ಪ್ರಸ್ತುತ

ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ ..

Image result for photos of sarojinimahishi

ಗಣೇಶ್ ಭಟ್ ಶಿರಸಿ

ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ ..

Image result for photos of sarojinimahishi


ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮ, ಕನ್ನಡಕ್ಕೇ ಮೊದಲ ಸ್ಥಾನ ಎನ್ನುವುದನ್ನು ಜನರು ಒಪ್ಪಿದರೂ, ಸರ್ಕಾರಗಳು ಅನುಷ್ಠಾನಕ್ಕೆ ತರಲು ಹಿಂದೇಟು ಹಾಕುತ್ತಿವೆ. ವೋಟಿಗಾಗಿ ನಾಟಕ ಮಾಡುವ ರಾಜಕೀಯ ಪಕ್ಷಗಳೆಲ್ಲವೂ ಕುಂಟು ನೆಪ ಮುಂದೆ ಮಾಡಿ ಡಾ. ಸರೋಜಿನಿ ಮಹಿಷಿ ವರದಿಯ ಜಾರಿಯನ್ನು ಮುಂದೂಡುತ್ತಲೇ ಇವೆ. ಕಳೆದ 35 ವರ್ಷಗಳಿಂದ ಅಧಿಕಾರದಲ್ಲಿದ್ದ ವಿವಿಧ ಪಕ್ಷಗಳು ( ಜನತಾ, ಕಾಂಗ್ರೆಸ್, ಬಿಜೆಪಿ) ಕನ್ನಡ ನಾಡಿನ ಉದ್ಯೋಗವನ್ನು ಕನ್ನಡಿಗರಿಗೇ ಮೀಸಲಾಗಿಡುವ ಧೈರ್ಯ ತೋರಿಸಿಲ್ಲ.
ಈ ವರದಿಯ ಜಾರಿಗಾಗಿ ಆಗ್ರಹಿಸಿ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಾ ಬಂದಿವೆ. ಅದರ ಮುಂದುವರಿಕೆಯಾಗಿ ಫೆಬ್ರುವರಿ 13 ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ರಸ್ತೆ ತಡೆ, ಬಂದ್ ಮುಂತಾದ ಹೋರಾಟದ ವಿಧಾನಗಳು ಇಂದು ಅಪ್ರಸ್ತುತವಾಗಿದ್ದರೂ, ನೇತಾರರು ಅದರಾಚೆಗೆ ಚಿಂತಿಸುತ್ತಿಲ್ಲ. ಬಂದ್ ಆಚರಣೆಯಿಂದ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆಂದು ಭಾವಿಸುವುದು ಮುಗ್ಧತೆ ಅಥವಾ ದಡ್ಡತನ ಅಥವಾ ಧೂರ್ತತೆ. ಬಂದ್‍ನಿಂದ ತೊಂದರೆಗೊಳಗಾಗುವವರು ಜನ ಸಾಮಾನ್ಯರು. ದಿನದ ದುಡಿಮೆಯನ್ನೇ ಅವಲಂಬಿಸಿರುವ ಕಾರ್ಮಿಕರು, ಬೀದಿಬದಿ ವರ್ತಕರು, ತಳ್ಳುಗಾಡಿ ವ್ಯಾಪಾರಿಗಳು, ಹಣ್ಣು, ತರಕಾರಿ ಬೆಳೆಗಾರರು, ವಿದ್ಯಾರ್ಥಿಗಳು ಇತ್ಯಾದಿ ಇತ್ಯಾದಿ. ಯಾರಿಗೆ ಬಂದ್‍ನ ಬಿಸಿ ತಗುಲಬೇಕೆಂದು ಅಪೇಕ್ಷಿಸುತ್ತೇವೋ ಅಂಥಹ ರಾಜಕಾರಣಿಗಳು, ಉನ್ನತ ಅಧಿಕಾರಿಗಳು, ಆಡಳಿತ ನಡೆಸುವವರು ಮುಂತಾದವರು ಪೋಲೀಸ್ ರಕ್ಷಣೆಯಲ್ಲಿ ತಮ್ಮ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಅವರಿಗೆ ಯಾವ ತೊಂದರೆಯೂ ಇಲ್ಲ. ಮಹಿಷಿ ವರದಿ ಜಾರಿಗಾಗಿ ಆಗ್ರಹಿಸುವುದನ್ನು ಬೆಂಬಲಿಸಲೇಬೇಕು. ಆದರೆ ಅದಕ್ಕಾಗಿ ಕರ್ನಾಟಕ ಬಂದ್‍ಗೆ ಕರೆ ನೀಡುವುದು ಸಮರ್ಥನೀಯವಲ್ಲ. ಬಡ, ಅಸಹಾಯಕ ಕನ್ನಡಿಗರನ್ನು ತೊಂದರೆಗೊಳಪಡಿಸುವುದು ಸಮಂಜಸವಲ್ಲ.

