ಅನುವಾದಿತ ಕವಿತೆ-ಓ ವಯವೇ!

ಅನುವಾದ ಸಂಗಾತಿ

ಓ ವಯವೇ!

(ಗುಲ್ಜಾರರ ಗಜಲನ್ನು ಕನ್ನಡಕ್ಕೆ ಅನುವಾದಿಸಲು ಪ್ರಯತ್ನಿಸಿರುವೆ.)

ನರಸಿಂಗರಾವ ಹೇಮನೂರ

ಓ ವಯವೇ!
ನಾನೇನನ್ನೋ ಹೇಳಿದೆ,
ನೀನು ಬಹುಶಃ ಕೇಳಿರಲಾರೆ
ನೀನು ನನ್ನ ಬಾಲ್ಯವನ್ನು ಕಸಿಯಬಲ್ಲೆ
ಬಾಲ್ಯತನವನ್ನಲ್ಲ!

ಪ್ರತಿ ಮಾತಿಗೂ ಉತ್ತರ ಸಂಭವವಲ್ಲ,
ಪ್ರತಿ ಪ್ರೇಮದಾಲಾಪನೆಗಳೂ ಕೆಟ್ಟವಲ್ಲ
ಕುಡಿದವರು ನಶೆಯಲ್ಲಿ ತೂರಾಡಬಹುದು
ಆದರೆ ನಶೆಗಳಿಗೆಲ್ಲ ಕುಡಿತವೇ ಕಾರಣವಲ್ಲ

ಮೌನದಿಂದಿರುವ ಮುಖದ ಮೇಲೆ ನೂರಾರು ಕಾವಲುಗಳು
ನಗುವ ಕಂಗಳ ಹಿಂದೆ ಹಲವು ಮಾಸದ
ಗಾಯಗಳು
ಯಾರೊಡನೆ ನಾವು ಪದೇಪದೇ ಸಿಟ್ಟಾಗುವೆವೊ
ಅವರೊಡನೆಯೇ ನಿಜದಲ್ಲಿ ನಮ್ಮ ಸಂಬಂಧ ಗಾಢವಾಗುವುದು!

ಭಗವಂತನಲ್ಲಿ ವರ ಕೇಳಿದವನೊಬ್ಬ
ತನ್ನ ಸಾವನ್ನೇ ಬಯಸಿ ಬೇಡಿದ
ಭಗವಂತನೆಂದ..ಸರಿ ವರ ಕೊಡಲೊಪ್ಪುವೆ
ಆದರೆ ನಿನ್ನ ಬದುಕನ್ನೇ ವರವಾಗಿ ಕೇಳಿದ
ಆ ನಿನ್ನ ಪ್ರಿಯತಮೆಗೆ ಏನೆಂದು ಹೇಳಲಿ?

ಮನುಷ್ಯರೆಲ್ಲರ ಹೃದಯ ಕೆಟ್ಟದಾಗಿಲ್ಲ
ಮನುಷ್ಯನಾವನೂ ಕೆಟ್ಟವನಲ್ಲ
ದೀಪ ಕೆಲವೊಮ್ಮೆ ಎಣ್ಣೆ ತೀರಿದಾಗ ನಂದುವದುಂಟು
ಆದರೆ ದೀಪ ನಂದಲು ಪ್ರತಿಬಾರಿಯ ತಪ್ಪು ಗಾಳಿಯದಲ್ಲ!


One thought on “ಅನುವಾದಿತ ಕವಿತೆ-ಓ ವಯವೇ!

Leave a Reply

Back To Top