ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಮಾಲಾ.ಮ.ಅಕ್ಕಿಶೆಟ್ಟಿ ಅವರ ಕೃತಿ “ಸ್ವಾವಲಂಬಿ ಬದುಕಿನಾಚೆ” ಅವಲೋಕನ ಸಾವಿತ್ರಿ ಶ್ಯಾನುಭಾಗ

ಪುಸ್ತಕ ಸಂಗಾತಿ ಸಾವಿತ್ರಿ ಶ್ಯಾನುಭಾಗ ಮಾಲಾ.ಮ.ಅಕ್ಕಿಶೆಟ್ಟಿ “ಸ್ವಾವಲಂಬಿ ಬದುಕಿನಾಚೆ” ಪುಸ್ತಕ: ಸ್ವಾವಲಂಬಿ ಬದುಕಿನಾಚೆಲೇಖಕರು :ಮಾಲಾ.ಮ.ಅಕ್ಕಿಶೆಟ್ಟಿಬೆಲೆ:೧೭೦ಪುಟ:೧೨೮+೧೬ಪ್ರಕಾಶನ:ಎಸ್‌,ಎಲ್.ಎನ್.ಪಬ್ಲಿಕೇಷನ್ ಬುದ್ಧಿವಂತನಾದವನು ಬೇರೆಯವರ ಅನುಭವಗಳಿಂದ ತಾನು ಕಲಿಯುತ್ತಾನೆ.ಕೆಲವರಿಗೆ ಬೇರೆಯವರ ಅನುಭವಗಳನ್ನು ನೋಡಿ ಕಲಿಯುವಂತಾದರೆ,ಕೆಲವರಿಗೆ ತಮ್ಮ ಸ್ವಂತ ಅನುಭವದಿಂದಲೇ ಕಲಿಯುವ ಅವಕಾಶ.ಸೋತವರ ಅನುಭವಗಳಿಂದ ಕಲಿತರೆ ಗೆಲ್ಲುವ ಸಾಧ್ಯತೆಯಿದೆ.ಹೀಗೆ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಾ ತನ್ನ ಬದುಕಿನಲ್ಲಿ ತಾನು ವೀಕ್ಷಸಿದ,ವಿದ್ಯಾರ್ಥಿಗಳ ನೋವನ್ನು ನೋಡಿ ನಮಗೆ ಅವುಗಳನ್ನು ಹೇಳಿ ನಮ್ಮ ಕಣ್ತೆರೆಸುವಂತಹ ಬರಹಗಳ ಮೂಲಕ ʼಸ್ವಾವಲಂಬಿ ಬದುಕಿನಾಚೆʼಲೇಖನಗಳ ಸಂಕಲನದ ಮೂಲಕ ಲೇಖಕಿ ಮಾಲಾ ಮ.ಅಕ್ಕಿಶೆಟ್ಟಿಯವರು ಸಾಹಿತ್ಯಲೋಕಕ್ಕೆ ಕೊಡುಗೆ ನೀಡಿದ್ದಾರೆ.ಪ್ರೊ.ನಾಗ.ಎಚ್.ಹುಬ್ಳಿಯವರ ಮುನ್ನುಡಿಯೊಂದಿಗೆ ಬಂದ ಈ ಲೇಖನ ಲೇಖಕಿಯ ಮೊದಲ ಕೃತಿ.   ಮಹಿಳಾಪರ ಲೇಖನಗಳ ಮೂಲಕ ಮಹಿಳೆಯರ ಕುರಿತು ಕಾಳಜಿ,ಅವರು ವಹಿಸಬೇಕಾದ ಎಚ್ಚರ,ಮನೆ-ಕೆಲಸ ಎರಡೂ ಒಟ್ಟಿಗೆ ನಿಭಾಯಿಸಬೇಕಾದಾಗ ಬೇಕಾಗುವ ಎಚ್ಚರಿಕೆ,ಯೌವನದ ದಿನಗಳಲ್ಲಿ ಮೊಬೈಲ್‌ ಸ್ನೇಹದಿಂದ ಆಗಬಹುದಾದ ಪ್ರಮಾದಗಳು,ಸ್ನೇಹ,ಪ್ರೀತಿಯಲ್ಲಿರಬೇಕಾದ ಎಲ್ಲೆ,ವಿವಾಹ ಬಂಧನವನ್ನು ಗಟ್ಟಿಗೊಳಿಸಬೇಕಾದ ಗುಟ್ಟುಗಳು ಹೀಗೆ ಮಹಿಳೆಯರಿಗೆ ಒಬ್ಬ ಸೋದರಿಯಾಗಿ ಎಚ್ಚರಿಕೆ ನೀಡುತ್ತಾರೆ,ಮಹಿಳೆಯರಿಗಾಗಿ ನೀಡಿದ ಎಚ್ಚರ ಎಂದುಕೊಳ್ಳುವುದಕ್ಕಿಂತ ಇಂದಿನ ಯುವಜನಾಂಗಕ್ಕೆ ನೀಡುವ ಕಿವಿಮಾತುಗಳು,ಅವುಗಳನ್ನು ಕಿವಿಮಾತಿನಂತೆ ಹೇಳದೇ ನಯವಾಗಿ,ನಾಜೂಕಾಗಿ ನಾವು ಅಳವಡಿಸಿಕೊಂಡು ಎಚ್ಚೆತ್ತುಕೊಳ್ಳುವಂತೆ ಹೇಳುವ ಅವರ ಶೈಲಿ ನಮಗೆ ಇಷ್ಟವಾಗುತ್ತದೆ.   ೪೨ ಲೇಖನಗಳ ಮೂಲಕ ಕೃತಿಯಲ್ಲಿ ಅವರು ನೀಡುತ್ತಿರುವ ಸಲಹೆ ಸೂಚನೆಗಳು ಇಂದಿನ ಯುವಜನಾಂಗಕ್ಕೆ ಅಗತ್ಯ .ಕೆಲವೊಮ್ಮೆ ಗಂಡಸರ ಕುರಿತು ನಾವು ತಪ್ಪು ತಿಳುವಳಿಕೆ ಹೊಂದಿದ್ದು ಅವರ ಬಗ್ಗೆ ಇರುವ ಒಳ್ಳೆಯ ಗುಣಗಳನ್ನು ಉದಾಹರಣೆ ಸಮೇತ ನೀಡುತ್ತಾ ಅವರ ಸಾಹಾಯಕ್ಕೆ ವಂದಿಸುತ್ತಾ ಎಲ್ಲ ಗಂಡಸರು ಕೆಟ್ಟವರಲ್ಲ,ಅವರ ಬಗ್ಗೆ ತಿಳಿದು ವ್ಯವಹರಿಸಬೇಕು ಎಂದು ಎಚ್ಚರಿಕೆಯನ್ನು ನೀಡುತ್ತಾರೆ.ಬಸ್ಸಿನಲ್ಲಿ ನಡು ಸೀಟಿನಲ್ಲಿ ಕುಳಿತು ನಿದ್ರೆಯ ಮಂಪರಿನಲ್ಲಿ ಪಕ್ಕದಲ್ಲಿ ಕುಳಿತ ಹುಡುಗಿಯತ್ತ ವಾಲುವ ಪರಿಸ್ಥಿತಿಯಲ್ಲಿ ಕಿಟಕಿಯ ಪಕ್ಕ ಕುಳಿತ ಹುಡುಗನ ಬಳಿ ಮನವಿಮಾಡಿ ತಾನು ಆ ಸೀಟಿಗೆ ಹೋಗಿ ನಿದ್ರಿಸುವ ಸನ್ನಿವೇಶ ಹೀಗೆ ಅನೇಕ ಉದಾಹರಣೆ ನಮ್ಮ ಮುಂದೆ ಇಡುತ್ತಾರೆ.  ಇವೆಲ್ಲ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳೇ ಅದರೂ ಎಲ್ಲ ಲೇಖನಗಳನ್ನು ಒಂದೇ ಕಡೆ ಓದುವ ಸದವಕಾಶ ನಮ್ಮ ಪಾಲಿಗಿದೆ.ಮನೆಕೆಲಸವೆಂದರೆ ತಾತ್ಸಾರ ತೋರುವ ಮಹಿಳೆಯರಿಗೆ ಕಿವಿಮಾತು,ಹಿರಿಯರೊಂದಿಗೆ ನಡೆದುಕೊಳ್ಳಬೇಕಾದ ರೀತಿ ಹೀಗೆ ಅನೇಕ ಕಿವಿಮಾತುಗಳನ್ನು ಹೇಳುತ್ತಾ ಸಾಗುವ ಲೇಖಕಿಯ ಎಲ್ಲಾ ಲೇಖನಗಳೂ ಚೆನ್ನಾಗಿ ಮೂಡಿ ಬಂದಿದ್ದು ನಮ್ಮನ್ನು ಓದಲು ಪ್ರೇರೆಪಿಸುತ್ತವೆ.   ಸಾವಿತ್ರಿ ಶ್ಯಾನುಭಾಗ ಪುಸ್ತಕ: ಸ್ವಾವಲಂಬಿ ಬದುಕಿನಾಚೆಲೇಖಕರು :ಮಾಲಾ.ಮ.ಅಕ್ಕಿಶೆಟ್ಟಿಬೆಲೆ:೧೭೦ಪುಟ:೧೨೮+೧೬ಪ್ರಕಾಶನ:ಎಸ್‌,ಎಲ್.ಎನ್.ಪಬ್ಲಿಕೇಷನ್

ಮಾಲಾ.ಮ.ಅಕ್ಕಿಶೆಟ್ಟಿ ಅವರ ಕೃತಿ “ಸ್ವಾವಲಂಬಿ ಬದುಕಿನಾಚೆ” ಅವಲೋಕನ ಸಾವಿತ್ರಿ ಶ್ಯಾನುಭಾಗ Read Post »

ಪುಸ್ತಕ ಸಂಗಾತಿ

ರಾಜಶೇಖರ ಕುಕ್ಕುಂದಾ ಅವರ ಕೃತಿ “ಬಿಸಿ ಬಿಸಿ ಬಾತು” ಒಂದು ಅವಲೋಕನ,ಪ್ರಭುರಾಜ ಅರಣಕಲ್

