ಧಾರಾವಾಹಿ ಸಂಗಾತಿ-128 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಶಿಫಾರಸ್ಸಿನ ಪತ್ರ ಆ ಹುಡುಗಿಯ ಕಸಿನ್ ತನ್ನ ಕುಟುಂಬದವರಿಗೆ ಸುಮತಿಯ ಅನಾರೋಗ್ಯದ ಬಗ್ಗೆ ತಿಳಿಸಿದನು. ಸುಮತಿಯ ಅನಾರೋಗ್ಯದ ಬಗ್ಗೆ ತಿಳಿದು ಕುಟುಂಬದ ಎಲ್ಲರಿಗೂ ಬಹಳ ದುಃಖವಾಯಿತು. ಸುಮತಿಯ ಮಗಳಿಗೆ ಊಟವನ್ನು ಬಡಿಸುವಂತೆ ಅತ್ತಿಗೆಗೆ ಹೇಳಿ ತಮ್ಮ ಹಿತ್ತಲ ತೆಂಗಿನ ಮರದಿಂದ ನಾಲ್ಕೈದು ಎಳನೀರನ್ನು ಕೆಲಸಗಾರರಿಗೆ ಹೇಳಿ ಕೊಯ್ಯಿಸಿ, ತಾನೂ ಊಟ ಮಾಡಿ…. “ಬಾ ಆಸ್ಪತ್ರೆಗೆ ಹೋಗೋಣ…. ಎಂದು ಆ ಹುಡುಗಿಗೆ ಹೇಳುತ್ತಾ,…. “ಅಮ್ಮಾ ….ನಾನು ಅತ್ತೆಯನ್ನು ನೋಡಲು ಹೋಗಿ ಬರುತ್ತೇನೆ”…. ಎಂದಾಗ ಬಾಗಿಲ ಬಳಿ ಬಂದ ಆತನ ಅತ್ತಿಗೆ…. “ಅತ್ತೆಗೆ ಹೇಳು, ನಾಳೆ ನಾನು ಅಣ್ಣ ಜೊತೆಗೆ ಆಸ್ಪತ್ರೆಗೆ ಅತ್ತೆಯನ್ನು ನೋಡಲು ಬರುತ್ತೇವೆ …. ಎಂದು ಹೇಳಿ ಅವರಿಬ್ಬರನ್ನೂ ಬೀಳ್ಕೊಟ್ಟರು. ದಾರಿಯುದ್ದಕ್ಕೂ ಮೌನವಾಗಿದ್ದ ಹುಡುಗಿಯನ್ನು ಆತ ಮಾತಿಗೆಳೆಯುತ್ತಲೇ ಇದ್ದ. ಅತ್ತೆಯ ಅನಾರೋಗ್ಯಕ್ಕೆ ಕಾರಣವೇನು ಎಂದು ಕೇಳಿದ. ಆತನ ಎಲ್ಲಾ ಪ್ರಶ್ನೆಗೂ ಚುಟುಕಾಗಿ ಉತ್ತರಿಸಿ ಆ ಹುಡುಗಿ ಸುಮ್ಮನಾಗುತ್ತಿದ್ದಳು. ಆಸ್ಪತ್ರೆಯನ್ನು ತಲುಪಿ ಇಬ್ಬರೂ ವಾರ್ಡ್ ಒಳಗೆ ಪ್ರವೇಶಿಸಿದಾಗ, ಸುಮತಿಯ ಹಿರಿಯ ಮಗಳು ತನ್ನ ಪುಟ್ಟ ಮಕ್ಕಳೊಂದಿಗೆ ವಾರ್ಡಿನಲ್ಲಿ ಸುಮತಿಯ ಬಳಿ ಕುಳಿತು ಮಾತನಾಡುತ್ತಿದ್ದಳು. ತನ್ನ ತಂಗಿಯ ಜೊತೆ ಕಸಿನ್ ಅನ್ನು ಕಂಡಾಗ ಈತ ಹೇಗೆ ಇಲ್ಲಿಗೆ ಬಂದ? ಎನ್ನುವಂತೆ ಅಕ್ಕ ತಂಗಿಯೆಡೆಗೆ ಪ್ರಶ್ನಾರ್ಥಕ ನೋಟ ಬೀರಿದಳು. ಅದಕ್ಕೆ ತಂಗಿ ಆಮೇಲೆ ಹೇಳುತ್ತೇನೆ ಎಂದು ಸನ್ನೆ ಮಾಡಿದಳು….”ಅಮ್ಮಾ ….ನೋಡು ಯಾರು ಬಂದಿದ್ದಾರೆ”…. ಎಂದು ತಾಯಿಯನ್ನು ಕೇಳಿದಳು. ಬಾಗಿಲ ಕಡೆಗೆ ಬೆನ್ನು ಹಾಕಿ ಕುಳಿತಿದ್ದ ಸುಮತಿ ಹಿಂದಕ್ಕೆ ತಿರುಗಿ ನೋಡಿದಳು. ಮಗಳ ಜೊತೆಗೆ ತನ್ನ ತಂದೆಯ ಅಕ್ಕನ ಮಗಳ ಎರಡನೇ ಮಗ ನಿಂತಿರುವುದು ಕಂಡಿತು. ಸುಮತಿಯ ಮುಖ ಖುಷಿಯಿಂದ ಅರಳಿತು…. “ಏನಪ್ಪಾ ಹೇಗಿದ್ದೀಯಾ? ಮನೆಯಲ್ಲಿ ಎಲ್ಲರೂ ಸೌಖ್ಯವೇ?”… ಎಂದು ಸುಮತಿ ಆತನನ್ನು ಕೇಳಿದಾಗ…. “ಎಲ್ಲರೂ ಸೌಖ್ಯ ಅತ್ತೆ…. ನೀವು ಹೇಗಿದ್ದೀರಿ?… ಬೆಳಗ್ಗೆ ಇವಳು ಕಾಲೇಜಿಗೆ ತಡವಾಗಿ ಬಂದದ್ದು ಏಕೆ ಎಂದು ಕೇಳಿದೆ… ಆಗ ನೀವು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದು ತಿಳಿಯಿತು…. ಹಾಗಾಗಿ ನಾನೂ ಜೊತೆಗೆ ಬರುತ್ತೇನೆ ಎಂದು ಹೇಳಿದೆ…. ಈಗ ನಿಮ್ಮ ಆರೋಗ್ಯ ಹೇಗಿದೆ?…. ಡಾಕ್ಟರ್ ಏನು ಹೇಳಿದರು?”…. ಎಂದು ಸುಮತಿಯನ್ನು ಕೇಳುತ್ತಾ, ಕೈಯಲ್ಲಿ ಹಿಡಿದಿದ್ದ ಎಳನೀರುಗಳ ಕಾಯಿಯನ್ನು ಮಂಚದ ಪಕ್ಕದಲ್ಲಿ ಇದ್ದ ಕಿಟಕಿಯ ಬಳಿ ಇಟ್ಟ…. “ಪರವಾಗಿಲ್ಲಪ್ಪಾ…. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಮಗಳಿಗೆ ಡಾಕ್ಟರ್ ತಿಳಿಸಿದ್ದಾರೆ”…. ಎಂದು ತನ್ನ ಎರಡನೇ ಮಗಳ ಮುಖವನ್ನು ನೋಡುತ್ತಾ ಸುಮತಿ ಹೇಳಿದಳು. ಅವಳು ‘ಹೌದು’ ಎನ್ನುವಂತೆ ತಲೆ ಆಡಿಸಿದಳು….. “ಹಾಗಾದರೆ ಬೆಂಗಳೂರಿಗೆ ಹೋಗಿ ಬನ್ನಿ ಅತ್ತೆ…. ಅಲ್ಲಿ ಒಳ್ಳೆಯ ಆಸ್ಪತ್ರೆಗಳು ಇವೆ…. ನಿಮಗೆ ಸರಿಯಾದ ಚಿಕಿತ್ಸೆಯೂ ದೊರಕುತ್ತದೆ”… ಎಂದು ಹೇಳಿ, ಸುಮತಿಯ ಹಿರಿಯ ಮಗಳನ್ನು ಉದ್ದೇಶಿಸಿ…. “ನೀನು ಯಾವಾಗ ಬಂದೆ?”…. ಎಂದು ಕೇಳುತ್ತಾ, ಅವಳ ಇಬ್ಬರು ಮುದ್ದಾದ ಮಕ್ಕಳ ತಲೆಯನ್ನು ನೇವರಿಸಿದ…. “ನಾನು ಬಂದು ಸ್ವಲ್ಪ ಹೊತ್ತಾಯ್ತು”… ಎಂದಳು. ಉಭಯ ಕುಶಲೊಪರಿಯ ನಂತರ ಆತ ಹೊರಡಲನುವಾದ. ಹೊರಡುವ ಮುನ್ನ ನಾಳೆ ತನ್ನ ಅಣ್ಣ ಮತ್ತು ಅತ್ತಿಗೆ ಬರುವುದಾಗಿ ತಿಳಿಸಿದ್ದಾರೆ ಎಂಬುದನ್ನು ಹೇಳಲು ಆತ ಮರೆಯಲಿಲ್ಲ. ಸುಮತಿಯ ಎರಡನೇ ಮಗಳು ಆತನ ಜೊತೆಗೆ ವಾರ್ಡಿನಿಂದ ಹೊರಗೆ ಅಷ್ಟು ದೂರ ಬೀಳ್ಕೊಡಲು ಬಂದಳು. ತನ್ನ ಅಮ್ಮನನ್ನು ನೋಡಲು ಬಂದಿದ್ದಕ್ಕಾಗಿ ಮತ್ತು ಎಳನೀರುಗಳನ್ನು ತಂದಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದಳು. ಆತ ಮುಗುಳ್ನಗುತ್ತಾ…. “ಸರಿ ಹೊರಡುತ್ತೇನೆ…. ನೀನು ಹೆಚ್ಚು ಆಲೋಚನೆ ಮಾಡಬೇಡ…. ಅತ್ತೆಯ ಆರೋಗ್ಯ ಸರಿಯಾಗುತ್ತದೆ”… ಎಂದು ಹೇಳಿ ಮನೆಯ ಕಡೆಗೆ ನಡೆದನು. ಆ ಹುಡುಗಿ ವಾರ್ಡಿಗೆ ಹಿಂದಿರುಗಿದಳು. ವಾರ್ಡಿಗೆ ಹಿಂತಿರುಗಿದ ತಂಗಿಯನ್ನು ಉದ್ದೇಶಿಸಿ…. “ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾ?…. ನೀನು ನನಗೆ ಈ ಬಗ್ಗೆ ತಿಳಿಸಲೇ ಇಲ್ಲ”… ಎಂದಳು….” ಹೌದು ಅಕ್ಕಾ”…. ಎಂದು ಉತ್ತರಿಸಿದಳು…. “ಬೆಂಗಳೂರಿಗೆ ಹೋಗಬೇಕಾದರೆ ಮತ್ತು ಅಲ್ಲೇ ಚಿಕಿತ್ಸೆಯನ್ನು ಪಡೆಯಬೇಕಾದರೆ ಹೆಚ್ಚಿನ ಹಣ ಖರ್ಚಾಗುತ್ತದೆ ಅಲ್ಲವೇ?…. ನಮ್ಮಲ್ಲಿ ಯಾರಲ್ಲೂ ಅಷ್ಟೊಂದು ಹಣವಿಲ್ಲ…. ಏನು ಮಾಡುವುದು?”… ಎಂದು ಚಿಂತಿತಳಾಗಿ ತಂಗಿಯನ್ನು ಕೇಳಿದಳು…. “ನೀನೇನೂ ಹೆಚ್ಚು ಆಲೋಚಿಸಬೇಡ ಅಕ್ಕಾ…. ನಾನಾಗಲೇ ನಮ್ಮ ಎಸ್ಟೇಟಿನ ಸಾಹುಕಾರರು ಹಾಗೂ ಅವರ ಪತ್ನಿಯ ಬಳಿ ಮಾತನಾಡಿದ್ದೇನೆ…. ಅಮ್ಮನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ”…. ಎಂದಳು. “ಒಬ್ಬಳೇ ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಹೇಗೆ ಹೋಗುತ್ತೀಯಾ?”…. ಎಂದು ಅಕ್ಕ ಕೇಳಿದಾಗ…. ಇಂದು ಸಂಜೆ ನಾನು ನಿಮ್ಮ ಮನೆಗೆ ಬಂದು ಈ ವಿಷಯವನ್ನು ತಿಳಿಸಿ, ನಮ್ಮ ಜೊತೆಗೆ ಬಾವನನ್ನು ಬೆಂಗಳೂರಿಗೆ ಬರುವಂತೆ ಕೇಳಿಕೊಳ್ಳಬೇಕೆಂದಿದ್ದೆ…. ಈಗ ನೀನೇ ಇಲ್ಲಿಗೆ ಬಂದಿದ್ದು ತುಂಬಾ ಒಳ್ಳೆಯದಾಯಿತು…. ದಯವಿಟ್ಟು ನಮ್ಮ ಜೊತೆ ಬಾವ ಬರುವಂತೆ ವಿನಂತಿಸು ಅಕ್ಕ”…. ಎಂದಾಗ…. “ಏನೇ ಹೀಗೆ ಹೇಳ್ತಾ ಇದ್ದೀಯಾ…. ಬಾವನೇನು ಹೊರಗಿನವರೇ?…. ಅಮ್ಮನ ಬಗ್ಗೆ ಅವರಿಗೂ ಕಾಳಜಿ ಇದೆ…. ನಿಮ್ಮಿಬ್ಬರನ್ನೇ ಅವರು ಬೆಂಗಳೂರಿಗೆ ಕಳುಹಿಸುತ್ತಾರೆಯೇ?…. ಖಂಡಿತಾ ಬಂದೇ ಬರುತ್ತಾರೆ…. ಸ್ವಲ್ಪ ಹೊತ್ತಿನಲ್ಲೇ ನಿನ್ನ ಬಾವನೂ ಇಲ್ಲಿಗೆ ಬರುತ್ತಾರೆ.”… ಎಂದಳು. ಅಕ್ಕ ಈಗ ಬಂದಿದ್ದು ಒಳ್ಳೆಯದಾಯಿತು ಎನಿಸಿತು ತಂಗಿಗೆ. ಸಂಜೆ ಬಾವ ಬಂದರೆ ಡಾಕ್ಟರನ್ನು ಭೇಟಿ ಮಾಡಿ ತಾಯಿಯನ್ನು ಇಲ್ಲಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಹೋಗುವ ಬಗ್ಗೆ ಮಾತನಾಡಬಹುದು ಎಂದು ಮನದಲ್ಲಿ ಅಂದುಕೊಂಡಳು. ತಾಯಿ ಮತ್ತು ಮಕ್ಕಳು ಮಾತನಾಡುತ್ತಾ ಕುಳಿತಿರುವಾಗಲೇ ಸುಮತಿಯ ಅಳಿಯ ಬಂದ. ಹಿರಿಯ ಮಗಳು ಎಲ್ಲ ವಿಷಯವನ್ನೂ ತನ್ನ ಗಂಡನಿಗೆ ತಿಳಿಸಿದಳು. ನಾನು ನಿಮ್ಮ ಜೊತೆ ಬೆಂಗಳೂರಿಗೆ ಬರುತ್ತೇನೆ ಎಂದು ಅಳಿಯ ಭರವಸೆ ನೀಡಿದನು. ಸಂಜೆ ಸುಮತಿಯ ಚಿಕಿತ್ಸೆ ಮಾಡುತ್ತಿರುವ ಫಿಜಿಷಿಯನ್ ರನ್ನು ಕಂಡು ಸುಮತಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದಾಗ, ಅವರಿಗೂ ಬಹಳ ಸಂತೋಷವಾಯಿತು. ಆದಷ್ಟು ಬೇಗ ಬೆಂಗಳೂರಿಗೆ ಕರೆದುಕೊಂಡು ಹೋಗಿ ಉತ್ತಮ ಚಿಕಿತ್ಸೆಯನ್ನು ಕೊಡಿಸಿ ಎಂದು ಹೇಳಿ, ಬೆಂಗಳೂರಿನ ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ವೈದ್ಯರಿಗೆ ಒಂದು ಶಿಫಾರಸ್ಸಿನ ಪತ್ರವನ್ನು ಬರೆದು ತಮ್ಮ ಸಹಿ ಹಾಕಿ ಕೊಟ್ಟರು.
ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…”
ಕಾವ್ಯ ಸಂಗಾತಿ ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…” ಅಮ್ಮನ ಮಡಿಲ ಅಗಲಿಶಾಲೆಯಂಗಳದಿ ಕಾಲಿಟ್ಟಾಗನನ್ನಂತೆ ಅಳುವ ಅವನ ನೋಡಿಸಮಾನ ದುಃಖಿಗಳೆಂದು..ಗೆಳೆಯರನ್ನು ಕೂಡಿಸುತ್ತಾ ಹೋದೆವುಗೆಳೆತನದ ಅರ್ಥ ತಿಳಿದೆವು… ಶಾಲೆ.. ಕಾಲೇಜುಗಳಲ್ಲಿಪಾಠಗಳಿಗಿಂತಲೂ…ನಮ್ಮನ್ನು ಹಿಡಿದಿಟ್ಟಿದ್ದುಇದೇ ಬಾಂಧವ್ಯವಲ್ಲವೇ..ಅದನ್ನು ಗುಣಿಸಿ ಗುಣಿಸಿವಿಶಾಲಾರ್ಥವ ನೀಡಿದೆವು… ಅದೇಕೋ.. ಜವಾಬ್ದಾರಿಯಮೂಸೆಯೊಳಗೆ..ಒತ್ತಡ,ಸಮಯದಭಾವ ಪದಗಳ ನೂಕಿಸ್ನೇಹ ಬಂಧವನು ಕಳೆಯುತ್ತಾ..ಅದರ ಸೊಗಸನು ಮನದ ಮೂಲೆಗೆ ತಳ್ಳಿಬಿಟ್ಟೆವು… ಇಳಿವಯಸ್ಸಿನ ಸಂಜೆಯೊಳುಅದೇ ಬಾಲ್ಯಾವಸ್ಥೆಯ ಸ್ನೇಹದ ನೆನಪುಮನಸ್ಸಿಗೆ ರಂಗು ತುಂಬಲು ಹಾತೊರೆಯುತ್ತದೆ..ಆದರೆ ಭಾಗಾಕಾರದ ಲೆಕ್ಕದಲಿ..ನಾವು ಶೇಷವಾಗಿರುತ್ತೇವೆ ಅಷ್ಟೇ…ಸ್ನೇಹವೂ ಒಂದು ಲೆಕ್ಕ..ಅಲ್ಲವೇ… ಗಂಗಾ ಚಕ್ರಸಾಲಿ
ಗಂಗಾ ಚಕ್ರಸಾಲಿ “ಗೆಳೆತನವೂ..ಲೆಕ್ಕವೇ…” Read Post »
“ಅನೇಕಮ್ ಶಾಲೆಯಮಕ್ಕಳು ಬರೆದ ಕನ್ನಡ ಬರಹಗಳು”ಡಾ. ಮಮತ, ಶಿಕ್ಷಕರು,ಅನೇಕಮ್ ಬೆಂಗಳೂರು
ಮಕ್ಕಳ ಸಂಗಾತಿ ಡಾ. ಮಮತ, ಶಿಕ್ಷಕರು, ಅನೇಕಮ್ ಬೆಂಗಳೂರು “ಅನೇಕಮ್ ಶಾಲೆಯ ಮಕ್ಕಳು ಬರೆದ ಕನ್ನಡ ಬರಹಗಳು” ಮರದ ಮಹತ್ವ ಒಂದು ಹಳ್ಳಿಯಲ್ಲಿ ಅನಿಕೇತ್ ಎಂಬ ಬಾಲಕನಿದ್ದನು. ಅವನು ಪ್ರತಿದಿನ ಶಾಲೆಗೆ ಹೋಗುವಾಗ ಒಂದು ದೊಡ್ಡ ಮಾವಿನ ಮರದ ಕೆಳಗೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದನು. ಒಂದು ದಿನ ಆ ಮರದ ಕೆಳಗೆ ಒಂದು ಚಿಕ್ಕ ಗಿಡ ಒಣಗುತ್ತಿರುವುದನ್ನು ಅವನು ಗಮನಿಸಿದನು. ಅದನ್ನು ಕಂಡ ಅನಿಕೇತ್ಗೆ ತುಂಬಾ ಬೇಸರವಾಯಿತು. ಆ ದಿನದಿಂದ ಪ್ರತಿದಿನ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಹಿಂದಿರುಗುವಾಗ ಆ ಗಿಡಕ್ಕೆ ನೀರು ಹಾಕಿ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದನು. ಕೆಲವು ವಾರಗಳ ನಂತರ ಆ ಗಿಡ ಹಸಿರಾಗಿ ಬೆಳೆದು ದೊಡ್ಡ ಮರವಾಯಿತು. ಅದರ ನೆರಳಿನಲ್ಲಿ ಪಕ್ಷಿಗಳು ಗೂಡು ಕಟ್ಟಿದವು. ದಾರಿಹೋಕರು ಅದರ ತಂಪಾದ ನೆರಳಿನಲ್ಲಿ ವಿಶ್ರಾಂತಿ ಪಡೆಯತೊಡಗಿದರು. ಒಂದು ದಿನ ಪಂಚಾಯಿತಿಯವರು ರಸ್ತೆ ವಿಸ್ತರಣೆಗಾಗಿ ಆ ಮರವನ್ನು ಕಡಿಯಲು ಬಂದರು. ಆಗ ಊರಿನ ಜನರು ಆ ಮರದ ಮಹತ್ವವನ್ನು ತಿಳಿಸಿ, ಅದನ್ನು ಕಡಿಯಬಾರದೆಂದು ಮನವಿ ಮಾಡಿದರು. ಜನರ ಮನವಿಯನ್ನು ಗೌರವಿಸಿದ ಪಂಚಾಯಿತಿಯವರು ಮರವನ್ನು ಉಳಿಸಲು ನಿರ್ಧರಿಸಿದರು. ಈ ವಿಷಯವನ್ನು ತಿಳಿದ ಅನಿಕೇತ್ ತುಂಬಾ ಸಂತೋಷಪಟ್ಟನು. ತಾನು ಪ್ರೀತಿಯಿಂದ ಬೆಳೆಸಿದ ಗಿಡ ಇಂದು ದೊಡ್ಡ ಮರವಾಗಿ ಅನೇಕರಿಗೆ ನೆರಳು, ಆಶ್ರಯ ಮತ್ತು ಸಂತೋಷ ನೀಡುತ್ತಿರುವುದನ್ನು ಕಂಡು ಹೆಮ್ಮೆಪಟ್ಟನು. ಆಗಿನಿಂದ ಅವನು ಇನ್ನೂ ಹೆಚ್ಚು ಮರಗಳನ್ನು ನೆಡುವ ಸಂಕಲ್ಪ ಮಾಡಿದರು. ನೀತಿ: ಒಂದು ಮರ ನೂರಾರು ಜೀವಗಳಿಗೆ ಆಸರೆಯಾಗುತ್ತದೆ. ಆದ್ದರಿಂದ ಮರಗಳನ್ನು ನೆಟ್ಟು, ಬೆಳೆಸಿ, ಕಾಪಾಡೋಣ .ಮೋನಿಶ್7 ನೇ ತರಗತಿಅನೇಕಮ್ ಶಾಲೆಬೆಂಗಳೂರು ಹಸಿರು ಲೋಕದ ಸಿರಿ ನನಗೆ ಪ್ರಕೃತಿ ತುಂಬಾ ಇಷ್ಟ. ಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿ, ಹಸಿರು ಮರಗಳು, ಬಣ್ಣ ಬಣ್ಣದ ಹೂಗಳು ಮತ್ತು ತಂಪಾದ ಗಾಳಿ ನನಗೆ ತುಂಬಾ ಸಂತೋಷವನ್ನು ನೀಡುತ್ತವೆ. ಪ್ರಕೃತಿಯ ಸೌಂದರ್ಯ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಮರಗಳು ನಮಗೆ ಶುದ್ಧ ಗಾಳಿಯನ್ನು ನೀಡುತ್ತವೆ. ನದಿಗಳು, ಕೆರೆಗಳು ಮತ್ತು ಮಳೆಯ ನೀರು ನಮ್ಮ ಜೀವನಕ್ಕೆ ಆಧಾರವಾಗಿವೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಔಷಧೀಯ ಸಸ್ಯಗಳು ಪ್ರಕೃತಿಯ ಅಮೂಲ್ಯ ಕೊಡುಗೆಗಳಾಗಿವೆ. ಪ್ರಕೃತಿ ನಮಗೆ ಶುದ್ಧ ಗಾಳಿ, ನೀರು ಮತ್ತು ಆಹಾರವನ್ನು ನೀಡುತ್ತದೆ. ಆದ್ದರಿಂದ ನಾವು ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ನಾನೂ ಮರಗಳನ್ನು ನೆಡುತ್ತೇನೆ. ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸುತ್ತೇನೆ. ನನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುತ್ತೇನೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ. ಇತರರಿಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸುತ್ತೇನೆ. ಪ್ರಕೃತಿಯನ್ನು ಪ್ರೀತಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಕೃತಿ ಚೆನ್ನಾಗಿದ್ದರೆ ನಮ್ಮ ಜೀವನವೂ ಆರೋಗ್ಯಕರ, ಸುಂದರ ಮತ್ತು ಸಂತೋಷಕರವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಹಸಿರು ಭೂಮಿಯನ್ನು ಉಳಿಸಬೇಕು. ನೀತಿ: ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಜೀವಿತ8 ನೇ ತರಗತಿಅನೇಕಮ್ ಶಾಲೆಬೆಂಗಳೂರು ಜವಾಬ್ದಾರಿಯ ಮಹತ್ವ ಶಾಂತಿನಗರ ಎಂಬ ಊರಿನಲ್ಲಿ ಒಂದು ಕುಟುಂಬ ವಾಸಿಸುತ್ತಿತ್ತು. ಆ ಕುಟುಂಬದಲ್ಲಿ ಒಬ್ಬ ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಇದ್ದರು. ಆ ಇಬ್ಬರು ಮಕ್ಕಳ ಹೆಸರು ಪ್ರಿಯಾ ಮತ್ತು ಶ್ವೇತ. ಅವರು ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅಜ್ಜಿ ಮನೆ ಕೆಲಸದ ಜೊತೆಗೆ ಕೈತೋಟದ ಕೆಲಸವನ್ನೂ ಮಾಡುತ್ತಿದ್ದರು. ಒಂದು ದಿನ ಅಜ್ಜಿ ತಾನು ಸಂಪಾದಿಸಿದ ಹಣದಿಂದ ಮಕ್ಕಳೊಂದಿಗೆ ಸಂತೆಗೆ ಹೋದರು. ಅಜ್ಜಿ ಇಬ್ಬರಿಗೂ ತಲಾ ೫೦೦ ರೂಪಾಯಿ ನೀಡಿ, ಮನೆಯ ದಿನಸಿ ಸಾಮಾನುಗಳನ್ನು ತಂದುಕೊಡಲು ಹೇಳಿದರು. ಪ್ರಿಯಾ ಅಜ್ಜಿ ಹೇಳಿದಂತೆ ಬೇಕಾದ ಎಲ್ಲಾ ದಿನಸಿ ಸಾಮಾನುಗಳನ್ನು ಖರೀದಿಸಿ ಮನೆಗೆ ತಂದಳು. ಆದರೆ ಶ್ವೇತ ಅಜ್ಜಿ ಹೇಳಿದ ವಸ್ತುಗಳನ್ನು ತರದೆ, ತನ್ನ ಇಷ್ಟದ ವಸ್ತುಗಳನ್ನು ಖರೀದಿಸಿಕೊಂಡು ಬಂದಳು. ಇದನ್ನು ಕಂಡ ಅಜ್ಜಿಗೆ ತುಂಬಾ ದುಃಖವಾಯಿತು. ಆ ರಾತ್ರಿ ಅಜ್ಜಿ ಮತ್ತು ಪ್ರಿಯಾ ಸೇರಿ ಶ್ವೇತಳಿಗೆ ಹಣದ ಮೌಲ್ಯ ಹಾಗೂ ಜವಾಬ್ದಾರಿಯ ಮಹತ್ವವನ್ನು ತಿಳಿಸಿ ಬುದ್ಧಿ ಹೇಳಿದರು. ಮುಂದಿನ ಬಾರಿ ಸಂತೆಗೆ ಹೋದಾಗ ಅಜ್ಜಿ ಶ್ವೇತಳಿಗೆ ಸ್ವಲ್ಪ ಹಣ ನೀಡಿ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಲು ಹೇಳಿದರು. ಆಗ ಶ್ವೇತ ತನ್ನ ತಪ್ಪನ್ನು ಅರಿತುಕೊಂಡಳು. ಅಜ್ಜಿಯ ಬಳಿ ಕ್ಷಮೆ ಕೇಳಿ, ಇನ್ನು ಮುಂದೆ ಹಣವನ್ನು ಜಾಗರೂಕತೆಯಿಂದ ಬಳಸುವುದಾಗಿ ಮಾತು ಕೊಟ್ಟಳು. ನೀತಿ: ಹಣವನ್ನು ಜವಾಬ್ದಾರಿಯಿಂದ ಬಳಸಬೇಕು ಮತ್ತು ಹಿರಿಯರ ಮಾತನ್ನು ಗೌರವಿಸಬೇಕು. ಕವನ7 ನೇ ತರಗತಿಅನೇಕಮ್ ಶಾಲೆಬೆಂಗಳೂರು ನಮ್ಮೂರ ಕೆರೆ ಸುತ್ತಮುತ್ತಲಿನ ಊರುಗಳಲ್ಲಿ ಮುತ್ತಿನಂತಿರುವುದು ನಮ್ಮೂರಿನ ಕೆರೆ. ಕೆರೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುವ ಮರಗಳ ಸಾಲು. ಒಂದೊಂದು ಮರದಲ್ಲಿ ಹತ್ತಾರು ಗೂಡುಗಳು, ಪ್ರತಿಯೊಂದು ಗೂಡಿನಲ್ಲಿ ನೂರಾರು ಹಕ್ಕಿಗಳ ಕಲರವ. ಬೆಳ್ಳಿಯ ತಟ್ಟೆಯಂತೆ ಹೊಳೆಯುವ ನೀರು, ಮಿಂಚಿನ ಬಳ್ಳಿಯಂತೆ ತಲತಲ ಹೊಳೆಯುವ ಮೀನುಗಳು, ಕಪ್ಪೆಗಳ ಟರ್ರ್-ಟರ್ರ್ ಧ್ವನಿ – ಇವೆಲ್ಲವೂ ಕೆರೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕೆರೆಯ ಸುತ್ತ ಮೇವು, ಗಿಡಗಂಟಿಗಳು, ದನ-ಕರುಗಳಿಗೆ ಆಹಾರ, ಗಾಳಿಗೆ ತಲೆಯಾಡಿಸುವ ಹಸಿರು ಹುಲ್ಲು – ಇವೆಲ್ಲವೂ ಪ್ರಕೃತಿಯ ಸೊಬಗನ್ನು ಹೆಚ್ಚಿಸುತ್ತವೆ. ಆದರೆ ಕಾಲಕ್ರಮೇಣ ಕಾರ್ಖಾನೆಗಳ ತ್ಯಾಜ್ಯ, ಕೊಳಚೆ ನೀರು ಮತ್ತು ಪ್ಲಾಸ್ಟಿಕ್ ಕಸ ಕೆರೆಯಲ್ಲಿ ಸೇರಿ ನೀರು ಕಲುಷಿತವಾಯಿತು. ಕೆರೆ ಬತ್ತಿ, ಬಿರುಕು ಬಿಟ್ಟಿತು. ಇದನ್ನು ಕಂಡ ಊರಿನ ಜನರೆಲ್ಲ ಸಭೆ ಸೇರಿ ಕೆರೆಯನ್ನು ಉಳಿಸಲು ನಿರ್ಧರಿಸಿದರು. ಕಾರ್ಖಾನೆಗಳ ಕಲುಷಿತ ನೀರನ್ನು ಕೆರೆಗೆ ಬಿಡದಂತೆ ಕ್ರಮ ಕೈಗೊಂಡರು. ಪ್ಲಾಸ್ಟಿಕ್ ಬಳಕೆಗೆ ವಿದಾಯ ಹೇಳಿದರು. ಎಲ್ಲರೂ ಸೇರಿ ಕೆರೆಯನ್ನು ಸ್ವಚ್ಛಗೊಳಿಸಿ, ಮರಗಳನ್ನು ನೆಟ್ಟರು. ಕೆಲವೇ ದಿನಗಳಲ್ಲಿ ಕೆರೆ ಮತ್ತೆ ನೀರಿನಿಂದ ತುಂಬಿತು. ಹಸಿರು ಮರಗಳಲ್ಲಿ ಹಕ್ಕಿಗಳ ಹಾಡು ಮತ್ತೆ ಮೊಳಗತೊಡಗಿತು. ನೀತಿ:ನೀರು ಜೀವದ ಮೂಲ. ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ತಪ್ಪು ಮಾಡಿದವರು ನಾವೇ; ಅದನ್ನು ಸರಿಪಡಿಸುವ ಜವಾಬ್ದಾರಿಯೂ ನಮ್ಮದೇ. ತೇಜಸ್7ನೇ ತರಗತಿಅನೇಕಾಮ್ ಶಾಲೆಬೆಂಗಳೂರು. ಸ್ನೇಹದ ಪಯಣ ಆರನೇ ತರಗತಿಯಲ್ಲಿ ಅನು ಮತ್ತು ಮೀರಾ ಎಂಬ ಇಬ್ಬರು ಹುಡುಗಿಯರು ಮೊದಲ ಬಾರಿಗೆ ಭೇಟಿಯಾದರು. ಆರಂಭದಲ್ಲಿ ಅವರು ಒಬ್ಬರಿಗೊಬ್ಬರು ಪರಿಚಯವಿಲ್ಲದವರಾಗಿದ್ದರು. ಮೊದಲ ದಿನ ಸ್ವಲ್ಪ ನಾಚಿಕೆಪಟ್ಟು ಮಾತನಾಡಿದರೂ, ಕೆಲವೇ ದಿನಗಳಲ್ಲಿ ಉತ್ತಮ ಸ್ನೇಹಿತರಾದರು. ಅವರು ತರಗತಿಯಲ್ಲಿ ಓದಿನಲ್ಲಿ ಹಾಗೂ ಆಟಗಳಲ್ಲಿ ಆರೋಗ್ಯಕರ ಸ್ಪರ್ಧೆ ನಡೆಸುತ್ತಿದ್ದರು. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡರು. ಕೆಲವೊಮ್ಮೆ ತಮಾಷೆ ಮಾಡುತ್ತಿದ್ದರು, ಶಿಕ್ಷಕರಿಂದ ಬೈಗುಳವೂ ತಿನ್ನುತ್ತಿದ್ದರು. ಅವರ ನಡುವಿನ ಸ್ಪರ್ಧೆ ಎಷ್ಟೇ ಗಟ್ಟಿಯಾಗಿದ್ದರೂ, ಅದರ ಹಿಂದೆ ಪ್ರೀತಿ ಮತ್ತು ಪರಸ್ಪರ ಗೌರವ ಅಡಗಿತ್ತು. ಶಾಲೆಯ ಅಂತಿಮ ವರ್ಷದ ವಾರ್ಷಿಕೋತ್ಸವದಲ್ಲಿ ಇಬ್ಬರೂ ಒಬ್ಬರ ಸಾಧನೆಯನ್ನು ಮತ್ತೊಬ್ಬರು ಹೃತ್ಪೂರ್ವಕವಾಗಿ ಸಂಭ್ರಮಿಸಿದರು. ಆ ಕ್ಷಣ ಅವರ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಏಳನೇ ತರಗತಿಯಲ್ಲಿ ಅವರ ಸ್ನೇಹ ಮತ್ತಷ್ಟು ಗಾಢವಾಯಿತು. ತಮ್ಮ ಸಂತೋಷ, ದುಃಖ, ಕನಸುಗಳು ಹಾಗೂ ರಹಸ್ಯಗಳನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಅಗತ್ಯವಿದ್ದಾಗ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಆದರೆ ಎಂಟನೇ ತರಗತಿಗೆ ಬಂದಾಗ ಪರಿಸ್ಥಿತಿ ಬದಲಾಯಿತು. ಮೀರಾಗೆ ಶಾಲೆ ಬದಲಾಯಿಸಬೇಕಾದ ಕಾರಣ ಇಬ್ಬರೂ ಬೇರ್ಪಡಬೇಕಾಯಿತು. ಆ ದಿನ ಇಬ್ಬರ ಕಣ್ಣಲ್ಲೂ ಕಣ್ಣೀರು ತುಂಬಿತ್ತು. ಆದರೂ ಅವರ ಸ್ನೇಹ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಪ್ರತಿದಿನ ಸಂದೇಶಗಳು ಮತ್ತು ಮಾತುಕತೆಗಳ ಮೂಲಕ ಅವರು ತಮ್ಮ ಸ್ನೇಹವನ್ನು ಮುಂದುವರಿಸಿದರು. ವಯಸ್ಕರಾದ ಮೇಲೂ ಅವರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಜೀವನದ ಪ್ರತಿಯೊಂದು ಸಂತೋಷ, ದುಃಖ, ಗೆಲುವು, ಸೋಲು—ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಒಬ್ಬರಿಲ್ಲದೆ ಮತ್ತೊಬ್ಬರು ಇರಲಾರರು ಎಂಬಷ್ಟು ಆತ್ಮೀಯರಾಗಿದ್ದರು. ನೀತಿ:ನಿಜವಾದ ಸ್ನೇಹವು ಸ್ಪರ್ಧೆ, ದೂರ, ಕಾಲ ಮತ್ತು ಪರಿಸ್ಥಿತಿಗಳನ್ನೂ ಮೀರಿ ಸದಾ ಉಳಿಯುತ್ತದೆ. ಸತ್ಯ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ಕಟ್ಟಿದ ಸ್ನೇಹವೇ ಜೀವನದ ಅಮೂಲ್ಯ ಸಂಪತ್ತು. ಅರ್ಷಿಯಾ8ನೇ ತರಗತಿಅನೇಕಾಮ್ ಶಾಲೆಬೆಂಗಳೂರು ಅನೇಕಮ್ ಶಾಲೆ
“ಅನೇಕಮ್ ಶಾಲೆಯಮಕ್ಕಳು ಬರೆದ ಕನ್ನಡ ಬರಹಗಳು”ಡಾ. ಮಮತ, ಶಿಕ್ಷಕರು,ಅನೇಕಮ್ ಬೆಂಗಳೂರು Read Post »
ಟಿ.ಪಿ.ಉಮೇಶ್ ಕವಿತೆ “ಸ್ನೇಹದ ಹಬ್ಬ”
ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಸ್ನೇಹದ ಹಬ್ಬ” ಅಮ್ಮನ ಪ್ರೀತಿ ಮಮತೆಯ ನೆರಳುಅಪ್ಪನು ಕೊಟ್ಟ ಧೈರ್ಯದ ಬೆಳಕುಶಾಲೆಯಿಂದಲೇ ಸಾವಿರಾರು ನೆನಪುಗೆಳೆಯರೇ ನೀವು ನಮ್ಮ ಸಂಪತ್ತುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಬೆಂಚು ಹಂಚಿ ಕೂತ ದಿನಗಳುಪೆನ್ಸಿಲ್ ಕೊಟ್ಟು ಬರೆದ ಕ್ಷಣಗಳುಅಳುವಿನಲ್ಲೂ ನಗುವಿನಲ್ಲೂಜೊತೆಯಾಗಿ ನಿಂತ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಆಟದ ಮೈದಾನದಿ ಓಡಿದವರುಸೋತಾಗಲೆಲ್ಲ ಕೈಹಿಡಿದವರುಗೆದ್ದಾಗಲೆಲ್ಲ ಚಪ್ಪಾಳೆ ತಟ್ಟಿದವರುಅಂತರಂಗದ ಮಿತ್ರರೆ ನೀವೆಲ್ಲರುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಪುಸ್ತಕಗಳ ಪಾಠಗಳನ್ನೆಲ್ಲ ಕಲಿತುಜೀವನದಿ ಸರಿದಾರಿಯಲ್ಲಿ ನಡೆದುಒಳ್ಳೆಯ ಮಾತುಗಳನ್ನು ಕಲಿತುಒಡನಾಡಿಯಾಗಿ ನಾವು ಬೆಳೆದವರುಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಮಳೆ ಬಂದಾಗಲೆಲ್ಲ ಛತ್ರಿಯಾದೆಸುಡುಬಿಸಿಲ ಧಗೆಗೆಲ್ಲ ನೆರಳಾದೆಕತ್ತಲಿಗೆ ಬೆಳಗೊ ದೀಪವಾದನೀವೆಂದು ಬದುಕಿನ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಕಷ್ಟ ಬಂದಾಗ ಧೈರ್ಯ ತುಂಬಿನೋವು ಬಂದರೆ ಭುಜವ ನೀಡಿಬೀಳುವ ಕ್ಷಣಗಳಲ್ಲಿ ಕೈಹಿಡಿದುಭುಜಕ್ಕೆ ಭುಜವಾದ ಮಿತ್ರರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಜಾತಿ ಮತಗಳ ಗೋಡೆ ಮೀರಿಬೇಧ ಭಾವನೆಗಳ ದೂರ ಮಾಡಿಸ್ನೇಹ ಪ್ರೀತಿಯ ಸೇತುವೆ ಕಟ್ಟಿದಸೌಹಾರ್ದತೆ ಮೆರೆದ ಸ್ನೇಹಿತರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಗಿಡಮರಗಳ ಬೆಳೆಸುವ ಕೈಗಳಾಗಿನೀರು ಉಳಿಸುವ ಮನಗಳಾಗಿನಮ್ಮ ಭೂಮಿ ಕಾವಲುಗಾರರಾಗಿಜೊತೆಗೂಡಿ ಕಲಿತಂತ ಗೆಳೆಯರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಸುಳ್ಳು ಹೇಳದಂತ ಸತ್ಯದ ಹಾದಿದುಷ್ಟತನ ದೂರ ಮಾಡುವ ನೀತಿಒಳ್ಳೆಯ ಬದುಕು ಕಟ್ಟುವ ದಾರಿತೋರಿದಂತ ಆತ್ಮಬಂಧು ಮಿತ್ರರೇಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ನಿಮ್ಮ ನಗುವೆ ನಮ್ಮ ಸಂತೋಷನಿಮ್ಮ ಗೆಲುವಿನಲ್ಲಿ ನಮ್ಮ ಹರ್ಷಜೀವನವೆಂಬ ನಿಲ್ಲದ ಪಯಣದಲ್ಲಿದಾರಿ ಮರೆಯದೆ ಜೊತೆಯಿರೋಣಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಕೈ ಕೈ ಹಿಡಿದುಕೊಂಡು ಸಾಗೋಣಹೊಸ ಕನಸುಗಳನ್ನು ಸಾಧಿಸೋಣಸ್ನೇಹವೆಂಬ ಅಮೃತಧಾರೆಯಲ್ಲಿಸುಂದರ ಸಮೃದ್ಧ ಲೋಕ ಕಟ್ಟೋಣಶುಭಾಶಯ ಸ್ನೇಹ ದಿನದ ಶುಭಾಶಯಗೆಳೆಯರೇ ನಮ್ಮ ದಿನದ ಶುಭಾಶಯ ಟಿ.ಪಿ.ಉಮೇಶ್
ಟಿ.ಪಿ.ಉಮೇಶ್ ಕವಿತೆ “ಸ್ನೇಹದ ಹಬ್ಬ” Read Post »
ಪರವಿನಬಾನು ಯಲಿಗಾರ ಅವರ ಕವಿತೆ “ಸ್ನೇಹವೆಂದರೆ”
ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಸ್ನೇಹವೆಂದರೆ” ಸ್ನೇಹವೆಂದರೆ ಅದುದೈವ ಬೆಸೆದ ಬಂಧ ,ಜಾತಿ , ಗೋತ್ರ , ಮತ ,ಪಂಥ ಕೇಳದ ಅನುಬಂಧ. ಕೃಷ್ಣ – ಸುಧಾಮ , ಕರ್ಣ – ದುರ್ಯೋದನಚಿರ ಸ್ನೇಹಕೆ ಹೆಸರಾದವರುಸ್ನೇಹ ಎನ್ನುವ ಆಮ್ಲಜನಕನಮ್ಮನ್ನು ಬದುಕುಳಿಸುತ್ತದೆಸುಮಾರು ಬಾರಿ. ಸ್ನೇಹದ ನೌಕೆ ತೇಲುತಿರಲುಬಾಳ ಸಾಗರದಿ,ತೀರ ಸೇರುವ ಭರವಸೆಇರುವುದು ಯಾವಾಗಲೂ. ಸ್ನೇಹ ಒಂದು ಭಾವದ ಕೊಳಲ ದನಿಸದಾ ಕೇಳುವುದು ಇಂಪಾದ ನಿನಾದಸ್ನೇಹ ವೀಣೆ ಮಿಡಿಯುತಿರೆಅಪಸ್ವರದ ಭಯವೆಲ್ಲಿ. ಯಾವ ರಕ್ತ ಸಂಭಂದ ಇರದಿದ್ದರುನೋವಿಗೆ ಮರುಗುವಕರುಳ ಬಂಧವೆ ಅಲ್ಲದೆ ಇದ್ದರುಕರುಣೆ ತೋರುವುದೆ ಸ್ನೇಹ….. ಪರವಿನಬಾನು ಯಲಿಗಾರ
ಪರವಿನಬಾನು ಯಲಿಗಾರ ಅವರ ಕವಿತೆ “ಸ್ನೇಹವೆಂದರೆ” Read Post »
“ಮಿಲನ” ಪದ್ಮಲತಾ ಮೋಹನ್ ಅವರ ಬರಹ
ವಿಶೇಷ ಸಂಗಾತಿ ಪದ್ಮಲತಾ ಮೋಹನ್ “ಮಿಲನ” ಮಿಲನ.ಮತ್ತೆ ಬರುವೆನೆಂದು ಮಾತು ಕೊಟ್ಟವನುಹೊತ್ತು ಮೀರಿದರು ಯಾಕೋ ಸುಳಿವಿಲ್ಲಹೊಸಿಲೊಳಗೆ ಇಟ್ಟ ಹೂವಿನಲಿ ಕಂಪಿಲ್ಲಹಗಲಿರುಳು ಬಯಕೆಯ ಕನವರಿಕೆಕಾದು ಕಾವೇರಿದೆ ತನು, ಇಲ್ಲ ಚೇತರಿಕೆ.ನೋಟ ನೆಟ್ಟಿದೆ ಆ ದಿಗಂತದೆಡೆಗೆಶೂನ್ಯವೇ ಅಲ್ಲಿ ತೇಲಾಡಿದೆ,ಬರೀ ಬೆಳಕು ಶಬ್ದಗಳ ಆರ್ಭಟವೋಮರುಭೂಮಿಯಲಿ ಮರೀಚಿಕೆ ಕಂಡಂತೆ.ದೇಹವಿಡೀ ವ್ಯಾಪಿಸಿದ ವಿರಹ ಜ್ವಾಲೆಸುಡುತಿದೆ ಬೇಗೆ ತನ್ನೊಡಲನ್ನೇ!ಬತ್ತಿರುವ ಬೆಂಗಾಡು, ಸುರಿಸಲಿಲ್ಲ ಹನಿ ಕಣ್ಣೀರು!ಗುಡಿಗೋಪುರದಲ್ಲಿ, ನಡೆಯಿತುನಿತ್ಯ, ಪೂಜೆ ಪುನಸ್ಕಾರ, ಅವನಿಗಾಗಿಅವಳ ಮೇಲಿನ ಕಾಳಜಿಗಾಗಿಅವರಿಬ್ಬರ ಮಿಲನ, ಒಳಿತಿಗಾಗಿ.ಉಂಗುರ ನೋಡಿ ದುಷ್ಯಂತನಿಗೆ ನೆನಪು ಬಂದಿತ್ತುಇವನಿಗೂ ಹಾಗೆ ಏನೋ ನೆನಪಾಯಿತುತಡವಾಗಿಯಾದರು ಕೊನೆಗೂ ಬಂದಮೆತ್ತಗೆ ಹಿತವಾಗಿ ರಮಿಸುತ್ತಿದ್ದವನುಯಾಕೋ ಬದಲಾಗಿಬಿಟ್ಟಿದ್ದರಭಸದಿ, ಸೆಳೆದು ಮುತ್ತುಗಳ ಮಳೆಸುರಿಸಿದ್ದ.ವಿರಹ ಬೇಗೆಗೆ ಮುತ್ತಿನ ಮಳೆಗೆ ಭೂಮಿ(ಅವಳು) ಬಾಯಿ ತೆರೆದಿದ್ದುನಾಂದಿ ಹಾಡಿತು ಸರ್ವನಾಶಕ್ಕೆ.ಮಸಣವಾಯಿತು ಬದುಕುಅವರಿಬ್ಬರ ಮಿಲನಕ್ಕೆ! ಪದ್ಮಲತಾ ಮೋಹನ್. .
“ಮಿಲನ” ಪದ್ಮಲತಾ ಮೋಹನ್ ಅವರ ಬರಹ Read Post »
ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ ಗಜಲ್ ಹಣ್ಣಾಗಿ ಉದುರಿದೆಲೆಗಳು ಮತ್ತೆ ಚಿಗುರಿ ಹಸಿರಾಗಬಹುದೇ ಹೇಳುಮುಪ್ಪಾಗಿ ಬಾಗಿದ ಕಾಯ ಮರಳಿ ತರುಣವಾಗಬಹುದೇ ಹೇಳು ಕಳೆದು ಹೋದ ಸಮಯ ತಿರುಗಿ ಬಾರದು ಅಲ್ಲವೇಬೆಳೆದು ನಿಂತ ಮರ ಕೆಳಗೆ ಬಾಗಬಹುದೇ ಹೇಳು ಪಂಜರದ ಗಿಳಿಯು ರೆಕ್ಕೆ ಬಡಿಯುತ ಚಡಪಡಿಸಿದೆ ನೋಡುಬೀಸುವ ಗಾಳಿಯ ಅಲೆಗಳನು ಗಿರಿಶಿಖರ ತಡೆಯಬಹುದೇ ಹೇಳು ಅರಳಿದ ಹೂಗಳ ಪರಿಮಳ ಸುತ್ತ ಆವರಿಸಿ ಘಮಘಮಿಸಿದೆಕೆರಳಿದ ಗಾಯಗಳ ನೋವು ಮನದಿಂದ ಬೇರೆಯಾಗಬಹುದೇ ಹೇಳು ದುಃಖಗಳ ಮೂಟೆ ಹೊತ್ತು ನಿಂತಿಹುದು ನೊಂದ ಜೀವಸವಿದಂಥ ಸುಖಗಳ ಬೇಗಂ ಎಂದಾದರೂ ಮರೆಯಬಹುದೇ ಹೇಳು. ಹಮೀದಾ ಬೇಗಂ ದೇಸಾಯಿ
ಹಮೀದಾ ಬೇಗಂ ದೇಸಾಯಿ ಅವರ ಗಜಲ್ Read Post »
ಬೋರನಿಗೆ ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಹಾಸ್ಯ ಬರಹ, ಗೊರೂರು ಅನಂತರಾಜು, ಹಾಸನ.
