ವೈ ಬಿ ಕಡಕೋಳ ಅವರ ಸಂಪಾದಕತ್ವದ ಕೃತಿ”ಬದುಕು ಬಂಡಿ”ಒಂದು ಅವಲೋಕನಜಯಶ್ರೀ.ಭ. ಭಂಡಾರಿ ಅವರಿಂದ.

ಬದುಕು ಬಂಡಿಯ ಬದುಕಿನ ಮಾತುಗಳು.

ಮುನವಳ್ಳಿಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮದುವೆ ಎಂದ ಕೂಡಲೇ ನನಗೆ ತುಂಬಾ ಖುಷಿಯಾಗಿ ಮದುವೆಗೆ ಹೋಗಲು ಸಿದ್ದಳಾದೆ.. ಕಾರಣ ಪಂಚಲಿಂಗೇಶ್ವರ ದೇವಸ್ಥಾನ ನೋಡುವ ಸಂಭ್ರಮ. ನಾವು ಮಕ್ಕಳೊಂದಿಗೆ ಶಾಲಾ ಪ್ರವಾಸದಲ್ಲಿ ಬಹಳ ದಿನಗಳ ಹಿಂದೆ ನೋಡಿದ ನೆನಪಿತ್ತು. ಮತ್ತೊಮ್ಮೆ ನೋಡಬೇಕೆಂದರೆ ಸಾಧ್ಯವಾಗಿರಲಿಲ್ಲ. ಮದುವೆ ಕಾರ್ನದಿಂದ ಪಂಚಲಿಂಗೇಶ್ವರ ದರ್ಶನ ಮತ್ತೆ ನನಗಾಯಿತು. ಅಂತೆಯೇ ನನ್ನ ಗೆಳತಿಯ ಮಗಳ ಮದುವೆ ಅಂದು ಅಲ್ಲಿ ಇತ್ತು. ಹೀಗಾಗಿ ನಾನು ಬಾದಾಮಿಯಿಂದ ನನ್ನ ಸ್ನೇಹಿತೆಯರ ಜೊತೆ ಹೋಗಿದ್ದೆ. ಬಹಳ ದಿನಗಳ ನಂತರ ಪಂಚಲಿಂಗೇಶ್ವರ ದೇವಸ್ಥಾನವೆಲ್ಲ ಸುತ್ತಾಡಿ ನಮಸ್ಕರಿಸಿ ತೀರ್ಥ ತೆಗೆದುಕೊಂಡು ಕೆಲವು ಫೋಟೋಗಳನ್ನ ಕ್ಲಿಕ್ಕಿಸಿಕೊಂಡೆವು ನಂತರ ಅದ್ದೂರಿಯ ವಿವಾಹದಲ್ಲಿ ಪಾಲ್ಗೊಂಡೆವು. ಮುನವಳ್ಳಿ ಎಂದ ಕೂಡಲೇ ನನಗೆ ಒಬ್ಬ ಅತ್ಯುತ್ತಮ ಲೇಖಕರ ನೆನಪಾಗುವುದು ಸಹಜ. ಅವರೇ ವೈ ಬಿ ಕಡಕೋಳ. ನಾನು ಅವರಿಗೆ ಫೋನಾಯಿಸಿ ಮುನವಳಿಗೆ ಬಂದ ವಿಷಯ ಹೇಳಿದೆ ಅಲ್ಲದೆ ನನಗೆ ಪೋಸ್ಟ್ ಮುಖಾಂತರ ಕಳಿಸುವ ಪುಸ್ತಕಗಳನ್ನ ಇಲ್ಲಿಯೇ ಕೊಟ್ಟು ಬಿಡಿ ಸರ್ ಎಂದು ಫೋನಲ್ಲಿ ಹೇಳಿದೆ. ಅಂತೆಯೇ ಅಂದು ನನಗೆ ಕಡಕೋಳ ಸರ್ ಬದುಕು ಬಂಡಿ, ಬೆಳಕಿನೆಡೆಗೆ ಹಾಗೂ ಬಲ್ಲವರ ಬಳಗ ಒಟ್ಟು ಮೂರು ಪುಸ್ತಕಗಳನ್ನ ಕೊಟ್ಟರು. ನನ್ನ ಸ್ನೇಹಿತೆಯರು ಇಲ್ಲಿ ಬಂದರೂ ನಿನ್ನ ಸಾಹಿತ್ಯ ನೀನು ಬಿಡ್ತಾ ಇಲ್ಲವಲ್ಲ ಅಂತ ಛೇಡಿಸಿದರು. ನಾವು ಇದ್ದಲ್ಲಿ ಕಡಕೋ ಸರ್ ಪುಸ್ತಕಗಳನ್ನು ತಲುಪಿಸಿದರು. ಅವರಿಗೆ ಕೃತಜ್ಞತೆಗಳನ್ನು ಅರ್ಪಿಸಿ ನಮ್ಮ ಗಾಡಿ ಬಾದಾಮಿಯತ್ತ ಹೊರಟಿತು. ದಾರಿಯಲ್ಲಿಯೇ 3 ಪುಸ್ತಕಗಳನ್ನ ತಿರವಿ ಹಾಕುತ್ತಾ ಬಂದೆ. ಬೆಳಕಿನೆಡೆಗೆ ಹಾಗೂ ಬದುಕು ಬಂಡಿ ಇವು ಕಡಕೋಳವರ  ಸಂಪಾದಿತ ಕೃತಿಗಳು. ಇನ್ನೊಂದು ಕೃತಿ “ಬಲ್ಲವರ ಬಳಗ” ಇದರಲ್ಲಿ ನಾಡಿನ ಖ್ಯಾತ ಲೇಖಕ ಲೇಖಕಿಯರ ಬದುಕು ಬರಹ ಕುರಿತು ಲೇಖನಗಳಿವೆ.

