“ಮುದ್ದು ಮಕ್ಕಳೇ ಫಲಿತಾಂಶದ ಆಚೆಗೂ ಸುಂದರ ಬದುಕಿದೆ….”sslcಪಲಿತಾಂಶ ಪ್ರಕಟವಾಗುವ ಸಮಯವಿದು ಮೀನಾಕ್ಷಿ ಸೂಡಿ ಅವರ ಆಪ್ತ ಬರಹ

ಮೇ 2 ಕ್ಕೆ 2025 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ ಎಂದು ಅಧಿಕೃತವಾಗಿ ಸರಕಾರ ಘೋಷಿಸಿದೆ.
2818 ಕೇಂದ್ರಗಳಲ್ಲಿ,8.96 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದಾರೆ.55 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆದಿದೆ.
ಇದರೆಲ್ಲ ಫಲಿತಾಂಶ ನಾಳೆ ಮೇ 2  ,2025 ರಂದು
ಪ್ರಕಟವಾಗಲಿದೆ.

ಇರಲಿ,ಪ್ರತಿವರ್ಷವೂ ಈ ಕಾರ್ಯ ನಡೆಯಲೇಬೇಕು.
ಮುಂದೆ ಸಾಗಲೇಬೇಕು.
ಈ ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಗೂ ಫಲಿತಾಂಶದಷ್ಟು ಬ್ರೇಕಿಂಗ್ ನ್ಯೂಸ್ ಬಹುತೇಕ ಯಾವುದೂ ಆಗದು.
ಪಾಲಕರು, ವಿದ್ಯಾರ್ಥಿಗಳು, ಶಿಕ್ಷಕರು
ಅಷ್ಟೇ ಏಕೆ ಆಯಾ ಹಂತದ ಎಲ್ಲ ಅಧಿಕಾರಿಗಳು ಈ ಫಲಿತಾಂಶವನ್ನು ಕುತೂಹಲದಿಂದ ಕಾಯುತ್ತಾರೆ.
ಅಷ್ಟು ಪ್ರಮುಖ ಈ ಘಟ್ಟ.

ಆದರೆ ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿ ಅದ ಬದಲಾವಣೆಗಳಿಂದ ಈ ಹಂತಕ್ಕೆ ಇನ್ನಷ್ಟು ಪ್ರಾಮುಖ್ಯತೆ ಬಂದಿದೆ.
ಆತಂಕ, ಕುತೂಹಲದಿಂದ ಕಾಯುತ್ತಿರುವ ಈ ವರುಷದ ಫಲಿತಾಂಶ ಬಂದೇ ಬಿಟ್ಟಿದೆ.
ಯಾರಿಗೆ ಸಿಹಿ,ಯಾರಿಗೆ ಕಹಿ ಬಲ್ಲವರು ಯಾರು???
ಕಷ್ಟ ಪಟ್ಟಷ್ಟು ಫಲ…. ಅಲ್ಲವೇ!

ಮುದ್ದು ವಿದ್ಯಾರ್ಥಿಗಳೇ
ಇಲ್ಲಿ ಕೇಳಿ ನೀವು ನಿರೀಕ್ಷಿಸಿದಷ್ಟು ಫಲಿತಾಂಶ ಬಾರದಿದ್ದರೆ ಏನು ಮಾಡ್ತೀರಿ…
ಅಳೋದು,ಅವಮಾನವಾಯ್ತುಅಂತ ಸಾಯೋಕೆ ಹೋಗೋದು,ಮುಂದಿನ ದಾರಿ ವಿಚಾರಿಸದೇ ತಟಸ್ಥ ರಾಗೋದು,ಮನೆಯಲ್ಲಿಯೇ ಬಂದಿಯಾಗೋದು ಹೀಗೆ ಏನೇನೋ ಮಾಡ್ತೀರಿ ಅಲ್ವಾ???
ಹೆಚ್ಚಾಗಿ ಪ್ರಾಣಕ್ಕೆ ಅಪಾಯ ಮಾಡಿಕೊಳ್ಳೋದೇ ಹೆಚ್ಚು.

ಮುದ್ದು ಮಕ್ಕಳೇ ಈ ಫಲಿತಾಂಶದ ಆಚೆಗೂ ನಿಮಗೆ ಸುಂದರ ಬದುಕಿದೆ.
ಫೇಲ್ /ಪಾಸ್ ಎನ್ನೋದು ಇದೊಂದು ಪ್ರಕ್ರಿಯೆಅದರಲ್ಲೂ ಇತ್ತೀಚಿನ ಪರೀಕ್ಷಾ ವ್ಯವಸ್ಥೆ ಯಲ್ಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ.
ಹೇಳಿ ಇನ್ನೇನು ಬೇಕು.???
ನಿಮ್ಮ ರಜಿಸ್ಟರ್ ನಂಬರ್ ಹಾಕಿ ಫಲಿತಾಂಶ ನೋಡಿದ ಕೂಡಲೇ ಅಥವಾ ಯಾರೋ ಹೇಳಿದರೆಂದೋ ತಕ್ಷಣವೇ ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ.

 ನೀವು ನಿಮ್ಮ ಕುಟುಂಬದ ಕಣ್ಣು.

 ನಿಮ್ಮ ಮೇಲೆ ನಿಮ್ಮ ತಂದೆ ತಾಯಿಗಳು ಪ್ರಾಣವನ್ನೇ ಇಟ್ಟಿರುತ್ತಾರೆ.

ಪುಟಾಣಿಗಳೇ
ಪರೀಕ್ಷೆ ಮತ್ತೊಮ್ಮೆ ಬರೆಯಬಹುದು.ಫೇಲ್ ಆದವರೂ ಕೂಡ ಉತ್ತಮ ಭವಿಷ್ಯ ಕಟ್ಟಿಕೊಂಡ ಎಷ್ಟೋ ಉದಾಹರಣೆಗಳಿವೆ.
ದುಡುಕಬೇಡಿ ಅಂಕಗಳೇ ಜೀವನವಲ್ಲ.
ಈಗ ಬದಕಲು ಹಾಗೂ ಉತ್ತಮ ಜೀವನ ನಡೆಸಲು ಸಾಕಷ್ಟು ದಾರಿಗಳಿವೆ.
ಸಮಾಧಾನದಿಂದ ಫಲಿತಾಂಶ ನೋಡಿ,ಪಾಲಕರ, ಶಿಕ್ಷಕರ,
ಸ್ನೇಹಿತರ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿ.

ಯಾವತ್ತೂ ಪ್ರಾಣ ಕಳೆದುಕೊಳ್ಳುವ ವಿಚಾರ ಮಾಡಬೇಡಿ.
ಈ ಜೀವನ ಆ ದೇವನ ಕೊಡುಗೆ.ಸೋಲು,ಗೆಲುವು ಸಹಜ.ಎಲ್ಲವನ್ನೂ ತಾಳ್ಮೆಯಿಂದ ಸ್ವೀಕರಿಸಿ.

ನೀವು ಅನುತ್ತೀರ್ಣರಾದರೂ ದೃತಿಗೆಡದೇ ಯಾರ ಕುಹಕ ಮಾತುಗಳಿಗೆ ಕಿವಿಗೊಡದೇ ಸಮಾಧಾನದಿಂದ ಇರಿ.

ಈ ಫಲಿತಾಂಶ ಬದುಕಿನ ಒಂದು ಭಾಗ ಅಷ್ಟೇ.
ಇದೇ ಬದುಕಲ್ಲ.
ಪಾಸ್ ಅದವರಿಗೆ ಒಂದೇ ದಾರಿ.ಆದರೆ ಫೇಲ್ ಆದವರಿಗೆ ಹಲವು ಬದುಕಿನ ದಾರಿಗಳಿವೆ.
ಆದ್ದರಿಂದ ಆತ್ಮಹತ್ಯೆಯಂತಹ ವಿಚಾರಕ್ಕೆ ಮನಸು ಕೊಡದೇ  ತಂದೆ,ತಾಯಿ,ತಂಗಿ,ತಮ್ಮ ನಿಮ್ಮನ್ನು ಪ್ರೀತಿಸುವ ಅಪಾರ ಬಂಧು ಬಳಗವನ್ನು ನೆನೆಸಿಕೊಳ್ಳಿ.

