ಅನಲೆ’ಯೆಂಬ ಬೆಳಕಿನ ದೀಪ-ಡಾ. ಪುಷ್ಪಾವತಿ ಶಲವಡಿಮಠ

ವಿಶೇಷ ಲೇಖನ

ಡಾ. ಪುಷ್ಪಾವತಿ ಶಲವಡಿಮಠ

ಅನಲೆ’ಯೆಂಬ ಬೆಳಕಿನ ದೀಪ

ನಿನಗಿಂ ಮಿಗಿಲ್ ಸೀತೆ

ನನಗೆ ದೇವತೆ, ಮಾತೆ! ಶ್ರದ್ಧೆಗೆಟ್ಟಿರ್ದೆನಗೆ

ಶ್ರದ್ಧೆಯಂ ಮರುಕೊಳಿಸು ತಾತ್ಮದುದ್ಥಾರಮಂ

ತಂದ ದೇವತೆ, ಪುಣ್ಯ ಮಾತೆ!

ಕುವೆಂಪು, ಶ್ರೀರಾಮಾಯಣ ದರ್ಶನಂ

            ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಸಾಲುಗಳಿವು. ಅಸುರನಾದ ರಾವಣನೆದೆ ಕರಿಗಿ ಅಮೃತದ ಮಳೆ ಕರೆದ ಸಂದರ್ಭದ ಮಾತುಗಳಿವು. ಹೃದಯ ಮನೋಹರಿ, ಸಾಮ್ರಾಜ್ಯಿ ಮಂಡೋದರಿಗೆ ರಾವಣನು ಮುಖಾಮುಖಿಯಾಗುವ ಸನ್ನಿವೇಶ. ಸತಿಯನ್ನು ಸಂಧಿಸಿದ ರಾವಣನು ಅವಳನ್ನು ಉದ್ದೇಶಿಸಿ ನುಡಿಯುತ್ತಾನೆ ಪಾಪಿಯಂ ಕೈ ಬಿಡದೆ ಪುಣ್ಯಕೊಯ್ಯುನ ದೇವಿ ನನಗೆ ನೀನೊಬ್ಬಳೆಯೇ ದಲ್! ಎಂದು. ಪ್ರಶಂಸೆಯ ಆ ನುಡಿ ಕೇಳಿ ಮಂಡೋದರಿ ರಾವಣನ ಕಾಲಿಗೆ ಎರಗುತ್ತಾಳೆ. ಅವಳನ್ನು ಎತ್ತಿ ರಾವಣನು ಅವಳ ಕಣ್ಣೀರು ಒರೆಸಿ ಮತ್ತೇ ಮನೋಜ್ಞವಾಗಿ ಹೇಳುತ್ತಾನೆ,  ದಿಟಂ, ದೇವಿ ನೀನೊಬ್ಬಳೆಯೇ ರಾವಣಗೆ ! ಮೇಣ್ ಸೀತೆ !

            ಪಾಪಾತ್ಮನಾದ ನನ್ನ ಕೈ ಬಿಡದೆ ಪುಣ್ಯಕೊಯ್ಯುವ ದೇವಿ ನಿನ್ನೋಬಳೆಯೇ ಎಂದು ಪತ್ನಿಗೆ ಹೇಳುವ ರಾವಣ. ಮುಂದುವರೆದು ಮೀಣ್ ಸೀತೆ ( ಮುಖ್ಯವಾಗಿ ಆದರಲ್ಲಿ ಪ್ರಮುಖಳು ಸೀತೆ ) ಎನ್ನುವ ಮಾತು ಮಂಡೋದರಿಯಷ್ಟೇ ಎಲ್ಲ ಓದುಗರಿಗೂ ಅಚ್ಚರಿ ಹುಟ್ಟಿಸುತ್ತದೆ. ಅಂತರಾತ್ಮದಲ್ಲಿ ರಾವಣ ಶುದ್ಧಾತ್ಮವಾಗಿರುತ್ತಾನೆ ಆ ಕ್ಷಣ. ತನ್ನ ಅಂತಸ್ಥದಲ್ಲಿ ಹೇಳಿಕೊಳ್ಳುತ್ತಾನೆ. ಹೌದು ಮಂಡೋದರೆ ನಿನಿಗಿಂತ ಮಿಗಿಲಾಗಿ ಸೀತೆ ನನಗೆ ದೇವತೆ. ಮಾತೆ. ಶ್ರದ್ಧೆಗೆಟ್ಟಿದ್ದ ನನಗೆ ಶ್ರದ್ಧೆಯನ್ನು ಮರಳಿ ಕಲಿಸಿ ನನ್ನ ಆತ್ಮದ ಉದ್ಹಾರ ಮಾಡಿದ ದೇವತೆ, ಪುಣ್ಯ ಮಾತೆ ಎಂದು ಸೀತೆಯ ಬಗ್ಗೆ ಅಪಾರ ಅಭಿಮಾನವನ್ನು ತಾಳುತ್ತಾನೆ ಸೀತಾ ಮೋಹ ಕಳಚಿಟ್ಟ ರಾವಣನಿಗೆ ಅವಳಲ್ಲಿ ಮಾತೃತ್ವದ ಭಾವ ಹೊಮ್ಮುತ್ತದೆ. ದುರತ್ಮನಾದ ನನ್ನನ್ನು ಶುದ್ಧಾತ್ಮನನ್ನಾಗಿ ಮಾಡಿದ ದೇವತೆ ಎಂದು ಗೌರವಿಸುತ್ತಾನೆ.

