ಓಡಿ ಹೋದ ಹುಡುಗ

ಕಾವ್ಯ ಸಂಗಾತಿ

ಓಡಿ ಹೋದ ಹುಡುಗ

ಮಕ್ಕಳ ಕಾದಂಬರಿ

ಡಾ. ಬಸು ಬೇವಿನಗಿಡದ

ಓಡಿ ಹೋದ ಹುಡುಗನನ್ನ ಜಗ್ಗಿಸಿ ನಿಲ್ಲಿಸಿ ಅವನ ಜೋಡಿ ಮಾತಿಗಿಳಿದಾಗ ನನ್ನ ಅನುಭವಕ್ಕೆ ಬಂದ ಮಾತುಗಳು ನಿಮ್ಮೊಟ್ಟಿಗೆ ಹಂಚಿಕೊಳ್ತಿದಿನಿ.
ಖರೆನೆ! ಓಡಿ ಹೋದ ಹುಡುಗ’ ಮಕ್ಕಳ ಕಾದಂಬರಿ. ಕಾದಂಬರಿ ಅಂದ್ರೆನೆ ಹಾಗೆ ದೀರ್ಘಕಾಲದ ಓದುವ ಸಹನೆಯನ್ನ ಅಪೇಕ್ಷಿಸುವಂತಹದು. ೧೩ ರಿಂದ ೧೫ ರ ಹರೆಯದ ಮಕ್ಕಳ ಸುತ್ತ ಹಬ್ಬುವ ಈ ಕಾದಂಬರಿ ನಿಜಕ್ಕೂ ಪ್ರಶಂಸನೀಯ. ಮನೋವಿಜ್ಞಾನಿಗಳ ಪ್ರಕಾರ ಈ ವಯೋಮಾನದ ಮಕ್ಕಳಿಗೆ ಆದಷ್ಟು ಸಾಹಸಮಯ ವಸ್ತು ವಿಷಯಗಳನ್ನ ಪ್ರಧಾನವಾಗಿರಿಸಿ, ಅವರ ಸ್ವಭಾವ ಬುದ್ದಿ ಸಾಮರ್ಥ್ಯಗಳಿಗೆ ಸಾಣೆ ಹಿಡಿವ ರೀತಿಯಲ್ಲಿ ಹೇಳುವ ಹಾಗೆ ಇರಬೇಕು ಅಂತಾರೆ. ಹಾಗೆ ಆದಷ್ಟು ಸಾಮಾನ್ಯವಾದ ಜನಜೀವನದಲ್ಲಿ ಉಂಟಾದ ಘಟನೆಗಳು ,ಕ್ರೀಯೆಗಳೊಡನೆ ಅನುಭವಿಸಿದ ಮತ್ತು ಮೂಡಿದ ಸಂಗತಿಗಳಿದ್ದರೆ, ಜೊತೆಗೆ ವಾಸ್ತವದ ಸಂಗತಿಗಳು ಕಲ್ಪನೆಗಳಿಗಿಂದ ಹೆಚ್ಚು ಪರಿಣಾಮಕಾರಿಯಾಗಿ ಮಕ್ಕಳ ಕಾದಂಬರಿಗಳು ಯಶಸ್ಸನ್ನು ಕಾಣುತ್ತವೆ. ಹದಿಹರೆಯ ಆಶಯಗಳನ್ನ ಚಿಗುರೊಡೆವ ವಯಸ್ಸು ಈ ವಯೋಮನದ ಮಕ್ಕಳಲ್ಲಿ ಕಾಣ್ತೀವಿ. ಹಾಗಾಗಿ ಜೋರಾಗಿ ಬೈದು ಬುದ್ದಿ ಹೇಳಿದರೆ ಆಜ್ಞೆ’ ಅನುವ ಸಹಜ ಕ್ರೀಯೆಗೆ ಇಂತಹ ಕಾದಂಬರಿಗಳ ಓದುವಿಕೆ ಮಕ್ಕಳಿಗೆ ದಕ್ಕುವುದು ನಿಜಕ್ಕೂ ಸ್ವಾಗತಾರ್ಹ ಮತ್ತು ಅಗತ್ಯ ಕೂಡ.
ಇಲ್ಲಿ ಎಲ್ಲವು ಇದೆ. ಕಾದಂಬರಿಕಾರರು ಆಗಾಗ್ಗೆ ಸಂಧರ್ಬಕ್ಕೆ ತಕ್ಕಂತೆ ಆಲದ ಮರದ ಅಜ್ಜನ ನುಡಿಗಳಲ್ಲಿ, ಕರೀಕಟ್ಟಿ ಮಾಸ್ತರ ಮುಖೇನಾ ,ಊರಿನ ಹಿರಿಯರ ಮುಖೇನಾ ನವಿರಾಗಿ ತಿಳುವಳಿಕೆಯನ್ನ ಬುದ್ದಿಮಾತುಗಳನ್ನ ಹೇಳ್ತಾರೆ.ಉದಾಹರಣೆಗೆ, ‘ಯಾರು ಯಾವಾಗಲೂ ಕೆಲಸದಲ್ಲಿ ತೊಡಗಿರತಾರೋ ಅವರ ಮನಸ್ಸು ನೀರಿನಾಂಗ ತಿಳೀ ಇರತೇತಿ’, ‘ಗುಣಕ್ಕೆ ಮತ್ಸರಪಡದೆ ಓದಬೇಕು’ , ‘ ಸಣ್ಣಪುಟ್ಟ ಜಗಳಗಳು ದೊಡ್ಡದಾಗಿ ಪರಿವರ್ತನೆ ಆಗಿ ಆನಾಹುತಗಳಿಗೆ ದಾರಿ ,ಅದನ್ನ ಮುಂದುವರೆಸದಂತೆ ಸಂಬಂಧಗಳನ್ನ ಕಾಪಿಡಬೇಕು’ ‘ ಹೀಗೆ ಹಲವು ಮಾತುಗಳು ಓದುಗರಿಗೆ ಮನಮುಟ್ಟುತ್ತವೆ.

