ಮಧುಮಾಲತಿರುದ್ರೇಶ್ ಕವಿತೆ-ದಹಿಸು ಸ್ವಾರ್ಥದ ಹೆಮ್ಮರ

ಕಾಡ ಕಡಿದು ನಾಡ ಮಾಡುತಿಹ ಸುಶಿಕ್ಷಿತರು
 ವನ ದೇವಿಯ ಕರುಳ ಕುಡಿಗೆ ಕೊಳ್ಳಿ ಇಡುತಿಹರು

ಮನುಜನ ದುರಾಸೆಗೆ ಪ್ರಕೃತಿಯೂ ಹೊರತಾಗಿಲ್ಲ
 ಭೂದೇವಿಯ ಮಡಿಲನು ಬರಿದು ಮಾಡುತಿಹರಲ್ಲ

 ಮರವೊಂದು ಬೆಳೆಯಲು ವರುಷಗಳೆ ಬೇಕು
ದಹಿಸಿ ಬೂದಿಯಾಗಲು ಕಿಡಿಯೊಂದು ಸಾಕು



 ಕಾನನವಿಲ್ಲದೆ ಮಳೆ ಮೋಡಗಳ ಆಕರ್ಷಣೆಯಿಲ್ಲ
 ವರ್ಷಧಾರೆಯ ಕಾಣದೆ ಅಂತರ್ಜಲ ಇಂಗುತಿಹುದಲ್ಲ

 ವನ್ಯಜೀವರಾಶಿಗೆ ಆಸರೆಯಿತ್ತ  ಹಸಿರು ಕಾನನ
ಕಾಡ್ಗಿಚ್ಚಿಗೆ ಬಲಿಯಾಗಿ ಆಗುತಿಹುದು ಆಪೋಷಣ

 ಭುವಿಯೊಡಲ ತಾಪ ಅಡಗದೆ ಮುಗಿಲೇರುತಿದೆ
ಮನುಜ ತನ್ನ ತಪ್ಪನು ತಾ ಅರಿಯಲೇಬೇಕಾಗಿದೆ

ಸುತ್ತಲೂ ಗಗನಚುಂಬಿ ಕಟ್ಟಡ ಕಾಂಕ್ರೀಟ್ ಕಾಡುಗಳು
 ಅತಿಯಾದ ನಾಗರಿಕತೆಯಿಂದ ಭಸ್ಮವಾಗುತಿಹ ಅಡವಿಗಳು

 ನೆಲೆಯಿಲ್ಲದೆ ನಾಡಿಗೆ ಲಗ್ಗೆ ಇಡುವ ವನ್ಯಜೀವಿಗಳು
ಕರುಣೆ ಇಲ್ಲದೆ ಗುಂಡಿಕ್ಕಿ ಕೊಲ್ಲುವ ಕ್ರೂರಮನಗಳು

 ಮನುಜ ದಹಿಸಬೇಕಿದೆ ಸ್ವಾರ್ಥ ದುರಾಸೆಯ ಹೆಮ್ಮರವನು
 ಇನ್ನಾದರೂ ಉಳಿಸಬೇಕಿದೆ ವಸುಂಧರೆಯ ಹಸಿರುಸಿರನು

————————————————

3 thoughts on “ಮಧುಮಾಲತಿರುದ್ರೇಶ್ ಕವಿತೆ-ದಹಿಸು ಸ್ವಾರ್ಥದ ಹೆಮ್ಮರ

  1. ತುಂಬು ಧನ್ಯವಾದಗಳು..ಹೊಸಬರಹಗಾರರಿಗೆ ನಿಮ್ಮ ಪ್ರೋತ್ಸಾಹ ಅದ್ಭುತ

  2. ಸ್ವಾರ್ಥ ದ ಹೆಮ್ಮರವನ್ನು ದಹಿಸುವ ಭರದಲ್ಲಿ
    ಮಧುಮಾಲತಿಯವರು ಬಹಳ ಸಹನಾಶೀಲರಾಗಿ ಕವನವನ್ನು ಹೆಣೆದಿದ್ದಾರೆ.ಈ ಹಿಂದಿನ ಅವರ ಕವನಗಳಲ್ಲಿನ ಧಾವಂತ ಇಲ್ಲಿ ತಣ್ಣಗಿದೆ
    ವಸ್ತುವಿನ ನಿರೂಪಣೆ ಆರೋಹಣ ಗತಿಯಲ್ಲಿ ಸಾಗಿ ಅದೇಗತಿಯ ಉತ್ತುಂಗದಲ್ಲಿ.ಉಪಸಂಹಾರವನ್ನು ಕಾಣುತ್ತದೆ
    ವನ್ಯಜೀವಿಗಳ ಉಳಿವಿಗಿರುವ ಕಳಕಳಿ, ವೃಕ್ಷ ಸಂಪತ್ತಿನ ಬಗೆಗಿನ ಕಾಳಜಿ.ಮಾನವನ ಸ್ವಾರ್ಥ ಸಾಧನೆಯಿಂದ ಬರಡಾಗುತ್ತಿರುವ ಕಾನನ ,ಹನನದಿಂದಾಗುತ್ತಿರುವ ಬವಣೆ –ಎಲ್ಲವುಗಳ ರಸಾಯನದಿಂದ ಹದವಾಗಿದೆ ಕವನ.
    ಅಂ ದ ಮಾತ್ರಕ್ಕೆ ನಿಮ್ಮ ಬರವಣಿಗೆ ಮೇರು ಮುಟ್ಟಿದೆ ಎಂದು ತಿಳಿಯಬೇಕಿಲ್ಲ..ಮುಂದೆ ನಿಮ್ಮಕನ್ನಡ ಸೇವೆಯು ಸಾರ್ಥಕ್ಯವಾಗಿ ಸಾಗಬೇಕಿದೆ.ಅರಿತು ನಡೆಯಿರಿ..ಹಜ್ಜೆಯ ಮೇಲೆ ಹೆಜ್ಜೆ ಇಟ್ಟು ಸಾಗಿರಿ……….
    ೦ ೦ ೦ ೦ ೦ ೦ ೦ ೦ ೦

    ೦ ಜಿ.ಎಸ್.ಪ್ರಕಾಶ್,ಬೆಂಗಳೂರು ೦
    ‌ ೦೦೦

  3. ತಮ್ಮ ಅನಿಸಿಕೆಗೆ ತುಂಬು ಧನ್ಯವಾದಗಳು ಸರ್

Leave a Reply

Back To Top