ಹಾಸ್ಯ ಸಂಗಾತಿ ಗೊರೂರು ಅನಂತರಾಜು ಬೋರನಿಗೆ ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಬೋರನಿಗೆ ಹುಟ್ಟೂರುನಾಯಕರಹಳ್ಳಿಯಲ್ಲಿ ಒಬ್ಬನೇ ಕುಂತು ತುಂಬಾ ಬೋರಾಗಿತ್ತು. ಅವನ ಗೆಳೆಯರೆಲ್ಲಾ ಕೆಟ್ಟು ಪಟ್ಟಣ ಸೇರಿದ್ರು. ಇವನು ಮಾತ್ರ ಒಳ್ಳೆಯವನಾಗೇ ಹಳ್ಳಿಯಲ್ಲಿ ಉಳಿದುಬಿಟ್ಟಿದ್ದ. ಮನೆಗೆ ಸುಣ್ಣ ಬಣ್ಣ ಹೊಡೆಸಿ ಬಹಳ ದಿನ ಆಗಿತ್ತು. ಇಟ್ಟಿಗೆ.ಸಿಮೆಂಟ್,ಸಕಲೇಶಪುರದ ನಾಟಿ ಮರಳು ಇಲ್ಲದೇ ಇವರಪ್ಪ ಕೆಂಚ ಜೇಡಿ ಮಣ್ಣಲ್ಲೇ ಗೋಡೆ ಕಟ್ಟಿ, ಆರ್ಸಿಸಿ ಶೀಟ್ ಹೊದಿಸಿ ಲಲಿತ ಮಹಲ್ ಕಟ್ಟಿದ್ದ. ಅಪ್ಪ ಸತ್ತು ಇಪ್ಪತ್ತು ವರ್ಷ ಆಗಿತ್ತು. ಸತ್ತು ಹನ್ನೊಂದನೇ ದಿನಕ್ಕೆ ಹೊಡೆಸಿದ್ದು ಸುಣ್ಣ ಬಣ್ಣ. ಅವತ್ತು ಪುಣ್ಯ ಮಾಡಿಸ್ಕೊಂಡಿದ್ದ ಪುಣ್ಯಾತ್ಮ ಇವತ್ತಿನವರೆಗೂ ಗೋಡೆಗೆ ಸುಣ್ಣ ಬಣ್ಣ ಹೊಡೆಸಿರಲಿಲ್ಲ, ಆ ಜೇಡಿಮಣ್ಣಿನ ಗೋಡೆ ಜಡಿಮಳೆಗೆ ಬಿರುಕು ಬಿಟ್ಟಿದ್ದು ತಿಗಣೆ, ಜಿರಲೆಸೇರ್ಕೊಂಡು ಬೋರನಿಗೆ ಬಹಳ ಕಾಟ ಕೊಡ್ತಿದ್ವು. ಹಗಲು ಹೊತ್ತಿನಲ್ಲಿ ಜಿರಲೆ ಕಾಟ. ರಾತ್ರಿ ವೇಳೆ ತಿಗಣೆ ಕಾಟ. ಯಾರೋ ಹೆಲ್ತ್ ಇನ್ಸ್ ಪೆಕ್ಟರ್ ಮನೆ ಹತ್ರ ಬಂದು ಮನೆ ಮುಂದೆ ಚರಂಡಿ ನೀಟಾಗಿ ಮಡಿಕೊ ಬೋರ. ಚರಂಡಿಯಲ್ಲಿ ನೀರು ನಿಂತ್ರೆ ಸೊಳ್ಳೆಗಳು ನೀರಲ್ಲಿ ಮೊಟ್ಟೆ ಇಡ್ತವೆ. ಅವು ಮರಿಯಾಗಿ ಅಭಿವೃದ್ಧಿ ಹೊಂದಿ ರೆಕ್ಕೆ ಬೆಳೆದು ಹಾರಿ ಬಂದು ನಿನ್ನ ಕಚ್ತವೆ. ಅವು ನಿನ್ನ ಹಗಲು ಹೊತ್ತು ಕಡಿದ್ರೆ ಡೆಂಗ್ಯೂ ಜ್ವರ. ರಾತ್ರಿ ಕಡಿದ್ರೆ ಮಲೇರಿಯಾ ಅಂತ ತಿಳ್ಕೋ. ಸೊಳ್ಳೆಯಲ್ಲೂ ಎರಡು ಜಾತಿ ಐತೆ.. ಅಂತ ಜಾತ್ಯಾತೀತ ಭಾಷಣ ಮಾಡುತ್ತಿರಲು‘”ಇನ್ಸ್ ಸ್ಪೆಕ್ಟ್ರೇ, ನೀವೇನೋ ಉದ್ದುದ್ದ ಭಾಷಣ ಮಾಡಿ ಜನ ಜಾಗೃತಿ ಮಾಡ್ತಿದ್ದಿರಿ ತುಂಬಾ ಥ್ಯಾಂಕ್ಸ್.. ಇವೆಲ್ಲಾ ಸೈನ್ಸ್ ಮಾತು ನನ್ನ ನೈಸ್ ರೋಡ್ ತಲೆಗೆ ಹತ್ತಕ್ಕಿಲ್ಲ. ಸದ್ಯ ನನ್ನ ತಲೇಲಿ ಹೇನು ಕಾಟ ತಪ್ಪಕ್ಕಿಲ್ಲ. ತಿಗಣಿಗೆ ಹೊಡಿಯೋ ಔಷಧಿ ತರಹ ಹೇನು ನಾಶಕ್ಕೆ ಏನಾದ್ರು ಆಯಿಲ್ ಇದ್ರೇ ಹೇಳಿ. ನಾನು ಸ್ಟ್ರೇ ಮಾಡ್ಕೋತಿನಿ.. ಎನ್ನಲು ಹೆಲ್ತ್ ಇನ್ಸ್ ಸ್ಪೆಕ್ಟರ್ ದೂಸ್ರ ಮಾತ್ನಾ ಡದೆ ತಲೆ ಕೆರೆದುಕೊಂಡು ಹೆರಿಗೆ ಆಸ್ಪತ್ರೆ ಕಡೆಗೆ ಹೊಂಟೋಗಿದ್ರು. ಛೇ ಏನು ಮಾಡೋದು ಮನೆಯಲ್ಲಿ ಮಲಗೊಂಗಿಲ್ಲ. ಈ ಸೊಳ್ಳೆ, ಜಿರಳೆ, ತಿಗಣಿ ಕಾಟ. ಹಲ್ಲಿ ಲೊಚ ಲೊಚ ಶಕುನ ಜ್ಯೊತಿಷ್ಯ ಭಯ! ಅದ್ಕೇ ಏನ್ ಮಾಡೊದು..? ರಾತ್ರಿಯೆಲ್ಲಾ ಕುಂತು ಯೋಚ್ನೇ ಮಾಡ್ದ. ಬೆಳಿಗ್ಗೆ ಹೊತ್ಗೆ ಒಂದು ಪ್ಲಾನ್ ತಲೇಲಿ ಹೊಳಿತು. ಅದೇನು ಐದು ವರ್ಷದ ಪಂಚವಾರ್ಷಿಕ ಯೋಜನೆ ಅಲ್ಲಾ. ಐದು ದಿನಗಳಲ್ಲಿ ಮುಗಿಸಬಹುದಾದ ಯೋಜನೆ. ತನ್ನ ಪಾಲಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಬಂದಿದ್ದ ಐದು ಗುಂಟೆ ಜಮೀನಿನಲ್ಲಿ ಒಂದು ಎತ್ತರವಾಗಿ ಅಟ್ಟಣಿ ಕಟ್ಟಿ ರಾತ್ರಿ ಅಲ್ಲೆ ಮಲಗೋದು. ಇತ್ತ ರಾತ್ರಿ ಕಾಡು ಹಂದಿ ಹೊಲಕ್ಕೆ ನುಗ್ಗಿ ಫಸಲು ಹಾಳು ಮಾಡ್ಡಂಗೆಕಾಯ್ದಂಗೂ ಆಗ್ತದೆ. ಅತ್ತ ಜಿರಳೆ ಕಾಟನೂ ತಪ್ತದೆ. ಸೊಳ್ಳೆಗಳು ಕೂಡ ಅಷ್ಟು ಎತ್ತರಕ್ಕೆ ಹಾರೋದು ಡೌಟು ಅಂತ ಥಾಟ್ಸ್ ಮಾಡಿದ್ದ.ಮಾರನೇ ದಿನ ಬೆಳಿಗ್ಗೆ ಎದ್ದು ಲುಂಗಿ ಸೊಂಟಕ್ಕೆ ಬಿಗಿಯಾಗಿ ಸಿಗಿಸಿಕೊಂಡು ಹೊಳೆ ಕಡೆ ಹೊರಟ. ಬೋರ ಮನೆಯಲ್ಲೇ ಕುಂತುoಡು ಹೊಟ್ಟೆ ಸ್ವಲ್ಪ ಮುಂದೆ ಬಂದಿತ್ತು. ಬಿಳಿ ಪಂಚೆ ಬೇಗ ಕೊಳೆ ಆಗ್ತದೆ ಅಂತ ಅಡ್ಡಡ್ಡ ಗೆರೆ ಇರೋ ಪಟೆಪಟೆ ಲುಂಗಿನ ಸಿ.ನಂಜಪ್ಪನ ಅಂಗಡಿಯಲ್ಲಿ ಖರೀದಿಸಿ ತಂದಿದ್ದ. ಅದು ಪಕ್ಕ ಕಾಟನ್ ಪೇಟೆ ಕಾಟನ್ ಲುಂಗಿ. ಒಂದೇ ಒಗೆತಕ್ಕೆ ಸಿಂಕ್ ಆಗಿಬಿಡ್ತು. ಇವ ಹದಿನಾರು ಮೊಳದ ಲುಂಗಿತಗಳೊದು ಬಿಟ್ಟು ಹನ್ನೆರೆಡು ಮೊಳದ್ದು ತಗೊಂಡಿದ್ದ. ಅದೇ ಎಡವಟ್ಟಾಗಿತ್ತು. ಅದನ್ನು ಪೂರಾ ಸೊಂಟಕ್ಕೆ ಸುತ್ಕೊಂಡು ಹಿಂದ್ಗಡೆ ಕಟ್ಟಿಕೊಳ್ಳೊಕ್ಕೆ ಆಗ್ತಿರಲಿಲ್ಲ. ಹೀಗಾಗಿ ಆಗಾಗ್ಗೆ ಜಾರಿ ಹೋಗ್ತಿದ್ದ ಲುಂಗಿನ ಸಿಗಿಸಿಕೊಂಡು ಸಿಗಿಸಿಕೊಂಡು ಸುಸ್ತಾಗಿದ್ದ. ಇತ್ತ ಬೋರ ಬೆಳಿಗ್ಗೆ ಎದ್ದೇಟಿಗೆ ಹೊಳೆ ಹತ್ರ ಬರುತ್ತಿರಲು ಅತ್ತ ಊರಿನ ಹಿರಿಯ ಈರಯ್ಯ ಮೇಷ್ಟು ಹೊಳೆ ಬದಿಯ ಎಲ್ಲಾ ನಿತ್ಯಕರ್ಮ ಮುಗಿಸಿಕೊಂಡು ಟರ್ಕಿ ಟವಲ್ ನಲ್ಲಿ ಮುಖ ಒರಸ್ಕೊoಡು ಸೂರ್ಯ ದೇವರಿಗೆ ನಮಸ್ಕಾರ ಮಾಡ್ತಿದ್ರು,‘ ಏನ್ ಮೇಷ್ಟ್ರೇ, ನಮ್ಮ ಹೇಮಾವತಿ ಹೊಳೆಲಿ ಎಷ್ಟು ಟಿಎಂಸಿ ನೀರು ಐತೆ..?ಬೋರನ ಈ ತರಲೆ ಪ್ರಶ್ನೆಗೆ ಈರಯ್ಯ ಮೇಷ್ಟ್ರು ಏನ್ ತಾನೇ ಉತ್ತರ ಕೊಟ್ಟಾರು?“ಲೋ, ಬೋರ, ನಿನ್ಗೆ ತಿ.. ಮುಖ ತೊಳ್ಕೊಳಕ್ಕೆ ಎಷ್ಟು ನೀರು ಬೇಕು ಅಷ್ಟೇ ಐತೆ ಹೋಗ್ಲ.. ರಾಜ್ಯದ ಉಸಾಬರಿ ಎಲ್ಲಾ ನಿನಗ್ಯಾಕೆ.. ರಾಜಧಾನಿಯಲ್ಲಿ ಇರೋ ನಮ್ಮ ಮಂತ್ರಿ ಮಾನ್ಯರು ಅದನ್ನು ನೋಡ್ಕೊತ್ತಾರೆ. ಅದ್ಕೆ ಅಂತ್ಲೇ ನಾವು ಹೆಬ್ಬಟ್ಟು ಒತ್ತಿ ಓಟ್ ಹಾಕಿ ಗೆಲ್ಸಿ ಕಳಿಸಿಲ್ವಾ..“ಮೇಷ್ಟ್ರೇ, ನಾಳೇ ಬೆಂಗಳೂರಿಗೆ ಹೋಗೋಕೆ ನಮ್ಮ ಊರಿಂದ ಜನ ಎಲ್ಲಾ ಹೊಂಟೋರೆ. ನೀನು ಬಾರಲಾ ಬೋರ ಅಂತ ಆ ವೆಂಕಟಸ್ವಾಮಿ ಹೇಳ್ವನೆ. ನಾನೂ ಬೆಂಗಳೂರಿಗೆ ಹೋಗಿ ಬಹಳ ದಿನ ಆಯ್ತು. ಈಗೇನೋ ಅದ್ನ ಮೆಗಾಸಿಟಿ ಮಾಡೋಕೆ ಹೊಂಟೊರಂತೆ..!‘ ನೀನ್ಗೆ ನರೇಗದಲ್ಲಿ ಏನೂ ಕೂಲಿ ಕೆಲಸ ಸಿಕ್ಕಿಲ್ಲ ಅಂದ್ರೇ ಬೆಂಗಳೂರಿಗೆ ಹೋಗಿ ಬಾ. ಹಾಗೇ ಬರ್ತಾ ತಮಿಳುನಾಡಿನ ಸಿಎಂ ನಟಿಸಿರೋ ಮೆಗಾ ಹಿಟ್ ಸಿನಿಮಾನೂ ನೋಡ್ಕೊಂಡು ಬಾ..‘ ಆಯ್ತು ಮೇಷ್ಟ್ರೇ, ನೀವು ಬನ್ನಿ ಆ ಸ್ಟ್ರೈಕ್ ನಲ್ಲಿ ನೀವು ವಸಿ ಎಂಟರ್ ಟೈನ್ ಮೆಂಟ್ ತಗೊಳಿರಂತೆ..‘ ನಮಗ್ಯಾಕ್ಲ ಬೋರ ಮನರಂಜನೆ. ಕಾಡು ಬಾ ಅಂತದೆ ಊರು ಹೋಗು ಅಂತದೆ. ಈ ಊರಲ್ಲಿ ಹುಟ್ಟಿ ಇದನ್ನೇ ಜನ್ಮಭೂಮಿ ನಮ್ಮ ಕರ್ಮಭೂಮಿ ಅನ್ಕೊಂಡು ಕಾಲ ಹಾಕೋ ಮಂದಿ ನಾವು.