ಗಜಲ್

ಹಗಲು ವೇಷ ತೊಟ್ಟವರಲ್ಲ ನಾವು
ಕಾಲಿಗೆ ಗೆಜ್ಜೆಕಟ್ಟಿ ಕುಣಿಯುವರಲ್ಲ ನಾವು

ನಾನಾ ಪರಿಯ ಅನುಭವ ಪಡೆಯುವುದೇಕೆ
ಜಗದಿ ಜಂಗಮರಂತೆ ತಿರುಗುವರಲ್ಲ ನಾವು

ಶಿರದಲ್ಲೊಂದು ಗಂಟು ಹೊತ್ತು ನಡೆದೆವಲ್ಲ
ಉರಗದ ತೆರದಲಿ ಹರಿಯುವರಲ್ಲ ನಾವು

ಗೇಣುಹೊಟ್ಟೆ ತುಂಬಿಸಲು ನೂರೆಂಟು ಆಟ
ಬಿಡಾರದಲಿ ಶಾಶ್ವತದಲಿ ಇರುವವರಲ್ಲ ನಾವು

ಹರಿದ ಎಕ್ಕಡದಂತೆ ಬಾಳು ನರಕವಾಗಿದೆ
ಹಿಲಾಲಿನ ಬೆಳಕನ್ನು ನೋಡುವವರಲ್ಲ ನಾವು

ಮೃಷ್ಟಾನ್ನಕ್ಕೆ ಕೈಗಳನ್ನು ಬೊಗಸೆ ಒಡ್ಡಲಿಲ್ಲ
ಕಣ್ಣೆತ್ತಿ ಮೇಲೊಮ್ಮೆ ದಿಟ್ಟಿಸುವರಲ್ಲ ನಾವು

ಮುಖಕ್ಕೆ ಬಣ್ಣಹಚ್ಚಿ ನಗಿಸುತಿಹನು ಅಭಿನವ
ಸುಖದಲಿ ತೇಲುತ ಸಾಯುವವರಲ್ಲ ನಾವು


ಶಂಕರಾನಂದ ಹೆಬ್ಬಾಳ

Leave a Reply

Back To Top