ಮೊದಲಿಗೆ ಓಡಿ ಹೋದ ಹುಡುಗ ಗಜ್ಯಾನ ಪರಿಚಯ ನಮಗೆ ‘ಮಾಯಕಾರ್ ಗಜ್ಯಾ’ ಅಂತಲೇ ಪರಿಚಯಿಸುವ ಕಾದಂಬರಿಕಾರರು ನಮಗೆ ಗಜ್ಯಾನ್ನನು ನಮ್ಮ ಕಲ್ಪನೆಗೆ ನಿಲುಕುವಂತೆ ಅವನ ವ್ಯಕ್ತಿತ್ವಕ್ಕೊಂದು ಆಯಾಮವನ್ನ ಕೊಡ್ತಾರೆ. ಓಹೋ! ಇವನಲ್ಲಿ ಎಂಥದೋ ಮ್ಯಾಜಿಕ್ ಇದೆ ಅಂದುಕೊಳ್ಳುವ ಹೊತ್ತಿಗೆ ,ಅವನಾಗಲೇ ನಮ್ಮ ಕೈ ಹಿಡಿದು ಓದುವ ಹಪಾಹಪಿನಲ್ಲಿ ಓದಿಸಿಕೊಂಡು ಹೋಗ್ತಿರ್ತಾನೆ ಎಲ್ಲಿಯು ನಿಲ್ಲದ ಹಾಗೆ ಕೊನೆವರೆಗೆ ನಿಬ್ಬೆರಗಾಗುವಂತೆ.

