ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

ಹೋಗುವುದಾದರೂ ಎಲ್ಲಿಗೆ ….??ವಿಶೇಷಲೇಖನ ಜಯಲಕ್ಷ್ಮಿ ಕೆ ಮಡಿಕೇರಿ

ವಿಶೇಷ ಸಂಗಾತಿ ಜಯಲಕ್ಷ್ಮಿ ಕೆ ಮಡಿಕೇರಿ ಹೋಗುವುದಾದರೂ ಎಲ್ಲಿಗೆ ….?? ಪಿ ಯು ಸಿ ಮೌಲ್ಯ ಮಾಪನ ನಡೆಯುತ್ತಿದ್ದ ದಿನಗಳವು. ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಉಪನ್ಯಾಸಕರೊಬ್ಬರು ಅವರ ವತಿಯಿಂದ ಆ ಒಂದು ದಿನ ಮೌಲ್ಯ ಮಾಪನ ಕೇಂದ್ರದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು. ಊಟ ಬರುವುದು ತಡವಾಯಿತು. ಎರಡು ಗಂಟೆಯವರೆಗೂ ಊಟಕ್ಕೆ ಕಾದು ದಣಿದಿದ್ದ ಉಪನ್ಯಾಸಕ ವೃಂದ ಆಹಾರ ಬಂದ ತಕ್ಷಣ ಊಟಕ್ಕೆ ಮುಗಿಬಿದ್ದಿತು.  ಸಾಲೂ ಇಲ್ಲ,ಸಂಯಮವೂ ಇಲ್ಲ, ಒಂದು ವ್ಯವಸ್ಥೆ ಯಂತೂ ಮೊದಲೇ ಇಲ್ಲ. ಶಕ್ತಿವಂತರು ಆಹಾರ ಗಿಟ್ಟಿಸಿಕೊಳ್ಳುವಲ್ಲಿ ಗೆದ್ದರು, ಕೆಲವರು ಸೋತು ಗೆದ್ದರು. ಒಂದಿಬ್ಬರು ಪಡೆಯುಕೊಂಡ ತಟ್ಟೆಯ ಅನ್ನ ಸಾಂಬಾರ್ ಗುಂಪು ತಿಕ್ಕಾಟದಲ್ಲಿ ಮತ್ತೊಬ್ಬರ ಮೇಲೆ ಚೆಲ್ಲಿ..ಅದೇ ಒಂದು ಜಗಳದ ವಿಷಯವಾಗಿ , ಕಿರುಚಾಡಿ.. ಉಫ್..  ಸಾಕಪ್ಪ ಸಾಕು ಎನಿಸುವ ಒಂದು ಅನುಭವ ಎಲ್ಲರಿಗೂ. ಕೊನೆಗೆ ನಿಂತವರಿಗೆ ಊಟವೇ ಸಿಗದೆ, ಆ ದಿನ ಊಟದ ವ್ಯವಸ್ಥೆ ಇದೆ ಎಂದುದರಿಂದ ಕ್ಯಾಂಟೀನ್ ನವರೂ ಊಟ  ಪೂರೈಕೆ ಮಾಡದೇ ಹೋದ್ದರಿಂದ ಕೆಲವರು ಆ ದಿನ ಉಪವಾಸ ಇದ್ದುಕೊಂಡೇ ಪೇಪರ್ ತಿದ್ದುವಂತಾಯಿತು. ಆ  ಚಿತ್ರಣ ನನ್ನ ಮನದಲ್ಲಿ ಅಚ್ಚೊತ್ತಿ  ನಿಂತಿದೆ. ವ್ಯಾಲ್ಯೂಯೇಷನ್ ಸೆಂಟರ್ ನಲ್ಲೇ ಊಟ ಸಿಗುತ್ತೆ ಅಂತ ಜೆ ಎಸ್ ಎಸ್  ಮಹಿಳಾ ಹಾಸ್ಟೆಲ್ ನಲ್ಲಿ ರುಚಿಕರವಾಗಿ ತಯಾರಿಸಿ ಕೊಡುತ್ತಿದ್ದ ಊಟವನ್ನು ಬಿಟ್ಟು ಬಂದು  ಕೊನೆಗೆ ಊಟ ಸಿಗದೆ ಇದ್ದವರಲ್ಲಿ  ನಾನೂ ಒಬ್ಬಳು.   ಅಲ್ಲಿ ಇದ್ದವರೆಲ್ಲ  ಸುಶಿಕ್ಷಿತರೇ..ಸಾಲು..ಶಿಸ್ತು ಸಂಯಮದ ಬಗ್ಗೆ ಬೋಧನೆ ಮಾಡುವವರೇ….ಆದರೇನು? ವಚನಕಾರರು ಹೇಳುವಂತೆ ” ಹಸಿವೆಂಬ ಹೆಬ್ಬಾವು ಬಂದು ಬಸಿರ ಹಿಡಿಯಲು ವಿಷವೇರಿತ್ತಯ್ಯಾ ಅಪಾದ ಮಸ್ತಕಕ್ಕೆ “. ಅಷ್ಟೇ. ‘ಹಸಿವು’ ಎನ್ನುವ ರಾಕ್ಷಸನ ಅಸುರ ಗುಣಗಳ ಮುಂದೆ ಸಭ್ಯತೆ ಸಂಸ್ಕಾರಗಳು ಮೌಲ್ಯ ಕಳೆದುಕೊಂಡುಬಿಡುತ್ತವೆ. ಮಾತು ಬರುವ ನಮ್ಮ ಪರಿಸ್ಥಿತಿಯೇ ಹೀಗಿರಬೇಕಾದರೆ ಇನ್ನು ಮಾತು ಬಾರದ ಮೂಕ ಪ್ರಾಣಿಗಳು ಹಸಿವು ನಿವಾರಣೆಗೆ ಕಾಡು ಬಿಟ್ಟು ನಾಡಿಗೆ ಬರುವುದರಲ್ಲಿ ತಪ್ಪೇನಿದೆ?  ಹಸಿವು ಬಾಯಾರಿಕೆಗಳ ಈಡೇರಿಕೆ ಈ ಭೂಮಿಯಲ್ಲಿ ಜನಿಸಿದ   ಪ್ರತಿಯೊಂದು ಜೀವಿಯ ಮೂಲಭೂತ ಅವಶ್ಯಕತೆ. ಹಸಿದ ಜೀವಕಷ್ಟೇ ಗೊತ್ತು  ಹಸಿವಿನ ಕಾವು. ಮಾತು ಬಲ್ಲ, ಚಿಂತನಾಶಕ್ತಿಯುಳ್ಳ ಮನುಷ್ಯರಾದ ನಾವೇ ಹಸಿವಾದಾಗ ಅನ್ಯರ ಬಗ್ಗೆ ಯೋಚಿಸದ ರೀತಿಯಲ್ಲಿ ವರ್ತಿಸುವಾಗ ವನ್ಯ ಮೃಗಗಳಾದ ಆನೆ, ಹುಲಿ, ಚಿರತೆ, ಕಾಡು ಹಂದಿ ಇತ್ಯಾದಿ  ಹಸಿವು ನೀಗಿಸಿಕೊಳ್ಳಲು ನಾಡಿನ ಹಾದಿ ಹಿಡಿಯುವ  ಮತ್ತು ಹಿಂಸಾತ್ಮಕ ವರ್ತನೆ ತೋರುವ ಬಗ್ಗೆ  ಏನು ಹೇಳುವುದು? ಹೊಟ್ಟೆ ತುಂಬಿಸಿಕೊಳ್ಳುವ  ಏಕೈಕ ಉದ್ದೇಶದಿಂದ ಅವು ಹಸಿರು ಕಂಡಲ್ಲಿಗೆ ಧಾವಿಸುತ್ತವೆ. ಅವುಗಳ ಅಸಹಾಯಕತೆ ನಡೆ ಅದು.ಆ ಪ್ರಾಣಿಗಳು ನಮಗೆ ಉಂಟುಮಾಡುವ ಕಷ್ಟ ನಷ್ಟಗಳನ್ನು  ನಾವು ನುಂಗಿಕೊಳ್ಳಲೇ ಬೇಕು.   ಇಲ್ಲ, ಪರಿಹಾರವನ್ನು ಕಂಡುಕೊಳ್ಳಬೇಕು. ಈ ಪ್ರಕೃತಿಯಲ್ಲಿ ಜೀವಿಸಲು ಎಲ್ಲ ಜೀವರಾಶಿಗಳಿಗೆ ಸಮಾನ ಹಕ್ಕಿದೆ. ಆದರೆ ಬದುಕುವ ಸಂದರ್ಭ ಪ್ರಕೃತಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಮೂಕ ಪ್ರಾಣಿಗಳು ಮೌನವಾಗಿಯೇ ಪ್ರಕೃತಿಯ ಮಾತನ್ನು ಆಲಿಸುತ್ತವೆ. ನಿಸರ್ಗ ನಿಯಮವನ್ನು ಪಾಲಿಸುತ್ತವೆ. ಮಾತು ಬಲ್ಲ ಮನುಷ್ಯ ಮಾತ್ರ ಮಾತನಾಡುತ್ತಾ ಆಡುತ್ತಾ ಉಳಿದ ಜೀವರಾಶಿಗಳು ತನ್ನ ಅಧೀನದಲ್ಲಿಯೇ ಇರಬೇಕು ಎಂದು ತನಗೆ ತಾನೇ ಒಂದು ನಿಯಮ ಮಾಡಿಕೊಂಡಿದ್ದಾನೆ. ಕಾಡಿನಲ್ಲೂ ಅಧಿಪತ್ಯ ಸ್ಥಾಪಿಸುವಲ್ಲಿ ಕೆಲವೆಡೆ ಜಯವನ್ನೂ ಸಾಧಿಸಿದ್ದಾನೆ.  