ನೀವಿಲ್ಲದೆ ಬದುಕಲು ಆಗದ ಅಪ್ಪ ಅವ್ವನ ಬಗ್ಗೆ ವಿಚಾರ ಮಾಡಿ.
ಯಾರೋ ಏನೋ ಅಂದ್ರು ಅಂತ ಕೊನೆಯವರೆಗೂ ನಿಮ್ಮ ಅವ್ವ ಅಪ್ಪ ಮನೆಯವರಿಗೆ ನೋವು ಕೊಡಬೇಡಿ.

ನಿಮ್ಮ ರಿಜಲ್ಟ್ ಹೇಗೆ ಬಂದ್ರೂ ಸ್ವೀಕರಿಸಿ.

 ಪಾಲಕರಿಗೆ ಕಿವಿಮಾತು

 ಮಗುವಿನ ಸಾಮರ್ಥ್ಯ ಕ್ಕೆ ತಕ್ಕಂತೆ ನಿರೀಕ್ಷೆ ಇರಲಿ.

ಫಲಿತಾಂಶ ನೋಡಲು ನೀವು ಅವರೊಂದಿಗೆ ಹೋಗಿ
ಫಲಿತಾಂಶ ನಿರೀಕ್ಷಿಸಿದ ಮಟ್ಟದಲ್ಲಿ ಬರದೇ ಇದ್ರೆ ಮಗುವಿಗೆ ಧೈರ್ಯ ಹೇಳಿ ನಿಮ್ಮೊಂದಿಗೆ ಕರೆತನ್ನಿರಿ.

ನಿಮ್ಮ ಮಗುವಿನ ಸ್ವಭಾವವನ್ನು ತಿಳಿದು ಅವನೊಂದಿಗೆ ಸದಾ ಇದ್ದು ಮಾನಸಿಕವಾಗಿ ಸಪೋರ್ಟ್ ಮಾಡಿ.

ಕಡಿಮೆ ಅಂಕ ಬಂದರೆ ಬಯ್ಯದೆ ಮುಂದೆ ಮತ್ತೆ ಅವಕಾಶ ಇದೆ ಎಂಬುದನ್ನು ತಿಳಿಸಿ.

ಬೇರೆ ಮಕ್ಕಳೊಂದಿಗೆ ಹೋಲಿಸಬೇಡಿ.

ಈ ಫಲಿತಾಂಶವೇ ಕೊನೆಯಲ್ಲ.ಅದರಾಚೆಗೂ ಬದುಕಿದೆ ಎಂಬುದನ್ನು ಅವರಿಗೆ ಹೇಳಿ.

ನಿಮ್ಮ ಪ್ರೀತಿಯ ಅವಶ್ಯಕತೆ ಈಗ ಅವರಿಗೆ ಹಚ್ಚಿರುತ್ತದೆ ಸ್ಪಂದಿಸಿ.

ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಬಹುದು.ಆದರೆ ಜೀವನ ಮತ್ತೊಮ್ಮೆ ಬಾರದು.ಆದ್ದರಿಂದ ನಿಮ್ಮ ಮಕ್ಕಳ ಬಗ್ಗೆ ಗಮನವಿರಲಿ.

ಅತೀ ಸೂಕ್ಷ್ಮ ಮನಸಿನ ಮಕ್ಕಳೊಂದಿಗೆ ಪಾಲಕರು ಹೆಚ್ಚು ಸಮಯ ಕಳೆಯಿರಿ.
ಉದಾಸೀನ ಬೇಡ.
ಶಿಕ್ಷಕರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದುಕೊಳ್ಳಿ.
ಅವಶ್ಯವೆನಿಸಿದರೆ ಮಕ್ಕಳಿಗೆ ಕೌನ್ಸಿಲಿಂಗ್ ಮಾಡಿಸಿ.