ಅವನ ಸೈಕಲ್ ಟ್ರಿಕ್ಸ, ಸೈಕಲ್ ಜಂಪ್ ಮಾಡಿಸೋದು, ಹಿಂದೆ ಮುಂದೆ ತಿರುಗಿಸಿ ಬ್ಯಾಲೆನ್ಸ ಮಾಡುವಲ್ಲಿ ಅವನ ಸಾಹಸ ಪ್ರವೃತ್ತಿಯ ಅನಾವರಣ ಆಗತ್ತೆ. ಹಾಗೆ ಬೆಳ್ಳಂಬೆಳಗಿನಲಿ, ಅವನ ಸೈಕಲ್ ಬೆಲ್ಲನ್ನು ಅವನು ಮೀಟುವಾಗ ಹೊರ ಹೊಮ್ಮುವ ಅರುಣರಾಗಗಳ ಕುತೂಹಲಕ್ಕೆ ಕೂಳಿಗು ಬೆಳಗಾಗುವ ಪರಿ ಅಚ್ಚರಿ ಹುಟ್ಟಿಸತ್ತೆ. ಹಾಗೆ ಮಾಲೂರಿಗೆ ಸೂರ್ಯನನ್ನು ಸ್ವಾಗತಿಸುವವ ಗಜ್ಯಾನೆ ಅನುವ ಖಾತ್ರಿಗೆ ಎಲ್ಲರೂ ಬೆರಗಾಗುವ ಜೊತೆಗೆ , ಓದುಗರು ವಾವ್ಹ್! ಹುಡುಗರಂದ್ರೆ ಹೀಗಿರಬೇಕು ಅನುವ ನೆಕ್ಕಿ ನಮಗಾಗಿರತ್ತೆ.ಅವನ ಬೆಳಗಿನಾಗಮನದ ಕುರುಹಿಗೆ ಪ್ರತಿ ಮನೆಯ ಅಮ್ಮಂದಿರ ಕೆಲಸಗಳು ಪ್ರಾರಂಭವಾಗತ್ತೆ . ಅಂಗಳ ಗುಡಿಸಿ, ರಂಗೋಲಿ ಹಾಕಿ, ಚಾ ಮಾಡುವ ದಿನಚರಿಗು, ಒಂದು ರೀತಿ ಗಜ್ಯಾ ಅಂದ್ರ ಎನೋ ಕಕ್ಕುಲಾತಿ. ಅಯ್ಯೋ! ನಮ್ಮ ಮಕ್ಕಳು ಇನ್ನೂ ಹಾಸಿಗಿಲೆ ಇದಾರೆ ಅನ್ನುವ ಆತಂಕ. ಗಜ್ಯಾನ ನಡೆಗೆ ಪ್ರಶಂಸಿಸುತ್ತ, ತಮ್ಮ ಮಕ್ಕಳ ಸೋಮರಿತನಕ್ಕೆ ಬೇಸರಿಸುತ್ತ. ನಮ್ಮ ಮಕ್ಕಳು ಗಜ್ಯಾನ ರೀತಿಯಾದರೆ ಸಾಕು ಅನ್ನುವ ಹಪಾಹಪಿ, ಜೊತೆಗೆ ಗಜ್ಯಾನೆಡೆಗಿನ ಅಭಿಮಾನದಲ್ಲಿ ಓದುಗನಿಗೆ ಗಜ್ಯಾನ ವ್ಯಕ್ತಿತ್ವದಲ್ಲಿ, ಆದರ್ಶ ಬಾಲಕ ಇವ ತನ್ನ ಓರಗೆಯವರಿಗೆ ಕಣ್ ತೆರೆಸುತ್ತಾನೆ ಅನ್ನುವ ಭಾವ ಮೂಡತ್ತೆ.

ಎಷ್ಟು ಬಲವಾಗಿ ಊರವರು ನಂಬಿದ್ರಂದ್ರೆ ಗಜ್ಯಾನ ಮುಖದರ್ಶನ ನರಿಯ ಮುಖದರ್ಶನದಂತೆ ಲಾಭ ಅಂಬುವುದನ್ನು. ಕಡೇ ಪಕ್ಷ ಅವನ ಸೈಕಲ್ ಬೆಲ್ ಸದ್ದೇ ಸುಪ್ರಭಾತದ ಶುಭಲಾಭ ಅನುವಂತೆ ಗಜ್ಯಾನ ಬೆಳ್ಳಂಬೆಳಗಿನ ಮುಖದರ್ಶನಕ್ಕೆ ತಮ್ಮನ್ನ ರೂಢಿಸಿಕೊಂಡಿದ್ರು. ಒಂದು ವೇಳೆ ಅವ ಊರಲ್ಲಿ ಕಾಣ್ಸಿಲ್ಲದಿದ್ದರೆ ಏನೋ ಕೆಟ್ಟದು ಸಂಭವಿಸತ್ತೆ ಅನ್ನುವ ಬಲವಾದ ನಂಬಿಕೆಯ ಪೊರೆ ತಾನಾಗಿ ಇಡೀ ಗ್ರಾಮವನ್ನ ಆವರಿಸಿಕೊಂಡಿತ್ತು ಅನ್ನುವಲ್ಲಿ ಕಾದಂಬರಿಕಾರರು ಗಜ್ಯಾನ ಪಾತ್ರವನ್ನ ಇಲ್ಲಿ ಗಟ್ಟಿಯಾಗಿ ಹಿಡಿದಿಟ್ಟಿದ್ದಾರೆ.
ದಿನದಲ್ಲಿ ವ್ಯತ್ಯಾಸವಾದರೂ, ವಾತಾವರಣದ ಚಳಿಮಳೆಯಲ್ಲಿ ವ್ಯತ್ಯಾಸವಾದರೂ ಗಜ್ಯಾನ ದಿನಚರಿ ಮಾತ್ರ ನಿರಂತರತೆಯನ್ನ ಕಾಪಿಡುವ ಬಗೆ ಇತರ ಮಕ್ಕಳಿಗು ಮಾದರಿಯಾಗಿ ನಾಳೆ ನಾವು ಅವನಂತಾಗುವ ಅನುವ ಕಾಳಜಿಯನ್ನ ಎಳೆಎಳೆಯಾಗಿ ಎಳೆಯ ಓದುಗರ ಮನದಲ್ಲಿ ಅಚ್ಛಾಗುತ್ತದೆ.

