ನಡಿ ಕುಂಬಳವೇ ಟರಾ ಪುರಾ

ಕಥೆ

ಪ್ರಜ್ಞಾ ಮತ್ತಿಹಳ್ಳಿ

            ಇನ್ನೇನು ಈ ಬಸ್ಸು ಇಳಿದಿಳಿದು ಕೆರೆಯೊಳಗೇ ನುಗ್ಗಿ ಬಿಡುತ್ತದೆ ಎಂಬ ಭಾವ ಬಂದು ಮೈ ಜುಂ ಎನ್ನುವಷ್ಟರಲ್ಲಿ ರೊಯ್ಯನೆ ಎಡಕ್ಕೆ ತಿರುಗಿ ದಟ್ಟ ಕಾಡಿನ ಏರಿ ಶುರುವಾಗುತ್ತದೆ. ಅಂದರೆ ಇದರರ್ಥ ಇಳಿಯೂರು ಎಂಬ ಊರು ದಾಟಿತು ಹಾಗೂ ತಲೆಯೂರಿಗೆ ೧೫ ಕಿ.ಮೀ ಉಳಿದಿದೆ ಅಂತ. ಮೂರು ಜನರ ಸೀಟಿನ ಎಡತುದಿಗೆ ಕೂತಿದ್ದ ಬಸವರಾಜ ಎಡಬದಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬೀಳುವುದನ್ನು ತಪ್ಪಿಸಿಕೊಳ್ಳುತ್ತಿದ್ದಾನೆ. ಇಕ್ಕೆಲದ ಎತ್ತೆತ್ತರದ ಮರಗಳು, ಅವುಗಳ ದಟ್ಟ ನೆರಳಿನಲ್ಲಿ ಬಿಸಿಲೇ ಕಾಣದ ಆಕಾಶ, ಬೈತಲೆಯಂಥ ಸಣ್ಣ ದಾರಿಯಷ್ಟೇ ಕಾಣುವ ಸ್ಟಾಪುಗಳು, ಅಲ್ಲಲ್ಲಿಳಿದುಕೊಂಡು ನಿರ್ಭಯವಾಗಿ ಸರಸರ ನಡೆಯುತ್ತ ಮಾಯವಾಗಿಬಿಡುವ ಜನರು. ಒಂದಿಷ್ಟು ಭತ್ತದ ಗದ್ದೆ, ಅಡಿಕೆ-ತೆಂಗಿನ ಮರಗಳಿರುವ ಒಂಟಿ ಮನೆಗೆ ಜನ ಒಂದು ಊರು ಎಂದು ಕರೆಯುವುದು ನಾಲ್ಕೈದು ದನ-ಕರು ಸಾಕಿಕೊಂಡು ೫-೬ ಜನರ ಕುಟುಂಬವೊಂದು ಆರಾಮವಾಗಿ ಸದ್ದಿಲ್ಲದೇ ಬದುಕುವ ರೀತಿ ಇವನ್ನೆಲ್ಲ ಈಗೊಂದು ೫-೬ ತಿಂಗಳಿಂದ ನೋಡುತ್ತಿದ್ದಾನೆ.  ಬೆಳಗಿನಿಂದ ರಾತ್ರಿಯವರೆಗೆ ಬಾಯ್ತುಂಬ ಎಲೆ-ಅಡಿಕೆ ತುಂಬಿಕೊಂಡು ಓಡಾಡುವ ಗಂಡಸರು, ತುರುಬು ಕಟ್ಟಿಕೊಂಡು ಅಬ್ಬಲ್ಲಿಗೆ ದಂಡೆ ಮುಡಿವ ಹೆಂಗಸರು. ಮೊದಮೊದಲು ಅವನಲ್ಲಿ ಭಯ ಹುಟ್ಟಿಸುತ್ತಿತ್ತದ್ದರು. ಪುಳು-ಪುಳು ಕುಣಿಯುವ ಮೀನು ಹಿಡಿದು ಅಡಿಗೆ ಮಾಡುವ ಸಂಗತಿಯೆ  ಅವನಿಗೆ ಎದೆ ಝಲ್ಲೇನ್ನಿಸುವಂತೆ ಮಾಡಿತ್ತು. ಬಿಜಾಪೂರ ಜಿಲ್ಲೆಯ ಬಸವನಬಾಗೇವಾಡಿಯ ಬಸವಣ್ಣನವರು ಹುಟ್ಟಿದೂರಿನಲ್ಲಿ ಹುಟ್ಟಿದ, ಬಿಜಾಪುರವೆಂಬ ಗುಮ್ಮಟಗಳ ಊರಿನಲ್ಲಿ ಓದಿದ, ಈ ಬಸವರಾಜ ಉಳ್ಳಾಗಡ್ಡಿಯೆಂಬ ಸಂಭಾವಿತ ಹುಡುಗ ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡುವಾಗ ಡಿಪಾರ್ಟಮೆಂಟಿನ ಹುಡುಗರ ಜೊತೆ ಟೂರು ಹೋಗುವಾಗ ತಲೆಯೂರಿನ ಮಾರಿಕಾಂಬಾ ದೇವಸ್ಥಾನವನ್ನು ನೋಡಿದ್ದ. ತನ್ನ ಕುಟುಂಬದ ಸದಸ್ಯರು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ದರ್ಶನಕ್ಕೆ  ಕರೆದೊಯ್ಯುವಾಗ, ಇಲ್ಲಿಯ ಬಸ್ ಸ್ಟಾö್ಯಂಡಿನಲ್ಲಿಳಿದು, ಕೆ.ಎಸ್.ಆರ್.ಟಿ.ಸಿ., ಕ್ಯಾಂಟೀನಲ್ಲಿ ಚಾ ಕುಡಿದಿದ್ದ. ಅಷ್ಟು ಬಿಟ್ಟರೆ, ಅವನಿಗೆ ಈ ಊರು ಅಪರಿಚಿತವೆ. ನೆಟ್ ಪರೀಕ್ಷೆ ರಿಝಲ್ಟ ಬರುತ್ತಿದ್ದಂತೆ, ಕೆ.ಪಿ.ಎಸ್.ಸಿ.ಯ ಇಂಟರವ್ಯೂ ನಡೆಸಿ, ಸೆಲೆಕ್ಟ್ ಆದವರಿಗೆ ಪೋಸ್ಟಿಂಗ್ ಕೊಡುವಾಗ ಕೌನ್ಸೆಲಿಂಗ್ ಮಾಡಿದ್ದರು. ಲಿಸ್ಟಿನಲ್ಲಿ ಮೊದಲು ಹೆಸರಿದ್ದವರೆಲ್ಲ ಬೆಂಗಳೂರು, ಮೈಸೂರು, ಇತ್ಯಾದಿ ಊರುಗಳನ್ನು ಆಯ್ದುಕೊಂಡಿದ್ದರು. ಬಸವರಾಜನ ಪಾಳಿ ಬರುವಷ್ಟರಲ್ಲಿ ಇದ್ದವೆಲ್ಲ ಸಣ್ಣ-ಸಣ್ಣ ಊರುಗಳು, ಶಿವಮೊಗ್ಗ, ಉಡುಪಿ ಜಿಲ್ಲೆಯ ಊರುಗಳನ್ನು ಆಯ್ಕೆ ಮಾಡಿಕೊಳ್ಳಲು ಮನಸ್ಸು ಬರದೇ, ಇದ್ದುದರಲ್ಲೇ ವಿಜಾಪೂರ, ಬಾಗಲಕೋಟೆಗಳಿಂದ ಡೈರೆಕ್ಟ್ ಬಸ್ಸು ಇರುವ ಇದೇ ಅನುಕೂಲ ಎನ್ನಿಸಿತು. ಆದರೆ, ಕೆ.ಪಿ.ಎಸ್.ಸಿ., ಬಿಲ್ಡಿಂಗ್‌ನ ಹೊರಗಿನ ಕ್ಯಾಂಟೀನಿನಲ್ಲಿ ಚಾ ಕುಡಿಯುತ್ತ ನಿಂತಾಗ, ಯಾರೋ ಕುಮಟಾ ಕಡೆ ಹುಡುಗಿಯಂತೆ ಕಣ್ಣಲ್ಲಿ ನೀರು ತುಂಬಿಕೊAಡು ಮತ್ತೊಬ್ಬರಿಗೆ ಹೇಳುತ್ತಿದ್ದಳು. “ಇದೇ, ಇವ್ರೆಯಾ ತಲೆಯೂರು ತಗೊಂಬಿಟ್ರು. ಇವ್ರ ನೆಕ್ಸಟ್ ನಂದೇ ಇತ್ತು. ಸಾಯ್ಲಿ ತಪ್ಪೋಯ್ತು ಒಂದ್ ನಿಮಿಷ್ದಲ್ಲಿ ಕೈ ಬಿಟ್ ಹೋಯ್ತು”.  ಕುಡಿಯುತ್ತಿರುವ ಚಾ ನೆತ್ತಿಗೇರಿದಂತಾಗಿ, ಕೆಮ್ಮು ಬಂದಿತ್ತು. ಜೊತೆಗಿದ್ದ ವೀರೇಶ ಬಳಿಗಾರ ಅವಳನ್ನೇ ನೇರವಾಗಿ ಕೇಳಿಬಿಟ್ಟ. “ಯಾಕ್ರಿ ಮೇಡಮ್ಮರೆ ಏನಾಯ್ತ್ರೀ?  ಯಾರಿಗ್ಯಾವ್ದು ಬೇಕೋ ತಗೋತರ‍್ರಿ, ನಿಮ್ಗೇನ್ ಮಾಡ್ಯಾನಿಂವ?” “ಅಯ್ಯೋ ನಾ ಎಂತ ಹೇಳ್ದೆ? ನಮಗೆ ಲೇಡಿಸಿಗೆ ದೂರ ಹೋಗೋದು ತ್ರಾಸಲ.  