ಧಾರಾವಾಹಿ ಸಂಗಾತಿ -28 ಅರ್ಜುನ ಉವಾಚ ಡಾ.ವಿಶ್ವನಾಥ್ ಎನ್ ನೇರಳಕಟ್ಟೆ ಶಾಪದ ಕಥೆಗಳನ್ನು ತಿಳಿದು ಮುನ್ಡೆನದದ್ದು ಸ್ತ್ರೀ ರಾಜ್ಯದೆಡೆಗೆ ಗುರುಗಳನ್ನು ಹಿರಿಯರನ್ನು ದೇವತೆಯರನ್ನು ಕಂಡಾಗ ಪ್ರಣಾಮ ಮಾಡುವುದು ರೂಢಿ. ಪಾರ್ವತಿಯೆದುರಿಗೆ ಬಂದ, ದುಷ್ಟದೃಷ್ಟಿ ಬೀರುತ ನಿಂದ ಆ ದೈತ್ಯ ಶಿವಸತಿಗೆ ನಮಿಸಲಿಲ್ಲ. ಅವಳನ್ನು ಬಯಸಿದ. ಮನ್ಮಥನ ಹೂಬಾಣ ಅವನನ್ನು ಬಾಧಿಸಿತು. ಕಾಮಾತುರಕ್ಕೆ ಒಳಗಾದ ದಾನವ. ಜಗದ ಮಾತೆಯೊಡನೆ ಮದನಕೇಳಿಯಾಡುವ ಕೆಡುಬಯಕೆ ಅವನಲ್ಲಿ ಮೂಡಿತು. ಪಾರ್ವತಿಯನ್ನು ಮಾತನಾಡಿಸಲು ಮುಂದಾದ. ಮಹಾದೈತ್ಯನ ಮನದಿಂಗಿತ ಅರ್ಥವಾಯಿತು ಅವಳಿಗೆ. ಕಡುಕೋಪದಿಂದ ಕೆಡುಕಿನ ಕಾಯವನ್ನು ದಿಟ್ಟಿಸಿದಳು. ಉರಿಉರಿದು ಬೂದಿಯಾಗಿ ಹೋದ ಆ ರಾಕ್ಷಸ. ಬಳಿಕ ಪಾರ್ವತಿದೇವಿ ಶಾಪರೂಪದ ಮಾತೊಂದನ್ನು ಆಡಿದಳು. “ಇಂದಿನಿಂದ ಈ ವನಕ್ಕೆ ಕಾಲಿಡುವ ಪುರುಷ ರೂಪದ ಪ್ರಾಣಿಗಳೆಲ್ಲವೂ ಹೆಣ್ಣಾಗಿ ಹೋಗಲಿ” ಎಂಬ ನುಡಿಯದು ಅವಳಿಂದ ಹೊರಬಂತು. ತನ್ನನ್ನೇ ಬಯಸಿದ ಅಸುರನ ಹೀನ ಗಂಡಸ್ತನದ ಬಗೆಗೆ ಆಕ್ರೋಶ ಹುಟ್ಟಿದ್ದು ಖಚಿತ ಅವಳಲ್ಲಿ. ಗಂಡಸ್ತನದ ಬಗೆಗಿನ ತಿರಸ್ಕಾರ ತುರೀಯಾವಸ್ಥೆಯನ್ನು ತಲುಪಿದಾಗ ಹೆಂಗಳೆಯರೇ ತುಂಬಿಹೋದರೆ ಒಳಿತು ಈ ಲೋಕದಲ್ಲಿ ಎಂಬ ಭಾವವೇ ಮೂಡುತ್ತದೋ ಏನೋ! ಆ ಕಾರಣಕ್ಕೇ ಇಂಥದ್ದೊಂದು ಘನಶಾಪ ಇತ್ತಳು ಎನಿಸುತ್ತದೆ, ಮುಂದಣ ಕಾಲಕ್ಕೂ ಸಲ್ಲುವಂತೆ. ಆ ಬಳಿಕವೂ ಅವಳ ತಪಸ್ಸು ಮುಂದುವರಿಯಿತು. ಯಾವ ತಾಪತ್ರಯವೂ ಎದುರಾಗಲಿಲ್ಲ ಅವಳಿಗೆ ಪುರುಷವರ್ಗದವರಿಂದ. ಶಂಕರವಲ್ಲಭೆಯ ಶಾಪದ ಬಲದಿಂದಲೇ ನಮ್ಮ ಯಾಗದ ಕುದುರೆ ಹೆಣ್ಣಾಗಿ ಬದಲಾದದ್ದು. ಹುಲಿಯ ರೂಪವನ್ನು ಪಡೆದದ್ದರ ಹಿಂದೆಯೂ ಒಂದು ಕಥಾನಕವಿತ್ತು. ಬಹಳ ಹಿಂದೆ ಅಕೃತವ್ರಣಾಖ್ಯ ಎಂಬ ಬ್ರಾಹ್ಮಣ ದಿವ್ಯಸ್ನಾನವನ್ನು ಮಾಡುವುದಕ್ಕಾಗಿ ಇಲ್ಲಿನ ಸರೋವರಕ್ಕೆ ಬಂದ. ಸಮಸ್ತ ಭೂಮಿಯ ಬಹುಕಡೆಗಳಲ್ಲಿ ತೀರ್ಥಸ್ನಾನವನ್ನು ಪೂರೈಸಿಯೇ ಬಂದಿದ್ದ ಆತ. ಸರೋವರದ ನೀರಿಗಿಳಿದಿದ್ದ ಆತ ವರುಣದೇವರ ಮಂತ್ರವನ್ನು ಜಪಿಸುತ್ತಿದ್ದ. ಅದೇ ಸಮಯದಲ್ಲಿ ಮೊಸಳೆಯೊಂದು ಬಂದು ಅವನ ಪಾದವನ್ನು ಬಲವಾಗಿ ಕಚ್ಚಿತು. ಕಾಲನ್ನು ಹಿಡಿದು ರಭಸದಿಂದ ಎಳೆಯುತ್ತಿರುವ ಜೀವಿ ಯಾವುದದು ಎನ್ನುವುದು ಆತನ ಅರಿವಿಗೆ ಬರಲಿಲ್ಲ. ಜಲದ ಒಳಗಿದ್ದುದು ಅವನ ಹೊರನೋಟಕ್ಕೆ ದಕ್ಕಲಿಲ್ಲ. ಯಾವುದೋ ರಾಕ್ಷಸರ ಮಾಯೆಯೋ ಏನೋ! ಎಂಬ ಅಳುಕು ಮೂಡಿತು. ಹಾವು ಇರಬಹುದೇ! ಎಂಬ ಸಂಶಯ ಕಾಡಿತು. ದೈತ್ಯ ಗಾತ್ರದ ಮತ್ಸ್ಯವಿರಬೇಕಿದು ಎಂದುಕೊಂಡ. ಮಹಾಸುಳಿಯೆಂದು ಭಾವಿಸಿ ನೊಂದುಕೊಂಡ. ಮೊಸಳೆಯೇ ತನ್ನ ಕಾಲನ್ನು ಹಿಡಿದಿದೆ ಎಂಬ ಯೋಚನೆಯೇ ಬರಲಿಲ್ಲ ಅವನಲ್ಲಿ. ಹಿಡಿತದಿಂದ ತಪ್ಪಿಸಿಕೊಂಡರೆ ಸಾಕು ಎಂದುಕೊAಡವನು ಬಲವಾಗಿ ಕಾಲನ್ನೊಮ್ಮೆ ಕೊಡವಿದ. ಅವನ ಆ ಬಿರುಸಿಗೆ ಮೊಸಳೆಯ ಬಲಿಷ್ಠ ದಂತಗಳು ಮುರಿದುಹೋದವು. ಹಿಡಿತವದು ಸಡಿಲವಾಯಿತು. ತಕ್ಷಣವೇ ಸರೋವರದ ದಡವನ್ನು ಸೇರಿಕೊಂಡ ಆ ಬ್ರಾಹ್ಮಣ. ಅವನಿಗೆ ಕೋಪ ಬಂದಿತ್ತು. ನೀರಿನಲ್ಲಿರುವ ದೇವತೆಗಳು ಕೇಳಿಸಿಕೊಳ್ಳಲಿ ಎಂಬAತೆ ನುಡಿದ. “ಈ ಸರೋವರ ದುಷ್ಟಭಾವವನ್ನು ಹೊತ್ತುನಿಂತಿದೆ. ಅತಿಯಾದ ಭಯವನ್ನು ನನ್ನಲ್ಲಿ ಹುಟ್ಟುಹಾಕಿದೆ. ಆ ಕಾರಣಕ್ಕೆ ಇನ್ನುಮುಂದೆ ಈ ಸರೋವರದ ನೀರನ್ನು ಕುಡಿದ ಜೀವಿಗಳು ಭೂಮಿಗೆ ಅತೀ ಭೀತಿಯನ್ನು ಉಂಟುಮಾಡುವAತೆ ಹುಲಿಯಾಗಿ ಹೋಗಲಿ” ಎಂದು ಶಾಪವಿತ್ತ. ಬೇರೆಲ್ಲಾ ಪ್ರದೇಶಗಳ ನದಿನೀರಿನಲ್ಲಿ ಮಿಂದೆದ್ದಿದ ಅವನಿಗೆ ಇಲ್ಲಿ ಮಾತ್ರ ಈ ಬಗೆಯ ಭಯಾನಕ ಅನುಭವ ಆದದ್ದು. ಆದ್ದರಿಂದಲೇ ಆ ಬಗೆಯ ಶಾಪವೊಂದನ್ನು ಕೊಟ್ಟ ಸರೋವರದ ನೀರಿಗೆ. ಹುಲಿಯಾಗಲು ಇಚ್ಛಿಸದೆ ಸರೋವರದ ಜಲವನ್ನು ಸರ್ವ ಜೀವಿಗಳೂ ತಿರಸ್ಕರಿಸುವಂತಾಗಲಿ ಎಂಬ ಉದ್ದೇಶ ಇದ್ದಿರಬಹುದು ಅವನಲ್ಲಿ. ಈ ಕಾರಣಕ್ಕೆ ನಮ್ಮ ಯಜ್ಞಾಶ್ವ ವ್ಯಾಘ್ರವಾಗಿ ಪರಿವರ್ತನೆಯಾದದ್ದು. ಕುದುರೆಯ ಈ ಬಗೆಯ ರೂಪಾಂತರವನ್ನು ಆ ಕೃಷ್ಣನ ಸ್ಮರಣೆಯ ಬಲದಿಂದ ಸರಿಮಾಡಿದೆ. ನನ್ನ ಜೊತೆಗೆ ಇದ್ದ ಸೈನಿಕರು ನನ್ನ ಪ್ರಾರ್ಥನೆಗೆ ಶ್ರೀಕೃಷ್ಣ ಪ್ರತಿಸ್ಪಂದಿಸಿದ ಬಗೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. “ಆಪತ್ತಿನ ಭೀತಿ ಈ ಪಾಂಡವರನ್ನು ಯಾವತ್ತಿಗೂ ಬಾಧಿಸಲಾರದು. ಇವರಿಗೆ ನೋವಾಗುವುದನ್ನು, ಭಯ ಎದುರಾಗುವುದನ್ನು ಆ ಕೃಷ್ಣ ಸಹಿಸಲಾರನು. ಅವನ ನೆರವು ಇವರಿಗೆ ಯಾವಾಗಲೂ ಇದೆ” ಎಂದು ಸೈನಿಕರು ಮಾತನಾಡುತ್ತಿದ್ದುದನ್ನು ಕೇಳಿ ಹೆಮ್ಮೆಯ ಭಾವ ಮೂಡಿತು. “ಶ್ರೀಕೃಷ್ಣ ತನ್ನ ಭಕ್ತರನ್ನು ಯಾವತ್ತೂ ಕಾಪಾಡುತ್ತಾನೆ ಎನ್ನುವುದು ಈ ಕ್ಷಣಕ್ಕೆ ಮತ್ತೊಮ್ಮೆ ಸಾಬೀತಾಯಿತು. ನಂಬಿದವರ ರಕ್ಷಣೆ ಮಾಡುವುದೇ ಮಹಾಸಂತೋಷ ಆ ಅಸುರಾರಿಗೆ. ಅಶ್ವಮೇಧ ಯಾಗಕ್ಕೆ ಅಡಿಗಡಿಗೆ ಎದುರಾದ ಅಡೆತಡೆಗಳನ್ನು ಮೀರಿ ಪಾಂಡುರಾಜನ ಸುತರನ್ನು ಅಪಾಯದಿಂದ ಪಾರುಮಾಡುವುದನ್ನೇ ಮಹಾಕಾರ್ಯವಾಗಿಸಿಕೊಂಡಿದ್ದಾನೆ ಆ ಮೋಹಕ ಮಾಧವ” ಎಂಬ ಮಾತೂ ಕೇಳಿಬಂತು. ಹೆಣ್ಣು ಕುದುರೆಯಾಗಿ ಹುಲಿಯಾಗಿ ಮತ್ತೆ ನಿಜರೂಪವನ್ನು ಕುದುರೆ ಪಡೆದುದನ್ನು ಬಗೆಬಗೆಯ ವಾದ್ಯಗಳ ಶಬ್ದವನ್ನೆಬ್ಬಿಸಿ ಸಂಭ್ರಮಿಸಿದರು ನಮ್ಮ ಪಾಳಯದ ಸೈನಿಕರು. ಅತೀವವಾಗಿ ಹಿಗ್ಗಿದೆ ನಾನು. ಶ್ರೀಕೃಷ್ಣ ನಮಗಿತ್ತ ಉಪಕಾರವನ್ನು ನಮ್ಮ ಸೇನೆ ಅರಿತಿದೆಯಲ್ಲಾ ಎಂದು ಸಂಭ್ರಮಿಸಿದೆ. ಜಗವೆಲ್ಲಾ ಅರಿಯುವಂತೆ ಆ ಹರಿಯಿಂದ ಮಹದುಪಕಾರವನ್ನು ಪಡೆಯುತ್ತಿರುವ ನಾನೇ ಧನ್ಯ ಎಂಬ ಭಾವ ಮೂಡಿತು ನನ್ನಲ್ಲಿ. ಪಾರಿಪ್ಲವ ದೇಶದಿಂದ ನಮ್ಮ ಕುದುರೆ ಮುಂದಕ್ಕೆ ಚಲಿಸಿತು. ಅತಿವೇಗ ಪಡೆಯಿತು ಅದರ ಚಲನೆ. ಬಹಳ ದೇಶಗಳು ಕಳೆದುಹೋದವು. ಈಗ ಕುದುರೆ ಸಾಗುತ್ತಿದ್ದುದು ರಾಜ್ಯದ ಒಳಸೀಮೆಯಲ್ಲಿ. ಅದಾವ ಪ್ರದೇಶ ಎನ್ನುವುದನ್ನು ವಿಚಾರಿಸಿ ತಿಳಿದುಕೊಂಡೆ. ಹೆಂಗಳೆಯರು ಮಾತ್ರವೇ ಇರುವ ಪ್ರದೇಶ ಅದೆನ್ನುವುದು ತಿಳಿದುಬಂತು… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ರಘುಪ್ರಸಾದ ಮರಿಯಮ್ಮನಹಳ್ಳಿ ಅವರ ಕವಿತೆ “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?”
ಕಾವ್ಯ ಸಂಗಾತಿ ರಘುಪ್ರಸಾದ ಮರಿಯಮ್ಮನಹಳ್ಳಿ “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?” ಈ ಹೊತ್ತಿನ ದಿನಗಳಲ್ಲಿ ನಿನ್ನ ಹಾಗೆ ಬದುಕಲುಂಟೆ ಗಾಂಧಿಕ್ಷಣ ಕ್ಷಣಕೂ ಹೊರಳಿಸುವ ನಾಲಗೆಗಳ ನಡುವೆಸತ್ಯವನ್ನೆ ಉಸಿರಾಡಿದಂತೆ ಬದುಕಲುಂಟೆ?!ಶತಾಯ ಗತಾಯ ಗಳಿಸುವ ಉಳಿಸುವಯೋಚನೆ ಯೋಜನೆಗಳ ನಡುವೆ ತಡವರಿಸುವ ನಾವುನಿನ್ನ ಹಾಗೆ ಅರೆಫಕೀರನಂತೆ ಬದುಕಲುಂಟೆ ಗಾಂಧಿ?! ಧರ್ಮಗಳಿಗೆ ಬಣ್ಣಬಳಿದು,ಜಾತಿಗೊಂದು ಮಠ ಕಟ್ಟಿ ಹೆಮ್ಮೆಯಿಂದ ಬೀಗುತಿರುವವರು ನಾವುನಿನ್ನ ಹಾಗೆ ಶ್ವೇತ ಭಾವದಿ ಬದಕುಲುಂಟೆ ಗಾಂಧಿ?!ಬೆರಳುಮಾಡುವುದನ್ನೆ ಗುರಿಯಾಗಿಸಿಕೊಂಡವರುಲೋಪಗಳ ಹುಡುಕುವುದರಲ್ಲೇ ಕಳೆದು ಹೋದವರುನಿನ್ನ ಸತ್ಯ ಪ್ರಯೋಗಗಳ ಅರ್ಥವ ತಿಳಿಯದೆ ಫೋಟೋ ಫ್ರೇಮಿನಲ್ಲಿ ಬಂಧಿಸಿಟ್ಟು ಪೂಜೆಗೈಯುವವರುನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಮೊದಲು ನೀನು ಬೆಲ್ಲವ ತ್ಯಜಿಸಿ ಆ ನಂತರಅದರ ವರ್ಜ್ಯದ ಬಗ್ಗೆ ಮಾತಾಡಿದೆ ಉಪನ್ಯಾಸ, ಭಾಷಣಗಳೆ ಇಂದು ಮುನ್ನೆಲೆಯಲ್ಲಿರುವಾಗನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?ಅನ್ಯರೆನಿಸಿದ ವಿದೇಶಿಗರಿಗೆ ಏಸುವಿನಂತೆ ಕಂಡನಿನ್ನ ನಿಲುವು ನಮಗಿನ್ನೂ ಅರ್ಥವಾಗದಿರುವಾಗ ನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಗಾಂಧಿ ಎಂಬ ಹೆಸರೇ ಭಾರವಾದ ಈ ಹೊತ್ತಿನಲಿ“ಸರಳ ಜೀವನ ಉನ್ನತ ಚಿಂತನೆ”“ಸೇವೆಯ ಪ್ರತಿಫಲ ಸೇವೆಯೇ”ಎದೆಯೊಳಿಳಿಸಲಾಗದ ತತ್ವಗಳಾಗಿರುವಾಗ,ಈಶ್ವರ-ಅಲ್ಲಾ, ರಾಮ-ರಹೀಮ ಎಲ್ಲಾ ಒಂದೇಎಂದ ನಿನ್ನ ದೇಶದಲ್ಲಿ ಹೆಸರು, ಬಣ್ಣಗಳೇ ರಾರಾಜಿಸುತ್ತಿರುವಾಗನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಆದರೂ ಹತಾಶೆಯ ಮೀರುವೆನಿನ್ನಂತೆ ಬದುಕಲಾಗದಿದ್ದರೂ ಆತ್ಮ ವಂಚನೆಯಲಿ ಬಳಲದಂತೆ ಬದುಕುವ ಸರಳ ಮಾರ್ಗವನ್ನು ಕಲಿತಿದ್ದೇನೆ.ಮತ್ತೆ ಮತ್ತೆ ನನ್ನೊಳಗೆ ನಿನ್ನ ಕರಗಿಸಿಕೊಳ್ಳುತ್ತೇನೆ.ನೀ ತೋರಿದ ಬದುಕಿನ ಸಂತಸದ ಸರಳ ನಡೆಯ ಕಂಡು ಪುಳಕಿತನಾಗುತ್ತೇನೆ.ಜೀವಿಸುತ್ತೇನೆ, ಜೀವನವನ್ನು ಸಂಭ್ರಮಿಸುತ್ತೇನೆ. ರಘುಪ್ರಸಾದ ಮರಿಯಮ್ಮನಹಳ್ಳಿ
ರಘುಪ್ರಸಾದ ಮರಿಯಮ್ಮನಹಳ್ಳಿ ಅವರ ಕವಿತೆ “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?” Read Post »
ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ.ಬೊಮ್ಮಾ ಸುಲಗ್ನ ಸಾವಧಾನ.. ಈ ವರ್ಷದ ಬ್ಯಾಸಗಿ ಧಗಿಗಿ ನಮ್ಮ ಉತ್ತರ ಕರ್ನಾಟಕ ದ ಮಂದಿ ಒಣಗಿದ ಹಪ್ಪಳಂಗ ಆಗಿಬಿಟ್ಟಿವಿ. ಸದಾ ಬಿಸಿಲು ಧಗಿದಾಗೆ ಇರೋ ನಮಗೂ ಈ ವರ್ಷ ಬಿಸಿಲಿನ ತಾಪ ಬಾಳ ಸಾಕಮಾಡ್ತು.ಮಳಿ ಬಂದ್ರೂ ನಮ್ಮ ಕಡಿ ಧಗಿ ಕಮ್ಮಿ ಆಗಲ್ಲ.ಇನ್ನೂ ಹೆಚ್ಚೆ ಆಗತದ.ಕಾದ ಹಂಚಿನ ಮ್ಯಾಲ್ ನೀರು ಸುರುದ ಮ್ಯಾಲ ಬರೋ ಉಗ ಹ್ಯಾಂಗ್ ಶಾಖ ಕೊಡತದ , ಆ ನಮೂನಿ ಮಳಿಗಾಲದ ಧಗಿ ಇರತದ. ಇದರೊಂದಿಗೆ ಬದುಕು ಸಾಗತಿರತದ.ಪ್ರಕೃತಿ ಅದರ ಕೆಲಸ ಮಾಡತಿರತದ.ಅದರೊಂದಿಗೆ ನಮ್ಮ ಬದುಕು ಸಾಗತಿರತದ.ಈ ವರ್ಷ ಬ್ಯಾಸಗಿದಾಗ ಮದುವೆಗಳ ಭರಾಟಿ ಬಾಳ ಇತ್ತು.ವಯಸ್ಸಿಗಿ ಬಂದ ಮಕ್ಕಳಿಗಿ ಮದುವೆ ಮಾಡೊದು ಒಂದು ದೊಡ್ಡ ಜವಾಬ್ದಾರಿ ಹೆತ್ತವರಿಗಿ.ಮದುವಿ ಆದ ಮ್ಯಾಲ ಜವಾಬ್ದಾರಿ ಮುಗಿತು ಅಂದುಕೊಳ್ಳೊದೆ ತಪ್ಪು ಅನಸ್ತದ. ಮದುವೆ ಮಾಡ್ದ ಮ್ಯಾಲ್ ಜವಾಬ್ದಾರಿ ಹೆಚ್ಚಿಗೆ ಆಗ್ತಾವ ಹೊರತು ಕಮ್ಮಿ ಆಗಲ್ಲ. ನೌಕರಿ ಮಾಡೊ ಹೆಣ್ಣಮಕ್ಳು ಇದ್ರ ಅವರ ಮಕ್ಕಳಿಗೆ ನೊಡಕೊಂಡ್ರ ಅವರಿಗಿ ನೌಕರಿ ಮಾಡಲಕ್ಕ ಸಾದ್ಯ.ಇಲ್ಲಂದ್ರ ಮಕ್ಕಳು ಮನಿ ನೌಕರಿ ಇವೆಲ್ಲ ಹೊಂದಿಸಲಕ್ಕ ಬಡಿದಾಡಿ ಮಾನಸಿಕ ನೆಮ್ಮದಿ ಕಳಕೊಂಡು ಸಂಸಾರದಲ್ಲಿ ಜಗಳ ಸುರು ಆಗತವ. ಹಾಗಂತ ಹೆಣ್ಣುಮಕ್ಕಳು ಬರಿ ಮಕ್ಕಳು ಹಡ್ದು ಮಕ್ಕಳಿಗಿ ಆರೈಕೆ ಮಾಡಕ್ಕೊಂತ ಮನ್ಯಾಗೆ ಇರಬೆಕಂದ್ರೂ ಈಗಿನ ಕಾಲದಾಗ ಅದು ಸಮಂಜಸ ಅನಸಲ್ಲ.ಪ್ರತಿಯೊಬ್ಬ ಹೆಣ್ಣಮಗಳು ಸ್ವಾವಲಂಬಿ ಆಗಿರಬೇಕು.ಹಿಂದಿನ ಕಾಲದಾಗ ಗಂಡು ಹೊರಗ ದುಡಿಬೇಕು ಹೆಂಗಸು ಮನ್ಯಾಗ ದುಡಿಬೇಕು ಎಂಬ ನಿಯಮ ಇತ್ತು.ಈಗಿನ ಕಾಲದಾಗ ಗಂಡನ ದುಡಮೆ ಒಂದೇ ಸಾಕಾಗಲ್ಲ.ಇಬ್ಬರೂ ದುಡಿದ್ರ ಮಾತ್ರ ಆರ್ಥಿಕ ಹೊರೆ ಕಮ್ಮಿ ಆಗತದ. ಅದಕ್ಕ ಈಗಿನ ಜನರೇಷನ್ ನವ್ರು ಮದುವೆನು ಬ್ಯಾಡ ಮಕ್ಳು ಬ್ಯಾಡ ಎಂಬ ನಿರ್ಣಯಕ್ಕ ಬರತಿದ್ದಾರ. ಮದುವೆ ಮಾಡಿಕೊಂಡು ಅವರು ಗಂಡ ಹೆಂಡತಿಯಾಗಿ ಮಕ್ಳು ಹುಟ್ಟಿಸಿ ಅವರಿಗಿ ಬೇಕಾದ ಸವಲತ್ತುಗಳನ್ನು ಕೊಟ್ಟು ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವದು ಈಗಿನ ತಲೆಮಾರುಗಳಿಗೆ ಅಷ್ಟು ಸುಲಭ ಅಲ್ಲ. ಗಂಡ ಹೆಂಡತಿ ಎಂಬ ಹೊಂದಾಣಿಕೆ ಕೊರತೆ ಬಾಳ ಅದ.ಇಬ್ಬರೂ ಸ್ವಾವಲಂಬಿ ಗಳು ಇದ್ದರಂತೂ ನಡುವೆ ಸ್ವಾಭಿಮಾನ ತುಸು ಹೆಚ್ಚೆ ಇರತದ. ಹೆತ್ತವರ ಬುದ್ದಿಮಾತು ಕೇಳದಷ್ಟು ಸ್ವನಿರ್ಧಾರ ಮಕ್ಕಳು ತಗೊಳತಾರ. ಸಂಸಾರದಲ್ಲಿ ಎರುಪೇರು ಶುರುವಾದ್ರ ತಪ್ಪು ಯಾರ್ದುಎಂದು ನಿರ್ಣಯ ಕ್ಕ ಬರಲಾರದಂತ ನೆಪಗಳು ಇಬ್ಬರಲ್ಲೂ ಇರತಾವ.ಆಗ ಯಾರಿಗೆ ಬುದ್ದಿ ಹೇಳಬೇಕು..! ಇಂತಹ ಸಂದರ್ಭದಾಗ ಹೆಣ್ಣು ಮಕ್ಕಳಿಗೆ ಬುದ್ದಿ ಹೇಳೊದು ಸಹಜ.ಹೊಂದಿಕೊಂಡು ಹೋಗು , ತಾಳಕೊಂಡು ಹೋಗು , ಗಂಡ ಅಂದ್ರ ಅನಸ್ಕೋಬೇಕು..ಇವೆಲ್ಲವೂ ಹಿಂದಿನಿಂದ ಮಗಳಿಗಿ ಹೇಳೊ ಬುದ್ದಿವಾದಗಳು. ಅಂತಹ ಸಂದರ್ಭದಾಗ ಹೆಣ್ಣಮಗಳಿಗೆ ಬ್ಯಾರೆ ದಾರಿ ಇರಲ್ಲ.ಈ ಕಡಿ ಗಂಡನ ಮನ್ಯಾಗೂ ಇರಲಾರ್ಧ ತವರು ಮನಿಗೂ ಬರಲಾರ್ದ ಸಂದಿಗ್ಧ ಪರಿಸ್ಥಿತಿ ಯೊಳಗ ಆತ್ಮಹತ್ಯೆ ಅಂತಾ ನಿರ್ಧಾರಕ್ಕ ಬಂದು ಬಿಡತಾರ. ಒಬ್ಬ ಹೈಕೋರ್ಟ್ ಜಡ್ಜ ಹೇಳಿದ್ರು ಸಾಯೋ ಮಗಳಿಗಿಂತ ವಿಚ್ಚೇದಿತ ಮಗಳು ಇರಲಿ ಅಂತ.ಕೌಟುಂಬಿಕ ಕಲಹದಿಂದ ಹೆಣ್ಣಮಕ್ಳು ಯಾರ ಸಪೋರ್ಟ್ ಮಾನಸಿಕವಾಗಿ ನೊಂದು ಸಾಯೊ ಅಂತಾ ನಿರ್ಧಾರ ತಗೊತಾರ.ಆ ನಿರ್ಧಾದ ಅವರ ಮನಸ್ಸಿನಾಗ ಗಟ್ಟಿ ಆಗಲಿಕ್ಕೆ ಬಿಡಲಾರ್ದೆ ತಂದೆ ತಾಯಿಗಳು ನಾವು ಇದ್ದೆವೆ ಎಂಬ ಧೈರ್ಯ ಆದ್ರು ಮಗಳಿಗಿ ಕೊಡಬೇಕು.ಕೊಟ್ಟ ಹೆಣ್ಣು ಕುಲಕ್ಕ ಹೊರಗ ಅಂತ ಅವಳಿಗಿ ಗಂಡನ ಆಸರೆ ಇಲ್ದೆ , ತವರಿನ ಆಸರೆ ಇಲ್ದೆ ಅವಳು ಸಾಯೋ ನಿರ್ಧಾರ ಮಾಡತಾಳ.ಈಗಿನ ಮಕ್ಕಳಿಗೆ ಸಾಯೊ ನಿರ್ಧಾರಕ್ಕ ಬರೊದು ಎಷ್ಟು ಸುಲಭ ಆಗಿಬಿಟ್ಟದ..! ಜೀವನದ ಒಂದಿಷ್ಟು ಕಷ್ಟಗಳು ಸಹಿಸಲಕ್ಕ ಆಗಲ್ಲ ಎಂಬ ಮನಸ್ಥಿತಿ ಗಿ ಬಂದ ಬಿಟ್ಟಾರ. ಸ್ವಲ್ಪ ಕೂಡ ಜೀವನದಾಗ ಏರುಪೇರಾದ್ರೂ ಆತ್ಮಹತ್ಯೆ ಮಾಡ್ಕೋತಾರ.ಈಗಿನ ಮಕ್ಕಳ ಮನಸ್ಥಿತಿ ಅಷ್ಯಾಕ ದುರ್ಬಲ ಆಗಬಿಟ್ಟದ. ಬರಿ ಹೆಣ್ಣಮಕ್ಖೆ ಅಲ್ಲ ಸಂಸಾರದ ಗಲಾಟೆದಾಗ ಗಂಡುಮಕ್ಳು ಕೂಡಾ ಆತ್ಮಹತ್ಯೆ ಮಾಡಕ್ಕೊಳ್ಳತಿದ್ದಾರ.ಹೆಂಡತಿ ಬಿಟ್ಟು ಹೋದ್ಳು ಅಂತಲೋ , ಮತ್ತೊಬ್ಬ್ರರ ಜೋತೆ ಸಂಭಂಧ ಅದ ಅಂತಲೋ , ಜಗಳ ಆಡ್ತಾಳೆ ಅಂತಲೋ , ಪದೆ ಪದೇ ತವರ ಮನಿಗಿ ಹೋಗತಾಳ ಅಂತಲೋ..ಕ್ಷುಲ್ಲಕ ಕಾರಣಗಳಿಗಿ ಆತ್ಮಹತ್ಯ ಮಾಡಿಕೊಳ್ಳುವ ಗಂಡಸರ ಬಗ್ಗೆ ಕೆಳತಿರತೀವಿ. ಸಂಸಾರದಲ್ಲಿನ ಜಗಳ ಆತ್ಮಹತ್ಯೆ ಯಲ್ಲಿ ಕೊನೆಯಾಗಬೇಕಾ..! ಈಗಿನ ಮದುವೆಗಳು ಎಷ್ಟು ಜಲ್ದಿ ನಿರ್ಣಾಯಕ ಹಂತಕ್ಕ ಬರತಿದ್ದಾವ. ತಪ್ಪು ಯಾರದು ಎಂದು ನಿರ್ಧರಿಸೊದು ಹ್ಯಾಂಗ್. ಅವರವರ ಜಾಗಕ್ಕ ಅವರವರದೆ ಸರಿ .ಎಲ್ಲಿ ತಪ್ಪತಿದ್ದೆವೆ ಎಂದು ತಿಳಕೊಳ್ಳಕ್ಕ ಪ್ರಯತ್ನಿಸುವ ತಾಳ್ಮೆ ಇಬ್ಬರಿಗೂ ಇಬ್ಬರ ಕಡೆಯವರಿಗೂ ಇಲ್ಲ.ಸಾವು ಒಂದೇ ಪರಿಹಾರ ಎಂದು ನಿರ್ಣಯಿಸಿಕೊಂಡವರಿಗೆ ಯಾವ ಉಪದೇಶಗಳು ಕಿವಿಯೊಳಗ ಹೋಗಲ್ಲ. ಇನ್ನೂ ಮದುವೆ ಎನ್ನುವದು ಈಗಿನ ತಲೆಮಾರಿನವರಿಗೆ ಅವಶ್ಯಕ ವಿಷಯ ಅಲ್ಲ.