ಹಾಗೆ ಗಜ್ಯಾನಿಗೆ ಅವನ ಎಳೆವೆಯಲ್ಲೆ ರೈತಾಪಿ ಮಂದಿಯ ಬದುಕಿನ ಭವಣೆಗಳು, ಮನೆಯ ಕಷ್ಟಕಾರ್ಪಣ್ಯಗಳು , ಅದಕ್ಕೆ ಅವನು ಸ್ಪಂದಿಸುವ ರೀತಿ, ತನ್ನ ಮನೆಯ ಹೊಟೆಲ್ಲ ಕೆಲಸದಲಿ ಅಪ್ಪ ಅಮ್ಮನಿಗೆ ಅವನು ಸಹಾಯ ಮಾಡುವುದು. ಅಷ್ಟು ಸಣ್ಣ ವಯಸ್ಸಿಗೆ ಹಾಲನ್ನ ಡೈರಿಗೆ ಹಾಕಿ, ಸಣ್ಣ ಪುಟ್ಟ ಕೆಲಸಗಳನ್ನ ಮಾಡಿ ದುಡ್ಡುಗಳಿಸುವ ಚಾತುರ್ಯ ,ಬರುವ ದುಡ್ಡನ್ನು ಮನೆ ತೂಗಿಸುವ ಖರ್ಚು ವೆಚ್ಚಗಳಿಗೆ ಮಾಡುವ ಸಹಾಯ ಎಲ್ಲವೂ ಶ್ಲಾಘನೀಯ ಮತ್ತು ವಯಸ್ಸಿಗೆ ಮೀರಿದ ಬುದ್ದಿ. ಅಪ್ಪನ ಅನಾರೋಗ್ಯದ ಕಾರಣ, ತಾನು ಅರ್ಧದಲ್ಲೆ ಬಿಟ್ಟ ಓದುವಿಗೆ ಮರುಗದೆ. ತಂಗಿಯ ವಿದ್ಯಾಭ್ಯಾಸಕ್ಕೆ ಅವನು ವಹಿಸುವ ಕಾಳಜಿ, ಓದುಗನಲ್ಲಿ ಅವನ ವ್ಯಕ್ತಿತ್ವದ ಘನದ ಅರಿವಾಗತ್ತೆ. ಹಾಗೆ ಅವನ ಅರಿವಿನ ಒಳಗಣ್ಣಿನಲ್ಲಿ ಎಲ್ಲವೂ ಸ್ಪಷ್ಟವಾಗಿ ಅವನ ಪ್ರತಿ ಕೆಲಸದಲ್ಲೂ, ಅದು ಶಾಲೆಯ ಓದಾಗಿರಬಹುದು ಮನೆಕೆಲಸವಾಗಿರಬಹುದು, ಊರಿನ ಕೆಲಸವಾಗಿರಬಹುದು , ಎಲ್ಲದರಲ್ಲೂ ಒಂದು ಶಿಸ್ತು ಶ್ರಧ್ದೆ ಭಕ್ತಿಯನ್ನ ಮೈಗೂಡಿಸಿರುವುದನ್ನ ಕಾದಂಬರಿ ಉದ್ದಕ್ಕೂ ನೋಡ್ತಿವಿ. ಇದರ ಮಧ್ಯೆ ಅವನ ಉದ್ದಟತನಕ್ಕೂ ಒಂದು ಮಾನದಂಡವನ್ನಿಟ್ಟುಕೊಳುವ ಬಗೆ
ಆದರ್ಶಮಯವಾಗಿ ನಮಗೆ ಕಾಣ್ಸತ್ತೆ.

ಗಜ್ಯಾನನ್ನ ಗಾಳಿಗೆ ಹೋಲಿಸುವ ಊರಿನವರು ‘ಬದಗ್ಗನ ಬರ್ತಾನಾ, ಬದಗ್ಗನ ಹೋಗ್ತಾನಾ’ ಅನುವ ಆ ಉತ್ತರ ಕರ್ನಾಟಕದ ಭಾಷೆಯ ಆ ಜವಾರಿ ಸೊಗಡಿನಲ್ಲಿ ಪ್ರತಿ ಪದ ಇಲ್ಲಿ ಅಧಿಪತ್ಯ ಸ್ಥಾಪಿಸತ್ತೆ. ಹಾಗೆ ಅವರ ಈ ಮಾತಿನಲ್ಲಿ ಅವನ ಪ್ರತಿ ಕೆಲಸದ ಬಗೆಗಿನ ಶ್ರಧ್ದೆ ಆ ತೀವ್ರತೆಯನ್ನ ಪರಿಚಯಿಸುತ್ತಾರೆ.ಆದರೆ ಕೆಲವರು ‘ ಅವನನ್ನ ತಡುವುದು ಅಂದರ ಗಾಳಿಗೆ ಗುದ್ದಿ ಕೈ ನೋಯಿಸ್ಕೊಂದಾಂಗ ‘ ಅನುವವರು ಇದಾರೆ. ಹೊಗಳುವವರಿಗೆ ಬೀಗದೆ, ತೆಗಳುವವರಿಗೆ ಬಾಗದೆ ಅವ ಮಾತ್ರ ನಿತ್ಯ ತೃಪ್ತನಂತೆ ಇಡೀ ಕಾದಂಬರಿಲಿ ಬರುವ ಅವನ ಪಾತ್ರ ನಮ್ಮನ್ನ ಹಿಡಿದಿಡತ್ತೆ.ಅವನ ಬಗ್ಗೆ ಅಭಿಮಾನ ಮೂಡತ್ತೆ.

