ಸಾಹಿತಿ ರಂಗಸ್ವಾಮಿ.ಎಂ.ಜಿ. ಅವರ ‘ಬುಕಾನನ್’ ಕೃತಿ

ಪುಸ್ತಕಸಂಗಾತಿ

ಬುಕಾನನ್

ರಂಗಸ್ವಾಮಿ.ಎಂ.ಜಿ

ಸಾಹಿತಿ ರಂಗಸ್ವಾಮಿ.ಎಂ.ಜಿ. ಅವರ ‘ಬುಕಾನನ್’ ಕೃತಿಯೂ..! —

ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಮತ್ತು ಇತಿಹಾಸ ಬೋಧಿಸುವ ಶಿಕ್ಷಕರಾಗಿರುವ ಪ್ರೊ.ಎಂ.ಜಿ.ರಂಗಸ್ವಾಮಿರವರು ಬರೆದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ‘ಬುಕಾನನ್’ ಎಂಬ ಕೃತಿ ನನ್ನನ್ನು ಬಹಳ ಆಕರ್ಷಿಸಿತು..!

ಈ ಪುಸ್ತಕವನ್ನು ಓದಿ ಮುಗಿಸಿದಾಗ ಒಂದು ಉತ್ತಮ ಐತಿಹಾಸಿಕ ಅಧಾರದ ಪುಸ್ತಕ ಓದಿದ ಸಂತೃಪ್ತಿ ಲಭಿಸಿತು ನನಗೆ.

ಫ್ರಾನ್ಸಿಸ್ ‘ಬುಕ್ಯಾನನ್’ ಈಸ್ಟ್ ಇಂಡಿಯಾ ಕಂಪನಿಯ ಬಂಗಾಳ ಪ್ರಾಂತ್ಯದಲ್ಲಿ ವೈದ್ಯಾಧಿಕಾರಿಯಾಗಿದ್ದವನು. ಬ್ರಿಟಿಷರು ತಮ್ಮ ಅಧೀನದಲ್ಲಿದ್ದ ಮದ್ರಾಸ್, ಮೈಸೂರು, ಕೆನರಾ ಮತ್ತು ಮಲಬಾರ್ ರಾಜ್ಯಗಳಲ್ಲಿನ ಕೃಷಿ, ಕಲೆ, ವಾಣಿಜ್ಯ,
ಆರ್ಥಿಕ — ಧಾರ್ಮಿಕ ಸ್ಥಿತಿ-ಗತಿಗಳು ಹಾಗೂ ಅಲ್ಲಿಯ ಜನ ಸಮುದಾಯಗಳು, ಬುಡಕಟ್ಟುಗಳು, ಅವರ ಜೀವನ ವಿಧಾನ ಮತ್ತು ಆಚರಣೆ — ಸಂಪ್ರದಾಯಗಳನ್ನಲ್ಲದೇ ಸ್ಥಳೀಯ ಇತಿಹಾಸ ಕುರಿತು ಅಧ್ಯಯನಾತ್ಮಕ ವರದಿ ಮಾಡಲು ಅವನನ್ನು ಕ್ರಿ.ಶ.1800 ರಲ್ಲಿ ನಿಯೋಜಿಸಿದರು. ಒಂದೂ ಕಾಲು ವರ್ಷದ  ಅವರ ಈ ಮಹಾ ಪಯಣದಲ್ಲಿ ಕಂಡುಂಡ ಅನುಭವದ ರುಚಿಯನ್ನು ಒಂದು ಕಥನವಾಗಿಸಿ 2000 ಕ್ಕೂ ಹೆಚ್ಚು ಪುಟಗಳಷ್ಟು ವಿಸ್ತಾರವಾದ ಪುಸ್ತಕವನ್ನು ಬರೆದಿರುವರು ಈ ರಂಗಸ್ವಾಮಿ.ಎಂ.ಜಿ. ಅವರು. ಅದನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ ಅವರು..!