ಹೆತ್ತವ್ರು ಕೂಡ ಮಕ್ಕಳು ಸ್ವಾವಲಂಬಿ ಆಗಿ ದುಡುದು ತಮ್ಮ ತಾವು ನೋಡಕೊಳ್ಳತಾರ ಅನ್ನೊ ಭರವಸೆ ಬರುವವರೆಗೂ ಮಕ್ಕಳ ಮದುವೆಗೆ ಒತ್ತಾಯ ಮಾಡ್ಲೆಬಾರ್ದು.ಹೆಣ್ಣು ಮಕ್ಕಳಿಗಂತೂ ಸ್ವಾವಲಂಬಿ ತನ ಇನ್ನೂ ಅಗತ್ಯ ಅದ. ಗಂಡ ಗಳಿಸಿ ತಂದು ತನ್ನ ಎಲ್ಲಾ ಆಸಿ ಆಕಾಂಕ್ಷೆ ಪೂರಾ ಮಾಡ್ಲಿ ಎಂದು ಬಯಸೋದು ನೀಚತನ.ತನ್ನ ಮತ್ತು ಮಕ್ಕಳ ಜವಾಬ್ದಾರಿ ಗಂಡ ಒಬ್ಬಂದೆ ಅಲ್ಲ.ಮಕ್ಕಳು ಹಡೆದು ಕೊಟ್ಟ ಮಾತ್ರಕ್ಜೆ ತಾನು ಮಹಾನ್ ಅಲ್ಲ ಎಂಬುದು ಪ್ರತಿಯೊಬ್ಬ ಹೆಣ್ಣಮಕ್ಳು ತಿಳಕೋಬೇಕು. ಮದುವೆ ಅಂದ್ರ ಅವಲಂಬನೆ ಅಲ್ಲ.ಒಬ್ಬರಿಗೊಬ್ಬರು ಸಹಕಾರ ನಿಡೋದು.ವರದಕ್ಷಿಣೆ ಎಂಬುದು ಅಂದಿಗೂ ಇಂದಿಗೂ ಚಲಾವಣೆಯಲ್ಲಿ ಇರುವ ವಿಷಯ.ಹೆಣ್ಣು ಕಲತು ನೌಕರಿ ಮಾಡತಿದ್ದರೂ ತವರಿನಿಂದ ಏನಾದ್ರೂ ತರಲಿ ಎಂಬ ಹಂಬಲ ಗಂಡಿನ ಕಡೆಯವ್ರಿಗಿ ಇದ್ದೆ ಇರತದ.ಇದು ಪರೋಕ್ಷವಾಗಿ ಮಾತಿನ ಮುಖಾಂತರ ಬರತಾವ. ಗಂಡ ಅತ್ತೆ ಮಾವ ಈ ವಿಷಯಗಳು ಪದೇ ಪದೇ ಅನ್ನುವದು ಸೊಸೆಗೆ ಸಹಿಸದೆ ಜಗಳ ಶುರು ಆಗತಾವ.ವರದಕ್ಷಿಣೆ ಕಿರುಕುಳದ ಸಾವುಗಳು ಸಾಮಾಜಿಕ ಪಿಡುಗು. ಇದು ದುಡ್ಡಿದ್ದವರಲ್ಲೆ ಹೆಚ್ಚು . ಎಷ್ಟಿದ್ದರೂ ಇನ್ನೂ ಬೇಕು ಎಂಬ ಆಸೆ. ಎಷ್ಟೊಂದು ಧುಮ್ ಧಾಮ್ ಖರ್ಚು ಮಾಡಿ ಮಕ್ಕಳ ಮದುವೆ ಮಾಡ್ತೆವೆ.ಮದುವಿ ಆದಮ್ಯಾಲ್ ಜವಾಬ್ದಾರಿ ಮುಗಿತು ಅಂದುಕೊಳ್ಳದೆ ಮಕ್ಕಳಿಗೆ ಒತ್ತಾಸೆಯಾಗಿ ಇರಬೇಕು.ನಿಮ್ಮ ಜೊತೆಗೆ ನಾವಿದ್ದೆವೆ , ಎಂತಾ ಸಂದರ್ಭದಾಗೂ ನಿಮ್ಮ ಹಿಂದ ನಾವಿದ್ದೆವೆ ಅಂತ ಗಂಡ ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ದೈರ್ಯ ತುಂಬಬೇಕು. ಈಗಿನ ಪಿಳಿಗೆ ಸ್ವತಂತ್ರ ವಾಗಿ ಇರಬೇಕು ಅಂತ ಅಪೇಕ್ಷೆ ಪಡತಾರ.ಇರಲಿ , ತಂದೆ ತಾಯಿ ಕೂಡ ಮಕ್ಕಳಿಗಿ ಒಜ್ಜಿ ಆಗಲಕ್ಕ ಇಷ್ಟ ಪಡಲ್ಲ. ಮನಿಯೊಳಗ ಅತ್ತಿ ನಾದನಿ ಮಾವ ಇದ್ರ ಅವರ ಜೋಡಿ ಹೊಂದಾಣಿಕಿ ಆಗ್ಧೆ ಜಗಳ ಬರತದ ಅಂದ್ರ ಒಂದು ಕಾರಣ ಅನ್ನಬಹುದು.ಇಷ್ಟ ಪಟ್ಟು ಒಪ್ಪಿ ಮದುವೆ ಮಾಡಿಕೊಂಡು ಗಂಡ ಹೆಂಡತಿ ಇಬ್ರೆ ಇದ್ರು ಜಗಳ ಆಡಿ ಡೈವೊರ್ಸ ಮಾಡ್ಕೋತಾರ..ಆತ್ಮಹತ್ಯೆ ಮಾಡ್ಕೋತಾರ ಅಂದ್ರ ಇದಕ್ಕೆ ಯಾವ ಕಾರಣ ಹುಡಕಬೇಕು..!ಇಲ್ಲಿ ಸಮಸ್ಯೆ ಇರೊದು ಈಗಿನ ಯುವ ಜನರ ವಿಚಾರದಲ್ಲಿ.ತಾಳ್ಮೆಯ ಕೊರತೆ.ಮಕ್ಕಳಿಗಿ ಯಾವ ಕೊರತೆ ಇಲ್ದಂಗ ಬೆಳಸ್ತಿರೊ ತಂದೆ ತಾಯಿಗಳ್ದು ತಪ್ಪು. ಬಿಸಲು ಮಳಿ ಗಾಳಿಗಿ ಹೊಇಗಲಾರದಂಗ ಅವ್ರಿಗಿ ಕಾಪಾಡಿ ಒಂದು ಸರಿ ಅವ್ರು ಇವೆಲ್ಲ ಅನುಭವಿಸೊ ಪರಿಸ್ಥಿತಿ ಬಂದ್ರ ಸಹಿಸಲ್ಲ. ನಾವು ತಂದೆ ತಾಯಿಗಳು ಮಕ್ಕಳ ವಿಷಯವಾಗಿ ಅತೀ (possessive)ಸ್ವಾಮಿತ್ವ ಭಾವನೆ ಹೊಂದತಿದ್ದಿವಿ. ಅವರಿಗಿ ಯಾವ ನಿರ್ಧಾರ ತಗೊಳಕ್ಕ ಬಿಡಲಾರದಂಗ ಅವರಿಗಿ ಕಣ್ಣರೆಪ್ಪೆ ಹಾಂಗ ನೋಡಕೊಂಡು ಅವಲಂಬಿಸಿ ಇರೊಹಂಗ ಮಾಡ್ತಿರೋದು ಕೂಡ ಅವ್ರು ಬದುಕು ಎದುರಿಸಲಿಕ್ಕ ಆಗ್ದೆ ಇರೊದಕ್ಕ ಒಂದು ಕಾರಣ. ಮಕ್ಕಳು ಅಂದ್ರ ನಮ್ಮ ಮೂಲಕ ಈ ಭೂಮಿಗೆ ಬಂದ ಮುಂದಿನ ಪಳೆಯುಳಿಕೆ ಗಳು.ಅವ್ರೆ ನಮ್ಮ ಇಡೀ ಜಗತ್ತು ಅನ್ನೊಹಂಗ ಅವ್ರನ್ನ ಬೆಳೆಸೋದು ಒಂದು ರೀತಿ ಮಕ್ಕಳನ್ನು ದುರ್ಬಲ ಮಾಡ್ಲಿಕ್ಕೆ ಕಾರಣ ಆಗತದ. ಎಷ್ಟೋ ಮಕ್ಳು ತಂದೆ ತಾಯಿಗಿ ಹೊರೆ ಆಗತಾರ.ತಮಗ ಆಸರೆ ಆಗಬೇಕಾದ ಮಕ್ಕಳಗಿ ಜೀವನ ಪರ್ಯಂತ ತಾವೆ ಆಸರೆ ಆಗಬೇಕಾದ ಸಂದರ್ಭಗಳು ಇದ್ದಾವ. ವ್ಯಸನಕ್ಕ ಅಂಟಿಕೊಂಡ ಮಕ್ಕಳಿಗಿ , ಬೇಜವಾಬ್ದಾರಿ ಹೊಂದಿರುವ ಮಕ್ಕಳಿಗಿ ಮದುವೆ ಮಾಡಿದ್ರ ಹಾದಿಗಿ ಬರತಾನ ಅಂತ ಒಂದು ಹೆಣ್ಣು ತಂದು ಕಟ್ಟಿದ್ರ ಒಬ್ಬರ ಜೊತೆ ಮತ್ತೊಬ್ರ ಬದುಕು ಹಾಳು ಮಾಡಿದಂಗ. ಮದುವೆ ಅನ್ನುವದು ಕೇವಲ ಹೊಂದಾಣಿಕೆ ಅಲ್ಲ.ಸಾಂಗತ್ಯ.ಇಬ್ಬರು ಒಬ್ಬರಿಗೊಬ್ಬರು ಆಸರೆ ಆಗಿ ಇರಬೇಕಾದ ಸಂಭಂಧ.ಇದನ್ನು ವಿಜೃಂಭಣೆಯಿಂದ ಹಣ ಖರ್ಚು ಮಾಡಿ ಮಾಡುವದು ಬಿಡುವದು ಅವರವರ ಆಸಕ್ತಿ ಗೆ ಮತ್ತು ಆರ್ಥಿಕ ಸ್ಥಿತಿ ಮ್ಯಾಲ ಅವಲಂಬಿಸ್ತದ. ಅಷ್ಟು ಖರ್ಚು ಮಾಡಿ ಮಾಡಿದ ಮದುವೆ ಗಳ ಜೋಡಿಗಳು ಎಷ್ಟು ಸುಖ ಸಂತೋಷ ದಿಂದ ಜೀವನ ಮಾಡತಿದ್ದಾರ ಅನ್ನೊದು ಇವತ್ತಿನ ಚಿಂತನೆ ವಿಷಯ. ಹಾಗಂತ ಮದುವೆ ಮಾಡೋಧ ಬ್ಯಾಡ ಅಂತಲ್ಲ.ಮೊದಲು ನಮ್ಮ ಮಕ್ಕಳ ಸ್ವಾವಲಂಬಿ ತನ ಮತ್ತು ಅವರು ಸಂಬಂಧಗಳನ್ನು ನಿಭಾಯಿಸುವ ರೀತಿಗಳನ್ನು ನಾವು ಪರಿಕ್ಷಿಸಬೇಕು.ಅದಕ್ಕಾಗಿ ತಯ್ಯಾರಿಸಬೇಕು.ಎಲ್ಲಕ್ಕಿಂತ ಮುಖ್ಯ ಇಬ್ಬರೂ ಆರ್ಥಿಕ ವಾಗಿ ಸ್ವಾವಲಂಬಿ ಗಳಾಗಿರಬೇಕು.ಇದು ಎಲ್ಲಕ್ಕಿಂತ ಮುಖ್ಯ. ಮಕ್ಕಳು ಹರೆಯಕ್ಕ ಬರುತ್ತಲೆ ಮದುವೆ ಮಾಡಲಕ್ಕ ಇಲ್ಲ ಮದುವೆ ಆಗಲಿಕ್ಕ ಒತ್ತಾಯಿಸುವ ಹೆತ್ತವರು ಮೊದಲು ಅರ್ಥ ಮಾಡಕೊಬೇಕು..ನಮ್ಮ ಮಕ್ಕಳು ಮದುವೆ ಅನ್ನೊ ಸಂಭಂಧ ನಿಭಾಯಿಸಲಕ್ಕ ಎಷ್ಟು ತಯ್ಯಾರಿದ್ದಾರ ಅನ್ನುವ ವಿಷಯ.ನಮ್ಮ ದೇಶದಲ್ಲಿ ಮದುವೆಗೆ ಇದ್ದಷ್ಟು ಪ್ರಾಮುಖ್ಯತೆ , ಮದುವೆ ನಂತರ ಬರುವ ಸಮಸ್ಯೆ ಗಳಿಗೆ ಇಲ್ಲ. ಗಂಡ ಹೆಂಡತಿ ಅಂದ ಮ್ಯಾಲ ಇವೆಲ್ಲ ಸಾಮಾನ್ಯ. ಮಕ್ಕಳು ಆದ ಮ್ಯಾಲ್ ಇನ್ನೆಂತ ಜಗಳ , ಅಂತ ಸಮಸ್ಯೆ ಗಳನ್ನು ದೂರ ಮಾಡಲು ನೊಇಡತೀವಿ.ಇವುಗಳನ್ನು ಚಿಕ್ಕ ಸಮಸ್ಯೆ ಅಂತ ನೋಡ್ದೆ ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಆಸರೆ ಆಗಿ ನಿಲ್ಲಬೆಕಾದ್ದು ಹೆತ್ತವರ ಕರ್ತವ್ಯ. pic:AIcreated ಜ್ಯೋತಿ ಡಿ ಬೊಮ್ಮಾ ಅವರುಕಲಬುರ್ಗಿ ಜಿಲ್ಲೆಯವರು.ಇವರು ಇದುವರೆಗುನಾಲ್ಕು ಕವನ ಸಂಕಲನಗಳನ್ನು ಎರಡು ಪ್ರಬಂಧ ಸಂಕಲನಗಳನ್ನುಪ್ರಕಟಿಸಿದ್ದಾರೆ. ಸಂಗಾತಿಪತ್ರಿಕೆಗಾಗಿಯೇ ಇವರು ದೇಸಿ ನುಡಿಗಟ್ಟಿನಲ್ಲಿ ವಿಶಿಷ್ಠ, ವಿಶೇಷ ವಿಷಯಗಳ ಬಗ್ಗೆ ಪ್ರತಿ ತಿಂಗಳೂ ಬರೆಯುತ್ತಿದ್ದಾರೆ
ಅಂಕಣ ಸಂಗಾತಿ ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ-36 ನಾವು ಆ ಶಾಖೆಗೆ ಹೋದಾಗ ಶಾಖಾಧಿಕಾರಿ ಆಗಿದ್ದವರು ಶ್ರೀ ಸತ್ಯನಾರಾಯಣ ಅವರು. ಅವರು ಮೂಲತಃ ಶ್ರೀನಿವಾಸಪುರರದವರು. ನನ್ನ ತಂದೆಯ ಊರು ಸಹ ಅದೇ ಆಗಿದ್ದು ಕೆಲವು ಹಳಬರನ್ನು ನೆನೆಸಿಕೊಂಡು ಮಾತನಾಡುತ್ತಿದ್ದೆವು. ಅವರಿಗೆ ಆಫೀಸಿನಲ್ಲೇ ಹೃದಯಘಾತ ಆಗಿತ್ತು. .ನಂತರ ಚೇತರಿಸಿಕೊಂಡರು. ಆದರೆ ನಮಗೆಲ್ಲ ಒಂದು ರೀತಿಯ ಶಾಕ್ ಆಗಿದ್ದಂತೂ ನಿಜ .ಆಗ ಇಷ್ಟೆಲ್ಲ ಹೃದಯಾಘಾತಗಳ ವಿಷಯ ಕೇಳದೆ ಇದ್ದರಿಂದ ಅದು ಅಪರೂಪದ ಸಂಗತಿಯಾಗಿತ್ತು. ಹಾಗೆಯೇ ಶಾಖೆ ಎರಡರಲ್ಲಿ ಅತ್ಯಂತ ನೆನಪಿನಲ್ಲಿ ಉಳಿದ ವಿಷಯವೆಂದರೆ ಜನವರಿ ಒಂದನೆಯ ತಾರೀಕು ನಾವು ಹೆಂಗಳೆಯರೆಲ್ಲ ಸೇರಿ ಗೋಸಾಯಿ ಘಾಟ್ ಗೆ ಪ್ರವಾಸ ಹೋಗಿದ್ದು. ಆ ಬಾರಿ ಜನವರಿ ಒಂದನೆಯ ತಾರೀಕು ಶನಿವಾರ ಬಂದದ್ದು ಅಂದು ನಮಗೆ ಅರ್ಧ ದಿನ ಮಾತ್ರ ಕಚೇರಿ ಆದ್ದರಿಂದ ನೀವು ಪ್ರವಾಸವನ್ನು ಯೋಚಿಸಿದೆ ಕೆಳಗಡೆ ಇದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಒಂದು ಸಣ್ಣ ಮೆಟದ ಬುಕ್ ಮಾಡಿಕೊಂಡು ಮದ್ಯಾಹ್ನ ಹೊರಟೆವು ಎಲ್ಲರೂ ಅವರವರ ಮನೆಯಿಂದ ವಿಶೇಷ ತಿಂಡಿಗಳನ್ನು ಮಾಡಿಕೊಂಡು ಬರುವುದಾಗಿ ನಾನು ಅಂದು ಅವರೇ ಕಾಳು ರೊಟ್ಟಿ ಮಾಡಿ ತಂದಿದ್ದೆ. ಹತ್ತು ರೊಟ್ಟಿಗಳು ನಮಗಾಗಿ ಹಾಗೂ ಮತ್ತೆ ಎರಡು ಬೇರೆ ಬಾಕ್ಸ್ ನಲ್ಲಿ ಮಂಜುಗಾಗಿ. ತುಂಬಾ ಖುಷಿಯಾಗಿ ತಿಂದಿದ್ದ ಅಂದು.ಸರಿ ಅಲ್ಲಿ ಮಧ್ಯಾಹ್ನ ಹೋದ ತಕ್ಷಣ ಎಲ್ಲರೂ ಡಬ್ಬಿಗಳಿಂದ ಹಂಚಿಕೊಂಡು ತಿಂದದ್ದಾಯಿತು. ಇನ್ನು ಮೂರು ರೊಟ್ಟಿಗಳು ಉಳಿದಿದ್ದನ್ನು ರಾಜಿ ಮನೆಗೆ ತೆಗೆದುಕೊಂಡು ಹೋದಳು. ಸುಮಾ ತಂದಿದ್ದ ಉಳಿದ ಪೂರಿ ಆಲೂಗೆಡ್ಡೆ ಪಲ್ಯ ನಾನು ಮನೆಗೆ ತೆಗೆದುಕೊಂಡು ಬಂದೆ. ಸ್ವಲ್ಪ ಹೊತ್ತು ನೀರಿನಲ್ಲಿ ಇಳಿದು ಹಾಡಿ ನಂತರ ದೋಣಿಯಲ್ಲಿ ಒಂದು ರೌಂಡ್ ಹೋಗಿ ಬಂದು ಐದು ಗಂಟೆಗೆ ಮತ್ತೆ ಮೈಸೂರಿಗೆ ವಾಪಸ್ ಆಗಿದ್ದೆವು ಪ್ರತಿ ವರ್ಷ ಜನವರಿ ಒಂದನೆಯ ತಾರೀಕು ಆ ದಿನ ನಾವು ಹೋದ ಪ್ರವಾಸದ ನೆನಪು ಆಗುತ್ತಲೇ ಇರುತ್ತದೆ.ಹಾಗೆ ಮತ್ತೊಂದು ಕಹಿ ನೆನಪು ಎಂದರೆ ಪ್ರತಿ ನಿಧಿ ಬಾಂಧವರೂ ಪರ ಮನೆಯ ಗೃಹಪ್ರವೇಶಕ್ಕೆ ಹೋದಾಗ ನನ್ನದೊಂದು ಸಣ್ಣ ಚಿನ್ನದ ಸರ ಕಳೆದುಹೋದದ್ದು. ನಂಜನಗೂಡಿನ ಗೆಳತಿ ಇಂದುಮತಿ ಅವರ ತಮ್ಮನ ಮೂಲಕ ದುಬೈ ನಿಂದ ತರಿಸಿದ್ದ ೫ ಗ್ರಾಂ ನ ಸರ. ಬಹಳ ವರ್ಷಗಳಿಂದ ಭೇಟಿ ಆಗದೆ ಇದ್ದ ಪಿಯುಸಿ ಗೆಳತಿ ಲತಾ ಅವರ ನೆರೆಯ ಮನೆಗೆ ನಾವು ಗೃಹಪ್ರವೇಶಕ್ಕೆ ಹೋಗಿದ್ದು ಅವಳು ಸಿಕ್ಕಿದ್ದು ತುಂಬಾ ಖುಷಿಯಾಗಿತ್ತು. ಆಗಿನು ಮೊಬೈಲು ಕಾಲಿಟ್ಟ ಸಮಯ ಅವಳ ಬಳಿ ನನ್ನ ಬಳಿ ಇಬ್ಬರ ಬಳಿಯೂ ಮೊಬೈಲ್ ಇರಲಿಲ್ಲ ಹಾಗಾಗಿ ಮತ್ತೆ ಸ್ನೇಹ ಮುಂದುವರಿಸಲು ಆಗಲಿಲ್ಲ. ಮೊದಲೇ ಹೇಳಿದಂತೆ ಮನೆಯ ಬಳಿ ಇದ್ದ ಶಾಖೆ ಐದಕ್ಕೆ ವರ್ಗಾವಣೆ ಕೇಳಿದ್ದು ಆದರೆ ಅಲ್ಲಿ ಹೆಚ್ ಜಿ ಎ ಅಂದರೆ ನಮ್ಮ ಪೋಸ್ಟ್ ಖಾಲಿ ಇರಲಿಲ್ಲ. ಅಲ್ಲಿಗೆ ವರ್ಗಾವಣೆ ಬಯಸಿದವರಲ್ಲಿ ನನ್ನ ಜೊತೆಗೆ ಬಂದು ರಿಪೋರ್ಟ್ ಆದ ಮೊದಲನೇ ಸ್ಥಾನ ಹಾಗೂ ನನ್ನದು ಎರಡನೆಯ ಸ್ಥಾನ. ಅಲ್ಲಿ ಪೋಸ್ಟ್ ಖಾಲಿ ಇಲ್ಲ ಅಂದಮೇಲೆ ಈ ವರ್ಷ ನಮಗೆ ವರ್ಗಾವಣೆ ಇಲ್ಲ ಎಂದು ಖಾತ್ರಿ ಯಾಗಿತ್ತು ಆದರೆ ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿ ಇದ್ದುದರಿಂದ ಇನ್ನೂ ಒಂದು ವರ್ಷ ಹಾಯಾಗಿ ಇರಬಹುದು ಆದರೆ ಈ ಶಾಖೆ ಇವಾಗ ಕಟ್ಟಡಕ್ಕೆ ಅಂದರೆ ಬನ್ನಿ ಮಂಟಪಕ್ಕೆ ಸ್ಥಳಾಂತರ ಗೊಳ್ಳುವ ಯೋಜನೆ ಇತ್ತು. ಹಾಗಾಗಿ ಸ್ಥಳಾಂತರಗೊಳ್ಳುವ ಮೊದಲು ನಮಗೆ ವರ್ಗಾವಣೆ ಸಿಕ್ಕಿದರೆ ಒಳ್ಳೆಯದು ಎಂದಿತ್ತು. ಏಕೆಂದರೆ ನಮ್ಮ ಏರಿಯಾದಿಂದ ಬನ್ನಿಮಂಟಪಕ್ಕೆ ಎರಡೆರಡು ಬಸ್ ಹಿಡಿದು ಹೋಗಬೇಕಿತ್ತು. ಬಹಳ ದೂರವೂ ಇತ್ತು. ಆ ದೇವರಿಗೆ ನಮ್ಮ ಮೊರೆ ಕೇಳಿಸಿತೇನೋ ಎಂಬಂತೆ ಆ ವರ್ಷ ಶಾಖೆ ಎರಡರ ಇಬ್ಬರಿಗೆ ಸಹಾಯಕ ಅಧಿಕಾರಿಗಳಾಗಿ ಬಡ್ತಿ ಸಿಕ್ಕಿತು ಗಿರಿಜಾ ಮತ್ತು ರೇಣುಕುಮಾರಿ ಇಬ್ಬರು ಪದೋನ್ನತಿ ಹೋಗಲು ಒಪ್ಪಿಗೆ ಕೊಟ್ಟಿದ್ದರಿಂದ ನಮಗೆ ಅಲ್ಲಿ ಎರಡು ಪೋಸ್ಟ್ ಖಾಲಿ ಆಗಿತ್ತು, ಇನ್ನು ವರ್ಗಾವಣೆ ಆದೇಶ ಬರುವುದಷ್ಟೇ ಬಾಕಿ. ನಾನು ರಜೆ ಹಾಕಿದ್ದೆ. ಒಂದ್ಸಲ ನಮ್ಮ ಮನೆಯಲ್ಲಿ ಕಾಲ್ ಮಾಡಿದ್ದಳು ನನ್ನ ರಿಲವಿಂಗ್ ಆರ್ಡರ್ ಬಂದಿದ್ದು 15ನೆಯ ತಾರೀಕು ನಾವು ಆಗಬೇಕಿತ್ತು ಅಂದೇ ಮಧ್ಯಾಹ್ನ ನಾವಿಬ್ಬರೂ ಯಾಕೆಯವರಿಗೆ ಊಟ ಕೊಡಿಸೋಣವ ಎಂದು ಕೇಳಿದಳು ಆಯಿತು ಎಂದು ಹೇಳಿ ಹಬ್ಬದ ಮಾರನೆಯ ದಿನ ಮಧ್ಯಾಹ್ನ ನಮ್ಮ ಪಾರ್ಟಿ ಕೊಟ್ಟು ಸಂಜೆಗೆ ರಿಲೀಸ್ ಆದದ್ದು 1೭ನೆಯ ತಾರೀಕು ಸೋಮವಾರ ನಾವು ಶಾಖೆ ಐದಕ್ಕೆ ರಿಪೋರ್ಟ್ ಆಗಬೇಕಿತ್ತು ಈ ಹಿಂದೆ ನಂಜನಗೂಡಿನಲ್ಲಿ ನಮಗೆ ಬ್ರಾಂಚ್ ಮ್ಯಾನೇಜರ್ ಆಗಿದ್ದ ಸಿಕೆ ರವಿ ಅವರೇ ಅಲ್ಲಿ ಈಗ ಶಾಖಾಧಿಕಾರಿಗಳು ಅವರು ಶಾಖೆಗೆ ಫೋನ್ ಮಾಡಿ ನನಗೆ ಹೊಸ ವ್ಯವಹಾರ ವಿಭಾಗ ಕೊಡುವುದಾಗಿ ತಿಳಿಸಿದರು. ವತ್ಸಲಾಗೆ ಮಾರುಕಟ್ಟೆ ವಿಭಾಗ. ನನ್ನದೇನೂ ಅಭ್ಯಂತರವಿರಲಿಲ್ಲ. ಅಂತೂ ಇಂತೂ ಶಾಖೆ ಐದಕ್ಕೆ ಬಂದು ರಿಪೋರ್ಟ್ ಆದೆವು. ಮೊಟ್ಟ ಮೊದಲ ಬಾರಿ ಡ್ಯೂಟಿ ರಿಪೋರ್ಟ್ ಜೊತೆಗೆ ವರ್ಗಾವಣೆ ಕೋರಿಕೆ ಪತ್ರ ಇರಲಿಲ್ಲ. ಮುಂದೆ ನಿವೃತ್ತಿಯಾಗುವವರೆಗೂ ಬರೋಬರಿ 21 ವರ್ಷ ಇದೆ ಶಾಖೆಯಲ್ಲಿ ಸೇವೆ ಸಲ್ಲಿಸುತ್ತೇವೆ ಎಂಬ ಅಂದಾಜು ಸಹ ಅಂದು ಇರಲಿಲ್ಲ. ಸಾಹುಕಾರ್ ಚನ್ನಯ್ಯ ರಸ್ತೆಯಲ್ಲಿ ಇದ್ದ ಆ ಶಾಖೆಯ ಪಕ್ಕದಲ್ಲಿ ರಾಜ್ಯ ಸರ್ಕಾರದ ಕೆ ಜಿ ಐ ಡಿ ಕಚೇರಿಯೂ ಸಹ ಇತ್ತು. ರಸ್ತೆಯ ಎಡಬದಿಯಲ್ಲಿ ಇದ್ದ ಆ ಶಾಖೆ 2 ಅಂತಸ್ತಿನದಾಗಿತ್ತು ನನ್ನ ಹೊಸ ವ್ಯವಹಾರ ವಿಭಾಗ ಮೊದಲನೆಯ ಮಹಡಿಯಲ್ಲಿ ಇತ್ತು. ಮೊದಲಿಂದ ಪರಿಚಿತರಾಗಿದ್ದ ಶೈಲಾ ವೀಣಾ ಮಂಗಳ ಶಾಂತ ಹಾಗೂ ಎದುರು ಮನೆಯಲ್ಲಿ ಇದ್ದ ಸಾವಿತ್ರಿ ಎಲ್ಲರೂ ಇಲ್ಲೇ ಇದ್ದರು. ಹೊಸ ವಾತಾವರಣ ಅನಿಸಲೇ ಇಲ್ಲ ತುಂಬಾ ಬೇಗ ಅಂದುಕೊಳ್ಳುವಂತೆ ಆಯಿತು.ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ರಾಜೇಂದ್ರ ಅವರು ಸಹಾಯಕ ಆಡಳಿತ ಅಧಿಕಾರಿಗಳಾಗಿ ಇದ್ದರೆ ಸಹಾಯಕ ರಾಗಿ ನನ್ನದೇ ಹೆಸರಿನ ಜಿ ಸುಜಾತ ಮತ್ತು ಗುರುರಾಜ್ ಅವರು ಅಲ್ಲಿ ಇಬ್ಬರು ಹೆಜ್ಜೆಯಗಳಿದ್ದು ನಮ್ಮದೇ ಯೂನಿಯನ್ ನ ಸಿ ಚಂದ್ರಕುಮಾರ್ ಅವರು ಸಹ ಅದೇ ವಿಭಾಗದಲ್ಲಿ ಇದ್ದರು. ಆಗಿಲ್ಲ ಪಾಲಿಸಿಗಳು ಹೆಚ್ಚಾಗಿ ಬರುತ್ತಿದ್ದು ಆ ವಿಭಾಗದಲ್ಲಿ ಕೈ ತುಂಬಾ ಕೆಲಸ ಇತ್ತು ಆಸಕ್ತಿದಾಯಕವಾಗಿಯೂ ನಾನು ಈ ಮೊದಲು ಅದೇ ಹೊಸ ವ್ಯವಹಾರ ವಿಭಾಗದಲ್ಲಿ ಮಾಡಿದಾಗ ಪೂರ್ತಿ ಮಾನ್ಯುಯಲ್ ಕೆಲಸಗಳಿತ್ತು ಈಗ ಎಲ್ಲವೂ ಕಂಪ್ಯೂಟರ್ನಲ್ಲಿ ಮಾಡಬೇಕಿತ್ತು ಹೊಸದಾಗಿ ಕಲಿಯುವ ಆಸಕ್ತಿಯು ತುಂಬಾ ಖುಷಿಯಾಗುವಂತಿತ್ತು. ರವೀಶ್ ಅವರು ಊರಿನಲ್ಲಿ ಇದ್ದಾಗ ಮದ್ಯಾಹ್ನ ಊಟಕ್ಕೂ ಸಹ ಕರೆದುಕೊಂಡು ಹೋಗಿ ಬಂದು ಬಿಡುತ್ತಿದ್ದರು. ಸಕಲೇಶಪುರ ಬಿಟ್ಟ ಮೇಲೆ ಮಧ್ಯಾಹ್ನ ಮನೆಯ ಬಿಸಿಯೂಟ ಮತ್ತೆ ದೊರೆಯಿತು ಅನ್ನಬಹುದು.(ಮುಂದುವರೆಯುವುದು) ಸುಜಾತಾ ರವೀಶ್
“ಸುಖಸ್ಯಾ ನಂತರಂ ದುಃಖಂ ದುಃಖಸ್ಯಾ ನಂತರಂ ಸುಖಂ” ಶೋಭಾ ನಾಗಭೂಷಣ
ವಿಶೇಷ ಸಂಗಾತಿ ಶೋಭಾ ನಾಗಭೂಷಣ “ಸುಖಸ್ಯಾ ನಂತರಂ ದುಃಖಂ ದುಃಖಸ್ಯಾ ನಂತರಂ ಸುಖಂ” ಜೀವನ ಎನ್ನುವುದು ಒಂದೇ ರೀತಿಯಾಗಿ ಇರುವುದಿಲ್ಲ ಸುಖದ ಹಿಂದೆ ದುಃಖ; ದುಃಖದ ಹಿಂದೆ ಸುಖ ಎನ್ನುವುದು ಸರ್ವೇ ಸಾಮಾನ್ಯ. ವ್ಯಕ್ತಿ ಈ ಘಳಿಗೆಯಲ್ಲಿ ಸುಖ, ಶಾಂತಿ, ನೆಮ್ಮದಿಗಳಿಂದ ಇದ್ದಾನೆ ಎಂದರೆ ಆ ಸುಖವು ಶಾಶ್ವತವಾಗಿ ಇರಬೇಕೆಂದಿಲ್ಲ. ಆ ವ್ಯಕ್ತಿಯು ಯಾವುದಾದರೂ ಒಂದು ಕಾರಣಕ್ಕೆ ತನ್ನ ಜೀವನದಲ್ಲಿ ಅತೀವ ದುಃಖಕ್ಕೆ ಒಳಗಾಗಿರುತ್ತಾನೆ. ಎಂತಹ ಪ್ರಭಾವಿ ವ್ಯಕ್ತಿಯೂ; ಎಂತಹ ಆಗರ್ಭ ಶ್ರೀಮಂತನಾಗಿದ್ದರೂ ಅವನು ಸಂಪೂರ್ಣವಾಗಿ ಸುಖಿಯಾಗಿರುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಆ ವ್ಯಕ್ತಿಗೆ ಜೀವನದಲ್ಲಿ ಯಾವುದಾದರೂ ಒಂದು ದುಃಖ ಖಂಡಿತಾ ಇರುತ್ತದೆ. ಹಾಗೆಯೇ ಜೀವನದಲ್ಲಿ ಕಷ್ಟಗಳನ್ನೇ ಕಂಡ ಹಲವಾರು ವ್ಯಕ್ತಿಗಳು ಒಮ್ಮೆ ಸುಖವನ್ನು ಕಂಡಿರುತ್ತಾನೆ. “ಒಳ್ಳೆಯ ದಿನಗಳು ಬರಬೇಕೆಂದರೆ ಸ್ವಲ್ಪ ಕೆಟ್ಟ ದಿನಗಳ ಜೊತೆ ಕಾಲ ಕಳೆಯಬೇಕು” ಎನ್ನುವ ಜೀವನದ ಸತ್ಯವನ್ನು ಅರ್ಥಮಾಡಿಕೊಂಡು ಕಷ್ಟವನ್ನು ನುಂಗಿ ಸುಖದ ನಿರೀಕ್ಷೆಯೊಂದಿಗೆ ಬದುಕನ್ನು ನಡೆಸುತ್ತಿರುತ್ತಾನೆ. ನಾವು ರಾಜಾ ಹರಿಶ್ಚಂದ್ರನು ಸತ್ಯ ಹರಿಶ್ಚಂದ್ರನಾದ ಕಥೆಯನ್ನು ನೋಡಿದರೆ, ಹರಿಶ್ಚಂದ್ರನು ಸತ್ಯಕ್ಕಾಗಿ ಅಪಾರ ಕಷ್ಟವನ್ನು ಅನುಭವಿಸುತ್ತಾನೆ. ತನ್ನ ರಾಜ್ಯದಲ್ಲಿ ದಕ್ಷ ಆಡಳಿತ ಮಾಡುತ್ತಿದ್ದಲ್ಲದೇ, ಪ್ರಜಾನುರಾಗಿಯಾಗಿ, ಪ್ರಜೆಗಳಿಗಾಗಿ ಅತ್ಯುತ್ಕೃಷ್ಟ ಕಾರ್ಯಗಳನ್ನು ಮಾಡುತ್ತಾ ಬದುಕಿದ್ದ ಹರಿಶ್ಚಂದ್ರನಿಗೂ ಒಮ್ಮೆ ರಾಜ್ಯ, ಕುಟುಂಬ , ಗೌರವ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿ ಒದಗಿಬರಲಿಲ್ಲವೇ? ಆದರೆ ಅವನು ಎಂದಿಗೂ ಧೃತಿಗೆಡದೆ ಬಂದದ್ದನ್ನು ಸ್ವೀಕರಿಸುತ್ತಾ, ಸತ್ಯಮಾರ್ಗವನ್ನು ಬಿಡದೆಯೇ ನಡೆದುಕೊಂಡ ಈ ಕಾರಣಕ್ಕಾಗಿ ಅಂತಿಮವಾಗಿ ಅವನ ಸತ್ಯನಿಷ್ಠೆಗೆ ಫಲವಾಗಿ ಮತ್ತೆ ಸುಖ, ರಾಜ್ಯ ಮತ್ತು ತನ್ನ ಕುಟುಂಬ, ಗೌರವ ಎಲ್ಲವನ್ನೂ ಮರಳಿ ಪಡೆದುಕೊಂಡ. ಕಷ್ಟದ ಸಂದರ್ಭದಲ್ಲಿ ಹರಿಶ್ಚಂದ್ರನೇನಾದರೂ ಸ್ಥೈರ್ಯಗೆಟ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, ಇಂದು ಕಲಿಯುಗದಲ್ಲಿ ಸತ್ಯಕ್ಕೆ ಹೆಸರಾಗಿ ಉಳಿದಿರುವ ಹರಿಶ್ಚಂದ್ರ ಹೇಳ ಹೆಸರಿಲ್ಲದಂತೆ ಆಗುತ್ತಿದ್ದ. ಹಾಗೆಯೇ ರಾಮಾಯಣದಲ್ಲಿ ಶ್ರೀರಾಮನ ವನವಾಸದ ಕಥೆ; ಶ್ರೀರಾಮ ಸುಖದಲ್ಲಿ ಇದ್ದಾಗಲೇ ಇನ್ನೇನು ರಾಜ್ಯ ಪಟ್ಟಾಭಿಷೇಕ ಆಗುತ್ತದೆ ಎನ್ನುವ ಕಾಲಕ್ಕೆ ವನವಾಸ ಪ್ರಾಪ್ತವಾಗುತ್ತದೆ. ಅನೇಕ ಸಂಕಷ್ಟಗಳು ಒದಗಿಬರುತ್ತವೆ. ಕೊನೆಯಲ್ಲಿ ಅಯೋಧ್ಯೆಗೆ ಮರಳಿ ರಾಜನಾಗುತ್ತಾನೆ. ಮಹಾಭಾರತದ ಪಾಂಡವರ ಕಥೆಯೂ ಹಾಗೆಯೇ. ಪಾಂಡವರು ಅನೇಕ ಕಷ್ಟಗಳು, ವನವಾಸ-ಅಜ್ಞಾತವಾಸ, ಅವಮಾನಗಳನ್ನು ಅನುಭಸಿದ್ದರೂ ನ್ಯಾಯಕ್ಕಾಗಿ ಹೋರಾಡಿ ವಿಜಯ ಪಡೆಯುತ್ತಾರೆ. ದುಃಖ ಎನ್ನುವುದು ಶಾಶ್ವತವಲ್ಲ ಧೈರ್ಯದಿಂದ ಇದ್ದರೆ ಸುಖ ಬಂದೇ ಬರುತ್ತದೆ.