ಗಜ್ಯಾ ಅವನದೇ ಓರಗೆಯರ ಗೆಳೆಯರ ಗುಂಪು ಶರಣ್ಯಾ, ಆಶ್ಯಾ, ಸ್ವಾಮ್ಯಾ, ಗಂಗ್ಯಾ,ಪರಸ್ಯಾ, ದೀಪ್ಯಾ ಹೀಗೆ ಒಂದು ಚೆಂದದ ಸಾಮರಸ್ಯದ ಗುಂಪು. ಅದರಲ್ಲಿ ಗಜ್ಯಾ ದೊಡ್ಡ ಸಲಗ, ಉಳಿದವರು ಹಿಂಬಾಲಕ ಗಜ ಪಡೆ.ಎಲ್ಲರಲ್ಲೂ ನಾವು ಪರಿಶುದ್ದ ಪಾರದರ್ಶಕ ಸ್ನೇಹವನ್ನ ನೋಡ್ತಿವಿ.ಎಲ್ಲರ ಒಪ್ಪು ತಪ್ಪುಗಳನ್ನ ಬದಿಗಿರಿಸಿ ಸಲಹುವ ಸ್ನೇಹ, ಹಗಲಿಗೆ ಹೆಗಲಾಗಿ ಇರುಳಿಗೆ ಬೆಳಕಾಗಿ ಸುಮ್ಮನೆ ಕಾದಂಬರಿಯ ಪಯಣದುದ್ದಕ್ಕೂ ಜೊತೆಗಿರುವ ಭಾವಗಳು ಅವು. ಕಷ್ಟ ಕೋಟಲೆಗಳ ಸುರುಳಿಯಲ್ಲು ರಹದಾರಿ ತೋರುತ ,ನಾನು ನೀನು ಅನುವ ಹಮ್ಮು ಬಿಮ್ಮುಗಳಿದ್ರು ಅದನ್ನೆಲ್ಲವನ್ನ ಮೀರಿ ಸಹಜಭಾವ ಬೀರುವ ಅವರ ರೀತಿ ಅವರ ನಡೆನುಡಿಗಳ ಪರಿಶುದ್ದ ಪದ್ಮ ಸಮಯದಂತೆ ಒಂದು ಅಭಿಮಾನದ ಅನುಭೂತಿಯಿಲ್ಲಿ ಓದುಗನಿರುತ್ತಾನೆ.ಹಾಗೆ ಇಲ್ಲಿ ಬರುವ ಎಲ್ಲ ಪಾತ್ರಗಳ ಅನೋನ್ಯಸಂಬಂಧಗಳು ಎಲ್ಲವು ತೆರೆದ ಮನಸ್ಸಿನ ಹಾಗೆ ಪಾರದರ್ಶಕತೆಯತೆಯಲ್ಲಿ ಈ ಕಾದಂಬರಿ ಯಶವನ್ನ ಪಡೆಯತ್ತೆ.