Image result for photos of sarojinimahishi


1983ರಲ್ಲಿ ಡಾ.ಸರೋಜಿನಿ ಮಹಿಷಿಯವರ ನೇತೃತ್ವದಲ್ಲಿ ರಚಿತವಾದ ಸಮಿತಿ, ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವ ಹಲವಾರು ಶಿಫಾರಸ್ಸುಗಳನ್ನೊಳಗೊಂಡ ಮಧ್ಯಂತರ ವರದಿಯನ್ನು 1984 ರಲ್ಲಿಯೂ , ಅಂತಿಮ ವರದಿಯನ್ನು 30-12-1986 ರಂದು ಸರ್ಕಾರಕ್ಕೆ ಸಲ್ಲಿಸಿತು. ಅಲ್ಲಿಂದ ಮುಂದೆ ಪ್ರಾರಂಭವಾದದ್ದು ರಾಜಕೀಯ ನಾಟಕ.
ಮಹಿಷಿ ಸಮಿತಿಯ 58 ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಾಗ ಆದ್ಯತೆಯನ್ನು ನಿರ್ಧರಿಸುವುದಕ್ಕಾಗಿ 1988 ರಲ್ಲಿ ಡಾ. ವಿ. ವೆಂಕಟೇಶ ನೇತೃತ್ವ ಸಮಿತಿಯನ್ನು ರಚಿಸಲಾಯಿತು. ಮಹಿಷಿ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದ ಇಬ್ಬರನ್ನು ಈ ಸಮಿತಿಯಲ್ಲೂ ಸೇರಿಸಲಾಯಿತು. ಈ ಸಮಿತಿಯ ವರದಿಯನ್ನಾಧರಿಸಿ 1990 ರಲ್ಲಿ ಕರ್ನಾಟಕ ಸರ್ಕಾರದ ಸಂಪುಟ ಉಪ ಸಮಿತಿಯು 45 ಶಿಫಾರಸ್ಸುಗಳನ್ನು ಅನುಮೋದಿಸಿತ್ತು. ಅಂತೂ 1993 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಲಾಯಿತು.
ಮಹಿಷಿ ವರದಿಯಿಂದ ಪ್ರೇರೇಪಿತರಾಗಿ ಗುಜರಾತ, ರಾಜಸ್ಥಾನ ಮುಂತಾದ ರಾಜ್ಯಗಳು ಈ ಶಿಫಾರಸ್ಸುಗಳನ್ನು ಬಳಸಿ ತಮ್ಮದೇ ಆದ ರೀತಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಗಟ್ಟಿಗೊಳಿಸಿಕೊಂಡರು. ಆದರೆ, ಕರ್ನಾಟಕದಲ್ಲಿ ಕನ್ನಡಿಗರೇ ಪರಕೀಯರಾಗುವುದನ್ನು ತಡೆಯಲು ನೀಡಿದ ಶಿಫಾರಸ್ಸುಗಳು ಕಡತದಲ್ಲೇ ಬಂಧಿಯಾಗಿ ಕುಳಿತಿವೆ.