ಇದೊಂದು ಸಾಂಸ್ಕೃತಿಕ ದಾಖಲೆಯೂ ಕೂಡಾ ಆಗಿದೆ. ಇನ್ನೂರು ವರ್ಷದ ಕೆಳಗಿನ ಈ ಪ್ರಾಂತ್ಯಗಳ ಬದುಕಿನೊಳಗೊಂದು ಇಣುಕು ನೋಟದಂತಿರುವ ಈ ಅಧ್ಯಯನ ಪ್ರವಾಸ ಕಥನ ಕಳ್ಳಕಾಕರ, ಹುಲಿಯಂಥ ಕಾಡು ಪ್ರಾಣಿಗಳ ಪರಿಸರದಲ್ಲಿ ಸಂಚರಿಸಿ ವರದಿ ಮಾಡುವ ರೋಚಕ ಯಾತ್ರೆಯೂ ಆಗಿದೆ..!

ಇಂಥದೊಂದು ಅಮೂಲ್ಯ ಕೃತಿಯನ್ನು ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದಿಸುವ ಪ್ರಯತ್ನ ಮಾಡಿದವರು ಪ್ರೊ.ಎಂ.ಜಿ ರಂಗಸ್ವಾಮಿರವರು.
ಅಖಂಡ ಚಿತ್ರದುರ್ಗ ಜಿಲ್ಲೆಗೆ ಮಾತ್ರ ಸೀಮಿತ ಗೊಳಿಸಿಕೊಂಡು ಅನುವಾದ ಮಾಡಿರುವ ಈ ಪುಸ್ತಕ  ನಿರರ್ಗಳವಾದ ಕಥನ ಶೈಲಿ, ಸುಭಗತೆ  ಸರಾಗವಾಗಿ ಓದಿಸಿಕೊಳ್ಳುವ ಚೇತೋಹಾರಿ ಗುಣದಿಂದ ಗಮನ ಸಳೆಯುತ್ತದೆ..!

ಸಿ.ವಿ.ಜಿ. ಪಬ್ಲಿಕೇಶನ್ ರವರ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹೊರತಂದ ಈ ಪುಸ್ತಕ 152 ಪುಟಗಳಿದ್ದಾಗಿದೆ..!

150 ರೂಪಾಯಿ ಮುಖಬೆಲೆಯಾಗಿದೆ ಇದು. ದಾ.ಕೋ.ಹಳ್ಳಿ ಚಂದ್ರಶೇಖರ್ ರವರ ಮುಖಪುಟ ಪುಸ್ತಕದ ಅಂದವನ್ನು ಹೆಚ್ಚಿಸಿದೆ ಕೂಡ.

ಡಾ. ಮೀರಾಸಾಬಿಹಳ್ಳಿ ಶಿವಣ್ಣರವರ ಸುದೀರ್ಘವಾದ ಮುನ್ನುಡಿ ಮತ್ತು ಬೆನ್ನುಡಿ ಪುಸ್ತಕ ಓದಲು ಭೂಮಿಕೆಯನ್ನು ಸಿದ್ದಪಡಿಸುತ್ತವೆ. ಅವರ ಮುನ್ನುಡಿಯಲ್ಲಿ ಜನಸಾಮಾನ್ಯರ ಬದುಕಿಗೆ ಪೂರಕವಾದ ಸಾಹಿತ್ಯದ ರಚನೆ ಮುನ್ನೆಲೆಗೆ ಬರಬೇಕು, ಹಾಗೂ ಮಾದ್ಯಮಗಳು ಮತ್ತು ಸಾಮಾನ್ಯ ಜನರು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕೈಜೋಡಿಸಬೇಕೆಂಬ ಕಳಕಳಿಯನ್ನು ತೋಡಿಕೊಂಡಿದ್ದಾರೆ ಅವರು.