ಪುಸ್ತಕ ಸಂಗಾತಿ ಪ್ರಭುರಾಜ ಅರಣಕಲ್ ರಾಜಶೇಖರ ಕುಕ್ಕುಂದಾ “ಬಿಸಿ ಬಿಸಿ ಬಾತು” ಒಂದು ಅವಲೋಕನ, ತಮ್ಮಪ್ರತಿ ಪದ್ಯಕ್ಕೆ ನವೀಕರಿಸುವ ಕವಿ ನೃಪತುಂಗನನೆಲದ , ಕಲಬುರಗಿ ಜಿಲ್ಲೆಯ ಸೇಡಂತಾಲ್ಲೂಕಿನ ಕುಕ್ಕುಂದಾ ಗ್ರಾಮದರಾಜಶೇಖರಕುಕ್ಕುಂದಾ ಅವರು ಕುರಿತೋದುತ್ತ ‘ಮಕ್ಕಳಕವಿತೆಗೆ’ ಅಪ್ಪಿಕೊಂಡು, ಒಪ್ಪಿಕೊಂಡವರು.- ಚೆಲುವ ಚಂದಿರ, ಗೋಲಗುಮ್ಮಟ, ಪುಟಾಣಿ ಪ್ರಾಸಗಳು, ಸೋನಪಾಪಡಿ, ಶೀರ್ಷಿಕೆಗಳ ನಾಲ್ಕು ಮಕ್ಕಳ ಕವಿತಾ ಸಂಕಲನಗಳನ್ನು ಪ್ರಕಟಿಸಿ, ಕನ್ನಾಡಿನ ಕಾವ್ಯಾಸಕ್ತರ ಗಮನ ಸೆಳೆದಿದ್ದಾರೆ. ‘ಬಿಸಿಬಿಸಿ ಬಾತು’ ಅವರ ಐದನೆಯ ಕೃತಿ. ಇದನ್ನು ಪ್ರಕಟಿಸಿದ್ದು ಬೆಂಗಳೂರಿನ ‘ಅವ್ಯಕ್ತ ಪ್ರಕಾಶಾನದ’ ವಸುವತ್ಸಲೆಯವರು. ಕ್ರೌನ್ 1/4 ಆಕಾರದ, ಕೃತಿಯ ಸುಂದರ ಮುಖಪುಟದವಿನ್ಯಾಸದಲ್ಲಿ – ಕಣ್ಸೆಳೆಯುವ ‘ಕಾಮನಬಿಲ್ಲು’ ಕುಂಚಿಸಿದವರು’ ಸೌಮ್ಯ ಕಲ್ಯಾಣಕರ್ ಅವರು. ‘ಹೋದೆಯಾ ದೂರ ಓ ಜೊತೆಗಾರ ಸೇರಲು ಬಂದಾಗ, ನೀ ಅರಿಯದೆ ಹೋದೆ ಪ್ರೇಮದನಾ ಸಂದೇಶವ ತಂದಾಗ’ ಅನುಭವ ಸಿನೆಮಾದ, ವಾಣಿಜಯರಾಮ್ ಹಾಡಿದ, ಗೀತೆ ರಚಿಸಿದ ಖ್ಯಾತ ಸಂಗೀತ ನಿರ್ದೇಶಕ, ನಟ, ವಿ. ಮನೋಹರ್ ಅವರು ಇಲ್ಲಿನ -26 ಪದ್ಯಗಳಿಗೆ, 7 ಪುಟಾಣಿ ಪ್ರಾಸಗಳಿಗೆ – ಒಟ್ಟು 33 – ಪದ್ಯಗಳ ಭಾವಕ್ಕೆ ಹೋಲುವ ಸುಂದರ ಚಿತ್ರ ಗಳನ್ನು ರಚಿಸಿದ್ದು, ‘ಉತ್ತಮರೇಖಾ ಚಿತ್ರ ಕಲಾವಿದರಾಗಿ’ ಹೊರಹೊಮ್ಮಿದ್ದಾರೆ. ಒಳ ಪುಟದ ವಿನ್ಯಾಸ ಕಲ್ಲೂರ ನಾಗೇಶ ಅವರದು. ‘ ಕವಿಯಾಗಿದ್ದುಕೊಂಡೇ ಮಕ್ಕಳ ಜಾಗದಲ್ಲೂ ನಿಲ್ಲುವುದು ಸಾಧ್ಯವಾದಾಗಷ್ಟೇ “ಬಿಸಿಬಿಸಿ ಬಾತು”ಸಂಕಲನದಲ್ಲಿ ಇರುವವಂಥ ರಚನೆಗಳು ಮೈದಳೆಯುವುದು ಸಾಧ್ಯ’ ವೆಂದು ಬೆನ್ನುಡಿಯಲ್ಲಿ ಲೇಖಕ ಪತ್ರಕರ್ತ ರಘುನಾಥ ಚ. ಹ. ಅವರು ಉಲ್ಲೇಖಸಿದ್ದಾರೆ. “ಮಕ್ಕಳಕಾವ್ಯ ನನಗೆ ಇಷ್ಟವಾದ ಪ್ರಕಾರ. ಇದಕ್ಕೂ ನನಗೂ ಬಾಲ್ಯದಿಂದಲೇ ಬಿಟ್ಟೂಬಿಡದ ನಂಟು. ನನ್ನ ರಚನೆಗಳೆಲ್ಲ ಹೆಚ್ಚಾಗಿ ನಾನು ಕಾಪಿಟ್ಟು ಕೊಂಡುಬಂದ ನನ್ನಹಳ್ಳಿ ಮತ್ತು ಶಹರ ಜೀವನದ ಬಾಲ್ಯದ ಅನುಭವಗಳಿಂದ ಪ್ರೇರಣೆ ಪಡೆದವುಗಳೇ. ಅದೇಕೋ ನಾನು ಮಾತ್ರ ಮಕ್ಕಳ ಕಾವ್ಯ ರಚನೆಗಷ್ಟೇಸೀಮಿತನಾದೆ.”ಎಂದು, ‘ಸವಿಯುವಮುನ್ನ’ ಎಂಬ – ತಲೆಬರಹದ ಲೇಖಕನಮಾತುಗಳಲ್ಲಿ, ಕುಕ್ಕುಂದಾ ಅವರು ಹೇಳಿಕೊಂಡಿದ್ದಾರೆ. ಕವಿಯ ಈ ಹೇಳಿಕೆಯಲ್ಲಿ – ಒಂದು ಹಗುರ ತಳಮಳಿಕೆ ಇಣುಕಿದೆ. ಈ ತಳಮಳಿಕೆಗೆ ತಳ್ಳಿಹಾಕುವ ಒಂದು ಅತ್ಯಾಶ್ಚರ್ಯಕರವಾದ ಖಾಸಾ ಹೊಳಪನ್ನು ಇವರ ಮಕ್ಕಳಕಾವ್ಯ ದಕ್ಕಿಸಿಕೊಂಡಿದೆ ಎಂಬುದನ್ನು ಕನ್ನಡ ಮಕ್ಕಳ ಸಾಹಿತ್ಯವಲಯ, ಹಾಗೂ ಕರ್ನಾಟಕಸಾಹಿತ್ಯಅಕಾಡೆಮಿಕೂಡ ಗುರುತಿಸಿದೆ. ಕನ್ನಡ ಹಾಗೂ ಮರಾಠಿ ಪಠ್ಯ ಪುಸ್ತಕಗಳಲ್ಲಿ, ಮತ್ತು ಶಿಶುಗೀತೆಯ ಆಲ್ಬಮ್ ಗಳಲ್ಲಿ ಇವರ ಕವಿತೆಗಳು ಸೇರಿವೆ.ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಶಿಶುಕಾವ್ಯ ಸ್ಪರ್ಧೆಯಲ್ಲಿ ಹಲವುಬಾರಿ ಬಹುಮಾನ ಪಡೆದಿವೆ. ಹಲವು ಸಂಸ್ಥೆಗಳ ಪ್ರಶಸ್ತಿಗಳ ಸಂಖ್ಯೆ ದೊಡ್ಡದು.- ಅವುಗಳಲ್ಲಿ ಮುಖ್ಯವೆನಿಸುವ ಪ್ರಸ್ತುತ “ಬಿಸಿ ಬಿಸಿ ಬಾತು” ಕೃತಿಗೆ – 2024 ನೇ ಸಾಲಿನ ಜಿ. ಬಿ. ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮತ್ತು 2024 ನೇ ಅಬ್ದದ ಕರ್ನಾಟಕ ಸಾಹಿತ್ಯ ಅಕಾಡೆಮಿಯಪುಸ್ತಕಬಹುಮಾನಕ್ಕೆ”ಬಿಸಿಬಿಸಿಬಾತು”ಆಯ್ಕೆಯಾಗಿದೆ. ಪ್ರಸ್ತುತ ಕೃತಿಯ ಪದ್ಯಗಳ ಬಗ್ಗೆಮೊದಲಕವಿತೆ ಹಬ್ಬ- ಹೀಗೆ ಪ್ರಾರಂಭವಾಗುತ್ತದೆ.ಹೂವು ಅರಳಿ ನಿಂದಿದೆದುಂಬಿ ಹಾರಿ ಬಂದಿದೆಬಿಸಿಲು ಮಳೆಯು ಕೂಡಿದೆಮಳೆಯಬಿಲ್ಲು ಮೂಡಿದೆ! ಹೌದು, ಬಿಸಿಲು ಮಳೆಯು ಕೂಡಿದಾಗಲೇ, ಇಂದ್ರಚಾಪ ಮೂಡುವುದೆಂಬ ಬಣ್ಣನೆಯಲ್ಲಿ – ಈಕೃತಿಯ ಮುಖಪುಟದಲ್ಲಿನ ಸೌಮ್ಯ ಕಲ್ಯಾಣಕರ್ ಅವರ ‘ಕಾಮನಬಿಲ್ಲು’ ಚಿತ್ತಾರ ಗಮನಿಸಬಹುದು. ಆನೆ – ಕವಿತೆಯಲ್ಲಿ, – ಆನೆ ಬಹಳ ದೊಡ್ಡದು, ಅದರಬಾಲ ಗಿಡ್ಡದು /ಕಣ್ಣು ಸಣ್ಣ ಸಣ್ಣದು, ಚರ್ಮ ಬೂದು ಬಣ್ಣದು; ಉದ್ದದೊಂದು ಸೊಂಡಿಲು, ದಿಮ್ಮಿ ಎತ್ತಿ,ಕೊಳ್ಳಲು,/ ಅಗಲ ಅಗಲ ಕಿವಿಗಳು, ಗಾಳಿಬೀಸಿ ಕೊಳ್ಳಲು; ಹೀಗೆ ಮಕ್ಳಳು ಓದಿ – ನಕ್ಕು ನಲಿಯಲು ಪೂರಕವಾದ ಶಬ್ದ ಪಂಜಗಳು ಕೃತಿಯುದ್ದಕ್ಕೂ ಮನಸೆಳೆಯುತ್ತವೆ. ಸೊಳ್ಳೆ, ನಾಯಿಮರಿ ಬಾಬಾ,ಗಡಿಯಾರ,ನಮ್ಮಮನೆಅಂದ, ದಂತಹಪದ್ಯಗಳುಮಕ್ಕಳಲ್ಲದೆ ಕಾವ್ಯ ಪ್ರಿಯ ದೊಡ್ಡವರಲ್ಲೂ ಉಲ್ಲಾಸ ತುಂಬಬಲ್ಲವು. ‘ನಿದ್ದೆ ಎಲ್ಲಿ ಇರುವುದು’ ಪದ್ಯದಲ್ಲಿ ‘ಕ್ಲಾಸಿನಲ್ಲಿ ಕಾಡಲಿಕ್ಕೆ ಧುತ್ತನೆಂದು ಬರುವುದು /ಪಾಠ ಕೇಳುವಾಗ ತನ್ನ ಆಟ ನಡೆಸುತಿರುವುದು! / ಹಗಲಿ ನಲ್ಲಿ ಚಂದ್ರತಾರೆ ಗಳನು ತೂರಿಬಿಡುವುದು /ಸಿನೆಮದಂತೆ ಕನಸುಗಳನು ತಲೆಗೆ ತೂರಿಬಿಡುವುದು… ಶಾಲೆಯಲ್ಲಿ ಡೆಸ್ಕಿನಮೆಲೆ ಕುಳಿತ ಚಿಣ್ಣರ ಚಿತ್ರಣವಿದು.