ಪ್ರಭಾವತಿ ದೇಸಾಯಿಯವರ ಕೃತಿ “ಪಿಸು‌ಮಾತು” ಒಂದು ಅವಲೋಕನ ವೈ ಎಂ ಯಾಕೊಳ್ಳಿ ಅವರಿಂದ

ಪುಸ್ತಕದ ಹೆಸರು-ಪಿಸು ಮಾತು
ಪ್ರಭಾವತಿ ದೇಸಾಯಿ
ಪ್ರಕಾಶನ-ನೇರಿಶಾ ಪ್ರಕಾಶನ,ಕಡೂರು
ಪ್ರಕಟಣಾ ವರ್ಷ- ೨೦೨೪
ಪುಟಗಳು- ೧೦೨
ಬೆಲೆ -೧೦೦
ಲೇಖಕರ ಪೋನ್‌ನಂ- ೯೯೦೦೪೯೩೩೨೭

“Brevity is the soul of wit” ಎಂಬ ವಿಲಿಯಂ ಷೇಕ್ಸ್ ಪಿಯರ್ ಹೇಳಿದ ಮಾತು  ಸಂಕ್ಷಿಪ್ತತತೆಯು ಕಲೆಯ ಜೀವಾಳ ಎಂಬುದನ್ನು ಸಾರುತ್ತದೆ.ಅದು  ಇಂದು ಹೆಚ್ಚು ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಚುಟುಕಾದುದು ಬಹಳ ಬೇಗ‌ ಮನವನ್ನು‌ ಮುಟ್ಟುತ್ತದೆ .ಮತ್ತು ಅದರಲ್ಲಿ ದೀರ್ಘ ವಾದುದರಲ್ಲಿ ಹೇಳಬೇಕಾದ ಎಲ್ಲದುದರ ಸಾರವನ್ನು ಅಡಗಿಸಿಗಿಡುವ ಪ್ರಯತ್ನ ಇರುತ್ತದೆ .small is always beautiful ಎಂಬ ಮಾತೇ ಇದೆ.ಇದರಿಂದಾಗಿ ಚುಟುಕಾದುದು ಸಾಧ್ಯವಾದಷ್ಟು ಪ್ರಭಾವಪೂರ್ಣವಾಗಿ ಅಭಿವ್ಯಕ್ತ ವಾಗಲು ನೋಡುತ್ತಿರುತ್ತದೆ. ಅಂಥ ಚುಟುಕು‌ ಕಾವ್ಯಗಳಲ್ಲಿ ಈಚೆಗೆ ಮೂಡಿ ಬರುತ್ತಿರುವ ಕಾವ್ಯ ಪ್ರಕಾರ ದ್ವಿಪದಿ ಕಾವ್ಯ ಪ್ರಕಾರ..