ರಂಗಸ್ವಾಮಿ.ಎಂ.ಜಿ.ರವರು ಈ ಪುಸ್ತಕದಲ್ಲಿ ಜಿಲ್ಲಾ ಪ್ರವೇಶ,
ಹಿರಿಯೂರಿನಲ್ಲಿ 14 ದಿನಗಳು, ಮತ್ತು
ಗಣಿಗಾರಿಕೆ ಎಂಬ ಮೂರು ಭಾಗದಲ್ಲಿ ಚಿತ್ರದಲ್ಲಿನ ‘ಬುಕಾನನ್’ ಪ್ರವಾಸದ ಮಾಹಿತಿ ನೀಡಿರುವರು..!

ಇದರ ಜೊತೆಯಲ್ಲಿ  ಮೀರಾಸಾಬಿಹಳ್ಳಿ ಶಿವಣ್ಣನವರ ಲೇಖನಗಳಾದ‌ ‘ಬುಕ್ಯಾನನ್’ ಕಂಡ ಚಿತ್ರದುರ್ಗ ಜಿಲ್ಲೆ ಹಾಗೂ ಹಿರಿಯೂರಿನಲ್ಲಿ ‘ಬುಕ್ಯಾನನ್’ ಎಂಬ ಎರಡು ಲೇಖನಗಳು ಬೋನಸ್ ರೂಪದಲ್ಲಿ ಓದುಗರಿಗೆ ಲಭ್ಯವಾಗಿವೆ..!

ಪುಸ್ತಕದ ಒಳಪುಟಗಳಲ್ಲಿ ಕಂಡುಬರುವ ಪೂರಕವಾದ ಚಿತ್ರಗಳು ಮತ್ತು ನಕ್ಷೆಗಳು ಗತ ಕಾಲದ ಚಿತ್ರದುರ್ಗದ ಇತಿಹಾಸ ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತವೆ..!

‘ಬುಕಾನನ್’ ಪ್ರವಾಸ ಚಿತ್ರದುರ್ಗ ಜಿಲ್ಲೆಯ ಪ್ರವಾಸ ಅಧಿಕೃತವಾಗಿ ಆರಂಭವಾಗುವುದು ಮಲೆಬೆನ್ನೂರು ಕಡೆಯಿಂದ, ಗರುಡನ ಗಿರಿ ದಾಟಿ, ಯಗಟಿ ತಾಲ್ಲೂಕು ದಾಟಿದಾಗ ‘ಬುಕಾನನ್’ ದುರ್ಗದ ಪ್ರವಾಸ ಅಂತ್ಯವಾಗುತ್ತದೆ. ಈ ನಡುವೆ ಅವರು ನೀಡಿದ ಮಾಹಿತಿ ಅಮೂಲ್ಯವಾದದ್ದು ಆಗಿದೆ ಕೂಡ..!

‘ಬುಕಾನನ್’ ಪ್ರವಾಸ ಕುರಿತಾದ ಪುಸ್ತಕ  ಓದುವಾಗ ‘ಬುಕಾನನ್’ ಆ ಪ್ರದೇಶದ ಐತಿಹಾಸಿಕ, ಆರ್ಥಿಕ , ಸಾಮಾಜಿಕ, ಮತ್ತು ಧಾರ್ಮಿಕ ವಿಷಯಗಳ ಬಗೆಗೆ ಬೆಳಕು ಚೆಲ್ಲುವ ಪರಿಯನ್ನು ನಾವು ಗಮನಿಸಬಹುದು..!