Image result for photos of sarojinimahishi


ಉದ್ಯೋಗಾವಕಾಶಗಳನ್ನು ಸ್ಥಳೀಯರಿಗೆ ಮೀಸಲಿಡುವ/ ಪ್ರಾಶಸ್ತ್ಯ ನೀಡುವ ಕುರಿತು ತಯಾರಾದ ವರದಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ತಮ್ಮ ತಮ್ಮ ಪ್ರದೇಶಗಳಲ್ಲಿ ಸೂಕ್ತವಾದ ಉದ್ಯೋಗಾವಕಾಶ ಸಿಗದ ಕಾರಣ, ಇತರ ರಾಜ್ಯಗಳಿಗೆ ವಲಸೆ ಹೋಗುವವರಿಂದಾಗಿ ಸ್ಥಳೀಯರು ಉದ್ಯೋಗ ವಂಚಿತರಾಗುವುದನ್ನು 60ರ ದಶಕದಲ್ಲಿಯೇ ಗಮನಿಸಲಾಗಿತ್ತು. ಆ ಕಾರಣಕ್ಕಾಗಿಯೇ 1968 ರಲ್ಲಿ ರಾಷ್ಟ್ರೀಯ ಸಮನ್ವಯ ಪರಿಷತ್ತು (ಓಚಿಣioಟಿಚಿಟ Iಟಿಣegಡಿಚಿಣioಟಿ ಅouಟಿಛಿiಟ) ವಲಸಿಗರಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಸ್ಥಳೀಯರಿಗೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವದು ಸೂಕ್ತವೆಂದು ಅಭಿಪ್ರಾಯ ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಹಿಷಿ ಆಯೋಗ ರಚಿತವಾಗಿತ್ತು; ಅದೂ ಹದಿನೈದು ವರ್ಷಗಳ ನಂತರ.
ರಾಜ್ಯಸರ್ಕಾರದ ಹಾಗೂ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಶೇಕಡಾ 100 ರಷ್ಟು ಹುದ್ದೆಗಳನ್ನು ಕನ್ನಡಿಗರಿಗೇ ಮೀಸಲಾಗಿಡುವಂತೆ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಉದ್ಯಮಗಳ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ( ಗುಮಾಸ್ತ, ಸಿಪಾಯಿ ಇತ್ಯಾದಿ) ಕನ್ನಡಿಗರಿಗೇ ಮೀಸಲಾಗಿಡಬೇಕೆಂದು ಮಹಿಷಿ ವರದಿಯ ಶಿಫಾರಸ್ಸಿನಲ್ಲಿ ಹೇಳಲಾಗಿತ್ತು. ಉನ್ನತ ಹುದ್ದೆಗಳಾದ ಬಿ. ದರ್ಜೆಯಲ್ಲಿ ಶೇಕಡಾ 80 ರಷ್ಟು, ಏ ದರ್ಜೆಯಲ್ಲಿ 65% ಹುದ್ದೆಗಳನ್ನು ಕನ್ನಡಿಗರಿಗೇ ನೀಡಬೇಕೆಂದು ಸೂಚಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಹ ಕನ್ನಡಿಗರು ಲಭ್ಯವಿಲ್ಲದಿದ್ದಾಗ ಮಾತ್ರ ಹೊರಗಿನವರನ್ನು ನೇಮಿಸಬಹುದೆಂದು ಹೇಳಲಾಗಿತ್ತು.
