ಉತ್ತಮ ದೊಡ್ಮನಿಯವರ “ಬೆಳಕು” ಕಾದಂಬರಿ ಕುರಿತು ಪ್ರಖ್ಯಾತ ಕನ್ನಡದ ಕಾದಂಬರಿಕಾರ ಕುo. ವೀರಭದ್ರಪ್ಪನವರ ಮುನ್ನುಡಿ.

ಅಮೃತ ಬಳ್ಳಿಗಿಂತ ತುಸು ದಪ್ಪ, ವೀರ ಗಲ್ಲಿಗಿಂತ ತುಸು ಕುಳ್ಳಗಿರುವ ದೇಹದ ತುಂಬೆಲ್ಲ ಕುರುಚಲ ಕಾಡನ್ನು ಮುಡಿದಿರುವ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಕೈದಿಯಂತೆ ಅಥವಾ ಅರೆಕಾಲಿಕ ಸಂತನಂತೆ ಸದಾ ಅತೃಪ್ತಿಯನ್ನು ಪಲ್ಲವಿಸುತ್ತಿರುವ ಈ ಅವಿವಾಹಿತ ಯುವ ಲೇಖಕ ನನಗೆ ಕಳೆದ ಒಂದೆರಡು ವರ್ಷಗಳ ಹಿಂದೆಯೆ ಪರಿಚಯನಿದ್ದ.ಒಮ್ಮೆ ನೋಡಿದರೆ ಆವರಿಸಿಕೊಳ್ಳುವ ಎದುರಾಳಿಗೆ ತಟ್ಟುವಂತೆ ಮಾತನಾಡುವ ಉತ್ತಮ ದೊಡ್ಮನಿ ಅಶಾಂತ ಸಂತ. ಮೇಲ್ನೋಟಕೆ ನಿರುಪದ್ರವಿ, ಆದರೆ ಜಾತಿ ವ್ಯವಸ್ಥೆಯ ಪೋಷಕರಿಗೆ ನಿತ್ಯೋಪದ್ರವಿ.
      ಕಲ್ಬುರ್ಗಿ ಜಿಲ್ಲೆಯ ಮಹಾರಾಷ್ಟ್ರದ ಗಡಿಯಲ್ಲಿರುವ ಆಳಂದದಲ್ಲಿ ಈ ತರುಣ ಅವತರಿಸಿದ್ದು. ಆಗಾಧ ತಿಪ್ಪೆಯ ಆಳದಲ್ಲಿದ್ದ ಅಕ್ಷರಗಳನ್ನು ತನ್ನ ಕೊಕ್ಕಿನಿಂದ ಬೆದಕಿ ಹೊರತೆಗೆದು ಗುಳುಂ ಗುಳುಂ ಎಂದು ನುಂಗುತ್ತ ಅಕ್ಷರವಂತನಾದ ನಿಮ್ನ ಸಮುದಾಯ ಸಂಜಾತ ಕುಕ್ಕಟವೇ ಸರಿ. ಆ ಊರಲೊಂಚುರು ಈ ಊರಲೊಂಚುರು ಓದಿ ಪದವೀಧರ ಎನಿಸಿಕೊಂಡ. ಕಾಲೇಜು ದಿನಗಳಲ್ಲಿ ಪ್ರೇಮದ ಪಠ್ಯಾಂಶದಲ್ಲಿ ಕಣ್ಣಾಡಿಸಬೇಕಿತ್ತು. ಆದರೆ ಈ ಮೃದ್ವಂಗಿ ತನ್ನ ಹಾಗೂ ತನ್ನ ಸಮುದಾಯದ ಮೇಲಿನ ಅವಮಾನ ಮತ್ತು ಶೋಷಣೆಗಳ ವಿರುದ್ಧ ದನಿ ಎತ್ತಲು ಹತಾಶ ಪ್ರಯತ್ನ ನಡೆಸಿದ.
      ಎಲ್ಲಾ ಶೋಷಿತರ ಹಣೆಬರದಂತೆ ಈ ಯುವಕ ಸಹ ಕಲಿತ ಅಕ್ಷರಗಳನ್ನು ಅಸ್ತ್ರಗಳನ್ನಾಗಿ ಪರಿವರ್ತಿಸಿ ಕೊಂಡ. ಬಾಬಾಸಾಹೇಬರ ಕೃತಿಗಳ ಗರಡಿಯಲ್ಲಿ ಪಳಗಿ ಕುಸ್ತಿಪುಟ್ಟುಗಳನ್ನು ಆವಹಿಸಿಕೊಂಡ. ಮುಷ್ಟಿಯಲ್ಲಿರುವ ಒಂದು ಹಿಡಿ ಅಕ್ಷರಗಳನ್ನು ವಾಕ್ಯಾಗಳನ್ನಾಗಿ ಪರಿವರ್ತಿಸುವುದು ಹೇಗೆ! ವಾಕ್ಯಾಗಳನ್ನು ಕವಿತೆಗಳನ್ನಾಗಿಸಿದರೆ ಹೇಗೆ! ಕಾದಂಬರಿಯನ್ನಾಗಿಸಿದರೆ ಹೇಗೆ! ಅಕ್ಷರಗಳನ್ನು ವಾಕ್ಯಾಗಳನ್ನಾಗಿಯೂ, ವಾಕ್ಯಗಳನ್ನು ಕವಿತೆ ಕಾದಂಬರಿಯನ್ನಾಗಿಯೂ…