ಇಡೀ ಮಾಲೂರಿನ ಅಗಸಿಯಲ್ಲಿದ್ದ ಆಲದ ಮರ ಮತ್ತದರ ಬಿಳಲು, ಇಡೀ ಊರಿಗೆ ಉಸಿರಾದಂತೆ ಅದು ಕೂಡ ಮಹತ್ತರ ಪಾತ್ರ ವಹಿಸತ್ತೆ. ಕಾರಣ ಆಲದ ಮರದ ಅಜ್ಜ ಆ ಮರದ ರಕ್ಷಣೆಗೆ ಅಲ್ಲಿನ ಪರಿಸರವನ್ನ, ಇರುವ ಹಸಿರನ್ನ ಕಾಪಿಡುವ ದೂತನಂತೆ ಕಾಣ್ಸತ್ತಾನೆ. ಅವನೇ ಕೇಂದ್ರ ಬಿಂದು ಕಾದಂಬರಿಗೆ. ಅವನ ಸುತ್ತ ಹೆಣೆದ ಕಥೆ ಇದಾಗಿದೆ.
ಮಕ್ಕಳೊಂದಿಗೆ ಅವನ‌ ಒಡನಾಟ, ಅವನ ಮಾತುಗಳು ಊರ ಮಂದಿಗೆ ಒಮ್ಮೆ ಮಂತ್ರದಂತೆ ಮಹತ್ವ ಅನ್ಸಿದ್ರು. ಕೆಲವೊಮ್ಮೆ ತಂತ್ರಗಾರಿಕೆಯ ಗುಮಾನಿ ಅವರಲ್ಲಿ ನೆಲೆ ಊರುತಿತ್ತು. ಮಕ್ಕಳನ್ನ ಹಾಳು ಮಾಡ್ತಾನೆ ಅನ್ನುವ ಪಿರ್ಯಾದೆ ಕೂಡ ಬರ್ತಿತ್ತು.ಆದರೆ ಇದ್ಯಾವುದು ಅಜ್ಜನ ಪಾತ್ರದ ಸರಳತೆಗೆ ಅವನ ಘನತೆಗೆ ಕುಂದು ಬರೋದೆ ಇಲ್ಲ. ಇಡೀ ಕಾದಂಬರಿಲಿ ಅವನ ಮತ್ತು ಗಜ್ಯಾನ ಹಿರಿಕಿರಿತನದ ಧೀಃಶಕ್ತಿಯ ಕೊನೆ ಮೊದಲಿಗರಾಗಿ ಕಾದಂಬರಿಯ ಘನವನ್ನ ಕಾಪಿಡುವ ಪಾತ್ರಗಳಾಗಿವೆ.

ಶಾಲೆ ಬಿಟ್ಟರೆ ಆಲದ ಮರದ ಅಜ್ಜನ ಸನಿಹವೇ ಮಕ್ಕಳ ಆಟ ಪಾಠ ಎಲ್ಲ.ಅಜ್ಜ ಹೇಳುವ ಕಥೆಗಳಲ್ಲಿ ಮಕ್ಕಳ ಮನಸ್ಸನ್ನ ಅರಳಿಸಿ ಕುತೂಹಲ ಕೆರಳಿಸಿ ಅವರ ಕಲ್ಪನೆ , ಭಾವನೆಗಳಿಗೆ
ಒತ್ತು ಕೊಟ್ಟು ಅವರ ಖುಷಿಗೆ ಕಾರಣ ಆಗ್ತಾನೆ .ಅದಕ್ಕೂ ಮಿಗಿಲಾಗಿ ಮಕ್ಕಳ ಮನಸ್ಸಿನ ಸೂಕ್ಷ್ಮ ಸಂವೇದನೆಗಳನ್ನ ಅರ್ಥೈಸಿ ಇರುಳ ಚಂದ್ರಮನೊಂದಿಗೆ, ನಕ್ಷತ್ರಗಳೊಟ್ಟಿಗೆ ಮಾತಾಡುವ ಪರಿಗೆ ಮಕ್ಕಳ ನಿರ್ಮಲ ಮನಸ್ಸಿಗೆ ಒಂದು ರೀತಿ ಹೊಸ ಶಕ್ತಿಯನ್ನ ಕೊಡ್ತಿದ್ದ. ಒಂದು ರೀತಿ ಶಾಲೆಯಲ್ಲಿ ಮಾಸ್ತರಿಂದ ತಿಳಿಯದ ವಿಷಯಗಳನ್ನ ಆಲದ ಮರದ ಅಜ್ಜ ಹೇಳತಿದ್ದ.
ಈ ಭಾಗದಲ್ಲಿ ಮಕ್ಕಳ ಸೂಕ್ಷ್ಮ ಮನಸ್ಸಿಗೆ ಮತ್ತಷ್ಟು ತಾಗುವಂತೆ ತಿಳುವಳಿಕೆಗೆ ನಿಲುಕುವ ನಿಟ್ಟಿನಲ್ಲಿ ಆಲದ ಮರದ ಅಜ್ಜನ ಮುಖೇನ ಹೇಳುವ ಅವಕಾಶ ಕಾದಂಬರಿಕಾರರಿಗೆ ಇತ್ತು ಅನ್ನುವುದು ನನ್ನ ಅನಿಸಿಕೆ.