ವನ್ಯಜೀವಿಗಳಿಗೆ ಮೀಸಲಾದ ಅರಣ್ಯ ಪ್ರದೇಶದ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚಿದಂತೆ ಅರಣ್ಯ ಪ್ರದೇಶ ಕಿರಿದಾಗುತ್ತಾ ಸಾಗುತ್ತಿದೆ. ವಸತಿ, ವ್ಯವಸಾಯ, ಸಾರಿಗೆ ವ್ಯವಸ್ಥೆ.. ಹೀಗೆ ನಾನಾ ಅಭಿವೃದ್ಧಿ ಕಾರ್ಯಗಳಿಂದಾಗಿ ವನ್ಯ ಮೃಗಗಳ ನೆಲೆ ನಶಿಸುತ್ತಿದೆ.  ಒಂದು ಕಾಲದಲ್ಲಿ ಆನೆ ನಾಡಿನತ್ತ ಬಂದಿದೆ ಎಂದರೆ ಅದು ಪರಮಾಶ್ಚರ್ಯ ದ ವಿಚಾರವಾಗಿತ್ತು. ಏಕೆಂದರೆ ಅರಣ್ಯ ಹೇರಳವಾಗಿದ್ದಾಗ ಎಲ್ಲೋ  ದಾರಿತಪ್ಪಿ  ಅಪರೂಪಕ್ಕಷ್ಟೇ ಆನೆಗಳು ಕಾಡಿನಿಂದ ನಾಡಿನತ್ತ ಬರುತ್ತಿದ್ದವು. ಈಗ ಹಾಗಲ್ಲ. ಇದು ಪ್ರತಿದಿನದ ಸುದ್ದಿಯೇ ಆಗಿದೆ.  ಮನುಷ್ಯ ಬೆಳೆದ ಕಬ್ಬು,ಬಾಳೆ,  ಬತ್ತ ಇತ್ಯಾದಿ ಬೆಳೆಗಳನ್ನು   ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ  ವನ್ಯಮೃಗಗಳು ನಾಡಿಗೆ ಬರುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ.ಇಲ್ಲಿ ಒಂದು ಅಂಶ ಗಮನಾರ್ಹ,  ವನ್ಯ ಮೃಗಗಳು ಆಸೆ ಪಡುವುದು ಆಹಾರಕ್ಕಾಗಿ. ಮನುಷ್ಯರಾದ ನಾವು ಆಸೆ ಪಟ್ಟಿರುವುದು ಅವುಗಳ ಆವಾಸಸ್ಥಾನಕ್ಕಾಗಿ!! ಇತ್ತೀಚೆಗೆ ಆನೆ ಮಾನವ ಸಂಘರ್ಷವಂತೂ ಮಿತಿ ಮೀರಿದೆ. ಆನೆ ದಾಳಿಗೆ ಅದೆಷ್ಟೋ ಜೀವಗಳು ಬಲಿಯಾಗಿವೆ.  ಪ್ರತಿ ಬಾರಿಯೂ ನಾಡಿಗೆ ದಾಳಿಯಿಟ್ಟ ಆನೆಗಳನ್ನು ಮರಳಿ ಕಾಡಿಗೆ ಸೇರಿಸಲು ಅರಣ್ಯ ಇಲಾಖೆಯವರು ಹರ ಸಾಹಸ ಪಡುತ್ತಾರೆ. ಕಾಡಿಗೆ ಅಟ್ಟಿದ ಆನೆಗಳು ತಮ್ಮ ದಂಡಿನೊಂದಿಗೆ ಮತ್ತೆ  ನಾಡಿನಲ್ಲಿ ಪ್ರತ್ಯಕ್ಷವಾಗಿವೆ ಎನ್ನುವ ಸುದ್ದಿ ಅರಿಯುವುದೇ ಯಾವುದೋ ಅಮಾಯಕ ಜೀವ ಬಲಿಯಾದಾಗ. ನೀರು,ಆಹಾರ ಅರಸಿ  ತನ್ನ ಪುಟ್ಟ ಕಂದಮ್ಮಗಳನ್ನೂ ಕರೆದುಕೊಂಡು 10-15  ಕಿಲೋಮೀಟರ್ ನಡೆದಾಡುವ ಆನೆಗಳು ಜನ ವಸತಿ ಪ್ರದೇಶಗಳನ್ನು ಲೆಕ್ಕಿಸದೆ ಹೊಟ್ಟೆ ಹೊರೆಯಲು ಹೆಣಗಾಡುತ್ತವೆ.ಅಂಥ ಸಂದರ್ಭದಲ್ಲಿ  ತನಗೆದುರಾದ ಮನುಷ್ಯರನ್ನು  ಸೊಂಡಿಲಿನಿಂದ ಎತ್ತಿ ಎಸೆಯುವ,ಮೆಟ್ಟಿ ಸಾಯಿಸುವ ಕ್ರೂರ ಕೃತ್ಯವನ್ನು ಎಸಗುತ್ತದೆ.  ಆನೆಗಳಿಗೆ ಮಾನವನ ಮೇಲೆ ಇನ್ನಿಲ್ಲದ ದ್ವೇಷ! ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಆನೆಗಳ ಸಂತತಿ ಕೂಡಾ ಹೆಚ್ಚುತ್ತಲೇ ಇದೆ.  ಹೀಗಿರುವಾಗ ತಮ್ಮ ಸಹಜ ನೆಲೆಗಳನ್ನು ಕಳೆದುಕೊಂಡ  ಆನೆಗಳು ಹೋಗುವುದಾದರೂ  ಎಲ್ಲಿಗೆ? ಕುಳಿತು ಉಣ್ಣುವ ಅಭ್ಯಾಸವಾದ ಮನುಷ್ಯ ದುಡಿದು ಉಣ್ಣಲಾರನಂತೆ! ಹಾಗೆ ಒಮ್ಮೆ ನಾಡಿನಲ್ಲಿ ಜನರು ಬೆಳೆದ ಕಬ್ಬು ಬಾಳೆ ಇತ್ಯಾದಿಗಳನ್ನು ತಿಂದು ರೂಢಿಯಾದ ಆನೆಗಳು ಕಾಡಿನಲ್ಲಿ ಆಹಾರ ಅರಸುವ ಅಭ್ಯಾಸವನ್ನೇ ಬಿಟ್ಟು ಬಿಟ್ಟಿವೆಯೋ ಏನೋ!!   ಎಷ್ಟು ಬಾರಿ ಕಾಡಿಗೆ ಅಟ್ಟಿದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತವೆ,  ಉಪಟಳ ಕೊಡುತ್ತಲೇ ಇರುತ್ತವೆ. ಸಾಗರದಿಂದ ನಭಕ್ಕೇರಿದ ನೀರ ಹನಿಗಳು ಮತ್ತೆ ಸಾಗರವನ್ನೇ ಸೇರಬೇಕು. ಈ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಎಷ್ಟೇ ಸಂಪಾದನೆ ಮಾಡಿದರೂ ಮತ್ತೆ ಭೂಮಿಯ ಒಡಲಿಗೇ ಸೇರಬೇಕು.ಇದು ಪ್ರಕೃತಿ ನಿಯಮ.  ಈ ಸೂಕ್ಷ್ಮ ಅರಿತಾಗ ಅರಣ್ಯ ಒತ್ತುವರಿಯನ್ನೂ ಒಳಗೊಂಡಂತೆ ಮನುಜನ ಅತಿ ಆಸೆಗಳಿಗೆ ಕಡಿವಾಣ ಬೀಳಬಹುದು. ವನ್ಯ ಜೀವಿ – ಮಾನವ ಸಂಘರ್ಷ ಕೊನೆಯಾಗಬಹುದು. ಪ್ರಕೃತಿಯ ಜೊತೆಗೆ ಅನುಸಂಧಾನ ಮಾಡಿಕೊಂಡು ಬದುಕುವ ಕಲೆಗಾರಿಕೆ ಮೃಗ ಪಕ್ಷಿಗಳಿಗಿವೆ. ಮನುಷ್ಯರಾದ ನಾವು ಈಗ ಕಲಿಯುತ್ತಿದ್ದೇವೆ. ಪ್ರಕೃತಿ ನಿಯಮದ ವಿರುದ್ಧ ನಾವು ಎಸಗಿದ ದ್ರೋಹದ ಪರಿಣಾಮವಾಗಿ ಹುಟ್ಟಿಕೊಂಡಿರುವ ಸಮಸ್ಯೆಗಳ ಪರಿಹಾರಕ್ಕೆ ದೂರಗಾಮಿ ಯೋಜನೆಗಳಿಂದ  ಪರಿಹಾರವನ್ನು ಕಂಡುಕೊಳ್ಳುವತ್ತ ಚಿಂತನೆ ನಡೆಸದೆ      ನಾವು ಮಾಡುವ ಪ್ರತಿಭಟನೆ, ಹೋರಾಟ, ಅಧಿಕಾರಿ ವರ್ಗದವರು ಮಾಡಿಕೊಳ್ಳುವ ಪರಸ್ಪರ ನಿಂದನೆ ಯಾವುವೂ ನಿರೀಕ್ಷಿತ  ಫಲ ನೀಡಲಾರವು. ಅಡವಿಯಲ್ಲಿ ಮೂಲಭೂತ ಅವಶ್ಯಕತೆ ಪೂರೈಸಿಕೊಳ್ಳಲಾಗದ ವನ್ಯ ಮೃಗಗಳು ಮತ್ತೆ ಹೋಗುವುದಾದರೂ ಎಲ್ಲಿಗೆ??? ಜಯಲಕ್ಷ್ಮಿ ಕೆ ಮಡಿಕೇರಿ.

