ಐದನೇ ವಾರ್ಷಿಕೋತ್ಸವ ವಿಶೇಷ

ರಾಕಿ/ನಾಲಾಯಕಿ,

ಅಣ್ಣಾ ಎಂದು ಅಂದು
ಕಟ್ಟಿದಳು ರಾಕಿ
ಮಾವಾ ಎಂದು ಇಂದು
ಮುತ್ತಿಟ್ಟಳು ನಾಲಾಯಕಿ!

90ರ ದಶಕದ ಕಾಲಘಟ್ಟದಲ್ಲಿ ಬದುಕು ಬಡತನದ ಸುಳಿಗೆ ಸಿಕ್ಕು ಒದ್ದಾಡುತ್ತಿರುವಾಗ ಆಸರೆಗೊಂದು ಕಡ್ಡಿ ಸಿಕ್ಕರೆ ಸಾಕು ಎನ್ನುವಾಗ  ಟಿ,ಸಿ,ಎಚ್ ಪ್ರವೇಶ ದೊರೆಯಿತು. ಆ ಕಾಲೇಜಿನಲ್ಲಿ ಎಲ್ಲರೂ ಒಂದೊಂದು ಗುರಿಯೊಂದಿಗೆ ತಮ್ಮ ಬಡತನವನ್ನು ಮೆಟ್ಟಿ ನಿಂತ ನಿಲ್ಲಬೇಕೆಂಬ ಛಲವನ್ನು ಹೊತ್ತು ವಿದ್ಯೆ ಕಲಿಯಲೆಂದೆ ಬಂದವರಾಗಿದ್ದರು. ಎಲ್ಲರಿಗೂ ಬಡತನದ ಹಸಿವಿತ್ತು, ಓದುವ ದಾಹವಿತ್ತು, ಇಂತಹ ಒಂದು ಸಮಯದಲ್ಲಿ ನಾವೆಲ್ಲರೂ ಕೂಡ ನಮ್ಮ ನಮ್ಮ ಸ್ಟೌವನಲ್ಲಿಯೇ ನಾವೇ ಅನ್ನ ಮಾಡಿಕೊಂಡು ಕಲಿಯುವ ಒಂದು ವ್ಯವಸ್ಥೆ ಅಲ್ಲಿತ್ತು. ಅದೊಂದು ಹಾಸ್ಟೆಲ್ ಅಂತಿದ್ದರೂ ಅದು ಸ್ವತಂತ್ರ ಪೂರ್ವದಲ್ಲಿ  ಜೈಲರ್ ಗಳಿಗೆ ಕೊಟ್ಟಂತಹ ರೂಮುಗಳು ಅವು.

ಸುಮಾರು 20ರಿಂದ 30 ಯುವ್ ಆಕಾರದ ರೂಮುಗಳು ಅದರ ಎದುರಿಗೆ ಸುಮಾರು 20 ಹುಡುಗಿಯರ ರೂಮ್ಗಳು, ಹೀಗಿರಬೇಕಾದರೆ ಎಲ್ಲರೂ ಸಹೋದರ ಸಹೋದರಿಯರಂತೆ ಪ್ರಥಮ ವರ್ಷಕ್ಕೆ ಪ್ರವೇಶವನ್ನು ಪಡೆದದ್ದಾಗಿತ್ತು. ಆದರೆ ಆ ವಯಸ್ಸು ಪ್ರೀತಿ ಪ್ರೇಮದಲ್ಲಿ ಮುಳುಗಿ ಏಳುವ ವಯಸ್ಸಾಗಿತ್ತು. ಯಾರ ಮನಸ್ಸಿನಲ್ಲಿ ಯಾರ ಪ್ರೇಮಿಯೂ ಎಂಬುದು ಒಬ್ಬರಿಗೂ ಅರ್ಥವಾಗಿರುತ್ತಿದ್ದಿಲ್ಲ. ಹೀಗಿರುವಾಗ ಅಂದು ನೂಲು ಹುಣ್ಣಿಮೆ ಎಲ್ಲಾ ಹಾಸ್ಟೆಲಿನ ಹುಡುಗಿಯರು ರಾಕಿ ಕಟ್ಟಲು ಗುಂಪು ಮಾಡಿಕೊಂಡು ಹುಡುಗರ ಹಾಸ್ಟೆಲಿಗೆ ನುಗ್ಗಿಯೇ ಬಿಟ್ಟರು. ಮನಸ್ಸಿಲ್ಲದಿದ್ದರೂ ಮನಸ್ಸಿನಿಂದ ಎಲ್ಲ ಹುಡುಗರಿಗೂ ರಾಕಿ ಕಟ್ಟಿಯೇ ಬಿಟ್ಟರು.