            ನಾಗಚಂದ್ರನ ರಾವಣನಂತೆ ಕುವೆಂಪುವಿನ ರಾವಣನೂ ಪಶ್ಚಾತ್ತಾಪದ ಅಗ್ನಿಯಲ್ಲಿ ಬೆಂದು ಪುಟಕ್ಕಿಟ್ಟ ಚಿನ್ನವಾಗುತ್ತಾನೆ. ರಾವಣನ ಅಹಂಕಾರದಲ್ಲಿ ಅಡಗಿದ್ದ ಮೃದು ಮಧುರ ಭಾವದ ಅರಗಿಳಿಯನ್ನು ಗುರುತಿಸಿದ ಧನ್ಯತೆ ’ಅನಲೆ’ಯದು. ರಾಮಾಯಣದಲ್ಲಿ ಕಾಣಿಸಿಕೊಳ್ಳುವ ’ಅನಲಾ’ ಎಂಬ ಪಾತ್ರವನ್ನು ಕುವೆಂಪು ತಮ್ಮ ರಸಋಷಿತ್ವದ ದಿವ್ಯಂದೃಷ್ಟಿಯಲ್ಲಿ ರಾವಣನಂತಹ ಅಸುರನ ಎದೆಯನ್ನು ಕರಗಿಸಿ ಪ್ರೇಮದ ದೀಪವನ್ನು ದೇದೀಪ್ಯಮಾನ್ಯಗೊಳಿಸಿದ ಬೆಳಿಕಿನ ಪುಂಜವಾಗಿ ಚಿತ್ರಿಸಿದ್ದಾರೆ. ಮನೆ ಮನೆಗೊಬ್ಬಳು ಇಂತಹ ಮಗಳಿರಬೇಕೆಂಬ ಭಾವವನ್ನು ಉದ್ದೀಪನಗೊಳಿಸುವ ’ಅನಲೆ’ಯ ರೂಪದ ಅನಂತೆತೆಯನ್ನು ಕುವೆಂಪು ಸಹೃದಯರಿಗೆ ಪರಿಚಯಿಸಿದ್ದಾರೆ.

            ’ಅನಲೆ’ ರಾವಣನ ಮನ ಬೆಳಗಿದ ದೀಪ. ಅವನ ಮನಃ ಪರಿವರ್ತನೆಯ ಹರಿಕಾರಳು ಇವಳು. ರಾಮಾಯಣದಲ್ಲಿ ಬರುವ ಅಪರೂಪದ ಈ ಪಾತ್ರವನ್ನು ಕುವೆಂಪು ಮಾನವೀಯತೆಯ ಚೌಕಟ್ಟಿನಲ್ಲಿ ಹಿಡಿದಿಟ್ಟು, ಒಂದು ತುಂಬು ಕುಟುಂಬದಲ್ಲಿ ಹುಟ್ಟಿ ಎಲ್ಲರ ಪ್ರೀತಿ, ಮಮತೆ, ಆರೈಕೆ, ಮಾರ್ಗದರ್ಶನದಲ್ಲಿ ಬೆಳೆಯುವ ’ಅನಲೆ’ ಎಂಬ ಈ ಹೆಣ್ಣು ಮಗಳು ಆದರ್ಶವನ್ನು ಮೈಗೊಡಿಸಿಕೊಂಡು ಬಾಂದವ್ಯ ಗಟ್ಟಿಗೊಳಿಸುವ, ಸಂಸ್ಕೃತಿಯನ್ನು ಮುಂದುವರೆಸುವ ಕೊಂಡಿಯಂತೆ ಚಿತ್ರಿಸುತ್ತಾರೆ.