ದ್ವಿಪದಿ ಎನ್ನುವದು ಹೆಸರೇ ಹೇಳುವಂತೆ  ಎರಡೇ ಸಾಲಿನ‌ ಕಾವ್ಯ ಪ್ರಕಾರ. ಕನ್ನಡದಲ್ಲಿ ಈಚೆಗೆ ದ್ವಿಪದಿ ಸಂಕಲನಗಳು ಬರುತ್ತಿವೆ.ಹಿಂದೆಯೆ ಶಾಂತರಸರು ಕೆಲವು ಗಜಲ್ ಮತ್ತು ದ್ವಿಪದಿಗಳನ್ನು ಸೇರಿಸಿ ಸಂಕಲನ ತಂದಿದ್ದರು.ಆಮೇಲೆ ಸಿದ್ದರಾಮ ಹಿರೇಮಠ ಅವರ ಒಂದು ಸಮ್ಮಿಶ್ರ ಸಂಕಲನದಲ್ಲಿ,  ಗೋಕಾವಿಯ   ಡಾ ಪಂಗಣ್ಣವರ ಅವರ ಸಮ್ಮಿಶ್ರ ಸಂಕಲನದಲ್ಲಿ ದ್ವಿಪದಿಗಳು ಬಂದಿದ್ದವು ..ಪ್ರಸಿದ್ಧ ಕವಿ ಪತ್ರಕರ್ತರಾದ ಲಡಾಯಿಯ ಬಸೂ ಅವರ ಬೃಹತ್ ದ್ವಿಪದಿ ಸಂಕಲನವೇ ಬಂದಿತ್ತು.ಈಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ದ್ವಿಪದಿಗಳನ್ನು ಬರೆಯುತ್ತಿರುವವರು ಡಾ ಮಲ್ಲಿನಾಥ ತಳವಾರ. ಅವರ ದ್ವಿಪದಿಗಳು ರತ್ನರಾಯ ಮಲ್ಲ ಅಂಕಿತದಿಂದ ದ್ವಿಪದಿ ಬರೆಯುವದನ್ನು ಕಾಣುತ್ತೇವೆ. ಹಾಗೆಯೆ ಗೋಕಾವಿಯ ಗಜಲ್ ಕವಿ ಈಶ್ವರ ಮಮದಾಪೂರ ಅವರು ಸ್ವತಂತ್ರವಾದ ದ್ವಿಪದಿ  ಸಂಕಲನದ ಪ್ರಕಟವಾಗಿದೆ.ಅವರೂ ನಿತ್ಯವೂ ಈಶ್ವರನ ದ್ವಿಪದಿ ರಚಿಸುತ್ತಾರೆ. ಅಂಥವುಗಳ ಸಾಲಿಗೆ ಇತ್ತೀಚಿನ ಹೊಸ ಸೇರ್ಪಡೆ ಪ್ರಸಿದ್ದ ಗಜಲ್ ಕವಿಯತ್ರಿ ಪ್ರಭಾವತಿ ದೇಸಾಯಿಯವರ ದ್ವಿಪದಿ ಸಂಕಲನ ” “ಪಿಸುಮಾತು”.ಇದನ್ನು ಕಡೂರಿನ “ನೇರಿಶಾ ಪ್ರಕಾಶನ‌” ಪ್ರಕಟಿಸಿರುವದು ವಿಶೇಷವಾಗಿದೆ.

 ಸಾಹಿತ್ಯದ ಹಲವು ಪ್ರಕಾರಗಳಲ್ಕಿ ನಿತ್ಯ‌ ಪ್ರಯೋಗಗಳನ್ನು‌ ಮಾಡುತ್ತ ಅಪಾರವಾದ ಸಾಹಿತ್ಯ ಸೃಷ್ಟಿ ಮಾಡಿದವರು ಹಿರಿಯರಾದ ವಿಜಯಪುರದ  ಪ್ರಭಾವತಿ ದೇಸಾಯಿ ಯವರು‌‌.ಒಂಬತ್ತು ಗಜಲ್ ಸಂಕಲನಗಳು ,  ಎರಡು ಜುಗಲ್ ಬಂಧಿ ಗಜಲ್ ಸಂಕಲನ  ಗಳು ,ಮಾತ್ರಾ ನಿಯಮಕವಾದ ಗಜಲ್ ಗಳನ್ನು ಬರೆಯುವದು,  ಇತರರ ಗಜಲ್ ಗಳ ವಿಮರ್ಶೆ,  ಹೀಗೆ ಗಜಲ್ ಕಾವ್ಯ ಕ್ಷೇತ್ರದಲ್ಲಿಯಂತೂ ಅವರದು ಅನುಪಮವಾದ ಸಾಧನೆ. ಅಂತೆಯೆ ಅವರಿಗೆ ಕರ್ನಾಟಕ ರಾಜ್ಯ ಮೊಟ್ಟ ಮೊದಲ ಗಜಲ್ ಸಮ್ಮೇಳನದ. ಸರ್ವಾಧ್ಯಕ್ಷ ಪದವಿ‌ ಒಲಿದು ಬಂದಿದ್ದು. ಇತರ ಪ್ರಕಾರಗಳಲ್ಲಿಯೂ ಅವರೂ ಗಮನಾರ್ಹವಾದುದನ್ನೇ ನೀಡಿದ್ದಾರೆ. ಕವನ ಹನಿಗವನ ಕಥೆ, ಪ್ರವಾಸ ಸಾಹಿತ್ಯ, ಆಧುನಿಕ  ವಚನ ರಚನೆ ಪ್ರಬಂಧ ಬರಹ ಸಂಕಲನಗಳು ಹೀಗೆ ನಾನಾ ಪ್ರಕಾರಗಳಲ್ಲಿ ಅವರ ೧೩ ಕ್ಕೂ ಹೆಚ್ಚು ಕೃತಿಗಳು,  ೧೨ ರಷ್ಟು ಗಜಲ್ ಸಂಬಂಧಿ‌ ಕೃತಿಗಳು ಒಟ್ಟಾರೆ ೨೫ ಕ್ಜೂ ಹೆಚ್ಚು‌ ಕೃತಿಗಳನ್ನು ಅವರು‌ ನಾಡಿಗೆ ನೀಡಿದ್ದಾರೆ.