 ಶಿಕ್ಷಕರ ಹಾಗೂ ಇಲಾಖೆಯ ಜವಾಬ್ದಾರಿ…

ಶಿಕ್ಷಕರೇ ನಿಮ್ಮ ವಿಷಯದಲ್ಲಿ ನಿಮ್ಮ ನಿರೀಕ್ಷೆಯಂತೆ ಮಗು ಅಂಕ ಪಡೆಯದಿದ್ದರೆ ಹಿಯಾಳಿಸಬೇಡಿ.

ಮಗುವನ್ನು ಬೇರೆಯವರಿಗೆ ಹೋಲಿಸಿ ಬಯ್ಯಬೇಡಿ.
‘ಇಲ್ಲಿಗೆ ಎಲ್ಲಾ ಮುಗಿಯಿತು’ ಎನ್ನುವಂತಹ ನಕಾರಾತ್ಮಕ ಮಾತುಗಳು ಬೇಡ.
ಆದಷ್ಟು ಮಗುವನ್ನು ಸಂತೈಸಿ.
ಪಾಲಕರಿಗಿಂತ ಹೆಚ್ಚು ಆತ್ಮವಿಶ್ವಾಸ ಪ್ರೀತಿ ತೋರಿಸಿ.

ಪರೀಕ್ಷೆ ಬರೆಯಲು ಅವಕಾಶ ವಿದೆ ಎಂಬುದನ್ನು ಮನದಟ್ಟು ಮಾಡಿಸಿ.

ಹಿರಿಯ ಅಧಿಕಾರಿಗಳು ಕೂಡ ಕಾರ್ಯಾಲಯಕ್ಕೆ ಯಾರೇ ಪಾಲಕ, ವಿದ್ಯಾರ್ಥಿ, ಶಿಕ್ಷಕ ಬಂದರೆ ಅವಮಾನಿಸಬೇಡಿ.

‘ನಿಮ್ಮ ವಿಷಯದಲ್ಲಿ ಕಡಿಮೆ ಫಲಿತಾಂಶ ಬಂದಿದೆ ಅಲ್ರಿ’ ಎಂದು ಎಲ್ಲರೆದಿರೂ ಆ ಶಿಕ್ಷಕರನ್ನು ಹೀಗಳೆಯಬೇಡಿ.
ಶಿಕ್ಷಕರು ಎಲ್ಲರೂ ಚೆನ್ನಾಗಿಯೇ ಬೋಧನೆ ಮಾಡಿರುತ್ತಾರೆ ಆದರೆ ಫಲಿತಾಂಶ ಅವರ ಕೈಯಲ್ಲಿ ಇಲ್ಲ.

ವಿದ್ಯಾರ್ಥಿಗಳ ಕಲಿಕಾ ವಾತಾವರಣ ಶಾಲೆಯಿಂದ ಶಾಲೆಗೆ ಭಿನ್ನವಾಗಿ ರುತ್ತದೆ
ಆದ್ದರಿಂದ ಅಧಿಕಾರಿಗಳೇ ಶಾಲಾ ಫಲಿತಾಂಶ ವನ್ನು ಹೋಲಿಸಿ ಶಿಕ್ಷಕರನ್ನು ಹಿಯಾಳಿಸಿ ಮಾತನಾಡಬೇಡಿ.
ಇದು ಎಲ್ಲರಿಗೂ ಅನ್ವಯಿಸುತ್ತದೆ.
ಎಲ್ಲರೂ ಆತ್ಮವಿಶ್ವಾಸದಿಂದ ಮುನ್ನಡೆಯೋಣ.ಮಕ್ಕಳ ಬಾಳಿಗೆ ದಾರಿದೀಪವಾಗೋಣ..


Leave a Reply

Back To Top