- ಸಹಜ ಹಾಗೂ ನೈಜತೆಗೆ ಪಕ್ಕಾದ ರಚನೆ; ಬಾರೋ ಬಾರೋ ಮಳೆರಾಯ, ಡ್ರೈವರ ಅಣ್ಣ, ಐಯ್ಯಾಮ್ ವೆರಿ ಸಾರಿ, ಯಾಕೆ ಹೀಗೆ? ಗುಲಾಬ್ ಜಾಮೂನ್, ಪದ್ಯಗಳು ಮಕ್ಕಳ ಮನಸ್ಸನ್ನು ಆಹ್ಲಾದಗೊಳಿಸುತ್ತವೆ. ಈಕೃತಿಯಶಿರೋನಾಮೆಯಪದ್ಯ’ಬಿಸಿಬಿಸಿಬಾತು’ಮಕ್ಕ ಳಲ್ಲದೆ, ಓದುಗರೆಲ್ಲರಬಾಯಿಯಲ್ಲಿ ನೀರೂರಿಸುವ “ರಚನೆ.ಬಿಸಿಬಿಸಿಬಾತು, ಕೇಸರಿಬಾತು ಬಾಯ್ತೆಗಿ ಚಿನ್ನು ಗಪ್ ಚುಪ್ ತಿನ್ನು /ಬಿಸಿಬಿಸಿ ಬಾತು ಟೊಮೆeಟೊe ಬಾತು ಬಾಯ್ತೆಗಿ ಚಿನ್ನು ಗಪಚುಪ್ ತಿನ್ನು -ಎಂದು ತಾಯಿ ತನ್ನ ಪುಟ್ಟಕಂದನಿಗೆ – ಬಿಸಿಬೇಳೆಬಾತು, ವಾಂಗೀ ಬಾತು, ಚೌ ಚೌ ಬಾತು ತಿನ್ನಿಸಿ – ಕೊನೆಗೆ, ತಾಯಿ ಮಗನಿಗೆ – ಬಿಸಿ ಬಿಸಿ ಬಾತು ತಿಂದದ್ದಾತು, ಚಿನ್ನು ಚಿನ್ನು, ನಿದ್ದೆಮಾಡಿನ್ನು!ಎಂಬಲ್ಲಿಗೆ ಕವಿತೆ ಮುಕ್ತಾಯ ಗೊಳ್ಳುತ್ತದೆ.ಇನ್ನೂ ಇಂತಹ ಮನಮಿಡಿಯುವ ಪದ್ಯಗಳು ಈ ಕೃತಿಯಲ್ಲಿವೆ. ರಾಜಶೇಖರ ಎಂಬ ಈ ಎಂಜಿನಿಯರಿಂಗ್ ಮೇಷ್ಟ್ರರ ಪುಟಾಣಿ ಪ್ರಾಸಗಳ ಗಮ್ಮತ್ತೆe ಬೇರೆಯದು. ತನ್ನದೇ ಮುದ್ರೆ ಹೊಂದಿದ ರಚನೆಗಳಿಗೆ ಒತ್ತುಕೊಟ್ಟು – ಪುಟಾಣಿಪ್ರಾಸಗಳಿಗೆ ಮೀಸಲಾದ ಪದ್ಯ ಸಂಕಲನ ಪ್ರಕಟಿಸಿದ್ದಾರೆ. ಈ ಕೃತಿ ಯಲ್ಲಿ ಕಾಡೆಲ್ಲಿ? ಎಂಬ ಮುಕ್ತಕದಲ್ಲಿ -“ಕಾಡಿಗೆ ಹೋಗೋ ರಾಮ – ಸೀತೆ – ಈಗೆಲ್ಲಿ? ಈಗೆಲ್ಲಿ? /ಒಂದು ವೇಳೆ ಇದ್ರು ಅನ್ಕೊ ಕಾಡೆಲ್ಲಿ? ಕಾಡೆಲ್ಲಿ?/.. ಇಲ್ಲಿ – ಕಾಡಿಲ್ಲದ ನಾಡಿನ ಭೀಭತ್ಸ ಚಿತ್ರಣ ವಿದೆ. ‘ಒಂದು ಎರಡು’ – ಪದ್ಯ, ಒಂಭತ್ತು ಹತ್ತರ ವರೆಗೆ ಪವಣಿಸಿಕೊಂಡ ಪರಿ ನೋಡಿ.” ಒಂದು ಎರಡು ಸೇರಿ ಆಟ ಆಡ್ತಿದ್ವು /ಮೂರು ನಾಲ್ಕುಸೆರಿ ಪಾಠ ಕೇಳ್ತಿದ್ವು /ಐದು ಆರು ಸೇರಿ ಊಟ ಮಾಡ್ತಿದ್ವು/ ಏಳು ಎಂಟು ಸೇರಿ ಜಗಳ ಆಡ್ತಿದ್ವು / ಒಭತ್ತು ಹತ್ತು ಸೇರಿ ನಿಂತು ನೋಡ್ತಿದ್ವು! ಇಂತಹ ನಿರ್ವಚನಗಳ ಮೋಡಿಯು – ಬಹುತೇಕ ಪುಟಾಣಿ ಪ್ರಾಸಗಳಲ್ಲಿ ಹಾಸುಹೊಕ್ಕಾಗಿವೆ.ಇರ್ವೆಗೆ ನೆಗಡಿ ಬಂದ್ರೆ? ಪದ್ಯದ ಗುಣ ಲಾವಣ್ಯವು ವೈಚಿತ್ರ್ಯ ಗಳಿಂದ ಕೂಡಿದೆ.ಇರ್ವೆಗೆ ನೆಗಡಿ ಬಂದ್ರೆ ಮೂಗುಹೇಗೆ ಒರ್ಸೋದು /ಮೈ ತಿಂಡಿಬಿಟ್ರೆ ಹೇಗಪ್ಪಾತುರ್ಸೋದು?ಕಿರಿಕಿರಿ ಮಾಡ್ದ್ರೆ ನಿದ್ದೆಹೇಗೆ ಬರ್ಸೋದು? ಹುಷಾರು ಇಲ್ದೆ ಹೋದ್ರೆ ಯಾರನ್ನ ಕರ್ಸೋದು? ಹೇಗಪ್ಪ ಬಾಯಿ ತೆರ್ಸಿ ಗುಳ್ಗೆನುಂಗ್ಸೋದು? ರಕ್ತನಾಳಹುಡ್ಕಿಹುಡ್ಕಿ ಸಲೈನ್ ಏರ್ಸೋದು?…ಇವರ ಆಲೋಚನಾ ಲಹರಿಯಲ್ಲಿ ‘ವಸ್ತುನವೀನತೆ’ ಇದೆ . ಇರುವೆಗೆ ನರನಂತೆ ಪರಿಕಿಸುವಪರಿ – ಇಲ್ಲಿ ಅಚ್ಚರಿ ಗೊಳಿಸುತ್ತದೆ!°°°ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಂಯೋಜಿತ ಪ್ರಾಧ್ಯಾಪಕರಾಗಿ ಸುದೀರ್ಘಸೇವೆಸಲ್ಲಿಸಿದ ಕುಕ್ಕುಂದಾ ಅವರು ಪ್ರಸಕ್ತ ವರ್ಷದ ಜುಲೈ 31 ಕ್ಕೆ, ತಮ್ಮ ಸೇವಾ ಹುದ್ದೆಯಿಂದ ನಿವೃತ್ತಿಹೊಂದಲಿದ್ದಾರೆ. ಎಡೆಬಿದದ ಬೋಧಕವೃತ್ತಿ ಯಲ್ಲಿಯಲ್ಲಿದ್ದೂ ಐದು ಕವಿತಾ ಸಂಕಲನ ಪ್ರಕಟಿಸಿ – ತಮ್ಮ ರಚನೆಗಳಲ್ಲಿ ನವೀಕರಣಕ್ಕೆ ಒತ್ತುಕೊಡುತ್ತ ಬಂದ ಈ ಕವಿ ಸದ್ಯ ಕಟ್ಟುಬಿಡಿಸಿಕೊಂಡಿದ್ದು, ಮುಂದಿನ (Re-tired) ಅವಧಿಯಲ್ಲಿನ ಇವರ ಕಾವ್ಯದ ಬೆಳವಣಿಗೆ ಇನ್ನೂ ಹೊಸತಿನಿಂದ ಪಡಿಮೂಡುತ್ತಿರಲಿ ಎಂದು ಮನದುಂಬಿ ಹಾರೈಸುವೆ. ಪ್ರಭುರಾಜ ಅರಣಕಲ್

ರಾಜಶೇಖರ ಕುಕ್ಕುಂದಾ ಅವರ ಕೃತಿ “ಬಿಸಿ ಬಿಸಿ ಬಾತು” ಒಂದು ಅವಲೋಕನ,ಪ್ರಭುರಾಜ ಅರಣಕಲ್ Read Post »

ಪುಸ್ತಕ ಸಂಗಾತಿ

ಡಾ. ನೀ. ಗೂ. ರಮೇಶ್ ಅವರ ಪ್ರಬಂಧ ಸಂಕಲನ “ಸರಳರೇಖೆ” ಅವಲೋಕನ ಡಾ.ರೇಖಾ ಉದಯ

ಪುಸ್ತಕ ಸಂಗಾತಿ ಡಾ.ರೇಖಾ ಉದಯ ಡಾ. ನೀ. ಗೂ. ರಮೇಶ್ ಪ್ರಬಂಧ ಸಂಕಲನ “ಸರಳರೇಖೆ” ಕೃತಿ ಹೆಸರು.ಸರಳರೇಖೆ(ಪ್ರಬಂಧಗಳು)ಕೃತಿಕರ್ತೃ. -ಡಾ. ನೀ. ಗೂ. ರಮೇಶ್ಪುಸ್ತಕದ ಬೆಲೆ.-250ಪ್ರಕಾಶನದ ಹೆಸರು.- ಯದುನಂದನ ಪ್ರಕಾಶನಪುಟಗಳ ಸಂಖ್ಯೆ.210ಕೃತಿ ಬೇಕಾದಲ್ಲಿ ಸಂಪರ್ಕ.+91 82966 98801 ಸಹಜತೆಯೆಡೆಗೆ ಸಾಗುವ ಸುಂದರ ಹಾದಿ ಡಾ. ನೀ. ಗೂ. ರಮೇಶ್ ಅವರ ‘ಸರಳರೇಖೆ’ ಪ್ರಬಂಧ ಸಂಕಲನದ ಪರಿಚಯ ಮತ್ತು ಅವಲೋಕನಸರಳವಾದ ಬದುಕಿಗೆ ಮುನ್ನುಡಿಯೇ ‘ಸರಳರೇಖೆ’. ಸಹಜವಾಗಿ, ಸರಳವಾಗಿ ಬದುಕು ನಡೆಸಲು ನಮ್ಮ ಮುಂದೆ ಮಾರ್ಗಗಳು ಸಾವಿರಾರು ಇವೆ. ಆದರೆ ಆ ಸಹಜ ಹಾದಿಯನ್ನು ಬಿಟ್ಟು ಕವಲು ದಾರಿಗಳನ್ನೂ, ಕಲ್ಲು-ಮುಳ್ಳಿನ ಹಾದಿಗಳನ್ನೂ ನಾವೇ ಆಯ್ದುಕೊಂಡಾಗ ಬದುಕು ಸಂಕೀರ್ಣವಾಗುತ್ತದೆ. ಸರಳತೆಯಿಂದ ದೂರ ಸರಿದು ಆಡಂಬರ ಮತ್ತು ಕೃತಕತೆಯತ್ತ ಸಾಗುತ್ತಿರುವ ಇಂದಿನ ಬದುಕಿನ ಹಲವು ಮುಖಗಳನ್ನು ಡಾ. ನೀ. ಗೂ. ರಮೇಶ್ ಅವರ ‘ಸರಳರೇಖೆ’ ಪ್ರಬಂಧ ಸಂಕಲನ ಅತ್ಯಂತ ಆಳವಾಗಿ ಮತ್ತು ಪ್ರಬುದ್ಧವಾಗಿ ತೆರೆದಿಡುತ್ತದೆ.ಈ ಸಂದರ್ಭದಲ್ಲಿ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಅರ್ಥಪೂರ್ಣ ನುಡಿಯನ್ನು ನೆನಪಿಸಿಕೊಳ್ಳಬಹುದು:“ಹಸಿವಿಗೆ ತಕ್ಕ ಅನ್ನ, ನೆರಳಿಗೊಂದು ಸೂರು ಸಾಕು / ಹೆಚ್ಚಿಗೆ ಬಯಸಿ ಹೊರಟರೆ ನೆಮ್ಮದಿ ನಾಶ.”ಎಷ್ಟು ಅರ್ಥಪೂರ್ಣವಾದ ಮಾತಿದು! ಇರುವುದನ್ನು ಬಿಟ್ಟು ಇಲ್ಲದ ಕಡೆಗೆ ಸಾಗುವ ಧಾವಂತ, ಆಡಂಬರದ ಜೀವನಕ್ಕಾಗಿ ಮನಸ್ಸು ಮತ್ತು ಆರೋಗ್ಯವನ್ನು ಹಾಳು ಮಾಡಿಕೊಂಡು ಒತ್ತಡದ ಬದುಕಿನಲ್ಲಿ ಸಿಲುಕಿರುವ ಇಂದಿನ ಮನುಷ್ಯನ ಬದುಕನ್ನು ಈ ನುಡಿ ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ. ಕೇವಲ ದೈಹಿಕ ಮತ್ತು ಮಾನಸಿಕ ಆರೋಗ್ಯವಷ್ಟೇ ಅಲ್ಲ, ಸಾಮಾಜಿಕ ಆರೋಗ್ಯವೂ ಎಷ್ಟು ಮುಖ್ಯ ಎಂಬುದನ್ನು ಲೇಖಕರು ತಮ್ಮ ಪ್ರಬಂಧಗಳ ಮೂಲಕ ವಿವರಿಸಿದ್ದಾರೆ. ಸಹಜತೆ ಮತ್ತು ಸರಳತೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಾಣಿಗಳು ಸಹಜತೆಯ ಗಡಿಯನ್ನು ದಾಟಿ ಎಂದೂ ಹೊರಬಂದಿಲ್ಲ; ಆದರೆ ಬುದ್ಧಿವಂತ ಜೀವಿ ಎನಿಸಿಕೊಂಡ ಮಾನವ ಮಾತ್ರ ಸಂಕೀರ್ಣತೆಯತ್ತ ಸಾಗಿ ತನ್ನ ಜೀವನವನ್ನು ತಾನೇ ಕ್ಲಿಷ್ಟಗೊಳಿಸಿಕೊಳ್ಳುತ್ತಿದ್ದಾನೆ.*ಸರಳವಾಗುವ ಸುಖ *ಆಧುನಿಕತೆಯ ಓಟಮನುಷ್ಯ ದಿನದಿಂದ ದಿನಕ್ಕೆ ತೃಪ್ತಿಯ ಬದುಕನ್ನು ಬಿಟ್ಟು, ದುರಾಸೆಯ ಬೆನ್ನತ್ತಿ ಸಾಗುತ್ತಿದ್ದಾನೆ. ಹಿಂದೆ ಪ್ರಕೃತಿಯ ಸನಿಹದಲ್ಲಿದ್ದಾಗ ಪ್ರೀತಿ-ನೀತಿಗಳಿಂದ ಬದುಕು ನಡೆಸುತ್ತಿದ್ದ ಅವನು, ಇಂದು ಯಾವುದಕ್ಕೂ ತೃಪ್ತನಾಗದೆ ಪ್ರತಿಯೊಂದರಲ್ಲೂ ಹೆಚ್ಚಿನ ಆಸೆ-ಆಮಿಷಗಳನ್ನು ಬೆಳೆಸಿಕೊಳ್ಳುತ್ತಿದ್ದಾನೆ. ನಡೆಯುವ ಮನುಷ್ಯ ಇಂದು ಎಷ್ಟೇ ವೇಗವಾಗಿ ಓಡುವ ರೈಲು ಮತ್ತು ವಿಮಾನಗಳಿಗಿಂತಲೂ ವೇಗವಾಗಿ ಸಾಗಬಲ್ಲ ವಾಹನಗಳ ಅನ್ವೇಷಣೆಯಲ್ಲಿದ್ದಾನೆ. ಒಂದಲ್ಲ ಒಂದು ದಿನ ಮನುಷ್ಯ ತನ್ನ ಕಾಲನ್ನೇ ಕಳೆದುಕೊಳ್ಳಬಹುದೆಂಬ ಎಚ್ಚರಿಕೆಯ ವಿಚಾರವನ್ನು ಲೇಖಕರು ತುಂಬಾ ಅರ್ಥಪೂರ್ಣವಾಗಿ ಪ್ರಸ್ತಾಪಿಸುತ್ತಾರೆ.ಅತಿಯಾದ ಆಸೆಯಿಂದಾಗಿ ಮನುಷ್ಯ ಸಂಬಂಧಗಳನ್ನು ಕಳೆದುಕೊಳ್ಳುತ್ತಾ, ಔದಾರ್ಯದ ಬದುಕಿನಿಂದ ದೂರ ಸರಿದು ಸಂಕುಚಿತ ಮನಸ್ಥಿತಿಗೆ ಜಾರುತ್ತಿದ್ದಾನೆ. ಇವೆಲ್ಲವನ್ನೂ ಬಿಟ್ಟು ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುತ್ತಾ, ತೋರಿಕೆಯ ಬದುಕನ್ನು ತೊರೆದು ಸಹಜತೆಯಿಂದ ಬದುಕಿದರೆ ಮಾತ್ರ ನಿಜವಾದ ಪ್ರಶಾಂತತೆಯನ್ನು ಕಂಡುಕೊಳ್ಳಲು ಸಾಧ್ಯ ಎಂಬ ಸಂದೇಶ ಈ ಕೃತಿಯ ಪ್ರಮುಖ ಆಶಯಗಳಲ್ಲಿ ಒಂದಾಗಿದೆ.‘ಮನರಂಜನೆ ಮಿತಿಮೀರಿದ ಕಾಲ! ಎಂಬ ಲೇಖನವು ಇಂದಿನ ವಾಸ್ತವಿಕತೆಗೆ ಅತ್ಯಂತ ಸನಿಹವಾಗಿದೆ. ಇಂದಿನ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಆಳವಾಗಿ ತೊಡಗಿಸಿಕೊಂಡಿದೆ ಎಂಬುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಮನರಂಜನೆ ತನ್ನ ಮಿತಿಯನ್ನು ಮೀರಿ ಹೋಗಿದೆ ಎಂದರೆ ತಪ್ಪಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಇಂದು ಮೊಬೈಲ್ ಮತ್ತು ಕಂಪ್ಯೂಟರ್ ಲೋಕದಲ್ಲಿ ತನ್ನ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ.ಕಾಲದ ಮೌಲ್ಯ ಎಷ್ಟು ಅಮೂಲ್ಯವಾದುದು ಎಂಬುದನ್ನು ತಿಳಿಯದಂತಾಗಿದೆ; ತಿಳಿಸಿಹೇಳಿದರೂ ಅರ್ಥವಾಗದ ಸ್ಥಿತಿ ನಿರ್ಮಾಣವಾಗಿದೆ. ಊಟ-ನಿದ್ರೆಯನ್ನು ಲೆಕ್ಕಿಸದೆ ರೀಲ್ಸ್ ಲೋಕದಲ್ಲಿ ಮುಳುಗಿಹೋಗಿರುವ ಯುವಜನತೆಗೆ ಮೊಬೈಲ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮುಂತಾದ ಜಾಲತಾಣಗಳೇ ಜೀವನವಾಗಿಬಿಟ್ಟಿವೆ. ಮನರಂಜನೆಯ ಮಿತಿ ಮೀರಿದಾಗ ಅದರ ಪರಿಣಾಮ ವ್ಯಕ್ತಿಯ ಬದುಕು, ಆರೋಗ್ಯ, ಸಂಬಂಧಗಳು ಮತ್ತು ಚಿಂತನೆಯ ಮೇಲೂ ಬೀಳುತ್ತದೆ ಎಂಬ ಗಂಭೀರ ಆತಂಕವನ್ನು ಲೇಖಕರು ಇಲ್ಲಿ ವಿಶ್ಲೇಷಿಸಿದ್ದಾರೆ. ಪ್ರಕೃತಿಯ ಮೊದಲ ಸಹಜ ಆಹಾರ – ನೀರುಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗೂ ನೀರು ಅತಿ ಅವಶ್ಯಕ ಮತ್ತು  ಅಮೂಲ್ಯವಾದುದು. ಗಾಳಿ ಪ್ರಾಣಧಾತು ಆದರೆ, ನೀರು ಜೀವಧಾತುವಾಗಿದೆ. ಹಾಗಾಗಿ ನೀರನ್ನು ಅಮೃತವೆಂದೇ ಹೇಳಲಾಗುತ್ತದೆ. ಪ್ರತಿಯೊಂದು ಜೀವಿಗೂ ನೀರು ಅನಿವಾರ್ಯ. ಹಿಂದಿನ ಕಾಲದಲ್ಲಿ ಹರಿಯುವ ನದಿ ನೀರನ್ನೇ ನೇರವಾಗಿ ಕುಡಿಯುತ್ತಿದ್ದರೂ ಜನ ಆರೋಗ್ಯವಾಗಿದ್ದರು; ಆದರೆ ಇಂದು ‘ಶುದ್ಧ ನೀರು’ ಎಂದು ಕರೆಯಲ್ಪಡುವ ಬಾಟಲಿ ನೀರಿನಲ್ಲಿ ನಿಜಕ್ಕೂ ಎಷ್ಟು ಶುದ್ಧತೆಯಿದೆ ಎಂಬ ಗಂಭೀರ ಪ್ರಶ್ನೆಯನ್ನು ಲೇಖಕರು ಮುಂದಿಡುತ್ತಾರೆ.ದೇಹಕ್ಕೆ ನೀರಿನ ಅವಶ್ಯಕತೆ ಎಷ್ಟರಮಟ್ಟಿಗಿದೆ, ಯಾವ ರೀತಿಯಲ್ಲಿ ನೀರಿನ ಸೇವನೆ ಮಾಡಬೇಕು ಮತ್ತು ದೇಹದ ಜೈವಿಕ ಕ್ರಿಯೆಗಳಿಗೆ ನೀರು ಎಷ್ಟು ಮುಖ್ಯ ಎಂಬ ವಿಚಾರಗಳನ್ನು ಲೇಖಕರು ವಿಶಿಷ್ಟ ಹಾಗೂ ಚಿಂತನಶೀಲ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ. ಆರೋಗ್ಯಕರ ಬದುಕಿಗೆ ಪ್ರಕೃತಿಯೊಂದಿಗೆ ಹೊಂದಿಕೊಂಡ ಸರಳ ಜೀವನಶೈಲಿಯೂ ಅಗತ್ಯ ಎಂಬುದನ್ನು ಈ ಪ್ರಬಂಧ ಮನವರಿಕೆ ಮಾಡಿಕೊಡುತ್ತದೆ.“ಬದುಕು ಬದಲಿಸುವ ವಿವೇಕಾನಂದರ ವಿಚಾರಧಾರೆ”ಭರತಭೂಮಿ ತಪೋಭೂಮಿ. ಇಲ್ಲಿನ ಮಹಾನ್ ವ್ಯಕ್ತಿಗಳ ಸಾಧನೆಗಳು ಮತ್ತು ನುಡಿಗಳನ್ನು ಕೇಳಿದಾಗ ನಮ್ಮ ದೇಶದ ಬಗ್ಗೆ ಹೆಮ್ಮೆ ಮೂಡುತ್ತದೆ. ಇಂತಹ ಭಾರತ ದೇಶದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು ಎಂಬ ಭಾವನೆಯನ್ನು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಮೂಲಕ ಲೇಖಕರು ನೆನಪಿಸುತ್ತಾರೆ.ಮನುಷ್ಯನಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಆತ್ಮವಿಶ್ವಾಸ. ಭಯದಿಂದ ಹಿಂದುಳಿದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಭಯ ನಮ್ಮ ಸಾಮರ್ಥ್ಯವನ್ನು ಕುಗ್ಗಿಸಿ, ಸಾಧನೆಯ ಹಾದಿಯಿಂದ ದೂರ ಸರಿಸುತ್ತದೆ. ಇಂದಿನ ಯುವಜನತೆಯಿಂದ ಮಾತ್ರ ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಾಧ್ಯ ಎಂಬ ಆಶಯವನ್ನು ಲೇಖಕರು ವಿವೇಕಾನಂದರ ಚಿಂತನೆಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಗುರಿ ತಲುಪುವ ತನಕ ನಿಲ್ಲದಿರು ಎಂಬ ವಿವೇಕಾನಂದರ ಸಂದೇಶ ಪ್ರತಿಯೊಬ್ಬರಲ್ಲಿಯೂ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಬಲ್ಲದು.“ಏನೂ ಇಲ್ಲದವರೇ ಎಲ್ಲ ಸಾಧಿಸಿದವರು” ಇರುವವನ್ನು ನೋಡುವುದಕ್ಕಿಂತ, ಏನೂ ಇಲ್ಲದವರನ್ನು ನೋಡಿ ಕಲಿಯುವುದು ಹೆಚ್ಚು” ಎಂಬ ಹಿರಿಯರ ಮಾತು ಅತ್ಯಂತ ಸತ್ಯವಾದುದು. ನಾವು ಯಾವ ವಾತಾವರಣದಲ್ಲಿರುತ್ತೇವೋ ಅದು ನಮ್ಮ ಬದುಕನ್ನು ರೂಪಿಸುತ್ತದೆ. ಸಾಧಕರನ್ನು ಆದರ್ಶವಾಗಿಟ್ಟುಕೊಂಡಾಗ ನಮ್ಮ ಬದುಕಿನಲ್ಲೂ ಬದಲಾವಣೆ ಸಾಧ್ಯ. ಪ್ರತಿಯೊಬ್ಬ ಸಾಧಕನ ಗೆಲುವಿನ ಹಿಂದೆ ಸಾಕಷ್ಟು ನೋವು-ಸೋಲುಗಳು ಮತ್ತು ಸವಾಲುಗಳಿರುತ್ತವೆ.ಆಪಲ್ ಕಂಪನಿಯ ಸಹ-ಸಂಸ್ಥಾಪಕರಾದ ಸ್ಟೀವ್ ಜಾಬ್ಸ್ ಅವರ ಕಷ್ಟದ ದಿನಗಳು ಹಾಗೂ ಸಾಧನೆಯ ಹಾದಿಯನ್ನು ನಿದರ್ಶನಗಳ ಮೂಲಕ ಲೇಖಕರು ವಿವರಿಸಿದ್ದಾರೆ. ಯಾವಾಗಲೂ ಎಲ್ಲಾ ಸೌಕರ್ಯಗಳಿರುವವನಿಗಿಂತ, ಏನೂ ಇಲ್ಲದ ಸ್ಥಿತಿಯಲ್ಲಿಯೂ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗುವ ವ್ಯಕ್ತಿಯೇ ಸಾಧನೆಯ ಎತ್ತರವನ್ನು ತಲುಪಬಲ್ಲ ಎಂಬ ಸತ್ಯವನ್ನು ಈ ಪ್ರಬಂಧ ಮನವರಿಕೆ ಮಾಡಿಕೊಡುತ್ತದೆ. ಪರಿಸ್ಥಿತಿಯನ್ನು ನೆಪವಾಗಿಸಿಕೊಳ್ಳದೆ, ಸವಾಲುಗಳನ್ನು ಮೆಟ್ಟಿಲಾಗಿಸಿಕೊಂಡು ಮುನ್ನಡೆಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂಬ ಸಂದೇಶ ಇಲ್ಲಿ ಅಡಗಿದೆ.ಒಟ್ಟಾರೆಯಾಗಿ ನೋಡಿದರೆ ‘ಸರಳರೇಖೆ’ ಕೇವಲ ಪ್ರಬಂಧಗಳ ಸಂಕಲನವಲ್ಲ; ಸಮಕಾಲೀನ ಬದುಕಿನ ಹಲವು ಸಂಕೀರ್ಣ ಪ್ರಶ್ನೆಗಳ ನಡುವೆ ಸರಳತೆ ಮತ್ತು ಸಹಜತೆಯತ್ತ ಮುಖಮಾಡುವ ಚಿಂತನಯಾನವಾಗಿದೆ. ಆರೋಗ್ಯ, ವ್ಯಕ್ತಿತ್ವ ವಿಕಸನ, ಸಾಮಾಜಿಕ ಬದುಕು, ಯುವಜನತೆ, ಮನರಂಜನೆಯ ಅತಿರೇಕ, ಪ್ರಕೃತಿ ಮತ್ತು ಸಾಧನೆಯ ಹಾದಿ—ಹೀಗೆ ಬದುಕಿನ ಹಲವು ಮುಖಗಳನ್ನು ಸ್ಪರ್ಶಿಸುವ ಪ್ರಬಂಧಗಳ ಮೂಲಕ ಲೇಖಕರು ಓದುಗರನ್ನು ಆತ್ಮಾವಲೋಕನಕ್ಕೆ ಹಚ್ಚುತ್ತಾರೆ. ನಾವು ಬದುಕುತ್ತಿರುವ ರೀತಿ ಸರಿಯೇ? ನಮ್ಮ ಓಟದ ಗುರಿಯೇನು? ನಮ್ಮ ಬದುಕಿನಲ್ಲಿ ಕಳೆದುಹೋಗುತ್ತಿರುವ ಸಹಜತೆ ಯಾವುದು? ಎಂಬ ಪ್ರಶ್ನೆಗಳನ್ನು ಈ ಕೃತಿ ನಮ್ಮ ಮುಂದಿಡುತ್ತದೆ.ಕೃತಿಕಾರರ ಪರಿಚಯಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನೀಲಕಂಠನಹಳ್ಳಿಯವರಾದ ಡಾ. ನೀ. ಗೂ. ರಮೇಶ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಕಾವ್ಯ, ವಿಮರ್ಶೆ, ಪ್ರಬಂಧ, ಅಂಕಣ ಬರಹ, ಸಂಶೋಧನೆ ಮತ್ತು ಸಂಪಾದನೆಯ ಮೂಲಕ ತಮ್ಮದೇ ಆದ ಸಾಹಿತ್ಯಿಕ ಗುರುತನ್ನು ಮೂಡಿಸಿದವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಎರಡು ಚಿನ್ನದ ಪದಕಗಳೊಂದಿಗೆ ಪಡೆದಿರುವ ಇವರು ಪಿಎಚ್‌ಡಿ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಹುಣಸೂರಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕಾವ್ಯ, ವಿಮರ್ಶೆ, ಸಂಶೋಧನೆ, ಪ್ರಬಂಧ, ಜೀವನಚರಿತ್ರೆ ಮತ್ತು ಸಂಪಾದನೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ 20 ಪ್ರಕಟಿತ ಕೃತಿಗಳನ್ನು ಹೊಂದಿರುವ ಡಾ. ನೀ. ಗೂ. ರಮೇಶ್ ಅವರ ಸಾಹಿತ್ಯ ಸೇವೆಗೆ ರತ್ನಾಕರವರ್ಣಿ, ಮುದ್ದಣ ಕಾವ್ಯ ಪ್ರಶಸ್ತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಕುವೆಂಪು ಕನ್ನಡ ಕಾಯಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.ಸಾಹಿತ್ಯ ಸಂಘಟನೆ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ನೀ. ಗೂ. ರಮೇಶ್ ಅವರ ‘ಸರಳರೇಖೆ’ ಪ್ರಬಂಧ ಸಂಕಲನವು ಸರಳತೆ, ಸಹಜತೆ, ಆರೋಗ್ಯ, ವ್ಯಕ್ತಿತ್ವ ವಿಕಸನ ಮತ್ತು ಸಮಕಾಲೀನ ಬದುಕಿನ ಹಲವು ಸವಾಲುಗಳನ್ನು ಓದುಗರ ಮುಂದಿಡುವ ಮಹತ್ವದ ಕೃತಿಯಾಗಿದೆ. ಬದುಕನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಕೃತಕತೆಯ ನಡುವೆ, ಸಹಜವಾದ ಬದುಕಿನತ್ತ ಮರಳುವ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಈ ಕೃತಿ ಓದುಗರಿಗೆ ಚಿಂತನೆಯ ಹೊಸ ದಿಕ್ಕನ್ನು ನೀಡಬಲ್ಲದು.ಸರಳವಾಗಿ ಬದುಕುವುದು ಸುಲಭವೆನಿಸಿದರೂ, ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ದೊಡ್ಡ ಸವಾಲು. ಆ ಸವಾಲಿನ ನಡುವೆ ಸಹಜತೆಯ ಹಾದಿಯನ್ನು ಹುಡುಕುವ ಪ್ರತಿಯೊಬ್ಬ ಓದುಗನಿಗೂ ‘ಸರಳರೇಖೆ’ ಒಂದು ಚಿಂತನಶೀಲ ಸಂಗಾತಿಯಾಗಬಲ್ಲ ಕೃತಿ ಎಂಬುದರಲ್ಲಿ ಸಂಶಯವಿಲ್ಲ. ಇದೇ ಸೋಮವಾರ 31/8/26ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜ್ , ಜೆ ಎಲ್‌ ಬಿ ರಸ್ತೆ ಮೈಸೂರಿನಲ್ಲಿ  ಈ ಕೃತಿ ಲೋಕಾರ್ಪಣೆಗೊಳ್ಳುತ್ತಿದೆ . ಡಾ. ರೇಖಾ ಉದಯ್ ಹೊಸಪೇಟೆ

ಡಾ. ನೀ. ಗೂ. ರಮೇಶ್ ಅವರ ಪ್ರಬಂಧ ಸಂಕಲನ “ಸರಳರೇಖೆ” ಅವಲೋಕನ ಡಾ.ರೇಖಾ ಉದಯ Read Post »

