ಅನುವಾದ ಸಂಗಾತಿ
“ಸಂಗಮ”
ತೆಲುಗು ಕವಿತೆ,
ಮೂಲ ಡಾ. ದೇವರಾಜು ಮಹಾರಾಜು
ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು


ಒಂದೊಂದು ಪದವನ್ನೇ ಆಯ್ದುಕೊಳ್ಳುತ್ತಾ ಆಯ್ದುಕೊಳ್ಳುತ್ತಾ
ಪುಟ್ಟಮಗು ಬೆಂಕಿಪೆಟ್ಟಿಗೆಯ ರೈಲುಗಾಡಿಯನ್ನು ತಯಾರುಮಾಡಿದಂತೆ
ನಾನೊಂದುಬ ವಾಕ್ಯವನ್ನು ತಯಾರುಮಾಡುತ್ತೇನೆ
ವಿಚಿತ್ರ? ಅದು ತಯಾರಾದಕೂಡಲೇ
ದ್ರವರೂಪವನ್ನು ಅಳವಡಿಸಿಕೊಳ್ಳುತ್ತದೆ
ಅಷ್ಟೇಅಲ್ಲ, ಪ್ರವಾಹವೇಗದಿಂದ ಸಾಗುತ್ತದೆ
ಅದರಜೊತೆಗೆ ನಾನೋ, ನನ್ನಜೊತೆಗೆ ಅದೋ ತಿಳಿಯದಂತೆ
ನಾವಿಬ್ಬರೂ ಕವನ ಸಮುದ್ರದಲ್ಲಿ ಭೇಟಿ ಆಗುತ್ತೇವೆ
ಮನಸ್ಸಿನಲ್ಲಿ ಸುಳಿಗಳು ತಿರುಗಿ ತಿರುಗಿ, ಕಟ್ಟೆ ಒಡೆದು
ಹಾಳೆಯ ಮೇಲೆ ಪ್ರವಹಿಸಿದ ನದಿ
ಕವನ ಸಮುದ್ರದಲ್ಲಿ ಸೇರದೆ ಏನಾಗುತ್ತದೆ?
ವೈಯಕ್ತಿಕ ಭಾವನಗಳೆಲ್ಲವೂ ಕಳೆದುಕೊಂಡಿರುವೆನೆಂದು
ನನ್ನವು ನನ್ನವಾಗದೆ ಹೋಗಿವೆ ಎಂದು
ಯಾವುದೋ ಕೊರೆತೆಯಿಂದ , ಯಾವುದೊ ದಿಗಿಲಿನಿಂದ
ಬೆಪ್ಪುಮೂರೇ ಹಾಕಿಕೊಂಡು ಮುಗ್ಧವಾಗಿ ಗುಕ್ಕುಹಿಡಿಯುತ್ತೇನೆ
ಆಗ ಕವನ ಸಮುದ್ರದಲ್ಲಿ ಕದುಲುತ್ತಿರುವ ಒಬ್ಬ ಓದುಗ ಋಷಿ
ನನ್ನನ್ನು ಅಪ್ಪಿಕೊಂಡು ಸಂತೈಸುತ್ತಾನೆ
ನೀನೀಗ ಕವಿ-ಎನ್ನುತ್ತಾನೆ
ರಚನೆಯ – ರವಿಎನ್ನುತ್ತಾನೆ
ನಿನ್ನದೆಂದುಕೊಳ್ಳುವುದು ನಿನ್ನದಲ್ಲ, ಅದು ಸಾಮಾಜಿಕ- ಎನ್ನುತ್ತಾನೆ
ನಿನ್ನ ಒಣ ಭಾವನೆಗಳು ಈಗ ಆಳಗಳನ್ನು ಅಳವಡಿಸಿಕೊಂಡು
ವಿಸ್ತಾರಗೊಂಡು ವಿಶ್ವವವೆಲ್ಲಾ ವ್ಯಾಪಿಸಿದ
ಕವನವು – ಎನ್ನುತ್ತಾನೆ
ಇಲ್ಲಿನೋಡು, ಈ ನೆಗೆಯುತ್ತಿರುವ ಅಲೆಗಳ ಆರ್ಭಟ?
ನಿನ್ನ ಅಮೃತಮಯ ಸೃಜನಶೀಲತೆಯಲ್ಲಿ ನಾನೀಗ
ಅನಂತತ್ವವನ್ನು, ಅಮರತ್ವವನ್ನು
ಪಡೆಯುತ್ತಿದ್ದೇನೆ- ಎನ್ನುತ್ತಾನೆ
ಎನ್ನುತ್ತಲೇ- ಕರುಣೆಯಿಂದ
ನನ್ನನ್ನು ದಡಕ್ಕೆ ಸೇರಿಸುತ್ತಾನೇ
ನಾನೊಂದು ಮೌನ ಸಮುದ್ರಯಾಗುತ್ತೇನೆ
ಕವನದ ಸಮುದ್ರದ ಅಲೆಗಳು
ನನ್ನಲ್ಲಿ ಎದ್ದು ಬೀಳುತ್ತಿರುತ್ತವೆ!
ತೆಲುಗು ಮೂಲ : ಡಾ. ದೇವರಾಜು ಮಹಾರಾಜು
ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು



