ಡಾ.ಪುಷ್ಪಾವತಿ ಶಲವಡಿಮಠ ಲೇಖನ-ಮರತೇನೆಂದರೂ ಮರೆಯಲಿ ಹ್ಯಾಂಗ್…

ವಿಶೇಷಬರಹ

ಡಾ.ಪುಷ್ಪಾವತಿ ಶಲವಡಿಮಠ

ಮರತೇನೆಂದರೂ ಮರೆಯಲಿ ಹ್ಯಾಂಗ್

ಮರತೇನೆಂದರೂ ಮರೆಯಲಿ ಹ್ಯಾಂಗ್…
ಹೌದು ಕೆಲವು ಕ್ಷಣಗಳು, ಕೆಲವು ಸಂದರ್ಭಗಳು, ಕೆಲವು ವ್ಯಕ್ತಿಗಳು, ಕೆಲವು ಘಟನೆಗಳು ಮರೆಯಬೇಕೆಂದರೂ ಮರೆಯದೇ ಹೃದಯವೆಂಬ ಊಚಿಡಿಜ ಆisಞ ನಲ್ಲಿ ಸಿಲುಕಿಕೊಂಡಿರುತ್ತವೆ.
ಮರೆವು’ ಮನುಷ್ಯನಿಗೆ ದೇವರ ವರದಾನವೆಂಬುದು ಸತ್ಯ. ನೆನಪಿನಷ್ಟೇ ಮರೆವು ಕ್ಷಣ ಮನುಷ್ಯನಿಗೆ ನೆಮ್ಮದಿ ನೀಡಬಲ್ಲದು. ಕಾಲನ ಪಯಣದಲ್ಲಿ ನೆನಪಿಗೆ ಮರೆವಿನ ಮುಸುಕು ಆವರಿಸಿಕೊಳ್ಳುತ್ತಾ ಹೋಗುವುದು.
ಸಾಹಿತ್ಯ ಮಾತ್ರ ಕಾಲದಿಂದ ಕಾಲಕ್ಕೆ ಮರುವಿನ ಈ ಮುಸುಕನ್ನು ಸರಿಸಬಲ್ಲದ್ದು. ಯುಗಗಳು ಉರುಳಿದಂತೆ ಬದಲಾವಣೆಯ ಕ್ರಿಯೆಗೆ ಸಾಹಿತ್ಯ ಚಾಲನೆ ನೀಡಿ, ಹೊಸತನದ ಮೂಸೆಯಲ್ಲಿ ಯುಗ ಮೌಲ್ಯಗಳನ್ನು ಉಳಿಸಿ ಮಹದುಪಕಾರ ಮಾಡಿದೆ. ಕಾಲಚಕ್ರದಡಿ ಕೃತಯುಗ ಉರುಳಿ, ತೇತ್ರಾಯುಗ ಉರುಳಿ, ದ್ವಾಪಾರ ಯುಗವೂ ಉರುಳಿ ಹೋಗಿದೆ. ಕಾಲಚಕ್ರ ನಿಂತಿಲ್ಲ. ಕಲಿಯುಗಕ್ಕೂ ಕರೆದುಕೊಂಡು ಬಂದಿದೆ. ಮೌಲ್ಯ ಅಪಮೌಲ್ಯಗಳ ತುಲನೆಯನ್ನು ಕಾಲದಿಂದ ಕಾಲಕ್ಕೆ ಸಾಹಿತ್ಯ ಅನುಸಂಧಾನಗೊಳಿಸುತ್ತಲೇ ಬಂದಿದೆ. ಈ ಕಾರಣದಿಂದಲೇ ಸಾಹಿತ್ಯ ಚರಿತ್ರೆಯ ಮರುಓದು, ಮರುವಾಖ್ಯಾನ, ಮರು ವಿಮರ್ಶೆಗಳು ನಡೆಯುತ್ತಲೆ ಇವೆ.
ಕರ್ಣ’ನ ಪಾತ್ರ ಇವತ್ತಿಗೂ ಕೂಡಾ ಹಲವಾರು ಮೌಲ್ಯಗಳನ್ನು, ಸಂಘರ್ಷಗಳನ್ನು ನೆಮ್ಮೆದುರು ಹಿಡಿದು ತರುತ್ತಲೇ ಇದೆ. ಮಹಾಭಾರತದಲ್ಲಿ ದುರಂತನಾಯಕ’ ನಾದ ಕರ್ಣ ಹಲವಾರು ಸವಾಲುಗಳೊಂದಿಗೆ, ಹಲವಾರು ಪ್ರಶ್ನೆಗಳೊಂದಿಗೆ, ಹಲವಾರು ವೈರುಧ್ಯ ನೆಲೆಯೊಂದಿಗೆ ನಮ್ಮ ಊಚಿಡಿಜ ಆisಞ ನಲ್ಲಿ ಉಳಿದುಕೊಂಡಿದ್ದಾನೆ. ಕರ್ಣನ ಕುರಿತಾಗಿ ಹೆಮ್ಮೆ, ಕರುಣೆ, ಮೆಚ್ಚುಗೆ, ಧನ್ಯತೆ, ಭಾವಗಳು ಆ ವ್ಯಕ್ತಿಯು ರೂಢಿಸಿಕೊಂಡ ಹಲವು ಬದ್ಧತೆಗಳಿಂದ ಎಲ್ಲರ ಎದೆಯಲ್ಲಿ ಅಚ್ಚಳಿಯದೆ ಉಳಿದಿರುವುದರಲ್ಲಿ ಯಾವುದೇ ಸಂಶಯವಿಲ್ಲ.
ಕರ್ಣನದು ಮೂರು ಅವತಾರ. ರಾಧೇಯ ಕರ್ಣ, ಅಂಗಾಧಿಪತಿ ಕರ್ಣ, ಕೌಂತೇಯ ಕರ್ಣ. ಈ ಮೂರು ಹಂತಗಳು ಕರ್ಣನು ಅನುಭಸಿದ ಶೋಷಣೆಯನ್ನೇ ಅನಾವರಣಗೊಳಿಸಿ ಸಮಾಜದ ನಗ್ನತೆಯನ್ನು ತೋರುತ್ತವೆ.
ಕ್ಷತ್ರೀಯ ವಂಶದಲ್ಲಿ ಜನಿಸಿದರೂ, ಸೂತ ದಂಪತಿಗಳ ಆಶ್ರಯಕ್ಕೆ ಬಂದು, ರಾಧೆಯ ಮಮತೆಯ ಮಡಿಲಲ್ಲಿ ಬೆಳೆದು, ತನ್ನ ಪರಾಕ್ರಮ ಸತತ ಪ್ರಯತ್ನಗಳಿಂದ ಜಾತಿ ಮೀರಿ ಬೆಳೆದರೂ ಸೂತ’ನೆಂಬ ಹೀಯಾಳಿಕೆ ಅವನ ಎಲ್ಲಾ ಸಾಮರ್ಥ್ಯವನ್ನು ನುಂಗಿ ಹಾಕುತ್ತದೆ.
ವರ್ಗ, ವರ್ಣ, ಸಂಘರ್ಷದಲ್ಲಿ ಅಂದು ನಲುಗಿದ ಕರ್ಣನ ಸ್ಥಿತಿ ಇವತ್ತಿಗೂ ಆ ಶೋಷಣೆಯಡಿ ನರಳುತ್ತಿರುವ ಅನೇಕ ಕರ್ಣರ ಎದೆಯನ್ನು ಸುಡುತ್ತಿದೆ. ಅಂದಿನ ಶೋಷಣೆಯ ಬೇರು ಇಂದೂ ಹಲವು ರೆಂಬೆಕೊಂಬೆಗಳನ್ನು ಚಾಚಿಕೊಂಡು ಶೋಷಣೆಯ ನಿರಂತರತೆಯನ್ನು ಸಾಕ್ಷೀಕರಿಸುತ್ತಿದೆ.