ಪುಸ್ತಕ ಸಂಗಾತಿ

“ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ

ರಂಗ ಸಂಗಾತಿ “ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ ರಚನೆ  : ಎಚ್ ಎಸ್ ಶಿವಪ್ರಕಾಶ್ಪ್ರಕಾಶಕರು  :  ಬಿ ಹೆಚ್  ಮಲ್ಲಿಕಾರ್ಜುನಆಡಳಿತಾಧಿಕಾರಿಕನ್ನಡ ಪುಸ್ತಕ ಪ್ರಾಧಿಕಾರಪ್ರಥಮ ಮುದ್ರಣ  : 2011ಪುಟಗಳು : 534 ಪ್ರತಿಯೊಂದು ದೇಶವು ಆಯಾ ಪ್ರದೇಶದ ಜನ ಜೀವನದ ಸ್ಥಳಿಯ ಸಂಪ್ರದಾಯಗಳು ಅಲ್ಲಿಯ ಕಲೆಗಳ ವಸ್ತುಗಳಾಗಿ ರೂಪುಗೊಂಡಿವೆ. ಭಾರತವೂ ವಿವಿಧ ಸಂಪ್ರದಾಯಗಳ ಜನ ಜೀವನವನ್ನು ಹೊಂದಿದ್ದು ಪ್ರತಿಯೊಂದು ಭಿನ್ನ ನಡಾವಳಿಗಳನ್ನು ಸೂಚಿಸುತ್ತವೆ. ಅದರಲ್ಲೂ ಬುಡಕಟ್ಟು ಸಮುದಾಯಗಳ ಕಟ್ಟು ನಿಟ್ಟಾದ ಸಂಪ್ರದಾಯಗಳು ಅಲ್ಲಿನ ಜೀವನ ಪದ್ದತಿಯನ್ನು ಬಿಂಬಿಸುತ್ತವೆ. ಅವು ಭಾರತದ ಜನಪದ ಸಂಸ್ಕೃತಿಯ ಅಡಿಗಲ್ಲಾಗಿ ಪರಿಣಮಿಸಿವೆ. ವೈವಿಧ್ಯಮಯ ಸಂಸ್ಕೃತಿˌ ಆಚಾರ ವಿಚಾರಗಳು ಆಯಾ ಪ್ರದೇಶಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತವೆ.ನಾಟಕಕಾರರಾದ ಡಾ. ಎಚ್ ಎಸ್ ಶಿವಪ್ರಕಾಶ್ ಅವರ *ಮದುವೆ ಹೆಣ್ಣು* ನಾಟಕವು ಜನಪದ ಸಂಸ್ಕೃತಿಯ ಬುಡಕಟ್ಟು ಸಮುದಾಯದ ಜೀವನ ಪದ್ದತಿಯ ಕಥೆಯನ್ನಾಧರಿಸಿ ರಚನೆಯಾಗಿದೆ. ಆ ಸಮುದಾಯದಲ್ಲಿ ಮದುವೆಯಾಗಬೇಕಾದರೆ ಅನುಸರಿಸಬಹುದಾದ ನಿಯಮವನ್ನು ನಾಟಕ ವಿವರಿಸುತ್ತದೆ. ಹರೆಯಕ್ಕೆ ಬಂದ ಯುವಕ ಯುವತಿಯರು ತಮ್ಮ ಸಂಗಾತಿಯನ್ನು ತಾವೇ ಹುಡುಕಿ ಕೊಳ್ಳುವ ಅವಕಾಶವಿದ್ದು. ಆ ಸಮಯ ಬಂದಾಗ ಯುವಕನು ತಾನು ವರಿಸುವ ವಧುವನ್ನು ಮದುವೆಗೆ ಮುಂಚೆ ಯುವಕ ನಾನು ಮದುವೆಯಾಗುವ ಹೆಣ್ಣನ್ನು ಯಾವುದೇ ಸಂದರ್ಭದಲ್ಲೂ ಎಂಥವರಿಂದಲೂ ಸಂರಕ್ಷಣೆ ಮಾಡಬಲ್ಲವನು. ಅಂತಹ ಸಾಮರ್ಥ್ಯ ಉಳ್ಳವನು ಎಂಬು ಸಾಬೀತುಪಡಿಸಲು  ಕಾಡಿನೊಳಗೆ ಒಬ್ಬಂಟಿಯಾಗಿದ್ದು ಗಂಡಾಳು ಒಬ್ಬನನ್ನು ಕೊಂದುˌ ಆತನ ರುಂಡವನ್ನು ತಂದು ಹೆಣ್ಣು ಕೊಡುವ ಮಾನವನಿಗೆ ಬಲಿ ಕೊಡಬೇಕಾಗುತ್ತದೆ. ಒಂದು ವೇಳೆ ಅವನು ಈ ಕಾರ್ಯ ಮಾಡಲಾಗದಿದ್ದರೆ ಅವಿವಾಹಿತನಾಗಿಯೇ ಉಳಿಯಬೇಕಾಗುತ್ತದೆ.ಈ ನಿಯಮದಂತೆ ಒಮ್ಮೆ ಊರ ಒಡೆಯನ ಮಗ ತನ್ನ ತಂದೆಯಿಂದ ನಿಯಮಗಳನ್ನು ತಿಳಿದು ತಾನು ವರಿಸುವ ಹೆಣ್ಣಿಗಾಗಿ ಕಾಡಿಗೆ ಹೋಗುತ್ತಾನೆ. ಗಂಡಾಳುವಿನೊಂದಿಗೆ ಹೋರಾಡಲು ಕಾಡೆಲ್ಲಾ ಸುತ್ತಾಡುತ್ತಾನೆ. ಒಬ್ಬನನ್ನು ಕೊಂದು ಅವನ ತಲೆ ಬುರುಡೆಯನ್ನು ತರಲು ಹರಸಾಹಸ ಪಡುತ್ತಾನೆ. ವೀರಾವೇಷದಿಂದ ಹೋರಾಡಲು ಪ್ರತಿದಿನ ಗಂಡಾಳುವಿಗಾಗಿ ಹುಡುಕುತ್ತಿರುತ್ತಾನೆ. ಬಹಳ ದಿನಗಳಾದರೂ ಯಾರೊಬ್ಬರೂ ಸಿಗದಿದ್ದಾಗˌ ಇತ್ತ ಇವನು ಬರುವಿಕೆಯನ್ನೇ ಕಾಯುತ್ತಿದ್ದ ಮದುವೆಯಾಗಬೇಕಿದ್ದ ಹೆಣ್ಣು  ಮದುವೆಯಾಗುವವನ್ನು ಬಿಟ್ಟಿರಲಾರದೆ ಅವನ ಕಷ್ಟವನ್ನು ನೋಡಲಾಗದೆ. ಅವನನ್ನೇ ಹುಡುಕಿ ಕಾಡಿಗೆ ಹೊರಡುತ್ತಾಳೆ. ಆದರೆ ಬಲಿಗಾಗಿ ತಿರುಗಾಡುತ್ತಿದ್ದ ಯುವಕನಿಗೆ ಈ ವಿಷಯ ತಿಳಿಯದಾಗಿತ್ತು. ಹೇಗಾದರೂ ಮಾಡಿ ಒಬ್ಬನನ್ನು ಕೊಂದುˌ ಅವನ ರುಂಡದೊಂದಿಗೆ ಮರಳಿ ಮದುವೆಯಾಗಬೇಕು. ಎಂದು ಹಂಬಲಿಸುತ್ತಿದ್ದ ಯುವಕ ಪ್ರತಿ ದಿನ ಪ್ರತಿ ಕ್ಷಣ ಬಲಿಗಾಗಿ ಹುಡುಕುತ್ತಲೇ ಇದ್ದನು. ಕೆಲ ದಿನಗಳ ನಂತರ ಯಾರೋ ನನ್ನನ್ನು ಹಿಂಬಾಲಿಸುತ್ತಿರುವುದು ಅರಿವಿಗೆ ಬಂತು. ಯಾರವರು ಎಂದು ಬೆನ್ನಟ್ಟಿ ಹೊರಟನು.  ಯಾವನೋ ಗಂಡಿರಬೇಕು ಎಂದು ಭಾವಿಸಿ ಮರದ ಕೆಳಗೆ ಮಲಗಿದ್ದ ಅವಳ ರುಂಡವನ್ನು ಕತ್ತರಿಸಿ ರುಂಡವನ್ನು ಹಿಡಿದು ಮಾನವನ ಮನೆ ತಲುಪಿದನು. ಈತನ ಬರುವಿಕೆಯನ್ನೇ ಕಾತುರದಿಂದ ಕಾಯುತ್ತಿದ್ದತಂದೆˌ ಮಾವ ಮತ್ತು ಪೂಜಾರಿ (ಧಾರ್ಮಿಕ ವಿಧಾನಗಳಿಂದ ಮದುವೆ ಮಾಡಿಸುವವನು) ಹಾಗೂ ಊರಿನ ಮಂದಿ. ತಲೆ ಬುರುಡೆ ಹಿಡಿದು ಬಂದ ಯುವಕನ ಉತ್ಸಾಹವನ್ನು ನೋಡಿ ಅತ್ಯಾನಂದ ಪಡುತ್ತಾರೆ. ಇಡೀ ಊರನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸುತ್ತಾರೆ. ಸಡಗರದಿಂದ ಮದುವೆಯ ಸಿದ್ದತೆ ನಡೆಯುತ್ತದೆ. ಆದರೆ… ಇದನ್ನೆಲ್ಲಾ ಸೂಕ್ಷ್ಮಮತಿಯಿಂದ ಗಮನಿಸುತ್ತಿದ್ದ ಹೆಣ್ಣೊಂದು ಓಡೋಡಿ ಬಂದುˌ  ನಿಲ್ಲಿಸಿ… ನಿಲ್ಲಿಸಿ…. ನಿಲ್ಲಿಸಿ. ನಿಮ್ಮ ಮದುವೆಯ ಸಂಭ್ರಮದ ಕಾರ್ಯಗಳನ್ನು ನಿಲ್ಲಿಸಿ. ಎನ್ನುತ್ತಾಳೆ.  