ಕೇಂದ್ರ ಸರ್ಕಾರದ ಅನುಮತಿಯ ಅಗತ್ಯವಿದ್ದ ವಿಷಯಗಳಿಗೆ, ಅದರ ಒಪ್ಪಿಗೆ ಪಡೆಯುವ ಅವಶ್ಯಕತೆಯನ್ನು ವರದಿಯಲ್ಲಿ ಒತ್ತಿ ಹೇಳಲಾಗಿದ್ದರೂ, ರಾಜ್ಯ ಮತ್ತು ಕೇಂದ್ರದಲ್ಲಿ ಈ ದಿಸೆಯಲ್ಲಿ ಯಾವ ಪ್ರಗತಿಯೂ ಆಗಿಲ್ಲ. ಇಂದಿನ ಬಿಜೆಪಿ ಸರ್ಕಾರಕ್ಕೆ ಪ್ರಾದೇಶಿಕ ವೈಶಿಷ್ಟ್ಯತೆಯನ್ನು , ಪ್ರಾದೇಶಿಕ ಬೆಳವಣಿಗೆ, ಭಾಷೆ, ಸಾಂಸ್ಕøತಿಕ ವೈವಿದ್ಯತೆಗಳನ್ನು ಗುರ್ತಿಸುವ , ಗೌರವಿಸುವ , ರಕ್ಷಿಸುವ ಕುರಿತು ಆಸಕ್ತಿಯೇ ಇಲ್ಲ. ರಾಷ್ಟ್ರವಾದದ ಸೋಗಿನಲ್ಲಿ ಪ್ರಾದೇಶಿಕತೆಯನ್ನು ಹೊಸಕಿ ಹಾಕಲಾಗುತ್ತಿದೆ.
ಖಾಸಗಿ ಉದ್ಯಮಗಳಿಗೆ ಅನುಮತಿ ನೀಡುವಾಗ ನಿರ್ದಿಷ್ಟ ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಶರತ್ತುಗಳನ್ನು ವಿಧಿಸಬೇಕೆಂದು ಮಹಿಷಿ ವರದಿ ಸೂಚಿಸಿದೆ. 100 ಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಉದ್ಯಮಗಳ ನೇಮಕಾತಿ ಸಮಿತಿಯಲ್ಲಿ ರಾಜ್ಯಸರ್ಕಾರದ ಒಬ್ಬ ಪ್ರತಿನಿಧಿ ಇರುವದನ್ನೂ ಕಡ್ಡಾಯಗೊಳಿಸಬೇಕೆಂದೂ ಹೇಳಲಾಗಿದೆ. ಖಾಸಗಿ ರಂಗದ ನೇಮಕಾತಿಗಾಗಿ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿತ ಕನ್ನಡಿಗರನ್ನೇ ಪರಿಗಣಿಸಬೇಕೆಂದೂ ಹೇಳಲಾಗಿದೆ.
ಕನ್ನಡಿಗ ಯಾರೆಂಬ ಕುರಿತು ಮಹಿಷಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕನಿಷ್ಠ 15 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ, ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ಬಲ್ಲ ವ್ಯಕ್ತಿ ಕನ್ನಡಿಗ ಎಂದು ವ್ಯಾಖ್ಯಾನಿಸಲಾಗಿದೆ. ಹತ್ತನೇ ತರಗತಿಯವರೆಗೆ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಧ್ಯಯನ ಮಾಡಿದವರನ್ನು ಕನ್ನಡಿಗ ಎಂದು ಪರಿಗಣಿಸಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಅವಕಾಶಗಿಟ್ಟಿಸುವ ಹೊರ ರಾಜ್ಯದವರಿಗೆ ಕನ್ನಡದ ಪ್ರಾಥಮಿಕ ಜ್ಞಾನದ ಪರೀಕ್ಷೆಯನ್ನು ಕಡ್ಡಾಯಗೊಳಿಸಿ, ಅದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ನೇಮಕಾತಿಗೆ ಪರಿಗಣಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.
ಡಾ. ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕೆ ರಾಜ್ಯಸರ್ಕಾರವೇ ನಿರಾಸಕ್ತಿ ತೋರುತ್ತಿರುವಾಗ ಕೇಂದ್ರ ಸರ್ಕಾರದಿಂದ ಬೆಂಬಲ ನಿರೀಕ್ಷಿಸುವುದು ವ್ಯರ್ಥ. ಇದರ ಪರಿಣಾಮದಿಂದಾಗಿ ಇಂದು ಕೇಂದ್ರ ಸರ್ಕಾರದ ಉದ್ಯಮಗಳಾದ ಬ್ಯಾಂಕ್, ರೇಲ್ವೆ ಮುಂತಾದವುಗಳಲ್ಲಿ ಕನ್ನಡಿಗೇತರರೇ ಪ್ರಾಬಲ್ಯ ಹೊಂದಿರುವುದನ್ನು ಕಾಣುತ್ತೇವೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಉದ್ಯಮಗಳ ನೇಮಕಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆಗಳಲ್ಲಿ ಕನ್ನಡ( ಹಾಗೂ ಇತರ ಪ್ರಾದೇಶಿಕ ಭಾಷೆಗಳೂ ಸಹ) ದಲ್ಲಿ ಬರೆಯುವ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ.