ಒಂದು ಹಳ್ಳಿಯಲ್ಲಿ ಒಬ್ಬ ವೃದ್ಧ ರೈತ ವಾಸಿಸುತ್ತಿದ್ದ. ಅವನ ಬಳಿ ಒಂದು ಸುಂದರ ಕುದುರೆ ಇತ್ತು ಆ ಕುದುರೆಯೇ ಅವನ ಜೀವನೋಪಾಯ. ಒಂದು ದಿನ ಆ ಕುದುರೆ ದಾರಿ ತಪ್ಪಿ ಕಾಡಿಗೆ ಹೊರಟುಹೊಯಿತು. ಆ ವೃದ್ಧನಿಗೆ ಅದೃಷ್ಟದಂತಿದ್ದ ಕುದುರೆ ಕಾಣದಾದಾಗ, ಆ ಹಳ್ಳಿಯ ಜನರು ವೃದ್ಧನನ್ನು ಕುರಿತು “ನಿನ್ನ ಅದೃಷ್ಟವೇ ಕೆಟ್ಟು ಹೋಯಿತು , ಆ ದೇವರು ನಿಮಗೆ ಇಷ್ಟು ದುಃಖವನ್ನು ಕೊಡಬಾರದಿತ್ತು” ಎಂದರು. ಆಗ ಆ ವೃದ್ಧನು “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದನು. ಕೆಲವು ದಿನಗಳು ಹೀಗೇ ಕಳೆಯಿತು. ಒಂದು ದಿನ ಆ ಕುದುರೆ ಮರಳಿ ಬಂದಿತು. ಅದರೊಂದಿಗೆ ಇನ್ನೂ ಮೂರು ಕಾಡು ಕುದುರೆಗಳೂ ಬಂದವು. ಹಳ್ಳಿಯವರಿಗೆ ಆಶ್ಚರ್ಯವೋ ಆಶ್ಚರ್ಯ. ಹಳ್ಳಿಯವರು ರೈತನನ್ನು ಕುರಿತು “ನಿಮ್ಮ ಅದೃಷ್ಟ ನಿಜಕ್ಕೂ ತುಂಬಾ ಚೆನ್ನಾಗಿದೆ!” ಎಂದರು. ರೈತ ಮತ್ತೆ “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದನು. ಒಂದು ದಿನ ಆ ರೈತನ ಮಗ ಆ ಕಾಡು ಕುದುರೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ. ಆದರೆ ಕುದುರೆಯಿಂದ ಬಿದ್ದು ಅವನ ಕಾಲು ಮುರಿದು ಹೋಯಿತು. ಹಳ್ಳಿಯವರು ದುಃಖದಿಂದ “ಅಯ್ಯೋ! ತುಂಬಾ ಕೆಟ್ಟ ದ್ದಾಯಿತು” ಎಂದರು. ಆದರೆ ಆ ರೈತ ಮಾತ್ರ ಆಗಲೂ ಮತ್ತದೇ ಮಾತನ್ನು ಆಡಿದ “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದ. ಕೆಲವು ದಿನಗಳ ಬಳಿಕ ರಾಜ್ಯದಲ್ಲಿ ಯುದ್ಧ ಆರಂಭವಾಯಿತು. ಹಳ್ಳಿಯ ಎಲ್ಲಾ ಯುವಕರನ್ನೂ ಸೈನ್ಯಕ್ಕೆ ಕರೆದುಕೊಂಡು ಹೋದರು. ಆದರೆ ರೈತನ ಮಗನ ಕಾಲು ಮುರಿದುದ್ದರಿಂದ ಅವನನ್ನು ಕರೆದೊಯ್ಯಲಿಲ್ಲ. ಯುದ್ಧಕ್ಕೆ ಹೋದ ಅನೇಕರು ಮರಳಿ ಬರಲಿಲ್ಲ. ಆಗ ಹಳ್ಳಿಯವರು ಬಂದು “ ನಿಜವಾಗಿಯೂ ಇದು ಒಳ್ಳೆಯದ್ದೇ ಆಯಿತು” ಎಂದರು. ಆಗ ಆ ರೈತ ನಕ್ಕು “ಜೀವನದಲ್ಲಿ ಯಾವುದು ಸುಖ ಯಾವುದು ದುಃಖ ಎಂದು ತಕ್ಷಣ ನಿರ್ಧರಿಸಲಾಗುವುದಿಲ್ಲ” ಎಂದು ಹೇಳಿದ. ಯಾವ ಘಟನೆಯು ನಮಗೆ ಒಳ್ಳೆಯದ್ದನ್ನು ಮಾಡುತ್ತದೆ; ಯಾವುದು ಕೆಟ್ಟದ್ದನ್ನು ಮಾಡುತ್ತದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಬಂದದ್ದನ್ನೆಲ್ಲಾ ಸ್ವೀಕರಿಸುತ್ತಾ, ಒಳ್ಳೆಯ ಆಲೋಚನೆಗಳನ್ನು ಮಾಡುತ್ತಾ ನಮ್ಮ ಕರ್ತವ್ಯವನ್ನು ಮಾಡುತ್ತಾ ಸಾಗಬೇಕು.ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದ ೧೪ನೇ ಶ್ಲೋಕದಲ್ಲಿ ಹೇಳುವಂತೆ,ಮಾತ್ರಾ ಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ ।ಆಗಮಾಪಾಯಿನೋऽನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ| ಭಗವಂತನು ಅರ್ಜುನನಿಗೆ ಹೇಳುತ್ತಾನೆ “ಇಂದ್ರಿಯಗಳ ಮೂಲಕ ಹೊರ ಪ್ರಪಂಚದಿಂದ ಉಂಟಾಗುವ ಶೀತ ಮತ್ತು ಉಷ್ಣ, ನಲಿವು ಮತ್ತು ನೊವುಗಳನ್ನು ಆದಿ ಮತ್ತು ಅಂತ್ಯವನ್ನು ಹೊಂದಿವೆ. ಅವುಗಳು ಅನಿತ್ಯ; ಅವುಗಳನ್ನು ಸಹಿಸು ಎನ್ನುತ್ತಾನೆ. ಅದರಂತೆಯೇ ಅದೇ ಅಧ್ಯಾಯದ ೩೮ ನೇ ಶ್ಲೋಕದಲ್ಲಿ ಹೇಳುವಂತೆ ಸುಖದುಃಖೇ ಸಮೇಕೃತ್ವಾಲಾಭಾಲಾಭೌ ಜಯಾಜಯೌ|ತತೋ ಯುದ್ಧಾಯ ಯುಜ್ಯಸ್ವನೈವಂ ಪಾಪಮವಾಪ್ಸ್ಯಸಿ|| ಅಂದರೆ ಸುಖ-ದುಃಖ, ಲಾಭ-ನಷ್ಟ ಮತ್ತು ಗೆಲುವು- ಸೋಲುಗಳನ್ನು ಸಮವಾಗಿ ಭಾವಿಸಿಕೊಂಡು ಯುದ್ಧಕ್ಕೆ ಅನುವಾಗು ಆಗ ನೀನು ಪಾಪವನ್ನು ಗಳಿಸುವುದಿಲ್ಲ. ಭಗವಂತನ ಈ ಮಾತುಗಳೆಲ್ಲವು ಕೂಡ ಸುಖ- ದುಃಖಗಳ ಬಗೆಗೆ ಚಿಂತಿಸದೇ ನಾವು ನಮ್ಮ ಕಾರ್ಯವನ್ನು ಮಾಡಬೇಕು ಎಂದು ತಿಳಿಸುತ್ತವೆ. ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು|ಗುರುತಿಸೊಳಿತಿರುವುದನು ಕೇಡುಗಳ ನಡುವೆ||ಇರುವ ಭಾಗ್ಯವ ನೆನೆದು ಬಾರದೆಂಬುದನು ಬಿಡು|ಹರುಷಕಿದೆ ದಾರಿಯೆಲೊ-ಮಂಕುತಿಮ್ಮ|| ಡಿ ವಿ ಜಿ ಯವರ ಮಕುತಿಮ್ಮನ ಕಗ್ಗದ ಸಾಲುಗಳಿವು ಜೀವನದಲ್ಲಿ ನಮಗೆ ದೊರೆತಿರುವ ಪುಣ್ಯವನ್ನು ಹಾಗೂ ಅದರ ಒಳ್ಳೆಯ ಫಲವನ್ನು ಅನುಭವಿಸದೇ ಬಾರದಿರುವುದರ ಬಗ್ಗೆ ನಾವು ಚಿಂತಿಸುತ್ತೇವೆ. ಆ ಬಾರದಿರುವುದು ಸುಖವೂ ಆಗಿರಬಹುದು ಅಥವಾ ಹಲವಾರು ಕಾರಣಗಳಿಂದ ಮುಂದೆ ಬರಬಹುದಾದ ದುಃಖವೂ ಆಗಿರಬಹುದು. ನಾವು ಮುಂದಿನ ದುಃಖದ ಬಗೆಗೆ ಹೆಚ್ಚು ಆಲೋಚಿಸಿದರೆ ಇಂದು ನಮ್ಮ ಪಾಲಿಗೆ ಒದಗಿರುವ ಸುಖವನ್ನು ಅನುಭವಿಸದೇ ಅದನ್ನೂ ಕೂಡ ದುಃಖವನ್ನಾಗಿಸಿಕೊಂಡು ನಮ್ಮ ಕೈಯ್ಯಲ್ಲಿಯೇ ನಮ್ಮ ಜೀವನದ ರಸ ನಿಮಿಷವನ್ನು ಹಾಳುಮಾಡಿಕೊಳ್ಳುತ್ತೇವೆ. ಅದನ್ನು ಹೊರತುಪಡಿಸಿ ನಾವು ಪ್ರತಿಕ್ಷಣವನ್ನು ಜೀವಿಸಬೇಕು. ತೃಪ್ತಿಕರವಾಗಿ ಅನುಭವಿಸಬೇಕು. ಬರದಿರುವುದರ ಬಗ್ಗೆ ಆಲೋಚಿಸಿ, ಈಗಿರುವ ಒಳ್ಳೆಯದ್ದನ್ನು ಮರೆಯಬಾರದು. ಕಷ್ಟಗಳ ನಡುವೆಯೂ ಕಿಂಚಿತ್ತಾದರೂ ಸುಖ ಎನ್ನುವುದು ಇರುತ್ತದೆ. ಆ ಸಂತೋಷವನ್ನು ನಾವು ಹುಡುಕಿ ತೆಗೆದು ಬದುಕಬೇಕು. ಇರುವ ಭಾಗ್ಯವ ನೆನೆದು ಬದುಕಿದರೆ ಮನಸ್ಸಿಗೆ ಹರುಷವು ಸಿಗುತ್ತದೆ. ಎನ್ನುವ ಹಿರಿಯರ ಅನುಭವಜನ್ಯವಾದ ಮಾತು ಎಲ್ಲರಿಗೂ ಬದುಕುವ ಭರವಸೆಯನ್ನು ನೀಡುತ್ತದೆ. ನಾವು ಯಾವುದೇ ಯಶಸ್ವೀ ವ್ಯಕ್ತಿಗಳ ಜೀವನವನ್ನು ತೆಗೆದುಕೊಂಡರೂ ಆ ಯಶಸ್ಸಿನ ಹಿಂದೆ ಅವರ ದೊಡ್ಡ ಶ್ರಮ, ಸಂಕಷ್ಟಗಳು ಇರುತ್ತವೆ. ಬೆಂದು ಬೇಂದ್ರೆಯದ ದ.ರಾ.ಬೇಂದ್ರೆಯವರು, ಡಿವಿಜಿಯವರು, ಡಾ||ರಾಜ್ ಕುಮಾರ್, ಅಬ್ದುಲ್ ಕಲಾಂ, ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿಗಳು, ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು, ನಮ್ಮ ರಾಷ್ಟ್ರದ ಪ್ರಥಮ ಪ್ರಜೆಯಾಗಿರುವ ದ್ರೌಪದಿ ಮುರ್ಮು ಅವರು, ಇನ್ನೂ ಅನೇಕ ವ್ಯಕ್ತಿಗಳು. ಇವು ಬೆರಳೆಣಿಕೆಯಷ್ಟೇ ಹೆಸರುಗಳು ಇಂತಹ ಸಾವಿರಾರು ಉದಾಹರಣೆಗಳನ್ನು ನಾವು ಕಾಣಬಹುದು. ಇವರೆಲ್ಲಾ ಇಂದು ಇಷ್ಟು ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರೆ ಅವರ ಜೀವನದ ಹಾದಿಯೇನೂ ಹೂವಿನ ಹಾಸಿಗೆಯಾಗಿ ಇರಲಿಲ್ಲ. ಅವರುಗಳು ಅನುಭವಿಸಿದ ಸಂಕಷ್ಟಗಳೇನೂ ಕಡಿಮೆಯಲ್ಲ. ಆದರೆ ಅವರ್ಯಾರೂ ಕಷ್ಟಗಳಿಗೆ ಕುಗ್ಗಲಿಲ್ಲ. ಅವುಗಳನ್ನು ಹಿಮ್ಮೆಟ್ಟಿಸಿ ಬೆಳೆದವರು. ಸಂಕಲ್ಪತೊಟ್ಟು ಗುರಿಸಾಧಿಸಿದವರು. ಸೂರ್ಯೋದಯದ ಮೊದಲು ಕತ್ತಲೆ ಗಾಢವಾಗಿ ಇರುತ್ತದೆ; ಹಾಗೆಯೇ ಸುಖದ ಮೊದಲು ದುಃಖವೂ ಇರುತ್ತದೆ. ಕತ್ತಲಾಯಿತೆಂದು ನಾವು ತಲೆಯ ಮೇಲೆ ಕೈಹೊತ್ತು ಕುಳಿತರೆ ಚಂದ್ರನ ಬೆಳದಿಂಗಳಿನ ಸುಖವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಬದಲಾವಣೆ ಎನ್ನುವುದು ಜಗದ ನಿಯಮ. ಬದುಕಲ್ಲಿ ಲಾಭವನ್ನೇ ಕಂಡವನು ನಷ್ಟಕ್ಕೆ ಹೆದರಿ ಜೀವ ಕಳೆದುಕೊಳ್ಳಬಾರದು. ಇಂದು ಅದೆಷ್ಟೋ ವ್ಯಕ್ತಿಗಳು, ಮಹಿಳೆಯರು, ವಿದ್ಯಾರ್ಥಿಗಳು, ಕುಟುಂಬಗಳು ಜೀವನದಲ್ಲಿ ಬಂದ ತಾತ್ಕಾಲಿಕವಾದ ಕಷ್ಟಗಳಿಗೆ ಹೆದರಿ ಜೀವವನ್ನು ಕಳೆದುಕೊಂಡ ಅನೇಕ ಸುದ್ದಿಗಳು ಪ್ರತಿದಿನವೂ ಕೂಡ ಸುದ್ದಿವಾಹಿನಿಗಳಲ್ಲಿ, ವಾರ್ತಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. ಒಮ್ಮೆ ಕಳೆದುಹೋದ ಜೀವನವನ್ನು ಮತ್ತೆ ನಾವು ಪಡೆಯಲು ಸಾಧ್ಯವಿಲ್ಲ. ಈ ಜೀವವು ನಾವು ಬೇಡಿ ಬಂದದ್ದಲ್ಲ. ಅದು ಪರಮಾತ್ಮನ ಕರುಣೆಯಿಂದ ಸೃಷ್ಟಿಯಾದದ್ದು. ಹೀಗಿರುವಾಗ ಈ ಜೀವದ ಅಂತ್ಯವೂ ಅವನ ಕೈಯಿಂದಲೇ ಆಗಬೇಕು. ಅಲ್ಲಿಯವರೆಗೂ ಬದುಕನ್ನು ಎದುರಿಸಿ ಮುನ್ನಡೆಯಲೇಬೇಕು. ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಂ ಎನ್ನುವ ವಾಕ್ಯವನ್ನು ನಾವು ಸದಾ ನೆನಪಿನಲ್ಲಿ ಇಡಬೇಕು. ಶೋಭಾ ಬಿಕಾವ್ಯನಾಮ: ಶೋಭಾ ನಾಗಭೂಷಣಶಿಕಕ್ಷಿ , ಕವಯತ್ರಿ ಹಾಗೂ ನಿರೂಪಕಿಪ್ರಧಾನ ಕಾರ್ಯದರ್ಶಿಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ನೋಂ)