ಹೋಗುವುದಾದರೂ ಎಲ್ಲಿಗೆ ….??ವಿಶೇಷಲೇಖನ ಜಯಲಕ್ಷ್ಮಿ ಕೆ ಮಡಿಕೇರಿ Read Post »

ಕಾವ್ಯಯಾನ

ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ”

ಕಾವ್ಯ ಸಂಗಾತಿ ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ”. ಕಣ್ಣಿನ ನೋಟದಲ್ಲಿ ನೀಡಿದೆ ಭರವಸೆದೇವರಲಿ ನೀಡಿ ಬೇಡಿದೆ ಬೊಗಸೆಹೃದಯದಲಿ ನೀನೆಂದು ಸ್ಥಿರ ಮನಸೇನಿತ್ಯ ನೂತನ ನೆನಪೆoದು ನನಸೇ ಅಲೆ ಅಲೆಯಾಗಿ ಚಿಮ್ಮಿಸಿದೆ ಬಿಸಿ ಉಸಿರೇಬಾಳ ಬದುಕಲ್ಲಿ ನಮ್ಮಿಬ್ಬರ ಬೆರಸೇಸಂಸಾರದ ರಥ ನಡೆಸುವ ಕನಸೇತುಂಬುವುದು ಸಂತಸದ ಹೊಸ ಹಸಿರೇ ಬೆಚ್ಚನೆಯ ಗೂಡಲ್ಲಿ ಸುಂದರ ಲೋಕವದುಅನುಭವದ ಸವಿಸ್ತಾರ ಕೇಳುವುದುಜೀವನ ಚಕ್ರ ನಿಲ್ಲದೆ ಉರುಳುವುದುಸುಮಧುರ ಪ್ರೀತಿ ಅಳಿಯದೆ ಉಳಿಯುವುದು ಅನನ್ಯ ಅವಿಸ್ಮರಣೀಯ ಕಂಡ ಬೆರಗುಬೇಕಿಲ್ಲ ಜಂಜಾಟದ ಯಾವ ಕೊರಗುನೆಮ್ಮದಿಯ ಗೂಡಲ್ಲಿ ಕೈ ಹಿಡಿದು ಸಾಗುದೊರಕಿದೆ ಹೊಸತನದ ಹೊಸ ಮೆರಗು ಡಾ. ಲತಾ ಎ ಆರ್ ಬಾಳೆಹೊನ್ನೂರು.

ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ” Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿ ಅವರ “ಕವಿತೆ”

ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ ಕವಿತೆ ಎನಿತೊ‌ ಮಾತುಗಳುಮೌನದಲಿ‌ ಕರಗಿನಿಂತು ಹೋಗಿದೆಬಂಧವದು ಸೊರಗಿ ಎದೆಯ ಭಾವಗಳುಆಡದೆಯೆ ಉಳಿದುದೂರವಾದ ಹೃದಯಅಳುತಿದೆ ಮನದಿ ಕಾರಣವೆ ಇರದನೋವಿನ ಸರಮಾಲೆಯಾರದೇನೋ ಶಾಪವುತಿಳಿಯದಾವ ಲೀಲೆ ದಾಟದ ಸಾಗರವುಎದೆಗಳ ನಡುವೆಮುಗಿದು ಹೋದ ಮೇಲೆಮಾತವು ಬರಿ ಸಪ್ಪೆ ಕಡಿದ ಬಂಧವನುಜೋಡಿಸುವದೇ ತಂತುದಾರಿ ಕಾಣದ ಮನಮರುಗುತಿದೆ ಇಂತು ವೈ.ಎಂ.ಯಾಕೊಳ್ಳಿ

ವೈ.ಎಂ.ಯಾಕೊಳ್ಳಿ ಅವರ “ಕವಿತೆ” Read Post »

ಪುಸ್ತಕ ಸಂಗಾತಿ

“ಮಾಳೇಟಿರ ಸೀತಮ್ಮ ವಿವೇಕ್ ಅವರ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕ” ಗೊರೂರು ಅನಂತರಾಜು