ಒಂದು ದೇಶ, ಒಂದೇ ಭಾಷೆ, ಏಕರೂಪದ ಅಭಿವೃದ್ಧಿ ಯೋಜನೆ ಮುಂತಾದ ಮೂರ್ಖ ಚಿಂತನೆಗಳಿಗೆ ಜೋತು ಬಿದ್ದಿರುವ ಕೇಂದ್ರ ಸರ್ಕಾರದ ನಡೆಯಿಂದಾಗಿ ಭಾರತದ ವೈವಿದ್ಯತೆ ಅಪಾಯಕ್ಕೆ ಸಿಲುಕಿದೆ. ಭಾರತವೆಂದರೆ ಹಲವು ರಾಷ್ಟ್ರೀಯ ಭಾವಧಾರೆಗಳ ಒಂದು ಒಕ್ಕೂಟ. ವೈವಿದ್ಯತೆಯಲ್ಲೂ ಏಕತೆ ಸಾಧಿಸುವ ಸೂತ್ರ ಹೊಂದಿರುವ ವಿಶಿಷ್ಟ ದೇಶ ಎಂಬುದನ್ನು ಮುಖಂಡರು ಗಮನಿಸದಿರುವುದು ಅಪಾಯಕಾರಿ ಪ್ರವೃತ್ತಿ.
ಕನ್ನಡ ಭಾಷೆ ಹಾಗೂ ಕನ್ನಡಿಗರ ರಕ್ಷಣೆಯ ಕುರಿತು ಪ್ರಾಮಾಣಿಕ ಕಳಕಳಿ ಹೊಂದಿರುವ ಮಹಿಷಿ ವರದಿಯ ಅನುಷ್ಠಾನಕ್ಕೆ ರಾಜಕಾರಣಿಗಳು ಹಿಂದೇಟು ಹಾಕಲು ಮೂಲ ಕಾರಣ ಅವರ ಧಣಿಗಳು ಅಂದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ಯಮಿಗಳು ಅರ್ಥಾತ್ ಬಂಡವಾಳಶಾಹಿಗಳು.
ಸ್ಥಳೀಯರಿಗೇ ಉದ್ಯೋಗ ನೀಡುವದರಿಂದ, ಸ್ಥಳೀಯ ಸಂಪನ್ಮೂಲಗಳ ಹತೋಟಿಯನ್ನು ಸ್ಥಳೀಯರಿಗೇ ನೀಡುವುದರಿಂದ ಲಾಭ ಬಡುಕ ಬಂಡವಾಳಶಾಹಿಗಳ ಗುರಿ ಈಡೇರುವುದಿಲ್ಲ. ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಕಚ್ಚಾ ವಸ್ತುಗಳನ್ನು ಪಡೆದು, ಕಿರಿಕಿರಿ ಮಾಡದ, ಸ್ಥಳೀಯರಲ್ಲದ ಅತಂತ್ರ ವಲಸೆಗಾರ ಉದ್ಯೋಗಿಗಳನ್ನು ನೇಮಿಸಿಕೊಂಡು ಲಾಭ ಹೆಚ್ಚಳವನ್ನೇ ಗುರಿಯಾಗಿಸಿಕೊಂಡಿರುವ ಬಂಡವಾಳಶಾಹಿಗಳನ್ನು ಎದುರು ಹಾಕಿಕೊಂಡರೆ ಪಕ್ಷ ಮತ್ತು ಸ್ವಂತಕ್ಕೆ ಸಿಗುವ ದೇಣಿಗೆ ತಪ್ಪಿ ಹೋಗುವದೆಂಬ ಆತಂಕ ರಾಜಕಾರಣಿಗಳನ್ನು ಕಾಡಿಸುತ್ತದೆ. ಹೂಡಿಕೆದಾರರಿಂದಲೇ ದೇಶೋದ್ಧಾರ, ಸೀಮಿತ ಸಂಖ್ಯೆಯ ಶ್ರೀಮಂತರ ಸಂಪತ್ತು ಹೆಚ್ಚಾಗುವುದೇ ದೇಶದ ಅಭಿವೃದ್ಧಿ ಮುಂತಾಗಿ ನಂಬಿರುವ, ನಂಬಿಸುತ್ತಿರುವ ಸ್ವಾರ್ಥಿ ರಾಜಕಾರಣಿಗಳು ಸ್ಥಳೀಯರಿಗೆ ಉದ್ಯೋಗಾವಕಾಶ ಕಡ್ಡಾಯಗೊಳಿಸುತ್ತಾರೆಂದು ನಿರೀಕ್ಷಿಸಲಾಗದು.
ಭಾಷಾ ಪ್ರಜ್ಞೆ ಮತ್ತು ಬಾಂಧವ್ಯ ಗಟ್ಟಿಯಾಗಿದ್ದ ಕಾರಣದಿಂದ ಕನ್ನಡ ಭಾಷೆಯ ಬಳಕೆಗೆ ಕೆಲವು ತೋರಿಕೆಯ ಪ್ರೋತ್ಸಾಹವನ್ನು ರಾಜ್ಯ ಸರ್ಕಾರ ನೀಡಿದ್ದರೂ, ಕನ್ನಡದ ಬಳಕೆಯನ್ನು ಕಡ್ಡಾಯಗೊಳಿಸಲು ಕೂಡಾ ಹಿಂದೇಟು ಹಾಕುತ್ತಿದೆ. ಕನ್ನಡಕ್ಕೆ ಪ್ರಾಶಸ್ತ್ಯ ನೀಡುವ ಸೋಗಿನಲ್ಲಿ , ಉದ್ಯೋಗಾವಕಾಶ ಮತ್ತು ಇತರ ಆರ್ಥಿಕ ವಿಚಾರವನ್ನು ಹಿಂದಕ್ಕೆ ಸರಿಸಲಾಗಿದೆ. ಮಹಿಷಿ ವರದಿಯನ್ನು ಜಾರಿಗೊಳಿಸುವುದನ್ನು ಮುಂದೂಡಲು ಹೊಸ ಹೊಸ ಕ್ಯಾತೆಗಳನ್ನು ತೆಗೆಯಲಾಗುತ್ತಿದೆ. ಉದಾಹರಣೆಗಾಗಿ ಈ ವರದಿ ಸಿದ್ಧಪಡಿಸುವಾಗ ಐಟಿ, ಬಿಟಿ ಉದ್ಯಮ ಬೆಳೆದಿರಲಿಲ್ಲ; ಈಗ ವರದಿಯನ್ನು ಪರಿಷ್ಕರಿಸಬೇಕಾಗಿದೆ ಮುಂತಾದವು.
ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಿದಾಕ್ಷಣ ಕನ್ನಡಿಗರ ಸಾಮಾಜಿಕ- ಆರ್ಥಿಕ ಸಮಸ್ಯೆಗಳೆಲ್ಲವೂ ಪರಿಹಾರವಾಗಿ ಬಿಡುತ್ತವೆಂದು ನಂಬುವುದು ಬಾಲಿಶತನ. ಉದ್ಯೋಗಾವಕಾಶವೆಂದರೆ ಸರ್ಕಾರಿ ಮತ್ತು ಖಾಸಗಿ ರಂಗದ ನೌಕರಿಗಳು ಮಾತ್ರವೆಂದು ಭಾವಿಸಬೇಕಿಲ್ಲ. ದುಡಿಮೆಯ ಅವಕಾಶಗಳೆಂದರೆ ಕೃಷಿ, ವ್ಯಾಪಾರ-ವಹಿವಾಟು, ಉದ್ದಿಮೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಇರುವ ಉದ್ಯೋಗಾವಕಾಶಗಳು.
