣ್ಣವನೆದುರು ಗೆದ್ದಂತಾಗುತ್ತದಷ್ಟೇ. ಒಂದು ವೇಳೆ ಅಪ್ಪಿತಪ್ಪಿ ಸೋತೆನೆಂದಾದರೆ ಯುದ್ಧಾನುಯುದ್ಧಗಳನ್ನು ಗೆದ್ದ ಆ ಕಲಿ ಪಾರ್ಥ ಕದನದಭನುವವೇ ಇಲ್ಲದವನ ಎದುರು ಸೋತನಂತೆ ಎಂಬ ಸುದ್ದಿ ಹಬ್ಬುತ್ತದೆ. ಈ ಯುದ್ಧ ನನ್ನ ಯೋಗ್ಯತೆಗೆ ಸಲ್ಲುವಂಥದ್ದಲ್ಲ. ಇವನನ್ನು ಬೆದರಿಸಿಯೇ ಇಲ್ಲಿಂದ ತೊಲಗಿಸುವುದೊಳಿತು ಎನಿಸಿತು. ಅದು ನನ್ನೊಳಗಿನ ಅಹಂಕಾರದಿಂದ ಉದ್ಭವಿಸಿದ ಯೋಚನೆಯೋ, ನನಗದರ ಅರಿವಿಲ್ಲ.ದೊಡ್ಡ ಧ್ವನಿಯಲ್ಲಿ ಆರ್ಭಟಿಸಿದೆ ಸುಧನ್ವನಲ್ಲಿ. “ನನ್ನೊಡನೆ ಯುದ್ಧವನ್ನೇಕೆ ಬಯಸಿರುವೆ! ನೀನು ನಿಜಕ್ಕೂ ಅಪ್ರಬುದ್ಧ. ನನ್ನಂಥ ಪ್ರಸಿದ್ಧನೆದುರು ನಿನ್ನ ಹೋರಾಟವೇತಕ್ಕೆ! ನಿಮ್ಮ ಪಾಳಯದಲ್ಲಿ ಯಾರಾದರೂ ರಣ ಪರಾಕ್ರಮಿಗಳಿದ್ದರೆ ಅವರನ್ನು ಕಳುಹಿಸು ನನ್ನೆದುರು. ದ್ರೋಣ, ಭೀಷ್ಮ, ಕರ್ಣ ಮೊದಲಾದ ಘಟಾನುಘಟಿಗಳೇ ನನ್ನೆದುರು ಸೋತುಹೋಗಿದ್ದಾರೆ. ಈಗಲಾದರೂ ಇಲ್ಲಿಂದ ಹೊರಟುಹೋಗು. ಪ್ರಾಣ ಉಳಿಸಿಕೋ” ಎಂದು ಹೀಯಾಳಿಸಿದೆ.ಅದು ಆ ಕ್ಷಣಕ್ಕೆ ನಾನು ಪ್ರಯೋಗಿಸಿದ ಯುದ್ಧತಂತ್ರವೂ ಹೌದು. ಹಿಂದಣ ಸಾಧನೆಯನ್ನು ಮುಂದಿಟ್ಟುಕೊAಡು ಶತ್ರು ಸುಧನ್ವನ ಎದೆಬಲವನ್ನು ಕುಂದಿಸುವ ಯತ್ನ ಮಾಡಿದೆ. ನನ್ನ ಮಾತುಗಳಷ್ಟೂ ನಿಷ್ಪçಯೋಜಕವೆನಿಸಿದವು ಅವನ ಎದುರಲ್ಲಿ. ಶೌರ್ಯವದು ಅವನದು ಕಿರಿದಾಗಲಿಲ್ಲ. ಇಮ್ಮಡಿಸಿತು.