ಅಂಕಣ ಸಂಗಾತಿ ವೀಣಾ ವಾಣಿ ವೀಣಾ ಹೇಮಂತ್ ಗೌಡಪಾಟೀಲ್ ಸುಡುವ ಸೂರ್ಯನಿಗೊಂದು ಪತ್ರ ಅಪ್ಪ ಜಗತ್ಪಾಲಕ ಸೂರ್ಯದೇವನೇ,ನಿನಗೆ ಹೀಗೊಂದು ಪತ್ರ ಬರೆಯುವ ಪ್ರಮೇಯ ಬದುಕಿನಲ್ಲಿ ಬರುತ್ತದೆ ಎಂದು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ ಆದರೇನು ಮಾಡುವುದು ?ಇದೀಗ ನಿನಗೆ ಪತ್ರ ಬರೆಯಲೇಬೇಕಾದ, ಬರೆದು ಕ್ಷಮೆ ಕೇಳಿಕೊಳ್ಳಲೇಬೇಕಾದ ಕಾಲ ಕೂಡಿ ಬಂದಿದೆ.ನೀನು ನಮ್ಮನ್ನು ಕ್ಷಮಿಸುವೆ ಎಂಬ ಭರವಸೆ ನನಗಿಲ್ಲ. ಆದರೆ ನಮ್ಮ ಸ್ವಯಂಕೃತ ಅಪರಾಧದ ತಪ್ಪೊಪ್ಪಿಗೆಯನ್ನು ನಿನ್ನ ಮುಂದೆ ಹೇಳಿಕೊಂಡು ನನ್ನ ಮನದ ಭಾರವನ್ನು ಹಗುರವಾಗಿಸಿಕೊಳ್ಳುವ ಆಶಯ ನನ್ನದು.ನಮ್ಮ ಬದುಕನ್ನು ಬೆಳಗುವ ನಮ್ಮೆಲ್ಲ ದೈನಂದಿನ ಕೃತ್ಯಗಳಿಗೆ ಸಾಕ್ಷಿಯಾಗುವ ನಮಗೆ ಆಹಾರ ತಯಾರಿಸಿಕೊಳ್ಳಲು ಬೇಕಾಗುವ ಸಸ್ಯಗಳಿಗೆ ಸಂಜೀವಿನಿಯಾಗಿರುವ, ನಿನ್ನ ಅಸ್ತಿತ್ವವಿಲ್ಲದೆ ನಾವ್ಯಾರು ಇಲ್ಲ ಎಂಬ ಅರಿವನ್ನು ಹೊಂದಿದ್ದರೂ ಕೂಡ, ತಿಳಿದು ಕೂಡ ಅಜ್ಞರಂತೆ ವರ್ತಿಸುತ್ತಿರುವ ನಿನ್ನ ಮಕ್ಕಳ ತಪ್ಪು ಕ್ಷಮಿಸಲಾರದ ಮಹಾಪರಾಧ… ನಿಜ.ಕೇವಲ ನಾಲ್ಕೈದು ದಶಕಗಳ ಹಿಂದೆ ಉದ್ಯಮಗಳು ತೆವಳುತ್ತಿರುವ ಕಾಲದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅವಶ್ಯಕತೆ ಇತ್ತು…. ಇದೀಗ ಸರ್ಕಾರದ ಕಟ್ಟುನಿಟ್ಟಿನ ನಿಯಮಾವಳಿಗಳ ಚಾಪೆಯ ಕೆಳಗೆ ನುಸುಳುವ ಕಲೆ ಜನರಿಗೆ ಗೊತ್ತಾಗಿದೆ. ಮತ್ತೆ ಕೆಲವರು ರಂಗೋಲಿಯ ಕೆಳಗೆ ನುಸುಳುವ ಚಾಣಾಕ್ಷತೆಯನ್ನು ಕೂಡ ಹೊಂದಿದ್ದಾರೆ….. ಎಲ್ಲೋ ಒಬ್ಬಿಬ್ಬರು ಹೀಗೆ ಮಾಡಿದ್ದರೆ ನೀನು ಕೂಡ ಹೋಗಲಿ ಬಿಡು ಎಂದು ಕ್ಷಮಿಸಿ ಬಿಡುತ್ತಿದ್ದೆ ಅಲ್ವೇ?ಆದರೆ ಉದ್ಯಮಗಳು ಉಗುಳುವ ಹೊಗೆಯನ್ನು ನಿನ್ನ ಅತಿ ನೇರಳೆ ಕಿರಣಗಳ ತಾಪವನ್ನು ತಡೆಯಲೆಂದು ಇರುವ ರಕ್ಷಾ ಕವಚ ಓಜೋನನ್ನು ಒಂದು ಇಡೀ ಆಸ್ಟ್ರೇಲಿಯಾ ಖಂಡದಷ್ಟು ಛಿದ್ರಗೊಳಿಸಿದ ಮೇಲೆ ನಿನಗೆ ಕೋಪ ಬರದಿದ್ದರೆ ಹೇಗೆ ?ಉಣ್ಣುವ ತಟ್ಟೆಯನ್ನು ಛೇದ ಮಾಡುವಂತಹ ವಿಸ್ಮೃತಿ ನಮಗೇಕೆ ಬಂತು ಎಂದು ನಿನಗೆ ಕೋಪ ಬಂದಿದ್ದರೆ ಖಂಡಿತವಾಗಿಯೂ ಅದು ನಿನ್ನ ತಪ್ಪಲ್ಲ.ಹಾಗೆಂದು ಎಲ್ಲ ತಪ್ಪನ್ನು ಉದ್ಯಮಗಳ ಮೇಲೆ, ಅವುಗಳು ಕಾರುವ ಕರಿ ಹೊಗೆಗಳ ಮೇಲೆ ಹಾಕಿ ನಾವು ಸಾಚಾ ಸಿದ್ದಪ್ಪಗಳು ಎಂದುಕೊಂಡರೆ ಅದು ನಮ್ಮ ಮೂರ್ಖತನವಾದೀತು. ನಿನ್ನ ಈ ಪ್ರಕೋಪಕ್ಕೆ ನಾವು ಮನುಷ್ಯರು ಕೂಡ ನಮ್ಮ ತಪ್ಪಿನ ಸಿಂಹಪಾಲನ್ನು ಸಲ್ಲಿಸಿದ್ದೇವೆ.ನಮ್ಮದೇ ಸಂತಾನವನ್ನು ಹೆಚ್ಚಿಸಿಕೊಳ್ಳುವ ನಮ್ಮದೇ ಬದುಕನ್ನು ಮತ್ತಷ್ಟು ಮಗದಷ್ಟು ಚೆನ್ನಾಗಿ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕಾಡನ್ನು ಕಡಿದು ನಾಡಾಗಿಸಿದ್ದೇವೆ…. ಕಾಡಿನ ಪ್ರಾಣಿಗಳು ಅವು ಕೂಡ ನಿನ್ನ ಮಕ್ಕಳಲ್ಲವೇ ? ಅವುಗಳ ಮನೆಗೆ ಬೆಂಕಿ ಇಟ್ಟು ಅವರನ್ನು ನೆಲೆಗೇಡಿಯನ್ನಾಗಿಸಿ ನಾವು ಬೆಚ್ಚಗಿನ ಗೂಡಿನಲ್ಲಿ ಇರಲು ಸಾಧ್ಯವೇ ? ಧಗೆಯ ಒಡಲೇ ನಮ್ಮ ಬದುಕುಆಗುತ್ತದೆ ಎಂಬ ಅರಿವಿಲ್ಲದೆ ಅಭಿವೃದ್ಧಿಯ ಹೆಸರಿನಲ್ಲಿ, ಮೂಲ ಸೌಕರ್ಯಗಳನ್ನು ಹೆಚ್ಚಿಸುವ ನೆವದಲ್ಲಿ ಕಾಡನ್ನು ನಾಶ ಮಾಡಿರುವುದು, ಗಿಡ ಮರಗಳಿಗೆ ಕೊಡಲಿಯ ಪ್ರಹಾರ ಮಾಡಿ ಅವುಗಳನ್ನು ಧರಾಶಾಹಿಯಾಗಿಸಿರುವುದು ನಮ್ಮದೇ ಸ್ವಯಂಕೃತ ಅಪರಾಧವಲ್ಲವೇ ?ಒಳ್ಳೆಯ ಬೆಳೆ ಬೇಕು ಎಂಬ ಆಶಯ ತಪ್ಪಲ್ಲ ಆದರೆ ಕಿಸೀ ಬಿ ಕೀಮತ್ ಪರ್ ಎಂಬ ಹಿಂದಿಯ ಹೇಳಿಕೆಯಂತೆ ಖಂಡಿತವಾಗಿಯೂ ಅಲ್ಲ. ನಮ್ಮ ಹೆಚ್ಚಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅದೆಷ್ಟೇ ಕೆಳಮಟ್ಟಕ್ಕೆ ಇಳಿಯಲು ಮನುಷ್ಯ ಸಿದ್ದನಾಗಿದ್ದಾನೆ. ಉಳಿವಿಗಾಗಿನ ಈ ಹೋರಾಟದಲ್ಲಿ ಕೇವಲ ತನ್ನ ಉಳಿವಿನ ಕುರಿತು ಮಾತ್ರ ಯೋಚಿಸುತ್ತಿರುವ ಆತ ಅತಿಯಾದ ದುರಾಸೆಯಿಂದ ಭೂಮಿ ತಾಯಿಯ ಒಡಲಿಗೆ ವಿಷ ಹಾಕುತ್ತಿದ್ದಾನೆ. ಏನನ್ನಾದರೂ ತೆರುವ, ಎಷ್ಟನ್ನಾದರೂ ತೆರುವ ಮೂಲಕ ನಾವು ಫಲವತ್ತಾದ ಭೂಮಿ ತಾಯಿಯ ಮಡಿಲಿಗೆ ಹಾಲಾಹಲದಂತಹ ರಾಸಾಯನಿಕಗಳನ್ನು ಬೆರೆಸಿದರೆ ಆಕೆಯಾದರೂ ಹೇಗೆ ಸುಮ್ಮನಿದ್ದಾಳು ? ಅಮೃತದಂತಹ ಬದುಕನ್ನು ನಮಗೆ ಕೊಡಮಾಡಿರುವ ಭೂಮಿತಾಯಿಯ ಮಡಿಲಿನಲ್ಲಿ ಗರಿಕೆ ಹುಲ್ಲು ಕೂಡ ಬೆಳೆಯದಂತೆ ಬಂಜರು ಮಾಡಿ ಇದೀಗ ಗೋಳಿಟ್ಟರೆ ಏನು ಪ್ರಯೋಜನ ?ಸಹಿಸಿ ಸಾಕಾದ ಆಕೆ ಕೂಡ ಧಗೆಯ ಒಡಲಾಗಿ ನಮಗೆ ಶಿಕ್ಷೆ ನೀಡುತ್ತಿದ್ದಾಳೆ…. ಇನ್ನು ಆಪೋಷನ ತೆಗೆದುಕೊಳ್ಳುವುದಷ್ಟೇ ಬಾಕಿ.ಇನ್ನು ಭೂಮಿ ತಾಯಿಯ ಒಡಲಿಗೆ ನಾವು ಹಾಕಿದ ವಿಷ, ಕಾರ್ಖಾನೆಗಳ ರಾಸಾಯನಿಕಗಳು ನಾವು ಕುಡಿಯುವ ಗಂಗೆಯನ್ನು ಕಲುಷಿತಗೊಳಿಸಿದೆ. ತನ್ನ ಒಡಲಲ್ಲಿರುವ ಆಮ್ಲಜನಕವನ್ನು, ಲವಣ ಮತ್ತು ಖನಿಜಗಳನ್ನು ಪೋಷಕಾಂಶಗಳ ರೂಪದಲ್ಲಿ ನಮಗೆ ನೀರಿನ ಮೂಲಕ ನೀಡುವ, ನಾವೆಲ್ಲರೂ ಗಂಗಾಮಾತೆ ಎಂದು ಪೂಜಿಸುವ ಜಲವನ್ನು ಕಲುಷಿತಗೊಳಿಸಿದ ಮಹಾಪರಾಧ ಕೂಡ ನಮ್ಮದೇ. ನಾವು ಹುಲು ಮಾನವರಂತೆಯೇ ಜಲಚರಗಳು ಕೂಡ ನಿನ್ನ ಮಕ್ಕಳು.