ಕಾವ್ಯ ಸಂಗಾತಿ
ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ
” ಅಜ್ಞಾನಿ ಕೈಯಲ್ಲಿ ವಿಜ್ಞಾನ “


ತಾಂತ್ರಿಕ ಯುಗದಲ್ಲಿ
ಮನುಜ ಯಾಂತ್ರಿಕನಾಗಿ
ಯಂತ್ರ ಮಾನವ ಸೃಷ್ಟಿಸಿ
ಕುತಂತ್ರ ಜ್ಞಾನ ಬೆಳೆಸುತ್ತಿದ್ದಾನೆ
ತಾತ್ವಿಕ ತಳದಿ ತಳ್ಳಿ ಹಾಕಿ
ಮಾನವೀಯ ಮೌಲ್ಯಗಳ ಮರೆತು
ಸಂಚು ಮಾಡಿ ಹೊಂಚು ಹಾಕಿ
ವಿಕೃತಿ ಮೆರೆಯುತ್ತಿದ್ದಾನೆ
ವೈಚಾರಿಕತೆ ಇಲ್ಲದ ವಿಜ್ಞಾನಿ
ಅಜ್ಞಾನದ ಅಂಧಕಾರದಲಿ
ಅಪಾಯಕಾರಿ ಅನ್ವಸ್ತ್ರಗಳಿಂದ
ನಾಗರಿಕತೆ ನಾಶಗೊಳಿಸುತ್ತಿದ್ದಾನೆ
ಭಾವನೆಗಳನ್ನು ಬರುಡಾಗಿಸಿ
ಅಧರ್ಮದ ಅಡ್ಡ ದಾರಿಯಲ್ಲಿ
ದುರಾಸೆಯ ದಾಸನಾಗಿ
ಧರ್ಮದ್ರೋಹಿಯಾಗುತ್ತಿದ್ದಾನೆ
ವಿಜ್ಞಾನ ಅಜ್ಞಾನಕ್ಕೆ ಕಾರಣವಾಗಿ
ಮಾನವತೆ ಮೌನವಾಗಿದೆ
ಹೇಡಿಗಳ ಹಗೆತನದಿಂದ
ಅಶಾಂತಿಯ ಸಮರ ಸಾರುತ್ತಿದೆ
ವಿಜ್ಞಾನಿಗಳು ಸುಜ್ಞಾನಿಗಳಾಗಿ
ವಿನಾಶ ತಡೆವ ವಿವೇಕಿಗಳಾಗಬೇಕಿದೆ
ಸ್ವಾರ್ಥ ಬಿಟ್ಟು,ಪ್ರೇಮ ಕೊಟ್ಟು
ಸಾಮರಸ್ಯದ ಜಗವ ಬೆಳಗಬೇಕಿದೆ
ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ




Superb
Super