ದ್ವಿಪದಿ ಎಂಬುದು ಎರಡು ಸಾಲಿನ‌ ಪದ್ಯ ಪ್ರಕಾರ.ಪ್ರತಿ‌ ಪದ್ಯ ಹೊಸ ಹೊಸ ವಿಷಯವನ್ನು ಹೊಂದಿದ್ದು  ಮತ್ತು ಸ್ವ ತಂತ್ರ ವಾದದ್ದು.  ಈ ಮುಕ್ತಕ ಗುಣ ಬಹಳ‌ ಮುಖ್ಯ. ಇಂಗ್ಲಿಷಿನ couplets, Rhymes, ಉರ್ದುವಿನ ದ್ವಿಪದಿ,ಶಾಯಿರಿ, ಹಿಂದಿಯ ದೋಹಾ,  ಗಜಲ್ ಕಾವ್ಯದಲ್ಲಿ‌ ಬರುವ ಪ್ರತಿ ಶೆರ್ ( ಎರಡು ಸಾಲಿನ ಒಂದು‌ಗುಚ್ಛ) ಇವೆಲ್ಲ ಎರಡು ಸಾಲಿನಲ್ಲಿ ಮೂಡಿ ಬಂದ ಕಾವ್ಯ ಪ್ರಕಾರಗಳು   . ಇನ್ನೂ‌ ಹಿಂದೆ ಹೋದರೆ ತಮಿಳಿನ ಪ್ರಸಿದ್ಧ ಕಾವ್ಯ  ತಿರುಕ್ಕುರುಳ್ ದ್ವಿಪದಿ ಮಹಾಕಾವ್ಯವೆ.

ಆದರೆ ನೋಟಕ್ಕೆ  ಈ ಎಲ್ಲ ಕಾವ್ಯ ಪ್ರಕಾರಗಳನ್ನು ನೆನಪಿಸಿದರೂ ದ್ವಿಪದಿ ಬೇರೆಯದೆ ಆದ ಕಾವ್ಯ ಪ್ರಕಾರ.  ಇದು ಗಜಲ್ ನ ಶೇರ್ ಗಳನ್ನು ಹೋಲಬಹುದಾದರೂ ಅಲ್ಲಿ ರದೀಪ್, ಕಾಪಿಯಾ  ಮುಂತಾದ ನಿಯಮಗಳ ಗೊಂದಲವಿರುತ್ತದೆ.ಹೀಗಾಗಿ ಅಲ್ಲಿಯೂ ಸೇರಿಸಲಾಗದ ಸ್ವತಂತ್ರ‌  ಕಾವ್ಯ. ಪ್ರಕಾರವಾಗಿ ನಾವು ಇದನ್ನು ಗುರುತಿಸುವ ಅಗತ್ಯ ಇದೆ.