ನೀವು ಜಂಟ್ಸ್ ಬೇಕಾರ ಹೋಗ್ಬಹ್ದು .ಕುಮ್ಟಾ, ಇಲ್ಲದಿದ್ರೆ ತಲೆಯೂರು ಸಿಗ್ತದೆ ಹೇಳಿ ಆಸೆ ಇತ್ತು” ಎಂದೇನೋ ಗಳಗಳ ಹೇಳಿದಳು. “ಯಾವ್ಯಾವ ಊರಿನ ನೀರಿನ ಋಣ ಯಾರ‍್ಯಾರಿಗೆ ಇರ್ತೈತಿ ಹೇಳಾಕ ಬರೂದಿಲ್ರಿ. ಇಷ್ಟಕ್ಕೂ ಪ್ರತಿವರ್ಷ ಟ್ರಾನ್ಸಫರ್ ಮಾಡಿ ಒಗಿತಿರ‍್ತಾರ. ನೀವು ಮುಂದಿನ್ವರ್ಷ ಟ್ರಾನ್ಸಫರ್ ಕೌನ್ಸೆಲಿಂಗ್‌ಗೆ ರ‍್ರಿ. ಎಕ್ಸಚೇಂಜ್ ಮಾಡಿಕೊಳ್ಳೋಣ”, ವೀರೇಶ ಅಕ್ಕಿಆಲೂರು ತೆಗೆದುಕೊಂಡಿದ್ದ. ಅದೊಂದು ಸಣ್ಣ ಹಳ್ಳಿ. ತಾನು ಪ್ರತಿ ಶನಿವಾರ ತಲೆಯೂರಿಗೆ ಬಂದುಬಿಡುತ್ತೇನೆ ಎಂದು ಹೇಳಿದ್ದ.

            ಬಸವರಾಜ ಜಾಯ್ನ ಆಗಲು ಬಂದಾಗ ಅಕ್ಟೋಬರ್ ತಿಂಗಳು. ಸೆಮಿಸ್ಟರ್ ಮುಗಿಯಲು ಇನ್ನೊಂದೇ ತಿಂಗಳು ಬಾಕಿ ಇತ್ತು.  ಎಂ.ಎ. ಮಾಡುವಾಗ ಹಾಸ್ಟೇಲಲ್ಲಿ ಪರಿಚಯವಿದ್ದ ರಾಮಚಂದ್ರ ನಾಯ್ಕ ಸಮಾಜಶಾಸ್ತ್ರಕ್ಕೆ ಜಾಯ್ನ ಆಗಲು ಬಂದಿದ್ದ. ಅವನು ಭಟ್ಕಳದವನಾದ ಕಾರಣ, ಊರಿನ ಪರಿಚಯ ಚೆನ್ನಾಗೇ ಇತ್ತು. ಅವನು ತಾನು ಮನೆ ಬಾಡಿಗೆಗೆ ಹಿಡಿಯುತ್ತೇನೆ, ನೀನು ಶೇರ್ ಮಾಡು ಎಂದಾಗ ಬಸವರಾಜನಿಗೆ ಅನುಕೂಲವೇ ಆಯ್ತು. ದೊಡ್ಡ ಕಂಪೌಂಡಿನ ಮಹಡಿ ಮನೆಯ ಕೆಳಗಿನ ಭಾಗದಲ್ಲಿ ಮಾಲಕರು ಇದ್ದರು. ಮೇಲ್ಬಾಗದ ಮೂರು ರೂಮುಗಳ ಮನೆ ಇವ್ರದ್ದು. ಮಾಲಕ ವಿಶ್ವನಾಥ ಕಿಣಿಯದು ಪೇಟೆಯಲ್ಲಿ ಅಂಗಡಿ ಇತ್ತು. ಹೆಂಡತಿ ದೊಡ್ಡ ಧ್ವನಿಯ ಜೋರುಮಾತಿನ ಸಂಧ್ಯಾಬಾಯಿ. ಮಕ್ಕಳು ಹುಬ್ಬಳ್ಳಿಯಲ್ಲಿ ಇಂಜನಿಯರಿಂಗ್ ಓದುತ್ತಿದ್ದರು. ಜನಿವಾರ ಹಾಕಿಕೊಂಡು ಸಂಧ್ಯಾವಂದನೆ ಮಾಡುವ ಕಿಣಿ ಮೀನು ತಿನ್ನುವುದು ನೋಡಿ ಬಸವರಾಜ ಕಕ್ಕಾಬಿಕ್ಕಿಯಾಗಿದ್ದ.  ಅವರು ಸಾರಸ್ವತ ಬ್ರಾಹ್ಮಣರೆಂದೂ, ಕೊಂಕಣಿ ಮಾತಾಡುತ್ತಾರೆ ಹಾಗೂ ಮತ್ಸ್ಯಾಹಾರ ಸೇವಿಸುತ್ತಾರೆಂದೂ ರಾಮಚಂದ್ರನಾಯ್ಕ ವಿವರಣೆಯಿತ್ತಾಗ, ಬಸವರಾಜ ತಲೆಯಾಡಿಸಿದ. ಕೊಂಕಣಿ ಮಾತೃಭಾಷೆಯ ಕಿಣಿ ದಂಪತಿಗಳು ರಾಗವಾಗಿ ಮಾತನಾಡುವ ಕನ್ನಡ ಇವನಿಗೆ ಅರ್ಥವೇ ಆಗುತ್ತಿರಲಿಲ್ಲ. ಒಂದು ಸಲ ಸಂಧ್ಯಾ ಮನೆ ಬಾಗಿಲ ಮೆಟ್ಟಿಲ ಮೇಲೆ ಕುಳಿತು ಚಾ ಕುಡಿಯುತ್ತಿರುವಾಗ ಕಾಲೇಜು ಮುಗಿಸಿ ಬಂದ ರಾಮಚಂದ್ರ ಬಸವರಾಜರಿಗೆ “ಚಾ ಕುಡಿವಾ ರ‍್ರಿ” ಎಂದು ಕರೆದಳು. ಮುಖ ತೊಳೆದು ಕುಡಿದರಾಯ್ತು ಎಂದು ಬಸವರಾಜ “ಹಿಂದಾಗಡೆ ಕುಡಿತೀನ್ರಿ ಅಕ್ಕಾರೆ” ಎಂದ. “ಇಶ್ಯಿಶ್ಯಿ ನಾವು ಜಾತಿಬೇಧ ಮಾಡೋದಿಲ್ಲ. ಹಿತ್ಲಲ್ಲೆಲ್ಲ ಕೂತ್ಕೊಂಡು ಕುಡ್ಯುದೆಂತಕೆ, ಇಲ್ಲೇ ಕುಡೀರಿ” ಎಂದಳು.  ಬಸವರಾಜನ ಭಾಷೆಯನ್ನು ಕೆಲಮಟ್ಟಿಗೆ ಬಲ್ಲ ರಾಮಚಂದ್ರ ಹಿಂದಾಗಡೆ ಅಂದ್ರೆ ಆಮೇಲೆ ಅಂತ ಎಂದು ಕನ್ನಡವನ್ನು ಕನ್ನಡಕ್ಕೆ ಭಾಷಾಂತರ ಮಾಡಬೇಕಾಯ್ತು. ರಾಮಚಂದ್ರನ ಅನ್ನ, ಕರಾವಳಿಯ ತೆಂಗಿನ ಕಾಯಿ, ಮಸಾಲೆ ಸಾರಿನ ಅಡುಗೆ, ಬಸವರಾಜನಿಗೆ ರೂಢಿಸಲಿಲ್ಲ. ಊರಿಂದ ದೊಡ್ಡ ಗೋಣೀಚೀಲದಲ್ಲಿ ಕಟಕರೊಟ್ಟಿ, ಚಟ್ನಿಪುಡಿ, ತಂದಿಟ್ಟುಕೊಳ್ಳುತ್ತಿದ್ದ.  ಯಾವುದಾದರೂ ತರಕಾರಿಯ ಪಲ್ಯ ಅಥವಾ ಸಾಂಬಾರ್ ಮಾಡಿಕೊಂಡು ಅನ್ನ-ರೊಟ್ಟಿಗಳ ಜೊತೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಬೆಳಗಿನ ತಿಂಡಿಗೆ ರಾಮಚಂದ್ರ ದೋಸೆ-ಇಡ್ಲಿ ಮಾಡುವುದು ಮಾತ್ರ ಬಸವರಾಜನಿಗೆ ಬಹಳ ಇಷ್ಟವಾಗುತ್ತಿತ್ತು. “ಮುಂಜಾನೆ ನಸಿಕ್ಲೆ ನಾಷ್ಟಾ ಮಾಡ್ತೀರಿ. ನೋಡಪ್ ನೀವೆಲ್ಲ. ನಮ್ಮೂರಾಗೆ ಬರೇ ಚಾ ಕುಡ್ದು ಮಂದಿ ಅಡ್ಡಾಡತೇವಿ. ಒಂದು ತುತ್ತು ಉಪ್ಪಿಟ್ಟು ಇಲ್ಲಾ, ಚುಮ್ಮರಿ ಒಗ್ಗರಣಿ ಕಾಣ್ಬೇಕಂದ್ರೆ ಹತ್ತು ಹೊಡೀತೇತಲೆ. ಅದು ಹ್ಯಾಂಗ ಏಳಕ್ಕೆ ತಿಂತಿರೋ ಮಾರಾಯ” ಎಂದು ಆಶ್ಚರ್ಯ ಪಡುತ್ತಿದ್ದ. ಎಂಟು ಗಂಟೆಯೆಂದರೆ, ಅಕ್ಕ-ಪಕ್ಕದ ಹೆಂಗಸರು ಒಬ್ಬರಿಗೊಬ್ಬರು “ಆಸ್ರಿ ಕುಡಿದ್ರಿ?” ಎಂದು ಕೇಳುತ್ತ ಚೊಂಯ್ ಚೊಂಯ್ ಎಂದು ದೋಸೆ ಎರೆವ ಸದ್ದಿನ ಹಿನ್ನೆಲೆ ಸಂಗೀತದೊಂದಿಗೆ ಓಡಾಡುತ್ತಿದ್ದರು.