            ತುಂಬು ಕುಟುಂಬದ ಪರಿಕಲ್ಪನೆಯೇ ಛಿದ್ರಗೊಳ್ಳುತ್ತಿರುವ ಆಧುನಿಕ ಯುಗದಲ್ಲಿ ’ಅನಲೆ’ ವಿಶಿಷ್ಟತೆಯಿಂದ ಎದುರುಗೊಳ್ಳುತ್ತಾಳೆ. ರಾವಣನ ತಮ್ಮನಾದ ವಿಭೀಷಣನ ಮಗಳು ಇವಳು. ದೊಡ್ಡಪ್ಪನಾದ ಪರಾಕ್ರಮಿ ರಾವಣ, ಪತಿರೊತಾ ಶಿರೋಮಣಿಯಾದ ದೊಡ್ಡಮ್ಮ ಮಂಡೋದರಿ, ಧರ್ಮಭೀರುವಾದ ತಂದೆ ವಿಭೀಷಣ, ಪತಿಯ ನೆರಳಾದ ಸಾದ್ವಿತಾಯಿ ’ಸರಮೆ’ ಅತ್ಯಂತ ಬಲಿಷ್ಠನಾದ ಕುಂಭಕರ್ಣ ಇನ್ನೊಬ್ಬ ದೊಡ್ಡಪ್ಪ, ಅಣ್ಣ ಇಂದ್ರಜಿತು, ಅತ್ತಿಗೆ ಹಾಗೂ ಗೆಳತಿಯಾದ ತಾರಕ್ಷಿ ಇವರೆಲ್ಲರ ಮಧ್ಯ ಹೊಸದಾಗಿ ಆಗಮನವಾದ ಅತಿಥಿ ವಜ್ರಾರಿ (ಇಂದ್ರಜೀತು ತಾರಾಕ್ಷಿಯರ ಮಗ) ಜೀವನದಲ್ಲಿ ಗುರುಮಾತೆಯಂತೆ ದೊರೆತ ಸೀತೆ, ಬದುಕಿನ ಗಮ್ಯ ತಿಳಿಸುವ ತತ್ವವೇದಾಂತಿ ಶ್ರೀರಾಮನ ದರ್ಶನ, ಹೀಗೆ ಇಂತಹ ಕೂಡು ಕುಟುಂಬದಲ್ಲಿ ಬೆಳೆದವಳು ಅನಲೆ. ಇವಳು ತಂದೆಗಷ್ಟೇ ಮುದ್ದಿನ ಮಗಳಲ್ಲ. ಎಲ್ಲರ ಕಣ್ಮಣಿ. ದೊಡ್ಡಪ್ಪ ರಾವಣನಿಗೆ ಇವಳೆಂದರೆ ಅಚ್ಚುಮೆಚ್ಚು. ಹೀಗಾಗಿಯೇ ರಸಋಷಿ ಕುವೆಂಪುವಿನ ಶ್ರೀ ರಾಮಯಣ ದರ್ಶನಂ ಮಹಾಕಾವ್ಯದಲ್ಲಿ ಇವಳು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾಳೆ.

            ರಾವಣನ ರಾವಣತ್ವ ಕಳೆಯುವಲ್ಲಿ ’ಅನಲೆ’ಯದು ಮಹತ್ವದ ಪಾತ್ರವಿದೆ. ಅನಲೆಯ ತಂದೆಯಾದ ವಿಭೀಷಣನು ಸೀತಾಪಹರಣವನ್ನು ತೀವ್ರವಾಗಿ ವಿರೋಧಿಸುತ್ತಾನೆ. ತಮ್ಮನ ಈ ವಿರೋಧದಿಂದ ರಾವಣನಿಗೆ ಅತಿಯಾದ ಕೋಪಬರುತ್ತದೆ. ಮನದ ಸ್ಥಿಮಿತತೆ ಕಳೆದುಕೊಳ್ಳುತ್ತಾನೆ. ಅಸ್ವತ್ಥನಾಗುತ್ತಾನೆ. ಜ್ವರದಿಂದ ಬಳಲುತ್ತಾನೆ. ದೊಡ್ಡಪ್ಪನ ಅರೈಕೆಗೆ ಅನಲೆಯೇ ನಿಲ್ಲುತ್ತಾಳೆ. ಹೆಣ್ಣು ಮಕ್ಕಳಿಲ್ಲದ ರಾವಣನ ವ್ಯಕ್ತಿತ್ವವೇ ಸಿಂತಾಪಹರಣಕ್ಕೆ ಕಾರಣವಾಗುತ್ತದೆ. ಆದರೆ ಅನಲೆ ರಾವಣನ ಅಂತಃಕರ್ಣದ ಒಂದು ಭಾಗವಾಗಿ ಗೋಚರಿಸುತ್ತಾಳೆ.

            ರಾವಣನಿಗೆ ’ಅನಲೆ’ಯ ಮೇಲೆ ಅಪಾರ ನಂಬಿಕೆ, ವಿಶ್ವಾಸ ಪ್ರೀತಿ. ’ಅನಲೆ’ ಎಂಬ ಹೆಸರೇ ರಾವಣನನ್ನು ಕರಗಿಸಿ ಬಡುತ್ತದೆ. ಅದಕ್ಕೆ ಕುವೆಂಪು ರಾವಣ ಮತ್ತು ಅನಲೆಯ, ಅನ್ಯೋನ್ಯತೆಯನ್ನು ತುಂಬಾ ಮನೋಜ್ಞಾನಾಗಿ ಕಟ್ಟಿಕೊಡುತ್ತಾರೆ. ಪೆಣ್ಮಕ್ಕಳ್ಳಿಲ್ಲದ ದಶಗ್ರೀವನೆರ್ದೆಯ ಅಳ್ಕರೆಯ ಅರಗಿಳಿಯ ಹರಣಮಂ ಹೊರೆವ ಹಂಜರಮನಲ್ ಚೆಲ್ವುಕಣಿಯಾಗಿರ್ದ ಆತನ್ನ ಮಗಳ್ ಅನಲೆ (ಶ್ರೀ.ರಾ.ದ)