ನನ್ನ ಕುರಿತು ಲೇಖನವೂ ಇದರಲ್ಲಿ ಇದೆ ಇದಕ್ಕಾಗಿ ಕಡಕೋಳ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಸಮರ್ಪಿಸುತ್ತೇನೆ. 

ಬದುಕು ಬಂಡಿ ಇದು ಕಡಕೋಳರವರ 34ನೇ ಕೃತಿ ಇದರಲ್ಲಿ ಲೂಸಿ ಸಲ್ದಾನ ಮಾತೆಯ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಲೂಸಿ ಸಲ್ದಾನ ರವರ ಅಪರೂಪದ ವ್ಯಕ್ತಿತ್ವವನ್ನ ಅವರ ಆದರ್ಶವನ್ನು ಹಾಗೂ ಅವರು ಜೀವನದಲ್ಲಿ ಕಂಡುಂಡ  ನೋವು ನಲಿವುಗಳನ್ನುಬದುಕು ಬಂಡಿ ನಮಗೆ ತೆರೆದಿಡುತ್ತದೆ. ಸಂಪಾದಕರ ನುಡಿ ಒಳಗ ಮಾತೆಯ ಜೀವನದ ಬದುಕು ಬರಹವನ್ನು ಸಂಕಲಿಸಿದ್ದಾರೆ. 

ಬದುಕು ಬಂಡಿಯ ಮುನ್ನುಡಿಯನ್ನು ಖ್ಯಾತ ಪರಿಸರವಾದಿ ಚಲನಚಿತ್ರ ನಿರ್ದೇಶಕ ನಟ ಸುರೇಶ್ ಹೆಬ್ಳಿಕರ್ ಮುನ್ನುಡಿ ಬರೆದು ಮುನ್ನಡೆಸಿದ್ದಾರೆ.

ಆಶಯ ನುಡಿಗಳನ್ನು ಶ್ರೀ ಮಹಾಂತ ಸ್ವಾಮಿಗಳು ಬೇರುಗಂಡಿ ಬ್ರಹನ್ಮಠ ಚಿಕ್ಕಮಗಳೂರು ಜಿಲ್ಲೆ, ಹಾಗೂ ಡಾ ರೇಣುಕಾ ಅಮ್ಮಲಝರಿ ಇಬ್ಬರು ವ್ಯಕ್ತಿಗಳು ಬದುಕು ಬಂಡಿಗೆ ಆಸೆಯ ನುಡಿಗಳನ್ನು ಬರೆದು ಪುಸ್ತಕದ ಮೆರಗು ಹೆಚ್ಚಿಸಿದ್ದಾರೆ. 

ಪರಿವಿಡಿ, ಬದುಕು ಬಂಡಿಯ ರೂವಾರಿಗಳು, ಕವನಗಳು, ಲೇಖನಗಳು ಹೀಗೆ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಆಯಾ ಭಾಗಗಳಲ್ಲಿ ಸಂಬಂಧಿತ ಬರಹಗಳನ್ನ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ..

ಬದುಕು ಬಂಡಿ ನಂದಿನಿ ಸನ್ಬಾಳ್ ಶಿಕ್ಷಕಿ ಬರೆದ ಕವನವಾಗಿದೆ. ಇದೇ ಕವನವನ್ನು ಸಂಪಾದಿತ ಕೃತಿಗೆ ಸಿರ್ಶಿಕೆಯನ್ನಾಗಿ ನೀಡಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಳಾ, ಕಲ್ಬುರ್ಗಿ ಜಿಲ್ಲೆಯ ನಂದಿನಿ ಸನ್ಬಾಳ್ ಶಿಕ್ಷಕಿಯರು ಈ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಶಿವಲೀಲಾ ಪ್ರಕಾಶನ ಮಾರುತಿ ಬಡಾವಣೆ, ಸಿಂದೋಗಿ ಕ್ರಾಸ್ ಮುನವಳ್ಳಿ ಇವರು ಬದುಕು ಬಂಡಿ ಸಂಪಾದಿತ ಕೃತಿಯನ್ನು ಪ್ರಕಾಶನ ಮಾಡಿದ್ದಾರೆ..