ಪುಸ್ತಕ ಸಂಗಾತಿ ಗೊರೂರು ಅನಂತರಾಜು “ಮಾಳೇಟಿರ ಸೀತಮ್ಮ ವಿವೇಕ್ ಅವರ ವಿವೇಕಜ್ಞಾನ ಕೃತಿ ಮನಸ್ಸು. ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕ” ಇದನ್ನ ಕೈಲಾಸ ಅಂದುಕೊಂಡು ಶಿವನನ್ನು ನೋಡಲು ಹೊರಟುಬಿಟ್ಟಿದ್ದೆಯಾ..? ‘ನೀವು ನನ್ನನ್ನು ಸರಪಳಿಯಲ್ಲಿ ಬಂಧಿಸಬಹುದು, ನೀವು ನನ್ನನ್ನು ಹಿಂಸಿಸಬಹುದು, ನೀವು ಈ ದೇಹವನ್ನು ಸಹ ನಾಶಪಡಿಸಬಹುದು. ಆದರೆ ನೀವು ಎಂದಿಗೂ ನನ್ನ ಮನಸ್ಸನ್ನು ಬಂಧಿಸಲಾಗುವುದಿಲ್ಲ.             -ಮಹಾತ್ಮ ಎಂ.ಕೆ.ಗಾಂಧಿ. ಮಾಳೇಟಿರ ಸೀತಮ್ಮ ವಿವೇಕ್  ಅವರ ಇತ್ತೀಚಿನ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕವೊಂದರ ನಂತರ ಮೂಡಿ ಬರುತ್ತಿರುವ ನನ್ನ ಚೊಚ್ಚಲ ಕನ್ನಡ ಕೃತಿಯಾಗಿದೆ ಎನ್ನುವ ಮೇಡಂ ಅವರ ತವರು ಮನೆ ಹೆಸರು ಕಂಬೀರಂಡ. ಮೂರ್ನಾಡು ಬಾಡಗ ಗ್ರಾಮ. ಕೊಡಗು ಜಿಲ್ಲೆ. ಚರಿತ್ರೆ ಅಧ್ಯಯನಗಾರ್ತಿಯಾದ ಇವರ ಮನಸ್ಸು ಕೃತಿ ಸಾಕಷ್ಟು ಅಧ್ಯಯನ ನಡೆಸಿ ವಿಶಿಷ್ಟ ಮಾಹಿತಿ ಅನುಭವಗಳನ್ನು ಕ್ರೋಢೀಕರಿಸಿ ಬರೆದ ಕೃತಿ.  ಮಾನವ ಜೀವನದ ಅತಿ ಮಹತ್ವದ ಆದರೆ ಅತೀ ಅಲಕ್ಷಿತ ಶಕ್ತಿ ಮನಸ್ಸು. ಇದು ಕಾಣುವುದಿಲ್ಲ. ಕಾಣಿಸಿಕೊಳ್ಳುವ ಎಲ್ಲರಿಗೂ ಇದು ಸ್ಫರ್ಶಿಸಬಹುದಾದ ಅಂಗವೂ ಅಲ್ಲ. ಅದರ ಪ್ರತಿಯೊಂದು ಅನುಭವದ ಸ್ಫಂದನ. ಅದರಿಂದಲೇ ಈ ಕೃತಿಯಲ್ಲಿ ಕಾಣುವ ಮನ ಏವಂ ಮನುಷ್ಯಾಣಾಂ ಕಾರಣಂ ಬಂಧಂ ಮೋಕ್ಷಯೋ: ಎಂಬ ಪುರಾತನ ತತ್ವ ವಾಕ್ಯವು ಮನಸ್ಸಿನ ಸ್ವಭಾವವನ್ನು ನೇರವಾಗಿ ಸ್ಫಷ್ಟಪಡಿಸುತ್ತದೆ. ಮನಸ್ಸೆ ಬಂಧನಕ್ಕೂ ಕಾರಣ. ಅದೇ ಮುಕ್ತಿಗೂ ದಾರಿ ಎಂದಿದ್ದಾರೆ ಇವರ ಪತಿ ಮಾಳೇಟಿರ ವಿವೇಕಾನಂದ ಪೊನ್ನಪ್ಪನವರು.   ಮನಸ್ಸು ಒಂದು ಅಗೋಚರ ಅತೀಂದ್ರಿಯ ಶಕ್ತಿಯಾಗಿದೆ. ಹೆಣ್ಣು ಗಂಡೆನ್ನದೆ ಸರ್ವರೊಳಗೂ ಇರುವ ಮನಸ್ಸು ಪ್ರತಿಯೊಬ್ಬರಿಗಿರುವ ಅವರವರ ದೇಹದೊಂದಿಗೆ ಜೀವಮಾನವೆಲ್ಲ ಚಲಿಸುವ, ದೈಹಿಕ ಅರಿಹಂತಗಳಿಂದ ಸಮ್ಮಿಳಿತವಾಗಿರುವ ಅತೀಂದ್ರಿಯವಾಗಿದೆ. ಬುವಿಯಲ್ಲಿ ರೂಪ ತಾಳುವ ದೇಹದೊಂದಿಗೆ ಗಾಢವಾದ ನಂಟು ಬೆಸೆದುಕೊಂಡಿರುವ ಮನಸ್ಸಿಗೆ ಘಾಸಿಯಾದರೆ ಇಡೀ ಶರೀರವೇ ನಾಶವಾಗುತ್ತದೆ. ಅಂತಹ ಘನತ್ತರವಾದ ನಮ್ಮೊಳಗೆ ಇರುವ ಮನ: ಮಾತೃಕೆಯ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸದೆ ಇರುವುದರಿಂದಲೇ ನಾವು ಮಾತ್ರವಲ್ಲದೆ ಕುಟುಂಬ, ಸಮಾಜ, ದೇಶವೇ ಏರುಪೇರು ದೃಷ್ಟಿಕೊನವನ್ನು ಹೊಂದಿದೆ.ಮಾನವ ಸಂಘ ಜೀವಿ. ಎಲ್ಲರ ಮನಸ್ಸಿಗು ಒಟ್ಟಿಗೆ ಬಾಳುವುದೇ ಪ್ರಧಾನ ಬಯಕೆ ಆಗಿರುತ್ತದೆ. ಹಾಗೆಂದು ಒಟ್ಟಿಗೆ ಬಾಳುವುದು ಸುಲಭದ ಮಾತಲ್ಲ. ನನಗೆ ಜಿ.ಎಸ್. ಶಿವರುದ್ರಪ್ಪನವರ ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ ಎಂಬ ಭಾವಗೀತೆ ನೆನಪಾಗುತ್ತದೆ. ಅದರಲ್ಲಿನ ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲ್ಲಿ. ಹೊಂದಿಕೆ ಎಂಬುದು ಎಷ್ಟು ಕಷ್ಟವೋ ನಾಲ್ಕು ದಿನದ ಈ ಬಾಳಿನಲಿ.. ಹೌದು ಮನಸ್ಸಿನ ಅರಿವಿಕೆ ಇಲ್ಲದೆ ಇರುವುದೇ ಆ ಹೊಂದಿಕೆ ಸಾಧ್ಯವಾಗದೆ ಇರಲು ಕಾರಣ.ಮೇಡಂ ಅವರು ತಮ್ಮ ವೈಯಕ್ತಿಕ  ಜೀವನಾನುಭವಗಳನ್ನು ಆತ್ಮ ಪರಿಶೀಲನೆಯ ಕಣ್ಣಿನಿಂದ ನೋಡುತ್ತಾ, ಸಂಕಟಗಳನ್ನು ಜ್ಞಾನವಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದಾರೆ. ಕೊಡಗಿನ ಪ್ರಕೃತಿ ವಾತಾವರಣದಲ್ಲಿ ಬೆಳೆದ ಬಾಲ್ಯ, ವಿಭಿನ್ನ ಸಂಸ್ಕೃತಿಗಳ ಅನುಭವ, ಜೀವನದ ಕಠಿಣ ಘಟ್ಟಗಳು, ಆರೋಗ್ಯ ಸಂಕಟಗಳು, ಆತ್ಮ ಅನ್ವೇಷಣೆಯ ಕ್ಷಣಗಳು ಇವೆಲ್ಲವೂ ಈ ಕೃತಿಗೆ ಜೀವ ತುಂಬಿವೆ. ಹಿಮಾಚಲ ಪ್ರದೇಶದ ರೋಹತಂಗ್ ಪಾಸ್ ನಲ್ಲಿ ಸಂಭವಿಸಿದ ಮರಣಭಯದ ಅನುಭವ   ದಾಖಲಿಸುತ್ತಾರೆ.ನಮ್ಮ ಕುಟುಂಬ ಹಿಮಾಚಲ ಪ್ರದೇಶಕ್ಕೆ ಪ್ರವಾಸ ತೆರಳಿ ಮನಾಲಿಯ ಹಿಡಿಂಬ ದೇವಸ್ಥಾನ ಸಮೀಪದಿಂದ ಸುಮಾರು ೫ ಸಾವಿರ ಮೀ.