ನಿನ್ನ ಒಡಲಿಗೆ ನಮ್ಮೆಲ್ಲ ಕಲ್ಮಶಗಳನ್ನು ಎಸೆಯುವ, ರಾಸಾಯನಿಕಗಳನ್ನು ಬೆರೆಸುವ, ನಿನ್ನೊಡಲನ್ನು ಮಲಿನಗೊಳಿಸುವ ನಿನ್ನಲ್ಲಿಯೇ ತಮ್ಮ ಬದುಕನ್ನು ಕಂಡುಕೊಂಡಿರುವ ನಿನ್ನ ಮಕ್ಕಳಾದ ಜಲಚರ ವಾಸಿಗಳಿಗೆ ಕೇಡು ಬಗೆಯುವ ನಮ್ಮ ಕುರಿತು ನಿನಗೆ ಪ್ರೀತಿಯಾದರೂ ಹೇಗೆ ಹುಟ್ಟೀತು ? ನಿನ್ನ ದ್ವೇಷಕ್ಕೂ ನಾವು ಅನರ್ಹರು ಎಂದು ಮಾತ್ರ ಹೇಳಬಲ್ಲೆ. ತಿಳಿಯದೆ ಮಾಡುವುದು ಮೂಢತನ ಎಂದಾದರೆ ತಿಳಿದು ಕೂಡ ಮಾಡುವ ನಮ್ಮ ಅಜ್ಞಾನಕ್ಕೆ ಬೆಲೆ ತೆರಬೇಕಾದವರು ನಾವೇ ಅಲ್ಲವೇ !ಈ ಹಿಂದೆ ಪ್ರತಿಯೊಬ್ಬರ ಮನೆಗಳಲ್ಲಿ ಹಿತ್ತಲಿರುತ್ತಿತ್ತು ಅಲ್ಲಿ ದಿನಬಳಕೆಯ ತರಕಾರಿಗಳ ಜೊತೆಗೆ ಹೂವು ಹಣ್ಣು ಗಳ ಗಿಡಮರಗಳ ಜೊತೆಗೆ ದೊಡ್ಡದಾದ ಹುಣಸೆ ಮರಗಳು ಕೂಡ ಇರುತ್ತಿದ್ದವು . ನಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿ ಇತರರಿಗೆ ಕೊಡುವಷ್ಟು ಕೂಡ ವಿಶಾಲತೆ ನಮ್ಮದಾಗಿತ್ತು. ಆದರೆ ಆಧುನಿಕತೆಯ ಹೆಸರಿನಲ್ಲಿ ಅಲಂಕಾರಿಕ ಗಿಡಗಳನ್ನು ಮಾತ್ರ ನೆಟ್ಟು ನೀರು ದೊರೆಯುವುದಿಲ್ಲ ಎಂಬ ನೆಪ ವಡ್ಡಿ ಗಿಡ ಮರಗಳಿಗೆ ಕೊಡಲಿ ಹಾಕಿರುವ ನಮ್ಮ ಬುದ್ಧಿಗೇಡಿತನಕ್ಕೆ ನೀನಾದರೂ ಏನು ಮಾಡುತ್ತಿ ?ಆಗಲೂ ಕೂಡ ಬೇಸಿಗೆ ಇತ್ತು ಆದರೆ ದಿನದ ಕೆಲಸಗಳನ್ನು ಮಾಡಿ ಪೂರೈಸಿ ದಣಿದ ದೇಹ ಮನೆಯ ಹಿತ್ತಲಿನಲ್ಲಿ ಕಟ್ಟೆಯ ಮೇಲೆ ಮರದ ಕೆಳಗೆ ಬರಿ ನೆಲದ ಮೇಲೆ ಮಲಗಿದರು ಕೂಡ ಬೀಸುವ ಮರಗಳ ತಂಗಾಳಿ ನಮಗೆ ವಿಶ್ರಾಂತಿಯ ಜೊತೆಗೆ ನೆಮ್ಮದಿಯನ್ನು ಕೂಡ ನೀಡುತ್ತಿದ್ದವು.ಈಗ ಮನೆ ಮನೆಗಳಲ್ಲಿ ಫ್ಯಾನ್ಗಳು, ಏರ್ ಕೂಲರ್ ಗಳು ಎಸಿಗಳ ಭರಾಟೆ ಇದೆ, ನಿಜ! ಆದರೆ ಭೂಮಿ ತಾಯಿಯ ಮಡಿಲಲ್ಲಿ ಬೆಳೆದ ಮರಗಳು ಕೊಡುವ ನೆರಳು ಮತ್ತು ಗಾಳಿಯನ್ನು ನೀಡಲು ಯಾರಿಂದಲೂ ಸಾಧ್ಯವಿಲ್ಲ. ನಮಗೆ ಶುದ್ಧ ಆಮ್ಲಜನಕವನ್ನು, ನೆರಳನ್ನು ಫಲ ಪುಷ್ಪಗಳನ್ನು ನೀಡುವ ಅಂತಹ ಮರಗಳನ್ನು ಬೇರು ಬಿಟ್ಟು ಕಾಂಪೌಂಡ್ ನಾಶ ಮಾಡುತ್ತವೆ ಎಂಬ ಕಾರಣಕ್ಕಾಗಿ ಕಡಿದೊಗೆದಿರುವ ನಾವು ಮನೆಯ ಯಾವ ಮೂಲೆಯಲ್ಲಿ ಹೋದರೂ ನೆಮ್ಮದಿಯ ನೆಳಲು ಕಾಣದೆ ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ನಮ್ಮದಾಗಿದೆ.ಇನ್ನು ನಾವು ಬಳಸುವ ಎ.ಸಿ ಗಳು ವಾತಾವರಣದಲ್ಲಿ ಮೀಥೇನ್ ಅನಿಲವನ್ನು ಬಿಡುಗಡೆ ಮಾಡಿ ವಾಯು ಮಾಲಿನ್ಯವನ್ನು ಉಂಟು ಮಾಡುತ್ತವೆ. ಇದರ ಪ್ರಮಾಣ ಹೆಚ್ಚಿದಷ್ಟು ನಾವು ಮನುಷ್ಯರಿಗೆ ಅಪಾಯ ತಪ್ಪಿದ್ದಲ್ಲ.ಭೂಮಿಯನ್ನು ಮಾತ್ರವಲ್ಲ ಆಕಾಶವನ್ನು ಕೂಡ ನಮ್ಮ ಅತಿಯಾದ ದಾಹಕ್ಕೆ ಆಪೋಷಣೆ ತೆಗೆದುಕೊಂಡು ಅಲ್ಲೂ ಕೂಡ ವಾಯು ಮಾಲಿನ್ಯದ ಮೂಲಕ ಹಾಳು ಮಾಡಿರುವ ನಮ್ಮ ಮೌಡ್ಯತೆಯನ್ನು ಸಹಿಸುವುದು ನಿನಗೆ ಕೂಡ ಅಸಾಧ್ಯ ಅಲ್ಲವೇ ?ಹೀಗೆ ನೆಲ,ಜಲ, ವಾಯುವನ್ನು ಹಾಳು ಮಾಡಿರುವ ನಾವು ಗಿಡ ಮರಗಳನ್ನು ಕಡಿದೊಗೆದು ಪರಿಸರವನ್ನು ನಾಶ ಮಾಡಿದ್ದೇವೆ. ಪರಿಣಾಮವಾಗಿ ವಾತಾವರಣದ ತಾಪಮಾನ ಹೆಚ್ಚಾಗಿದೆ. ಸಹಸ್ರಾರು ವರ್ಷಗಳಿಂದ ಒಂದು ಸೆಂಟಿಮೀಟರ್ ಇನ್ನಷ್ಟು ಕರಗದ ಬೃಹದಾಕಾರದ ಹಿಮದ ನೀರ್ಗಲ್ಲುಗಳು ಇನ್ನಿಲ್ಲದಂತೆ ಕರಗಿ ಹರಿಯುತ್ತಿವೆ ಪರಿಣಾಮವಾಗಿ ವಿಪರೀತ ಬಿಸಿಲು ಚಳಿ ಮಳೆಗಳ ತೊಂದರೆಗಳಿಂದ ನಾವು ನಲುಗುತ್ತಿದ್ದೇವೆ.ನಮ್ಮ ಪೂರ್ವಜರು ನಮಗೆ ಸ್ವಚ್ಚ,ಶುದ್ಧವಾದ ಹಾಗೂ ಬದುಕಲು ಯೋಗ್ಯವಾದ ಪರಿಸರವನ್ನು ನೀಡಿದ್ದರು ಅದು ಅವರ ಕರ್ತವ್ಯವಾಗಿತ್ತು. ಈ ಭೂಮಿಯ ಪ್ರಜೆಗಳಾದ ನಾವುಗಳು ನಮ್ಮ ಮುಂದಿನ ಪೀಳಿಗೆಗೆ ಅಷ್ಟೇ ಬದುಕಲು ಯೋಗ್ಯವಾದ ವಾತಾವರಣವನ್ನು ಹೊಂದಿರುವ ಪರಿಸರವನ್ನು ಬಿಟ್ಟು ಕೊಡಬೇಕಾದ ಜವಾಬ್ದಾರಿ ಹೊತ್ತಿದ್ದು ಆ ನಿಟ್ಟಿನಲ್ಲಿ ಇನ್ನು ಮುಂದೆ ಯಾದರೂ ಕಾರ್ಯನಿರ್ವಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈಗಾಗಲೇ ಆಗಿ ಹೋಗಿರುವ ಪ್ರಮಾದವನ್ನು ಸರಿಪಡಿಸಲು ಇಂದಿನಿಂದಲೇ ಕಾರ್ಯ ನಿರ್ವಹಿಸುತ್ತೇವೆ ಎಂಬ ಭರವಸೆಯನ್ನು ಭೂಮಿಯ ವಾಸಿಗಳಾದ ನಾವು ನಿನಗೆ ನೀಡುತ್ತೇವೆ. ಇನ್ನಾದರೂ ನಿನ್ನ ಕೋಪ ತಾಪವನ್ನು ಬದಿಗಿಟ್ಟು ಎಳೆಯ ಹದವಾದ ಬಿಸಿಲನ್ನು ಮಾತ್ರ ನಮಗೆ ನೀಡು. ನಿನ್ನ ಮಕ್ಕಳನ್ನು ಕಾಪಾಡು ಎಂದು ಕೇಳಿಕೊಳ್ಳುವನಿನ್ನ ಮಕ್ಕಳು ವೀಣಾ ಹೇಮಂತ್ ಗೌಡ ಪಾಟೀಲ್
“ಅಫ್ಟ್ರಾಲ್ ವಾಚ್ಮನ್” ತೆಲುಗು ಮೂಲ ಉಪ್ಪುಲ ಲಿಂಗಯ್ಯ ಕನ್ನಡಕ್ಕೆ ಧನಪಾಲ ನಾಗರಾಜಪ್ಪ