“ಪಿಸುಮಾತು” ಸಂಗ್ರಹದಲ್ಲಿ ಸುಂದರವಾದ ೩೦೦ ಚಿಕ್ಕ ಕವಿತೆಗಳ ಮಾಲೆಯಿದೆ.ಇವು ಸ್ವತಂತ್ರ,ಸುಂದರ.ತಮ್ಮಷ್ಟಕ್ಕೆ ತಾವೆ ಸಮಗ್ರ ಅರ್ಥಪೂರ್ಣ ರಚನೆಗಳು .ಮೊದಲ ಸಾಲಿನಲ್ಲಿ ಹೇಳಬಹುದಾದ ವಿಷಯದ ಆರಂಭ ಕಡೆಯ ಸಾಲಿನಲ್ಲಿ ಅದಕ್ಕೊಂದು ಮುಕ್ತಾಯ .ಓದಿದೊಡನೆಯೆ, ಓದುಗನ ಮನದಲ್ಲಿ “ವಾವ್” ಎನ್ನುವ ಒಂದು ಭಾವ ಮೂಡುವಂತಹ ರಚನೆ. ಎಲ್ಲೋ ಹೊರಟಾಗ ,ಏನೊ ಓದಿದಾಗ,ಯಾರನ್ನೊ ಕಂಡಾಗ,ಯಾವುದನ್ನೋ ಚಿಂತಿಸಿದಾಗ ಹೊಳೆದ ಒಂದೆರಡು ಸಾಲುಗಳ ಸಾರ್ಥಕ ಸೃಷ್ಟಿ. ಒಂದೊಂದು ಮುತ್ತಿನ ಹಾರಕ್ಕೆ ಸೇರಿಸುವ ಸ್ವತಂತ್ರ‌ ಮುತ್ತು. ಒಂದರ ಸೌಂದರ್ಯ ಅದರದ್ದೇ ಆದುದು. ಇನ್ನೊಂದಕೆ  ಅವಲಂಬಿತವಲ್ಲ. ಅದಕ್ಕೆ ಅದು ಸ್ವತಂತ್ರ.

ಇಲ್ಲಿನ ಎಲ್ಲ ರಚನೆಗಳೂ ಅನುಭವದ‌ ಮೂಷೆಯಲ್ಲಿ ಅದ್ದಿ  ತಗೆದ  ಸುಂದರ ಸುಮಧುರ ಕೋಮಲ ಪುಷ್ಪಗಳು.ಅಲ್ಲಿನ‌ ಪ್ರಧಾನ ಭಾವ ,ವಸ್ತು,  ಸಹಜವಾಗಿ‌ ಪ್ರೀತಿಯೆ. ಉಳಿದುದೆಲ್ಲ ನಂತರದ್ದು. ಒಟ್ಟಾರೆ ಈ ಎಲ್ಲ ದ್ವಿಪದಿಗಳ ಆತ್ಮ ಪ್ರೇಮವೇ . ಅದಕ್ಕೆ ಒಂದು ದ್ವಿಪದಿ

ಪ್ರೀತಿಸುವದನ್ನು  ಯಾವತ್ತು ನಿಲ್ಲಿಸಬೇಡ
ಪ್ರೀತಿ ಜಗವ ಆಳುವ ಉಸಿರು( ೫೫)

ಎಂದು ದಾಖಲಿಸಿದೆ. ಪ್ರೀತಿಯನ್ನು ಬಿಟ್ಟರೆ ಜಗತ್ತೇ ಶೂನ್ಯ ಎನ್ನುತ್ತದೆ.ಮೊದಲ ರಚನೆಯೆ ತನ್ನವನ ತಹತಹದಲ್ಲಿ ಮಿಂದೆದ್ದಿದೆ.

ಕಣ್ಣಲಿ ಒಲವಿನ  ಕಾಮನ ಬಿಲ್ಲನು‌ ಮೂಡಿಸಿದವನೆ
  ಎಲ್ಲಿ ಮಾಯವಾದೆ
ಧಾರಿಣಿ ಒಡಲಿಗೆ ಹಿಮ ಸುರಿಸಿ ಸೊಬಗಬು ಮುಚ್ಚಿದವನೆ
  ಎಲ್ಲಿ ಮಾಯವಾದೆ (೧)