            ಬಸ್ಸಾಗಲೇ ತಲೆಯೂರಿನ ಬಸ್ ಸ್ಟಾö್ಯಂಡಲ್ಲಿ ನಿಂತು ಕಂಡಕ್ಟರ್ ಮುಖ ಹೊರಹಾಕಿ “ಡೈರೆಕ್ಟ ಕುಮ್ಟಾ, ಹೊನ್ನಾವರ್, ಭಟ್ಕಳ್ ಯರ‍್ರಿ” ಎಂದು ಕೂಗುತ್ತಿದ್ದ. ಪಕ್ಕದಲ್ಲಿ ಗೊರಕೆ ಹೊಡಿಯುತ್ತ ಮಲಗಿದ್ದ ಮಾವನನ್ನು ಅಲುಗಾಡಿಸಿ ಎಬ್ಬಿಸಿದ ಬಸವರಾಜ “ಏಳೋ ಮಾವಾ  ಊರ‍್ಬಂತು” ಸೀಟಿನ ಕೆಳಗಿನ ರೊಟ್ಟಿ ಚೀಲ, ಮೇಲಿಟ್ಟ ಬ್ಯಾಗುಗಳನ್ನು ತೆಗೆದುಕೊಂಡು ಇಬ್ಬರೂ ಇಳಿದರು. ಅವ್ನೌವ್ನ ಎಂಥಾ ನಿದ್ದೇಲೆ ಬಸು, ಹುಬ್ಬಳ್ಳಿ ದಾಟಿದ್ದೊಂದೇ ಗೊತ್ನೋಡೊ” ಎನ್ನುತ್ತ ಮಾಮಾ ಇಳಿದ. ಈ ಬಾರಿ ಊರಿಗೆ ಹೋದಾಗ ಅಕ್ಕನ ಗಂಡ ಮಲ್ಲಿಕಾರ್ಜುನ ತಾನೂ ಬರುವುದಾಗಿ ಬೆನ್ನು ಹತ್ತಿ ಬಂದಿದ್ದ.  ಬಸವರಾಜನ ಒಬ್ಬಳೇ ಅಕ್ಕ ನೀಲಾಂಬಿಕಾಳನ್ನು ಖಾಸಾ ಸೋದರ ಮಾವ ಮಲ್ಲಿಕಾರ್ಜುನನಿಗೆ ಕೊಟ್ಟಿದ್ದರು. ಬಸವನಬಾಗೇವಾಡಿಯ ಮಗ್ಗುಲಲ್ಲೇ ಇರುವ ನಿಡಗುಂದಿಯಲ್ಲಿ ಹೊಲ-ಮನೆ ಮಾಡಿಕೊಂಡು ಅನುಕೂಲವಾಗಿರುವ ಮಲ್ಕಾಜಿ ಮಾಮಾಗೆ ಹಿರಿಮಗಳು ಅಕ್ಕಮಹಾದೇವಿ.  ಅವಳನ್ನು ವಾಡಿಕೆಯಂತೆ, ತಮ್ಮನಿಗೇ ಕೊಡಬೇಕೆನ್ನುವ ಆಸೆ ನೀಲಕ್ಕನದು. ನೌಕರಿ ಸಿಕ್ಕಿದ್ದೇ ಮದುವೆ ಪ್ರಸ್ತಾಪ ಶುರುವಿಟ್ಟುಕೊಂಡರು. ಆದರೆ, ಅರ್ಥಶಾಸ್ತ್ರದ ಜೊತೆಗೆ ಒಂದಿಷ್ಟು ಸಾಹಿತ್ಯ, ವೈಚಾರಿಕತೆ ಅಂತೆಲ್ಲಾ ಓದುತ್ತ ಬೆಳೆದು ಇದೀಗ ನೌಕರಿಗೆ ಸೇರಿಕೊಂಡ ಬಸವರಾಜ ಉಳ್ಳಾಗಡ್ಡಿಗೆ ಅಕ್ಕನ ಮಗಳನ್ನು ಮದುವೆಯಾಗಲು ಎಳ್ಳಷ್ಟೂ ಮನಸ್ಸಿಲ್ಲದೇ ಒಲ್ಲೆನೆಂದು ಜಗಳ ತೆಗೆದಿದ್ದ. ಮೊದಲೇ ಈ ದೂರದ ಮಲೆನಾಡಿನ ಊರುಗಳನ್ನು ಸರಿಯಾಗಿ ನೋಡಿರದ ಬಾಗೇವಾಡಿಯ ಜನರಿಗೆ ಆತಂಕ ಶುರುವಾಗಿತ್ತು. ತಮ್ಮ ಬಸೂನನ್ನು ಅಲ್ಲಿ ಯಾರಾದರೂ ಬುಟ್ಟಿಗೆ ಹಾಕಿಕೊಂಡಿರುವರೇ, ಹೇಗೆಂದು  ತನಿಖೆ ಮಾಡುವ ಸಲುವಾಗಿ ಬಸೂನ ತಾಯಿ ಗೌರವ್ವ ತಮ್ಮನನ್ನು ಕಳಿಸಿದ್ದಳು. ಆಗಾಗ ಅಲ್ಲಿ-ಇಲ್ಲಿ ಊರು ನೋಡಿ ಬರುವ ಚಟವಿದ್ದ ಮಲ್ಕಾಜಿ ಮಾವ ತನ್ನ ಜೊತೆ ಬರುತ್ತೇನೆಂದಾಗ ಕಾರಣ ಗೊತ್ತಿರದ ಬಸೂ ಸಹಜವೇ ಇರಬೇಕೆಂದುಕೊಂಡು ಒಪ್ಪಿ ಕರೆತಂದಿದ್ದ. ಎರಡು ದಿನದ ರಜೆಗೆ ಊರಿಗೆ ಹೋಗಿದ್ದ ರಾಮಚಂದ್ರನಾಯ್ಕ ಮರುದಿನ ಬರುವವನಿದ್ದ ಕಾರಣ ರೂಮಿಗೆ ಬೀಗ ಹಾಕಿತ್ತು.  ಮೆಟ್ಟಿಲಮೇಲೆ ಕುಳಿತು ಪಕ್ಕದ ಮನೆ ಹೆಂಗಸಿನ ಜೊತೆ ಹರಟುತ್ತಿದ್ದ ಸಂಧ್ಯಾ,“ಏನು ಉಳ್ಳಾಗಡ್ಡಿ ರ‍್ರು, ಯಾರೋ ನೆಂಟ್ರಿಗೆ ಕಕ್ಕೊಂಬಂದಾರಲ್ಲ”ಎಂದಳು. “ಹೌದ್ರಿ ಅಕ್ಕಾರೆ, ಇವ್ರು ನಮ್ಮ ಮಾಮರ‍್ರಿ” ಎಂದ. “ಇನ್ ನಾಳೆ ಬೆಳಿಗ್ಗೇನೆ ನೀರು ಮ್ಯಾಲೇರ‍್ಸೋದು. ಹನಿ ಸಣ್ಣಕೆ ಬಿಟ್ಕಳ್ರಿ ಹಂ” ಎಂದಳು.  “ಯಕ್ಲೆ ಬಸ್ಯಾ ಈ ಊರಾಗೂ ನೀರಿನ ತ್ರಾಸೈತಿ” ಎಂದು ಭಯಂಕರ ಆಶ್ಚರ್ಯದಿಂದ ಕೇಳಿದ ಮಾವನಿಗೆ “ಇಲ್ಲೋ ಮಾರಾಯ ಈ ಮಾಲಕರು ಕೆಟ್ಟ ಜುಗ್ಗ ಅದಾರ. ದಿನಕ್ಕೊಮ್ಮೆ ಮುಂಜಾನೆ ನಳ ಬಿಟ್ಟಾಗ ನೀರು ಏರ‍್ಸತಾರ. ಕರೆಂಟು ಉಳ್ಸಾಕಂತ ಲೈಟು ರ‍್ಸಿ, ಅಂಗಳದಾಗ ಕೂಡೊ ಮಂದಿ ಐತಿ ಬಾ ಇಲ್ಲೆ” ಎಂದು ನಕ್ಕ.