ನೋವುಂಡು ನಲಿದವರು ಈ ಕವನದಲ್ಲಿ ಸಲ್ದಾನ ಮಾತೆಯ ಜೀವನ ಗಾತೆಯನ್ನು ತುಂಬ ಮನೋಜ್ಞವಾಗಿ ಶ್ರೀಮತಿ ವಿದ್ಯಾ ನಾಡಿಗೆರೆ ಬರೆದಿದ್ದಾರೆ. 

ಸ್ವತಃ ಲೂಸಿ ಸಲ್ಡಾನಾ.  ಮಾತೆಯವರು ‘ನನ್ನ ಬದುಕಿನ ಸಂಕ್ಷಿಪ್ತ ಆತ್ಮ ಚರಿತ್ರೆ’ ಎಂಬ ಲೇಖನದಲ್ಲಿ ತಮ್ಮ ಇಡೀ ಜೀವನದ ಕುರಿತು ಪರಿಚಯವನ್ನ ತುಂಬಾ ಅಮೋಘವಾಗಿ ಹೇಳುತ್ತಾ ಸಾಗುತ್ತಾರೆ. ಅವರ ಜೀವನ ಚರಿತ್ರೆಯನ್ನು ಓದುತ್ತಾ ಓದುತ್ತಾ ಅದ್ಭುತ ಲೋಕವನ್ನೇ ಪ್ರವೇಶಿಸಿದಂತಾಗುತ್ತದೆ. ತಂದೆಯ ಈ ಬದುಕು ಕಲಿಸಿದ ಪಾಠ, ಅಕ್ಕನ ಸ್ವಭಾವ, ನೋವಿನ ನುಡಿ ತಿರುವಿನ ಒಡಲು, ಬದುಕು ಜಟಕಾ ಬಂಡಿ ಬದುಕಿಗೆ ನೆರವಾದವರ ಹಿನ್ನೆಲೆ, ಕಣ್ಣೀರಧಾರೆ, ಇದೇಕೆ ಹೀಗೇಕೆ, ಭಯ ನಿರ್ಭಯ, ಅರಳಿದ ಕುಸುಮ, ಹೀಗೆ ಬಾಲ್ಯದಿಂದ ಯವ್ವನ ಯೌವನದಿಂದ ಮದುವೆ ಮದುವೆ ಎಂದಾಗುವ ಅದೆಷ್ಟೋ ಘಟನೆಗಳು ಹೀಗೆ ತಮ್ಮ ಸಂಪೂರ್ಣ ಆತ್ಮಕಥೆಯನ್ನು ಸಂಕ್ಷಿಪ್ತವಾದ ಪಕ್ಷಿ ನೋಟವನ್ನು ಲೂಸಿ ಸಲ್ದಾಡಾ. ದಾಖಲಿಸಿದ್ದು ಓದುಗರ ಮನದಾಳಕ್ಕೆ ಇಳಿಯುತ್ತದೆ.. ಕೀರ್ತಿವತಿ ವಿಎನ್ ಬರೆದ ಪ್ರತಿಭಾನ್ವಿತ ಬಡ ಮಕ್ಕಳ ಆಶಾಕಿರಣ ಮೇಡಂ ಇದರಲ್ಲಿ ಗುರು-ಶಿಷ್ಯರ ಸಂಬಂಧವನ್ನ ದಾಖಲಿಸಲಾಗಿದೆ. ಬಡ ಮಕ್ಕಳು ಸದಾ ನೆನಪಿನಲ್ಲಿಟ್ಟುಕೊಳ್ಳುವ ಹಿರಿಯ ಜೀವ ಸಲ್ಲಾನ ಮೇಡಂ ಎಂದು ಲೇಖಕಿ ಮನದಾಳದಿಂದ ಹೇಳುತ್ತಾರೆ.