ಗಿಂತಲೂ ಎತ್ತರದ ರೋಹತಂಗ್ ಪಾಸ್ ನ ಪರ್ವತದೆಡೆ  ಪ್ರಯಣ ಬೆಳಸಬೇಕಿತ್ತು. ಅದು ಹಿಮ ಪರ್ವತವಾಗಿ ಸ್ಥಳೀಯರು ಬೆಚ್ಚಗಿನ ಮೈಹೊದಿಕೆ ಹಾಕಿಕೊಳ್ಳುವಂತೆ ಹೇಳಿದ್ದರು. ನಾವು ಅದೇ ರೀತಿ ತಯಾರಾಗಿ ಹೊರಟೆವು. ಅನೇಕ ತಿರುವುಗಳ ರಸ್ತೆ. ಕ್ರಮಿಸಬೇಕಾಗಿದ್ದ ಎತ್ತರ ನಾವಿದ್ದ ಸ್ಥಳದಿಂದ ತುಂಬಾ ಮೇಲೆ ಮೋಡ ಹರಡಿಕೊಂಡಂತೆ ಇತ್ತು. ಹಾಗಾಗಿ ನಮ್ಮ ವಾಹನದ ಚಾಲಕ ನಮಗೆ ಶ್ವಾಸಕೋಶ ಸಂಬಂಧಿ ತೊಂದರೆ ಇರುವವರಿಗೆ ಆಮ್ಲಜನಕ ಕೊರತೆ ಬಾಧಿಸಬಹುದೆಂದು ಮುನ್ಸೂಚನೆ ನೀಡಿದ್ದರು. ನನ್ನ ತಾಯಿಗೆ ಉಬ್ಬಸದ ಸಮಸ್ಯೆ ಇತ್ತು. ನಾವು ಅವರ ಬಗ್ಗೆ ಯೋಚಿಸುತ್ತಾ ವಾಹನದಲ್ಲಿ ಕುಳಿತು  ಎಲ್ಲವನ್ನು ಅಹ್ಲಾದಿಸುತ್ತ ತುತ್ತ ತುದಿ ತಲುಪಿದೆವು. ಇನ್ನೇನು ಹಿಮ ಹರಡಿದ್ದ ಜಾಗ  ಮುಟ್ಟಬೇಕು. ಅಷ್ಟು ಹತ್ತಿರದಲ್ಲಿ ಹಿಮಾವೃತ ಸುಂದರ ಪುಟ್ಟ ಗುಡ್ಡ! ಅದನ್ನು ನೋಡುತ್ತ ವಾಹನದಿಂದ ಎಲ್ಲರೂ ಖುಷಿಯಿಂದ  ಇಳಿದರು. ಸುತ್ತಮುತ್ತಲ ದೃಶ್ಯಗಳು ವರ್ಣಿಸಲು ಅಸಾಧ್ಯ!  ಸೌಂದರ್ಯ ಅಮೋಘ! ದೂರದಲ್ಲಿ ಹಿಮಚ್ಛಾದಿತ ಬೆಟ್ಟದ ತುದಿಯಲ್ಲಷ್ಟೇ ಸೂರ್ಯನ ಕಿರಣಗಳು ಹಾಯ್ದು ಬೆಟ್ಟ ಬೆಳ್ಳಿಯಂತೆ ಹೊಳೆಯುತ್ತಿತ್ತು. ಆ ಸೊಂಪನ್ನು ನೋಡ ನೋಡುತ್ತಿದ್ದಂತೆಯೇ ಆರೋಗ್ಯವಾಗಿದ್ದ ನಾನು ದೊಪ್ಪೆಂದು ಕುಸಿದ್ದು ಬಿದ್ದೆ! ಬಿದ್ದದ್ದು ನನಗೆ ತಿಳಿಯಲಿಲ್ಲ. ಎಷ್ಟು ಸಮಯದ ನಂತರ ಎಚ್ಚರವಾಯಿತು ತಿಳಿಯಲಿಲ್ಲ. ಅಲ್ಲಿ ನಾನು ಎದ್ದು ಕುಳಿತಾಗ ಕಿವಿಗೆ ಬಿದ್ದದ್ದು ನನ್ನ ತಾಯಿಯ ಪ್ರಶ್ನೆ. ಇದನ್ನ ಕೈಲಾಸ ಅಂದುಕೊಂಡು ಶಿವನನ್ನು ನೋಡಲು ಹೊರಟುಬಿಟ್ಟಿದ್ದೆಯಾ..ಎಂದು! ಆಗ ನಾನು ಅಲ್ಲಿದ್ದೆ. ಇಲ್ಲಿಗೆ ಹೇಗೆ ಬಂದೆ? ಎಷ್ಟು ಇಂಪಾದ ನಾದಗಳು ಅಹ್ಲಾದಕರ ಪರಿಮಳ ಅಲ್ಲಿ ಇದ್ದವಲ್ಲ ಎಂದಿದ್ದೆ. ಅಲ್ಲಿ ಆಗ ಬಿದ್ದಿದ್ದ ನನ್ನ ದೇಹದ ಸುತ್ತಲೂ ಜನ ಸೇರಿ ಮುಟ್ಟಿ ಉಪಚರಿಸುತ್ತಿದ್ದರೂ ಶರೀರಕ್ಕೆ ಯಾವುದೇ ಸ್ಫರ್ಶಾನುಭವ ಆಗುತ್ತಿಲ್ಲ! ಆದರೆ ನಾನು ಸಂಪೂರ್ಣ ಎಚ್ಚರವಾಗಿಯೇ ಇದ್ದೆ!  ಮೊದಲೇ ನಾನು ಪ್ರಕೃತಿ ಸೌಂದರ್ಯ ತಲ್ಲೀನ ಅಪ್ಪಟ  ಆರಾಧಕಿ. ಆ ಕಾರಣಕ್ಕೋ ಏನೋ ಯಾವ ಬೆಳ್ಳಿಬೆಟ್ಟ ನೋಡುತ್ತಿದ್ದೆನೋ ಅದರೆಡೆಗೆ ನಾನು ಆರಾಮಾಗಿ ಹೊಗುತ್ತಿದ್ದುದು ಚೆನ್ನಾಗಿಯೇ ತಿಳಿಯುತ್ತಿತ್ತು. ಹತ್ತಿರ ತಲುಪಿದಾಗ ಅದರ ಆಸುಪಾಸು ಇಂಪಾದ ನಾದ ಕೇಳಿಸುತ್ತಿತ್ತು. ಸುಂದರ ಹೂವಿನ ಪರಿಮಳ ಹರಡಿತ್ತು.  ಎಂದೂ ನೋಡಿರದ ಸುಂದರ ಪಕ್ಷಿಗಳು ಹಾರಾಡುತ್ತಾ ಇದ್ದಿದ್ದು ಗ್ರಹಿಸಿದ್ದೆ.  ನೀರು ಹರಿಯುವ ನಾದ ಬರುತ್ತಿದ್ದ ಕಡೆ ಹೋಗಲು ಅಣಿಯಾದಾಗ ದೂರದಲ್ಲಿ ಹೃದಯಕ್ಕೆ ಹತ್ತಿರವಾಗಿ ನನ್ನನ್ನು ಕರೆಯುತ್ತಿರುವುದು ಕೇಳಿಸಿ ಆ ಕೂಗು ಬಂದ ಕಡೆಗೆ ಆ ಸುಂದರ ತಾಣ ಬಿಟ್ಟು ಹೊರಡಲು ಮನಸ್ಸಿಲ್ಲದಿದ್ದರೂ ಗುಡ್ಡದಿಂದ ಇಳಿಯುತ್ತ ಹತ್ತಿರ ತಲುಪಿದಾಗ.. ಮುಖಕ್ಕೆ ನೀರು ಚಿಮುಕಿಸಿ ಮೂಗಿಗೆ ಕರ್ಪೂರವನ್ನು ಮೂಸಿಸುತ್ತಿರುವ ಕಾಲ್ಚೀಲ ಕಳಚಿ ಕಾಲು ತಿಕ್ಕುತ್ತಿರುವ ದೈಹಿಕ ಅನುಭವಗಳಾದವು. ಅಲ್ಲಿ ಕಣ್ಣು ತುಂಬಿಕೊಂಡು ಕರೆಯುತ್ತಿದ್ದವರು ನನ್ನ ತಾಯಿ! ನನ್ನ ಪತಿ ತಂಗಿ ಮಗ ಎಲ್ಲರು ಕರೆಯುತ್ತಿದ್ದರೂ ಅಮ್ಮನ ಕೂಗು ಮಾತ್ರ ಕೇಳಿಸುತ್ತಿದ್ದದ್ದು ಮಾತ್ರ ವಿಚಿತ್ರ ಎನಿಸಿತು. ಅದೇ ಹೃದಯದ ಕೂಗು, ಎದೆಯಾಳದ ಕೂಗು ಎಂಬುದು ಅರಿವಾಯಿತು.ಈ ದೇಹದಿಂದ ಪ್ರಜ್ಞೆ ಹೋಗುವಾಗ ಮತ್ತು ಬರುವಾಗ ಪೂರ್ಣ ಕತ್ತಲಲ್ಲಿ ಸಾಗಿದ್ದರೂ ಬರಿ ಕಣ್ಣಿಗೆ ಕಾಣದ ಪ್ರಕಾಶಮಾನವಾದ ಬೆಳಕಿನಲ್ಲಿ ಸಂಚರಿಸಿದ್ದೆ! ನನಗೆ ಕನಸುಗಳು ಸಾಕಷ್ಟು ಬಿದ್ದಿವೆ. ಆದರೆ ನನ್ನ ಮನಸ್ಸು ೫೦-೬೦ ಕಿ.ಮೀ. ದೂರದಷ್ಟಿದ್ದ ಬೆಟ್ಟದ ಸಮೀಪದವರೆಗೆ ದೇಹದೊಂದಿಗೆ ಪಯಣಿಸಿದಂತಹ ಅನುಭವ ಪಡೆದಿದ್ದು, ಅದೂ ಪೂರ್ಣ ಪ್ರಜ್ಞೆಯಲ್ಲಿ  ಎಂದಿಗೂ ಮರೆಯಲಾಗದು. ದೇಹಪ್ರಜ್ಞೆ ಕ್ಷೀಣಿಸಿದ ಕ್ಷಣ ಅನುಭವಿಸಿದ ಆಂತರಿಕ ಪ್ರಕಾಶ, ನಾದ, ಪರಿಮಳ, ಇವು ಮನಸ್ಸಿನ ಅತೀತ ಆಯಾಮಗಳ ಬಗ್ಗೆ ಆಳವಾದ ಚಿಂತನೆಗೆ ದಾರಿ ಮಾಡಿಕೊಟ್ಟಿವೆ.ಇದಾದ ನಂತರ ತಾಯಿ ತಂದೆ ಇರುವವರೆಗೂ ನಾನಾಗಿಯೇ ನನ್ನ ಮರಣವನ್ನೆಂದೂ ಬಯಸಬಾರದೆಂಬ ಮನಸ್ಸು ಬೆಳೆದಿದೆ. ಅಷ್ಟೇ ಅಲ್ಲ ಯಾರ ಮರಣವನ್ನೂ ಬಯಸಬಾರದು. ತದ್ವಿರುದ್ದ ಗುಣದವರೊಂದಿಗೆ ಜೊತೆಯಲ್ಲೇ ವಾಸಿಸಬೇಕಾದಾಗಲೂ ಯಾರನ್ನೂ ದ್ವೇಷಿಸದೆ ನನ್ನ ಕರ್ತವ್ಯಗಳನ್ನು ಯಾವ ಕಾರಣಕ್ಕೂ ಕೈಬಿಡದೆ ಖುಷಿಯಿಂದ ಮಾಡುತ್ತಿರಬೇಕೆಂಬ ನಿಲುವು ತಾಳಿದೆ.. ಅದಾಗಿ ಮೇಡಂ ಧ್ಯಾನ ಯೋಗ ಸಾಧನೆ ಮೂಲಕ ಮಹರ್ಷಿ ಪ್ರಭಾಕರ್ ಗುರೂಜಿ, ಆಚಾರ್ಯ ಆದಿನಾಥ್, ಶ್ರೀ ರವಿಶಂಕರ್  ಆರ್ಟ್ ಆಫ್ ಲಿವಿಂಗ್ ಯೋಗ ಸಾಧಕರ ಮಾರ್ಗದರ್ಶನದಲ್ಲಿ ಮನಸ್ಸಿನ ಸ್ಕೈರ್ಯ ಮತ್ತು ಆತ್ಮಶಾಂತಿ ಕಂಡ ಅನುಭವಗಳು ಈ ಕೃತಿಯ ಆತ್ಮವಾಗಿದೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