            ಅನಲೆ ಕೇವಲ ರಾವಣನನ ಪ್ರಾಣ ಪಕ್ಷಿಯನ್ನು ಕಾಪಾಡುವ ಪಂಜರ ಮಾತ್ರವಲ್ಲ ಆತನ ಉದ್ಘಾರದ ಸಂಕಲ್ಪ ರೂಪಿಯು ಹೌದು ಆತ್ಮೋದ್ಧಾರದ ಹಂಬಲದಲ್ಲಿದ್ದ ರಾವಣನಿಗೆ ಈ ಕಾರಣದಿಂದಲೇ ಅನಲೆಯ ಸಾಮಿಪ್ಯ ಸದಾ ಬೇಕೆನಿಸುತ್ತದೆ. ಮಗಳೊಬ್ಬಳೇ ತಾಯಿಯಾಗಿ ಅಪ್ಪನೊಂದಿಗಿರುವ ಅರ್ಹತೆ ಹೊಂದಿದವಳು. ಈ ಕಾರಣದಿಂದ ಮಾನಸಿಕವಾಗಿ ಅಸ್ವಸ್ಥನಾದ ರಾವಣನಿಗೆ ತಾಯಿಯಂತಹ ಪ್ರೀತಿಯ ವಾತ್ಸಲ್ಯದ ಸಿಂಚನಗೈಯುವ ಅನಲೆ ತುಸು ಅಗಲಿದರೂ ಸಹಿಸಿಕೊಳ್ಳಲು ಅಸಾಧ್ಯವಾಗುತ್ತದೆ.

            ತಮ್ಮ ವಿಭೀಷಣನ ವಿರೋಧದಿಂದ ಅಸ್ವಸ್ಥವಾಗಿ ಮಲಗಿದ ರಾವಣವು ನಿದ್ರೆಯಲ್ಲೇ ಕಣ್ಣೀರಿಡುತ್ತಾನೆ. ನಿದ್ದೆಯೊಳಳಲ್ ತೊಡಗಿದನ್, ಪಸುಳೆವೋಲಂತೆ, ಸರ್ವಲೋಕ ಭಯಂಕರನ್ ಆ ಮಹೇಂದ್ರಾರಿ! … ಭಾವಗೋಪನಕೆಳೆಸಿ ಸುರವೈರಿ ಕರೆದನ್ ಮೃದುಸ್ವರದಿ ’ಅನಲಾ’! ಎಂದು, ನಿದ್ರೆಯ ಕನವರಿಕೆಯಲ್ಲೂ ’ಅನಲೆ’ಯೇಬೇಕು ರಾವಣನಿಗೆ, ನಾನು ಇಲ್ಲಿಯೇ ಇರುವೆನು ದೊಡ್ಡಪ್ಪಾ ಎಂದು ಅನಲೆ ಉತ್ತರಿಸಿದರೆ, ಏನಿಲ್ಲ ! ನೀನನ್ನಗಲಿದೋಲೆನಗೊಂದು ಕನಸಾದುದಕ್ಕ ಎಂದು ಆತಂಕ ವ್ಯಕ್ತಪಡಿಸುತ್ತಾನೆ. ನಿದ್ದೆ ಮಾಡು ದೊಡ್ಡಪ್ಪ, ನಾನು ಎಲ್ಲಿಗೂ ನಿನ್ನ ಬಿಟ್ಟು ಹೋಗುವುದಿಲ್ಲ ಎಂದು ಅನಲೆಯೆಂದಾಗ, ದಿಟಮೊರೆದೆ, ಅಕ್ಕ, ಆರ್ ತೊರೆದೊಡಂ ನೀನ್ನನುಳಿವಳಲ್ತು (ಸತ್ಯವನ್ನೆ ನುಡಿದೆ ತಾಯೀ ಅಕ್ಕ) ಯಾರೇ ನನ್ನನ್ನು ತೊರೆದರೂ ಕೊನೆಗೆ ನೀನೇ ಉಳಿಯುವವಳು) ಎಂದು ರಾವಣನು ನುಡಿಯುವಾಗ, ಅವನೊಳಗಿನ ತಂದೆಯ ಭಾವ ಜಾಗೃತಿವಾಗುವುದು ಕಾಣುತ್ತದೆ. ರಾವಣ ಒಬ್ಬ ಚಕ್ರವರ್ತಿ ಹೇಗೋ ಹಾಗೇ ಒಬ್ಬ ತಂದೆಯೂ ಆಗಿ ಪರಿವರ್ತನೆ ಹೊಂದಲು ’ಅನಲೆ’ಯ ಪ್ರೀತಿ ಅಲ್ಲ ಸಹಕರಿಸಿದೆ. ಈ ಕಾರಣದಿಂದ ಕುವೆಂಪುರವರ ಮಹಾಕಾವ್ಯದ ಉದ್ದಕ್ಕೂ ಈ ಪಾತ್ರ ಶ್ರೇಷ್ಠವಾದ ಪ್ರೀತಿಯ ಅನಂತತೆಯ ಹಾಡನ್ನು ಹಾಡಿದ್ದು ಸುಶ್ರಾವ್ಯವಾಗಿ ಕೇಳಿ ಬರುತ್ತದೆ.