ನಾನು ಹುಡ್ಗುನಾಗಿದ್ದಾಗ ಕೂಲಿಮಠದ ಮೇಷ್ಟ್ರು ಹತ್ರ ನಾಲ್ಕು ಅಕ್ಷರ ಮರಳಲ್ಲಿ ಬರ್ದಿ ಕಲ್ತಿದ್ದೆ. ಅದು ನನ್ಗೆ ಈಗ ರಾಮಾಯಣ, ಮಹಾಭಾರತ, ಭಾಗವತ ಓದಿಕೊಳ್ಳೊಕೆ ನೆರವಾಗ್ತಿದೆ. ನಮ್ಮಪ್ಪ ಲಕ್ಷ್ಮೇಗೌಡ್ರುಸುತ್ತಮುತ್ತಲ ಊರಿಗೆ ಹೋಗಿ ಪೌರಾಣಿಕ ನಾಟಕ ಕಲಿಸ್ತಿದ್ರು. ಅಪ್ಪ ಬಿಟ್ಟು ಹೋಗಿದ್ದು ಅದೊಂದೆ ಹಳೇ ಹಾರ್ಮೊನಿಯಂ ಮತ್ತು ಮರದ ಪೆಟ್ಟಿಗೆ. ಆಗೆಲ್ಲಾ ನಾನು ನಮ್ಮಪ್ಪನ ಜೊತೆ ನಾಟಕ ನೋಡೋಕೆ ಹಳ್ಳಿ ಹಳ್ಳಿಗೆ ಹೋಗ್ತ ಇದ್ದೆ. ಅವರಿವರು ಸಮಯ ಸಂದರ್ಭ ಏನೇನೋ ಕಾರಣ ಹೇಳಿ ನಾಟಕದ ಪ್ರದರ್ಶನ ದಿನ ತಪ್ಪಿಸಿಕೊಂಡಾಗ ಆ ಪಾರ್ಟು ನಾನೇ ಮಾಡ್ತಿದ್ದೆ. ನಮ್ಮಪ್ಪ ಹಾರ್ಮೋನಿಯಂ ನುಡಿಸ್ತಿದ್ದನ್ನೇ ನೋಡ್ಕೊಂಡು, ಮನೇಲಿ ಕುಂತು ಅಭ್ಯಾಸ ಮಾಡಿ ಅಂತೂ ಇಂತು ಹಾರ್ಮೋನಿಯಂ ಮೇಷ್ಟ್ರಾಗಿ ನಿಮ್ಮಂತಹ ಕಲಿಯುಗದ ನಾಟಕ ಕಲಿಯುವ ಊರ ಹುಡುಗರಿಗೆಲ್ಲಾ ನಾಟಕ ಕಲಿಸಿದೆ. ಅದ್ಕೆ ನೀವೆಲ್ಲಾ ನಾಟಕದ ಮೇಷ್ಟ್ರು ಅಂತ ಆಗ ನನ್ನನ್ನು ಕರಿತಿದ್ರಿ. ಈಗ ನನ್ಗೂ ವಯಸ್ಸಾಯ್ತು. ನೀವೆಲ್ಲಾ ನನ್ನ ಕೈ ಬಿಟ್ರಿ. ಅದ್ಕೇ ಈಗ ನಾನು ಬರೇ ಮೇಷ್ಟ್ರು ಆಗಿ ಉಳಿದಿದ್ದೀನಿ ಅಷ್ಟೇ..” ಬೇಜಾರು ಮಾಡ್ಕೋಬೇಡಿ ಮೇಷ್ಟೇ. ಹಳೇ ಮೇಷ್ಟ್ರು ರಿಟೈರ್ಡ್ ಆದ್ಮೇಲೆ ಹೊಸ ಮೇಷ್ಟ್ರು ಬರಬೇಕಲ್ವೇ.! ಹಂಗೆ ಈ ದೇಶದ ಪಾಲಿಟಿಕ್ಸ್ ನಲ್ಲಿ ಹಳೇ ಪಾರ್ಟಿಗಳೆಲ್ಲಾ ಟೆಂಟ್ ಸಿನಿಮಾಗಳಂತೆ ಪ್ಯಾಕಪ್ ಆಗ್ತಿವೆ. ಈಗೇನೋ ಹೊಸದಾಗಿ ಜಿರಲೆ ಪಾರ್ಟಿ ಅಂತ ಜೋರಾಗಿ ಹವಾ ಹುಟ್ಟಾಕ್ತ ಐತೆ..ನಾನು ಆ ಪಾರ್ಟಿ ಸೇರೋಣ ಅಂತ ಯೋಚ್ನೆ ಮಾಡಿವ್ನಿ..‘ಲೇ ತರಲೇ, ನಿಮ್ಮಂತಹ ಎಸ್.ಎಸ್.ಎಲ್.ಸಿ. ಫೇಲಾದ ಹುಡುಗರಿಗೆಲ್ಲಾ ಆ ಪಾರ್ಟಿಯಲ್ಲಿ ಸೀಟು ಸಿಕ್ಕಲ್ಲ ಹೋಗ್ಲಾ ನಿನ್ನ ಕೆಲಸ ನೋಡ್ಕೋ. ಈ ಹಳ್ಳಿಯಲ್ಲಿ ನೀನು ಕಷ್ಟ ಪಟ್ಟು ದುಡಿಮೆ ಮಾಡಿ ನಿನ್ನ ಹೊಟ್ಟೆಪಾಡು ಹೇಗೋ ನಡಿತಾ ಐತೆ. ನಾಳೆ ಬೆಂಗಳೂರಿಗೆ ನೀನು ಹೋಗಿ ಬಾ ಬೇಡ ಅನ್ನಲ್ಲಾ. ಏನಾದ್ರೂ ವಿರೋಧ ಪಕ್ಷದವರು ಐನೂರು ಸಾವಿರ ಕೊಟ್ರೇ ಹೋಗಿ ಬಾ. ನಿನಗೆ ನಷ್ಟ ಏನೂ ಆಗಲ್ಲ. ಪುಕ್ಸಟ್ಟೆ ಬಸ್ ಮಾಡವರೇ ಅಂತ ಮನೆ ಕೆಲಸ ಎಲ್ಲಾ ಬಿಟ್ಟು ಸಿಟಿಗೆ ಹೋಗಿ ಗಲಾಟೆ ಮಾಡಿ ಏಟು ತಿಂದು ಬರಬ್ಯಾಡ ದಡ್ಡ..ಎಂದು ಬಿಳಿ ಗಡ್ಡ ಕೆರೆದುಕೊಂಡರುಈರಯ್ಯ ಮೇಷ್ಟು. ” ನೀವು ಹೇಳೋ ಮಾತಿನಲ್ಲೂ ಸತ್ಯ ಐತೆ ಮೇಷ್ಟ್ರೇ. ನಾನೂ ಕೂಡ ನಮ್ಮ ಹೊಲದಲ್ಲಿ ಒಂದು ಅಟ್ಟಣಿ ಕಟ್ಟಬೇಕು ಅಂತ ಇವತ್ತು ಬೆಳಿಗ್ಗೆ ತಾನೇ ಯೋಚನೆ ಮಾಡಿವ್ನಿ. ನಾಳೆ ಬೆಂಗಳೂರು ಚಲೋ ಚಳುವಳಿಗೆ ನಾನು ಬರೊಲ್ಲಾ. ನಂಗೆ ಡೆಂಗ್ಯೂ ಜ್ವರ ಬಂದೈತೆ ಅಂತ ವೆಂಕಟಸ್ವಾಮಿಗೆ ಒಂದು ಸುಳ್ಳು ಹೇಳಿ ಸಾಗ ಹಾಕ್ತಿನಿ..” ಸರಿ, ಈಗ ಹೇಮಾವತಿ ಹೊಳೆಯಲ್ಲಿ ಇರೋ ಡೆಡ್ ಸ್ಟೊರೇಜ್ ವಾಟರ್ ನಲ್ಲಿ ಒಂದಿಷ್ಟು ಎಡದಂಡೆ ನಾಲೇಲಿ ನೀರು ಬಿಟ್ಟವರೇ.. ನಾಳೆ ಏನ್ ಮಾಡ್ತಾರೋ ಗೊತ್ತಿಲ್ಲ. ಸಧ್ಯ ಈಗ ಹೇಮಾವತಿ ಹೊಳೆಯಲ್ಲಿ ಹರಿತಿರೋ ಈ ಶುದ್ಧವಾದ ನೀರಲ್ಲಿ ಮುಖ ತೊಳ್ಕೊಂಡು ಆ ಆಕಾಶ ದೇವನಿಗೆ ಮೋಡ ಕಟ್ಟಿ ಮಳೆ ಹುಯ್ಸಪ್ಪ ಅಂತ ಪ್ರಾರ್ಥನೆ ಮಾಡಿ, ಮನೆಗೆ ಹೋಗಿ ಹೆಂಡ್ತಿ ಮೈನಾವತಿ ಮಾಡಿಟ್ಟಿರೋ ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ತಿಂದು ಗೊರೂರು ಗ್ರಾಮ ಪಂಚಾಯ್ತಿ ಆಫೀಸ್ ಹತ್ರ ಹತ್ತು ಗಂಟೆ ಹೊತ್ತಿಗೆ ಸರಿಯಾಗಿಬಾ. ಗೊರೂರು ಮಧ್ಯೆ ಹಾಯ್ದ ಹೋಗಿರುವ ಚಂಗರವಳ್ಳಿ ನಾಲೆಯಲ್ಲಿ ಹೂಳು ತುಂಬಿಕೊಂಡೈತೆ. ಇದರಿಂದ ನಮ್ಮೂರ ತನಕ ನೀರು ಬರ್ತಿಲ್ಲಾ. ಆ ಹೊಳನ್ನೆಲ್ಲಾನರೇಗ ಸ್ಕಿಂ ನಲ್ಲಿ ಬಿಲ್ ಮಾಡಿ ತೆಗಿಸಿಬಿಡಪ್ಪ. ಬೋರನಂತಹ ಹಳ್ಳಿಯಲ್ಲಿ ಉಳಿದಿರುವ ಶ್ರಮಿಕ ಕೂಲಿ ಕಾರ್ಮಿಕರ ಕೈಗೆ ಒಂದಿಷ್ಟು ಕೆಲಸ ಕೊಡಪ್ಪ ಅಂತ ಹೊಸದಾಗಿ ಅಪಾಯಿಂಟ್ ಆಗಿ ಬಂದಿರೋ ಪಿಡಿಯೋ ಸಾಹೇಬ್ರಿಗೆ ಹೇಳ್ತಿನಿ. ಪಾಪ ಆತ ನೀಟಾಗಿ ಮನೇಲಿ ಕುಂತು ಓದಿ ನೀಟ್ ಪರೀಕ್ಷೆ ಬರೆದು ಮುಂದೆ ಬಿಇ ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿ, ಐಎಎಸ್, ಐಪಿಎಸ್, ಕೆಪಿಎಸ್ಸಿ ಪರೀಕ್ಷೆಗೆ ಅಂತೆಲ್ಲಾ ಓದ್ಕೊಂಡು ಸದ್ಯಕ್ಕೆ ಈ ಪಿಡಿಓ ಉದ್ಯೋಗಕ್ಕೆ ಬಂದವ್ನೇ. ಪುಣ್ಯಾತ್ಮ ತಾನು Rank ಸ್ಕೂಡೆಂಟ್ ಅಂತ ಕೆಲಸ ಹುಡಿಕ್ಕೊಂಡು ವಿದೇಶಕ್ಕೆ ಹಾರಿ ಹೋಗಿಲ್ಲ. ಹೊಸ ಮನುಷ್ಯ ಲಂಚದ ಆಮಿಷಕ್ಕೆ ಇನ್ನೂ ಬಗ್ಗಿಲ್ಲ. ಮುಂದೆ ಎಲ್ಲಿ ಈ ಗುತ್ತಿಗೆದಾರರು ಆಮಿಷ ತೋರಿ ಏನು ಹಾಳು ಮಾಡ್ತಾರೋ ಗೊತ್ತಿಲ್ಲ. ಇರಲಿ ಸಧ್ಯಕ್ಕಂತೂ ಆತ ನಯ ವಿನಯ ಇರೋ ವ್ಯಕ್ತಿಯಾಗಿ ಕಾಣ್ಸಿತ್ತಾವ್ನೆ..” ಹೌದ ಮೇಷ್ಟ್ರೇ, ನೀವು ಹೇಳಿದ ಹೊತ್ತಿಗೆ ಸರಿಯಾಗಿ ಬರ್ತಿನಿ. ಕಡೆದಾಗಿ ಒಂದು ಪ್ರಶ್ನೆ. ಅದೇನೋ ಹಳೇ ನರೇಗ ಹೋಗಿ ಈಗ ಹೊಸದಾಗಿ..ರಾಗ ಎಳೆದ“ಹೋಗ್ಲ ಬೋರ.. ನಮ್ಮ ಮಾತು ಹೀಗೆ ಕಂಬಿ ಇಲ್ಲದ ರೈಲಿನಂತೆ ಹೋಗ್ತ ಇದ್ರೇ ಡೆಡ್ ಲೈನ್ ಇರೊಲ್ಲ…—ಗೊರೂರು ಅನಂತರಾಜು,ಹುಣಸಿನಕೆರೆ ಬಡಾವಣಿ,29ನೇ ವಾರ್ಡ್, 3 ನೇ ಕ್ರಾಸ್,ಹಾಸನ.
ಬೋರನಿಗೆ ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಹಾಸ್ಯ ಬರಹ, ಗೊರೂರು ಅನಂತರಾಜು, ಹಾಸನ. Read Post »
ಅಂಕಣ ಸಂಗಾತಿ ಜ್ಯೋತಿ ಡಿ . ಬೊಮ್ಮಾ ಮನದ ಮಾತುಗಳು ಜಿರಳೆಗಳು ಮತ್ತು ಶಿಕ್ಷಣ ವ್ಯವಸ್ಥೆ. ಈ ಸಂದರ್ಭದ ಮಾತುಗಳಂದ್ರ ಮಳಿ ಮತ್ತು ಜಿರಲೆಗಳು.ಮಳಿಗಾಲ ಶರು ಆಗಿ ಎರಡು ತಿಂಗಳಾದಮ್ಯಾಲ ಈಗ ನಮ್ಮ ಕಲ್ಬುರ್ಗಿ ಕಡಿ ಮಳಿ ಬರಲತದ. ಬಿತ್ತಿದ ಉದ್ದು ಹೆಸರು ಬೆಳೆಗಳು ಮಳಿ ಇಲ್ದೆ ಬಾಡಿ ಹೋದ್ವು.ಈಗ ಬಿತ್ತಿದ ತೊಗರಿ ಅತೀ ಮಳೆಯಿಂದ ಎನಾಗತದೋ , ಪ್ರತಿ ವರ್ಷ ಇದೇ ಕತಿ .ಅತಿವೃಷ್ಟಿ ಅಥವಾ ಅನಾವೃಷ್ಟಿ , ಆಹಾರ ಹೆಂಗಾದ್ರೂ ಮಾಡ್ಬಹುದು. ಬೋರ್ವೆಲ್ ಗಳದಾಗೆಲ್ಲ ಅಂತರ್ಜಲ ಮಟ್ಟ ಕುಸದು ನೀರು ಬತ್ತಿ ಹೋಗಿದ್ವು. ಇನ್ನೂ ಸ್ವಲ್ಪ ದಿನ ಮಳಿ ಬರದಿದ್ರ ನೀರಿನ ಬರಗಾಲ ಕಾಣಬೇಕಾಗಿತ್ತು.ಮಳಿ ಕರುಣೆ ತೋರಿಸ್ತು. ಇದರ ಜೋತೆಗೆ ನಮ್ಮ ದೇಶದ ಯುವ ಜಿರಲೆಗಳ ಹರತಾಳ ಒಂದು ರೀತಿ ಯಶಶ್ವಿ ಆಯ್ತು.ಈಗಿನ ಯುವ ಪಿಳಗಿ ಜೆನ್ ಝಿ ಗಳ ಒಂದು ರೀತಿ ಹಠಮಾರಿಗಳು.