“ಮಾಳೇಟಿರ ಸೀತಮ್ಮ ವಿವೇಕ್ ಅವರ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕ” ಗೊರೂರು ಅನಂತರಾಜು Read Post »

ಇತರೆ, ಜೀವನ

“ವಿದಾಯ” ಕವಿತಾ ಶ್ರೀನಿವಾಸ್‌ ನಾಯಕ್

ವಿಶೇಷಲೇಖನ ಕವಿತಾ ಶ್ರೀನಿವಾಸ್‌ ನಾಯಕ್ “ವಿದಾಯ “ವಿದಾಯ” ಇದು ಬೆಳೆಯುವ ಹಾದಿಯ ಅನಿವಾರ್ಯ ಮೈಲುಗಲ್ಲು.​’ವಿದಾಯ’ ಎಂದರೆ ಕೇವಲ ಅಗಲುವಿಕೆ ಅಥವಾ ಅಂತ್ಯವಲ್ಲ; ಅದು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ದಾಟಲು ನಾವು ಇಡುವ ಪಾದಾರ್ಪಣೆ. ನಮಗೆ ತಿಳಿಯದೆಯೇ ನಾವು ಪ್ರತಿದಿನ ಯಾವುದಕ್ಕೋ ಒಂದಕ್ಕೆ ವಿದಾಯ ಹೇಳುತ್ತಲೇ ಬೆಳೆಯುತ್ತಿದ್ದೇವೆ. ಹುಟ್ಟಿದ ಮಗುವಿನಿಂದ ಹಿರಿಯ ಜೀವದವರೆಗೆ, ಜೀವನವು ವಿದಾಯಗಳ ಸರಪಳಿಯೇ ಸರಿ.​ಬಾಲ್ಯಕ್ಕೆ ವಿದಾಯ: ಮುಗ್ಧತೆಯ ಸಂಭ್ರಮದ ಅಂತ್ಯ​ನಮ್ಮ ಬದುಕಿನ ಮೊದಲ ದೊಡ್ಡ ವಿದಾಯ ಎಂದರೆ ಅದು ನಮ್ಮ ಬಾಲ್ಯಕ್ಕೆ ಹೇಳುವ ವಿದಾಯ. ತೊದಲು ನುಡಿಯ ಮಗು ಸ್ವಲ್ಪ ದೊಡ್ಡದಾದಾಗ, ಅದು ತನ್ನ ಆಟಿಕೆಗಳಿಗೆ, ತನ್ನ ಅಮ್ಮನ ಮಡಿಲಿನ ಬೆಚ್ಚನೆಯ ಆರಾಮಕ್ಕೆ, ಮತ್ತು ಹೊಣೆಗಾರಿಕೆ ಇಲ್ಲದ ಆ ಮುಗ್ಧ ಆಟದ ದಿನಗಳಿಗೆ ನಿಧಾನವಾಗಿ ವಿದಾಯ ಹೇಳುತ್ತದೆ. ಶಾಲೆಯ ಹೊಸ್ತಿಲು ತುಳಿದಾಗ, ಮನೆಯ ಚೌಕಟ್ಟಿನಿಂದ ಹೊರಬಂದು ಜಗತ್ತಿನ ವಿಶಾಲತೆಯನ್ನು ಅರಿಯುವಾಗ ಬಾಲ್ಯದ ಹಕ್ಕಿ ಹಾರಿಹೋಗಿರುತ್ತದೆ. ಅದು ನೋವಿನ ವಿದಾಯವಲ್ಲ, ಆದರೆ ಬದಲಾವಣೆಯ ಮೊದಲ ಪಾಠ.​ಹದಿಹರೆಯಕ್ಕೆ ವಿದಾಯ: ಕನಸುಗಳ ಚಿಗುರು​ನಂತರ ಬರುವುದು ಹದಿಹರೆಯದ ಮಧುರ ವಿದಾಯ. ಕಿಶೋರಾವಸ್ಥೆಯ ಕನಸುಗಳು, ಗೆಳೆಯರೊಂದಿಗೆ ಕಳೆದ ಆ ಸಾಹಸಮಯ ದಿನಗಳು, ಶಾಲೆ-ಕಾಲೇಜಿನ ಆ ಸವಿ ನೆನಪುಗಳು – ಇವೆಲ್ಲವೂ ವೃತ್ತಿ ಬದುಕಿನ ಅನಿವಾರ್ಯತೆಗಳ ಮುಂದೆ ಬಿದ್ದು ಹೋಗುತ್ತವೆ. ಜವಾಬ್ದಾರಿಗಳ ಹೆಗಲೇರಿದಾಗ, ಆ ನಿರ್ಭೀತ ಹುಡುಗಾಟದ ದಿನಗಳಿಗೆ ವಿದಾಯ ಹೇಳಲೇಬೇಕಾಗುತ್ತದೆ. ಇಲ್ಲಿ ನಾವು ಬರಿಯ ವಯಸ್ಸನ್ನು ಕಳೆದುಕೊಳ್ಳುವುದಿಲ್ಲ, ಬದಲಾಗಿ ನಮ್ಮೊಳಗಿನ ಮಗುವಿನ ಅಮಾಯಕತೆಯನ್ನು ಸಮಾಜದ ಪಾಠಗಳಿಗಾಗಿ ಬಲಿ ಕೊಡುತ್ತೇವೆ.​ಯೌವನ ಮತ್ತು ಪ್ರಬುದ್ಧತೆ: ನಿರಂತರ ವಿದಾಯಗಳ ಪಯಣ​ಜೀವನವು ಮುಂದುವರೆದಂತೆ, ನಾವು ಹಳೆಯ ಮನೆಗೆ, ಹಳೆಯ ಊರಿಗೆ, ಹಳೆಯ ಗೆಳೆಯರಿಗೆ, ಕೆಲವೊಮ್ಮೆ ನಮ್ಮ ಹಳೆಯ ಆಲೋಚನೆಗಳಿಗೆ ವಿದಾಯ ಹೇಳುತ್ತಲೇ ಇರುತ್ತೇವೆ. ಕೆಲಸದ ನಿಮಿತ್ತ ಊರು ಬಿಡುವಾಗ ಬರುವ ವಿದಾಯ ಇರಬಹುದು ಅಥವಾ ನಮ್ಮ ಹಳೆಯ ತಪ್ಪುಗಳಿಗೆ ವಿದಾಯ ಹೇಳಿ ಹೊಸ ವ್ಯಕ್ತಿಯಾಗಿ ಬದಲಾಗುವ ಕ್ಷಣ ಇರಬಹುದು—ಇವೆಲ್ಲವೂ ನಮ್ಮ ಬೆಳವಣಿಗೆಯ ಸಂಕೇತಗಳೇ.​ಏಕೆ ಈ ವಿದಾಯ ಅನಿವಾರ್ಯ?​ನಿಸರ್ಗದ ನಿಯಮದಂತೆ, ಹಳೆಯ ಎಲೆ ಉದುರದ ಹೊರತು ಹೊಸ ಚಿಗುರು ಬರಲು ಸಾಧ್ಯವಿಲ್ಲ. ನಾವು ಒಂದೊಂದಕ್ಕೂ ವಿದಾಯ ಹೇಳುತ್ತಾ ಹೋದರೆ ಮಾತ್ರವೇ ಬದುಕಿನ ಹೊಸ ಆಯಾಮಗಳು ನಮಗೆ ತೆರೆದುಕೊಳ್ಳುವುದು. ಬಾಲ್ಯಕ್ಕೆ ವಿದಾಯ ಹೇಳದಿದ್ದರೆ ಪ್ರೌಢಿಮೆ ಬರುವುದಿಲ್ಲ, ಹಳೆಯದಕ್ಕೆ ವಿದಾಯ ಹೇಳದಿದ್ದರೆ ಹೊಸದನ್ನು ಸ್ವೀಕರಿಸಲು ಸಾಧ್ಯವಿಲ್ಲ.​ಕೊನೆಯ ಮಾತು:ವಿದಾಯಗಳು ಕಣ್ಣೀರಿನ ಮಳೆಯಾಗಿರಬೇಕಿಲ್ಲ; ಅವು ಕೃತಜ್ಞತೆಯ ನಗುಗಳಾಗಿರಲಿ. ಕಳೆದುಕೊಂಡದ್ದರ ಬಗ್ಗೆ ಕೊರಗುವ ಬದಲು, ಆ ಹಂತ ನಮಗೆ ಕೊಟ್ಟ ಅನುಭವಗಳಿಗೆ ಧನ್ಯವಾದ ಅರ್ಪಿಸಿ ಮುಂದೆ ಸಾಗುವುದು ಬದುಕಿನ ಜಾಣತನ. ಅಂತಿಮವಾಗಿ, ನಾವು ಹೇಳುವ ಪ್ರತಿಯೊಂದು ವಿದಾಯವೂ ನಮ್ಮನ್ನು ನಾವು ಮತ್ತಷ್ಟು ಅರಿಯುವ, ರೂಪಿಸುವ ಒಂದು ಸುಂದರ ಪ್ರಯತ್ನ. ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

“ವಿದಾಯ” ಕವಿತಾ ಶ್ರೀನಿವಾಸ್‌ ನಾಯಕ್ Read Post »

ಕಾವ್ಯಯಾನ

ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು”

ಕಾವ್ಯ ಸಂಗಾತಿ ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು” ಮುಚ್ಚಿ ಬಚ್ಚಿ ಕಟ್ಟಿಟ್ಟ ಕನಸುಕೊಚ್ಚಿ ಹರಿದು ಹೋದ ಹಾಸುಮತ್ತೆ ಬಿಚ್ಚ ಸೂರೆಗೊಳ್ಳುತಿರೆ-ಮನಸ್ಸು!!೧!! ಕನಸು ನನಸಾಗುವ ಕನವರಿಕೆಕಳೆದು ಹೋದವೆಷ್ಟೋ ಮನದ ಅರಿಕೆಕೊಚ್ಚಿಕೊಂಡಯ್ಯದ ಮನ ಚೇತರಿಕೆ!!೨!! ಕಟ್ಟಿದ ಕಲ್ಪನೆ ಕನಸಾಗಿಯೇ ನಿಂದವೂಅದೆಂದೊ ಕಾಲ ಗರ್ಭದಿ ಅವಿತವುಮರೆಯಾದವೆಂದು ವಿಷಾದದಿ ಕುಳಿತಿರೆ..!!೩!! ಅದು ಎಲ್ಲಿಯೋ ಎನಿತೋ ಹೊಳೆದಬೆಳಕು …ನನ್ನ ಅಬ್ಬೇ ಕನ್ನಡಾಂಬೆ ಕೂಗಿದಥಳುಕು..ಕರೇಯುತಿರೆ ಅಕ್ಕರದಿ….!!೪!! ಮಾಸಿ ಕಳೆಗುಂದಿ ಹೋದ ಗತ್ತು-ಮತ್ತೆತರುತ್ತೀವಿ ಸಕಾರತೆ ಋಣ ಹೊತ್ತುಹರಡಿವೆ ಉಡಿ ತುಂಬ ನುಡಿ ಮುತ್ತು!!೫!! ಎದೆ ತುಂಬಿ ಬಂದ ನುಡಿ ಬೆಳಕು,ಪ್ರಕಾಶಮಾನ ಹೊಂಬೆಳಕಿನ ತುಳುಕುನುಡಿ ಅಮ್ಮನ ಶಬ್ದಗಳ ಚಳಕು…!!೬!! ಎಳೆ ಎಳೆ ಬಿಚ್ಚುತ್ತಿರೆ ಕಟ್ಟಿಟ್ಟ ಕನಸಿನಗಂಟಿನ ನಂಟು ನೋಡಿ ನಿಬ್ಬೆರಗಾಗಿಹರುಷದಿ ಮತ್ತೆ ನಲಿದಾಡುತ!!೭!! ಕಂಡ ಕಿರು ಗನಸು ಹೆಮ್ಮರವಾಗಿಬಿಚ್ಚಿಕೊಳ್ಳುತಿವೆ..ಚಂದ ಚೆಂದವಾಗಿಎತ್ತರ ಅಂಬರನೆತ್ತರಕ್ಕೆ ಪಸರಿಸಲು..!!೮!! ಪಡೆದ ಸನ್ಮಾನದ ಸುಮ್ಮಾನವಾಗಲು.. ಸವಿತಾ ದೇಶಮುಖ

ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು” Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” ಮರೆಯದೇ ಬರೆದು ಬಿಡು ಪ್ರೀತಿ ನಿನ್ನ ಕಂಗಳ ಕಾಂತಿ ಮತ್ತು ನಿನ್ನಮರೆಗುಳಿತನದ ಶಾಂತಿಡಿಮೆನ್ಷಿಯಾ ಎಂದಾಗುವ ಮುನ್ನ ಬರೆದು ಬಿಡು ಪ್ರೀತಿ,ಪ್ರೀತಿ ಮಾಸುವಾ ಮುನ್ನಹೇಳಿಬಿಡು ಪ್ರೀತಿಯ ರೀತಿ! ಒಂದಾನೊಂದು ಕಾಲದ ಕಥೆಗಳು ಕಳೆದು ಹೋಗುವ ಮುನ್ನ,ಕಳೆದ ಕಥೆಗಳು ಧಾರಾವಾಹಿಯಾಗದೇಮಿದುಳ ಬಳ್ಳಿಯಿಂದ ಚಾಚಿಹೃದಯದಿಂದ ಚಿಮ್ಮುತ್ತಕಾಲಾಂತರ್ಗತವಾಗುವ ಮುನ್ನ. ಪ್ರೀತಿ ,ಕಾಲನ ತುಳಿತಕ್ಕೆ ನುಚ್ಚಾಗುವ ಮುನ್ನ ಸೋಸಿ ಬಿಡುನುಚ್ಚಿನ ನೆಚ್ಚಿನ ಪಾಯಸದ ಘಮ ನಾಸಿಕಕ್ಕೆ ತಲುಪುವ ಸುಮುಹೂರ್ತದ ಒಳಗೆ ನೀ ಹೊಗೆಯಾಗಿ ಬಿಡು ಹಬೆಯಾಗಿ ಬಿಡುಕಾಲ ಚಕ್ರನ ವೇಗಕ್ಕೆ ಸಿಲುಕಿ ಸೊಗಸಿ ಬಿಡು ಪ್ರೀತಿ ಇರುವಷ್ಟು ದಿನ ರಾತ್ರಿ ಸಮಯ!! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” Read Post »

ಕಾವ್ಯಯಾನ, ಗಝಲ್

 ವಾಣಿ ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ  ವಾಣಿ ಭಂಡಾರಿ ಗಜಲ್ ಹಚ್ಚಿಟ್ಟ ಹಣತೆ ಎದೆಯನ್ನು ಸುಡುವಾಗ ಬೆಳಕಿನ ತಾಪವನ್ನು ಏನೆಂದು ಶಪಿಸಲಿಮಾತು ಕಳೆದುಕೊಂಡ ನಾಲಿಗೆ ಜೊತೆಗಿರುವಾಗ ಮೌನದ ನೋವನ್ನು ಏನೆಂದು ಕರೆಯಲಿ ಎಲ್ಲ ನಾಟಕ ಬರಿ ಪೊಳ್ಳು ಬಾಳ ಬಯಲಾಟದಲ್ಲಿ ನಡೆಯುತಿದೆ ತಾಲೀಮು ದಿಕ್ಕೆಟ್ಟುಇರುಳ ಬೆಳಕಿನಾಟದಲ್ಲಿ ರಾತ್ರಿ ಸಾವು ಹಗಲಿಗೆ ಹುಟ್ಟು ಕೂಡಿರುವಾಗ ಪ್ರೀತಿಯನ್ನು ಏನೆಂದು ಹೆಸರಿಸಲಿ ಹುಚ್ಚರ ಸಂತೆಯಲ್ಲಿ ತತ್ರಾಣಿ ಕನಸು ಸೋತು ಗೆಲುವಿನ ಕಂದೀಲು ಅಬ್ಬರಿಸುತ್ತಿದೆಜಾತಿ ಧರ್ಮ ಪ್ರೇಮಕ್ಕೆ ಕಾಮದ ಹಣೆಪಟ್ಟಿ ಕಟ್ಟಿರುವಾಗ ಬದುಕನ್ನು ಏನೆಂದು ಬಣ್ಣಿಸಲಿ. ಮೆಚ್ಚಿಸೊ ಹುಚ್ಚು ಹಂಗಿಸೊ ಆಸೆ ಇರದ ಭಾವಗಳು ಜನ್ನತ್ ಗೆ ಧಾವಿಸುತ್ತಿವೆಒಂದು ದಿನದ ಸಾವು ಸೋಲಾಗಿ ಕೈಹಿಡಿವಾಗ ಬಾಳ ಬಣ್ಣವನ್ನು ಏನೆಂದು ತಿಳಿಯಲಿ. ಮೂರ್ಖರ ಮಧ್ಯೆ ಸ್ವರ್ಗಕ್ಕೆ‌ ದಾರಿಕೇಳಬೇಡ ವಾಣಿ ಏಕತಾರಿ ನುಡಿಸುತ್ತ ಸಾಗುಆತ್ಮದ ಬಾಗಿಲು ಮುಕ್ತಿಯನ್ನೇ ಬೇಡುವಾಗ ಕುಹಕಿಗಳ‌ ಮನವನ್ನು ಏನೆಂದು ಚಿತ್ರಿಸಲಿ. ವಾಣಿ ಭಂಡಾರಿ                    

 ವಾಣಿ ಭಂಡಾರಿ ಅವರ ಗಜಲ್ Read Post »