            ಅವ್ವ ಮಾಡಿಕೊಟ್ಟ ಮಾಡ್ಲಿ ಉಂಡಿ, ಚಕ್ಕುಲಿಗಳನ್ನು ಸಂಧ್ಯಾಗೆ ಕೊಡಲೆಂದು ಕೆಳಗೆ ಹೋದ.  “ಇದೇನು ರೇತಿ ಕಂಡಾಂಗೆ ಕಾಣ್ತದಲ್ಲ” ಎಂದು ಆಶ್ಚರ್ಯಪಟ್ಟಳು. ಹ್ಹೆ ಹ್ಹೆ ಹ್ಹೆ ಎಂದು ನಕ್ಕು ಮೇಲೆ ಬಂದ.  ರಾಮಚಂದ್ರನ ಫೋನು ಬಂದಾಗ ರೇತಿ ಎಂದರೇನೆಂದು ಕೇಳಿದ. ಅವನು ‘ಮರಳು’ ಅಂದಾಗಲೇ ಅರ್ಥವಾಗಿ ನಗು ಬಂದಿತು. ಮಾವನಿಗೆ ಊರು ತೋರಿಸಲು ಕರಕೊಂಡು ಹೊಂಟ.  ಅವರ ಮನೆಯಿದ್ದ ಅಯ್ಯಪ್ಪ ನಗರದಿಂದ ನಡೆಯುತ್ತ ಕೋಟೆಕರೆಗೆ ಬಂದರು. ಕೆರೆ ಏರಿ ಮೇಲೆ ನಡೆಯುತ್ತ ಹೊರಟಾಗ ಒಂದಿಬ್ಬರು ಹುಡುಗರು ಬಸವರಾಜನಿಗೆ “ನಮಸ್ಕಾರ ಸರ್, ವಾಂಕಿಗು?” ಎಂದು ಮಾತಾಡಿಸಿದರು. “ನಮ್ಮ ಮಾಮಾಗೆ ಊರು ತೋರಿಸ್ಬೇಕು’’ ಎಂದ. ಹಾಗಿದ್ರೆ ಮಾರಿಗುಡಿಗೆ ಹೊಗೋದು ಚೊಲೊ. ಈ ಬದಿಗೆ ಗಣಪತಿ ದೇವಸ್ಥಾನ ಮತ್ತೆಂತ ಉಂಟು ಈ ಊರಲ್ಲಿ.  ಆ ಹುಡುಗರಿಗೆ ತಮ್ಮ ಊರು ಎಂದರೆ, ಮಹಾಬೋರು. ಎರಡು ದೇವಸ್ಥಾನ-ಕೆರೆ ಇರುವ ಈ ಊರಲ್ಲಿ ಎಂತಾ ನೋಡ್ತಾರೆ ಅಂತ ಆಶ್ಚರ್ಯಪಟ್ಟರು. ಬನವಾಸಿಗೆ, ಜೋಗಕ್ಕೆ ಆಥ್ವಾ ಸಹಸ್ರಲಿಂಗಕ್ಕೆ ಹೋಗ್ಬಹುದು ಸರ್ ಎಂದ ಒಬ್ಬ. ಆಯ್ತು ಎಂದು ತಲೆಯಾಡಿಸುತ್ತ ಹೊರಟರು. “ಇವ್ರು ಹ್ಯಾಂಗ್ ಮಾತಾಡ್ತರ‍್ಲೆ, ಮಾಸ್ತರು ಅಂತ ಕಿಮ್ಮತ್ತಿಲ್ಲೇನಲ್ಲೆ? ರಿ ಹಚ್ಚಂಗಿಲ್ಲಲ್ಲ?” ಸಿಟ್ಟಿನಿಂದ ಕೇಳಿದ ಮಾವನಿಗೆ, “ನಂಗೂ ಹೀಗ ಅಗಿತ್ತಪ್ಪ ಶುರುವಿಗೆ. ಆಮೇಲೆ ಗೊತ್ತಾಯ್ತು.  ಇಲ್ಲಿ ಮಂದಿ ಕನ್ನಡ ಬ್ಯಾರೇನೇ ಐತಿ. ಯಾರಿಗೂ ರಿ ಹಚ್ಚಂಗಿಲ್ಲ. “ವಿಚಿತ್ರ ಊರು ಬಿಡಪ” ಎಂದು ಮಲ್ಕಾಜಿ ಪಾನಂಗಡಿ ಕಡೆ ನಡೆದು ಸಿಗರೇಟು ಹಚ್ಚಿಕೊಂಡ. ಬಾಳೆಹಣ್ಣು ಕೊಂಡ ಬಸೂ ಸಿಪ್ಪೆ ಸುಲಿದು ತಿನ್ನತೊಡಗಿದ.  “ಅರೆ ಸರ್, ನೀವು ಊರಿಂದ ಯಾವಾಗ ಬಂದ್ರಿ?” ಧ್ವನಿ ಕೇಳಿ ತಿರುಗಿದರೆ, ಫ್ಯೆನಲ್ ಬಿ.ಎ. ಹುಡುಗಿ ವರದಾ. ಇಡೀ ಕಾಲೇಜಿನಲ್ಲೇ ಹೆಚ್ಚು ಮಾತಾಡುವ ಐದೂ ಕಾಲಡಿ ಎತ್ತರದ ಕಟ್ಟುಮಸ್ತಾದ ಹುಡುಗಿ. ಆಟ-ಭಾಷಣ-ರಂಗೋಲಿ-ಡ್ಯಾನ್ಸು ಎಲ್ಲಾ ಸ್ಫರ್ಧೆಗಳಲ್ಲೂ ಬಹುಮಾನ ಗಳಿಸುತ್ತ ಉಪನ್ಯಾಸಕರ ಮುಖ ಕಂಡಾಗಲೊಮ್ಮೆ “ಇಂಟರ‍್ನಲ್ಸಗೆ ಇಪ್ಪತ್ತಕ್ಕೆ ಇಪ್ಪತ್ತು ಕೊಡ್ಬೇಕು ಹಂ ಈ ಸಲ ನಾವು ಫ್ಯೆನಲ್ ಇಯರ್. ಜೀವನದ ಪ್ರಶ್ನೆ ಮತ್ತೆ” ಎಂದು ತಾಕೀತು ಮಾಡುತ್ತ ತಿರುಗುತ್ತಿದ್ದಳು. ಹಾಂಗಂತ ಅಭ್ಯಾಸದಲ್ಲಿ ಅವಳು ತೀರಾ ಸಾಧಾರಣವಾದ ಅಂಕ ಪಡೆಯುವ ಹುಡುಗಿ. ಅವಳ ಭಯಕ್ಕೆ ಉಪನ್ಯಾಸಕರು ಅಂಕ ಕೊಡಬೇಕಾಗಿತ್ತು. ತೀರಾ ಕಟ್ಟುನಿಟ್ಟಿನ ಕಾಮತ್ ಮೇಡಂ ಎದುರು ಅತ್ತು ಕರೆದು ಅಂಕ ಗಿಟ್ಟಿಸುತ್ತಿದ್ದಳು. “ಊರಿಂದ ಈಗ ಬಂದೆ ನೀ ಎಲ್ಲಿ ಹೊಂಟಿ” ಬಸವರಾಜ ಉತ್ತರಿಸಿದ. ನಮ್ಮನೆ ಇಲ್ಲೇ ಉಂಟು ರ‍್ರಿ ಸರ್ ಬನ್ನಿ ಎಂದು ಒತ್ತಾಯಿಸಿದಳು. ಇಲ್ಲ ಮತ್ತೊಂದ್ಸಲ ಬರ‍್ತೇವಿ.  ನಮ್ಮಾವ ಊರಿಂದ ಬಂದಾರ. ಮಾರಿಗುಡಿ ಕಡೆ ಹೊಂಟೇವಿ” ಎಂದ.  “ಹೌದೂ ನಾನು ಅಲ್ಲೆ ಹೊಂಟಿದ್ದೆ. ಮಂಗಳ್ವಾರ ನಮ್ತಾಯಿ ಕಾಯಿ ಒಡಸ್ಕೊಂಬಾ ಹೇಳ್ತಾರೆ ಎನ್ನುತ್ತ ಜೊತೆಗೇ ಹೊರಟಳು.  ಮಾತಿಗೆ ಮೊದಲೊಮ್ಮೆ, ಕಡೆಗೊಮ್ಮೆ ಕಿಸಕ್ ಎಂದು ನಗುವ ಇಶಿಶೀ ಎಂದು ಒಯ್ಯಾರ ಮಾಡುವ ವರದೆಯ ಬಗ್ಗೆ ಈ ಮಾವ ಏನು ತಿಳಿದುಕೊಂಡು ಬಿಡುತ್ತಾನೋ ಎಂಬ ಭಯದಲ್ಲಿ ಬಸೂಗೆ ಭಯವಾಗತೊಡಗಿತು. “ಇಲ್ಲಿ ಬಜೆ ಬೆಸ್ಟು ಮಾಡ್ತಾರೆ ತಿನ್ವಾ” ಎಂದವಳೇ ತಿರುವಿನಲ್ಲಿದ್ದ ಚಾದಂಗಡಿ ಕಡೆ ಹೊಂಟಳು. ಬದನೆಕಾಯಿ, ಬೆಂಡೆಕಾಯಿಗಳಿಂದಲೂ ಭಜೆ ಮಾಡುತ್ತಾರೆಂದು ಮಲ್ಕಾಜಿಗೆ ಈಗಲೇ ಗೊತ್ತಾಗಿದ್ದು. ತಿಂದು ನೋಡಿ “ಚೊಲೋ ಅಕ್ಕೇತಿ ಅಡ್ಡಿಲ್ಲ ಬಿಡು. ಕಣ್ಣಿಗೆ ಏನ್ ಕಂಡ್ರು ಕಡ್ಡಿ ಹಿಟ್ಟಿನ್ಯಾಗ ಅದ್ದಿ ಎಣ್ಯಾಗ ಒಗಿತಾರೆ ಕಾಣ್ತೇತಿ” ಎಂದ. ಅವನ ಬಯಲುಸೀಮೆ ಮಾತಿಗೆ ಹ್ಹೊ ಹ್ಹೊ ಹ್ಹೊ ಎಂದು ನಗಲಾರಂಭಿಸಿದ ವರದೆಗೆ ಮೈಮೆಲಿನ ದಾವಣಿ ಬಗ್ಗೆಯೂ ಲಕ್ಷವಿರಲಿಲ್ಲ. ನಕ್ಕೂ ನಕ್ಕೂ ಕೆಮ್ಮಲಾರಂಭಿಸಿದಳು. ಅಲ್ಲಿದ್ದ ಗಂಡಸರೆಲ್ಲ ಹುಳ್ಳುಳ್ಳಗೆ ಮುಖ ಮಾಡಿಕೊಂಡು ಕಳ್ಳನೋಟದಿಂದ ಇವಳತ್ತ ನೋಡುತ್ತಿದ್ದರು. ಬಸೂಗೆ ಇರಿಸುಮುರಿಸಾಗುತ್ತಿತ್ತು. “ಅಯ್ಯೋ ದೇವ್ರೆ ಯಾ ನಮ್ನಿ ಮಜಾ ಮಾತಾಡ್ತಾರಪ್ಪ ಮನಸಾರೆ ಸಿನ್ಮಾ ದಲ್ಲಿ ರಾಜೂ ತಾಳಿಕೋಟೆ ಡೈಲಾಗ್ ಕೇಳ್ದಾಂಗಾಯ್ತು” ಎನ್ನುತ್ತಾ ಹೊರಟಳು. ದೇವಸ್ಥಾನಕ್ಕೆ ಹೋಗಿ ತಿರುಗಿ ಬರುವತನಕವೂ ಮೈ ಅಲುಗಿಸಿ ನಗುವ ವರದಾಳ ಜೊತೆಗೆ ಓಡಾಡಲು ಭಯಂಕರ ಮುಜುಗರವಾಗಿ ಬಸೂ ನೆಪ ತೆಗೆದ.  “ಆಯ್ತು ವರದಾ ನಾನು-ಮಾವ ಸ್ವಲ್ಪ ಮಾರ್ಕೆಟ್ಟಿಗೆ ಹೋಗಿರ‍್ತೇವಿ ಬಾಯ್” “ಹೌದೂ, ಹುಶಾರು ಸರ್, ರಾಜೂ ತಾಳಿಕೋಟೆ ಬಂದಾನೆ ಹೇಳಿ ಯಾರಾದ್ರೂ ಕನ್ಫೂö್ಯಸು ಮಾಡ್ಕೋತಾರೆ” ಎಂದು ಟಾಟಾ ಮಾಡಿ ಹೋದಳು. “ಎಂಥಾ ಚಾಲೂ ಐತೆ ಹುಡುಗಿ ಬಸೂ” ಮಲ್ಕಾಜಿ ಮಾಮಾ ಉದ್ಘರಿಸಿದ.

            ಮನೆ ಸಮೀಪ ಬಂದಾಗ ಸಂಧ್ಯಾ ಗೇಟಿನ ಬಳಿ ಕೆಸುವಿನ ಎಲೆ ಕತ್ತರಿಸುತ್ತ ಇದ್ದಳು.  ಪಕ್ಕದ ಮನೆ ಗಿರಿಜಾ ಇನ್ನೂ ಕಂಪೌಂಡಿನಲ್ಲಿರುವ ಬಸಳೆ ಚಪ್ಪರದ ಹತ್ತಿರ ದಂಟು ಮುರಿದುಕೊಳ್ಳುತ್ತ ನಿಂತಿದ್ದಳು. “ಊರು ತಿರ‍್ಕೋಂಬಂದ್ರಿ ಎಂತೆಂತಾ ನೋಡ್ಕಬಂದ್ರಿ” ಎಂದು ಕೇಳಿದಳು. ‘ಗುಡಿಗೆ ಹೋಗಿದ್ವರಿ ಹಾಂಗೆ ಮಾರ್ಕೆಟ್ ಅಡ್ಡಾಡಿ ಬಂದ್ವಿ” ಉತ್ತರಿಸಿದ್ದು ಬಸೂನೆ. “ಇದೇನ್ರಿ ಎಲಿ? ಇದನ್ ತಿಂತಿರಿ?” ಮಲ್ಕಾಜಿ ವಿಚಾರಣೆಗೆ ಶುರುವಿಟ್ಟುಕೊಂಡ. ಇಬ್ಬರೂ ಹೆಂಗಸರು ಕೆಸು ಪತ್ರೊಡೆ ಮಾಡುವುದನ್ನು ಸಾಭಿನಯವಾಗಿ ವಿವರಿಸಿದರು. ಬಸಳೆ ಸಾರು ಹೆಲ್ತಿಗೆ ಎಷ್ಟು ಒಳ್ಳೆಯದೆಂದು ಬಣ್ಣಿಸಿದರು. ಗಿರಿಜಾ ಅ ಕಂಪೌಂಡಿನ ತುಂಬ ಇದ್ದ ಒಂದೆಲಗ, ಯಲವರಿಗೆ, ಸಾಂಬಾರೆಲೆ ಎನೇನೋ ತೋರಿಸಿ ತಂಬಳಿ, ಕಟ್ನೆ ಅಂತ ಏನೇನೋ ಔಷಧಿ ಅಡಿಗೆಯ ಕ್ಲಾಸು ತಗೊಂಡು ಬಿಟ್ಟಳು.  ಮೇಲೆ ಹತ್ತಿ ಬಂದ ಮಲ್ಕಾಜಿ, “ಹೊಗ್ಗೋ ಅವನೌನ ಭಯಂಕರ ಮಂದಿ ಐತಿ ಬಿಡಪಾ. ಅಡವಿಗೆ ಅಡವೀನ ತಿಂದಹಾಕತೈತಿ. ಇದೇನ್ ಊಟ, ಉಣಸ?” ಗೊಣಗಿದ.

            ಮರುದಿನ ಬೆಳಿಗ್ಗೆ ಎಂಟಕ್ಕೇ ಬಸೂ ಕಾಲೇಜಿಗೆ ನಡೆದ. ತಾನು ಬೇಸರ ಬಂದರೆ ವಾಕಿಂಗು ಹೋಗುತ್ತೇನೆಂದ ಮಲ್ಕಾಜಿ ಟೀವಿ ನೋಡುತ್ತ ಕೂತ. ಕಾಲೇಜಿನ ಒಳಗೆ ಬರುತ್ತಿದ್ದಂತೆ “ಸರ್ ರಾಜು ತಾಳಿಕೋಟೆ ಎನ್ಮಾಡ್ತಾ ಇದಾರೆ’’ ಎನ್ನುತ್ತ ವರದಾ ಎದುರಿಗೆ ಬಂದಳು.  ಏನೋ ಪೆಪೆಪೆಪೆ ಎಂದು ನಕ್ಕ.  ಯಾರು ಬಂದಿದಾರೆ ಎಂದು ಕಾಮತ್ ಮೇಡಂ ಕೇಳಿದರು. ಮನಿಷಾ ಕಾಮತ್ ಇಂಗ್ಲೀಷ ಮೇಡಂ ಅದಾಗಲೆ ಹತ್ತು ವರ್ಷ ಸರ್ವಿಸ್ ಅದವರು. ಇಲ್ಲಿ ಕಾಲೇಜು ಶುರುವಾದದ್ದೇ ಕಾರವಾರದಿಂದ ಟ್ರಾನ್ಸಫರ್ ಪಡೆದು ಬಂದಿದ್ದರು. ತಿಳುವಳಿಕೆಯವರಾಗಿದ್ದು ಧಾರವಾಡದಲ್ಲಿ ೫-೬ ವರ್ಷ ಎಂ.ಎ. ಪಿ.ಎಚ್.ಡಿ.ಗಾಗಿ ಇದ್ದು ಬಂದಿದ್ದರಿಂದ ಅಲ್ಲಿಯ ಭಾಷೆಯನ್ನು ಬಲ್ಲವರು.  ಬಸೂಗೆ ಅವರಲ್ಲಿ ಅಭಿಮಾನ-ಗೌರವ. “ಬೇಗ ಮದ್ವೆ ಮಾಡ್ಕಳ್ರಿ ಉಳ್ಳಾಗಡ್ಡಿ, ಇಲ್ಲಿ ಊಟ ನಿಮ್ಗೆ ಕಷ್ಟ.” ಎನ್ನುತ್ತಿದ್ದರು. ಅವರ ಹತ್ತಿರ ಮಾವ ಬಂದಿರುವ ವಿಷಯ ಹೇಳಿದ. ಅವರು ಸೋಂದಾ ಬನವಾಸಿ, ಜೋಗಗಳಿಗೆ ಹೇಗೆಲ್ಲ ಹೋಗಿ ಬರಬಹುದು ಎಂದು ವಿವರಿಸಿದರು. ಮಧ್ಯಾನ್ಹ ಮನೆಗೆ ಬರುತ್ತಿದ್ದಂತೆ ಗೇಟಿನ ಹತ್ತಿರ ಎದುರು ಮನೆ ಮಮತಾ ನಿಂತಿದ್ದಳು. ಅವಳ ಗಂಡ ಅಡಿಕೆ ವಖಾರಿ ಇಟ್ಟುಕೊಂಡಿದ್ದು ವಿಪರೀತ ಲಾಸ್ ಮಾಡಿಕೊಂಡಿದ್ದ. ಈಗೀಗ ಅವಳು “ಈ-ಮಾರ್ಕೆಟಿಂಗ್” ಅದೂ, ಇದೂ ಎಂದೇನೋ ಬಿಸಿನೆಸ್ ಶುರು ಮಾಡಿಕೊಂಡಿದ್ದಳು. ಒಂದು ದಿನ ರಾಮಚಂದ್ರ ಬಸೂ ಇಬ್ಬರೂ ಇದ್ದಾಗ ಒಂದು ಲ್ಯಾಪಟ್ಯಾಪ್ ಹಚ್ಚಿಕೊಂಡು ಏನೇನೂ ವಿವರಿಸಿದ್ದಳು. ಬಸೂ ಸುಮ್ಮನೆ ಬಾಯ್ಮುಚ್ಚಿಕೊಂಡು ಕೇಳಿದ್ದ. ಏನೂ ಮಾತಾಡಿರಲಿಲ್ಲ. ರಾಮಚಂದ್ರ ‘’ನಮ್ದು ಪ್ರೊಬೇಶನರಿ ಅಲ್ಲಾ. ಇಗೆಂತ ಬೇಡ ಕಡೆಗೆ ನೋಡ್ವಾ” ಎಂದು ಸಾಗಹಾಕಿದ್ದ. “ಏನು ಉಳ್ಳಾಗಡ್ಡಿ ಸರ್, ಎಲ್ಲಿ ಹೋಗಿದ್ರಿ? ಮೊನ್ನೆ ನಮ್ಮನೇಲಿ ಸತ್ನಾರಾಯಣ ಕತೆ ಇತ್ತು.  ಊಟಕ್ಕೆ ಕರೆಲಿಕ್ಕೆ ಬಂದಿದ್ದೆ. ಬೀಗ ಹಾಕ್ಕೊಂಡಿತ್ತು.” ಅಂದಳು. ತಾವು ಊಟಕ್ಕೆ ಕರೆಯುವಷ್ಟು ಹತ್ತಿರದವರು ಯಾವಾಗಾದೆವು ಎಂದು ತಬ್ಬಿಬ್ಬಾದ ಬಸೂ ತಡವರಿಸುತ್ತ ತೊದಲಿದ “ಊರಿಗೆ ಹೋಗಿದ್ದೇರಿ”. ಮೇಲೆ ಬಂದು ಮಾಮಾನ ಜೊತೆ ಮಾತಾಡುತ್ತ ಊಟಕ್ಕೆ ಕೂತಾಗ ಬಾಗಿಲು ದೂಡಿಕೊಂಡು ಬಂದೇ ಬಿಟ್ಟಳು ಮಮತಾ. ಬರೀ ಮೈಯಲ್ಲಿದ್ದ ಗಂಡಸರಿಬ್ಬರೂ ದಿಗ್ಭಾçಂತರಾಗಿದ್ದರು. “ಪ್ರಸಾದ ಕೊಟ್ಟು ಹೋಗ್ವಾ ಹೇಳಿ ಬಂದೆ” ಎನ್ನುತ್ತ ಕೈಲಿರುವ ಬಟ್ಟಲು ಎದುರಿಗೆ ಇಟ್ಟಳು. “ರ‍್ರಿ ಕೂಡ್ರಿ” ಎಂದು ಶಿಷ್ಟಾಚಾರಕ್ಕೆ ಹೇಳುತ್ತ ಬಸೂ ಎದ್ದು ನಿಂತ. ಬರ್ಮುಡಾದಲ್ಲಿ ನಿಂತಿರುವ ಅವನ ಎದೆ, ಭುಜ, ಕಾಲುಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತ ಅಲ್ಲೇ ಇರುವ ಕುರ್ಚಿಯ ಮೆಲೆ ಕುಳಿತೇ ಬಿಟ್ಟಳು. “ಈ ರೊಟ್ಟಿ ಹಳದಿ ಹ್ಯಾಂಗುಂಟು? ಮಾಡೋದು ಹ್ಯಾಂಗೆ?” ಎನ್ನುತ್ತ ಸಜ್ಜೆ ರೊಟ್ಟಿಯ ಬಗ್ಗೆ ಸಂಶೋಧನೆಗೆ ಶುರುವಿಟ್ಟವಳು ಅರ್ಧ ತಾಸಾದರೂ ಏಳಲಿಲ್ಲ.  ಒಂದು ರೊಟ್ಟಿ ತಿಂದು “ಆಯ್ತು ಬರ‍್ತೇನಿ ಹಾಂ” ಎನ್ನುತ್ತ ಹೊರನಡೆದ ಅವಳ ಮಾರುದ್ದ ಜಡೆ, ಹಣೆ ಮೇಲೆ ಬೀಳುವ ಅಲೆಕೂದಲು, ಹಾಲುಬಣ್ಣದ ಕುತ್ತಿಗೆ, ಉದ್ದುದ್ದ ಬೆರಳುಗಳು, ಒಂದು ಮಗಳು ಇದ್ದರೂ ತೆಳ್ಳಗೆ ಬಳುಕುವ ನಡು, ಸಣ್ಣ ಹುಡುಗಿಯ ಹಾಗೆ ಜೀನ್ಸ ಪ್ಯಾಂಟು, ಟಾಪು ಧರಿಸುವ ಆಧುನಿಕತೆ ಇತ್ಯಾದಿಗಳನ್ನು ನೋಡಿ ಮಲ್ಕಾಜಿಗೆ ಮಾತೇ ನಿಂತು ಹೋಗಿತ್ತು.  “ಅಬಾಬಾಬಾ ಐನಾತಿ ಹೆಣ್ಗೋಳದಾವು ಬಿಡ್ಲೆ ಇತ್ತಾಕಡಿಗೆ” ಎಂದ. ಇನ್ನೂ ಊಟ ಮುಗಿಸಿದ್ದರೋ ಇಲ್ಲವೋ, ಫೋನು ಬಂದಿತು.  ನಿಡಗುಂದಿಯಲ್ಲಿ ಮಲ್ಕಾಜಿಯ ಕುಟುಂಬದ ಮುದುಕಿಯೊಂದು ತೀರಿಕೊಂಡಿತ್ತು. “ನಾ ಇನ್ನೊಮ್ಮೆ ಬಂದು ಎಲ್ಲಾ ಅಡ್ಡಾಡ್ತೇನಿ ಬಸೂ, ದೌಡ ಬಸ್ ಸ್ಟಾö್ಯಂಡಿಗೆ ನಡಿ ಎನ್ನುತ್ತ” ಹೊರಟೇ ಬಿಟ್ಟ ಮಾಮಾನನ್ನು ಕಳಿಸಿ ಬರುವಷ್ಟರಲ್ಲಿ ರಾಮಚಂದ್ರ ಬಂದಿದ್ದ. ರೂಮುಗಳ ಕೊರತೆಯಿದೆಯೆಂದು ಕಾಲೇಜಿನಲ್ಲಿ ಬೆಳಿಗ್ಗೆ ಕಾಮರ್ಸ, ಮಧ್ಯಾಹ್ನ ಆರ್ಟ್ಸ ವಿಭಾಗಗಳನ್ನು ನಡೆಸುತ್ತಿದ್ದ ಕಾರಣ ರಾಮಚಂದ್ರ ಊರಿಗೆ ಹೋದರೆ, ಮದ್ಯಾಹ್ನದವರೆಗೆ ಬಂದು ತಲುಪಿಕೊಂಡರೂ ನಡೆಯುತ್ತಿತ್ತು. ಅಷ್ಟರಲ್ಲಿ ಕನ್ನಡ ಉಪನ್ಯಾಸಕ ಜಿ.ಕೆ. ಹೆಗಡೆಯ ಫೋನು ಬಂದಿತು. ತನ್ನ ಕವಿತಾವಾಚನ ಗಾಯನ ಕಾರ್ಯಕ್ರಮವಿದೆ ಬನ್ನಿ ಎಂದು ಕರೆದ. ಇಬ್ಬರೂ ಗೆಳೆಯರು ರೂಮಿಗೆ ಬೀಗ ಹಾಕಿ ಕೆಳಗಿಳಿದರು. ಮಧುವನ ಹೋಟೆಲಿನ ಹಾಲು ತುಂಬ ಜನ ಕುಳಿತಿದ್ದರು. ಇವರ ಕಾಲೇಜಿನ ಸ್ಟಾಫ್ ಎಲ್ಲಾ ಸೇರಿದಂತಿತ್ತು. ಕಾರ್ಯಕ್ರಮದ ಆರಂಭ ಶೀತಲ್ ಇವರ ಪ್ರಾರ್ಥನೆಯೊಂದಿಗೆ ಎಂದು ಕರೆದೊಡನೆ ಇವನಿಗೆ ಮಿಂಚು ಹೊಡೆದಂತಾಯಿತು. ಶೀತಲ್ ಇವರ ಕಾಲೇಜಿನಲ್ಲಿ ಕಾಮರ್ಸನ ಅತಿಥಿ ಉಪನ್ಯಾಸಕಿ. ತುಂಬಾ ರೂಪಸಿ, ಮಿತಭಾಷಿ, ಉದ್ದ ಜಡೆ ತೂಗಾಡಿಸಿ, ಜಿಂಕೆ ಕಣ್ಣರಳಿಸಿ ಓಡಾಡುವ ಅವಳನ್ನು ಬಸೂ ಮಾತಾಡಿಸಿದ್ದು ಬಹಳ ಕಡಿಮೆ ಸಲ.  ತಾನಾಯ್ತು ತನ್ನ ಕ್ಲಾಸಾಯ್ತು ಎಂದಿರುತ್ತಾಳೆ. ತಿಳಿನೀಲಿ ಕಸೂತಿ ಸೀರೆಯುಟ್ಟ ಶೀತಲ್ ಮೈಕಿನ ಎದುರು ಬಂದು ಇಂಪಾಗಿ ಹಾಡತೊಡಗಿದಳು. ‘’ಯಾರು ಜೀವವೇ, ಯಾರು ಬಂದವರು ಭಾವನೆಗಳನೇರಿ, ಒಣಗಿದೆನ್ನೆದೆಗೆ ಮಳೆಯ ತಂದವರು ಬಿಸಿಲ ತೆರೆಯ ಸೀಳಿ’’ ಆಹಾ ಸಂಜೆಯಾಕಾಶದ ಮೋಡವೇ ಕೆಳಗಿಳಿದು ಬಂದ ಹಾಗೆ ಭಾಸವಾಗ್ತಾ ಇತ್ತು. ಅವಳು ಯಾವಾಗ ಹಾಡು ಮುಗಿಸಿದಳೋ, ಗಡಚಿಕ್ಕುವ ಚಪ್ಪಾಳೆ ಮಧ್ಯೆ ತಿರುಗಿ ಬಂದು ಕೂತಳೋ, ಬಸೂಗೆ ತಿಳಿಯಲೇ ಇಲ್ಲ. ‘’ಸರ್ ನೀವ್ಯಾವಾಗ ಬಂದ್ರಿ. ರಾಜೂ ತಾಳಿಕೋಟೆ ಎಲ್ಲೋದ್ರು?’’ ಅಯ್ಯೋ ಬಂದೇ ಬಿಟ್ಟಳಪ್ಪ ವರದೆ.  ರಾಮಚಂದ್ರ ನಾಯ್ಕ ಅವಳೊಂದಿಗೆ ಹಾಗೆ ಹರಟುತ್ತ ಟೈಂ ಪಾಸ್ ಮಾಡಲು ಶುರು ಮಾಡಿದ ಬಸೂ ಕೂತಲ್ಲಿಂದ ಇಣುಕಿ, ಇಣುಕಿ ಶೀತಲಳತ್ತಲೇ ನೋಡುತ್ತಲಿದ್ದ. ಸ್ವಲ್ಪ ಹೊತ್ತಿಗೆ ಅವಳೆದ್ದು ಹೊರಗೆ ಹೊರಟಿದ್ದು ಕಂಡಿದ್ದೇ ಹಗೂರ ಎದ್ದು ತಾನೂ ಹೊರಬಂದ. ಅವಳು ತನ್ನ ಸ್ಕೂಟಿ ಸ್ಟಾರ‍್ಟ್  ಮಾಡುವ ತಯಾರಿಯಲ್ಲಿದ್ದಳು. ‘’ಹಲೊ ಮೇಡಂ, ಎಷ್ಟು ಚೊಲೊ ಹಾಡ್ತೀರಿ. ನೀವು ಹಾಡೊ ವಿಷ್ಯ ಗೊತ್ತಿರ‍್ಲಿಲ್ಲ. ಸಂಗೀತ ಕಲ್ತಿರೇನ್ರಿ’’ ಎನ್ನುತ್ತ ಹತ್ತಿರ ಹೋದ.  ‘’ನಮಸ್ತೆ ಸರ್, ಥ್ಯಾಂಕ್ಯೂ. ನಾನು ಸಂಗೀತ ಕಲೀತಾ ಇದೇನೆ.  ಆದ್ರೆ ಹೊರ‍್ಗೆ ಹಾಡೋದು ಸ್ವಲ್ಪ ಕಡಿಮೆ.  