ಆ ಭಾಗದ ಕೃಷಿ ಚಟುವಟಿಕೆಗಳ ಬಗ್ಗೆಯೂ ಉಲ್ಲೇಖಿಸಿ ಅಲ್ಲಿ ಅಂದು ರೈತರು ಬಳಸುತ್ತಿದ್ದ ಕೃಷಿ ಪರಿಕರಗಳಾದ ಎಡೆ ಕುಂಟೆ, ಕುಂಟೆ, ಗ್ವಾರೆ, ಹಂಡುಗುಂಟೆ, ಹೆಡೆ ಮರ, ನೇಗಿಲ ಬಗೆಗೆ ಚಿತ್ರ ಸಮೇತವಾಗಿ ವಿವರಣೆ ನೀಡಿರುವವರು. ಅದೃಷ್ಟವಶಾತ್ ಬಾಲ್ಯದ ದಿನಗಳಲ್ಲಿ ಇವೆಲ್ಲವನ್ನೂ ನೋಡಿರುವವರು ನಾವು. ಆದರೂ ಬಹುತೇಕ ಇಂದಿನ ಯುವಪೀಳಿಗೆ ಮತ್ತು ನಗರ ವಾಸಿಗಳು ಇವುಗಳ ನೋಡಿಲ್ಲ ಆ ನಿಟ್ಟಿನಲ್ಲಿ ಈ ಪುಸ್ತಕ ಮುಂದೊಂದು ದಿನ ನಿಜವಾದ ಆಧಾರ ಗ್ರಂಥ ಆಗುವುದರಲ್ಲಿ ಸಂದೇಹವೇ ಇಲ್ಲ..!

‘ಬುಕಾನನ್’ ಅಂದು ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆಯುತ್ತಿದ್ದ ಬೆಳೆಗಳಾದ ಹತ್ತಿ, ನವಣೆ ಸಜ್ಜೆ, ಹುರುಳಿ, ಔಡಲ, ರಾಗಿ, ಕಬ್ಬು ಮುಂತಾದ ಬೆಳೆಗಳು ಮತ್ತು ವ್ಯವಸಾಯ ವಿಧಾನಗಳನ್ನು ಚೆನ್ನಾಗಿ ವಿವರಿಸಿದ್ದಾರೆ ರಂಗಸ್ವಾಮಿ.ಎಂ.ಜಿ.ಯವರು..!

ಕಂಬ್ಳಿ ಕುರುಬರು ಮತ್ತು ಹಂಡೇ ಕುರುಬರು ಮತ್ತು ಗೊಲ್ಲರು ಕುರಿಸಾಕಣೆ ಮಾಡಿಕೊಂಡಿದ್ದ ಬಗೆಗೆ ಉಲ್ಲೇಖಿಸಲಾಗಿದೆ ಇಲ್ಲಿ. ಕುರುಬರು ಬೀರಪ್ಪ ದೇವರು ಮತ್ತು ಮಾಯಮ್ಮ ದೇವತೆಯನ್ನು ಆರಾದಿಸುತ್ತಿದ್ದರು, ಐಮಂಗಲದ ಸುತ್ತಲಿನ ಪ್ರದೇಶದಲ್ಲಿ ಕಬ್ಬಿಣದ ನೇಗಿಲು ಹೊಡೆಯುತ್ತಿದ್ದರು, ಹಿರಿಯೂರಿನ ವೇದಾವತಿ ನದಿಯಲ್ಲಿ ಮೂರು ಜಾತಿಯ ಮೀನು ನೋಡಿದೇ, ರೈತರು ಗೊಬ್ಬರಕ್ಕೆ ಕುರಿ ಮಂದೆ ಆಶ್ರಯಿಸಿದ್ದರು..!

ಪಶುಪಾಲನೆ ಉಪಕಸುಬಾಗಿದ್ದು ಕುರಿ ಹಾಲು, ಮತ್ತು ತುಪ್ಪಕ್ಕೆ ಬೇಡಿಕೆ ಇತ್ತು ಆಗ. ಚಿಕ್ಕ ಬ್ಯಾಲದಕೆರೆ ಸುತ್ತ ಮುತ್ತ ಗಣಿಗಾರಿಕೆ ಇತ್ತು. ಮತ್ತೋಡಿನ ಸುತ್ತ ಮುತ್ತ ಗಾಜಿನ ಬಳೆ ತಯಾರಿಕೆ ಘಟಕಗಳು ಇದ್ದವು. ಹೀಗೆಂದು ಅವರ ದಿನಚರಿಯಾದ ‘ಬುಕನಾನ್’ ದಾಖಲು ಮಾಡಿದ್ದಾರೆ..!