ಇತರೆ

“ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”ವಿಶೇಷ ಲೇಖನ ಎನ್.ಜಯಚಂದ್ರನ್

ವ್ಯಕ್ತಿ ಸಂಗಾತಿ ಎನ್.ಜಯಚಂದ್ರನ್ “ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”  ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಅಮರನಾದ ಮಹಾಕವಿ ರವೀಂದ್ರನಾಥ ಟಾಗೋರ್  ಅವರು ಕೇವಲ ಕವಿ ಮಾತ್ರವಲ್ಲ; ಚಿಂತಕ, ತತ್ವಜ್ಞಾನಿ, ಸಂಗೀತಗಾರ, ಶಿಕ್ಷಣತಜ್ಞ ಹಾಗೂ ಮಾನವತಾವಾದಿಯೂ ಆಗಿದ್ದರು. “ಗೀತಾಂಜಲಿ” ಮೂಲಕ ವಿಶ್ವಮಾನ್ಯತೆ ಪಡೆದ ಈ ಮಹಾನ್ ಕವಿ, ಭಾರತದ ಮೊದಲ ನೊಬೆಲ್ ಪುರಸ್ಕೃತ ಸಾಹಿತ್ಯಸಾಧಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಉತ್ತರ ಕನ್ನಡ ಜಿಲ್ಲೆಯ ಕಾರವಾರದೊಂದಿಗೆ ಅವರಿಗಿದ್ದ ಆತ್ಮೀಯ ನಂಟನ್ನು ಸ್ಮರಿಸುವುದು ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ.ಕಾರವಾರದ ಪ್ರಕೃತಿ ಠಾಗೋರರ ಮನಸೂರೆಗೊಂಡದ್ದು1882ರ ಅವಧಿಯಲ್ಲಿ ಯುವಕನಾಗಿದ್ದ ಠಾಗೋರರು ತಮ್ಮ ಅಣ್ಣ ಸತ್ಯೇಂದ್ರನಾಥ ಠಾಗೋರರ ಬಳಿಗೆ ಕಾರವಾರಕ್ಕೆ ಬಂದಿದ್ದರು. ಆ ಕಾಲದಲ್ಲಿ ಸತ್ಯೇಂದ್ರನಾಥರು ಬ್ರಿಟಿಷ್ ಆಡಳಿತದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಮುದ್ರ, ಪಶ್ಚಿಮ ಘಟ್ಟಗಳ ಹಸಿರು, ಕಾಳಿ ನದಿಯ ಹರಿವು, ಮೌನಭರಿತ ಸಂಜೆಗಳು – ಇವೆಲ್ಲವೂ ಯುವ ರವೀಂದ್ರನಾಥರ ಕವಿಮನಸ್ಸನ್ನು ಆಳವಾಗಿ ಸ್ಪರ್ಶಿಸಿತು.ಕಾರವಾರದ ನಿಸರ್ಗ ಸೌಂದರ್ಯವನ್ನು ಕಂಡು ಅವರು ಮಂತ್ರಮುಗ್ಧರಾಗಿದ್ದರು. ಕಾರವಾರದ ಸಮುದ್ರತೀರದ ಸಾಯಂಕಾಲವನ್ನು ಕುರಿತು ಅವರು ಬರೆದ ಕೆಲವು ಬರಹಗಳಲ್ಲಿ ಪ್ರಕೃತಿ ಮತ್ತು ಮಾನವ ಆತ್ಮದ ನಡುವಿನ ಆಧ್ಯಾತ್ಮಿಕ ಸಂಬಂಧ ಸ್ಪಷ್ಟವಾಗಿ ಗೋಚರಿಸುತ್ತದೆ. ನಂತರದ ಅವಧಿಯಲ್ಲಿ ಅವರ ಕಾವ್ಯಗಳಲ್ಲಿ ಕಾಣುವ ಪ್ರಕೃತಿ ಸಂವೇದನೆಗೆ ಕಾರವಾರದ ಅನುಭವವೂ ಒಂದು ಪ್ರಮುಖ ಪ್ರೇರಣೆಯಾಗಿತ್ತು ಎಂದು ಸಾಹಿತ್ಯ ಅಧ್ಯಯನಕಾರರು ಅಭಿಪ್ರಾಯಪಡುತ್ತಾರೆ.“ನಿರ್ಜರರ ಸ್ವಪ್ನಭಂಗ” – ಪ್ರಕೃತಿಯೊಳಗಿನ ಆತ್ಮಜಾಗೃತಿಕಾರವಾರ ಪ್ರವಾಸದ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಿ ಮೂಡಿದ ಭಾವನೆಗಳು ನಂತರ ಹಲವು ಕಾವ್ಯಗಳಲ್ಲಿ ಪ್ರತಿಫಲಿಸಿದವು. ವಿಶೇಷವಾಗಿ “ನಿರ್ಜರರ ಸ್ವಪ್ನಭಂಗ” ಕವನದಲ್ಲಿ ಪ್ರಕೃತಿಯೊಳಗಿನ ಜೀವಚೈತನ್ಯವನ್ನು ಅವರು ಹೀಗೆ ಚಿತ್ರಿಸುತ್ತಾರೆ: “ಇಂದು ಈ ಪ್ರಭಾತದ ರವಿಕಿರಣಹೇಗೆ ಪ್ರವೇಶಿಸಿತು ಜೀವದೊಳಗೆ…” ಈ ಸಾಲುಗಳಲ್ಲಿ ಪ್ರಕೃತಿ ಮಾನವನ ಆತ್ಮವನ್ನು ಜಾಗೃತಿಗೊಳಿಸುವ ಶಕ್ತಿಯಾಗಿ ಕಾಣಿಸುತ್ತದೆ. ಕಾರವಾರದ ನಿಶ್ಶಬ್ದ ಪ್ರಕೃತಿ ಮತ್ತು ಸಮುದ್ರದ ಅಲೆಗಳ ಸಂಗೀತವು ಈ ಕಾವ್ಯಭಾವನೆಗೆ ಹಿನ್ನೆಲೆಯಾದವು ಎನ್ನುವುದು ಅತಿಶಯೋಕ್ತಿಯಲ್ಲ.“ಗೀತಾಂಜಲಿ” – ವಿಶ್ವಕ್ಕೆ ಭಾರತದ ಆತ್ಮಧ್ವನಿ1913ರಲ್ಲಿ ಗೀತಾಂಜಲಿ ಕೃತಿಗೆ ನೊಬೆಲ್ ಪ್ರಶಸ್ತಿ ಲಭಿಸಿದಾಗ ಭಾರತೀಯ ಸಾಹಿತ್ಯ ವಿಶ್ವದ ಗಮನಸೆಳೆಯಿತು. “Where the mind is without fear…” ಎಂಬ ಅವರ ಅಮರ ಕಾವ್ಯಪಂಕ್ತಿಗಳು ಇಂದಿಗೂ ಮಾನವ ಸ್ವಾತಂತ್ರ್ಯದ ಘೋಷಣೆಯಾಗಿ ಓದಲಾಗುತ್ತವೆ.ಅದರ ಕನ್ನಡಾರ್ಥ ಹೀಗಿದೆ: “ಭಯವಿಲ್ಲದ ಮನಸ್ಸು ಇರುವಲ್ಲಿ,ತಲೆ ಎತ್ತಿ ನಿಲ್ಲುವ ಮಾನವ ಇರುವಲ್ಲಿ,ಜ್ಞಾನವು ಮುಕ್ತವಾಗಿರುವಲ್ಲಿ…” ಠಾಗೋರರ ಸಾಹಿತ್ಯದಲ್ಲಿ ರಾಷ್ಟ್ರಪ್ರೇಮ ಇದ್ದರೂ ಅದು ಸಂಕುಚಿತ ರಾಷ್ಟ್ರಭಾವನೆಯಲ್ಲ; ಮಾನವತೆಯ ಆಧಾರದ ವಿಶ್ವಸೌಹಾರ್ದದ ಕನಸಾಗಿತ್ತು.ಪ್ರಕೃತಿ, ಮಾನವತೆ ಮತ್ತು ಶಿಕ್ಷಣದ ತ್ರಿವೇಣಿಠಾಗೋರರು ಸಾಹಿತ್ಯದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಮಹತ್ವದ ಕ್ರಾಂತಿ ತಂದವರು. ಅವರು ಸ್ಥಾಪಿಸಿದ ವಿಶ್ವಭಾರತಿ ಯುನಿವರ್ಸಿಟಿ ವಿಶ್ವಮಾನವೀಯ ಮೌಲ್ಯಗಳ ಪ್ರತೀಕವಾಗಿತ್ತು. ಪ್ರಕೃತಿಯ ಮಧ್ಯೆ ಶಿಕ್ಷಣ ನೀಡಬೇಕು ಎಂಬ ಅವರ ಕನಸು ಕಾರವಾರದಂತಹ ನಿಸರ್ಗತಾಣಗಳಲ್ಲಿ ಪಡೆದ ಅನುಭವಗಳಿಂದಲೇ ಮತ್ತಷ್ಟು ಗಾಢವಾಯಿತೆಂದು ಹೇಳಲಾಗುತ್ತದೆ.ಅವರ ಅನೇಕ ಕಾವ್ಯಗಳಲ್ಲಿ ಸಮುದ್ರ, ಗಾಳಿ, ಮಳೆ, ಹಕ್ಕಿಗಳು ಮತ್ತು ಅರಣ್ಯಗಳು ಜೀವಂತ ಪಾತ್ರಗಳಾಗಿ ಕಾಣಿಸುತ್ತವೆ. ಪ್ರಕೃತಿಯನ್ನು ಕೇವಲ ದೃಶ್ಯವಲ್ಲ, ಆತ್ಮೀಯ ಅನುಭವವಾಗಿ ನೋಡುವ ದೃಷ್ಟಿಯನ್ನು ಅವರು ಸಾಹಿತ್ಯಕ್ಕೆ ನೀಡಿದರು. ಕಾರವಾರದ ಹೆಮ್ಮೆ. ಇಂದು ಕಾರವಾರವನ್ನು ನೆನೆಸಿದಾಗ ಕಾರವಾರ ಕೇವಲ ಪ್ರವಾಸಿ ತಾಣವಲ್ಲ; ಮಹಾಕವಿ ಠಾಗೋರರ ಕಾವ್ಯಸ್ಮೃತಿಗಳನ್ನು ಹೊತ್ತ ಸಾಹಿತ್ಯಭೂಮಿಯೂ ಆಗಿದೆ. ಅವರು ಕೆಲ ದಿನಗಳ ಕಾಲ ಇಲ್ಲಿ ಕಳೆದಿದ್ದರೂ, ಆ ಅನುಭವಗಳು ಅವರ ಸಾಹಿತ್ಯ ಚಿಂತನೆಗೆ ಶಾಶ್ವತ ಸ್ಪರ್ಶ ನೀಡಿದವು.ಕಾಳಿ ನದಿ, ಅರಬ್ಬೀ ಸಮುದ್ರ, ಮೌನಮಯ ಸಂಜೆಯ ಹೊತ್ತು – ಇವುಗಳ ನಡುವೆ ನಿಂತು ನೋಡಿದಾಗ, ಇನ್ನೂ ಎಲ್ಲೋ ಠಾಗೋರರ ಕಾವ್ಯದ ಪ್ರತಿಧ್ವನಿ ಕೇಳಿಬರುವಂತೆ ಭಾಸವಾಗುತ್ತದೆ.ಅಂತಿಮವಾಗಿರವೀಂದ್ರನಾಥ ಠಾಗೋರರು ಕೇವಲ ಒಂದು ಯುಗದ ಕವಿಯಲ್ಲ; ಮಾನವ ಆತ್ಮದ ಶಾಶ್ವತ ಧ್ವನಿ. ಅವರ ಸಾಹಿತ್ಯ ನಮಗೆ ಪ್ರಕೃತಿಯನ್ನು ಪ್ರೀತಿಸಲು, ಮಾನವನನ್ನು ಗೌರವಿಸಲು ಹಾಗೂ ವಿಶ್ವವನ್ನು ಒಂದು ಕುಟುಂಬವಾಗಿ ಕಾಣಲು ಕಲಿಸುತ್ತದೆ.  ಕಾರವಾರದ ಕರಾವಳಿಯಲ್ಲೊಮ್ಮೆ ಅರಳಿದ ಆ ಕಾವ್ಯಚೇತನ ಇಂದು ಕೂಡ ಕನ್ನಡನಾಡಿನ ಮನಸ್ಸಿನಲ್ಲಿ ಜೀವಂತವಾಗಿದೆ ಎನ್.‌ ಜಯಚಂದ್ರನ್

“ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”ವಿಶೇಷ ಲೇಖನ ಎನ್.ಜಯಚಂದ್ರನ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಕೊರಳು ಕಂಪಿಸಿ ಬಿಗಿಯಾದರೆ ಪ್ರೇಮಕಣ್ಣೆರಡು ಮಿಳಿಸಿ ಹಸಿಯಾದರೆ ಪ್ರೇಮ ಮನದ ಬಯಲಲ್ಲೆಲ್ಲಾ ಅರಳಿ ಮಲ್ಲಿಗೆಜೀವ ಆಲಾಪಿಸಿ ಬಿಸಿಯಾದರೆ ಪ್ರೇಮ ದೇಹದರಮನೆಯ ತುಂಬಾ ಸಂಚಲನಭಾವ ಬಯಸಿ ಖುಷಿಯಾದರೆ ಪ್ರೇಮ ಹಂಬಲದಲೆ ಬೋರ್ಗರೆದು ಅಪ್ಪಳಿಸಿಆಸೆ ಅಂಕುರಿಸಿ ಹಸಿಯಾದರೆ ಪ್ರೇಮ ಬಯಕೆ ಬಾಂದಳ ಕುಣಿಕುಣಿದು ನಲಿದುಮಿಡಿವ ಎದೆ ಕಲಕಿ ತೃಷೆಯಾದರೆ ಪ್ರೇಮ ನರನಾಡಿಗಳಲಿ ನಾದಂತರಂಗ ಮೃದಂಗಹೃದಯ ಮಂಪರಿಸಿ ನಿಶೆಯಾದರೆ ಪ್ರೇಮ ಅನುಳ ಪ್ರೀತಿಯ ಶಿಶೆ ತುಂಬಿ ತುಳುಕುತ್ತಿರೆಬಾನು ಭುವಿ ರಮಿಸಿ ಒಂದಾದರೆ ಪ್ರೇಮ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

You cannot copy content of this page

Scroll to Top