   ಉದ್ಯೋಗ ರೀತ್ಯಾ ಮಹಾರಾಷ್ಟ್ರದ ಗಡಿಯಲ್ಲಿನ ಆಳಂದದಿಂದ ತೆಲಂಗಾಣದ ಗಡಿಯಲ್ಲಿನ ಚಿಂಚೋಳಿಗೆ ಬಿಜಯಂಗೈದ. ತನ್ನ ಸಾಹಿತ್ಯದ ಚೈತ್ರ ರಥಕ್ಕೆ ಸ್ಥಳೀಯ ಮತ್ತು ಬುದ್ಧ ಲೋಕವಿಹಾರಿಯೂ ಸಂತೋಷ ಕರಹರಿ ಹೆಸರಿನ ಇನ್ನೋರ್ವ ಬಹುಮುಖ ಪ್ರತಿಭಾಶಾಲಿ ಸಾರಥ್ಯವಹಿಸಿದ. ಇವರಿಬ್ಬರ ಸಮ್ಮಿಲನ ‘ಕವಿಗೆ ಕವಿ ಮುನಿಯಂ’ ಎಂಬ ಕವಿವಾಣಿಯನ್ನು ಸುಳ್ಳು ಮಾಡಿತ್ತು. ಆತ ಈತನಲ್ಲಿ ಬುದ್ದನನ್ನು ಕಂಡರೆ ಈತ ಆತನಲ್ಲಿ ಸಿದ್ದಾರ್ಥನನ್ನು ಗುರುತಿಸಿಕೊಳ್ಳುವುದರ ಮೂಲಕ ಪರಸ್ಪರ ಅನ್ಯೋನ್ಯತೆ ಸಾಧಿಸಿದ.
   ಹ್ಹಾಂ.. ಅಂದಹಾಗೆ  ‘ಕವಿರಾಜಮಾರ್ಗ’ದ ಶ್ರೀವಿಜಯ ಇವರನ್ನು ನೋಡಿಯೇ ಹೇಳಿರಬಹುದು, ‘ಪಲವು ಕನ್ನಡಂಗಳ’  ಎಂದು.ದೊಡ್ಮನಿ ಕನ್ನಡದ ತೊಟ್ಟಿಲಲ್ಲಿ ಮರಾಠಿ ಶಿಶು ಆಡುತ್ತಿದ್ದರೆ, ಕರಹರಿಯ ತೊಟ್ಟಿಲಲ್ಲಿ ತೆಲಂಗಾಣ ಶೈಲಿ ತೆಲುಗು, ಮರಾಠಿ ಶೈಲಿಯ ಕನ್ನಡ ಶಿಶು ಲೀಲಾ-ವಿನೋದ ಮರೆಯುತ್ತಿರುವುದು. ಹೀಗಾಗಿ ಇವರಿವರ ಪ್ರಾದೇಶಿಕ ಕನ್ನಡವನ್ನು ಅರ್ಥ ಮಾಡಿಕೊಳ್ಳುವುದು ಸಾಕ್ಷಾತ್ ಶ್ರೀವಿಜಯನಿಗೆ ಅಸಾಧ್ಯ. ಇನ್ನು ನನ್ನಂಥ ಬಡಸಾಹಿತ್ಯ ಶಿಶುವಿಗೆ ಸಾಧ್ಯವೇ! ಪ್ರಾದೇಶಿಕತೆಯೇ ಕನ್ನಡದ ದೊಡ್ಡ ಶಕ್ತಿ. ನಿಸ್ಸಂದೇಹವಾಗಿ  ಆ ಸ್ಥಳೀಯತೆ ಇವರ ಸ್ಥಾಯಿಭಾವ. ಹೆಗ್ಗಡದೇವನಕೋಟೆಯ ಕನ್ನಡ ‘ಕುಸುಮಬಾಲೆ’ಯ ತಾಕತ್ತು ಹೇಗೋ ಹಾಗೆ ಈ ಪ್ರಾದೇಶಿಕ ನುಡಿ ಸೊಬಗು ಈ ಯುವಲೇಖಕರ ತಾಕತ್ತು ಕೂಡ.
   ನಮ್ಮ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ಶಾಸ್ತ್ರೀಯ ಭಾಷಾ ಸಂಸ್ಥಾನಗಳು ನಾಡ ಗಡಿಭಾಗದ ಆಡುಗನ್ನಡ ಪದಗಳ ನಿಘಂಟನ್ನು ನಿರ್ಮಿಸಬೇಕು. ಅದಕ್ಕೆ ಪೂರಕವಾಗಿ ಇಂಥ ಪ್ರಾದೇಶಿಕ ಕೃತಿಗಳಲ್ಲಿನ ಪದಗಳನ್ನು ಆಯ್ದು ಸಂಗ್ರಹಿಸಬೇಕು. ದೇಸೀಯ ಕನ್ನಡ ಕೃತಿಗಳನ್ನು ಕಾಪಿರಿಸಿಕೊಳ್ಳುವ ಕಾರ್ಯವನ್ನು ಕೈಗೊಳ್ಳಬೇಕು. ಈಗಾಗಲೇ ಕವನ ಸಂಕಲನ ಪ್ರಕಟಿಸಿರುವ ಉತ್ತಮ ದೊಡ್ಮನಿ ಈಗ ‘ಬೆಳಕು’ ಹೆಸರಿನ ಕಾದಂಬರಿಯನ್ನು ನೀಡಿ ಕನ್ನಡ ಸಾರಸ್ವತ ಲೋಕವನ್ನು ದಿಗ್ಭ್ರಮೆಗೊಳಿಸುವ ಸನ್ನಾಹದಲ್ಲಿದ್ದಾನೆ.