ನೋಡಿ , ಮೊದಲ ಸಾಲು ಲೋಕದ ಪ್ರೇಮಿಗಳ ಚಿತ್ರವಾದರೆ ಎರಡನೆಯ ಸಾಲಿಗೆ ಬಂದರೆ ನಿಸರ್ಗದ ಅಂದವಿದೆ. ಧಾರಿಣಿಯ ಒಡಲಿಗೆ ಹಿಮ ಸುರಿಸಿದವ ಸೂರ್ಯನೆ ಅಲ್ಲವೆ? ಹೀಗೆ ಬರೀ ಲೌಕಿಕದಲ್ಲಿ ಸುತ್ತದ ಕಾವ್ಯ ನಿಸರ್ಗದ ಜಿಗಿಯುವದು ..ಈ ಲಂಘನ ವೇ ಇಲ್ಲಿ‌ ಮುಖ್ಯ.

ಇರುಳು ತನುವಿಗೆ ರಂಗೇರಿಸಿದವನೆ ಎಲ್ಲಿ ಹೋದೆ
ವಿರಹದ ಬೆಂಕಿಯಲಿ ದೂಡಿದವನೆ ಎಲ್ಲಿ‌ ಹೋದೆ.. (೩)

ನೀನು ನನ್ನಿಂದ ದೂರ ಹೋದೆಯಂದು ದುಃಖವಿಲ್ಲ ಗೆಳೆಯ
ನನ್ನಿಂದ ನಿನ್ನ ಮರೆಯಲಾಗುತ್ತಿಲ್ಲವೆಂದು ದುಃಖಿಸುವೆ ( ೧೫)

ಅವನ‌ ಒಲವ ಕನಸುಗಳೇ ಹೀಗೆ
ಸುಖದ ಉಯ್ಯಾಲೆಯಲಿ ತೂಗಿ‌ ಮತ್ತೆರಿಸುತ್ತವೆ (೨೧)

ಬಾಳ ಮುಸ್ಸಂಜೆ ಗೆ ಊರುಗೋಲು ನಾನೆಂದು ಹೇಳಿದೆ
ನಡು ರಾತ್ರಿ ಬಯಕೆಗಳನ್ನು ಗಾಳಿಗೆ ತೂರಿ ತೊರೆದು ಹೋದೆಯಲ್ಲ ( ೪೦)
ಹೀಗೆ ಪ್ರೇಮ ಹಲವು ರೂಪ ತಾಳಿ‌ಕವಿತೆಯಾಗಿದೆ.

ವಿರಹದ ಆಧಿಕ್ಯಕ್ಕೆ –

ಅವಳ‌ ಮದುವೆಯ ಮೆರವಣಿಗೆ ವೈಭವದಿಂದ ಸಾಗಿದೆ
ನಾನು ಮಧುಶಾಲೆಯಲಿ ಬಿಕ್ಕುತ್ತ ಮಧು ಕುಡಿಯುತ್ತಿರುವೆ( ೮೩)

ಎನ್ನುವ ದ್ವಿಪದಿ‌ ಗಮನಿಸಿ.ಇನ್ನೇನು ಮಾಡಲು ಸಾಧ್ಯ. ಅವನೊಬ್ಬ ಸಾತ್ವಿಕ‌ ಪ್ರೇಮಿ. ಕುಡಿದು ಅಳಬಹುದಷ್ಟೇ. ದ್ವೇಷ ಅವನಿಂದ ಸಾಧ್ಯವಿಲ್ಲ.ಇಂತಹ ವಿಭಿನ್ನ ಭಾವಗಳು ಇಲ್ಲಿ ಒಡಮೂಡಿವೆ

ಹೀಗೆ ಪ್ರೇಮದ ಎಲ್ಲ ಭಾವಗಳು ಇಲ್ಲಿ ದ್ವಿಪದಿ ರೂಪ ತಾಳಿವೆ.ಅಲ್ಲಿ‌ಪ್ರೀತಿಯ ಸಾರ್ಥಕ್ಯವಿದೆ. ಒಂದಾದ ಖುಷಿಯ ಆಧಿಕ್ಯವಿದೆ.ಅದಕ್ಕೂ‌ ಮಿಗಿಲಾಗಿ ವಿರಹದ ಗಾಢತೆಯಿದೆ,ಅಗಲಿಕೆಯ ನೋವಿದೆ.ಇರಬೇಕಾದ ಜೊತೆ ಹೊರಟು ಹೋಯಿತಲ್ಲ ಎಂಬ ಗಾಢ ವಿಷಾದವಿದೆ. ಹೀಗಾಗಿ ಇಲ್ಲಿ ಪ್ರೇಮವೇ ಎಲ್ಲವೂ ಆಗಿದೆ.