ಆಲದ ಮರದ‌ ಅಜ್ಜ ಇಡೀ ಗ್ರಾಮೀಣ ಪರಿಸರವನ್ನ ತದ್ಯಾತ್ಮತೆಯಿಂದ ಕಾಪಿಡುತ್ತ ಇದ್ದ ಅಂದರೆ ತಪ್ಪಾಗಲಾರದು. ಆದಕಾರಣ ಸಿನಿಮಾ ಚಿತ್ರಿಕರಣ ಕೂಡ ನಡೆಯುವ ಸನ್ನೀವೇಶದ ಸೃಷ್ಟಿ ಕಾದಂಬರಿಯ ಬೆಳವಣಿಗಗೆ ಒಂದು ಹೊಸ ತಿರುವವನ್ನ ಕೊಡತ್ತೆ . ಇಡೀ ಪರಿಸರವನ್ನ ಸಹಜವಾದಂತಹ ಗ್ರಾಮೀಣ ಸೊಗಡನ್ನ ಸೆರೆ ಹಿಡಿವ ಸಿನಿಮಾದ ಚಿತ್ರಿಕರಣ, ಮಕ್ಕಳ ಮನಸ್ಸಿನಲ್ಲಿ ಕೂಡ ಸಿನಿಮಾದಲ್ಲಿ ನಟಿಸುವ ಆಸೆ ,ಅದರಲ್ಲೂ ಗಜ್ಯಾನ ಮನಸ್ಸಿನಲ್ಲಿ ಚಿಗುರೊಡೆದ ಆಸೆಗೆ ಹಸಿರುಣಿಸುವ ದೃಶ್ಯ ಕಾವ್ಯ ಇಲ್ಲಿ ಬಯಲಾಗತ್ತೆ.ಮುಗ್ಧ ಮನದ ಮಕ್ಕಳ‌ ಮನಸ್ಸನ್ನು ಅವರ ಆಸೆ ಕುತೂಹಲಗಳನ್ನ, ಅದನ್ನ ತಣಿಸುವಲ್ಲಿ ಕೊನೆಗೆ ಕಾದಂಬರಿ ಯಶಸ್ವಿಯಾಗಿದೆ.

ಮಕ್ಕಳ ಮನಸ್ಸಿನಲ್ಲಿ ಸಹಜವಾಗಿ ಮೂಡುವ ಈರ್ಷ್ಯೆ, ಹಮ್ಮು ಬಿಮ್ಮುಗಳನ್ನ ಅತ್ಯಂತ ಸಮಂಜಸವಾಗಿ ,ಸಮಯೋಜಿತವಾಗಿ ಕಾದಂಬರಿಯಲ್ಲಿ ಅಳವಡಿಸಿದೆ. ಅವರ ಮನೋಭಾವಗಳನ್ನ ಅರಿತು ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಅವರನ್ನ ಅವರ ಭಾವನೆಗಳನ್ನ ಸೂಕ್ಷ್ಮವಾಗಿ ಬದಲಾಯಿಸುವ ಒಂದು ಪ್ರಸಂಗ ಇಲ್ಲಿ ಕಾದಂಬರಿಕಾರರು ಕಟ್ಟಿ ಕೊಡ್ತಾರೆ‌. ಮಕ್ಕಳೆಲ್ಲ ಜಗಳವಾಡಿಕೊಂಡಾಗ ಗಜ್ಯಾ ಗೆಳೆಯರ ಗುಂಪಿನಿಂದ ಹೊರ ಹೋಗ್ತಾನೆ. ಆಗ ಕರೀಕಟ್ಟಿ ಮಾಸ್ತರು ಅವರನ್ನೆಲ್ಲ ರಮಿಸುವ ರೀತಿ , ‘ಸಣ್ಣ ಪುಟ್ಟ ವಿಷಯಕ್ಕೆಲ್ಲ ಜಗಳ ಆಡಬಾರದು. ಮುಂದೆ ದೊಡ್ಡ ಅನಾಹುತಗಳಿಗೆ ಕಾರಣ ಆಗತ್ತೆ.ಗುಣಕ್ಕೆ ಮತ್ಸರ ಕೊಡದೆ ಬದುಕಬೇಕು, ಪರೀಕ್ಷೆಯಲ್ಲಿ ಅಂಕಗಳು ಮುಖ್ಯವಲ್ಲ ಜೀವನಕ್ಕೆ ಅದರಿಂದ ಏನು ಪಾಠ ಕಲಿತೀವಿ ಅನ್ನುವುದು ಮುಖ್ಯ’ ಎನ್ನುವ ಧ್ಯೇಯ ವಾಕ್ಯವನ್ನ ಮಕ್ಕಳಿಗೆ ತಿಳಿ ಹೇಳ್ತಾರೆ. ಕಾದಂಬರಿಲಿ ಅತೀ ಬುದ್ದಿವಂತ ಗಜ್ಯಾ ಮನೆಲಿ ತಂದೆಯ ಅನಾರೋಗ್ಯ ಕಾರಣದಿಂದ ಶಾಲೆ ಬಿಡಬೇಕಾದವಪ್ರಸಂಗ ಸೃಷ್ಟಿಆಗತ್ತೆ. ಆದರೆ ಬದುಕಿನ ಪರೀಕ್ಷೆಲಿ ಅತ್ಯುನ್ನತ ಶ್ರೇಣಿಯಲಿ ಪಾಸಾಗುವ ರೋಚಕ ಕಥೆ ಕಾದಂಬರಿ ಅಂಶ ಮತ್ತು ಆಶಯ ಕೂಡ.