   ಅಂದಮಾತ್ರಕ್ಕೆ ಬೆಳಕು ಈತನ ಚೊಚ್ಚಿಲು ಕೃತಿಯಲ್ಲ, ಇದಕ್ಕೂ ಮೊದಲೇ ಒಂದೆರಡು ಕವನ ಸಂಕಲಗಳನ್ನು ಪ್ರಕಟಿಸಿ ಗೆಳೆಯರ ವಲಯದಲ್ಲಿ ಕವಿ ಎಂದು ಹೆಸರು ಮಾಡಿದ್ದಾನೆ. ದಲಿತ ಸಾಹಿತ್ಯವನ್ನು ಕೂಲಂಕುಷ ಅಧ್ಯಯನ ಮಾಡುತ್ತಾ ಕಾದಂಬರಿ ಬರೆದರೆ ಹೇಗೆಂದು ಯೋಚಿಸಿದ. ‘ಕತೆ ಕಾದಂಬರಿ ಬರೀ ದೊಡ್ಮನಿ’ ಹಿಂದ್ಯಾವತ್ತೋ ಹೇಳಿದನು ಈ ವ್ಯಕ್ತಿ ಆಜ್ಞೆ ಎಂದೇ ಪರಿಭಾವಿಸಿದ. ಹೇಳಿದ ಕೆಲವು ತಿಂಗಳುಗಳಲ್ಲಿ ಅಲ್ಲೆಲ್ಲಿಂದಲೋ ಇಲ್ಲಿಗೆ ಬಂದು ನಮ್ಮನೆ ಬಾಗಿಲು ಬಡಿದ. ‘ತಗೋರಿ  ನನ್ನ ಕಾದಂಬರಿ’ ಎಂದು ನನ್ನ ಕೈಗಿಟ್ಟ. ‘ಚಲೋ ಕೆಲಸ ಮಾಡಿಯಪಾ’ ಎಂದು ಅಭಿನಂದಿಸಿದೆ. ಬಳಿಕ ನಾನೇ ‘ಈ ಕಮ್ಮಿ ಟೈಮಿನಾಗ ಅದೆಂಗ ಬರೆದ್ಯೋ ಮಾರಾಯ’ ಎಂದು ಕೇಳಿದೆ. ಅದಕ್ಕೆ ಈತ, ‘ಬರಿಬೇಕೆನ್ನಿಸ್ತು ಸರಾ, ಬರೆದು ಮುಗಿಸಿಬಿಟ್ಟೆ’ ಎಂದು ಆತ್ಮವಿಶ್ವಾಸ ಮೆರೆದ. ಈತನ ಸಾಹಿತ್ಯೋತ್ಸಾವ ನನ್ನನ್ನು ಬೆರಗುಗೊಳಿಸಿತು. ‘ಇದಕ ನೀವೇ ಮುನ್ನುಡಿನ ಬರೀಬೇಕ್ರಿ ಸರಾ’ ಎಂದು ಕಟ್ಟಪ್ಪಣೆ ಮಾಡಿದೊಡನೆ ನನ್ನೆದೆ ಹುಡುಕೊಳ್ಳಲಾರಂಭಿಸಿತ್ತು.
   ಎದೆ ಹುಡುಕೊಳ್ಳೋಕೆ ಕಾರಣ ಇಲ್ಲದಿರಲಿಲ್ಲ. ಗುರುಜಾಡ ಅಪ್ಪರಾವ್ ರ ತೆಲುಗು ಕಥೆಗಳನ್ನು ಕನ್ನಡಕ್ಕೆ ಅನುವಾದಿಸುವ ತುರ್ತು ಕಾಯಕದಲ್ಲಿ ತೊಡಗಿದ್ದೆ. ಜೊತೆಗೆ ‘ಮಾಕನಡುಕ’ ಕಾದಂಬರಿ ನನ್ನಿಂದ ಬರೆಸಿಕೊಳ್ಳಲಾರಂಬಿಸಿತ್ತು. ಈ ಕಾರ್ಯಬಾಹುಳ್ಯ ಕಾರಣಕ್ಕೆ ಹೃದಯ ಬಡಿತದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಅಷ್ಟು ಹೊರತುಪಡಿಸಿದರೆ ಇಂಥ ಉತ್ಸಾಹಿ ಗ್ರಾಮೀಣ ಹಿನ್ನೆಲೆಯ, ಅದೂ ನನ್ನಂತೆ ಶಾಲಾ ಮಾಸ್ತರನ ಕೃತಿಗಳ ಆರಂಭಿಕ ಓದುಗನಾಗುವುದು ನನ್ನ ಸೌಭಾಗ್ಯವೇ!