ಆದರೆ ಬದುಕಿನ ಇತರ ಭಾವಗಳು ಇಲ್ಲವೆಂದಲ್ಲ ಅವರ ಬದುಕಿನ ವಿಶಾಲ ಅನುಭವದ ಮೂಷೆಯಲ್ಲಿ ಮೂಡಿಬಂದ ಇತರ ಭಾವಗಳೂ  ಅಲ್ಲಲ್ಲಿ ದ್ವಿಪದಿ ರೂಪ ಧರಿಸಿವೆ.ನಮ್ಮ ಮಾತು ಹಾಎಗಿರಬೇಕು ಎಂಬುದನ್ನು ಬದುಕಿನ ಸಂವಾದದ ಅರ್ಥ ಸಾಧ್ಯತೆಯನ್ನು

ಅರ್ಥಹೀನ ಪದಗಳನು ಉಚ್ಚರಿಸಬೇಡ
ಹೊಸ ಬದುಕು ಕಟ್ಟ ಬೇಕಾಗಿದೆ ಬಾಳಲು( ೫೮)

ಬಾಳು ನಿಂತಿರುವದು ಪದಗಳ ಮೇಲೆ.ಅವು ಬರಿ ಅಕ್ಷರವಲ್ಲ.ಮಾತೆಂಬುದು ಜ್ಯೋತಿರ್ಲಿಂಗ ಎನ್ನಲಿಲ್ಲವೆ?ಶರಣರು.ಇದೇ ಭಾವ ಇನ್ನೊಂದು ರೀತಿ ದ್ವಿಪದಿಯಾಗಿದೆ.ಈ ಜಗತ್ತಿನಲ್ಲಿ ಜಾತಿ ದ್ವೇಷ ತಾಂಡವವಾಡುವದು ಕವಯಿತ್ರಿಯ ಮನಕೆ ಕಾಡಿದೆ.ಅಂತೆಯೇ

ಇಳೆಯಲಿ ಜಾತಿ ದ್ವೇಷದ ನೆತ್ತರು ಹರಿಯುತಿದೆ
ಕರುಣೆ ಮಮತೆಯ ನೀರುಣಿಸಿ ತೊಳೆಯಬೇಕಾಗಿದೆ (೫೯)

ಬರಿ ಸಮಸ್ಯೆ ಹೇಳುವದು‌ ಕವಿಯ ಕಾರ್ಯವಲ್ಲ . ಅದಕೆ ಪರಿಹಾರ ಅವನು ಸೂಚಿಸಬೇಕು.ಅಂದರೆ ಅವನು‌ಲೋಕ ಗುರು. ಇಲ್ಲಿ ಜಾತಿ ಅಂತರ ತಾಂಡುವ ವಾಡುವದನ್ಹು ಹೇಳಿ ಅದರ ಮುಂದಿನ ಸಾಲಲ್ಲಿಯೆ ಅದನ್ನು ದಾಟುವ ಮಾರ್ಗ ಹೇಳುವದು‌ ಕವಿತೆಯ ಸಕಾರಾತ್ಮಕ ಗುಣಕ್ಕೆ ಸಾಕ್ಷಿ ಯಾಗಿದೆ.
ನಿಸರ್ಗ ಎಂದೂ ಯಾರಿಗೂ ಅನ್ಯಾ ಯ‌ಮಾಡಿಲ್ಲ ಅದೇನಿದ್ದರೂ ಮನುಷ್ಯನ ಸ್ವಾರ್ಥ ಮತ್ತು ದುಷ್ಟತನವಷ್ಟೇ ಎನ್ನುವದನ್ನು