            ಇಂದು ಇಂತಹ ಶುದ್ಧ ಪ್ರೀತಿ ಜಗತ್ತಿನಿಂದ ಮಾಯವಾಗುತ್ತಿರುವುದರಿಂದ ಜಾಗತಿಕ ಯುದ್ಧದ ಭೀತಿ ಪ್ರತಿಯೊಬ್ಬರ ಎದೆಯನ್ನಾಳುತ್ತಿದೆ. ಭಯೋತ್ಪಾದನೆ, ಕೋಮುಗಲಭೆ, ನಕ್ಸಲೆಟ್ ದಾಳಿಗಳು, ಎದೆಬೆಚ್ಚಿ ಬೀಳುಸುತ್ತಿವೆ. ’ಅನಲೆ’ಯಂತಹ ಮಗಳು, ಸಹೋದರಿ ಪ್ರತಿ ಮನೆಯ ದೀಪವಾಗಿ ಬೆಳಗಿದರೆ ದ್ವೇಷಾ ಸೂಯೆಯಂತಹ, ಕೊಲೆ, ಸುಲಿಗೆ, ಅತ್ಯಾಚಾರಗಳಂತಹ ಕೃತ್ಯಗಳು ಕ್ಷೀಣಿಸಬಹುದೇನೊ?!  ಪ್ರೀತಿಯೊಂದೇ ಈ ಜಗವನ್ನು ಅಳಬಲ್ಲ ದಿವ್ಯ ಶಕ್ತಿ ಅದಕ್ಕೆಂದು ರಾಷ್ಟಕವಿ ಜಿ.ಎಸ್.ಎಸ್. ಪ್ರೀತಿಯಿಲ್ಲದೇ ಹೂ ಅರಳಿತು ಹೇಗೆ? ಎಂದು ಪ್ರಶ್ನಿಸಿದರೇ  ಪ್ರೀತಿಯಿಲ್ಲದೆ ನಾ ದ್ವೇಷವನ್ನೂ ಮಾಡಲಾರೆ ಎನ್ನುವ ಬಂಡಾಯ ಕವಿ ಚಂಪರವರ ಮಾತುಗಳು ಮನನೀಯವಾಗುತ್ತವೆ.

            ಕುವೆಂಪು ’ಪ್ರೀತಿ, ಮಮತೆ, ವಾತ್ಸಲ್ಯ’ದ ತ್ರಿಕರಣ ರೂಪವಾಗಿ ’ಅನಲೆ’ಯ ಪಾತ್ರವನ್ನು ಉದ್ದೀಪನಗೊಳಿಸಿ, ರಾಮ-ರಾವಣರ ಯುದ್ಧ ಮುಗಿಯುವಷ್ಟರಲ್ಲಿ ರಾವಣ ಅನಲೆಯ ಸಹಾಯದಿಂದ ಮನಪರಿವರ್ತನೆಗೊಳ್ಳುವ ಕ್ರಿಯೆ ಅತ್ಯಂತ ನಾಜುಕಾಗಿ ಹೆಣೆಯಲ್ಪಡುತ್ತದೆ. ಅನಲೆ ಇವಳೆನ್ನ ಕಾಪಿಡುವ ದೇವಿ ಪುಣ್ಯ ಪ್ರಚೋದಿಯೆನಗಿದೊಂದೆ ಸೌಂದರ್ಯಮನಲೆಯೀ ಮುದ್ದು ಚೆಲ್ವು, ಸಾವಪ್ಪೋಡಂ ನನಗೆ, ನಿನಗೆಸಗೆ ನಾಂ ನೋವ, ಎಂದು ರಾವಣನು ಅತಿಯಾದ ವಿಶ್ವಾಸವನ್ನು ಮಗಳಾದ ಅನಲೆಯಲ್ಲಿ ಇಂತಹ ಮಾತುಗಳಿಂದ ವ್ಯಕ್ತ ಪಡಿಸುತ್ತಾನೆ.

            ಹೆಣ್ಣು ಮಗಳು ಒಬ್ಬ ತಂದೆಗೆ ಏನೆಲ್ಲಾ ಆಗಬಹುದೆಂಬುದಕ್ಕೆ ಅನಲೆ ಸಾಕ್ಷಿಯಾಗುತ್ತಾಳೆ. ರಾವಣನಿಗೆ ತಾಯಿಯಾಗುತ್ತಾಳೆ, ಮಾರ್ಗ ತೋರುವ ಗುರುವಾಗುತ್ತಾಳೆ, ತಿದ್ದ-ಬುದ್ಧಿ ಕಲಿಸುವ ಆಪ್ತ ಸಖಿಯಾಗುತ್ತಾಳೆ, ಅವನ ಆತ್ಮೋದ್ಧಾರದ ಮಹಾಶಕ್ತಿಯೇ ಆಗುತ್ತಾಳೆ. ಬಹುಶಃ ಕವಿ ಕುವೆಂಪು ತಮ್ಮ ಆತ್ಮದ ಮಗಳಾಗಿ ಅನಲೆಯನ್ನು ಚಿತ್ರಿಸಿ ಧನ್ಯತೆ ಹೊಂದಿದ್ದಾರೆ. ಇಂತಹ ಮಗಳು ಎಲ್ಲರ ಮನೆ ಮನೆಯ ದೀಪವಾಗಿರಬೇಕು ಎಂಬುದು ಕವಿಯ ಆಶಯ.