ಅನುವಾದ ಸಂಗಾತಿ ಅಫ್ಟ್ರಾಲ್ ವಾಚ್ಮನ್ ತೆಲುಗು : ಉಪ್ಪುಲ ಲಿಂಗಯ್ಯಕನ್ನಡಕ್ಕೆ : ಧನಪಾಲ ನಾಗರಾಜಪ್ಪಅ vಕೊರಿಯರ್ ಪಾರ್ಸಲ್ಮೇಲಕ್ಕೆ ತಂದುಕೊಡುಟಿಫನ್ ತಂದುಕೊಡುದಿನಸಿ ಸರಕುಗಳನ್ನು ತಂದುಕೊಡುಕನ್ನಡಕ ಮೇಲಿಟ್ಟು ಮರೆತಿರುವೆತೆಗೆದುಕೊಂಡು ಬಾಬಸ್ ನಿಲ್ದಾಣದ ಬಳಿ ಬಿಟ್ಟಿರುವಗಾಡಿಯನ್ನು ಹಾಕಿಕೊಂಡು ಬಾಇದನ್ನು ಒರೆಸು, ಅಲ್ಲಿಗೆ ಹೋಗು…ಒಮ್ಮೊಮ್ಮೆ ಒಂದೊಂದು ಕೆಲಸಒಮ್ಮೊಮ್ಮೆ ಒಂದೊಂದು ಗದರಿಕೆಪ್ರೀತಿಯಿಂದ ಹೇಳುವವರು ಕೆಲವರುಒದರುವಂತೆ ಹೇಳುವವರು ಕೆಲವರು ಡ್ಯೂಟಿ ಅಂತಾರೆಆದರೆ…ಇವೆಲ್ಲಾ ಡ್ಯೂಟಿಯನ್ನು ಮೀರಿದ ಕೆಲಸಗಳುಮಾಡಬೇಕನಿಸುತ್ತದೆಆಗಾಗ ಮಾಡಬಾರದನಿಸುತ್ತದೆಮೈಕೈ ನುಜ್ಜುಗುಜ್ಜಾಗುತ್ತದೆಜೀವ ದಣಿದು ಹೋಗುತ್ತದೆಹೇಳಿದ ರೀತಿಗೆ ಚುರುಕ್ ಅನ್ನುತ್ತದೆ“ಈಗ ಆಗುವುದಿಲ್ಲ ಸರ್ಗೇಟಿನ ಬಳಿ ಯಾರೂ ಇಲ್ಲ ಸರ್”ತಡಬಡಿಸುತ್ತ ನಾನು ಹೇಳಿದೊಡನೆಅವರು ಹೇಳುವರು…“ಅಫ್ಟ್ರಾಲ್ ವಾಚ್ಮನ್ನಮ್ಮ ಮಾತಿಗೇ ಎದುರು ಮಾತಾಡುವೆಯಾನಿನ್ನ ಕೆಲಸ ಕಿತ್ತುಹಾಕುವೆ” ಎಷ್ಟು ಸಲ ಎಷ್ಟೆಲ್ಲಾ ಮಾಡಿದೆನಲ್ಲಎಷ್ಟೋ ಸಲ ನಿದ್ದೆಯನ್ನೇ ತೊರೆದನಲ್ಲಇದೇನಿದು…ಒಂದು ಸಲ ಆಗುವುದಿಲ್ಲ ಎಂದರೆಅಫ್ಟ್ರಾಲ್ ವಾಚ್ಮನ್ ಆಗಿಬಿಡುವೆಎಲ್ಲರನ್ನೂ ಕಾಯುವ ನಾನು ಅಫ್ಟ್ರಾಲ್ ವಾಚ್ಮನ್ ಹೇಗಾಗುವೆ! ತೆಲುಗು : ಉಪ್ಪುಲ ಲಿಂಗಯ್ಯಕನ್ನಡಕ್ಕೆ : ಧನಪಾಲ ನಾಗರಾಜಪ್ಪ
“ಅಫ್ಟ್ರಾಲ್ ವಾಚ್ಮನ್” ತೆಲುಗು ಮೂಲ ಉಪ್ಪುಲ ಲಿಂಗಯ್ಯ ಕನ್ನಡಕ್ಕೆ ಧನಪಾಲ ನಾಗರಾಜಪ್ಪ Read Post »
ಗಂಗಾ ಚಕ್ರಸಾಲಿ ಅವರ ಕವಿತೆ “ಒಲವ ಗೀತೆ”
ಕಾವ್ಯ ಸಂಗಾತಿ ಗಂಗಾ ಚಕ್ರಸಾಲಿ “ಒಲವ ಗೀತೆ”. ಅವರ ನೆನಪ ಜೋಕಾಲಿಯಲ್ಲಿಒಲವ ಗೀತೆ ಆಗಾಗ ಸರ್ರನೇ ಜೀಕುತ್ತದೆ| ಒಮ್ಮೆಲೇ….ಹೂ ತೋಟವ ಸುತ್ತಿ ಬಂದಗಾಳಿಯ ಘಮದಿ ಮಿಂದಪಲ್ಲವಿಯ ಸಾಲುಗಳುಮನವನು ಚಿಟ್ಟೆಯಾಗಿಸಿಬಿಡುತ್ತವೆ| ಆದರೆ….ಚರಣಗಳು ನೀರವ ಧ್ಯಾನದಿ ಬಂಧಿಏಕೆ? ಹೇಗೆ? ಪ್ರಶ್ನೆಗಳುಉತ್ತರಕ್ಕಾಗಿ ಕಾಯ್ದರೂಇಬ್ಬರ ಅಹಮ್ಮಿನ ಕೋಟೆಯನ್ನುಬೇಧಿಸಲಾರವು| ಬದುಕಿನ ಎಲ್ಲ ಹಾಡುಗಳಲ್ಲಿಚರಣಗಳಿರಬೇಕೆ?ಆದಿ, ಅಂತ್ಯಾಕ್ಷರ, ಮುಕ್ತಾಯದ ಸಾಲೊಂದಿರಬೇಕೆ?ಹೂಂ..ಗುಡುತ್ತದೆ ಕವಿಹೃದಯ| ವಿಚಿತ್ರವೆಂದರೆ…ಬಹುತೇಕ ಒಲವಿನ ಹಾಡುಪಲ್ಲವಿಗಷ್ಟೇ ಸೀಮಿತವಾದಾಗಲೂಜೀವನದುದ್ದಕ್ಕೂ ಮನದಿಜೀಕುತ್ತಲೇ ಇರುತ್ತದೆಬೇಸರಿಕೆಯ ಪೋಷಾಕು ತೊಡದೇ… ಗಂಗಾ ಚಕ್ರಸಾಲಿ
ಗಂಗಾ ಚಕ್ರಸಾಲಿ ಅವರ ಕವಿತೆ “ಒಲವ ಗೀತೆ” Read Post »
ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ”
ಕಾವ್ಯ ಸಂಗಾತಿ ನಿರಂಜನ ಕೇಶವ ನಾಯಕ “ಇಂಗದ ಬಾಯಾರಿಕೆ” ಬಿಸಿಲ ಶಲಾಕೆಇಳಿದು ಚುಚ್ಚಿದೆಹೃದಯದಟ್ಟದ ಆಳಕೆ;ಬತ್ತಿಸಿ ಪ್ರಾಣದ ಒರತೆಯಉಳಿದಿದೆ— ಇಂಗದ ಬಾಯಾರಿಕೆ. ಅರಿಯದ ನೋವುಅಸ್ಥಿ-ಮಾಂಸವ ಕೊರೆಯಲು;ಬೆವರಿನ ನದಿಯಲಿಹುಡುಕುವ ಹಾದಿಯೇಬಸವಳಿದ ಮನಕೆ ಕಿರು ಆಸರೆ. ಹೆಜ್ಜೆಗಳು ಭಾರವಾಗಿ,ಬೆಳಕೇ ಬೆಂಕಿಯ ಮಳೆಯಾಗಿ;ದಿಗಂತದಲಿ ನಿಂತುಜೀವ ಹಿಂಡುವಾಗ—ಸೋಲೊಪ್ಪದೆ ವಿಧಿಯಿಲ್ಲವೇ? ನಿರಂಜನ ಕೇಶವ ನಾಯಕ
ನಿರಂಜನ ಕೇಶವ ನಾಯಕ ಅವರ ಕವಿತೆ “ಇಂಗದ ಬಾಯಾರಿಕೆ” Read Post »
ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು”
ಕಾವ್ಯ ಸಂಗಾತಿ ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು” ಬೆಂದ ಜೀವದ ಬೇಗೆನಂದಿಸುವವರು ಯಾರುಹಸಿವಿನ ನರಳಾಟದಲ್ಲಿಸಾಯುತ್ತಿರುವವರು ನಾವು ಸಂಕಟದಲ್ಲಿ ಕೂಗಾಡಿದರೆಮೂರಡಿಯಲ್ಲಿ ಹೂಳುವರುತೋಪು ಬಂದೂಕುಗಳಿಲ್ಲದೆಹತವಾಗುತ್ತಿರುವ ಜೀವಗಳು ಹಸಿವಿನ ಚೀಲ ಬೆನ್ನು ಏರಿದೆಶಾಂತಿ ನೆಮ್ಮದಿಯ ವೇದಾಂತಗುನುಗುಟ್ಟುತ್ತಾ ಕಿವಿ ತಟ್ಟಿದೆಮೋಸ ವಂಚನೆ ಕೊರಳ ಉರುಳಾಗಿ ಬಿದ್ದಿವೆ ಬಾಳೊಂದು ಮಾಯೆ ಎಂದರು ಅನುಭಾವಿಗಳುಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧಈ ಎಲ್ಲಕೂ ಕಡಿವಾಣ ಇಲ್ಲದ ಹಸಿವೆಂಬ ಮಾಯೆಮೆರೆಯುತ್ತಿದೆ ಏಕೆ? ಎಲುಬಿಲ್ಲದ ನಾಲಿಗೆಬಯಸುತ್ತಿದೆ ರುಚಿಹಸಿವು ತಣಿಸುವ ಮಂತ್ರವೇದಾಂತ ಯಾವುದಾದರೂ ಇದೆಯೇ ತಿಳಿಸು ಮನವೇ…ಒಮ್ಮೆ ತಿಳಿಸು ಮನವವೇ… ಮಾಜಾನ್ ಮಸ್ಕಿ
ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು” Read Post »
ವಾಣಿ ಯಡಹಳ್ಳಿಮಠ್ ಅವರ ಗಜಲ್
ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ್ ಗಜಲ್ (ಲಕ್ಷ್ಮಣ ಶರೆಗಾರ ಸರ್ ಅವರ ಗಜಲ್ ಒಂದರಿಂದ ಪ್ರೇರಿತ )ನನಗೆಲ್ಲವೂ ಆದವನ ಮೇಲೆಯೇ, ಎಲ್ಲರಿಗಿಂತಹೆಚ್ಚು ಶಿಕಾಯತ್ ಇವೆಯೆಂದು ಯಾರಿಗೆ ಹೇಳಲಿಬೇಹಿಸಾಬ್ ಕೋಪದ ಹಿಂದೆಯೇ ಬೇಯಿಂತಹಾಇಷ್ಕ್ ಇದೆಯೆಂದು ಯಾರಿಗೆ ಹೇಳಲಿ ಸಾಗರದಷ್ಟು ಕೋಪವೇ ಇರಲಿದುನಿಯಾದ ಸಾವಿರ ಜನರ ಮೇಲೆ ಸಾಕಿಅವನೊಬ್ಬನ ಮುಂದೆ ರಚ್ಛೆ ಹಿಡಿದು,ಕೂಗಾಡುವುದುರೂಹ್ ನ ಆಸೆಯೆಂದು ಯಾರಿಗೆ ಹೇಳಲಿ ಹುರುಳಿಲ್ಲದ ರಸ್ಮ್,ರಿವಾಜ್ ಗಳುನಮ್ಮನು ಬಂಧಿಸಲೆತ್ನಿಸಿ ಸೋಲುತಿಹವು ಎಲ್ಲದಕ್ಕೂ ಮೀರಿದ,ಹೆಸರಿಡಲಾಗದ ಬಾಂಧವ್ಯಅವನೊಂದಿಗೆ ಬೆಸೆದಿದೆಯೆಂದು ಯಾರಿಗೆ ಹೇಳಲಿ ಎಲ್ಲವೂ, ಎಲ್ಲರೂ ತನ್ನ ಹಿಸಾಬ್ ನಂತೆಯೇನಡೆಯಬೇಕೆನ್ನುವುದು ಈ ಜಗತ್ತುಇದೆ ಖಾಯಾಲಿಯಲಿ ಅದೆಷ್ಟು ಖಾಬ್ ಗಳುಕಬ್ರಸ್ತಾನ್ ಸೇರಿವೆಯೆಂದು ಯಾರಿಗೆ ಹೇಳಲಿ ಅವನನು ನೆನೆಯಲೂ ಪರವಾನಗಿಯೇ ಇಲ್ಲ, ಈ ವಾಣಿಗೆ ಈ ಜನುಮದಲಿಆದರೂ ದೇವರೆದುರು ಕೈಮುಗಿವಾಗೊಮ್ಮೆ,ಅವನನೇ ಕೇಳುವೆಯೆಂದು ಯಾರಿಗೆ ಹೇಳಲಿ ವಾಣಿ ಯಡಹಳ್ಳಿಮಠ್
ವಾಣಿ ಯಡಹಳ್ಳಿಮಠ್ ಅವರ ಗಜಲ್ Read Post »
“ಹೀಗೊಂದು ಆಲೋಚನೆ…”ಕೆ.ಜಯಲಕ್ಷ್ಮಿ ಅವರ ಪ್ರಬಂಧ
ಪ್ರಬಂಧ ಸಂಗಾತಿ ಕೆ.ಜಯಲಕ್ಷ್ಮಿ ಅವರ ಪ್ರಬಂಧ “ಹೀಗೊಂದು ಆಲೋಚನೆ…” ಕಾಲೇಜುಗಳಲ್ಲಿ ಯಾರಾದರೂ ಉಪನ್ಯಾಸಕರು ರಜೆ ತೆಗೆದುಕೊಂಡ ಸಂದರ್ಭದಲ್ಲಿ ಅವರ ತರಗತಿಗಳಿಗೆ ಬೇರೆ ಉಪನ್ಯಾಸಕರು ಹೋಗುವುದು ಸರ್ವೇ ಸಾಮಾನ್ಯ. ಅದೊಂದು ದಿನ ವಿಜ್ಞಾನ ವಿಭಾಗದ ಉಪನ್ಯಾಸಕರು ರಜೆಯಲ್ಲಿದ್ದಾಗ ಅವರ ಪಿರೀಡ್ ಗೆ ನಾನು ಆ ತರಗತಿಗೆ ಹೋಗಿದ್ದೆ. ಮಕ್ಕಳು ಟೈಮ್ ಟೇಬಲ್ ಗೆ ಅನುಗುಣವಾಗಿ ಪಠ್ಯ ಪುಸ್ತಕ ತರುತ್ತಾರಷ್ಟೇ? ಆ ದಿನ ನನ್ನ ಸಬ್ಜೆಕ್ಟ್ ಇರಲಿಲ್ಲವಾದ್ದರಿಂದ ನನ್ನ ಪಠ್ಯ ತಂದಿರಲಿಲ್ಲ. ಆದ ಕಾರಣ ನಾನು ಪಾಠ ಮಾಡುವಂತಿರಲಿಲ್ಲ. ಮಕ್ಕಳಿಗೆ ಏನನ್ನಾದರೂ ಓದುವಂತೆ ಹೇಳಿ ಸುಮ್ಮನೆ ಅವರನ್ನು ಗಮನಿಸುತ್ತಿದ್ದೆ. ಓರ್ವ ವಿದ್ಯಾರ್ಥಿನಿ ಯಾವ ಪುಸ್ತಕವನ್ನೂ ತೆರೆಯದೆ ಸುಮ್ಮನೆ ಕುಳಿತು ಯೋಚನಾಮಗ್ನಳಾಗಿದ್ದಳು. ಕಾರಣ ಕೇಳಿದಾಗ ಅವಳು ಕೊಟ್ಟ ಉತ್ತರ ಹೀಗಿತ್ತು ” ನಾವು ಒಂದು ನಾಯಿಯನ್ನು ಬಹಳ ಪ್ರೀತಿಯಿಂದ ಸಾಕಿದ್ದೆವು. ಇತ್ತೀಚೆಗೆ ಅದು ರಾತ್ರಿ ಹೊತ್ತು ವಿಚಿತ್ರವಾಗಿ ಬೊಗಳಲು ಶುರು ಮಾಡಿದ್ದರಿಂದ ಅಕ್ಕ ಪಕ್ಕದ ಜನರ ನಿದ್ದೆಗೆ ಭಂಗವಾಗುತ್ತದೆ ಅಂತ ದೂರದ ಸಂಬಂಧಿಕರ ಮನೆಗೆ ಅದನ್ನು ಕಳುಹಿಸಿಕೊಟ್ಟೆವು. ಸರಪಳಿ ಸಹಿತ ಅದನ್ನವರು ತೆಗೆದುಕೊಂಡು ಹೋಗಬೇಕಾದರೆ ಅದು ನನ್ನನ್ನೇ ನೋಡುತ್ತಾ.. ನೋಡುತ್ತಾ.. ಹೋಗುತ್ತಿತ್ತು ಮತ್ತು ಅದರ ಕಣ್ಣಂಚಿನಲ್ಲಿ ಹನಿ ಜಿನುಗಿತ್ತು. ನಾಯಿಗಳು ಕೂಡಾ ನಮ್ಮ ಹಾಗೆ ದುಃಖದ ಸಂದರ್ಭದಲ್ಲಿ ಅಳುತ್ತವಾ?!ಬಹುಶಃ ಅದು ನನಗೆ ಏನೋ ಹೇಳುವುದಿತ್ತು ಅನಿಸುತ್ತೆ. ಆದರೆ ಪಾಪ! ಅದಕ್ಕೆ ಬಾಯಿ ಬರುವುದಿಲ್ಲವಲ್ಲಾ…ಒಂದು ವೇಳೆ ನಮ್ಮ ಹಾಗೆ ಮಾತನಾಡುವಂತಿದ್ದರೆ ಅದು ನನಗೆ ಏನು ಹೇಳಿ ಹೋಗುತ್ತಿತ್ತು?ಎಂದು ಆಲೋಚಿಸುತ್ತಿದ್ದೆ ಮೇಡಂ ” ” ನಾಯಿಗಳಿಗೆ ಮಾತನಾಡುವ ಶಕ್ತಿ ಇದ್ದಿದ್ದರೆ ಹಗಲು ರಾತ್ರಿಯೆನ್ನದೆ ಬೀದಿಯುದ್ಧಕ್ಕೂ ಅವುಗಳ ದನಿಯೇ ಮೇಳಯಿಸುತ್ತಿತ್ತು, ಈಗ ಓದು, ಆಮೇಲೆ ಆ ಬಗ್ಗೆ ಆಲೋಚನೆ ಮಾಡುವಿಯಂತೆ ” ಎಂದು ಆ ಹುಡುಗಿಯನ್ನು ಓದಿಗೆ ಹಚ್ಚಿದೆನಾದರೂ ಹೌದು,…ಆ ನಾಯಿ ಮಾತಾಡುವಂತಿದ್ದಿದ್ದರೆ ಏನು ಹೇಳಿ ಹೋಗುತ್ತಿತ್ತು…. ಇಷ್ಟು ಪ್ರೀತಿಯಿಂದ ಮಕ್ಕಳ ಹಾಗೆ ಬೆಳೆಸಿದ ನನ್ನನ್ನು ಗುರುತು ಪರಿಚಯ ಇಲ್ಲದವರ ಮನೆಗೆ ಕಳುಹಿಸುತ್ತಿದ್ದೀರಲ್ಲ.. ನನ್ನ ಮೇಲೆ ಕರುಣೆ ಬಾರದೇ? ಎಂದು ಹೇಳುತ್ತಿತ್ತೋ ಏನೋ.ಈಗ ಆ ವಿದ್ಯಾರ್ಥಿನಿಯ ಆಲೋಚನೆ ನನ್ನ ತಲೆ ಕೊರೆಯತೊಡಗಿತ್ತು. ಹೌದು, ಪ್ರಾಣಿಗಳಿಗೆ ಬಾಯಿ ಬಂದಿದ್ದರೆ , ಅವುಗಳೂ ಮಾತನಾಡತೊಡಗಿದರೆ ಇಡೀ ಪ್ರಪಂಚದಲ್ಲಿ ಒಂದು ನೈತಿಕ ಕ್ರಾಂತಿಯೇ ಆಗುತ್ತಿತ್ತು . ಕೇವಲ ಮೂಕ ಸನ್ನೆಗಳಿಂದಲೇ ಪ್ರಾಣಿಗಳು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಬಲ್ಲ ಮೂಕ ಪ್ರಾಣಿಗಳು ನಮ್ಮ ಮಾತಿನ ಶೈಲಿಯನ್ನು ಗಮನಿಸಿಯೇ ನಮ್ಮ ಸಂತೋಷ , ದುಃಖ,ಸಮಸ್ಯೆ ಎಲ್ಲವನ್ನೂ ಅರ್ಥೈಸಿಕೊಳ್ಳಬಲ್ಲವು.ನಮ್ಮತ್ತ ಕರುಣಾಪೂರಿತ ದೃಷ್ಟಿ ಹರಿಸುತ್ತಲೇ ನಮ್ಮ ಮನಸ್ಸನ್ನು ಆಕರ್ಷಿಸುವ ಸಾಕು ಪ್ರಾಣಿಗಳು ನಮ್ಮ ಮಾನಸಿಕ ಒತ್ತಡವನ್ನು ಕುಗ್ಗಿಸಿ ದೇಹದ ಆರೋಗ್ಯ ಮಟ್ಟ ಸುಧಾರಣೆಗೆ, ಲವಲವಿಕೆಯ ಜೀವನಕ್ಕೆ ಸ್ಫೂರ್ತಿಯಾಗಬಲ್ಲವು. ಉದಾಹರಣೆಗೆ ನಾಯಿಗಳನ್ನೇ ತೆಗೆದುಕೊಳ್ಳೋಣ. ಕೇವಲ ತಮ್ಮ ಮುಖ ಭಾವದಿಂದಲೇ ಸಂತೋಷ, ದುಃಖ, ಭಯ, ಸಿಟ್ಟು, ಅಪರಾಧಿ ಭಾವ, ಏಕಾಂಗಿತನದ ನೋವು, ಕೃತಜ್ಞತಾ ಭಾವ ಎಲ್ಲವನ್ನೂ ಸ್ಪಷ್ಟಪಡಿಸಬಲ್ಲ ವಿಶ್ವಾಸಾರ್ಹ ಜೀವಗಳು. ನಾವು ಮನುಷ್ಯರು ಕೇಕೆ ಹಾಕಿ, ಅತ್ತು ಕರೆದು ಗೋಳಾಡಿ, ಕಿರುಚಿ ಹೇಳುವ ಅಷ್ಟೂ ವಿಚಾರಗಳನ್ನು ಕೇವಲ ಮುಖ ಭಾವದಿಂದಲೇ ವ್ಯಕ್ತಪಡಿಸುವ ಅವುಗಳಿಗೆ ಮಾತೇಕೆ ಬೇಕು? ನಾವು ಬೈದರೆ ತಿರುಗಿ ಕೂರುತ್ತವೆ.