ಪೃಕೃತಿಯು ಯಾವ ಭೇದವಿಲ್ಲದೆ ಹೂ ಹಣ್ಣು‌ಕೊಡುವದು
ದ್ವೇಷ ಅಸೂಯೆಯಲಿ ಒಲವನು ಹಂಚುವದು ಮರೆತಿದೆ ಜಗ ( ೧೩೫)

ಎನ್ನುವಲ್ಲಿ ಮನುಷ್ಯನ ಮಿತಿಯನ್ನುನಕವಿಯೆ ಗುರುತಿಸಿದೆ. ಪುಸ್ತ ಕ ಓದುವದು ದೊಡ್ಡದಲ್ಲ . ಹೃದಯ ಓದುವದು ದೊಡ್ಡದು ಎನ್ನುತ್ತಾರೆ ಕವಿಯತ್ರಿ

ಸದಾ ಕೈಯಲಿರುವ ಪುಸ್ತಕವ ಸರಿಸು
ಹೃದಯ ಪುಟವನ್ನೊನ್ಮೆ ಓದು ಗೆಳೆಯ( ೧೩೬)

ಪುಸ್ತಕ ಬರಿ ಹಾಳೆ ಯಷ್ಟೇ ಅದು ನಿರ್ಜೀವ.ಆದರೆ ನಿಜವಾದ ಬದುಕಿನ  ಪಾಠ ದೊರೆಯುವದು ಹೃದಯ ಪುಸ್ತಕದಿ.ಅಂತೆಯೆ ಕಬೀರರು ಪುಸ್ತಕ ಓದಿ   ಯಾರೂ ಪಂಡಿತರಾಗಿಲ್ಲ ಎಂದಿದ್ದರು.ಎರಡುವರೆ ಅಕ್ಷರ ಪ್ರೀತಿ ..ಅದನ್ನು ಓದಿದವರು ಪಂಡಿತರಾಗಿದ್ದಾರೆ ಎನ್ನುವದು ಅವರ ಅನುಭವದ ಮಾತಾಗಿತ್ತು.ಇಲ್ಲಿಯೂ ಅದೇ ಭಾವವೇ ಇದೆ.”ಓದಿ‌ ಕೆಟ್ಟ ಕೂಚು ಭಟ್ಟ” ಎಂದಿಲ್ಲವೆ ನಮ್ಮ ಹಿರಿಯರು. ಹೀಗೆ ವಿಭಿನ್ನ ಭಾವಗಳಿಗೆ  ಕವಿತೆ ಆಸರೆಯಾಗು ತ್ತದೆ.

ಮಹಿಳಾ ಸಂವೇದನೆಗೂ ಇಲ್ಲಿನ ದ್ವಿಪದಿ ವಸ್ತುವಾಗಿರು ವದು ವಿಶೇಷ .ಒಂದು  ದ್ವಿಪದಿ ನೇರವಾಗಿಯೆ

ಅಬಲೆಯಂದು ನೀ ಹಿಂಜರಿಯದಿರು ಸದಾ
ಧೈರ್ಯದಿ ಮುಂದೆ ಹೆಜ್ಜೆ ಹಾಕು ಜಗವ ಗೆಲ್ಲಲು (೧೫೬)

ಎಂದು ಧೈರ್ಯ ತುಂಬುತ್ತದೆ. ಕೇವಲ ಸ್ತ್ರೀ ಭಾವ ಮಾತ್ರವಲ್ಲ, ಪುರುಷನ ಭಾವವೂ‌ ಕವಿತೆಯಾಗಿದೆ

ಒಡಲಿನ ಸಿರಿನಕಡಲಿನ ದೊರೆಸಾನಿ‌ ನೀನು
ಒಲವನು ಅರಸುತ್ತಾ ಬಂದ ಭಿಕ್ಷುಕ ನಾನು,( ೧೮೩)