“ಸುಖಸ್ಯಾ ನಂತರಂ ದುಃಖಂ ದುಃಖಸ್ಯಾ ನಂತರಂ ಸುಖಂ” ಶೋಭಾ ನಾಗಭೂಷಣ Read Post »
ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ”
ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ” ನೆರಳು ಬೆಳಕಿನಾಟಸದ್ದಿಲ್ಲದೇ ನಡೆದಿದೆಪ್ರಕೃತಿಯ ಸೊಬಗಲೂಹಣಾ ಹಣಿ ಗದ್ದಲವಿಲ್ಲದೆ ಸಾಗಿದೆ. ಬಗೆಯ ಆಕಾರಅನಂತ ಶಕ್ತಿಯ ಹೊದಿಕೆಬಾನಂಚಿನ ವರೆಗೂರಮ್ಯ ಮನೋಹರ. ಒಂದೊಮ್ಮೆ ಬಿಡುಗಡೆಸಿದ್ಧವಾಗಿಯೂ ಇದೆಆಶವಾದುವೂ ಜೊತೆ ಜೊತೆಗೆಹಂಬಲದ ದಿನಮಾನಗಳೂ ಇವೆ. ಹೊತ್ತು ಮುಳುಗುವ ಮುನ್ನಆಯ್ದುಕೊ ಮುತ್ತುಬಿತ್ತರಿಸಿ ಬಿಡು ಹಿಡಿದಿಟ್ಟ ಶಕ್ತಿಮತ್ತೇನಿದೆ ಮಮತೆ ಮಡಿಲು ಬಿಟ್ಟು ಮೆತ್ತನೆ ಹಾಸಿಗೆ ಹೊದಿಯುವ ಮುನ್ನಶೋಧಿಸಿ ಬಿಡು ರೋಧನೆಯ ಹತ್ತಿಕ್ಕಿಬೋಧನೆಯ ಅರಿವಿನ ಹೊನಲಲಿಚಿತ್ತ ಶುದ್ಧಿ ಮಾಡಿಕೋ. ರೇಷ್ಮಾ ಕಂದಕೂರ
ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ” Read Post »
“ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್” ಗೊರೂರು ಅನಂತರಾಜು
ವ್ಯಕ್ತಿ ಸಂಗಾತಿ ಗೊರೂರು ಅನಂತರಾಜು “ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್” ಕವಿ ರಾಜೇಂದ್ರ ಪಾಟೀಲ್ ಅವರು ಉಮಾತನಯ ಕಾವ್ಯನಾಮದಲ್ಲಿ ಕವಿತೆ ರಚಿಸಿಕೊಂಡು ಬಂದವರು.ಇವರು 10.07.1965ರಂದು ಮಹಾರಾಷ್ಟ್ರ ರಾಜ್ಯದ ಸೋಲಾಪುರದಲ್ಲಿ ಜನಿಸಿದರು.ಮೂಲಸ್ಥಳ ಮಿರಗಿ, ಇಂಡಿ ತಾಲೂಕು, ವಿಜಯಪುರ ಜಿಲ್ಲೆ.ಇವರ ತಾಯಿ ಶ್ರೀಮತಿ ಉಮಾದೇವಿ,ತಂದೆ ಶ್ರೀ ಶಂಕರರಾವ್. ಇವರಪ್ರಾಥಮಿಕ ಶಿಕ್ಷಣ ನಡೆದಿದ್ದು ಮಾಶಾಳ, ಕಮಲಾಪುರ, ರೇವೂರದಲ್ಲಿ. ಪ್ರೌಢಶಿಕ್ಷಣ ಅಫಜಲ್ ಪುರದಲ್ಲಿ.ಕಾಲೇಜು ಮತ್ತು ಪದವಿ( ಬಿಎ) ಶಿಕ್ಷಣ ಕಲಬುರಗಿಯಲ್ಲಿ.ತಾಂತ್ರಿಕ ಶಿಕ್ಷಣ ವರ್ಕ್ ಶಾಪ್ ಟೆಕ್ನಾಲಜಿ ಬಿಇಎಂಎಲ್, ಕೆಜಿಎಫ್ ನಲ್ಲಿ. ಪತ್ರಕರ್ತರಾಗಿ ಗ್ರೀನೋಬಲ್ಸ್, ಚಿಂತಕ ( ಕಲಬುರಗಿ).1987 ರಿಂದ 1990ವರೆಗೆ,ಕನ್ನಡಮ್ಮ, ನಾಡೋಜ, ಹಸಿರುಕ್ರಾಂತಿ ( ಬೆಳಗಾವಿ)1990 ರಿಂದ 1998 ರವರೆಗೆ.ಸಂಯುಕ್ತ ಕರ್ನಾಟಕ 1998 ರಿಂದ 2022 ರವರೆಗೆ ಸೇರಿದಂತೆ ಪತ್ರಕರ್ತರಾಗಿ ಇವರ ಸೇವಾವಧಿ 33 ವರ್ಷ.ಸುಧಾ, ತರಂಗ, ವಾರಪತ್ರಿಕೆ, ರಾಗಸಂಗಮ, ಮಂಗಳ, ಮಯೂರ, ಮಲ್ಲಿಗೆ, ಪ್ರಜಾವಾಣಿ, ಪ್ರಜಾಮತ, ಉತ್ಥಾನ, ಗ್ರಿನೋಬಲ್ಸ್, ಚಿಂತಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ, ಬುಕ್ ಬ್ರಹ್ಮಾ ಹೀಗೆ ನಾಡಿನ ನೂರಾರು ಪತ್ರಿಕೆಗಳಲ್ಲಿ ಇವರ ಕವನ ಕತೆ, ಲೇಖನ, ವಿಮರ್ಶೆ, ಅಂಕಣಗಳು ಪ್ರಕಟವಾಗಿವೆ. ಹಲವಾರು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಮಕ್ಕಳ ಸಾಹಿತ್ಯ ಕವನ ಸಂಕಲನಗಳಲ್ಲಿ ಇವರ ಕವಿತೆಗಳು ಪ್ರಕಟಗೊಂಡಿವೆ. ಕಲಬುರಗಿಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ, ಡಾ. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದಾರೆ. ಧಾರವಾಡದಲ್ಲಿ ಬಾಲವಿಕಾಸ ಅಕಾಡೆಮಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಶಿಬಿರದಲ್ಲಿ, ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ದಾವಣಗೆರೆ, ಕುಷ್ಟಗಿ, ಕಲಬುರಗಿ, ವಿಜಯಪುರ, ಬೆಳಗಾವಿ, ಬೆಂಗಳೂರು, ಕೊಪ್ಪಳ, ಬದಾಮಿ ಭಾಗವಹಿಸಿದ್ದಾರೆ. 50 ಕ್ಕೂ ಹೆಚ್ಚಿನ ಕವನ ಸಂಕಲನಗಳಿಗೆ ಮುನ್ನುಡಿ,ಳ ಬರೆದಿರುವರು. ಇವರ ಜೇನ್ಗೊಡ, ನೆನಪ ರಂಗೋಲಿ ಕವನ ಸಂಕಲನ, ಕಥಾಗುಚ್ಛ ಕಥಾ ಸಂಕಲನ ಪ್ರಕಟಗೊಂಡಿವೆ. ಕರ್ನಾಟಕ ಸರಕಾರದ ಪಠ್ಯಪುಸ್ತಕ ನಿರ್ದೇಶನಾಲಯವು 1 ನೇ ತರಗತಿಗೆ ಅಮ್ಮ ಕವನವನ್ನು, 2ನೇ ಮತ್ತು 5 ನೇ ತರಗತಿಗೆ ತಂಗಿಯ ಪತ್ರ ಕವನವನ್ನು ಪಠ್ಯದಲ್ಲಿ ಅಳವಡಿಸಿದೆ. 1989ರ ನವೆಂಬರ್ ನಲ್ಲಿ ನೆಹರು ಜನ್ಮ ಶತಮಾನೋತ್ಸವ ಪ್ರಯುಕ್ತ ಇವರ ಕವಿತೆ ಶಾಂತಿದೂತ ಆಕಾಶವಾಣಿ ಕಲಬುರಗಿ, ಧಾರವಾಡ, ಬೆಂಗಳೂರು, ಮೈಸೂರು, ಮಂಗಳೂರು ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಿದೆ. ಕರ್ನಾಟಕ ಸಾಹಿತ್ಯ ಕಲಾ ವೇದಿಕೆ ರಾಜ್ಯ ಸಂಚಾಲಕರಾಗಿ ಮೂರು ವರ್ಷ ಸಾಂಸ್ಕೃತಿಕ ಸೇವೆ. ಭಾವ ಸಂಗಮ ಸಾಂಸ್ಕೃತಿಕ ವೇದಿಕೆಯ ರಾಜ್ಯ ಸಂಚಾಲಕರಾಗಿ 2015 ರಿಂದ ಇಲ್ಲಿಯವರೆಗೆ 11 ಸಮ್ಮೇಳನಗಳನ್ನು ಆಯೋಜಿಸಿದ್ದಾರೆ. ಪ್ರಸ್ತುತ ಉಮಾಶಂಕರ ಪ್ರತಿಷ್ಠಾನ ಕಾರ್ಯಾಧ್ಯಕ್ಷರಾಗಿದ್ದಾರೆ. ಇವರಿಗೆರಾಷ್ಟ್ರೀಯ ಬಸವ ವಿಭೂಷಣ, ಬಸವನಬಾಗೇವಾಡಿ, ಅಸ್ಮಿತಾ ಫೌಂಡೇಶನ್ ಹಿರಿಯ ನಾಗರಿಕರ ಪ್ರಶಸ್ತಿ, ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ 29ನೇ ವಾರ್ಡ್, ಮೂರನೇ ಕ್ರಾಸ್ಹಾಸನ – 574201
“ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್” ಗೊರೂರು ಅನಂತರಾಜು Read Post »
ಟಿ.ಪಿ. ಉಮೇಶ್ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು”
ಕಾವ್ಯ ಸಂಗಾತಿ ಟಿ.ಪಿ. ಉಮೇಶ್ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು” ಅಗೋ ಆ ಆಕಾಶದಲ್ಲಿಮೋಡಗಳು ಚಲಿಸುವುದು ನಿಲ್ಲುವುದಿಲ್ಲ!ಯಾರ ಕಣ್ಣೀರಿದ್ದರು ಇಲ್ಲದಿದ್ದರುಮಳೆಯು ಬರುವುದು ನಿಲ್ಲುವುದಿಲ್ಲ! ಸ್ಮೃತಿಯ ಬಾಗಿಲ ಮೇಲೆಒಂದಾದ ಮೇಲೊಂದು ಋತುಗಳ ಬೆರಳುಗಳುಮುಚ್ಚಿದ ಗುರುತು ಬಿಡುವುದುನಿಲ್ಲುವುದಿಲ್ಲ! ನನಗೆ ಗೊತ್ತು ಈ ಕಾಲದ ಜಾತ್ರೆಯೊಳಗೆಹೃದಯ ತಪ್ಪಿಹೋಗುವುದು ನಿಲ್ಲುವುದಿಲ್ಲ!ಕೈಚೆಲ್ಲಿದ ಕ್ಷಣಗಳಿಗೆ ಇಲ್ಲಿಮತ್ತೆ ಹೆಸರು ಕೊಡಲಾಗುವುದಿಲ್ಲ! ಇಷ್ಟಾದರೂ ಹಾರಿ ಹೋದ ಹಕ್ಕಿಗಳರೆಕ್ಕೆಗಳ ಸದ್ದುನನ್ನ ಅಂತರಂಗದೊಳಗೆ ಉಳಿಯುವುದಿಲ್ಲ!ಅವು ಗೂಡಿನಲ್ಲಿ ಬಿಟ್ಟುಹೋದಬೆಚ್ಚಗಿನ ನಿಶ್ಶಬ್ದ ನನ್ನದಾಗುವುದಿಲ್ಲ!ಒಮ್ಮೆ ದೀಪ ಹಚ್ಚಿದ ಕೈಗಳುಮತ್ತೆ ಈ ಕತ್ತಲಿನಲ್ಲಿನನಗಾಗಿ ಬೆಳಕು ಹಂಚುವುದಿಲ್ಲ! ಈಗ ನೋಡಿ ಈ ಒಣಗಿದ ನದಿಯ ತಳದಲ್ಲಿಚಿಕ್ಕ ಜಲಧಾರೆಮೌನವಾಗಿ ಹುಟ್ಟಿ ಜಿನುಗುವುದುನಿಲ್ಲುವುದಿಲ್ಲ!ನಾ ಕಂಡರೂ ಕಾಣದಿದ್ದರೂನದಿ ಸಮುದ್ರದ ದಾರಿ ಬಿಟ್ಟು ಬರುವುದಿಲ್ಲ! ಟಿ.ಪಿ.ಉಮೇಶ್ ಚಿತ್ರದುರ್ಗ
ಟಿ.ಪಿ. ಉಮೇಶ್ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು” Read Post »
“ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್ ಗೌಡ ಪಾಟೀಲ್