ನಾನಂತೂ ಅಂದು ಬಲು ಖುಷಿಗೊಂಡಿದ್ದೆ ಕಾರಣವಿಷ್ಟೇ ಎಲ್ಲರೂ ನನಗೆ ಸಹೋದರಿಯರೆ, ಯಾರನ್ನು ನಾನು ಪ್ರೇಮಿಸುವ ಹಾಗಿಲ್ಲ, ನನ್ನ ಓದು ನನ್ನ ಗುರಿ ತಲುಪಲು ನನಗೆ ಇದೊಂದು ಸುವರ್ಣ ಅವಕಾಶವೆಂದು ಹಿರಿಹಿರಿ ಹಿಗ್ಗಿದ್ದೆ. ಆದರೆ ಈ ಅವಕಾಶ ಎಲ್ಲಿಯವರೆಗೆ ನಮ್ಮ ಹಾಸ್ಟೆಲ್ ನಲ್ಲಿರುವ ಒಬ್ಬ ಹುಡುಗನನ್ನು ಎದುರು ಹಾಸ್ಟೆಲ್ ನಲ್ಲಿರುವ ಒಬ್ಬ ಹುಡುಗಿ ಪ್ರೇಮಿಸೇ ಬಿಟ್ಟಳು. ಅವರಿಬ್ಬರೂ ಪ್ರೇಮದಲ್ಲಿ ಮುಳುಗಿದ್ದೆ ಮುಳುಗಿದ್ದು, ಕೆಲವೊಬ್ಬ ಹುಡುಗರು ಇವರಿಂದ ಡಿಸ್ಟರ್ಬ್ ಕೂಡ ಆದರೂ.

ನಾವು ಹೇಗಾದರೂ ಮಾಡಿ ಅವರನ್ನು ಈ ಪ್ರೇಮದಿಂದ ಹೊರಗೆ ತರಬೇಕೆಂದು ಅವರಿಗೆ ಕೆಲವೊಂದು ಬುದ್ಧಿ ಮಾತುಗಳನ್ನು ಹೇಳಿದ್ದು ಆಯಿತು. ಚುಚ್ಚು ಮಾತುಗಳನ್ನು ಹೇಳಿದ್ದು ಆಯ್ತು. ಯಾವುದಕ್ಕೂ ಅವರು ಬಗ್ಗದೆ ತಮ್ಮ ಪಾಡಿಗೆ ತಾವು ಪ್ರೇಮದಾಟ ನಡೆಸುತ್ತಲೇ ಇದ್ದರು. ಹೀಗಿರುವಾಗ ಒಂದು ದಿನ ಕಾಲೇಜಿನಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸಿದ್ದರು. ಮುಂಜಾನೆ ಏರ್ಪಡಿಸಿದ ಆ ಕವಿಗೋಷ್ಠಿಯಲ್ಲಿ ಆ ಹುಡುಗಿ ನಮ್ಮ ಗುಂಪಿನಲ್ಲಿರುವ ಇಬ್ಬರನ್ನು ಗುರಿಯಾಗಿಟ್ಟುಕೊಂಡು ತನ್ನ ಕವಿತೆಯನ್ನು ವಾಚಿಸೇ ಬಿಟ್ಟಳು. ನಮಗೆ ಏನೋ ಒಂದು ರೀತಿಯ ಅವಮಾನ ಅಪಮಾನ ಆದ ಹಾಗೆ ಆಯಿತು. ಇದಾದ ಕೆಲ ದಿನಗಳ ನಂತರ ಮತ್ತೆ ಕವಿಗೋಷ್ಠಿಯನ್ನು ಕಾಲೇಜಿನಲ್ಲಿ ಏರ್ಪಡಿಸಿದ್ದರು. ಆಗ ಕವಿತೆ ಓದಲು ನಾನು ತಯಾರಿಯಾಗಿ ಹೋಗಿದ್ದೆ. ನಾನೊಂದು ಮೊದಲ ಚುಟುಕು ಬರದಿದ್ದೆ ಆ ಚುಟುಕು  ಆಕೆಯನ್ನೇ ಉದ್ದೇಶಿಸಿಯಾಗಿತ್ತು.