ಪ್ರೀತಿ ತೋರಿದರೆ ಖುಷಿ ಪಡುತ್ತವೆ. ಅವುಗಳ ತಪ್ಪಿಗೆ ಹೊಡೆಯಲು ಹೋದರೆ ಕಣ್ಣು ಮುಚ್ಚಿ ತೆರೆದು ಮಾಡುವ ಮೂಲಕ ಕ್ಷಮೆಯಾಚಿಸುತ್ತವೆ. ಗುಡುಗು ಸಿಡಿಲು ಅಥವಾ ವಿಪರೀತ ಸದ್ದು ಬಂದಾಗ ಭಯದಿಂದ ತಾನು ಅಸುರಕ್ಷಿತ ಎನ್ನುವ ಭಾವನೆ ಎದುರಾಗಿ ಎಲ್ಲೋ ಹೋಗಿ ಮುದುಡಿಕೊಳ್ಳುತ್ತವೆ. ತಮ್ಮ ಆಹಾರದ ಬೇಡಿಕೆ ಪೂರೈಕೆ ಆದಾಗ ಬಾಲ ಅಲ್ಲಾಡಿಸಿ ಕೃತಜ್ಞತೆ ಹೇಳುತ್ತವೆ. ಇಡೀ ದಿನ ಮನೆ ಕಾದು ಸುಸ್ತಾದ ಸಂದರ್ಭದಲ್ಲಿ ಮನೆ ಮಂದಿ ಬಂದಾಗ ‘ ನನಗೆಷ್ಟು ಬೇಜಾರಾಗಿತ್ತು, ನೀವು ನನ್ನೊಬ್ಬನನ್ನು ಬಿಟ್ಟು ಹೋದಿರಿ ‘ ಎಂದು ತನ್ನದೇ ದನಿಯಲ್ಲಿ ನೋವನ್ನು ನಿವೇದಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನೆಯೊಳಗೆ ಇರುವ ಬೆಕ್ಕಿನ ಬಗೆಗಿನ ತನ್ನ ಅಸಹನೆಯನ್ನು ಕೂಡಾ ನಾಯಿ ಸ್ಪಷ್ಟಪಡಿಸುವುದುಂಟು. ಸುಮ್ಮನೆ ಕುಳಿತಿದ್ದರೆ ತನ್ನ ತುಂಟ ನೋಟದಿಂದ ಆಟಕ್ಕೆ ಕರೆಯುವ ನಾಯಿಗೆ ನಮ್ಮ ಹಾಗೆ ಸದಾ ಸಂತೋಷವಾಗಿ ಇರಬೇಕು ಎನ್ನುವ ಹಂಬಲ ಉಂಟು . ಇನ್ನು ಬೆಕ್ಕು…ಅದು ಕೂಡಾ ತನ್ನ ವರ್ತನೆಯಿಂದಲೇ ಮನದ ಇಂಗಿತವನ್ನು ವ್ಯಕ್ತಪಡಿಸಬಲ್ಲ ಮುದ್ದು ಪ್ರಾಣಿ.ತನ್ನನ್ನು ಮುಟ್ಟಿದ ತಕ್ಷಣ ಮೈ ತೊಳೆದುಕೊಳ್ಳುವ ಬೆಕ್ಕು ತಾನು ಬಹಳ ಸ್ವಚ್ಛತೆಯ ಪ್ರಾಣಿ ಎಂಬುದನ್ನು ತನ್ನ ಕ್ರಿಯೆಯ ಮೂಲಕವೇ ವ್ಯಕ್ತಪಡಿಸುತ್ತದೆ. ಆದರೆ ನಾಯಿಯಷ್ಟು ನಿಯತ್ತು ಇದಕ್ಕಿಲ್ಲ. ಎಲ್ಲೋ ಓದಿದ ನೆನಪು… ನಾಯಿ ನಾವು ಊಟ ಹಾಕುವ ಸಂದರ್ಭದಲ್ಲಿ ” ಇವನು ನನಗೆ ಅನ್ನ ನೀರು ಕೊಟ್ಟು ಸಾಕುತ್ತಿದ್ದಾನೆ, ಇವನೇ ನನ್ನ ಪಾಲಿನ ದೇವರು…” ಎಂದರೆ ಬೆಕ್ಕು ” ನಾನೇ ದೇವರು, ಅದಕ್ಕಾಗಿ ಇವ ನನಗೆ ಊಟ ಕೊಡುತ್ತಿದ್ದಾನೆ ” ಎಂದು ಭಾವಿಸುತ್ತದಂತೆ!!ಅದೇನೇ ಇರಲಿ, ಮಾತಿನ ಕಲೆಗಾರಿಕೆ ಇಲ್ಲದಿದ್ದರೆನಂತೆ.. ಮೂಕ ಪ್ರಾಣಿಗಳ ಭಾವಾಭಿನಯಕ್ಕೆ ಯಾವ ರಂಗ ಕಲಾವಿದನೂ ಸಾಟಿಯಾಗಲಾರ. ನಮ್ಮ ಧ್ವನಿಯ ಏರಿಳಿತವನ್ನು ನಮ್ಮ ವರ್ತನೆಯನ್ನು ಅರ್ಥಮಾಡಿಕೊಳ್ಳಬಲ್ಲ ನಾಯಿ ಬೆಕ್ಕುಗಳು ನಮ್ಮ ಸುಖ ದುಃಖಗಳಲ್ಲಿ ಅವುಗಳದೇ ಆದ ರೀತಿಯಲ್ಲಿ ಸ್ಪಂದಿಸಬಲ್ಲವು.ಮನೆಯ ಯಜಮಾನನ ಗೋರಿಯ ಮೇಲೆ ಬಿದ್ದು ಹೊರಳಾಡಿದ ನಾಯಿಯ ವೇದನೆಗೆ ನಾವು ಬೆರಗಾಗಿ ಮೂಕರಾಗಿ ನಿಂತುಬಿಟ್ಟಿಲ್ಲವೇ? ಮೂಕ ಪ್ರಾಣಿ ಆದರೇನಂತೆ, ಪುಟ್ಟ ಮಕ್ಕಳನ್ನು ತನ್ನ ಕಣ್ಣ ನೋಟದಿಂದಲೇ ಕಾಯುವ ನಾಯಿಗಳಿದ್ದಾವೆ. ಪಾಪ! ಕೆಲವೊಮ್ಮೆ ನಾವು ಕೊಟ್ಟ ಆಹಾರ ಅವುಗಳಿಗೆ ಇಷ್ಟವಿಲ್ಲದಿದ್ದರೂ ನಮ್ಮ ತೃಪ್ತಿಗಾಗಿ ಅದನ್ನು ತಿನ್ನುವ ಮೂಲಕ ಒಂದು ಬಗೆಯ ಸೌಜನ್ಯ ತೋರುವ ಗುಣ ಮೂಕ ಪ್ರಾಣಿಗಳಿಗುಂಟು!! ಒಮ್ಮೆ ನಮ್ಮ ಮನೆಯ ಬೆಕ್ಕಿಗೆ ಜಿಲೇಬಿ ಕೊಟ್ಟೆ. ಬೇಡ ಅನ್ನುವ ರೀತಿಯಲ್ಲಿ ತಿರುಗಿ ಕುಳಿತಿತು.ನಾನು ಸುಮ್ಮನಾಗದೆ ಪದೇ ಪದೇ ಅದರ ಎದುರು ಹಿಡಿದು ‘ತಿನ್ನು ಬಿಲ್ಲಿ’ ಎಂದು ಮುದ್ದಾಗಿ ಹೇಳಿದೆ. ಪಾಪ ಅದಕ್ಕೆ ಏನನಿಸಿತೋ ಏನೋ ದಾಕ್ಷಿಣ್ಯ ಕ್ಕೆ ಗಂಟು ಬಿದ್ದು ನನ್ನಿಂದ ಜಿಲೇಬಿ ಪಡಕೊಂಡು ಆಚೆ ಹೋಗಿ ಉಗಿದು ಬಂತದು!!ಬೇಸರ ಮಾಡಿಸಬಾರದು ಎನ್ನುವ ಕಾಳಜಿ ಅದಕ್ಕೂ ಇದೆ!!ಅಂದ ಮೇಲೆ ಅವುಗಳಿಗೆ ಮಾತೇಕೆ ಬೇಕು? ನಿಷ್ಠೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಇತ್ಯಾದಿಗಳಿಗೆ ಹೆಸರುವಾಸಿಯಾದ ನಾಯಿಗೆ ಮಾತನಾಡುವ ಕಲೆಗಾರಿಕೆ ದೇವರು ಕೊಟ್ಟಿದ್ದಿದ್ದರೆ… ಬಹುಶಃ ಕೆಲವು ಮನುಷ್ಯರಂತೆ ಅವುಗಳು ಕೂಡಾ ಸುಳ್ಳು, ಮೋಸ ವಂಚನೆಗಳ ಸುಳಿಗೆ ಸಿಲುಕುತ್ತಿದ್ದವು. ಅವುಗಳು ಮಾತಿಲ್ಲದೆಯೇ ಜೀವನ ಸಾಗಿಸಬಲ್ಲವು ಎಂದೇ ದೇವರು ಅವುಗಳನ್ನು ಮೂಕವಾಗಿಸಿರಬೇಕು. ದೇವರ ಸೃಷ್ಟಿ ನಿಯಮದ ಬಗ್ಗೆ ಅಥವಾ ಅದಕ್ಕೆ ವಿರುದ್ದವಾಗಿ ಆಲೋಚನೆ ಮಾಡುವುದಕ್ಕೂ ನಾವು ಅರ್ಹರಲ್ಲ. ಜಯಲಕ್ಷ್ಮಿ ಮಡಿಕೇರಿ
“ಹೀಗೊಂದು ಆಲೋಚನೆ…”ಕೆ.ಜಯಲಕ್ಷ್ಮಿ ಅವರ ಪ್ರಬಂಧ Read Post »
ಧಾರಾವಾಹಿ ಸಂಗಾತಿ-24 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಸುಧನ್ವ ಗೆದ್ದ…ಕೃಷ್ಹೃ ಹೃದಯವನು ಸುಧನ್ವ ಅಷ್ಟು ಬಲಯುತನಾದದ್ದು ಹೇಗೆ ಎನ್ನುವ ರಹಸ್ಯವನ್ನು ನನಗೆ ತಿಳಿಸಿದ ಶ್ರೀಕೃಷ್ಣ. ಸುಧನ್ವ ಏಕಪತ್ನೀವ್ರತಸ್ಥನಾಗಿದ್ದ. ತಂದೆಯ ಆಜ್ಞೆಯನ್ನು ಅವಗಣಿಸಿದವನಲ್ಲ. ಕೃಷ್ಣಪೂಜೆಗೆ ಉದಾಸೀನ ತೋರಿದವನಲ್ಲ. ಆತನ ಅಂತಃಸ್ಸತ್ವವೇ ಅವನಿಗೆ ಅಂತಹ ಶಕ್ತಿಯನ್ನು ಒದಗಿಸಿತ್ತು. ಇಂದ್ರ ಬ್ರಹ್ಮ ಶಿವಾದಿಗಳಿಗೂ ಯುದ್ಧದಲ್ಲಿ ಮಣಿವವನಲ್ಲ ಇವ ಎಂದ ಶ್ರೀಕೃಷ್ಣ. ಮೂರೂ ಲೋಕಗಳನ್ನು ಅಂಜಿಸುವ ಇವನ ಶೌರ್ಯವನ್ನು ಕಾಣುತ್ತಾ ಇರುವುದಷ್ಟೇ ಇನ್ನು ನಮ್ಮ ಕೆಲಸ ಎಂದ.ಆಗ ಸುಧನ್ವ ಕೃಷ್ಣನನ್ನು ದಿಟ್ಟತನದಿಂದ ಪ್ರಶ್ನಿಸಿದ. “ಅಂದು ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನು ಕಾಪಾಡಿದ ಹಾಗೆ ಇಂದು ಈ ಪಾರ್ಥನನ್ನು ರಕ್ಷಿಸುವ ತೆರದಲ್ಲಿ ಬಂದೆ. ನಾನೂ ನಿನ್ನ ಭಕ್ತನೇ. ನನ್ನ ಮೇಲೇಕೆ ನೀನು ಕೃಪೆದೋರದಿರುವೆ. ಇರಲಿ. ನಾನಂತೂ ಅನವರತ ನಿನ್ನ ಭಕ್ತನೇ. ಅದರಲ್ಲಿ ಸಂದೇಹವಿಲ್ಲ. ಈ ಯುದ್ಧದಲ್ಲಿ ನನ್ನ ಈ ದೇಹವನ್ನು ನಿನಗೊಪ್ಪಿಸದೆ ಬಿಡೆನು” ಅಂದ.ಸುಧನ್ವ ಎತ್ತಿದ ಆ ಪ್ರಶ್ನೆ ನನ್ನೊಳಗೆ ಯೋಚನೆಯನ್ನು ಮೂಡಿಸಿತು. ನಾನೂ ಕೃಷ್ಣನ ಭಕ್ತ. ಸುಧನ್ವನೂ ಹರಿಭಕ್ತ. ಹಾಗಿರುವಾಗ ಕೃಷ್ಣ ನನ್ನ ಪರವಾಗಿ ಮಾತ್ರವೇ ನಿಂತಿದ್ದಾನೇಕೆ?! ಸಂದರ್ಭಕ್ಕೆ ಹೊಂದುವ ರೀತಿಯಲ್ಲಿ ಕೃಷ್ಣವರ್ತನೆಯಿದೆ ಎನಿಸಿತು ನನಗೆ. ಈಗ ಕೃಷ್ಣ ನನ್ನ ಪರವಾಗಿರದೆ ಸುಧನ್ವನ ಪಕ್ಷ ವಹಿಸಿದರೆ ಯುದ್ಧದ ಗೆಲುವು ನನ್ನದಾಗುವುದಿಲ್ಲ. ಕುದುರೆ ಮುಂದಕ್ಕೆ ಚಲಿಸುವುದಿಲ್ಲ. ನಮ್ಮ ಅಶ್ವಮೇಧ ಯಾಗವದು ಸಂಪೂರ್ಣವಾಗುವುದಿಲ್ಲ. ಈ ಬಗೆಯ ದೂರಾಲೋಚನೆಯನ್ನು ಇರಿಸಿಕೊಂಡೇ ಆ ಕೃಷ್ಣದೇವ ನನಗೆ ನೆರವಾಗಿ ನಿಂತಿರಬೇಕು. ಔಚಿತ್ಯಪೂರ್ಣನಾಗಿದ್ದಾನೆ ಅಚ್ಯುತ ಎನಿಸಿತು ನನಗೆ ಆ ಕ್ಷಣದಲ್ಲಿ.ಆಗಲೇ ಸುಧನ್ವ ಬಿಟ್ಟ ಬಾಣ ನನ್ನ ರಥವನ್ನು ತಾಡಿಸಿತು. ಅದೆಂತಹ ಭೀಕರ ಹೊಡೆತ! ತಿರುಗಿ ತಿರುಗಿತು ರಥ. ಭಯದ ದನಿಯನ್ನೆಬ್ಬಿಸಿದವು ಕುದುರೆಗಳು. ನನಗೂ ಕೃಷ್ಣನಿಗೂ ಕಣ್ಣಿಗೆ ಕತ್ತಲೆ ಕವಿದಂತಾಯಿತು. ತಲೆ ತಿರುಗಿತು. ರಥದ ಚಕ್ರಗಳು ಕಳಚಿ ಬಿದ್ದ ಅನುಭವ. ಹಿಂದುಹಿಂದಕ್ಕೆ ಸರಿದುಹೋಯಿತು ನನ್ನ ರಥ.ನನ್ನ ಕೋಪವೀಗ ಮೇರೆಮೀರಿತು. ಇನ್ನಿವನ ಶೌರ್ಯವನ್ನು ಕೊನೆಗಾಣಿಸದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ತೋರಿತು. ಮೂರು ಬಾಣಗಳೊಳಗೆ ಅವನ ಪ್ರಾಣಹರಣ ಮಾಡುವ ಪ್ರತಿಜ್ಞೆಯನ್ನು ನೆನಪಿಸಿಕೊಂಡೆ. ಅತಿಶಕ್ತಿಯುತ ಬಾಣವನ್ನು ಬಿಲ್ಲಿಗೆ ಹೂಡಿದೆ. “ಸುಧನ್ವ ಮರಣವನು ನಿರ್ಣಯಿಸುವ ಬಾಣವಿದು” ಎಂದೆ ಅಸುರಾರಿಯಲ್ಲಿ. ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನು ಕಾಪಾಡಿ ಸಂಪಾದಿಸಿದ ಪುಣ್ಯವನ್ನು ಆ ಬಾಣಕ್ಕೆ ತುಂಬಿದ ಶ್ರೀಕೃಷ್ಣ. “ಈಗಲೇ ಅವನ ಶಿರವನ್ನು ಗುರಿಮಾಡಿ ಬಾಣ ಪ್ರಯೋಗಿಸು” ಎಂಬ ಸೂಚನೆ ಬಂತು ಕೃಷ್ಣನ ಕಡೆಯಿಂದ. ಬಾಣ ಬಿಟ್ಟೆ. ಅದೆಂತಹ ವೇಗದಲ್ಲಿ ಬಾಣ ಚಲಿಸುತ್ತಾ ಹೋಯಿತೋ ಅದೇ ವೇಗದಲ್ಲಿ ಅದು ತುಂಡಾಗಿ ಕೆಳಗೆ ಬಿತ್ತು. ಪ್ರತಿಬಾಣ ಪ್ರಯೋಗಿಸಿ ಗೆಲುವು ಪಡೆದಿದ್ದ ಸುಧನ್ವನ ಮುಖದಲ್ಲಿ ವೀರಭಾವದ ನಗುವಿತ್ತು.ಮೂರು ಬಾಣಗಳಲ್ಲಿ ಸುಧನ್ವನನ್ನು ಇನ್ನಿಲ್ಲವಾಗಿಸುತ್ತೇನೆ ಎಂದಿದ್ದವ ನಾನು. ಮೊದಲ ಬಾಣವದು ಇನ್ನಿಲ್ಲವಾಗಿತ್ತು. ಇನ್ನೆರಡು ಬಾಣಗಳಲ್ಲಿ ನಾನು ನನ್ನ ಪ್ರತಿಜ್ಞೆಯನ್ನು ಪೂರೈಸಬೇಕಿತ್ತು. ಅಮೋಘ ಶರವನ್ನು ತೆಗೆದೆ ಬತ್ತಳಿಕೆಯಿಂದ. ಹೆದೆಗೆ ಅದನ್ನು ಹೊಂದಿಸಿದೆ. ಆಗಲೇ ಶ್ರೀಕೃಷ್ಣ ಭೂಮಿಯನ್ನು ಕಾಯ್ದ ಪುಣ್ಯಫಲವನ್ನು ನನ್ನ ಆ ಶರದಲ್ಲಿ ತುಂಬಿದ. “ಕೃಷ್ಣ ಪರಮಾತ್ಮ, ನಿನ್ನ ಪುಣ್ಯವನ್ನು ಆ ಬಾಣದಲ್ಲಿ ತುಂಬಿರುವೆ. ಅದನ್ನು ಅರ್ಧಮಾರ್ಗದಲ್ಲಿಯೇ ಪತನಗೊಳಿಸದಿದ್ದರೆ ಪಾತಕಿಗೊದಗುವ ಹೀನಸ್ಥಿತಿ ನನಗೆ ಒದಗಲಿ” ಎಂದು ಪರಾಕ್ರಮದಿಂದ ಆರ್ಭಟಿಸಿದ ಸುಧನ್ವ. ಅವನ ಮಾತು ನಿಜವಾಯಿತು. ಅವನ ಸೇನೆಯಲ್ಲಿ ವಿಜಯದ ನಾದ ಮೊಳಗಿತು. ಗೆಲುವಿನ ಕೇಕೆ ಕೇಳಿಬಂತು.ನಿಷ್ಫಲಗೊಂಡ ಎರಡು ಬಾಣಗಳು ನನ್ನನ್ನು ಚುಚ್ಚತೊಡಗಿದವು. ಇನ್ನೊಂದೇ ಒಂದು ಬಾಣದಲ್ಲಿ ನಾನು ಸುಧನ್ವನ ಶಿರವನ್ನು ಕತ್ತರಿಸಬೇಕಿತ್ತು. ಕೃಷ್ಣ ಧೈರ್ಯ ತುಂಬಿದ. ‘ನನ್ನ ಶಕ್ತಿಯನ್ನೂ, ಯುದ್ಧ ಬದ್ಧತೆಯನ್ನೂ ನಿರ್ಧರಿಸುವ ಬಾಣವಿದು’ ಎಂದುಕೊಳ್ಳುತ್ತಲೇ ಬತ್ತಳಿಕೆಯಿಂದ ಶರವನ್ನು ತೆಗೆದೆ. ಈಗ ಶ್ರೀಕೃಷ್ಣ ಹಿಂದಿಗಿಂತಲೂ ಹೆಚ್ಚಿನ ಶಕ್ತಿಯನ್ನು ಆ ಬಾಣಕ್ಕೆ ತುಂಬುವ ಉಪಾಯ ಹೂಡಿದ. ಬ್ರಹ್ಮದೇವನನ್ನು ಆಹ್ವಾನಿಸಿ ಆ ಬಾಣದ ಒಂದು ತುದಿಯಲ್ಲಿ ಕೂರಿಸಿದ. ಇನ್ನೊಂದು ತುದಿಯಲ್ಲಿ ಶಿವ ಕುಳಿತುಕೊಳ್ಳುವಂತೆ ಮಾಡಿದ. ಬಾಣದ ಮಧ್ಯಭಾಗದಲ್ಲಿ ತಾನೇ ಕುಳಿತ ಶ್ರೀಕೃಷ್ಣ. ತ್ರಿಮೂರ್ತಿಗಳ ಅಸ್ತಿತ್ವದ ಸತ್ವವದು ದೊರಕಿತು ಆ ಬಾಣಕ್ಕೆ. ರಾಮಾವತಾರದಲ್ಲಿ ತಾನು ಸಂಪಾದಿಸಿದ ಪುಣ್ಯವನ್ನು ಆ ಬಾಣದಲ್ಲಿ ತುಂಬಿದ.ಕೃಷ್ಣನ ಪಾಂಚಜನ್ಯ ಮೊಳಗಿತು, ಕೋಟಿ ಕೋಟಿ ಸಿಡಿಲುಗಳು ಒಮ್ಮೆಯೇ ಸಿಡಿದಂತೆ. ಭೂಮಿಯೇ ಅಲ್ಲೋಲಕಲ್ಲೋಲವಾಯಿತು ಕೃಷ್ಣನೂದಿದ ರಣ ಶಂಖಧ್ವನಿಗೆ.ಆ ಕ್ಷಣವೇ ನನ್ನ ಕರ ಅರಳಿತು. ಶರ ಕೆರಳಿತು. ಶತ್ರುವಿನ ಶಿರವನ್ನು ಗುರಿಯಾಗಿರಿಸಿಕೊಂಡು ಉರಿಉರಿಯಿಂದ ಹೊರಟಿತದೋ ಘನಶರ!ಬಾಣದ ಭೀಕರತೆಯನ್ನು ಕಂಡು ಅಂಜಿದರು, ಅಳುಕಿದರು ಸುಧನ್ವನ ಸಕಲ ಸೈನಿಕರು. ಹಂಸಧ್ವಜಸುತನ ಮುಂಡವದು ರುಂಡದಿಂದ ಬೇರ್ಪಟ್ಟಿತು. ಕತ್ತರಿಸಲ್ಪಟ್ಟ ಶಿರ ಆಕಾಶಮಾರ್ಗದಲ್ಲಿ ಜಿಗಿದು, ಪರಪೀಡೆಯದು ತನ್ನದಲ್ಲ ಎಂಬ ಭಾವದಲ್ಲಿ ಬರುವ ಕಲೆಗಳಿಂದ ಕೂಡಿದ ಚಂದ್ರನಂತೆ ಬಂದುಬಿದ್ದಿತು ಕೃಷ್ಣನ ಪಾದಪದ್ಮಗಳಲ್ಲಿ. ಸಾವನ್ನಪ್ಪಿದ ಆ ಕ್ಷಣದಲ್ಲಿಯೂ ಸುಧನ್ವ ಶಿರವದು ಹರಿನಾಮಸ್ಮರಣೆಯನ್ನು ತೊರೆದಿರಲಿಲ್ಲ.