ಉದ್ದಿಮೆ, ವ್ಯಾಪಾರ-ವಹಿವಾಟು ಕ್ಷೇತ್ರಗಳು ಕನ್ನಡಿಗರ ನಿಯಂತ್ರಣದಲ್ಲಿ ಇಲ್ಲದೆಯೇ ದಶಕಗಳೇ ಸಂದಿದೆ. ಬೆಂಗಳೂರು ಮಹಾನಗರ ಸೇರಿದಂತೆ ಹುಬ್ಬಳ್ಳಿ, ವಿಜಯಪುರ, ಕಲ್ಬುರ್ಗಿ ಮುಂತಾದೆಡೆಗಳಲ್ಲಿ ದಿನಬಳಕೆ ವಸ್ತುಗಳ ಸಗಟು ಮತ್ತು ಚಿಲ್ಲರೆ ವ್ಯವಹಾರಗಳು ಹೊರ ರಾಜ್ಯದವರ ಕೈಯಲ್ಲಿಯೇ ಇವೆ. ಕನ್ನಡ ನಾಡಿನ ಸಂಪನ್ಮೂಲಗಳ (ಉದಾ: ಅದಿರು, ಅರಣ್ಯಸಂಪತ್ತು, ಕೃಷಿಭೂಮಿ) ಹತೋಟಿಯು ಪರ ರಾಜ್ಯದವರ ಕೈ ಸೇರುತ್ತಿದೆ. ನಿರುದ್ಯೋಗ ಕನ್ನಡಿಗರ ಪಾಲಾಗುತ್ತಿದೆ.
ಈ ಸಮಸ್ಯೆಗಳಿಗೆ ಪರಿಹಾರವೆಂದರೆ ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಅನುಷ್ಠಾನ. ಇದರ ಮೊದಲ ಹಂತವೆಂದರೆ ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಭೌಗೋಳಿಕ ಕ್ಷೇತ್ರಗಳನ್ನು ಗುರ್ತಿಸುವುದು. ಇಂದು ಅಸ್ತಿತ್ವದಲ್ಲಿರುವ ರಾಜ್ಯಗಳು ಈ ವ್ಯಾಖ್ಯೆಗೆ ಒಳಪಡುವುದಿಲ್ಲ. ಕೆಲವು ರಾಜ್ಯಗಳಲ್ಲಿ ( ಉದಾ: ಬಿಹಾರ, ಆಂದ್ರಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ) ಒಂದಕ್ಕಿಂತ ಹೆಚ್ಚು ಸ್ವಯಂ ಸ್ವಾವಲಂಬಿ ಸಾಮಾಜಿಕ- ಆರ್ಥಿಕ ಘಟಕಗಳನ್ನು ರೂಪಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕನ್ನಡ ನಾಡನ್ನು ಒಂದೇ ಸ್ವಯಂ ಸ್ವಾವಲಂಬಿ ಆರ್ಥಿಕ ವಲಯವಾಗಿಸುವ ಅವಕಾಶವಿದೆ.
ಮುಂದಿನ ಹಂತವೆಂದರೆ ಸ್ಥಳೀಯ ಸಂಪನ್ಮೂಲಗಳ ಹತೋಟಿಯನ್ನು ಸಹಕಾರಿ ವ್ಯವಸ್ಥೆಯ ಮೂಲಕ ಸ್ಥಳೀಯರಿಗೇ ನೀಡುವುದು. ನಂತರ ಸ್ಥಳೀಯರೆಲ್ಲರಿಗೂ ಉದ್ಯೋಗಾವಕಾಶ ಸೃಷ್ಟಿಸುವ ರೀತಿಯಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸುವ ಅಭಿವೃದ್ಧಿ ಯೋಜನೆಗಳ ನಿರೂಪಣೆ. ತಳಮಟ್ಟದಿಂದ ಅಂದರೆ ಬ್ಲಾಕ್ ಮಟ್ಟದಿಂದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕ್ರೋಢೀಕರಿಸುವುದು.