ಅಣ್ಣ ಎಂದು ಅಂದು ಕಟ್ಟಿದಳು ರಾಕಿ,
ಮಾವ ಎಂದು ಇಂದು ಮುತ್ತಿಟ್ಟಳು ಈ ನಾಲಾಯಕಿ!

ಎಂದು ಚುಟುಕು ಓದುತ್ತಾ ಅವಳ ಕಡೆ ದೃಷ್ಟಿ ಬೀರಿದೆ. ಎಲ್ಲ ಹುಡುಗರ ದೃಷ್ಟಿಯೂ ಕೂಡ ಹಾಕಿಯೇ ಮೇಲೆಯೇ ಬಿತ್ತು, ಇಷ್ಟೇ ಸಾಕು ಆಕೆಗೆ ಅವಮಾನ ಅಪಮಾನವಾಗಲು ಅಲ್ಲಿಂದ ಎದ್ದವಳೇ ಸೀದಾ ತನ್ನ ರೂಮ್ಗೆ ಹೋಗಿ ಹಾಸಿಗೆ ಹಿಡಿದೇ ಬಿಟ್ಟಳು.

ಹೋಗಿ ಮಲಗಿದವಳು, ಯಾರು ಎಬ್ಬಿಸಿದರು ಮೇಲೆ ಏಳಲೇ ಇಲ್ಲ, ಮಾತನ್ನು ಕೂಡ ಆಡುವುದಿಲ್ಲ, ಮೂಕಿಯ ಹಾಗೆ ಉಸಿರಾಟ ಉಸಿರಾಡುತ್ತಿದ್ದಾಳೆ. ಕಣ್ಣು ತೆರೆಯುತ್ತಿಲ್ಲ, ಮಾತು ಆಡುತ್ತಿಲ್ಲ ಹೀಗೆ ಒಂದು ದಿನ ಹೋಯಿತು ಎರಡು ದಿನ ಹೋಯಿತು, ಒಂದು ವಾರ ಹೋದರು ಕೂಡ ಅವಳೇನು ಮೇಲೆ ಏಳಲೆ ಇಲ್ಲ. ಯಾರ ಜೊತೆಗೆ ಮಾತಾಡಲು ಇಲ್ಲ, ಕಳ್ಳ ಬೆಕ್ಕಿನ ಹಾಗೆ ತಾನೊಬ್ಬಳೆ ರೂಮಿನಲ್ಲಿ ಊಟ ಮಾಡುತ್ತಿದ್ದಳು ಎಂಬ ಸುದ್ದಿ ನಮ್ಮ ಕಿವಿಗೆ ಬಿತ್ತು. ಎಲ್ಲರೂ ನಮ್ಮನ್ನೇ ಟಾರ್ಗೆಟ್ ಮಾಡಿದರು ನಿಮ್ಮಿಂದಾನೆ ಆಕೆ ಹಾಗೆ ಆಗಿದ್ದು ಆಕೆಗೆ ಏನಾದರೂ ಅನಾಹುತವಾದರೆ ಅದಕ್ಕೆ ನೀವೇ ಕಾರಣ, ಮೊದಲು ನೀವು ಹೋಗಿ ಆಕೆಯ ಕ್ಷಮೆ ಕೇಳಿ, ಆಗ ಆಕಿ ಸರಿ ಹೋಗುತ್ತಾಳೆ ಎಂದು. ಆದರೆ ನಮಗೆ ಗೊತ್ತಿತ್ತು ಆಕೆ ಆಡುವುದು ಕಳ್ಳಾಟವೆಂದು. ನಾವು ಯಾವುದಕ್ಕೂ ಬಗ್ಗಲಿಲ್ಲ ಜಗ್ಗಲಿಲ್ಲ, ಅವರ ಅಕ್ಕಂದಿರು ಪಾಲಕರು ಬಂದು ಹೇಳಿದರು ನಾವೇನು ತಪ್ಪು ಮಾಡಿಲ್ಲ ನಾವೇಕೆ ಆಕೆಯ ಕ್ಷಮೆ ಕೇಳಬೇಕು ಎಂದು ಹಟ ಹಿಡಿದೆವು.