‘ಬುಕಾನನ್’ ಚಿತ್ರಿಸುವ ಕೃಷಿ ಚಟುವಟಿಕೆ ಕುರಿತ ಅನೇಕ ಸಂಗತಿಗಳನ್ನು ಬಾಲ್ಯದಲ್ಲಿ ನಾವು ಸ್ವತಃ ಅನುಭವಿಸಿದ್ದೇವೆ. ಹೊಳಲ್ಕೆರೆ ತಾಲ್ಲೂಕು ಚೌಡಗೊಂಡನಹಳ್ಳಿಯಲ್ಲಿ ರಾತ್ರಿ ವೇಳೆ ಚಂದ್ರನ ಬೆಳಕಲ್ಲಿ ಆರು ಇಲ್ಲವೇ ಎಂಟು ಎತ್ತುಗಳನ್ನು ಕಟ್ಟಿ ಕಬ್ಬಿಣದ ನೇಗಿಲು ಹೊಡೆಯುತ್ತಿದ್ದ ಚಿತ್ರಣ ಈಗಲೂ ಕಣ್ಣಿಗೆ ಕಟ್ಟಿದಂತಿದೆ..!

ನೇಗಿಲು ಹೊಡೆಯುವವರಿಗೆ ನೀರು ಮತ್ತು ಬುತ್ತಿ(ಊಟ) ಸಾಗಿಸುತ್ತಿದ್ದವರ ಜೊತೆಗೆ ಹೋಗಿ ಬೆರಗುಗಣ್ಣಿನಿಂದ ನೋಡಿದ ಆ ದೃಶ್ಯಗಳು ‘ಬುಕಾನನ್’ ಚಿತ್ರಿಸಿರುವ ಕಬ್ಬಿಣದ ನೇಗಿಲು ಹೊಡೆಯುವ ದೃಶ್ಯಗಳು ನಾವು ಮತ್ತೆ ಆ ಬಾಲ್ಯದ ದಿನಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ.
ಸುಗ್ಗಿಯ ದಿನಗಳಲ್ಲಿ ಜೋಳ, ರಾಗಿ ತೆನೆಗಳಿಂದ ಕಾಳು ಬೇರ್ಪಡಿಸುವ ಸಲುವಾಗಿ ಸಗಣಿಯಿಂದ ಸಾರಿಸಿ ಕಣ ಸಿದ್ಧಗೊಳಿಸಿ ರೋಣಗಲ್ಲು ಹೊಡೆಯುತ್ತಿದ್ದುದು, ಅಂತಹ ವೇಳೆಯಲ್ಲಿ ಹೇಳುತ್ತಿದ್ದ ಜನಪದ ಹಾಡುಗಳು, ಆಳೆತ್ತರಕ್ಕೆ ಕಾಳಿನ ರಾಶಿ ಮಾಡುತ್ತಿದ್ದ ಚಿತ್ರಣಗಳು ನಮ್ಮ ಕಣ್ಮುಂದೆ ಬರುತ್ತವೆ..!

ಅಲ್ಲಲ್ಲಿ ‘ಬುಕಾನನ್’ ನೀಡಿರುವ ಕೆಲ ವಿವರಣೆವು ಪೂರ್ವಾಗ್ರಹದಿಂದ ಕೂಡಿದೆ ಅನ್ನಿಸಿದರೂ ಈ ಕೃತಿಯು
ಚಿತ್ರದುರ್ಗದ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಬಗೆಗೆ ಬೆಳಕು ಚೆಲ್ಲುತ್ತದೆ. ದುರ್ಗದವರೇ ಅಲ್ಲದೇ ಎಲ್ಲಾ ಕನ್ನಡಿಗರೂ ಈ ಪುಸ್ತಕ ಓದಿ ನಮ್ಮ ಬಗೆಗೆ ನಾವೇ ಹೆಮ್ಮೆ ಪಟ್ಟು ಕೊಳ್ಳಬಹುದು..!


ಕೆ.ಶಿವು.ಲಕ್ಕಣ್ಣವರ

Leave a Reply

Back To Top