ಸುಧನ್ವನ ತಲೆಯನ್ನು ಹಾಗೆಯೇ ಒಮ್ಮೆ ಎತ್ತಿಕೊಂಡ ಕೃಷ್ಣ ತನ್ನ ಮೂಗಿನ ಬಳಿಗೆ ಒಯ್ದು ಒಮ್ಮೆ ಆಘ್ರಾಣಿಸಿದ. “ನನ್ನ ಹೃದಯವನ್ನು ಗೆದ್ದ ಬಲ್ಮೆಗಾರ ನೀನು” ಎಂಬ ಗುಟ್ಟನ್ನು ಸುಧನ್ವನ ಕಿವಿಯಲ್ಲಿ ಕೃಷ್ಣ ಹೇಳಿದಂತೆ ತೋರಿತೆನಗೆ ಆ ದೃಶ್ಯ. ‘ಈ ವೀರ ಶಿರವದು ಸಂದಿತೆನಗೆ ಇಂದು’ ಎಂಬ ಕೃಷ್ಣಭಾವವೂ ಆ ನಡೆಯಲ್ಲಿ ಇದ್ದಂತೆ ತೋರಿತು.ಮಗನ ಸಾವನ್ನು ಸಹಿಸದಾದ ಹಂಸಧ್ವಜ ಬಗೆಬಗೆಯಲ್ಲಿ ಪ್ರಲಾಪಿಸಿದ. ಹೀಗಿದ್ದಾಗಲೇ ಸುಧನ್ವ ಸಹೋದರ ಎನಿಸಿಕೊಂಡ ಸುರಥ ತಮ್ಮವನ ಸಾವಿಗೆ ಸೇಡನ್ನು ತೀರಿಸಿಕೊಳ್ಳದಿರಲಾರೆ ಎಂಬ ಛಲವನ್ನು ಹೊತ್ತುನಿಂತಿದ್ದ. ಅವನೊಡನೆ ಹೋರಾಡದೆ ನಮ್ಮ ಗೆಲುವು ಪೂರ್ಣಗೊಳ್ಳದು ಎಂಬ ವಿಷಯ ನನಗೆ ಸ್ಪಷ್ಟವಾಯಿತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ-117 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ಪರಿಸ್ಥಿತಿಯನ್ನು ಮಗಳಿಗೆ ಹೇಳಿದ ವೈದ್ಯರು ಫಿಸೀಷಿಯನ್ ಹಾಗೆ ಹೇಳಿದಾಗ ಬಹಳ ಮುಖ್ಯವಾದ ವಿಷಯವಿರಬೇಕೆಂದು ಮಗಳಿಗೆ ತಿಳಿಯಿತು… ಅದೇನೇ ಇದ್ದರೂ ನನಗೆ ಹೇಳಿ ಸರ್…. ನನ್ನ ಅಮ್ಮನಿಗೆ ಏನಾಗಿದೆ? ಎಂದು ಕೇಳಿದಾಗ, ವೈದ್ಯರು ಆ ಹುಡುಗಿಯ ಮುಖವನ್ನೇ ತದೇಕಚಿತ್ತವಾಗಿ ನೋಡುತ್ತಾ… ನಿನ್ನ ವಯಸ್ಸೆಷ್ಟು ಮಗು?… ನೀನು ಏನು ಓದುತ್ತಿರುವೆ? ಎಂದು ಕೇಳಿದರು.ವೈದ್ಯರ ಪ್ರಶ್ನೆಗೆ… ನನಗೀಗ ಹದಿನೆಂಟು ವರ್ಷ ವಯಸ್ಸು…. ನಾನು ಬಿ.ಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವೆ…. ಎಂದು ಹೇಳಿದಳು. ಆ ಹುಡುಗಿಯ ಮಾತನ್ನು ಆಲಿಸಿದ ವೈದ್ಯರು…. “ಮಗೂ ನಿನ್ನನ್ನು ನೋಡಿದರೆ ತಿಳುವಳಿಕೆ ಇರುವ ಹಾಗೂ ವಯಸ್ಸಿಗಿಂತ ಹೆಚ್ಚು ಪ್ರಬುದ್ಧತೆ ಹೊಂದಿರುವ ಹುಡುಗಿಯ ಹಾಗೆ ತೋರುತ್ತೀಯ… ನಾನು ಹೇಳುವ ವಿಷಯವು ಬಹಳ ಗಂಭೀರವಾದದ್ದು…. ಅದನ್ನು ನೀನು ಹೇಗೆ ತೆಗೆದುಕೊಳ್ಳುತ್ತೀಯ ಎನ್ನುವುದು ನನಗೆ ತಿಳಿಯದು…. ಆದರೂ ಹೇಳಲೇಬೇಕಾದ ಅನಿವಾರ್ಯತೆ ಇದೆ…. ನೀನು ಹೇಳಿದೆ ಮನೆಯಲ್ಲಿ ದೊಡ್ಡವರು ಯಾರು ಇಲ್ಲ ಎಂದು…. ಸುಮತಿಯ ಯೋಗ ಕ್ಷೇಮವನ್ನು ನೀನು ಮತ್ತು ನಿನ್ನ ತಂಗಿ ಈಗ ನೋಡಿಕೊಳ್ಳುತ್ತಿರುವಿರಿ ಎನ್ನುವುದು ನನಗೆ ಅರ್ಥವಾಯಿತು…. ನೋಡು ಮಗು… ನಿನ್ನ ತಾಯಿಯ ಸ್ಥಿತಿ ಸ್ವಲ್ಪ ಹೆಚ್ಚೇ ಗಂಭೀರವಾಗಿದೆ….. ಆಕೆಯ ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಕೋಶ, ಹೇಳಬೇಕೆಂದರೆ ನಿನ್ನ ತಾಯಿಯ ಶರೀರದ ಅಂತರಿಕ ಅಂಗಗಳಲ್ಲಿ ಊತ ಕಾಣಿಸಿಕೊಂಡಿದೆ…. ಬಹುತೇಕ ಎಲ್ಲಾ ಆಂತರಿಕ ಅಂಗಗಳು ವೈಫಲ್ಯವಾಗಿವೆ…. ತೀವ್ರವಾದ ಸಕ್ಕರೆ ಕಾಯಿಲೆಯ ಪರಿಣಾಮ ಹಾಗೂ ರಕ್ತದ ಒತ್ತಡಕ್ಕೆ ಚಿಕಿತ್ಸೆ ಪಡೆಯದೆ ಇರುವ ಕಾರಣದಿಂದ ನಿನ್ನ ತಾಯಿಯು ಈ ಸ್ಥಿತಿಗೆ ತಲುಪಿದ್ದಾರೆ…. ಇನ್ನು ನಾವು ಯಾವುದೇ ಚಿಕಿತ್ಸೆ ಕೊಟ್ಟರೂ ಅದು ಫಲಕಾರಿಯಾಗದು…. ಇಲ್ಲಿ ಈ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಚಿಕಿತ್ಸೆ ದೊರಕಲಾರದು…. ಸ್ವಲ್ಪ ದಿನ ನಾವು ನಿನ್ನ ತಾಯಿಯ ಆರೈಕೆಯನ್ನು ಈ ಆಸ್ಪತ್ರೆಯಲ್ಲಿ ಮಾಡಬಹುದು…. ಹೆಚ್ಚಿನ ಚಿಕಿತ್ಸೆ ಬೇಕೆಂದರೆ ನೀನು ನಿನ್ನ ತಾಯಿಯನ್ನು ಬೆಂಗಳೂರಿನಲ್ಲಿರುವ ಕಿಡ್ನಿ ಫೌಂಡೇಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿದರೆ ಇನ್ನೂ ಸ್ವಲ್ಪ ಕಾಲ ನಿನ್ನ ತಾಯಿ ಬದುಕುಳಿಯಬಹುದು…. ಈಕೆ ಇದೇ ಸ್ಥಿತಿಯಲ್ಲಿದ್ದರೆ ಇನ್ನಾರು ತಿಂಗಳಷ್ಟೇ ಜೀವಂತವಾಗಿ ಬದುಕಿರಲು ಸಾಧ್ಯ…. ಆದರೆ ಮೊದಲಿನಂತೆ ಲವಲವಿಕೆಯಿಂದ ಎದ್ದು ಓಡಾಡಲು ಅವರಿಂದ ಸಾಧ್ಯವಿಲ್ಲ…. ಹಾಸಿಗೆಯಲ್ಲಿಯೇ ದಿನ ಕಳೆಯಬೇಕಾದ ಪರಿಸ್ಥಿತಿ…. ಅವರಿಂದ ಶಿಕ್ಷಕ ವೃತ್ತಿಯನ್ನು ಮುಂದುವರಿಸಲು ಸಾಧ್ಯವಿಲ್ಲ…. ನೀನು ಮತ್ತು ನಿನ್ನ ತಂಗಿ ಸುಮತಿಯ ಆರೈಕೆಯನ್ನು ಮಾಡಬೇಕಾಗುತ್ತದೆ…. ದಿನೇ ದಿನೇ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗುತ್ತಲೇ ಹೋಗುತ್ತದೆ…. ಯಾವುದೇ ಆಹಾರ ಪಥ್ಯದಿಂದಲೂ ಸುಮತಿಯ ಆರೋಗ್ಯ ಸುಧಾರಿಸುವುದಿಲ್ಲ…. ಆದರೂ ಅವರ ಆರೋಗ್ಯ ಸ್ಥಿತಿ ಇನ್ನೂ ಹದಗೆಡದಂತೆ ನೋಡಿಕೊಳ್ಳಲು ಪಥ್ಯದ ಆಹಾರವನ್ನು ಕೊಡುವುದು ಕೂಡ ಅನಿವಾರ್ಯ…. ನಾನು ಕೊಡುವ ವೈದ್ಯಕೀಯ ಚಿಕಿತ್ಸೆಯಿಂದ ಅವರ ಆರೋಗ್ಯ ಮೊದಲಿನಂತಾಗಲು ಸಾಧ್ಯವಿಲ್ಲ…. ಆದರೆ ತಾತ್ಕಾಲಿಕವಾಗಿ ಉಪಶಮನದ ಚಿಕಿತ್ಸೆಯನ್ನಷ್ಟೇ ನಾವು ಕೊಡಬಹುದು…. ನಿನ್ನ ತಾಯಿಯ ವಯಸ್ಸು ಕೂಡ ಬಹಳ ಚಿಕ್ಕದು…. ಕೇವಲ 