ಕೊನೆಗೆ ಹಾಸ್ಟೆಲಿನ ವಾರ್ಡನ್ ಬಂದು ನಮ್ಮ ಜೊತೆಗೆ ಬನ್ನಿ ಕ್ಷಮೆ ಕೇಳಿ ಅವಳು ಎದ್ದು ಕುಳಿತುಕೊಳ್ಳುತ್ತಾಳೆ ಅಂದರು. ಇಲ್ಲ ಸರ್ ನಾವು ತಪ್ಪು ಮಾಡಿಲ್ಲ ನಾವು ಬರೋದಿಲ್ಲ ನಾವೇಕೆ ಕ್ಷಮೆ ಕೇಳಬೇಕು ಎನ್ನುವುದಷ್ಟೇ ನಮ್ಮ ವಾದವಾಗಿತ್ತು. ಕೊನೆಗೆ ನಮ್ಮ ಗುಂಪಿನಲ್ಲಿ ಇದ್ದ ಒಬ್ಬ ಕಿಲಾಡಿ ಆ ಹಾಸ್ಟೆಲ್ ವಾರ್ಡನಿಗೆ ಒಂದು ಐಡಿಯಾ ಕೊಟ್ಟ. ಐಡಿಯಾದಂತೆ ಆ ವಾರ್ಡನ್ ಸೀದಾ ಅವಳ ರೂಮಿಗೆ ಹೋಗಿ ಅವಳ ಒಬ್ಬ ಸ್ನೇಹಿತೆಗೆ ಮನ ಒಲಿಸಿ ಬೀಡಿ ಸೇದಿಸಿ ಅವಳ ಬಾಯಿಯಿಂದ  ಅವಳ ಬಾಯಿಯೊಳಗೆ ಇಟ್ಟು ಅವಳ ಬಾಯಿಯೊಳಗೆ ಹೋಗೆ ಬಿಟ್ಟಾಗ ಕೆಮ್ಮುತ್ತಾ ಕೆಮ್ಮುತ್ತಾ ಎದ್ದು ಕುಳಿತಳು ನಾರಿ, ಕಣ್ಣು ತೆರೆದಳು ನಾರಿ ಎಂದು ಎಲ್ಲರೂ ಕೇಕೆ ಹಾಕಿದ್ದೆ ಹಾಕಿದ್ದು. ಅಂದಿನಿಂದ ಆಕೆ ತನ್ನಷ್ಟಕ್ಕೆ ತಾನು ಇದ್ದಳು ನಾವು ನಮ್ಮಷ್ಟಕ್ಕೆ ನಾವು ಇದ್ದೆವು.ಕಾಲೇಜು ಮುಗಿಸಿಕೊಂಡು ಬಂದು ಈಗ ನಮ್ಮ ದಾರಿಯಲ್ಲಿ ನಾವು ಬದುಕುತ್ತಿದ್ದೇವೆ. ಆದರು ಮೊದಲ ಹನಿಗವಿತೆಯಿಂದ ಈಗ ಹತ್ತು ಪುಸ್ತಕ ಪ್ರಕಟಿಸಿದ ಹೆಮ್ಮೆ ಇದ್ದರು ಮೊದಲ ಕವಿತೆ ಮಾಡಿದ ಎಡವಟ್ಟು ಇಂದಿಗೂ ಮರೆಯಲಾಗುತ್ತಿಲ್ಲ


One thought on “ಐದನೇ ವಾರ್ಷಿಕೋತ್ಸವ ವಿಶೇಷ

Leave a Reply

Back To Top