ಅಂಗದೇಶದ ಅರಸು ಪಟ್ಟ ಕರ್ಣನ ಬದುಕಿನ ಎರಡನೇಯ ಹಂತ. ಈ ಸಂದರ್ಭದಲ್ಲಿ ಕರ್ಣನ ಸ್ಟೇಟಸ್ ಸಾಮಾಜಿಕವಾಗಿ ಉನ್ನತ ಮಟ್ಟಕ್ಕೇರಿದರೂ ಅವನ ಪರಾಕ್ರಮ, ಅವನ ಸಾಮರ್ಥ್ಯ, ಅವನ ಪ್ರತಿಭೆ ಕುರುರಾಜಕುಮಾರ (ದುರ್ಯೋಧನ) ನ ಪಾದ ಸೇವೆಗೆ ಮೀಸಲಾದದ್ದು, ಮತ್ತೊಂದು ದುರಂತ. ಸಾಮಾಜಿಕ ಮನ್ನಣೆ, ಗೌರವಕ್ಕೆ ಹಾತೊರೆದ ಕರ್ಣ ದುರ್ಯೋಧನನೆಂಬ ಸ್ನೇಹ ಸರಪಳಿಯಲ್ಲಿ ಸ್ವತಹ ತನ್ನನ್ನೇ ಬಂಧಿಸಿಕೊಂಡು ಸ್ವಾತಂತ್ರತೆಯನ್ನು ಕಳೆದುಕೊಳ್ಳುವುದು ವಿಪರ್ಯಾಸ. ಏನೋ ಮಾಡಲು ಹೋಗಿ, ಮತ್ತೆಲ್ಲೋ ಸಿಲುಕಿಕೊಳ್ಳುವ ಕರ್ಣ ತನ್ನತನವನ್ನು ದುರ್ಯೋಧನನಲ್ಲಿ ಒತ್ತೆ ಇಡುತ್ತಾನೆ. ಇವತ್ತು ಕೂಡಾ ಎಷ್ಟೋ ಯುವಕರು ವಿದ್ಯಾವಂತರಾಗಿದ್ದರೂ, ಪ್ರಜ್ಞಾವಂತರಾಗಿದ್ದರೂ ತಮ್ಮ ಅಸ್ತಿತ್ವಕ್ಕಾಗಿ ತಮ್ಮತನಕ್ಕಾಗಿ ಎಲ್ಲೋ ಯಾರಕಾಲ ಕೆಳಗೆ ಅದನ್ನು ಒತ್ತೆ ಇಡುವ ಅನಿವಾರ್ಯತೆಗೆ ಒಳಗಾಗಿದ್ದಾರೆ.
ಕುಂತಿಯ ಪುತ್ರ ಕರ್ಣ ಇದು ಕರ್ಣನ ಬದುಕಿನ ಕೊನೆಯ ಹಂತ ಆಶ್ಚರ‍್ಯ ಪಡುವ ಅಗತ್ಯವಿಲ್ಲ. ಕಾರಣ ಇಷ್ಟೇ ಇವನ ಜನನಕ್ಕೆ ಕುಂತಿ ಕಾರಣವಾಗಿದ್ದರೂ ಅದು ರಹಸ್ಯವಾಗಿ ಉಳಿಯುವಂತೆ ಕೊನೆಯವರೆಗೂ ರಾಜಕಾರಣ ಕಾಪಾಡಿಕೊಂಡು ಬರುವುದರಿಂದ ಕರ್ಣ, ರಾಧೇಯನಾಗಿ ಬೆಳೆಯುವುದು, ಅಂಗಾಧಿಪತಿಯಾಗಿ ಜೀವಿಸುವುದು, ಕೌಂತೇಯನಾಗಿ ಸಾಯುವುದನ್ನು ನಾವು ಗಮನಿಸುತ್ತೇವೆ. ಅದಕ್ಕೆ ಇದು ಕರ್ಣನ ಕೊನೆಯ ಹಂತ. ಅನಂತ ಮೂರ್ತಿಯವರ ’ಸಂಸ್ಕಾರ’ ಕಾದಂಬರಿಯಂತೆ ಸತ್ತ ನಂತರ ಕರ್ಣ ಕೌಂತೇಯನಾಗಿ ಕ್ಷತ್ರೀಯನಾಗಿ ಸಂಸ್ಕಾರ ಪ್ರಕ್ರಿಯೆಗೆ ಒಳಗಾಗುತ್ತಾನೆ. ಇದ್ದಾಗ ಕರ್ಣನನ್ನು ಗೌರವಿಸದ ಸಮಾಜ, ಸತ್ತಾಗ ನಮ್ಮವನೆಂದು ಕೊಳ್ಳಿ ಇಡುವುದು ನಗೆ ಪಾಟಲಿಗೆ ಈಡು ಮಾಡುತ್ತದೆ. ಇಂದು ನಮ್ಮ ಪ್ರತಿಭಾವಂತ ಎಷ್ಟೋ ಯವಕರು ಇದ್ದೂ ಸತ್ತಂತೆ ಬದುಕುತ್ತಾರೆ. ಸಾಧನೆಯ ಮೆಟ್ಟಿಲೇರಿದಾಗ ಜಾತಿ, ಪಂಗಡಗಳಿಂದ ಗೌರವ, ಸನ್ಮಾನಕ್ಕೆ ಒಳಗಾಗುತ್ತಿದ್ದಾರೆ. ಪ್ರತಿಭೆ’ಗೂ ಇಂದು ಜಾತಿ, ಧರ್ಮ, ಪಂಗಡದ ಅಂಟುಜಾಡ್ಯ ಆವರಿಸಿದೆ. ಇದು ಕರೋನಾ ವೈರಸ್‌ಗಿಂತ ಕ್ರೂರ, ಭಯಂಕರ. ಕರೋನಾಕ್ಕಾದರೂ ವ್ಯಾಕ್ಸಿನ್ ಸಿಗಬಹುದು, ಆದರೆ ಜಾತಿ, ಧರ್ಮ ಪಂಗಡಕ್ಕೆ ಯಾವ ಕಾಲಕ್ಕೂ ಔಷಧಿನೂ ಇಲ್ಲಾ, ವ್ಯಾಕ್ಸಿನ್ ಇಲ್ಲಾ, ಅಲ್ಲವೇ…?-

—————

ಡಾ. ಪುಷ್ಪಾವತಿ ಶಲವಡಿಮಠ

Leave a Reply

Back To Top