         ಆರಂಭದ ಪುಟದ ಮೇಲೆ ಗ್ರಾಾನ್ಸ್ ಮಾಡಿದೆ.

  ‘ಯಲ್ಲಿ ನೋಡಿದ್ರಲ್ಲಿ ಕರಿ ಕತ್ತಲ್ಲ, ಕರ್ರುಗ.. ಕಣ್ಣಾಡುಸ್ದಟ್ಟು ಮನ್ಸ್ಯಾರೆ ಕಾಣಲ್ಲ, ಮತ್ತ ಜರಾನು ಅವಾಜ್ನು ಕೇಳಲ್ಲ..’ ಎಂಬ ಆರಂಭದ ವಾಕ್ಯದ ಮೂಲಕ ಕಾದಂಬರಿ ಪ್ರವೇಶಿಸಿ ಮೂಕವಿಸ್ಮಿತನಾದೆ. ‘ಈ ಕನ್ನಡನ ಹೆಂಗಪ್ಪ ಓದಿ ಅರಗಿಸಿಕೊಳ್ಳಲಿ!’ ಕೇಳಿದ್ದಕ್ಕೆ ಕರ್ತೃ ‘ಮುನ್ನುಡಿ ಬರ್ಯೋರು ತ್ರಾಸ ತಾಗೊಳ್ಳೋಕೆ ಬೇಕು ಸರಾ, ನಮ್ಮ ಕನ್ನಡ ನಮ್ದು ಸರಾ, ನಿಮ್ದು ಕನ್ನಡ ನಿಮ್ದು ಸರಾ, ಓದದಿದ್ದರೆ ನಮ್ಮ ಸೀಮೆ ಕನ್ನಡ ನಿಮುಗ್ಯಾಂಗ ಅರ್ಥಾಗಬೇಕು ಹೇಳರಿ’ ಎಂದು ವಿವರಿಸಿ ನನ್ನನ್ನು ಅಚ್ಚರ್ಯಚಿಕಿತನಾಗಿಸಿದ.
   ಆತನ ಮಾತು ಖರೆ ಅನ್ನಿಸಿತು. ಹಳ್ಳಿ ಮಂದಿ ಬದುಕೋಕೆ ಬರಸೀಮೆಯಿಂದ ನಗರಗಳ ಕಡೆ ವಲಸೆ ಹೋದಂತೆ ಅಲ್ಲಲ್ಲಿನ ಸ್ಥಳೀಯ ದೇಸೀ ಭಾಷೆಗಳು ಇನ್ನೊಂದು ಭಾಷಾ ಸೀಮೆಕಡೆ ವಲಸೆ ಹೋಗಬೇಕು. ಭಾಷೆಗಳ ಮಧ್ಯೆ ಸಂಕರ ನಡೆದು ಹೊಸಭಾಷೆ ಅವಿರ್ಭವಿಸಬೇಕು. ಆದರೆ ಈ ಭಾಷಾ ಪ್ರಯೋಗ ಸರಿಯೆ! ಕಾರಣ ಕೃತಿಯ ಓದಿಗೆ ಭಾಷೆ ಅಡ್ಡಿಯನ್ನುಂಟು ಮಾಡಬಾರದಲ್ಲವೆ? ಭಾಷೆ ಸುಲಿದ ಬಾಳೆಯ ಹಣ್ಣಿಂದದಿ ಪಂಚೇಂದ್ರಿಗಳನ್ನು ಆವರಿಸಿಕೊಳ್ಳಬೇಕಲ್ಲವೆ?
  ಕೇಳಿದ್ದಕ್ಕೆ ದೊಡ್ಮನಿ, ‘ಅಲ್ರಿ ಸರಾ ಬ್ಯಾರೆ ಕಡೆ ಇರೋ ಮಂದಿಗೆ ನಮ್ಮ ಈ ಭಾಷೆ ಯಾವಾಗ ತಿಳಿಬೇಕರೀ! ಅವರ ಪುಸ್ತಕಗಳನ್ನು ನಾವು ಒದಲ್ಲೇನರಿ, ಹಂಗ ನಮ್ಮ ಕೃತಿಗಳನ್ನು ಅವರು ಓದಬೇಕರೀ’ ಎಂದೂ ಜವಾಬು ನೀಡಿದ. ಆತನ ಅತುಲ ಆತ್ಮವಿಶ್ವಾಸದ ಮಾತಲ್ಲಿ ಜ್ವಲಂತ ಸತ್ಯವಿತ್ತು. ಆಗ ನನಗೆ ಶೀರ್ಷಾಸನ ಹಾಕಿದ ಅನುಭವವಾಯಿತು.