ಪ್ರತಿಮಾತಿನಿಂದ ನನ್ನನ್ನು ಚುಚ್ಚಿದ. “ಕೌರವ ಸೇನೆಯ ವೀರರನ್ನು ನೀನು ಗೆದ್ದದ್ದು ನಿನ್ನ ಶಕ್ತಿಯಿಂದಲ್ಲ; ನಿನ್ನ ಸಾರಥಿಯಾಗಿದ್ದ ಆ ಶ್ರೀಕೃಷ್ಣನ ಬಲದಿಂದ. ಅವನಿಲ್ಲದೆ ನಿನಗಾವ ಗೌರವವಿದೆ ಈ ಧರೆಯಲ್ಲಿ! ಮೊದಲು ಕೃಷ್ಣನನ್ನು ಕರೆಸಿಕೋ. ನನ್ನನ್ನು ಜಯಿಸುವುದು ನಿನ್ನಿಂದ ಆಗುವಂಥದ್ದಲ್ಲ. ಗೆಲ್ಲುವ ಆಸೆಯನ್ನು ತೊರೆದುಬಿಡು” ಎಂದ.ಅಬ್ಬಾ! ಎಂತಹ ದಿಟ್ಟತನವಿತ್ತು ಆ ಮಾತಿನಲ್ಲಿ. ನನ್ನ ಅಸ್ತಿತ್ವದ ಮೂಲಬೇರಿಗೇ ಕೈಹಾಕಿ ಕೆದಕಿದ್ದ ಆ ಸುಧನ್ವ ಆ ಕ್ಷಣದಲ್ಲಿ. ಹೌದು! ನಾನು ಕೃಷ್ಣಸಖ. ಅವನಿಂದಲೇ ಬೆಳೆದವನು ಈ ಬದುಕಿನಲ್ಲಿ. ಶತ್ರುಗಳಾಗಿ ಮುಂದೆ ನಿಂತ ಬಂಧುಗಳನ್ನೂ, ಗುರು ಹಿರಿಯರನ್ನೂ ಎದುರಿಸಲಾರೆ ಎಂಬ ಖಿನ್ನತೆ ನನ್ನನ್ನು ಆವರಿಸಿದ ಆ ಕುರುಕ್ಷೇತ್ರ ರಣಕಣದಲ್ಲಿ ಜೀವನತತ್ವವನ್ನು ಬೋಧಿಸಿದವನು ಶ್ರೀಕೃಷ್ಣ. ನನ್ನ ಸಾಹಸ ಪ್ರದರ್ಶನಕ್ಕೆ ಪ್ರೇರಣೆಯಾದವನು ಶ್ರೀಕೃಷ್ಣ. ಅವನಿಂದಲೇ ನನ್ನ ಅಸ್ತಿತ್ವ. ಅವನ ನೆರವಿಲ್ಲದೆ ನಾನಿಷ್ಟು ಸಾಧಿಸುತ್ತಿರಲಿಲ್ಲ. ಅದು ಸರ್ವವೇದ್ಯ.ಸಾಧನೆಯ ಏಣಿಯನ್ನು ಹತ್ತುತ್ತಾ ಹತ್ತುತ್ತಾ ಹತ್ತನೆಯ ಮೆಟ್ಟಿಲಲ್ಲಿ ನಿಂತವನು ನಾನು. ಹತ್ತನೆಯ ಸಂಖ್ಯೆಯೇ ಆದವನು ನಾನು. ಕೃಷ್ಣನೆಂಬ ಒಂದು ಜೊತೆಗಿರಲು ನಾನು ಸಿಂಧು. ಇಲ್ಲವಾದರೆ ನಾನು ಬರಿಯ ಶೂನ್ಯ, ಬಿಂದು. ಸುಧನ್ವ ಕೋಪದಲ್ಲಾಡಿದ ಮಾತಿನಲ್ಲಿ ನನ್ನ ಬದುಕಿನ ನಿಜಸತ್ವವಿದೆ ಎನಿಸಿತು.