            ಹದಿನಾರು ವರುಷದ ಈ ಬಾಲೆ ಕೇವಲ ರಾಮಣನ ಆತ್ಮೋದ್ದಾರಕಿ ಮಾತ್ರವಲ್ಲ ತನ್ನ ಗೆಳತಿ ತಾರಾಕ್ಷಿ (ಅಣ್ಣ ಇಂದ್ರಜಿತುವಿನ ಪತ್ನಿ) ಅತ್ತಿಗೆಯಾಗಿ ಬಂದವಳು. ಇಂದ್ರಜಿತು ಯುದ್ಧದಲ್ಲಿ ಸತ್ತಾಗ ಅವಳಿಗೆ ಸರಿ ಮಾರ್ಗ ತೋರಿದ ಅಂತಃಕರನದ ಸಖಿಯಾಗಿ, ಮಾರ್ಗದರ್ಶಕಿಯಾಗಿ ನಿಲ್ಲುತ್ತಾಳೆ. ವಜ್ರಾರಿಯ ಭವಿತವ್ಯಕ್ಕೆ ಅವಳ ಜೀವಿತ ಅನಿವಾರ‍್ಯ ಎಂಬ ಸತ್ಯದ ದೀಪ ಬೆಳೆಗುತ್ತಾಳೆ. ರಾವಣನನ್ನು ಸಂತ್ಯೆಸಿದಂತೆ, ಸೀತೆಯನ್ನೂ ಸಂತ್ಯೆಸುವವಳೂ ಇವಳೇ ಇವಳು ಚತುರೆಯಾಗಿ, ಕಾರ್ಯಶೀಲೆಯಗಿ, ಪ್ರಬುದ್ಧೆಯಾಗಿ ಎಲ್ಲರ ಹೃದಯವನ್ನು ಗೆದ್ದವಳು. ಅದಕ್ಕಾಗಿ ಕವಿ ಕುವೆಂಪು ಇವಳೆನ್ನು ’ಸತ್ತ್ವನಿಧಿ’ ಎಂದು ಕರೆದಿದ್ದಾರೆ. ರಾವಣನೊಳಗಿನ ರಾಕ್ಷಸತ್ವವನ್ನು ನಾಜೂಕಾಗಿ ಕೊಲ್ಲುವವಳಿವಳೆ. ಇವಳಿಲ್ಲದಿದ್ದರೇ ಧರ್ಮವಿಲ್ಲ ಎಂಬ ಸತ್ಯವನ್ನು ಸ್ವತಃ ರಾವಣನೇ ಮನಗಾಣುತ್ತಾನೆ. ಅದರೆ ಅವಳು ತಮ್ಮ ವಿಭೀಷಣನ ಮಗಳು. ತಂದೆ ಕರೆದಾಗ ಅವಳನ್ನು ಕಳುಹಿಸಬೇಕಾಗುವುದಲ್ಲ..! ಎಂಬ ದುಗುಡು ಆ ರಾವಣನೆದೆ ತುಂಬಿದಾಗ, ಅನಲೆ ನಿನ್ನ ಮಗಳಲ್ತೆನ್ನವಳ್.! ಇವಳೆನ್ನ ಕಾಪಿಡುವ ದೇವಿ (ಶ್ರೀ.ರಾ.ದ) ಎಂದು ತಮ್ಮ ವಿಭೀಷಣನನಿಗೆ ಹೇಳುವಾಗ ಇವಳು ನನ್ನವಳು ಎಂಬ ಭಾವದಲ್ಲಿ ರಾವಣನ ಪಿತೃತ್ವ ಭಾವ ಜಾಗ್ರತವಾಗುವುದು. ಯಾವ ಕಾಮಾಂಧ ರಾವಣನನ್ನು ನಾವು ನೋಡುತ್ತೇವೆಯೋ ಅದು ನಾಶನಾಗಿ ಪಿತೃತ್ವ ಭಾವ ಅಚ್ಚೊತ್ತಿ ನಿಲ್ಲುವಲ್ಲಿ ಅನಲೆಯ ಪಾತ್ರ ಅಮೃತಮಯವಾಗಿ ತೋರುವುದು. ಇಂತಹ ಮಗಳು ಬೇಕೆನಿಸುವುದಿಲ್ಲವೇ ಎಲ್ಲರಿಗೂ?!.

            ತಂದೆಯ ಹಿಂದೆಯೇ ಅನಲೆ ನಡೆದಾಗ ತಂದೆಯೊಡವೋಗಿ ಧರ‍್ಮಮನ್ ಸೇವಿಪೆನ್ ಎಂದು ಅವಳು ನುಡಿದರೇ, ಅದಕ್ಕೆ ರಾವಣನು ಇಲ್ಲಿರ್ದ್ದೆ ಧರ್ಮಕ್ಕೆ ಸೇವಗೆಯ್!, ಧರ್ಮಮಂ ಪೊರಗಟ್ಟಿ ಸೇವಿಪುದೆಂತು? ಎನ್ನುವ ರಾವಣನ ಮಾತಿನಲ್ಲಿ ಅನಲೆ ಎಂದರೆ, ಧರ್ಮ. ಧರ್ಮ ಎಂದರೆ ಅನಲೆ, ಅವಳೇ ಹೋದರೇ ಧರ್ಮ ಹೋದಂತೆ ಎಂಬ ಭಾವ ಮೂಡುವುದು ಸಹಜ.