ಮಕ್ಕಳ ಸಂಗಾತಿ “ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್ ಗೌಡ ಪಾಟೀಲ್ ಅದೆಷ್ಟೇ ಮನಸ್ಸು ಕ್ಷೋಭೆಗೊಳಗಾಗಿರಲಿ ಆತಂಕಿತ ವಾಗಿರಲಿ ಸಂಗೀತದ ನಾದ ತರಂಗಕ್ಕೆ ಮನದ ನೋವು ನಿವಾರಿಸುವ ಶಕ್ತಿ ಇದೆ. ಮನಸ್ಸನ್ನು ಸಮಾಧಾನಗೊಳಿಸುವ, ಆಳವಾದ ನೆಮ್ಮದಿಯನ್ನು ನೀಡುವ ಮನಸ್ಸನ್ನು ಅದ್ವಿತೀಯ ವಿಶ್ರಾಂತ ಸ್ಥಿತಿಗೆ ಕರೆದೊಯ್ಯುವ ಶಕ್ತಿ ಇದೆ…. ಸಂಗೀತ ನಮ್ಮನ್ನು ನಾವಿರುವ ಭಾವದಿಂದ ತನ್ನದೇ ಆದ ಲೋಕಕ್ಕೆ ಕರೆದೊಯ್ಯುತ್ತದೆ.ಲಲಿತ ಕಲೆಗಳಲ್ಲಿ ಒಂದಾದ ಸಂಗೀತವು ಮಕ್ಕಳಲ್ಲಿ ರಾಗ, ತಾಳ, ಲಯಗಳ ಜ್ಞಾನದ ಜೊತೆಗೆ ಹತ್ತು ಹಲವು ವಿಭಿನ್ನ ಸಂಗತಿಗಳಲ್ಲಿ ಹೆಚ್ಚಿನ ಕಲಿಕೆಯನ್ನು ನೀಡುತ್ತದೆ.ವ್ಯಕ್ತಿಯ ಬೌದ್ಧಿಕ ಭಾವನಾತ್ಮಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿಗೆ ಒಳ್ಳೆಯ ಬುನಾದಿಯನ್ನು ಹಾಕುತ್ತದೆ. ಆದ್ದರಿಂದಲೇ ಮಕ್ಕಳನ್ನು ಚಿಕ್ಕಂದಿನಲ್ಲಿಯೇ ಸಂಗೀತ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆಟ ಪಾಠಗಳಂತೆ ಲಲಿತ ಕಲೆಗಳಲ್ಲಿ ಒಂದಾದ ಸಂಗೀತವೂ ಕೂಡ ಅತ್ಯವಶ್ಯಕ ಎಂಬುದನ್ನು ಮನಗಂಡಿರುವ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಪ್ರತಿ ವಾರಕ್ಕೆ ಎರಡರಿಂದ ಮೂರು ಅವಧಿಯಲ್ಲಿ ಸಂಗೀತ ಶಿಕ್ಷಣವನ್ನು ಕಡ್ಡಾಯವಾಗಿ ಕಲಿಸುವ ವ್ಯವಸ್ಥೆ ಮಾಡಿದೆ. ಪರಿಣಾಮವಾಗಿ ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯದೆ ಹೋದರೂ ಕೂಡ ತಕ್ಕಮಟ್ಟಿಗೆ ಸಂಗೀತದ ಜ್ಞಾನ ಮಕ್ಕಳಿಗೆ ದೊರೆಯುತ್ತದೆ. ಸಂಗೀತ ಕಲೆ…. ಕೇವಲ ಕಲೆಯಲ್ಲ..ಅದು ಜೀವನವನ್ನು ಅರಿಯುವ ಮಾರ್ಗ. ಸಂಗೀತವನ್ನು ಕಲಿಯುವ ಮಕ್ಕಳಲ್ಲಿ ಗಮನಾರ್ಹ ಬದಲಾವಣೆಯನ್ನು ನಾವು ಕಾಣಬಹುದು. ಸೂಕ್ಷ್ಮವಾದ ಹಾಗೂ ಅತ್ಯುತ್ತಮವಾದ ಗ್ರಹಿಕೆಯ ಶಕ್ತಿ ಮಕ್ಕಳದಾಗುತ್ತದೆ. ಸ್ಮರಣಶಕ್ತಿ ಕೂಡ ಹೆಚ್ಚುತ್ತದೆ. ಚಿಕ್ಕ ಪುಟ್ಟ ಬದಲಾವಣೆಗಳಿಂದ ಉಂಟಾಗುವ ವ್ಯತ್ಯಾಸಗಳ ಅರಿವು ಮೂಡುತ್ತದೆ…. ಇದರ ಪರಿಣಾಮವಾಗಿ ಮಕ್ಕಳು ಶಾಲೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಬದುಕಿನ ಎಲ್ಲಾ ಹಂತಗಳಲ್ಲಿ ತಮ್ಮ ಗ್ರಹಣ ಶಕ್ತಿಯ ಸೂಕ್ಷ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಸಂಗೀತ ಶಿಕ್ಷಣವು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತದೆ. ಸಂಗೀತದ ಮೂಲಕ ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವಂತೆ ಮಕ್ಕಳನ್ನು ಕ್ರಿಯಾಶೀಲಗೊಳಿಸುತ್ತದೆ. ಮಕ್ಕಳ ಸೃಜನಶೀಲತೆ ಅರಳುವುದು ಇಂತಹ ಕ್ರಿಯಾಶೀಲ ಅಭಿವ್ಯಕ್ತಿಗಳಿಂದ ಮಾತ್ರ. ಹೊಸ ವಿಚಾರಗಳನ್ನು ಅರಿಯಲು, ಹೊಸ ವಿಷಯಗಳನ್ನು ಪ್ರಸ್ತುತಪಡಿಸಲು ಸಂಗೀತವು ಅವರಿಗೆ ಸೂಕ್ಷ್ಮವಾದ ಕಲಿಕಾ ಕೌಶಲ್ಯವನ್ನು ನೀಡುತ್ತದೆ.ಸಂಗೀತದಿಂದ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರೆ ಅಚ್ಚರಿ ಪಡದಿರಿ. ನಿರಂತರವಾಗಿ ಸಂಗೀತದ ಅಭ್ಯಾಸವನ್ನು ಮಾಡುವುದರಿಂದ ಹಾಗೂ ಒಳ್ಳೆಯ ಸುಮಧುರವಾದ ಸಂಗೀತವನ್ನು ಕೇಳುವ ಮೂಲಕ ಉದ್ರಿಕ ನರಗಳನ್ನು ಶಾಂತಗೊಳಿಸಬಹುದು. ಮೈ-ಮನಗಳಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ತರುವ ಸಂಗೀತದ ನಾದ ತರಂಗಗಳು ಮನಸ್ಸಿನ ಬೇಗುದಿಯನ್ನು ತೊಡೆದು ಹಾಕುವ ಮೂಲಕ ಶಾಂತ ಮನಸ್ಥಿತಿಗೆ ಕಾರಣವಾಗುತ್ತದೆ. ಸಂಗೀತವು ವ್ಯಕ್ತಿಯ ಆತ್ಮವಿಶ್ವಾಸ ವೃದ್ದಿಗೆ ಸಾಧನ…. ನಿರಂತರವಾದ ತರಬೇತಿಯ ಮೂಲಕ ಕಲಿಕೆಯಲ್ಲಿ ಆತ್ಮವಿಶ್ವಾಸ ಹೆಚ್ಚಿದರೆ, ವೇದಿಕೆಯನ್ನು ಏರಿ ಕಲಿತ ವಿದ್ಯೆಯನ್ನು ಪ್ರಸ್ತುತಪಡಿಸಲು ಅತ್ಯವಶ್ಯಕವಾದ ಧೈರ್ಯವನ್ನು ಸಂಗೀತವು ನೀಡುತ್ತದೆ. ಆತ್ಮವಿಶ್ವಾಸ ವೃದ್ಧಿಗೆ ಇದಕ್ಕಿಂತ ಇನ್ನೇನು ಬೇಕು ? ಸಾರ್ವಜನಿಕರೊಂದಿಗೆ ಸಂವಹನ ಸಾಧ್ಯವಾಗುತ್ತದೆ. ಮತ್ತಷ್ಟು ಮಗದಷ್ಟು ಕಲಿಕಾ ಆಸಕ್ತಿ ಹೆಚ್ಚುತ್ತದೆ.ಸಾಂಸ್ಕೃತಿಕ ಮೌಲ್ಯಗಳ ಪರಿಚಯ ಮಾಡಿಕೊಡುವ ಸಂಗೀತವು ನಮ್ಮ ದೇಶದ ಮಹೋನ್ನತ ಸಂಗೀತ ಪರಂಪರೆಯ ಅರಿವನ್ನು ಮೂಡಿಸುತ್ತದೆ. ವಿವಿಧ ರಾಗ ತಾಳ ಲಯಗಳ ಜ್ಞಾನವನ್ನು ನಮಗೆ ಪ್ರಚುರಪಡಿಸುತ್ತದೆ. ಸಂಗೀತದ ವೈವಿಧ್ಯಗಳ ಕುರಿತು ಹೊಸ ಕುತೂಹಲವನ್ನು ಮೂಡಿಸುತ್ತದೆ. ವಿವಿಧ ಶೈಲಿಗಳ, ತಾಳ ವಾದ್ಯಗಳ ಅರಿವನ್ನು ಮೂಡಿಸಿ ನಮ್ಮ ಮಹೋನ್ನತ ಗುರು ಪರಂಪರೆಯ ಕುರಿತು ಕೃತಜ್ಞತಾ ಭಾವವನ್ನು ಮೂಡಿಸುತ್ತದೆ. ಸಂಗೀತ ಕಲಿಕೆಯು ನಮ್ಮ ಬದುಕಿನಲ್ಲಿ ಶಿಸ್ತಿನ ಪಾಲನೆಗೆ ಕಾರಣವಾಗುತ್ತದೆ… ಪ್ರತಿದಿನವೂ ಸಂಗೀತವನ್ನು ಕಲಿಯುವ ನಿಟ್ಟಿನಲ್ಲಿ ತರಬೇತಿ ಹೊಂದುವ ಪ್ರತಿ ಮಗುವು ಕೂಡ ತಮ್ಮದೇ ಆದ ಕೆಲ ಪದ್ಧತಿಗಳನ್ನು ರೂಡಿಸಿಕೊಳ್ಳುತ್ತಾರೆ. ತಮಗೆ ಒಗ್ಗುವ ಊಟೋಪಚಾರ, ಆಹಾರ ವಿಹಾರಗಳನ್ನು ಪಾಲಿಸುತ್ತಾರೆ ಇದು ಅವರಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಶಿಸ್ತಿನ ಪರಿಪಾಲನೆಗೆ ಸಹಕಾರಿಯಾಗುತ್ತದೆ. ನಿಯಮ ಹಾಗೂ ಸಮಯ ಪಾಲನೆಯ ಕಾರಣದಿಂದಾಗಿ ಒಂದು ಬಗೆಯ ಶಿಸ್ತು ಅವರಲ್ಲಿ ಉಂಟಾಗುತ್ತದೆ. ಗುಂಪಿನಲ್ಲಿ ಹಾಡುವ ಮೂಲಕ ಸಾಮಾಜಿಕ ಸಾಂಗತ್ಯದ ಸಾಮರ್ಥ್ಯ ಬೆಳೆಯುತ್ತದೆ ವಿಭಿನ್ನತೆಯಲ್ಲಿಯೂ ಏಕತೆಯನ್ನು ಕಾಣುವ ಶಕ್ತಿ ಸಂಗೀತಕ್ಕಿದೆ. ಇತರರಲ್ಲಿರುವ ವಿಭಿನ್ನ ಗ್ರಹಿಕೆಯ ಶಕ್ತಿ,, ಕಲಿಕಾ ಸಾಮರ್ಥ್ಯ, ಸಮಯ ಪಾಲನೆ, ಶ್ರದ್ಧೆ,ಕಾರ್ಯ ತತ್ವರತೆಗಳು ನಮ್ಮನ್ನು ಪ್ರೇರೇಪಿಸುತ್ತವೆ. ಸಂಗೀತವು ಸ್ನೇಹ ಭಾವವನ್ನು ಹಾಗೂ ಗೌರವವನ್ನು ವೃದ್ಧಿಸುತ್ತದೆ. ನಮ್ಮ ಮನದಾಳದ ಮಾತುಗಳನ್ನು ನಮಗರಿವಿಲ್ಲದೆ ಸಂಗೀತದ ಮೂಲಕ ಹೊರಹಾಕುವ ಪ್ರತಿ ವ್ಯಕ್ತಿಯು ಇನ್ನಿಲ್ಲದ ನಿರುಮ್ಮಳತೆಯನ್ನು ಅನುಭವಿಸುತ್ತಾರೆ….ಆದ್ದರಿಂದ ತರಗತಿಯ ಕೋಣೆಯಲ್ಲಿ ಕಡ್ಡಾಯವಾಗಿ ದೊರೆಯುವ ಸಂಗೀತ ಶಿಕ್ಷಣದಿಂದ ನಿಮ್ಮ ಮಕ್ಕಳನ್ನು ವಂಚಿತಗೊಳಿಸದಿರಿ. ವೀಣಾ ಹೇಮಂತ್ ಗೌಡ ಪಾಟೀಲ್
“ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಧಾರಾವಾಹಿ ಸಂಗಾತಿ-21 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಜಯದೇವಿ ತಾಯಿಯವರು ಕೋರ್ಟ್ ಕೇಸ್ನ್ನ ಗೆದ್ದು…..“ನ್ಯಾಯಕ್ಕೆ ಜೀವ ತುಂಬಿದರು.*ಆಗಿನ ಕಾಲದಲ್ಲಿ ಜಯದೇವಿ ತಾಯಿಯವರ ಪತಿಯು ಬಾಲಕರೆಂದು ಬ್ರಿಟಿಷರ ಮೇಲ್ವಿಚಾರಣೆಯಲ್ಲಿದ್ದ ದೊಡ್ಡ ಆಸ್ತಿ, ಜಮೀನು, ಮನೆ, ವ್ಯವಹಾರ—ಎಲ್ಲವು ಒಂದೇ ಕ್ಷಣದಲ್ಲಿ ತಾಯಿ ಯ ಹೆಗಲ ಮೇಲೆ ಬಿದ್ದವು.ಪುರುಷರೇ ಹೆದರಿಬಿಡುವಂತಹ ಜವಾಬ್ದಾರಿಯನ್ನು ಒಬ್ಬ ಹೆಣ್ಣು ಮಗಳು ಒಬ್ಬಳೇ ಹೊತ್ತು ನಿಲ್ಲುವುದು ಅಂದಿನ ಸಮಾಜದಲ್ಲಿ ಅಸಾಧ್ಯವೆಂದು ಎಲ್ಲರೂ ಭಾವಿಸಿದ್ದರು.ಆದರೆ ಜಯದೇವಿ ತಾಯಿ ಒಬ್ಬ ಸಬಲ ತಾಯಿತನದ ಶಕ್ತಿಯಾಗಿ ನಿಂದರು.ಒಂದೆಡೆ ಗಂಡನ ಅಗಲಿಕೆಯ ನೋವು ಹೃದಯದಿ ಮುಚ್ಚಿಟ್ಟು ಮತ್ತೊಂದೆಡೆ ಐದು ಮಕ್ಕಳ ಭವಿಷ್ಯ ಅವರ ಕಣ್ಣೆದುರಿಗೆ ನಿಂತಿತ್ತು ಬೆಳಗ್ಗೆ ಉದಯಿಸುವ ಸೂರ್ಯನಿಗಿಂತ ಮುಂಚೆಯೇ ಎದ್ದು ಮನೆಯ ಕೆಲಸ, ಮಕ್ಕಳ ಆರೈಕೆ, ಕಾರ್ಮಿಕರ ನೋಡಿಕೊಳ್ಳುವುದು, ಆಸ್ತಿಯ ಲೆಕ್ಕಪತ್ರ, ನ್ಯಾಯದ ವಿಚಾರ …..ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಅವರಲ್ಲಿ ಆವರಿಸಿದ ಖಾಲಿತನವನು ಸಿದ್ದರಾಮನ ನೆನಹುನಲಿ ನಮ್ಮೆದೆಯ ತುಂಬಲಾರಂಭಿಸಿದರು. ಇಚ್ಛೆಯಿಂದಲೇ ಸರ್ವ|ತುಚ್ಚಿೀಕರಿಸಿ ಬೇಗ ಎಚ್ಚರದಿಂದ ಇರಬೇಕು- ನಮ್ಮಲಿಯಸಚ್ಚಿದಾನಂದನ ಸ್ಮರಿಸೂತ||*B ಸಚ್ಚಿದಾನಂದ ಶಿವಮಯನಾದ ಸಿದ್ದರಾಮನು ನೆನೆಯುತ ಐದು ಮಕ್ಕಳ ಬದುಕನ್ನು ಕಟ್ಟುವ ಉಕ್ಕಿನ ಮನೋಬಲವಿತ್ತು. ಮಕ್ಕಳ ಬದುಕು ಅರಳಬೇಕೆಂಬು ಕನಸು ಹೊತಿದ್ದರು… ಮಕ್ಕಳಿಗೆ ಪರ್ವತದಂತೆ ಬಲವಾಗಿ ನಿಂತರು.