ಎಂಬಂತಹ ದ್ವಿಪದಿಗಳುಪ್ರೀತಿಯ ಸಾರ್ವರ್ತಿಕತೆ ಸಾರಿವೆ.ಆದರೂ ಅಂತಿಮದಿ ಪ್ರೀತಿಯ ಹಳಿ ಗಮ್ಯ‌ ಮುಟ್ಟದ. ನಿರಾಶೆಯ ಭಾವದದಗವಿಪದಿಗಳೇ ಹೆಚ್ಚು ಮೋಹಕವಾಗಿರುವದು ಸುಳ್ಳಲ್ಲ.ಅದು‌ಪ್ರೇಮ ಕಾವ್ಯದ ವೈಶಿಷ್ಟ್ಯ ಕೂಡ.ಉದಾಹರಣೆಗೆ

ಪ್ರೇಮಪತ್ರ ಹಿಡಿದು‌ ಗಲ್ಲಿ ಯಲ್ಲಿ ಅಲೆಯುತ್ತಿದ್ದೆ
ಮಳೆ ಬಂದು ಪತ್ರ ನೆನೆದು ವಿಳಾಸಕ್ಕಾಗಿ‌ ಪರದಾಡಿದೆ( ೨೦೬)

ವಿಳಾಸ ಸಿಕ್ಕದೆ ಪತ್ರ ಬಟವಡೆಯಾಗುವುದೆ ಇಲ್ಲ ಎಂದು ಹೇಳುವದು ಮುಖ್ಯ.

ಒಂದು ಚಿಕ್ಕ‌ ಇರುವೆ ಕೂಡಾ ಮನುಷ್ಯನಿಗೆನಪಾಠ ಹೇಳುತ್ತದೆ  ಎಂಬ‌ಮಹಾ ತತ್ವವನ್ನು  ಇಲ್ಕಿನ ಒಂದು ದ್ವಿಪದಿ ಹೇಖುವದನ್ನು ಕಂಡಾಗ ಮನುಷ್ಯನ‌ಬಾಳು ಎಷ್ಟು ಅಲ್ಪದ್ದು ಎಂಬುದು ಅರಿವಿಗೆ ಬರುತ್ತದೆ.

ಸಣ್ಣ ಜೀವಿಯಾದ ಇರುವೆಯ ಬದುಕು ನೋಡು
ಹತಾಶವಾಗದೆ ಮರಳ ಯತ್ನವ ಮಾಡು‌ಮನವೆ (೨೩೨)

ಎನ್ನುವಂತಹ ದ್ವಿಪದಿಗಳಲ್ಲಿ ಒಂದು‌ ಸಂದೇಶವನ್ನು‌ ಕವಿಯತ್ರಿ ಕೊಡುವ  ಪ್ರಯತ್ನ‌ ಮಾಡಿರುವದು‌‌ ನಿಜಕ್ಕೂ‌ ಮಹತ್ವದ ಮಾತು.ಅಂತಿಮವಾಗಿ‌ ಕವಿತೆ ಕತ್ತಲೆಯ ದಾರಿಗೆ ಕೈದೀವಿಗೆ ಎನ್ನುವದನ್ನು‌ ಮರೆಯಬಾರದು.ಅಂತಹ ಜೀವನೋತ್ಸಾಹ ತುಂಬುವ ಅವರ ಈ ಕವಿತೆಗೆ ನಾವೆಲ್ಲ ಶುಭ ಕೋರಬೇಕಾಗಿದೆ. ಅವರು ಹಿರಿಯರು ಕಂಡಂತೆ ಅಪಾರ ಅನುಭವದ ಅಕ್ಷಯ ಪಾತ್ರೆ..ಅವರ ಕಾವ್ಯಕ್ಕೆ ನಿಲುಗಡೆ ಇರದು.ಅದು ಹಿರಿಹೊಳೆಯಾಗಿ ಹರಿಯುತ್ತಲೆ ಇದೆ.ಮತ್ತೊಮ್ಮೆ ಶುಭಾಶಯ ಪೂರ್ವಕ  ವಂದನೆಗಳನ್ಬು ಸಲ್ಲಿಸುತ್ತೇನೆ.


Leave a Reply

Back To Top