            ಫ್ಯಾಶನ್ ಜಗತ್ತಿನಲ್ಲಿ ತಮ್ಮನ್ನೆ ಪರೆತು ಹೋಗುತ್ತಿರುವ ಯುವತಿಯರು ಅನಲೆಯಂತಹ ಪಾತ್ರದಿಂದ ತಮ್ಮ ಆತ್ಮವನ್ನು ಸಂಸ್ಕರಿಸಿಗೊಳ್ಳಬೇಕಿದೆ. ಸೆಲ್ಪಿ ಹುಚ್ಚಿನಲ್ಲಿ ಕೊಚ್ಚಿ ಹೋಗುವ ಯುವತಿಯರು ಇಂದು ಸಾಕಷ್ಟು ಸಾಮಾಜಿಕ ಜಾಲತಾಣಗಳ ಹಗರಣಗಳಿಗೆ ಆಹಾರವಾಗುತ್ತಿದ್ದಾರೆ, ಮಾದಕ ವ್ಯಸನಿಗಳಾಗುತ್ತಿದ್ದಾರೆ. ಮನೆ ಬೆಳಗುವ ನಂದಾದೀಪಗಳಾಗಬೇಕಾದವನು ಇಂದು ತಮ್ಮ ಆತ್ಮಜ್ಯೋತಿಯ ಬೆಳಕನ್ನು ನಂಧಿಸಿಕೊಂಡು ಕತ್ತಲೆಯ ಲೋಕಕ್ಕೆ ಜಾರುತ್ತಿದ್ದಾರೆ. ಇದು ದುರಂತವೇ ಅಲ್ಲವೇ?

            ಅನಲೆ ದೊಡ್ಡಪ್ಪನಾದ ರಾವಣ, ದೊಡ್ಡಮ್ಮ ಮಂಡೋದರಿ, ಅಣ್ಣ ಇಂದ್ರಜಿತುವಿನ ಸಾವನ್ನು ನೋಡಿದವಳು ಆ ದುರಂತಕ್ಕೆ ಸಾಕ್ಷಿಯಾದವಳು. ಅಂತೆಯೇ ಸೀತಾ ರಾಮರ ಪುನರ್ಮಿಲನದಂತಹ ಮಂಗಳ ದೃಶ್ಯಕ್ಕೂ ಸಾಕ್ಷಿಯಾದವಳು ಸೀತಾ-ರಾಮರ ಅಗ್ನಿ ಪ್ರವೇಶವನ್ನೂ ಸಾಕ್ಷೀಕರಿಸಿದವಳು. ಇವಳಲ್ಲಿ ತಂತ್ರಗಾರಿಕೆಯೂ ಇತ್ತು. ಸೀತೆಯ ಹತ್ತಿರ ಹೋಗಿ ನಮ್ಮನ್ನು ತಾಯಿಯಾಗಿ ಪೊರೆದವಳು, ರಾವಣನನ್ನೂ ತಾಯಿಯಾಗಿ ಪೊರೆಯಬೇಕು, ದೊಡ್ಡಪ್ಪನ ಅಂತರಾತ್ಮವನ್ನೇ ಮಿಡಿದು ನುಡಿಯಬೇಕು ಮಾತೆ ಸೀತೆ ಎಂದು ಬೇಡಿಕೊಳ್ಳುತ್ತಾಳೆ. ಇದು ಅನಲೆಯ ಮನದಾಳದ ಬಯಕೆಯಾಗಿತ್ತು. ಯಾಕೆಂದರೆ ಅವಳಿಗೆ ದೊಡ್ಡಪ್ಪನ ಗುಣ-ಸ್ವಭಾವ ಗೊತ್ತು. ಹಲಸಿನ ಹಣ್ಣಿನಂತೆ ದೊಡ್ಡಪ್ಪ ಎಂಬ ಅರಿವಿತ್ತು. ಅವನ ಕಠಿಣತ್ವ, ದರ್ಪದಲ್ಲೂ ಮೃದುವಾದ ಸಿಹಿಯಾದ ಹೃದಯವನ್ನು ಗುರುತಿಸಿದವಳಿವಳು. ಸೀತೆಯಂತಹ ಮಹಿಮಳನ್ನು ಸಂಧಿಸದಿರುವುದೇ ತನ್ನ ದೊಡ್ಡಪ್ಪನ ದುರ್ಮತಿಗೆ ಕಾರಣ. ಈಗ ಮಹಾಸಾಧ್ವಿ ಸೀತೆ ರಾವಣ ಹತ್ತಿರ ಇದ್ದಾಗ ತನ್ನ ದೊಡ್ಡಪ್ಪನ ಆತ್ಮೋನ್ನತಿ ಸಾಧ್ಯ ಎಂಬುದೇ ಅನಲೆಯ ಅಪಾರ ನಂಬಿಕೆಯಾಗಿತ್ತು. ಅದಕ್ಕಾಗಿ ತನ್ನ ಕೋರಿಕೆಯನ್ನು ಸೀತೆಯ ಹತ್ತಿರ ಇಡುತ್ತಾಳೆ. ತನ್ನ ಮಾತಿಗೆ ಸೀತೆ ಒಪ್ಪುವಳೆಂಬ ಭರವಸೆಯೊ ಅವಳಿಗಿತ್ತು. ಹೀಗಾಗಿ ಕವಿ ಕುವೆಂಪು ಹೆಜ್ಜೆ ಹೆಜ್ಕೆಗೂ ಇವಳನ್ನು ನೆನಪಿಕೊಳ್ಳುತ್ತಾನೆ. ’ಅನಲೆಯ ಬೊಪ್ಪ’, ’ಅನಲೆಯ ತಾಯಿ’ ಎಂದೇ ವಿಭಿಷಣ, ಸರಮೆಯನ್ನು ಸಂಬೋಧಿಸುವುದು. ಕೊನೆಗೂ ರಾವಣನ ಚಿತೆಗೆ ಕೊಳ್ಳ ಇಡುವಾಗಲೂ ಅನಲೆಯ ತಂದೆ ಕಿರ್ಚಡಲ್ ಎಂದೇ ಕವಿ ಹೇಳುತ್ತಾನೆ.