54 ವರ್ಷವಷ್ಟೇ! …. ಜೀವನದಲ್ಲಿ ಬಹಳಷ್ಟು ನೋವುಗಳನ್ನು ಉಂಡವಳು, ಏಳುಬೀಳುಗಳನ್ನು ಕಂಡವಳು ನಿನ್ನ ಅಮ್ಮ…. ಬಹಳ ಮಾನಸಿಕ ಸ್ಥೈರ್ಯ ಉಳ್ಳವಳು ಕೂಡಾ…. ಆದರೆ ಈ ಸಕ್ಕರೆ ಕಾಯಿಲೆ ಅವಳನ್ನು ಬಹಳಷ್ಟು ಹೈರಾಣಾಗಿ ಮಾಡಿದ್ದು ಸುಳ್ಳಲ್ಲ…. ಇನ್ನೊಂದು ಮುಖ್ಯವಾದ ವಿಷಯವನ್ನು ನಿನಗೆ ಹೇಳಬೇಕಿದೆ ಮಗು…. ವಯಸ್ಸಿನಲ್ಲಿ ಬಹಳ ಚಿಕ್ಕವಳಾದ ನಿನಗೆ ಈ ವಿಷಯವನ್ನು ಹೇಗೆ ಹೇಳಬೇಕೆಂಬುದು ನನಗೆ ತಿಳಿಯುತ್ತಿಲ್ಲ…. ಆದರೆ ನಾನು ಹೇಳಲೇಬೇಕಾಗಿದೆ”…. ಎಂದು ಅವಳ ಮುಖವನ್ನೇ ಸೂಕ್ಷ್ಮವಾಗಿ ಗಮನಿಸುತ್ತಾ ವೈದ್ಯರು ನುಡಿದರು. ವೈದ್ಯರು ಹೇಳಿದ ಎಲ್ಲಾ ಸಂಗತಿಗಳನ್ನು ಕೇಳಿ ಈಗಾಗಲೇ ಆಘಾತಕ್ಕೆ ಒಳಗಾಗಿದ್ದ ಹುಡುಗಿ ಇನ್ನೂ ಏನು ಹೇಳುವರೋ ಎನ್ನುವ ಭಯ ಹಾಗೂ ಆತಂಕದಿಂದ ವೈದ್ಯರಡೆಗೆ ನೋಡಿದಳು. ಅವಳ ಆ ನೋಟವನ್ನು ಕಂಡು ವೈದ್ಯರ ಮನಸ್ಸು ಮರುಗಿತು. ಆದರೆ ಹೇಳದೆ ಬೇರೆ ಮಾರ್ಗವಿರಲಿಲ್ಲ….. “ಮಗೂ ನಿನ್ನ ಅಮ್ಮ ಮರಣ ಹೊಂದಿದ ಬಳಿಕ ಆಕೆಯ ಶವ ಶರೀರವನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳುವಂತೆ ಇಲ್ಲ…. ಆಂತರಿಕ ಅಂಗಗಳ ವೈಫಲ್ಯದಿಂದಾಗಿ ಸುಮತಿಯ ಶರೀರದಲ್ಲಿ ದಿನೇ ದಿನೇ ನೀರು ತುಂಬಿಕೊಂಡು ಊತಕ್ಕೆ ಒಳಗಾಗುತ್ತದೆ…. ಕೆಲವೊಮ್ಮೆ ಆಕೆ ಬದುಕಿರುವಾಗಲೇ ಶರೀರದ ಕೆಲವು ಭಾಗಗಳು ಒಡೆದು ನೀರು ಜಿನುಗುವ ಸಾಧ್ಯತೆ ಇರುತ್ತದೆ…. ಅದನ್ನು ತಡೆಯಲು ಕೆಲವು ಮಾತ್ರೆಗಳನ್ನು ನಾನು ಬರೆದುಕೊಡುತ್ತೇನೆ…. ಆದರೆ ಮರಣ ಹೊಂದಿದ ಕೆಲವು ಗಂಟೆಗಳ ಬಳಿಕ ಶರೀರವು ಪೂರ್ತಿ ಊದಿಕೊಂಡು ಅಲ್ಲಲ್ಲಿ ಒಡೆಯುವ ಸಾಧ್ಯತೆಗಳು ಇರುತ್ತದೆ…. ಸೂಕ್ಷ್ಮಾಣುಗಳು ದೇಹದ ಒಳಗೆ ಸೇರಿಕೊಂಡು ದೇಹವು ಬೇಗ ಕೊಳೆಯಲು ಶುರುವಾಗುತ್ತದೆ…. ದುರ್ವಾಸನೆ ಬರುತ್ತದೆ… ಹಾಗಾಗಿ ಸಾಧ್ಯವಾದಷ್ಟು ಬೇಗ ಶವಸಂಸ್ಕಾರ ಮಾಡಬೇಕಾಗುತ್ತದೆ…. ಎಂದರು. ವೈದ್ಯರ ಮಾತನ್ನು ಕೇಳುತ್ತಾ ಕುಳಿತ ಹುಡುಗಿಯು ಕಣ್ಣಾಲಿಗಳು ತುಂಬಿ ಕೊಳಗಳಾದವು. ಗಂಟಲು ಬಿಗಿಯಿತು. ಕೇವಲ ಬಿಕ್ಕುಗಳಲ್ಲದೆ ಅವಳ ಬಾಯಿಂದ ಒಂದು ಪದವೂ ಆಚೆ ಬರಲಿಲ್ಲ. ಅಳುವನ್ನು ತಡೆದುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಳು. ಅವಳನ್ನು ಕಂಡ ವೈದ್ಯರ ಮನಸ್ಸು ಕರಗಿತು. ಕುಳಿತಲ್ಲಿಂದ ಎದ್ದು ಬಂದು ಅವಳ ತಲೆ ನೇವರಿಸುತ್ತಾ…. ನಿನಗೆ ಯಾವ ರೀತಿಯಲ್ಲಿ ಹೇಗೆ ಸಮಾಧಾನ ಮಾಡಬೇಕು ಎಂದು ನನಗೆ ತಿಳಿಯುತ್ತಿಲ್ಲ ಮಗುವೇ…. ವಿಧಿ ಎನ್ನುವುದು ಬಹಳ ಕ್ರೂರ…. ಇಂತಹಾ ಚಿಕ್ಕ ವಯಸ್ಸಿಗೇ ಅದೆಷ್ಟು ಘೋರವಾದ ಸಂಗತಿಗಳನ್ನು ನೀನು ಕೇಳಬೇಕಾಗಿ ಬಂತು…. ಸಮಾಧಾನ ಮಾಡಿಕೋ…. ನೀನು ಈ ಸ್ಥಿತಿಯಲ್ಲಿ ಸುಮತಿಯ ಬಳಿಗೆ ಹೋದರೆ ಅವಳು ಅಧೀರಳಾಗುವಳು…. ಧೈರ್ಯ ತಂದುಕೋ…. ಈ ಜಟಿಲ ಪರಿಸ್ಥಿತಿಯನ್ನು ಹೇಗಿದ್ದರೂ ನೀನು ಎದುರಿಸಲೇ ಬೇಕಾಗಿದೆ…. ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ ಮಗುವೇ”…. ಎಂದು ಆ ಹುಡುಗಿಯ ತಲೆ ಸವರುತ್ತಾ ಸಮಾಧಾನ ಮಾಡಿ…. “ಆದಷ್ಟು ಬೇಗ ನಿನ್ನ ತಾಯಿಯ ಸಂಬಂಧಿಕರಿಗೆ ವಿಷಯ ತಿಳಿಸು….. ಬರುವವರು ಯಾರಾದರೂ ಇದ್ದರೆ ಬಂದು ನೋಡಿಕೊಂಡು ಹೋಗಲಿ…. ಈಗ ಕೆಲವು ಔಷಧಿಗಳನ್ನು ಬರೆದುಕೊಡುತ್ತೇನೆ ಅದನ್ನು ಆದಷ್ಟು ಬೇಗ ತಂದು ವಾರ್ಡಿನ ನರ್ಸಿಗೆ ಕೊಡು”…ಎಂದು ಹೇಳಿ, ಸುಮತಿಗೆ ಕೊಡಬೇಕಾದ ಒಂದಿಷ್ಟು ಔಷಧಿಗಳ ಹೆಸರುಗಳನ್ನು ಚೀಟಿಯಲ್ಲಿ ಬರೆದು ಅವಳ ಕೈಗಿತ್ತರು. ಆ ಹುಡುಗಿ ಯಾಂತ್ರಿಕವಾಗಿ ಕುಳಿತಲ್ಲಿಂದ ಎದ್ದು ವೈದ್ಯರು ಕೊಟ್ಟ ಚೀಟಿಯನ್ನು ಪಡೆದುಕೊಂಡು ಅವರಿಗೆ ನಮಸ್ಕರಿಸಿ, ಕೊಠಡಿಯಿಂದ ಆಚೆ ಬಂದಳು. ತನ್ನ ಸುತ್ತಲಿರುವ ಪ್ರತಿಯೊಂದು ವಸ್ತುಗಳು ಅಪರಿಚಿತವಾಗಿ ಅವಳಿಗೆ ಕಂಡಿತು. ಸ್ವಲ್ಪ ಹೊತ್ತು ಅಲ್ಲಿಯೇ ಇದ್ದ ಬೆಂಚಿನ ಮೇಲೆ ಕುಳಿತುಕೊಂಡು ತನ್ನನ್ನು ತಾನು ಸಮಾಧಾನ ಪಡಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದಳು.
ಎಮ್ಮಾರ್ಕೆ ಗಜಲ್
ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ನಾ ನಿನ್ನ ಹಿಂಬಾಲಿಸುತಿರಲು ಹಿಂತಿರುಗಿ ನೋಡಬಾರದೇನೀ ನನ್ನನೇ ಆವರಿಸುತಿರಲು ಒಂಟಿತನವ ದೂಡಬಾರದೇ ಮನೆಯ ದೀಪ ಬೆಳಗುವವಳೇ ಮನದ ತಾಪ ಕಳೆವವಳೇಮನಸೊಳು ಮನೆಯ ಮಾಡಿ ಕನಸಿನಲ್ಲೂ ಕಾಡಬಾರದೇ ಬಾರೆಂದು ಕೂಗುವವಳೇ ಬಾಳ ಜೋಕಾಲಿ ತೂಗುವವಳೇರಾಗ ದ್ವೇಷಗಳ ಮರೆಸುವ ಹಾಡೊಂದನು ಹಾಡಬಾರದೇ ಕಷ್ಟಸುಖದಲಿ ಕೈ ಹಿಡಿವವಳೇ ಜೊತೆಯಾಗಿ ದುಡಿವವಳೇನದಿ ಸಾಗರ ಸೇರುವಂತೆಯೇ ಬಂದೆನ್ನನು ಕೂಡಬಾರದೇ ಐರಾಣಿಯ ಹೊರುವವಳೇ ರಾಣಿಯಾಗಿ ಮೆರೆಯುವಳೇಕಡಿತನ ಕುಂಬಾರನ ಜತೆಗಿರುವ ಆಣೆಯ ಮಾಡಬಾರದೇ ಎಮ್ಮಾರ್ಕೆ