ಕಾದಂಬರಿಲಿ ಅಲ್ಲಲ್ಲೆ ಬರುವ ಹಾಸ್ಯ ಪ್ರಸಂಗಗಳು. ಇದ್ದಿಲನ್ನ ಉಜ್ಜಿ ಹಲ್ಲು ತಿಕ್ಕುವ ಪ್ರಸಂಗ, ಮಾತು ಕೇಳದ ಮಕ್ಕಳ ಭಾವಗಳ ತಿಣುಕಾಟ, ಮಾಸ್ತರರ ಹಾಜರಿ ಪುಸ್ತಕ ಹರಿದದ್ದು.
ಹೊಲದಲ್ಲಿ ಗಜ್ಯಾ ಮತ್ತವನ ಗೆಳೆಯರ ತಂಡದಿಂದ ದಾಳಿ, ಮಕ್ಖಳು ಶಾಲೆಗೆ ಅವರ ಅಣ್ಣಂದಿರ ಬಟ್ಟೆಯನ್ನ ಹಾಕಿ ಪಜೀತಿ ಬೀಳುವ ಪ್ರಸಂಗಗಳು ಖರೆನೆ ನಗೆಯ ಹಾಯಿ ದೋಣಿಗಳು.

ಹೀಗೆ ಇಡೀ ಕಾದಂಬರಿ ಒಂದು ವಿಭಿನ್ನ ಕಥಾ ಹಂದರದೊಂದಿಗೆ ಉತ್ತರ ಕರ್ನಾಟಕದ ಭಾಷೆ ಶೈಲಿ, ಗ್ರಾಮೀಣ ಹಿನ್ಬೆಲೆಯಲ್ಲಿ ಕಥೆ ಸಾಗುವ ರೀತಿ ಓದುಗನ ಹಸಿ ಹಸಿಮನಸ್ಸಿನಲ್ಲಿ ತನ್ನ ಹೆಜ್ಜೆ ಗುರುತನ್ನ ಮೂಡಿಸತ್ತೆ. ಆ ಘಮಲು ಓದುಗನಲ್ಲೂ ಮೂಡಿಸತ್ತೆ ಮಕ್ಕಳು ಇದ್ರೆ ಗಜ್ಯಾನ ರೀತಿ ಇರಬೇಕು ಏನಾದರೂ ಸಾಧಿಸಬೇಕು , ಇರುವತನದಲ್ಲೇ ನಮ್ಮ ಇರುವನ್ನ ಹೇಗೆಲ್ಲ ಕಾಪಿಟ್ಟು ಯಶಸ್ಸನ್ನ ಪಡೆಯಬಹುದು ಅನ್ನುವ ನಿಲುವನ್ನ ಕಟ್ಟಿ ಕೊಡುವುದರಲ್ಲಿ ‘ಓಡಿ ಹೋದ ಹುಡುಗ’ ನಮ್ನನ್ನ ಕಡೆವರೆಗೆ ಕಾಡಿ ಹೇಗೆ ಆದರ್ಶಮಯವಾಗ್ತಾನೆ ಅನ್ನುವುದನ್ನ ಅತ್ಯಂತ ಮಾರ್ಮಿಕವಾಗಿ ಹೆಣೆದ ಕಾದಂಬರಿ.

ಈಗಾಗ್ಲೆ ಮಕ್ಕಳ ಈ ಕಾದಂಬರಿ ಅನೇಕ ಪ್ರಶಸ್ತಿಗಳನ್ನ ಅಲಂಕರಿಸಿದೆ, ಇತ್ತೀಚೆಗೆ ಕೇಂದ್ರ ಕನ್ನಡ ಸಾಹಿತ್ಯ ಅಕಾಡೆಮಿ ಕೊಡ ಮಾಡುವ ಬಾಲ ಪುರಸ್ಕಾರ ಪ್ರಶಸ್ತಿ ಕೂಡ ದೊರಕಿದೆ.


ಶಾಲಿನಿ ರುದ್ರಮುನಿ

Leave a Reply

Back To Top