   ಕರ್ತೃ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಸರಾ ನನ್ನ ಈ ಕಾದಂಬರ್ಯಾಗ ಮೂರು ನಮೂನಿ ಪದಗಳಾದವರಿ, ಉರ್ದು, ಹಿಂದಿ, ಗುಲ್ಬರ್ಗ ಕನ್ನಡ. ಅದಲ್ಲದೆ ನಾನೀ ಕಾದಂಬರಿ ಬರೆದಿರೋದು ಅನುಸ್ವಾರನೇ ಇಲ್ಲ ಎಂದೂ ಹೇಳಿ ಪರಾಕ್ರಮಿ ಎಂದು ಸಾಬೀತುಪಡಿಸಿದ.
   ಹೌದು ಆತನ ಆ ಮಾತಲ್ಲಿ ಪ್ರಾಮಾಣಿಕತೆ, ಸತ್ಯಾಂಶ ಇತ್ತು. ಏನಾದರೂ ಬರೆದು ದಕ್ಕಿಸಿಕೊಳ್ಳಬಲ್ಲೆನೆಂಬ ಛಲವಿತ್ತು. ಮೇಲ್ಕಾಣಿಸಿದ ಕಾದಂಬರಿ ಆರಂಭದ ವಾಕ್ಯದಲ್ಲೇ ಪ್ರಾದೇಶಿಕ ಭಾಷೆಗಳ ಸಮ್ಮಿಶ್ರ ಸರ್ಕಾರವಿದೆ ಅನ್ನಿಸಿತು. ‘ಜರಾನು, ಅವಾಜ್ನೂ’ ಎಂಬುವ ಪಾರಿಭಾಷಿಕ ಪದಗಳ ಕಾದಂಬರಿಯಲ್ಲಿ ಕಿಕ್ಕಿರಿದೆವೆ. ‘ ಹುಡುಕುವುದು ‘ ಎಂಬ ಕ್ರಿಯಾಪದವನ್ನು ಇಲ್ಲಿ ‘ಹುಡ್ಕು ‘ ಎಂದು ಪ್ರಯೋಗಿಸಲಾಗಿದೆ. ‘ ಕುಡಿಯುವುದಕ್ಕೆ ‘ ಎಂಬ ಪದ ಇಲ್ಲಿ ‘ಕುಡಿಕ್ ‘ ಆಗಿದೆ. ಹೀಗೆ ಕಾದಂಬರಿಯ ಸಂವಹನದ ಪ್ರಧಾನ ಅಡಚಣೆ ಅಂದರೆ ಇಲ್ಲಿನ ಸ್ಥಳೀಯತೆ ಮತ್ತು ದೇಸೀಯತೆ.
    ಇಂಥ ಪ್ರಯೋಗವನ್ನು ಹಲವು ದಶಕಗಳ ಹಿಂದೆಯೇ ತಮ್ಮ ‘ ಬೆಳ್ಯಾ ‘ ಹೆಸರಿನ ಕಾದಂಬರಿಯಲ್ಲಿ ನೆರವೇರಿಸಿದ್ದ ಅಣ್ಣ ಚೆನ್ನಣ್ಣ ವಾಲೀಕರ ನೆನಪಾದ, ಆ ಕಾದಂಬರಿ ಸಾಹಿತ್ಯವಲಯದಲ್ಲಿ ಸ್ಥಳೀಯ ಭಾಷೆ ಕಾರಣಕ್ಕೆ ಕಮ್ಯುನಿಕೇಟಾಗಲಿಲ್ಲ. ಪ್ರತಿ ಕೃತಿಗಳಲ್ಲಿ ತಾನು ಲೀನವಾಗುತ್ತ ಕೊನೆಗೊಮ್ಮೆ ಕಣ್ಮರೆಯಾದ ಕಲ್ಯಾಣ ಕರ್ನಾಟಕದ ಮಹಾನ್ ಲೇಖಕ ನಮ್ಮ ಚೆನ್ನಣ್ಣ. ಈ ‘ ಕೇರ್ ಲೇಸ್ ‘ ಕಾರಣಕ್ಕೆ ಪುತ್ರ ಸಮಾನನಾದ ಉತ್ತಮ ದೊಡ್ಮನಿಯ ಈ ‘ ಬೆಳಕು ‘ ಕಾದಂಬರಿಯನ್ನು ಛಲದಿಂದ ಓದಬೇಕು. ಕಸರತ ಮಾಡಿ ಓದೋದು ಅಲ್ಲಲ್ಲಿನ ಸ್ಥಳೀಯ ಭಾಷೆಗೆ ಕೊಡುವ ಗೌರವ, ನಮಗೆ ನಾವೇ ನಡೆಸಿಕೊಳ್ಳುವ ತಾಲಿಮು. ಇಲ್ಲಿನ ಭೀಮಾಪುರ ಎಂಬ ಗ್ರಾಮ, ಬಸಪ್ಪ, ಸುಧಾ, ವಿವೇಕಾಗಳಂಥ ದೇಸೀಯ ಪಾತ್ರಗಳು ಅವರವರ ಜೀವನಶೈಲಿ, ಅಲ್ಲಲ್ಲಿನ ಘಟನವಳಿ ಇವೆಲ್ಲ ಅಂತರಂಗದ ಮೃದಂಗ ನುಡಿಸಬೇಕಾದರೆ ಇಲ್ಲಿನ ಭಾಷೆಗೆ ಮೊರೆ ಹೋಗೋದು ಅನಿವಾರ್ಯ.
    ಇನ್ನು ಈ ಕಾದಂಬರಿನ ಪ್ರವೇಶ ಮಾಡೋಣ.’ ಬೆಳಕು’ ನಿಸ್ಸಂದೇಹವಾಗಿ ಧ್ವನಿಪೂರ್ಣ ಶೀರ್ಷಿಕೆ. ಬಸಪ್ಪ ಕಾದಂಬರಿಯ ಮುಖ್ಯ ಪಾತ್ರ. ಕಾಡಲ್ಲಿ ಸಂಗ್ರಹಿಸಿದ ಜೇನನ್ನು ನಗರವಾಸಿಗಳಿಗೆ ಮಾರಿ ಸಂಸಾರ ನಿರ್ವಹಿಸುತ್ತಾನೆ. ಕಾಡನ್ನು, ಕಾಡುಪ್ರಾಣಿಗಳನ್ನು ಕರ್ತೃ ಕಾವ್ಯಮಯವಾಗಿ ವರ್ಣಿಸಿದ್ದಾನೆ. ಈ ಕಾದಂಬರಿಯಲ್ಲಿ ಪ್ರೀತಿ-ಪ್ರೇಮ ಪ್ರಕರಣಗಳಿರುವಂತೆ ಸ್ಥಳೀಯ ನಂಬಿಕೆ ಮೂಢವಿಶ್ವಾಸಗಳ ಪ್ರಸ್ತಾಪ ಸಹ ಇದೆ, ವಿದ್ಯೆಯ ಹಂಬಲ ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಇನ್ನು ಹಳ್ಳಿ ರಾಜಕಾರಣ, ವೈಶಮ್ಯಗಳಿತ್ಯಾದಿ ಕಾರಣಗಳಿಂದ ಕಾದಂಬರಿಯನ್ನು ನವರಸಗಳು ಆವರಿಸಿವೆ. ಗ್ರಾಮೀಣ ದೂರದರ್ಶಕ ಯಂತ್ರದಲ್ಲಿ ಕೋರೈಸುವ ಅತ್ಯಾಧುನಿಕ ಪ್ರಪಂಚ ಇಲ್ಲಿ ಅನಾವರಣಗೊಂಡಿದೆ.