ಅವರ ವಿದ್ಯ ಬಗ್ಗೆ ಹೇಳಬೆಕಂದ್ರ ಈಗ ಎಲ್ಲರೂ ಓದಿದವ್ರೆ.ಓದಲಾರದವ್ರು ಕೂಡ ಸೋಸಿಯಲ್ ಮಿಡಿಯಾದ ಪ್ರಭಾವದಿಂದ ವುದ್ಯಾವಂತ್ರೆ.ಯಾಕಂದ್ರ ಇಂಗ್ಲಿಷ್ ಓದಕ್ಕ ಬರೆಯಕ್ಕ ಬರದಿದ್ರೂ ಇವರು ಪೋನ್ ನಲ್ಲಿ ಇಂಗ್ಲಿಷ್ ಒದ್ತಾರ.ಮತ್ತ ಟೈಪ್ ಕೂಡ ಮಾಡತಾರ.ಇದು ಝನ್ ಝಿ ಗಳ ಕರಾಮತ್ತು. ನಮ್ಮ ನ್ಯಾಯವಾದುಗಳು ಈಗಿನ ನಿರುದ್ಯೋಗಿ ಯುವ ಪಿಳಿಗಿ ಜಿರಲೆಗಳಂತೆ ಎಲ್ಲರ ಮ್ಯಾಲ ಎಗರಿ ಬಿಳತಾರ ಅಂತ ಹೆಳಿದ್ರು.ಆದ್ರ ಅದು ಸುಳ್ಳು. ಝನ್ ಝಿ ಗಳು ತಮ್ಮ ಪಾಡಿಗಿ ತಾವು ಯಾವಾಗ್ಲೂ ಪೋನ್ ನಲ್ಲಿ ಮುಳಗಿರತಾವ.ಅವರಿಗೆ ಭವಿಷ್ಯದ ಬಗ್ಗೆ ಅತೀ ನಿರೀಕ್ಷೆ ಗಳಿಲ್ಲ. ಯಾರ ಜೋತೆ ಹೆಚ್ಚು ಮಾತಿಲ್ಲ , ಎಕಾಂಗಿಯಾಗೆ ಇರತಾರ.ಮನಿಗಿ ಯಾರಾದ್ರೂ ಅಥಿತಿ ಗಳು ಬಂದ್ರ ಸುಮ್ನ ಮಾರಿ ತೋರ್ಸಿ ರೂಂ ನೊಳಗ ಹೋಗಿ ಸೇರಿಕೊಂಡು ಬಿಡತಾವ.ಅವ್ರು ಗೆಳೆಯರೊಂದಿಗೆ ಆಪ್ತ ಆಗಿ ಇರುವಷ್ಟು ಹೆತ್ತವರೊಂದಿಗೂ ಇರಲ್ಲ.ತಮ್ಮ ಮನದಾಳ ಗೂಗಲ್ ಅಥವಾ ಅಲೆಕ್ಸಾ ಗ ಹೇಳತಾರ ಹೊರತಾಗಿ ಹೆತ್ತವರಿಗಿ ಹೇಳಲ್ಲ. ಆದ್ರ ಅವರಿಗಿ ಒತ್ತಾಯಿಸಿದ್ರ ದಬ್ಬಾಳಿಕಿ ಮಾಡಿದ್ರ , ಕಿಡಿಕಿಡಿ ಆಗತಾರ. ಆತ್ಮಹತ್ಯೆಗಳಂತ ನಿರ್ಧಾರ ಕ್ಕೂ ಕೂಡ ಯುವ ಜನ ಅಂಜತಿಲ್ಲ.ಇದು ಶೋಚನೀಯ ವಿಷಯ. ಈಗಿನ ಯುವ ಜನ ಗೌಪ್ಯತೆ ಇಷ್ಟ ಪಡತಾರ.ಯಾರೊಂದಿಗೂ ಹೆಚ್ಚು ಎನನ್ನು ಹಂಚಿಕೊಳ್ಳಲ್ಲ. ಎಕಾಂತ ಮತ್ತು ಪೋನ್ ಗಳೆ ಅವ್ರ ಆಪ್ತ ಸಂಗಾತಿಗಳು. ಇನ್ನೂ ಶಿಕ್ಷಣದ ವಿಷಯ ಬಂದ್ರೆ ಯುವ ಜನ ಅದರ ಬಗ್ಗೆ ಸಂತುಷ್ಟರಾಗಿಲ್ಲ.ಎಷ್ಟೇ ಓದಿ ಎರಡೆರಡು ಡಿಗ್ರಿ ತಗೊಂಡ್ರು ಉದ್ಯೋಗದ ಭರವಸೆಗಳಿಲ್ಲ.ಗ್ರಾಮೀಣ ಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಕಾರ್ಪೊರೇಟ್ ನೌಕರಿಗಾಗಿ ದೊಡ್ಡ ಊರು ಸೇರಿ ಪಟ್ಟಣದವರೊಂದಿಗೆ ಸೆಣಸಿ ತಮ್ಮ ನೌಕರಿ ಉಳಿಸಿಕೊಳ್ಳಲು ಹರಸಾಹಸ ಪಡಬೇಕು.ಇನ್ನೂ ಸರ್ಕಾರಿ ನೌಕರಿ ಸೇರಬೇಕಾದ್ರ ವಶೀಲಿ ಅಥವಾ ದುಡ್ಡಿನ ಆಧಾರ ಬೇಕು. ಸರ್ಕಾರಿ ನೌಕರಿ ಸಿಕ್ರು ನೆಮ್ಮದಿ ಇಲ್ಲ.ವ್ಯವಸ್ಥೆ ವಿರುದ್ದ ಹೋಗಲಾರದೆ , ತಮ್ಮಿಷ್ಟದಂತೆ ಕೆಲಸ ಮಾಡ್ಲಿಕ್ಕಾಗ್ದೆ ಅಶಾಂತಿ ಯಲ್ಲೆ ಇರತಾರ. ಶಿಕ್ಷಣ ಯುವಜನಕ್ಕೆ ಯಾವ ರೀತಿ ಉಪಯೋಗ ಆಗ್ತಾ ಇದೆ ಅಂತ ಚಿಂತಿ ಆಗತದ.ಬಿ ಎ . ಬಿ ಕಾಂ ನಂತಹ ಡಿಗ್ರಿ ಮಾಡಿ ಮುಂದೆ ಏನ್ ಮಾಡ್ಬೇಕು . ಅದಕ್ಕ ಎಲ್ರೂ ಡಾಕ್ಟರ್ ಇಂಜಿನಿಯರ್ ಗಳೆ ಆಗಬೇಕು ಅಂತ ಹೆತ್ತವರ ಆಸೆ.ಮಕ್ಕಳಿಗಿ ಇಷ್ಟ ಇರಲಿ ಬಿಡ್ಲಿ , ಆಸ್ತಿ ಮಾರಿ ಸಾಲ ಮಾಡಿಯಾದ್ರೂ ಮಕ್ಕಳಿಗಿ ಡಾಕ್ಟರ್ ಇಂಜಿನಿಯರ್ ಮಾಡ್ಬೇಕು ಎಂಬುದೇ ಹೆತ್ತವರ ಉದ್ದೇಶ. ಡಾಕ್ಟರ್ ಇಂಜಿನಿಯರ್ ಓದಿದವ್ರು ಈಗ ನಿರುದ್ಯೋಗಿಗಳು.ಇನ್ನೂ ಆರ್ಟ್ಸ್ , ಕಾಮರ್ಸ್ ಮಾಡಿದವ್ರ ಪಾಡು ಕೆಳೋದೇ ಬ್ಯಾಡ.ಇಂತಹ ಸಂದರ್ಭದಾಗ ಯುವಜನತೆಯ ಮನಸ್ಥಿತಿ ಏನಾಗಿರತದ..! ಮಾಡಲು ಕೆಲಸ ಇಲ್ದೆ ಭವಿಷ್ಯದ ಬಗ್ಗೆ ನಿರುತ್ಸಾಹಿತರಾಗತಾರ.ಇದಕ್ಕ ಯಾರು ಹೊಣೆ..! ಈಗಿನ ಯುವ ಪಿಳಿಗಿ ಓದುವ ವಿಷಯಕ್ಕೆ ಎಲ್ರು ಜಾಣರೆ ಇದ್ದಾರ.ಹಗಲೂ ರಾತ್ರಿ ಓದ್ತಾರ.ಡಾಕ್ಟರ್ ಇಂಜಿನಿಯರ್ ಆಗ್ಲೇಬೇಕು ಅಂತ ಅತೀ ಆಕಾಂಕ್ಷೆ ಇಟ್ಟುಕೊಂಡು ಓದ್ತಾರ.ಅಂತದ್ದರಲ್ಲಿ ಈ ಪೇಪರಗಳು ಪರೀಕ್ಷೆಗೆ ಮೊದಲೆ ಸೋರಿ ಕಣ್ಣಾಗ ಎಣ್ಣಿ ಹಾಕ್ಕೊಂಡು ಓದಿದವ್ರಿಗೆ ಹತಾಶ ಭಾವ ಉಂಟುಮಾಡತದ.ಸಹಜ , ಒಂದಲ್ಲ ಎರಡಲ್ಲ , ಮ್ಯಾಲಿಂದ ಮ್ಯಾಲ ಪೇಪರ್ ಲೀಕ್ ಆಗೋದು.ಪರಿಕ್ಷೆಗಳು ಮತ್ತ ನಡೆಯೊದು ಇವೆಲ್ಲ ವಿದ್ಯಾರ್ಥಿಗಳಿಗಿ ಒತ್ತಡ ಉಂಟು ಮಾಡತದ. ಭವಿಷ್ಯದ ಬಗ್ಗೆ ಹತಾಶರಾಗಿ ಆತ್ಮಹತ್ಯೆ ಗೆ ಶರಣಾಗತಿದ್ದಾರ. ಇದಕ್ಕೆಲ್ಲ ಯಾರು ಹೊಣೆ..! ಸರ್ಕಾರ. ಯುವಕರಿಗೆ ಉದ್ಯೋಗವಕಾಶಗಳನ್ನು ಮೊದಲು ಒದಗಿಸಬೇಕು.ಒಂದರನಂತರ ಒಂದು ಹೋಸ ಹೋಸ ಕಾಲೇಜ್ ಗಳಿಗಿ ಪರವಾನಗಿ ಕೊಟ್ಡು ವಿದ್ಯಾವಂತ ನಿರಿದ್ಯೋಗಿಗಳನ್ನು ಸರ್ಕಾರ ಸೃಷ್ಟಿ ಮಾಡಲತದ.ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆ ಗಳು ಬೆಳೆದಂದ ಉದ್ಯೋಗ ಗಳನ್ನು ಒದಗಿಸ್ರಿ. ಡಿಗ್ರಿ ಕೊಡೊದಷ್ಟೆ ನಮ್ಮ ಕೆಲಸ ಅಂತ ಸರ್ಟಿಫಿಕೇಟ್ ಕೊಟ್ಟು ಕಳಸಿದ್ರ.. ಹೊರಗ ಬಂದಮ್ಯಾಲ ಯುವಜನತೆ ಏನು ಮಾಡ್ಬೇಕು..! ಇದಕ್ಕೆಲ್ಲ ಉತ್ತರಾನೆ ಇಲ್ಲ ಬಿಡ್ರಿ. ಈಗ ಅತೀ ವಿದ್ಯಾವಂತ್ರೆ ಹೆಚ್ಚು ಆತ್ಮಹತ್ಯೆ ಗಳಿಗೆ ಶರಣಾಗತಿದ್ದಾರ.ವಿದ್ಯ ವ್ಯಕ್ತಿತ್ವ ವಿಕಸನ ಮಾಡುವ ಬದಲಾಗಿ ವ್ಯಕ್ತಿತ್ವವನ್ನು ಹತಾಶೆಗೊಳಿಸ್ತಿದೆ.ಹಂಗಾದ್ರೆ ಮುಂದಿನ ಪಿಳಿಗೆಯ ಭವಿಷ್ಯ..! ಇಂತಹ ವಿಷಯಗಳು ಮಾತಾಡ್ಬೇಕಾದ ಸರ್ಕಾರ ಮೌನವಾಗಿದ್ರ ಯುವಜನ ದಂಗೆ ಏಳಲಾರಧ ಮತ್ತೆನು ಮಾಡ್ಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಾ ಸರ್ಕಾರದ ಅವಧಿಯಲ್ಲೂ ಆಗಿರಬಹುದು.ಅದಕ್ಕಾಗಿ ದ್ವನಿ ಎತ್ತುವ ಸಮಯ ಈಗ ಬಂದಿತ್ತು.ಆ ವಿಷಯದ ಚರ್ಚೆಗಾಗಿ ಸರ್ಕಾರದ ಸಿದ್ದವಿರಲಾರದಕ್ಕ ಪರಿಸರ ಹೋರಾಟಗಾರ ಸೋನ್ಂ ವಾಂಗ್ಚೂಕ್ ವಿದ್ಯಾರ್ಥಿ ಗಳ ಪ್ರತಿನಿಧಿ ಯಾಗಿ ಉಪವಾಸ ಸತ್ಯಾಗ್ರಹ ಆರಂಬಿಸಿದ್ರು. ಆಗಲಾದ್ರೂ ಸರ್ಕಾರ ಅವರೊಂದಿಗೆ ಚರ್ಚೆಗೆ ಬರಬೇಕಾಗಿತ್ತು.ಒಬ್ಬ ವ್ಯಕ್ತಿ ದೇಶದ ವಿಷಯದ ಬಗ್ಗೆ ಉಪವಾಸ ಸತ್ಯಾಗ್ರಹ ಮಾಡತಿದ್ರೆ ಸರ್ಕಾರದ ಕರ್ತವ್ಯ ಆಗತಿರದ ಆ ವ್ಯಕ್ತಿಗೆ ಭೇಟಿ ಮಾಡಿ ಸಮಸ್ಯೆ ಆಲಿಸಿ ಅದರ ಪರಿಹಾರಕ್ಕಾಗಿ ನಾವು ನೀವು ಕೂಡಿ ಪ್ರಯತ್ನಿಸೋಣ ಎಂದು ಹೇಳೊದು. ಆದ್ರ ನಮ್ಮ ಸರ್ಕಾರ ಇದರ ಬಗ್ಗೆ ಚರ್ಚಿಸೋದು ಇರಲಿ.ಒಬ್ಬ ವ್ಯಕ್ತಿ ಉಪವಾಸ ಮಾಡಿ ಸಾಯುವ ಸ್ಥಿತಿಗೆ ಬರತಿದ್ದಾನ ಅಂತ ಗೊತ್ತಿದ್ದೂ ಆ ವಿಷಯದ ಬಗ್ಗೆ ಚಕಾರ ಎತ್ತದೆ ಇರೊದ್ರೀಂದ ಜನರ ಅದರಲ್ಲೂ ಯುವಜನರ ವಿರೋಧ ಎದಿರಿಸಬೇಕಾಯ್ತು. ನಮ್ಮ ದೇಶದ ಬಿಜೆಪಿ ಸರ್ಕಾರಕ್ಕೆ ಯಾಕ ಇಷ್ಟು ಆತ್ಮ ಪ್ರತಿಷ್ಟೆ..! ನಾವು ಏನು ಮಾಡಿದ್ರು ನಡಿತದ ಎಂಬ ದೋರಣೆ. ನಾವು ಮಾಡಿದ್ದೆಲ್ಲ ಸರಿ ಇರತದ ಎಂಬ ಅತೀ ಆತ್ಮ ವಿಶ್ವಾಸ. ಇಂಥ ಸರ್ವಾಧಿಕಾರಿ ದೋರಣೆ ನಮ್ಮ ದೇಶದ ಯುವಜನರನ್ನ ರೊಚ್ಚಿಗೆಬ್ಬಿಸ್ತು. ಮೊದಲೆ ಶಿಕ್ಷಣ ವ್ಯವಸ್ಥೆ ಯಿಂದ , ನಿರುದ್ಯೋಗ ದಿಂದ ಒದ್ದಾಡತಿರೋ ವಿದ್ಯಾರ್ಥಿಗಳು , ತಮಗಾಗಿ ಉಪವಾಸ ಸತ್ಯಾಗ್ರಹ ಮಾಡುವರ ಪರ ಆದ್ರು.