ದೇಶ ಅಭಿವೃದ್ಧಿ ಹೊಂದಬೇಕೆಂದರೆ ದೇಶದ ಮೂಲೆ ಮೂಲೆಯಲ್ಲೂ ಅಭಿವೃದ್ಧಿಯಾಗಬೇಕು. ಇದಕ್ಕಿರುವ ಏಕೈಕ ದಾರಿಯೆಂದರೆ ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಮೂಲಕ ಪ್ರಾದೇಶಿಕ ಅಭಿವೃದ್ಧಿ. ಪ್ರಾದೇಶಿಕ ಭಾಷೆ, ನಂಬಿಕೆ, ಸಂಸ್ಕøತಿ, ಜೀವನ ವಿಧಾನಗಳನ್ನು ಬಳಸಿ ಜನರನ್ನು ಒಗ್ಗೂಡಿಸಲು ಸಾಧ್ಯ. ಜಾತಿ, ಮತ, ಪಂಥಗಳ ಬಿರುಕಿನಲ್ಲಿ ಸೇರಿ ಹೋಗಿರುವ ಜನರನ್ನು ನಾವು ಕನ್ನಡಿಗರು ಎಂಬ ಭಾವದಿಂದ ಒಂದುಗೂಡಿಸಿ ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯ,
ಕರ್ನಾಟಕದ ದುಡಿಮೆಯ ಅವಕಾಶಗಳು ಕನ್ನಡಿಗರ ಹಕ್ಕು. ದುಡಿಯಬಲ್ಲ ಕನ್ನಡಿಗರೆಲ್ಲರಿಗೂ ದುಡಿಮೆಯ ಅವಕಾಶ ಅರ್ಥಾತ್ 100% ಉದ್ಯೋಗಾವಕಾಶ ಎಂಬುದು ನಮ್ಮ ಘೋಷಣೆಯಾಗಬೇಕು, ನಡೆಯುವ ದಾರಿಯಾಗಬೇಕು. ( ಇದೇ ಸಿದ್ಧಾಂತದನ್ವಯ ಇತರ ಪ್ರದೇಶಗಳೂ– ಕೇರಳ, ತಮಿಳುನಾಡು, ಓಡಿಶಾ ಇತ್ಯಾದಿ ಕಾರ್ಯನಿರ್ವಹಿಸುವಂತಾಗಬೇಕು)
ಕನ್ನಡಿಗರ ಸಾಮಾಜಿಕ- ಆರ್ಥಿಕ ಭವಿಷ್ಯದಲ್ಲಿ ತನ್ನ ಸಾಮಾಜಿಕ- ಆರ್ಥಿಕ ಭವಿಷ್ಯವನ್ನು ವಿಲೀನಗೊಳಿಸಿಕೊಳ್ಳುವ ವ್ಯಕ್ತಿಯೇ ಕನ್ನಡಿಗ ಎಂಬ ವ್ಯಾಖ್ಯೆ – ಪ್ರಸ್ತುತ ಕನ್ನಡಿಗ ವ್ಯಾಖ್ಯೆಗಿಂತ ಸ್ಪಷ್ಟತೆ ನೀಡುತ್ತದೆ.
ಬಂಡವಾಳವಾದಿ ವ್ಯವಸ್ಥೆಯ ಚೌಕಟ್ಟಿಗೇ ಸೀಮಿತವಾಗಿರುವ ಮಹಿಷಿ ವರದಿಯ ಆಚೆಗೂ ಯೋಚಿಸಿ ಕಾರ್ಯಯೋಜನೆ ರೂಪಿಸಿದಾಗ ಮಾತ್ರ ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗುತ್ತಾರೆ. ಇದನ್ನು ಜಾರಿಗೊಳಿಸಲು ಜನಾಧಿಕಾರ ವ್ಯವಸ್ಥೆಯ ಮೂಲಕ ಜನಸಾಮಾನ್ಯರೇ ಮುಂದಾಗಬೇಕು.

******************************

Leave a Reply

Back To Top