   ‘ಜಾತಿ_ಮತ -ಧರ್ಮ… ಈವು ನೆಲಕ್ಕೆ ಹೀಡ್ಸದಲ್ಲ. ಪ್ರೀತಿ- ಪ್ರೇಮ- ಕರುಣೆ ಸಾಕು’ ಬಸಪ್ಪನ ಮಾತು ಕಾದಂಬರಿಗೆ ಮಂಗಳ ಹಾಡುತ್ತದೆ. ಕಾದಂಬರಿಯನ್ನು ಹೇಗೆ ಬರೆಯಬೇಕಿತ್ತು? ಹೇಗೆ ಬರೆಯಬಾರದಿತ್ತು? ಯಾವ್ಯಾವ ಅಂಶಗಳಿದ್ದರೆ ಕಾದಂಬರಿಗೆ ಮೆರಗು? ಇವೆಲ್ಲ ಹೇಳಿದಷ್ಟು ಸುಲಭವಲ್ಲ ಬರೆಯುವುದು. ಆ ಸೃಜನಶೀಲತೆಯನ್ನು ನಿರಂತರ ಶ್ರಮದಿಂದ ಆವಹಿಸಿಕೊಳ್ಳಬೇಕು.
    ಶೋಷಿತ ಸಮಾಜದ ಕಷ್ಟಕಾರ್ಪಣ್ಯಗಳಿಂದ ಕಿಕ್ಕಿರಿದಿರುವ ಕಾದಂಬರಿ ಈ ಬೆಳಕು. ಉತ್ತಮ ದೊಡ್ಮನಿ ಮಹತ್ವಾಕಾಂಕ್ಷೆಯಿಂದ ಅತ್ಯುತ್ಸಾಹದಿಂದ ಈ ಕಾದಂಬರಿಯನ್ನು ರಚಿಸಿದ್ದಾರೆ. ವಿಶಿಷ್ಟ ದೇಸೀ ಭಾಷೆಯಲ್ಲಿ ಬರೆದಿರುವ ಕಾರಣಕ್ಕೆ ಉತ್ತಮ ದೊಡ್ಮನಿನ ಅಭಿನಂದಿಸಬೇಕು.
    ಹಿರಿಯ ಲೇಖಕನಾಗಿ ಈ ಹೊಸತಲೆಮಾರಿನ ಯುವಲೇಖಕರಿಗೆ ಸಣ್ಣ ಕಿವಿಮಾತು. ನಿಮ್ಮಲ್ಲಿರುವ ಸಾಹಿತ್ಯೋತ್ಸವ ಶ್ಲಾಘನೀಯ, ಆದರೆ ಕನ್ನಡ ಕಾದಂಬರಿಗಳನ್ನು ಓದಿ ಅರಗಿಸಿಕೊಳ್ಳಬೇಕು. ಭಾಷೆಯ ಹಲವು ಸಾಧ್ಯತೆಗಳನ್ನು ಜಯಸಬೇಕು. ಆಯ್ದುಕೊಂಡ ವಸ್ತು ಭಾಷೆ ಜೊತೆಗೆ ಫಾರ್ಮೆಟ್ಟಾಗಬೇಕು. ಆಗ ಮಾತ್ರ ಬರಹ ಆರಂಭಿಸಬೇಕು. ಮತ್ತೆ ಮತ್ತೆ ಬರೆಯಬೇಕು. ಈ ಕೆಲಸವನ್ನು ನಮ್ಮೆಲ್ಲರ ಪ್ರೀತಿಯ ಉತ್ತಮ ದೊಡ್ಮನಿ ಮಾಡಬೇಕು. ಮುಂದೆ ಇದಕ್ಕಿಂತ ಉತ್ತಮ ರೀತಿಯ ಕೃತಿ ರಚಿಸಬೇಕು. ತನ್ನ ಕಾದಂಬರಿ ಓದಲು, ಓದಿ ನಾಲ್ಕಾರು ಮಾತು ಬರೆಯಲು ಅವಕಾಶ ಕಲ್ಪಿಸಿದ ಉತ್ತಮ ದೊಡ್ಮನಿಗೂ, ಇನ್ನೋರ್ವ ಲೇಖಕಮಿತ್ರ ಸಂತೋಷ್ ಕರಹರಿಗೂ ಧನ್ಯವಾದಗಳನ್ನು ಹೇಳುತ್ತಾ…