ಬದುಕು ಬಂಡಿ ಕಿರು ಚಿತ್ರದಲ್ಲಿ ಬೇರೆ ಬೇರೆ ಪಾತ್ರಗಳ ರುವಾರಿಗಳಾದ ವ್ಯಕ್ತಿಗಳ ತಾವು ತೊಡಗಿಸಿಕೊಂಡ 32 ಪಾತ್ರಧಾರಿಗಳ  ಪರಿಚಯ ಅವರ ಪಾತ್ರದ ವಿಶೇಷತೆ ಹೀಗೆ ಅವರೆಲ್ಲರ ಸಂಪೂರ್ಣ ಪರಿಚಯದೊಂದಿಗೆ ಬರಹಗಳನ್ನು ದಾಖಲಿಸಿದ್ದಾರೆ. ಇದು ಕೂಡ ಬದುಕು ಬಂಡಿ ಕೃತಿಗೆ ವಿಶೇಷವಾದ ಮೆರಗು ತಂದಿದೆ. ಕಾರಣ ಅವರೆಲ್ಲರ ಪರಿಚಯದಿಂದ ಅವರ ಬಹುಮುಖ ಪ್ರತಿಭೆ ನಾಡಿನ ಜನತೆಗೆ ಪರಿಚಯಿಸಿದಂತಾಗುತ್ತದೆ. 

ಮತ್ತೆ ಮುಂದುವರಿದು ನಾಲ್ಕನೇ ಭಾಗದಲ್ಲಿ ಕವನಗಳು ನಮ್ಮನ್ನು ಸೆಳೆಯುತ್ತವೆ. ಅಕ್ಷರ ತಾಯಿ, ಮಹಾತಾಯಿ ನೀನು, ಲೂಸಿ ಸಲ್ಡಾನಾ, ಓ ದೇವತೆ ಹೀಗೆ ಮುಂದುವರೆಯುತ್ತಾ ಈ ಎಲ್ಲಾ ಕವನಗಳಲ್ಲಿ ಮಾತೆ ಲೂಸಿಯವರ ಜೀವನ ಗಾತೆಯನ್ನು ಕಾವ್ಯದಲ್ಲಿ ಹೃದಯಂಗಮವಾಗಿ, ಆಕರ್ಷಣೀಯವಾಗಿ ಪದಗಳಲ್ಲಿ ಸೆರೆಹಿಡಿಯಲಾಗಿದೆ. ಒಟ್ಟಾರೆ ಮಾತೆ ಮಮತೆಯ ಕಡಲು, ಅದೆಷ್ಟು ವಿಶಾಲ ಹೃದಯ ,ಅವರ ಬದುಕು ಅದೆಷ್ಟು ಸಹನೀಯ, ಅವರ ತಾಳ್ಮೆ, ಮನದ ವಿಶಾಲತೆ, ಬಡವರನ್ನು ಕಾಣುವ ಕಾರುಣ್ಯತೆ, ಮಕ್ಕಳೊಂದಿಗೆ ಬೆರೆಯುವ ವಾತ್ಸಲ್ಯ, ತಮ್ಮ ಸಂಪರ್ಕದಲ್ಲಿ ಬಂದ ಒಡನಾಡಿಗಳನ್ನ ಆತ್ಮೀಯತೆಯಿಂದ ಕಾಣುವ ಭಾವ, ಹೀಗೆ ಒಂದೇ ಎರಡೇ ಸಾಕಷ್ಟು ಬೆರಗುಗಳ ಸಂಕಲನ ಇವರು. ದಾನ ಧರ್ಮದಲ್ಲಿ ಎತ್ತಿದ ಕೈ. ಏನೆಲ್ಲ ಸಮಾಜಕ್ಕೆ ಕೊಟ್ಟರೂ ಕೊಡದಂತಿರುವ ನಿರ್ಭಾವ. ಸಮಾಜಕ್ಕೆ ಇವರು ಅಪರೂಪದ ಕೊಡುಗೆ. ಇವರಿಂದ ಸಮಾಜ ಸಾಕಷ್ಟನ್ನು ಕಲಿತಿದೆ, ಕಲಿಯಬೇಕಾಗಿದೆ ಇವರ ಆದರ್ಶ ಪಥದಲ್ಲಿ ನಡೆದು ನಾವೆಲ್ಲಾ ನಮ್ಮ ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದು ಆಶಿಸುತ್ತಾ ಈ ನನ್ನ ಚಿಕ್ಕ ಬರಹಕ್ಕೆ ವಿರಾಮ ನೀಡುತ್ತೇನೆ ಮತ್ತೊಮ್ಮೆ ಮಾತೆ ಲೂಸಿಯವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುವೆ. ಬದುಕು ಬಂಡಿ ಕಿರುಚಿತ್ರ ಎಲ್ಲೆಡೆ ಪ್ರದರ್ಶನಗೊಂಡು ಸಾರ್ಥಕತೆ ಪಡೆಯಲಿ ಎಂದು ಹೃದಯ ತುಂಬಿ ಹಾರೈಸುವೆ.


Leave a Reply

Back To Top