ಅವನ ಮಾತನ್ನು ನಾನು ಈ ಬಗೆಯಲ್ಲಿ ಅರಗಿಸಿಕೊಳ್ಳುತ್ತಿದ್ದಾಗಲೇ ಅವನು ಪ್ರಯೋಗಿಸಿದ ಬಾಣವೊಂದು ಬಂದಪ್ಪಳಿಸಿತು ನನ್ನ ರಥಕ್ಕೆ. ತರ‍್ರನೆ ತಿರುಗಿತು ರಥ, ಬುಗುರಿಯನ್ನೂ ನಾಚಿಸುವಂತೆ. ನಿಜಕ್ಕೂ ಅವನ ಆ ಕೌಶಲ್ಯ ವಿಶಿಷ್ಟವಾದದ್ದೆನಿಸಿತು. ಎದುರಾಳಿಗಳ ರಥವನ್ನು ತಿರುಗುವಂತೆ ಮಾಡುವ ಸಾಮರ್ಥ್ಯ ಇದ್ದವರನ್ನು ನಾನು ಮೂರು ಲೋಕಗಳಲ್ಲಿಯೂ ಕಂಡಿರಲಿಲ್ಲ. ಅದ್ಭುತ ಭಾವ ನನ್ನೊಳಗೆ ಮೂಡಿತು. ಆದರೂ ಅದನ್ನು ತೋರಗೊಡದೆ “ನೀನಿನ್ನೂ ಹುಡುಗ. ಏಕೆ ಅಳಿವೆ ನನ್ನಿಂದ. ನಿನ್ನ ತಂದೆಯನ್ನು ಬರಹೇಳು. ಕುದುರೆಯನ್ನು ಬಿಟ್ಟುಬಿಡು” ಎಂದೆ.ಅವನು ಒಪ್ಪಿಕೊಳ್ಳಲಿಲ್ಲ. ಅದೆಷ್ಟೋ ಸಮಯ ನಮ್ಮ ನಡುವೆ ಕದನ ನಡೆಯಿತು. ನನ್ನ ಸಾರಥಿಯನ್ನೇ ಕೊಂದುಹಾಕಿದ ಸುಧನ್ವ. ಆ ಕ್ಷಣದಲ್ಲಿ ರಥವನ್ನೂ ನಾನೇ ನಡೆಸಬೇಕಾಯಿತು. ‘ಇವನನ್ನು ಎದುರಿಸಲಾರದ ತನ್ನದೂ ಒಂದು ಜನ್ಮವೇ!’ ಎಂಬ ವೈರಾಗ್ಯ ಭಾವ ನನ್ನನ್ನು ಆವರಿಸಿತು. ಅಶ್ವಮೇಧ ಯಾಗಕ್ಕೆ ಬಂದ ಬಹುದೊಡ್ಡ ತೊಡಕಿದು ಎನಿಸಿತು. ಆಪದ್ಬಾಂಧವ ಕೃಷ್ಣನನ್ನು ಕರೆಯದೆ ಬೇರೇನೂ ದಾರಿಯಿಲ್ಲ ಎನ್ನುವುದು ಖಚಿತವಾಯಿತು.ನೆನೆದೆ ಕೃಷ್ಣನನ್ನು. ಸ್ಮರಿಸಿದೆ ಹರಿಯನ್ನು. ಕಡುಗಾಲದಲ್ಲಿ ಬಿಡದೆ ಕಾಪಾಡುವ ಪೊಡವಿಗೊಡೆಯ ನಾನಿದ್ದೆಡೆಯಲ್ಲಿ ತಕ್ಷಣವೇ ಪ್ರತ್ಯಕ್ಷನಾದ. ಅದೇನೋ ನೂತನ ಶಕ್ತಿ ನನ್ನೊಳಗೆ ಪಸರಿಸಿದಂತಾಯಿತು. ಕೃಷ್ಣನ ದಿವ್ಯ ಚರಣಗಳಿಗೆ ಮಣಿದೆ. ಆಶೀರ್ವದಿಸಿದ. ಬಿಗಿದಪ್ಪಿಕೊಂಡ.