One thought on “ಉತ್ತಮ ದೊಡ್ಮನಿಯವರ “ಬೆಳಕು” ಕಾದಂಬರಿ ಕುರಿತು ಪ್ರಖ್ಯಾತ ಕನ್ನಡದ ಕಾದಂಬರಿಕಾರ ಕುo. ವೀರಭದ್ರಪ್ಪನವರ ಮುನ್ನುಡಿ.

  1. ಕಲ್ಯಾಣ ಕರ್ನಾಟಕದ ಹೃದಯಭಾಗ ಕಲಬುರಗಿ ಜಿಲ್ಲೆಯ (ಆಳಂದ) ಯುವ ಸಾಹಿತಿಗಳು

    ಆತ್ಮೀಯರು ಶಿಕ್ಷಕರೂ ಆಗಿರುವಂತ
    #ಶ್ರೀ_ಉತ್ತಮ_ಎ_ದೊಡ್ಮನಿ ಗುರುಗಳು ಬರೆದಿರುವ
    #ಬೆಳಕು ಕಾದಂಬರಿ
    ಒಂದೇ ದಿನದಲ್ಲಿ ವಿರಮಿಸದೆ ಓದಿ ಮುಗಿಸಿದೆ.

    ಈ ಕಾದಂಬರಿ ಬರೆದ ಲೇಖಕರು ಆತ್ಮೀಯರು ಎಂದು ನಾನು ಬರೆಯುತ್ತಿಲ್ಲ ಆದರೆ ಈ ಕಾದಂಬರಿಗಿಂತ ಮೊದಲು ಲೇಖಕರು ಎರೆಡು ಕವನ ಸಂಕಲನಗಳನ್ನು ಬರೆದಿದ್ದಾರೆ.
    #ಒಡಲಾಳದ_ಧ್ವನಿ

    #ಐಕುಗಳು (ಜಪಾನ ಸಾಹಿತ್ಯ ಪ್ರಕಾರ) ಇದರಲ್ಲಿ ಅವರು ಮೊದಲಿಗೆ ಓದುಗರ ಗಮನ ಸೆಳೆದರು

    ಇದಾದಮೇಲೆ ನಾಡಿನ ಖ್ಯಾತ ಸಾಹಿತಿಗಳಾದ #ಕುಂವೀ ಅವರ ಪರಿಚಯ ಮತ್ತು ಆತ್ಮೀಯತೆ ಬೆಳೆದ ನಂತರ #ಬೆಳಕು ಎಂಬ ಸುಂದರ ಕಾದಂಬರಿಯನ್ನು ಬರೆದರು
    ಈ ಕೃತಿ ಬಿಡುಗಡೆಗೂ ಮುನ್ನವೇ ಒಂದೇ ದಿನಕ್ಕೆ ಒಂದೇ ತಾಲೂಕಿನಲ್ಲಿ ನೂರಾರು ಪ್ರತಿಗಳು ಮಾರಾಟ ಕಂಡಿತು. ಕಾದಂಬರಿಯು ಒಳಗೊಂಡ ವಿಷಯಗಳಿಂದ ತುಂಬಾ ಗಮನಸೆಳೆಯಿತು ಮತ್ತು ಜನಪ್ರಿಯತೆಯನ್ನು ಪಡೆಯುತ್ತಿದೆ.

    ಈ ಕಾದಂಬರಿಯು ಇಷ್ಟಪಡಲು ಹಲವಾರು ವಿಷಯಗಳನ್ನು ಒಳಗೊಂಡಿದೆ

    ಹಳ್ಳಿಯ ಸೊಗಡು
    ಜನಪದ ಶೈಲಿ
    ಶಿಕ್ಷಣದ ಮಹತ್ವ
    ದೇವದಾಸಿ ಬಿಡುವಿಕೆ
    ಪರಿಸರ ಕಾಳಜಿ
    ಹಳ್ಳಿಯ ವರ್ಗ ವೈಷಮ್ಯಗಳು
    ಧರ್ಮ ಜಾತಿ ಮೀರಿದ ಸ್ನೇಹ/ಸಹಾಯ
    ಪ್ರೀತಿ ಪ್ರೇಮ
    ಅಲ್ಲಲ್ಲಿ ತಿಳಿ ಹಾಸ್ಯ
    ಪ್ರಾಣಿ (ನಾಯಿ) ಪ್ರೀತಿ
    ಕಾದಂಬರಿಯ ಅರ್ಧ ಭಾಗ ಬಸಪ್ಪ.. ಆವರಿಸಿಕೊಂಡಿದ್ದಾನೆ.
    ಹತ್ತಾರು ವಿಷಯಗಳು… ಅವರ ಮೊದಲ ಕಾದಂಬರಿಯಲ್ಲೇ ಹಲವಾರು ಪ್ರೌಢಿಮೆಯನ್ನು ಮೆರದಿದ್ದಾರೆ.

    ಇವು ಮುಖ್ಯ ಅಂಶಗಳು ಅಷ್ಟೇ ಆದರೆ ಕೃತಿ ಓದಿದಾಗ ಮಾತ್ರ ನವರಸಗಳನ್ನು ಅನುಭವಿಸಲು ಸಾಧ್ಯ.

    ನಿಮ್ಮಿಂದ ಇನ್ನೂ ಹೆಚ್ಚೆಚ್ಚು ಸಾಹಿತ್ಯ ಕೃಷಿ ಹುಲುಸಾಗಿ ಬೆಳೆದು ಬರಲಿ ಸರ್… ಒಳ್ಳೆದಾಗಲಿ ☘️

    ಕನ್ನಡ ಸಾಹಿತ್ಯ ಪ್ರೇಮಿ
    ಸಂತೋಷಕುಮಾರ ಎಂ ದೊಡ್ಡಮನಿ

Leave a Reply

Back To Top