            ರಾಮನನ್ನು ’ಲೋಕ ಗುರು’ ವೆಂದು, ಸೀತೆಯನ್ನು ಲೋಕಮಾತೆ’ ಎಂದು ಗುರುತಿಸುವ ಅನಲೆ, ಕಾಮ-ರಾವಣರ ಯುದ್ಧದಲ್ಲಿ ರಾವಣ, ಸೀತೆ, ವಿಭಿಷಣ, ಅಂಜನೇಯ ಇವರೆಲ್ಲರ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ ಎಲ್ಲೆಡೆ ವಾತಾವರಣ ತಿಳಿಗೊಳಿಸಿ, ಪ್ರಬುದ್ಧೆಯಾಗಿ ಬೆಳೆಯುತ್ತಾ ಹೋಗುತ್ತಾಳೆ, ರಾವಣತ್ವ ಕಳಚಿದರೇ ಪ್ರತಿಯೊಬ್ಬರಲ್ಲೂ ರಾಮತ್ವ ಜಾಗೃತವಾಗುವುದು ಎಂಬ ಮಹಾತತ್ವ ಸಿದ್ಧಾಂತಕ್ಕೆ ಕಾರಣಳಾಗುವ ಅನಲೆ ಬೆಳಕಿನ ದೀಪವಾಗಿ ನಿಲ್ಲಬಲ್ಲಳು.

            ಅನಲೆಯಂತಹ ಮನೆ ಬೆಳಗುವ ಬೆಳಕಿನ ದೀಪ ಮಡದಿಯಾಗಿ, ಮಗಳಾಗಿ, ಸಹೋದರಿಯಾಗಿ, ಸೊಸೆಯಾಗಿ ಯಾವುದಾದರೂ ರೂಪದಲ್ಲಿ ಇಂದೂ ಬೇಕಲ್ಲವೇ? ಮನಃ ಪರಿವರ್ತನೆಗೆ ಅನಲೆಯಂತಹ ಬೆಳಕಿನ ದೀಪ ಬೇಕಲ್ಲವೇ? 

ಡಾ|| ಪುಷ್ಪಾವತಿ ಶಲವಡಿಮಠ

4 thoughts on “ಅನಲೆ’ಯೆಂಬ ಬೆಳಕಿನ ದೀಪ-ಡಾ. ಪುಷ್ಪಾವತಿ ಶಲವಡಿಮಠ

  1. ತುಂಬಾ ಸೊಗಸಾದ ವಿಮರ್ಶೆ ಮಾಡಿದ್ದೀರಿ…ಮನತಟ್ಟಿತು… ಹಮೀದಾ ಬೇಗಂ.

    1. ಮೇಡಂ ಓದಿ ಒಂದೆರಡು ಮೆಚ್ಚುಗೆಯ ಮಾತಾಡಿದರೆ ಬರೆದ ಪ್ರೀತಿಗೆ ನಿಜಕ್ಕೂ ಪರಿಮಳ ಬಂದಂತೆ. ನಿಮ್ಮ ಓದಿನ ಪ್ರೀತಿಗೆ ಧನ್ಯವಾದಗಳು ಮೇಡಂ

  2. ಮೇಡಮ್, ಎಷ್ಟು ಸೊಗಸಾದ ವಿಮರ್ಶೆ. ಅನಲೆಯನ್ನು ಸಂಪೂರ್ಣವಾಗಿ ಅರಿಯಲು, ರಾಮಾಯಣದರ್ಶನಂ ಮತ್ತೊಮ್ಮೆ ಓದಲೇಬೇಕು ಅನಿಸುತ್ತದೆ

    1. ವೀಣಾ ಮೇಡಂ ಧನ್ಯವಾದಗಳು, ಹೌದು ನಾನು ಅದನ್ನು ಓದಿ ಪ್ರೇರಿತಳಾಗಿಯೇ ಈ ಲೇಖನ ಬರೆದದ್ದು. ನಿಮ್ಮ ಮಾತು ನಿಜ. ಧನ್ಯವಾದಗಳು

Leave a Reply

Back To Top