ಅದರಲ್ಲೇ ಅವರ ತಾಯಿತನದ ದಿವ್ಯತೆ ಇತ್ತು. ಇಲ್ಲಿ ಒಂದೆರಡು ಘಟನೆಗಳನ್ನು ನೆನಪಿಸಿಕೊಳ್ಳಲೇ ಬೇಕು ತಾಯಿಯವರು ಆಗಿಂದ್ದಾಂಗ ಹೇಳುತ್ತಿದ್ದರು. ಮೊದಲ ಮಗಳು ಶಶಿಕಲಾ ಅವರಿಗೆ ರಾಜಶೇಖರ ಮಡಕಿ ಸ್ವಂತ ತಮ್ಮನಿಗೆ ಕೊಟ್ಟು ಮದುವೆ ಮಾಡಲಾಗಿತ್ತು . ಅವರು ಸುಖ ಸಂಸಾರದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಾಹಿತ್ಯವನ್ನು ರಚಿಸುತ್ತಾ ಸುಖವಾಗಿ ಇದ್ದರು. ತಾಯಿಯವರ ಹಿರಿಯ ಮಗಳು ಶಶಿಕಲಾ ಮಡಕಿ ಅಳಿಯ ರಾಜಶೇಖರ್ ಮಡಿಕೆ ಎರಡನೇ ಮಗ ಶ್ರೀಕಂಠ ಮೂರನೇ ಮಗ ಪ್ರಭುರಾಜ ಇವರಿಬ್ಬರನ್ನು ಪಂಚಗಣಿಯ ಶಾಲೆಯಲ್ಲಿ ಓದಲು ಕಳಿಸಿಕೊಟ್ಟಿದ್ದರು .ಸುಖದ ಸುಪತ್ತಿನಲ್ಲಿ ಬೆಳೆದು ಬಂದ್ದಿದ್ದ ಮಕ್ಕಳಿಗೆ ಅಲ್ಲಿಯ ಕಠಿಣವಾದ ಶಿಸ್ತು ಬದ್ಧತೆ ,ಕಟ್ಟುನಿಟ್ಟಾದ ನಿಯಮಗಳು, ಶಾಲೆಯ ಅಭ್ಯಾಸದ ಭಾರವು ಅವರಿಗೆ ಸರಿ ಹೊಂದಲಿಲ್ಲ, ಊಟದಲಿ ವ್ಯತ್ಯಾಸ ಸಹಿಸಲಾಗಲಿಲ್ಲ. ಹೀಗಾಗಿ ಅವರು ಅಲ್ಲಿ ಇರಲು ಒಪ್ಪಿಕೊಳ್ಳಲಿಲ್ಲ… ಹಿರಿಯ ಮಗ ಶ್ರೀಕಂಠ ಆದರೂ ತಾಯಿಗೆ ಹೆದರಿ ಮೊದಲು ಮಗ ಶ್ರೀಕಂಠ ಶಾಲೆಯ ರಜೆ ಪ್ರಾರಂಭವಾಗುವವರೆಗೂ ಇದ್ದು ರಜೆಗೆಂದು ಮನೆಗೆ ಬಂದಾಗ ಹಿಂತಿರುಗಿ ಹೋಗಲು ಸಾಧ್ಯವೇ ಇಲ್ಲವೆಂದು ತನ್ನ ಅಭಿರುಚಿಯು ಕೃಷಿಯಲ್ಲಿ ಹಾಗೂ ಅಂಗಡಿ ಮನೆ ನೋಡಿಕೊಂಡು ಹೋಗುವದರಲ್ಲಿ ಇದೆ ಎಂದು ತಿಳಿಸಿದಾಗ ತಾಯಿಯವರು ಅವರ ವಿಚಾರದ ವಿರುದ್ಧ ಹೋಗಲು ಒಪ್ಪಲಿಲ್ಲ ಏಕೆಂದರೆ ಶ್ರೀಕಂಠವರಿಗೆ ಕೃಷಿಯಲ್ಲಿ ಅಭಿರುಚಿ ಹೆಚ್ಚಿಗೆ ಇರುವುದನ್ನು ಗಮನಿಸಿದ್ದ ತಾಯಿಯವರು ಅವರಂತೆ ಒಪ್ಪಿಕೊಂಡರು.ಇಲ್ಲಿ ತಾಯಿಯವರು ಮಕ್ಕಳಿಗೆ ಯಾವುದೇ ರೀತಿಯಾದ ಒತ್ತಾಯದಿಂದ ಯಾವ ಶಿಕ್ಷಣವನ್ನು ಕೊಡಬಾರದು ಅನ್ನುವುದನ್ನು ಮನಗಂಡಿದ್ದರು ಅವರವರ ಅಭಿರುಚಿಯಂತೆ ಅವರವರ ಜೀವನದ ದಾರಿಯನ್ನು ತೊರಿ ಕೊಡಬೇಕು ಅನ್ನುವ ಅಭಿಪ್ರಾಯ ಹೊಂದಿದ್ದರು. ಇನ್ನು ಎರಡನೇ ಮಗ ಪ್ರಭುರಾಜ ಅತ್ಯಂತ ಮೃದು ಹೃದಯ, ಜಾಣ ಬುದ್ಧಿವಂತನು ಇವರಿಗೆ ದೊಡ್ಡ ಶಿಕ್ಷಣವನ್ನು ಕೊಡಿಸಬೇಕೆನ್ನುವ ಆಸೆ ತಾಯಿಯವರು ಹೊತ್ತಿದ್ದರು .ಅವರು ಕೂಡ ತಿರುಗಿ ಹೋಗಲು ಒಪ್ಪದಿದ್ದಾಗ ತಾಯಿಯವರು ನನಗಾಗಿ ನೀನು ಹೋಗಲೇ ಬೇಕು ಅನ್ನುವ ಪ್ರಮಾಣ ತೆಗೆದುಕೊಂಡರು… ಏಕೆಂದರೆ ಅವರಲ್ಲಿ ಮುಂದೆ ಕಲಿಯುವ ಯೋಗ್ಯತೆ ಇದೆ ಅನ್ನುವುದನ್ನು ಅರೆತಿದ್ದರು …..ಅನಿವಾರ್ಯವಾಗಿ ಪ್ರಭುರಾಜರಿಗೆ ಹೋಗ ಬೇಕಾಗಿ ಬಂತು. ಎರಡನೆ ಮಗ ಪ್ರಭುರಾಜ ಪ್ರಭುರಾಜ್ ಅವರ ಪ್ರತ್ನಿ ಪ್ರಮೀಳಾ (ಗದಗಿನ ಎಳೆಮಲಿ ಶಾಂತಪ್ಪನವರ ಮಗಳು) ತಾಯಿಯವರನ್ನು ಒಂದು ಕ್ಷಣವು ಬಿಟ್ಟಿರದಿದ್ದ ಪ್ರಭು ರಾಜರು ತಾಯಿಯ ನೆರಳಲ್ಲಿದವರು ಹಾಗೂ ಕರುಳಿನ ಸಂಬಂಧ ಗಾಡವಾಗಿತ್ತು. ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿದ ಅವರಿಗೆ ತಾಯಿಯಿಂದ ದೂರಿರುವುದು ಬಹಳ ಅಸಹನಿಯವಾಗಿತ್ತು ಹಿಂಸೆ ಕೊಡಲಾರಂಭಿಸಿತ್ತು …. ತಾಯಿಗೆ ಪತ್ರ ಬರೆದು ಹಿಂತಿರುಗಿ ಬರುವುದಾಗಿ ಒತ್ತಾಯಿಸುತ್ತಿದ್ದರು. ಮನೆಯಲ್ಲಿ ಇದ್ದಾಗ ಕೂಡ ಪ್ರಭುರಾಜರಿಗೆ ತಾಯಿಯವರು ಅವನ ಸಮೀಪದಲ್ಲಿ ಇದ್ದರೆ ಮಾತ್ರ ಮನಸ್ಸಿಗೆ ಶಾಂತಿ….ತಾಯಿ ಕಣ್ಣೆದುರಿನಿಂದ ಸ್ವಲ್ಪ ದೂರವಾದರೂ ಅವನ ಹೃದಯ ಖಾಲಿಯಾಗಿಬಿಡುತ್ತಿತ್ತು. ಇನ್ನು ದೂರದ ಊರಲ್ಲಿ ಇದ್ದರೆ ಕೇಳಬೇಕೆ ಅವರ ಸ್ಥಿತಿ ಹೇಳಲಾಗಿತ್ತುಶಾಲೆಯಲ್ಲಿ ಕುಳಿತಿದ್ದರು ಪ್ರಭುರಾಜ್ ಮನಸ್ಸು ಅಲ್ಲಿ ನೆಲಸಲೇ ಇಲ್ಲ. ಸುತ್ತಲೂ ವಿದ್ಯಾರ್ಥಿಗಳು ಕುಳಿತು ಶಿಕ್ಷಕರು ಪಾಠ ಮಾಡುತ್ತಿದ್ದರೆ ಅವನ ಕಿವಿಯಲ್ಲಿ ಕೇಳಿಸುತ್ತಿದ್ದದ್ದು ತಾಯಿಯ ಧ್ವನಿಯೇ. ಊಟಕ್ಕೆ ಕೂತರೂ ತಾಯಿಯ ಕೈತುತ್ತಿನ ನೆನಪು, ರಾತ್ರಿ ಮಲಗಿದರೂ ತಾಯಿಯ ಮುಖವೇ ಕಣ್ಣಮುಂದೆ ತೇಲುತ್ತಿತ್ತು. ದಿನದಿಂದ ದಿನಕ್ಕೆ ತಾಯಿಯ ನೆನಪು ಅವನ ಮನಸ್ಸನ್ನು ಕಾಡಲಾರಂಭಿಸಿತು …..!!ಪ್ರಿಯ ಓದುಗರೆಇದೆಲ್ಲಾ ಏನೋ ನಾನು ಅತಿಶೋಯುಕ್ತಿಯಾಗಿ ಬರೆಯುತ್ತಿದ್ದೇನೆ ಅಂತ ಏನು ತಿಳಿಯಬೇಡಿ…. ಪ್ರಭು ರಾಜರ ತಾಯಿಯ ಮೇಲಿದ್ದ ಅಗಾಧವಾದ ಪ್ರೀತಿ ಯಾವದಕ್ಕೂ ಸಾಟಿಯಾಗದು….!!!!ಏನು ಹೇಳಿದರೂ ತಾಯಿಯು ಯಾವುದಕ್ಕೂ ಒಪ್ಪದಾದಾಗ ಕೊನೆಗೆ ತಾಳಲಾರದೆ ತಾಯಿಗೆ ಪತ್ರ ಬರೆದನು.“ಅವ್ವಾ… ನನಗೆ ಇಲ್ಲಿ ಇರಲು ಆಗುತ್ತಿಲ್ಲ. ನಿಮ್ಮನ್ನು ಬಿಟ್ಟು ಒಂದು ಕ್ಷಣವೂ ಇರಲಾಗುತ್ತಿಲ್ಲ. ನಾನು ಹಿಂದಿರುಗಿ ಬರುತ್ತೇನೆ. ಇಲ್ಲವಾದರೆ ಇಲ್ಲಿಯೇ ಗುಡ್ಡು ಪರ್ವತಗಳನ್ನು ಏರಿ, ಬಿದ್ದು ಸಾಯ್ತೀನಿ…” ಎಂದು ಕಣ್ಣೀರಿನಿಂದ ಬರೆದ ಆ ಮಾತುಗಳಲ್ಲಿ ಮಗನ ಅತಿಯಾದ ಮಮತೆ ಮತ್ತು ಅಧೈರ್ಯ ಎರಡೂ ತುಂಬಿಕೊಂಡಿದ್ದವು.ಆ ಪತ್ರ ಓದಿದ ತಾಯಿಯವರು ಕ್ಷಣಕಾಲ ಮೌನವಾಗಿದ್ದರು. ಮಗನ ಪ್ರೀತಿಯ ತೀವ್ರತೆ ಅವರಿಗೆ ಗೊತ್ತಿತ್ತು. ಆದರೆ ಜೀವನವೆಂದರೆ *ಕೇವಲ ಭಾವನೆಗಳಿಗೆ ತಲೆಬಾಗುವುದಲ್ಲ, ಧೈರ್ಯದಿಂದ ಎದುರಿಸುವ ಪಥ ಎನ್ನುವರು…… *ಕಣ್ಣೊಳಗಿನ ಕಸ |ಸಣ್ಣಾಗಿದ್ದರೆ ಏನುಕಣ್ಣು ಚುಚ್ಚಿ ನೀರು ಸುರಿವುದು- ಮಾಯೆಯುಸಣ್ಣಲ್ಲ ಕಣ್ಣಿನ ವಿಸ್ತಾರ ||* ಈ ರೀತಿಯ ಮನಸ್ಸಿನ ಪ್ರವೃತ್ತಿಯು ಚಿಕ್ಕದಲ್ಲ ಅನ್ನುವುದು ಅರ್ಥವಾಯಿತು ಹೀಗಾಗಿ ತಾಯಿಗೆ ಕಠಿಣವಾದರೂ ಜೀವನದ ಪಾಠವಾಗುವ ಉತ್ತರ ಬರೆದರು… *ಬಾಳಿನಲ್ಲಿ ಕೆಟ್ಟ |ಕೀಳತನಕ್ಕೆ ಜಾಗಎಳ್ಳಿನ ಮನೆಯಷ್ಟು ಕೊಡದಿರು- ನಿನ್ನಲ್ಲಿಒಳ್ಳೆತನದಿ ಗಟ್ಟಿತನವು ಬೆಳೆಯಲಿ||* ಎನ್ನುತ….. ಹೀಗೆ ಬರೆದರು“ನನ್ನ ಹೊಟ್ಟೆಯಲ್ಲಿ ಹುಟ್ಟಿದವನು ಇಂಥ ಹೇಡಿಯೇ.. ಇಂಥ ಅಧೈರ್ಯ ಹೇಗೆ ಬಂತು? ಜೀವನದಲ್ಲಿ ಸಾಧನೆ ಮಾಡಲು ದೂರದ ಊರಿಗೆ ಹೋದರೆ ಕಷ್ಟಗಳು ಬರುತ್ತವೆ, ಏಕಾಂತ ಕಾಡುತ್ತದೆ. ಅದಕ್ಕೆ ಓಡಿ ಮನೆಗೆ ಬರಬೇಕೆಂದರೆ ಬದುಕಿನಲ್ಲಿ ಏನನ್ನೂ ಸಾಧಿಸಲಾಗದು. ಧೈರ್ಯವಾಗಿ ನಿಂತು ಹೋರಾಡಬೇಕು.‘ನಾನು ಅಲ್ಲೇ ಬಿದ್ದು ಸಾಯ್ತೀನಿ’ ಅಂತ ಹೇಳುವಷ್ಟು ದುರ್ಬಲನಾಗಿ ನನ್ನ ಮಗ ಹುಟ್ಟಿಲ್ಲ.ಸಾಯಬೇಕೆಂದರೆ ಅಲ್ಲೇ ಸಾಯಿ… ಆದರೆ ಓಡಿ ಬರುವ ಹೇಡಿತನದ ಮಾತು ಬೇಡ!” ಎಂದು ಕಡಾ ಖಂಡಿತವಾಗಿ ಪತ್ರವನ್ನು ಬರೆದರು. *ಹಿರಿಯರಲ್ಲಿ ಶ್ರದ್ಧೆ |ಸ್ಥಿರವಾಗಿ ಇರಲಿಹರಕೆ ಕೊಡುವವರು ನಿನಗೆ -ಈ ಮಾತುಪರಕಿಸಿ ನೋಡು ಬಾಳಲಿ ||*ಎನ್ನುವಂತೆ ತಾಯಿಯವರ ಆ ಮಾತುಗಳು ಪ್ರಭುರಾಜ್ ಹೃದಯಕ್ಕೆ ಮಿಂಚಿನಂತೆ ತಾಕಿದವು. ಮೊದಲಿಗೆ ಅವರ ಕಣ್ಣು ತುಂಬಿ ಬಂದರೂ, ತಾಯಿಯವರ ಮಾತಿನೊಳಗಿನ ಕಠೋರ ಪ್ರೀತಿಯನ್ನು ಅವರು ಅರ್ಥ ಮಾಡಿಕೊಂಡರು.ಆ ದಿನದಿಂದ ತನ್ನ ಕಲಿಕೆಯಲ್ಲಿ ಶ್ರದ್ಧೆಯಿಂದ ಓದಲಾರಂಭಿಸಿದರು ಮುಂದೆ ಎಲ್ ಎಲ್ ಬಿ…. ಕಲಿತು ವಕೀಲರಾದರು.. ಮುಂದೆ ದೊಡ್ಡ ರಾಜಕಾರಣಿ ಕೂಡ ಆದರು…ಮಮಕಾರದ ತಾಯಿಯಾಗಿ ಜೀವನದ ಬಿರುಗಾಳಿಯನ್ನು ಎದುರಿಸಲು ಮಕ್ಕಳ ಮನಸ್ಸನ್ನು ಉಕ್ಕಿನಂತೆ ಗಟ್ಟಿಗೊಳಿಸುವ ಗುರು ಕೂಡಾ ಆಗಿದ್ದರು. ಹೀಗೆ ಅತ್ಯಂತ ಧೈರ್ಯದಿಂದ ಆಸ್ತಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ. ಸಿದ್ದರಾಮನ ಅಪ್ಪಟ ಭಕ್ತಿಯಾಗಿ, ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಹೊಂದಿದ ತಾಯಿಯವರು ಬಹಳ ಸುಭದ್ದವಾಗಿ ಭಧ್ಧತೆಯಿಂದ ತಾಯಿತನದ ಜವಾಬ್ದಾರಿಯನ್ನು, ಆಸ್ತಿಯ ಮಾಲೀಕತ್ವತೆಯನು ಹಾಗೂ ಜನ ಸೇವಕಿಯಾಗಿ ಕೆಲಸ ನಿರ್ವಹಿಸಲಾರಂಭಿಸಿದರು…. ಬಹಳ ಜನರು “ಹೆಂಗಸು ಒಬ್ಬಳೇ ಇಷ್ಟು ದೊಡ್ಡ ಜವಾಬ್ದಾರಿ ನಿಭಾಯಿಸಲಾರಳು” ಎಂದು ಮಾತಾಡಿದವರಿಗೆ ಉತ್ತರವಾಗಿ ತಮ್ಮ ಬದುಕನ್ನು ಬದುಕಿ ತೋರಿಸಿದರು.ಅವರ ಜೀವನ ಒಂದು ಅಳಲಿನ ಕಥೆಯನು ಒರಸಿ ಅದು ತಾಯಿತನದ ಮಹಾಕಾವ್ಯವನು ಬರೆದರು. *ದುಃಖ ದುಮ್ಮಾನಗಳು |ಸಿಕ್ಕಿ ಒದ್ದಾಡದಿರುಸುಖ ಬಂದಿತ್ತೆಂದು ಹಿಗ್ಗದಿರು -ಮನವೇಸುಖ ದುಃಖ ಅರ್ಪಿಸು ಶಿವನಡಿಗೆ ||*ಎಂದು ಬಾಳನು ಆರಂಭಿಸಿದರು. ಸವಿತಾ ದೇಶಮುಖ್