ಸರ್ಕಾರದ ವಿರುದ್ದ ದಂಗೆ ಎದ್ರು. ಸತ್ಯಾಗ್ರಹ ಗಳಲ್ಲಿ ಮುಷ್ಕರ ಗಳಲ್ಲಿ ದಂಗೆಗಳಾಗತ್ತವ.ಕೆಲವು ದಂಗೆಕೋರರು ಇಂತಹ ಅವಕಾಶ ಬಳಸಿಕೊಳ್ಳಲಿಕ್ಕೆ ಕಾಯ್ತಿರತಾರ. ವಿದ್ಯಾರ್ಥಿ ಗಳು ಮಾಡತಿರೋ ಮುಷ್ಕರ ದಲ್ಲಿ ಕಿಡಿಗೇಡಿಗಳು ಪೋಲಿಸ್ ರ ಮೇಲೆ ಹಲ್ಲೆ ಮಾಡಿದಕ್ಕೆ ವಿದ್ಯಾರ್ಥಿ ಸಮೂಹದ ಮ್ಯಾಲ ಲಾಠಿ ಚಾರ್ಜ್ ಮಾಡಿ ಹೊಡೆಯೊದು ಅಮಾನುಷ ವರ್ತನೆ. ಹೊಡೆತ ತಿಂದ ವಿದ್ಯಾರ್ಥಿಗಳು ಮತ್ತಷ್ಟು ದಂಗೆ ಎದ್ರು.ಇದನ್ನು ನಿತಂತ್ರಿಸಲಿಕ್ಕೆ ಪೋಲಿಸರು ಮತ್ತಷ್ಟು ಲಾಠಿ ಚಾರ್ಜ್ ಮಾಡಿದ್ರು.ಈ ಘರ್ಷಣೆ ಗೆ ಸರ್ಕಾರ ಹೊಣೆ.ನಮ್ಮ ಪ್ರಧಾನ ಮಂತ್ರಿ ಯ ಮೌನದಿಂದಲೇ ಇಷ್ಟೆಲ್ಲಾ ಆಯ್ತು.ಇನ್ನೂ ಮುಷ್ಕರ ದಲ್ಲಿ ಯುವಕ ಯುವತಿಯರ ವರ್ತನೆಗಳ ಬಗ್ಗೆ ಎಲ್ಲಾ ಸಕಾರಾತ್ಮಕವಾಗೆ ಹೇಳಲಿಕ್ಕಾಗಲ್ಲ.ಯುವ ಪಿಳಗಿ ಅಂದ್ರ ಒಂದು ರೀತಿ ಕಪಿಗಳಂಗ.ಕೆಣಕಿದ್ರ ಮೈಮ್ಯಾಲ ಬರತಾವ.ತಮಗಾದ ಅನ್ಯಾಯಕ್ಕೆ ಎನಾದ್ರೂ ಸಮಾಧಾನ ಆಗುವಹಂಗ ಮಾತಾಡಿ ರಮಿಸ್ತಾರ ನಮ ಪ್ರಧಾನ ಮಂತ್ರಿಗಳು ಅಂತ ಆಪೇಕ್ಕಾ ಪಟ್ರ ತಮಗ ಲಾಠಿಯಿಂದ ಹೊಡ್ಸತಾರ ಅಂತ ಮತ್ತಿಟು ಸಿಟ್ಟಾದ್ವು. ಆಗ ನಮ್ಮ ಪ್ರ ಮಂ ಗಳಿಗಿ ಗೊತ್ತಾಯ್ತು.ಈ ಝನ್ ಝಿ ಪಿಳಗಿ ಲಾಠಿ ಏಟಗಿ ಬಗ್ಗವು ಅಲ್ಲ.ಇವಕ್ಕೆ ಪ್ರೀತಿಯಿಂದ ಅವ್ರ ಭಾಷಾದಾಗೆ ಒಲಿಸಿಕೊಳ್ಳಬೇಕು ಅಂತ ಪೋನ್ ಮಾರಿ ಮುಂದ ಹಿಡಕೊಂಡು ರಾತ್ರಿ ಅವರಾತ್ರಿ ರೀಲ್ ಮಾಡಿ ಝನ್ ಝಿ ಆಗಲಿಕ್ಕ ಪ್ರಯತ್ನಿಸಿದ್ರು.ಇದೇ ಮೊದಲೆ ಮಾಡಿದ್ರ ಆಗ್ತಿತ್ತು..ಆದ್ರ ನಾನೇ ಶ್ರೇಷ್ಠ ಅಂದಕೊಳ್ಳೋರಿಗೆ ಸಮಯನೆ ಪಾಠ ಕಲಿಸ್ತದಂತ. ಜ್ಯೋತಿ ಡಿ ಬೊಮ್ಮಾ
ತೆಲುಗು ಕವಿತೆ “ನ್ಯೂ ಸಿಲಬಸ್” ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿ,ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್
ಅನುವಾದ ಸಂಗಾತಿ “ನ್ಯೂ ಸಿಲಬಸ್” ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ ನ್ಯೂ ಸಿಲಬಸ್ತೆಲುಗು ಮೂಲ: ಅಯಿನಂಪೂಡಿ ಶ್ರೀಲಕ್ಷ್ಮಿಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್ ಈಗ ನಾವೆಲ್ಲರೂ ಕೇಳಲೇಬೇಕು!ಮಕ್ಕಳು ಹೇಳುತ್ತಿರುವುದನ್ನು ಕೇಳಬೇಕು.ನಿನ್ನೆಯವರೆಗೂ ಈ ಮಕ್ಕಳೆಲ್ಲ ತಡಬಡ ಹೆಜ್ಜೆ ಹಾಕುತ್ತಾ,ಮುದ್ದಾದ ಮಾತುಗಳನ್ನಾಡುತ್ತಾ,ತುಟಿಗಳ ಮೇಲೆ ಮುಗ್ಧತೆಯನ್ನು ಜೀವಂತವಾಗಿರಿಸಿಕೊಂಡು,‘ಮಮ್ಮಿ’, ‘ಪಾಪ್ಪಾ’ ಎಂದು ಓಡಿ ಬಂದವರೇ.ಅವರನ್ನು ಇನ್ನು ಮುಂದೆ ಅದೇ ದೃಷ್ಟಿಯಿಂದ ನೋಡಬೇಕಾಗಿಲ್ಲ.ನಮ್ಮ ಬಾಡಿಗೆ ಯೋಚನೆಗಳಲ್ಲಿ ಅವರನ್ನು ಮುಳುಗಿಸಬೇಕಾಗಿಲ್ಲ.ಮಕ್ಕಳಿಗೂ ಕನಸುಗಳಿರುತ್ತವೆ,ಬಣ್ಣಗಳು, ರಾಗಗಳೂ ಇರುತ್ತವೆ.ಮಕ್ಕಳನ್ನು ಬೆಳೆಸುವುದೆಂದರೆ ಅಂಕಗಳು, ರ್ಯಾಂಕ್ಗಳು..ಪ್ಲೇಸ್ಮೆಂಟ್ಗಳಷ್ಟೇ ತಾನೇ ನಮಗೆ ತಿಳಿದಿದ್ದು?ಆದರೆ ಈ ಮೂರು ಎಲೆಗಳ ಆಟವನ್ನು ದಾಟಿನಾಲ್ಕು ದಿಕ್ಕುಗಳನ್ನೂ ಈ ಮಕ್ಕಳೇ ಕಂಡುಕೊಂಡಿದ್ದಾರೆ.ಸಿಸ್ಟಮ್ನಲ್ಲಿ ಹುಡುಕಬೇಕಾದದ್ದು ‘ಮೌಲ್ಯ’ ವಲ್ಲ,ನಾವು ಕಳೆದುಕೊಂಡ ‘ಬಾಲ್ಯ’ ಎನ್ನುತ್ತಿದ್ದಾರೆ,ಆ ದಿಕ್ಕಿನತ್ತ ನಮ್ಮನ್ನು ನೋಡಲು ಕರೆಯುತ್ತಿದ್ದಾರೆ.ಫ್ರೇಮ್ಗಳಲ್ಲಿ ನಾವಿರಲಾರೆವು, ಬಾಕ್ಸ್ಗಳಲ್ಲಿ ಬಂಧಿಯಾಗಿರಲಾರೆವು ಎಂದುಖಡಾಖಂಡಿತವಾಗಿ ಹೇಳುತ್ತಿದ್ದಾರೆ.ನಾವು ಕಂಡ ದೂರವನ್ನು ಮೀರಿದ ದಿಗಂತಗಳನ್ನುಅವರು ಕಾಣುತ್ತಿದ್ದಾರೆ.ನಾವು ರೂಢಿಸಿಕೊಂಡ ಲೋಕವನ್ನು ಸಮಾಧಿ ಮಾಡಿ,ತಾವು ಕನಸು ಕಾಣುವ ಹೊಸ ಜಗತ್ತನ್ನು ನೋಡಲು ಹೇಳುತ್ತಿದ್ದಾರೆ.ಭ್ರಷ್ಟಾಚಾರ, ಅಕ್ರಮ, ಅನ್ಯಾಯ, ದೌರ್ಜನ್ಯ—ನಮ್ಮ ಜಾತಿಗೆ ‘ವೆರಿ ನಾರ್ಮಲ್’ .ಆದರೆ ಮಕ್ಕಳು ಈಗ ಅವುಗಳನ್ನು ‘ಅಬ್ನಾರ್ಮಲ್’ ಎನ್ನುತ್ತಿದ್ದಾರೆ.ಅವರು ‘ಜೆನ್ ಜೀ’ಗಳು ಅಲ್ಲವೇ!‘ ಜೀ ಹುಜೂರ್’ ಎಂಬ ಗುಲಾಮಗಿರಿಯನ್ನು ಬಿಟ್ಟು,ಆತ್ಮಗೌರವದಿಂದ ಬದುಕುತ್ತಾ,ತಮ್ಮ ಭಾಷೆಯ ಎಬಿಸಿಡಿಗಳನ್ನು ನಮ್ಮನ್ನು ಕಲಿಯಲು ಹೇಳುತ್ತಿದ್ದಾರೆ.‘ಟೆಕ್ನೋ ಕಿಡ್ಸ್’ ಆಗಿ ಬೆಳೆಸಿದ್ದೇವೆ ಅಲ್ಲವೇ…ಇವರಿಗೇನು ಭಾವನೆಗಳಿರುತ್ತವೆ ಅಂದುಕೊಂಡಿದ್ದೇವೆ.ರೋಬೋ ಪೀಳಿಗೆ,ಇವರಿಗೇನು ಅನುಬಂಧಗಳಿರುತ್ತವೆ ಅಂದುಕೊಂಡಿದ್ದೇವೆ.ಆದರೆ ‘ಜಂತರ್ ಮಂತರ್’ ಸಾಕ್ಷಿಯಾಗಿ ಹೇಳುತ್ತಿದ್ದಾರೆ—ಅವರ ಭಾವನೆಗಳು ಈ ಮಣ್ಣಿನೊಂದಿಗೆ..ಈ ಅಣಕಿಸಲ್ಪಟ್ಟ ಜನರೊಂದಿಗೆ..ತಮ್ಮನ್ನು ಸುತ್ತುವರಿದ ಪ್ರಕೃತಿಯೊಂದಿಗೆ..‘ಪ್ರಶಾಂತ’ವಾದ ನಾಳೆಯೊಂದಿಗೆ ಹೆಣೆದಿವೆ!ಇದನ್ನು ಕೇವಲ ‘ಪೇಪರ್ ಲೀಕ್’ ಕನ್ನಡಕದಿಂದಷ್ಟೇ ನೋಡಬೇಡಿ,ಅವರು ಕಳೆದುಕೊಂಡ ವ್ಯವಸ್ಥೆಯ ಮೇಲಿನಅಪನಂಬಿಕೆಯ ಪರಾಕಾಷ್ಠೆಯಾಗಿ ನೋಡಿ.ಟಿಯರ್ ಗ್ಯಾಸ್, ವಾಟರ್ ಗನ್, ಲಾಠಿಚಾರ್ಜ್ಗಳುಅವರ ಮನೋಬಲದ ಮುಂದೆತಲೆಬಾಗಲೇಬೇಕು ಎಂಬುದನ್ನು ಅರಿತುಕೊಳ್ಳಿ.ಇದು‘ಜನ್’ ತರಂಗ – ‘ಮನ್’ ತರಂಗ.ಈಗ ಅವರಿಗೆ ನಾವುಗಳೇ ಮಕ್ಕಳು!ಕ್ಲೈಮ್ಯಾಕ್ಸ್ಗೆ ಬಂದಿರುವ ಈ ಕಥೆಯಲ್ಲಿಬೇಕಾಗಿರುವುದು ‘ಐಮ್ಯಾಕ್ಸ್’ ಸೀನ್ಗಳಲ್ಲ,‘ಜೆನ್ ಜೀ’ ಗುರುಕುಲದ ಪಾಠಗಳು!ಅವರ ಸಿಲಬಸ್ ಅನ್ನು ಅವರ ಭಾಷೆಯಲ್ಲೇ ಕಲಿಯೋಣ ಬನ್ನಿ.ಈ ವಯಸ್ಸಿನಲ್ಲಿ ಮತ್ತೊಮ್ಮೆ ಮಕ್ಕಳಾಗಿ,ಬುದ್ಧಿಯಲ್ಲಿ ಹಿರಿಯರಾದ ಅವರ ಗುರುತ್ವದಲ್ಲಿಹೊಸ ಗಾಳಿಯನ್ನು ಉಸಿರಾಡೋಣ.ಹೊಸ ಲೋಕದಲ್ಲಿ ಹೊಸ ಆಧಾರ್ ಕಾರ್ಡ್ಗೆ ಅರ್ಜಿ ಹಾಕೋಣ,ನಮ್ಮ ಪಾಸ್ಪೋರ್ಟ್ ಅನ್ನುಮತ್ತೊಮ್ಮೆ ಹೊಸದಾಗಿ ನಾವೇ ಹುಡುಕಿಕೊಳ್ಳೋಣ.ಬನ್ನಿ ಹೋಗೋಣ,‘ಜೆನ್ ಜಿ’ ಗುರುಕುಲಗಳಿಗೆ..‘ಮತ್ತೊಮ್ಮೆ ಹುಟ್ಟೋಣವೇ?’