ಕೃಷ್ಣನನ್ನು ದರ್ಶಿಸುತ್ತಿದ್ದ ಸುಧನ್ವನೊಳಗೂ ಭಕ್ತಿಭಾವ ಮೂಡಿತು. ಅವನು ಪುಳಕಿತನಾಗಿದ್ದ. ಅವನಿದ್ದ ಸ್ಥಳದಿಂದಲೇ ಸಾಷ್ಟಾಂಗ ಪ್ರಣಾಮ ಮಾಡಿದ. ತನ್ನ ಶೌರ್ಯಕ್ಕೆ ಸಾಕಿದು ಕೃಷ್ಣದರ್ಶನ! ಏನು ನೆನೆಸಿದ್ದೆನೋ ಅದು ಕೈಗೂಡಿದೆ ಎಂದು ಹಿರಿಹಿರಿ ಹಿಗ್ಗಿದ ಹಂಸಧ್ವಜಸುತ.ಕೃಷ್ಣನೀಗ ನನ್ನ ಜೊತೆಗಿದ್ದಾನೆ ಎಂಬ ಅಸೀಮ ಧೈರ್ಯ ಮೂಡಿತು ನನ್ನಲ್ಲಿ. ಅದೇ ಹುಮ್ಮಸ್ಸಿನಿಂದ ಸುಧನ್ವನ ಶಿರವನ್ನು ಇನ್ನು ಮೂರು ಬಾಣಗಳನ್ನಷ್ಟೇ ಪ್ರಯೋಗಿಸಿ ಕತ್ತರಿಸಿಹಾಕುವ ಪ್ರತಿಜ್ಞೆ ಮಾಡಿದೆ. ನನ್ನನ್ನೂ ಮೀರುವ ಹುಮ್ಮಸ್ಸಿನಲ್ಲಿ ಸುಧನ್ವ “ನೀನು ಬಿಡುವ ಸರ್ವಶಕ್ತ ಮೂರು ಬಾಣಗಳನ್ನು ನಡುವೆಯೇ ಕತ್ತರಿಸಿಹಾಕದಿದ್ದರೆ ಕಡುಪಾತಕಿಗೊದುವ ಗತಿ ನನಗೆ ಒದಗಲಿ” ಎಂದು ಪ್ರತಿಜ್ಞೆ ಮಾಡಿದ.ಹೀಗೆ ಮಾತನ್ನು ಮುಗಿಸಿದ ಅವನು ಬಿಟ್ಟ ಬಾಣದಿಂದ ಕೃಷ್ಣನಿದ್ದ ನನ್ನ ರಥ ನಾಲ್ಕುನೂರು ಮೊಳಗಳಷ್ಟು ದೂರ ಹಾರಿಹೋಯಿತು. ತಕ್ಷಣವೇ ಕೃಷ್ಣನಿಗೆ ಸುಧನ್ವನ ಅಂತಃಶ್ಶಕ್ತಿಯ ಅರಿವಾಯಿತು ಎನಿಸುತ್ತದೆ. ನನ್ನಲ್ಲಿ “ಯಾರೆದುರೂ ಸೋಲುವವನಲ್ಲ ಈತ. ಇವನೊಡನೆ ಯುದ್ಧ ಮಾಡುವವರಿಲ್ಲ. ನೀನು ನನ್ನಲ್ಲಿ ಸಮಾಲೋಚಿಸದೆ ಪ್ರತಿಜ್ಞೆ ಮಾಡಬಾರದಿತ್ತು” ಎಂದ. ಕೃಷ್ಣನೇ ಈ ಮಾತನ್ನು ಆಡಿದ ಮೇಲೆ!… ನನ್ನಲ್ಲೀಗ ಅಳುಕು ಮೂಡತೊಡಗಿತು… ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

You cannot copy content of this page

Scroll to Top