ನಾಚುತ್ತ ಮೆಲ್ಲಗೆ ಹೇಳಿದಳು. ‘’ಭಾಳ ಚೊಲೊ ಇತ್ ಬಿಡ್ರಿ. ಯಾರರ‍್ದಿದ್ರಿ ಭಾವಗೀತೆ’’ ಕೇಳುತ್ತ ಮತ್ತೊಂದು ಹತ್ತು ನಿಮಿಷ ಹರಟಿದ ‘’ನಾ ಬರ‍್ತೇನೆ ಹಂ. ನಮ್ತಾಯಿ ಕಾಯ್ತಾ ಇರ್ತಾರೆ. ತಡಾ ಆದ್ರೆ ಯೋಚ್ನೆ ಮಾಡ್ತಾರೆ’’ ಲಗುಬಗೆಯಿಂದ ಗಾಡಿ ಸ್ಟಾರ‍್ಟ್ ಮಾಡಿ ಹೊರಟಳು. ಅಂದು ರಾತ್ರಿಯೆಲ್ಲ ಬಸವರಾಜ ಉಳ್ಳಾಗಡ್ಡಿಗೆ ಸರಿಯಾಗಿ ನಿದ್ದೆ ಮಾಡುವುದು ಕಷ್ಟವಾಗಿತ್ತು. ರಾಮಚಂದ್ರನ ಗೊರಕೆ  ದೊಡ್ಡದಾಗಿದೆಯೆಂದೆಲ್ಲ ಅನ್ನಿಸಲು ಶುರುವಾಯ್ತು, ಎದ್ದು ಕಿಟಕಿ ತೆರೆದು ಹೊರಗೆ ನೋಡಿದ. ಮಮತಾಳ ಮನೆಯ ಬೆಡ್ ರೂಮಿನ ಲ್ಯೆಟಿನ್ನೂ ಆರಿರದೇ ಇರುವುದು ಕಂಡಿದ್ದೇ ಹೇಗೋ ಅನ್ನಿಸಿ ಕಿಟಕಿ ಹಾಕಿಬಿಟ್ಟ. ನೀರು ಕುಡಿದು ಲೋಟ ಇಡುವಾಗ ನಿಂಬೆಹಣ್ಣಿನ ಉಪ್ಪಿನಕಾಯಿ ಬಾಟಲಿ ಕಂಡಿತು. ಥಟ್ಟನೆ ನೆನಪಾಯ್ತು ಹೌದು ಮಲ್ಕಾಜಿ ಮಾವ ತನ್ನ ಮಗಳು ನಿನಗಾಗಿ ಉಪ್ಪಿನಕಾಯಿ ಮಾಡಿ ಕಳ್ಸಿದಾಳೆ ಎಂದಿದ್ದು. ಅಕ್ಕಮಹಾದೇವಿ ಸೈಡ್ ಫೋಸಲ್ಲಿ ನಿಧಿ ಸುಬ್ಬಯ್ಯನ ಹಾಗೆ ಇರುವಳೆ ಎಂದು ಸಂಶಯ ಬಂತು. ಛೀ ಎಂದು ಗಟ್ಟಿಯಾಗಿ ಕಣ್ಮುಚ್ಚಲು ಯತ್ನಿಸಿದ ಶೀತಲಳನ್ನು ನೆನಸಿಕೊಳ್ಳುತ್ತ ಮಲಗಬೇಕು ಕನಸಲ್ಲಿ ಬರುತ್ತಾಳೆ ಎಂದುಕೊಂಡ.  ಮುಖವೊಂದು ಹತ್ತಿರ ಬಂದಂತಾಯಿತು. ಅಯ್ಯಯ್ಯೋ ಗಿರಿಜಾಳ ಮುಖ ಥೂ ಎಂದು ಮಗ್ಗುಲಾದ.

            ಮರುದಿನ ಮಧ್ಯಾಹ್ನ ವೀರೇಶ ಬಳಿಗಾರ ಅಕ್ಕಿಆಲೂರಿನಿಂದ ಬಂದಿಳಿದ. ಅವನು ಬಂದನೆಂದರೆ, ಬರೀ ಗಲಾಟೆಯೇ ಗಲಾಟೆ. ದೊಡ್ಡ ಧ್ವನಿಯಲ್ಲಿ  ಮಾತು, ಜೋರಾಗಿ ನಗು.  ಅವನು ಬರುತ್ತಿದ್ದಂತೆ ಬಸೂನ ಅವ್ವನ ಫೋನು ಬಂದಿತು. ಮಲ್ಕಾಜಿ ಮಾವ ಭೆಟ್ಟಿಯಿತ್ತಾಗ ಕಣ್ಣಿಗೆ ಬಿದ್ದ ಹೆಣ್ಣು ಮಕ್ಕಳ ವರ್ತನೆಯಿಂದ ತಾವೆಲ್ಲ ಅತಂಕಕ್ಕೆ ಒಳಗಾಗಿದ್ದೇವೆಂತಲೂ, ಅದರ ನಿವಾರಣಾರ್ಥವಾಗಿ ಬಸೂ ತಕ್ಷಣವೇ ಮದುವೆಗೆ ಒಪ್ಪಿಗೆ ಕೊಡಬೇಕೆಂತಲೂ, ಆದಷ್ಟು ಬೇಗ ಬಾಗಲಕೋಟೆ ಅಥವಾ ಬಿಜಾಪುರ ಜಿಲ್ಲೆಯ ಊರಿಗೆ ವರ್ಗಮಾಡಿಸಿಕೊಳ್ಳಬೇಕೆಂದೂ ಆಕೆ ಅರ್ಥಗಂಟೆ ಕೊರೆದಳು. ನಡುನಡುವೆ ಅಳುವಿನ ಹಿನ್ನೆಲೆ ಸಂಗೀತವೂ ಇದ್ದ ಕಾರಣ ಹತಾಶನಾದ ಬಸೂ ಫೋನನ್ನು ವೀರೇಶನ ಕೈಗೆ ಕೊಡಬೇಕಾಯಿತು.  ವೀರೇಶ ತುಂಬಾ ಚೆನ್ನಾಗಿಯೇ ಸಾಂತ್ವನ ಹೇಳಿದ.  ‘’ನೀ ಎಸ್ ಕಾಳಜಿ ಮಾಡಬ್ಯಾಡಬೇ, ನಾ ಎಲ್ಲಾ ಹೇಳತ್ತೇನು.  ಬ್ಯಾಸಗಿ ಸೂಟ್ಯಾಗ ಲಗ್ನ ಇಟ್ರಾತು ತಗೋ, ಚಿಂತಿಬಿಡ್ ನೀ’’ ಫೋನು ಇಟ್ಟವನೇ ಬಸೂನನ್ನು ತರಾಟೆಗೆ ತೆಗೆದುಕೊಂಡ. ವರದಾ. ಮಮತಾರ ವಿಷಯ ವಿವರಿಸಿಯಾದ ಮೇಲೆ ಜೋರಾಗಿ ನಗತೊಡಗಿದ. ‘’ಒಂದ ಕೈ ನೋಡ್ತಿಯೇನಪಾ ಬಸೂ?’’ ಕೇಳಿದ. ರಾಮಚಂದ್ರ ಕೂಗಿಕೊಂಡ ‘’ಹಂಗೆಲ್ಲ ಕಷ್ಟ ಉಂಟು, ಕಡೆಗೆ ಏಡ್ಸ ಬಂದ್ರೂ ಬಂತು. ಯಾರು ಹ್ಯಾಂಗಿರತ್ರು ಹೇಳೋಕೇ ಬರೋದಿಲ್ಲ’’. ಇವನೌವ್ನ ಬಾರೀ ಶಾಣೆ ಅದಿ ತಗೇಲೆ’’ ಎನ್ನುತ್ತ ವೀರೇಶ ಹಗ್ಗದ ಮೇಲೆ ಒಣಗಿಸಿದ ರಾಮಚಂದ್ರನ ಕಾಚಾವೊಂದನ್ನು ತೆಗೆದು ಪರೀಕ್ಷಿಸುತ್ತ ‘’ತಗಡ ಗಿಗಡ ಬಡಶಿಕೊಂಡಿಯೇನ ಮತ್ತ’’ ಎಂದು ಕೇಳಿದ. ಗೊಳ್ಳೆಂಬ ಮೂರು ಜನರ ನಗುವಿನಿಂದ ದೊಡ್ಡದೊಂದು ಹುರುಪಿನ ಅಲೆ ಸೃಷ್ಟಿಯಾಗಿ ಆ ಬ್ರಹ್ಮಚಾರಿಗಳ ರೂಮಿನ ತುಂಬ ತುಂಬಿ ಕಿಟಕಿಯಿಂದ ನಡೆದು ವಿಶ್ವನಾಥ ಕಿಣಿಯ ಕಂಪೌಂಡಿನ ಚರಾಚರ ವಸ್ತುಗಳನ್ನು ಸವರುತ್ತ ಗೇಟಿನ ಬಳಿ ನಿಂತಿದ್ದ ಸಂಧ್ಯಾ, ಗಿರಿಜಾರ ಕಣ್ಣಲ್ಲಿ ಅಚ್ಚರಿಯ ಮೋಡವೊಂದನ್ನು ಹುಟ್ಟಿಸಿ, ಸ್ಕೂಟಿಗೆ ಕಿಕ್ ಕೊಡುತ್ತಿದ್ದ ಮಮತಾಳ ಕಿವಿಗೆ ಕಚಗುಳಿಯಿಕ್ಕಿ ಹಾಗೇ ಮುಂದೋಡಿತು. 

************************

Leave a Reply

Back To Top