ನೆರೆದಿದ್ದವರೆಲ್ಲಾ ಯಾಕೆ ?  ಕಾರಣವೇನು ? ಎಂದಾಗ.  ಈಗ ಅವನು ತಂದಿರುವ ತಲೆ ಬುರುಡೆ ಬೇರೆ ಯಾರದೋ ವ್ಯಕ್ತಿಯದಲ್ಲ. ಅಂದಾಗ ಆಚ್ಚರಿಗೊಂಡ ಜನ ಮತ್ಯಾರದು ? ಎಂದು ಪ್ರಶ್ನಿಸುವರು. ಆಗ ಆ ಹೆಣ್ಣು ಆ ತಲೆ ಬುರುಡೆ ಬೇರೆ ಯಾರದೋ ಅಲ್ಲ. ಅವನು ಮದುವೆಯಾಗಬೇಕೆಂದಿದ್ದ ಹೆಣ್ಣಿನದು. ಎಂದಾಗ ಅಲ್ಲಿದ್ದವರೆಲ್ಲಾ ಒಂದು ಕ್ಷಣ ದಿಕ್ಕೇ ತೋಚದವರಂತಾಗುತ್ತಾರೆ. ಮಮ್ಮಲ ಮರುಗುತ್ತಾರೆ. ಇಂತಹ ನೀಚ ಕೆಲಸ ಮಾಡಿದ ಆ ಯುವಕನನ್ನು ಊರಿಂದ ಬಹಿಷ್ಕಾರ ಹಾಕಿ ಆಚೆ ಕಳುಹಿಸುತ್ತಾರೆ. ಊಟ ನೀರು ಕೊಡದೆ. ಯಾರೂ ಅವನನ್ನು ಮಾತನಾಡಿಸಕೂಡದು. ಒಂದು ವೇಳೆ ಯಾರಾದರೂ ಇಂತಹ ಕೆಲಸ ಮಾಡಿದರೆ ಅಂತವರನ್ನೂ ಬಹಿಷ್ಕರಿಸಬೇಕಾಗುತ್ತದೆ. ಎಂದು ಎಚ್ಚರಿಸುತ್ತಾರೆ.ಇಂತಹ ಅವಮಾನವನ್ನು ಮತ್ತು ತಾನು ಮದುವೆ ಆಗಬೇಕಿದ್ದವಳನ್ನು ಅರಿಯದೆ ಕೊಂದೆನಲ್ಲ ಕೊರಗಿನಿಂದ ಹತಾಶೆಯಿಂದ ತನ್ನ ಬರ್ಚಿಗೆ ಕೊರಳು ಕೊಟ್ಟು ಪ್ರಾಣ ಬಿಡುತ್ತಾನೆ.ಇದಿಷ್ಟು ನಾಟಕದ ಮುಖ್ಯ ಕಥಾ ವಸ್ತುವಾಗಿದೆ. ನಾಟಕದ ಪ್ರಾರಂಭದಲ್ಲಿಯೇ ಆತ್ಮಗಳು  ಮರು ಹುಟ್ಟಿನ ರೂಪದಲ್ಲಿ ಕಾಣುತ್ತಿವೆ.  ಬೌದ್ದ ಸನ್ಯಾಸಿಗಳು ಅಲ್ಲಲ್ಲಿ ತಿರುಗಾಡುತ್ತಿರುತ್ತಾರೆ. ತಾನು ಮದುವೆಯಾಗುವ ಯುವತಿಗೆ ಯುವಕ ರಕ್ತ ಪಿಪಾಸುವಿನಂತೆ ಗೋಳಾಡುತ್ತಾ ತನ್ನ ಪೂರ್ವ ಜನ್ಮದ ಕತೆಯನ್ನು ಹೇಳಲಾರಂಭಿಸುತ್ತಾನೆ. ಇದನ್ನೆಲ್ಲಾ ಆಲಿಸಿದ ಆ ಯುವತಿ ಇದು ತನ್ನದೇ ಕಥೆ. ಅವನೇ ಇವನು. ಎಂದು ಮರು ಜನ್ಮದಲ್ಲಿ ಮದುವೆಯಾಗಲು ನಿಶ್ಚಯಿಸುತ್ತಾಳೆ.ಪ್ರೇಕ್ಷಕನಾಗಿ ನಾಟಕ ನೋಡುವ ನನಗೆ ಅನಿಸುವುದೇನೆಂದರೆ ! ವಿಧಿಯಾಟದ ಮುಂದೆ ಏನೂ ನಡೆಯುವುದಿಲ್ಲˌ ಎಂದು ಮನವರಿಕೆಯಾಗುತ್ತದೆ. ಷೇಕ್ಷ್ಸ್ ಫಿಯರ್ ನಾಟಕ ಮ್ಯಾಕ್ ಬೆತ್ ನ ಛಾಯೆ ಇಲ್ಲಿದೆ. ಗ್ರೀಕ್ ನಾಟಕಕಾರ ಸೋಫೋಕ್ಲಿಸ್ ನ ಈಡಿಪಸ್ ನಾಟಕದ ಛಾಯೇಯೂ ಇದೆ. ಭಾರತೀಯರ ನಂಬಿಕೆಯೂ ಇದೆ ಆಗಿದೆ.ಈಡಿಪಸ್ ನಾಟಕದಲ್ಲಿ ಮಗ ತಾಯಿಯನ್ನು ಮದುವೆಯಾದರೆˌ ಇಲ್ಲಿ ಯುವಕ ತಾನು ವರಿಸುವ ಹೆಣ್ಣನ್ನು ತನಗೆ ಅರಿವಿಲ್ಲದೆ ಆಕೆಯನ್ನೇ ಕೊಲ್ಲುತ್ತಾನೆ. ಷೇಕ್ಷ್ಸ್ ಫಿಯರ್ ನ ಮ್ಯಾಕ್ ಬೆತ್ ನಾಟಕದಲ್ಲಿ ಮ್ಯಾಕ್ ಬೆತ್ ಮತ್ತು ಲೇಡಿ ಮ್ಯಾಕ್ ಬೆತ್ ಸೇರಿ ತಮ್ಮ ರಾಜನನ್ನೇ ಕೊಲ್ಲುತ್ತಾರೆ. ಆತನ ರಕ್ತದ ಮಡುವನ್ನು ಕಂಡ ಇಬ್ಬರೂ ಅದೆ ಭ್ರಮೆಯಲ್ಲಿ ಯಾತನೆಯನ್ನು ಅನುಭವಿಸಿದರೆˌ ಇಲ್ಲಿ ಯುವಕ ಮರು ಜನ್ಮದಲ್ಲಿ ತಾನು ಮದುವೆಯಾಗಬೇಕಿದ್ದ ಯುವತಿಯನ್ನು ನೆನೆದು ಕೊರಗುತ್ತಾನೆ. ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಕಥಾ ವಸ್ತು ಹೊಂದಿರುವ ಎಚ್ ಎಸ್ ಪ್ರಕಾಶ ಅವರ ನಾಟಕ *ಮದುವೆ ಹೆಣ್ಣು* ಬಂಧದಲ್ಲಿ ಅತ್ಯಂತ ಗಟ್ಟಿತನವನ್ನು ಹೊಂದಿದೆ. ಈ ನಾಟಕವನ್ನು ಬಲು ನಾಜೂಕಿನಿಂದ ನಿರ್ಧೇಶಿಸಿದ ಅಸ್ಸಾಂ ನ ಪವಿತ್ರಾ ರಾಬಾ ಅವರ ರಂಗಭೂಮಿಯ ಜ್ಞಾನ ಎದ್ದು ಕಾಣುತ್ತದೆ.ಸಂಗೀತ ಸಂಯೋಜನೆ ಸಂದರ್ಭಕ್ಕೆ ಅನುಸಾರವಾಗಿ  ಇನ್ನೂ ಸ್ವಲ್ಪ ಸುಧಾರಿಸಬೇಕಿತ್ತು ಅನಿಸುತ್ತದೆ. ದೃಶ್ಯ ಸಂಯೋಜನೆಯೂ ಗೊಂದಲದಲ್ಲಿತ್ತು. ಒಂದು ದೃಶ್ಯಕ್ಕೂ ಮತ್ತೊಂದು ದೃಶ್ಯಕ್ಕೂ ಬಹಳ ವಿರಾಮ ಇದ್ದಂತಿತ್ತು.  ಆದರೆ ನಟನೆˌ ವಸ್ತಾೃಲಂಕಾರ. ಬೆಳಕು ಹಾಗೂ ಪ್ರಸಾಧನಗಳು ನಾಟಕವನ್ನು ಗುರಿ ತಲುಪಿಸಿದವು. ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲವಾದವು. ರಂಗ ತರಬೇತಿ ಪಡೆಯದ ಹವ್ಯಾಸಿ ಕಲಾವಿದರಾದರೂ  ನುರಿತವರಂತೆ ಅಭಿನಯ ಮಾಡಿ ಸೈ ಎನಿಸಿಕೊಂಡರು. ನಾಟಕದ ವಸ್ತುವನ್ನು ಪ್ರೇಕ್ಷಕರ ಮನ ಮುಟ್ಟಿಸುವಲ್ಲಿ ಯಶಸ್ವಿಯಾದರು.ನಾಟಕ ಅಸ್ಸಾಂ ನ ಬುಡಕಟ್ಟು ಜನಾಂಗದಸಂಪ್ರದಾಯದ ಭಾಗವಾಗಿದ್ದರೂˌ ಭಾಷೆ ಬೇರೆಯಾದರೂ. ಪ್ರೇಕ್ಷಕರೆಲ್ಲರೂ ಇದು ನಮ್ಮ ಜೀವನದಲ್ಲಿ ನಡೆದ ಗಂಟೆ ಇದೆ. ಪ್ರೇಕ್ಷಕರೆಲ್ಲರೂ ಈ ಕತೆ ನಮ್ಮ ಜೀವನದಲ್ಲಿ ನಡೆಯಿತೇನೋ ಎಂಬ ಭಾವನೆಯಾಯಿತು. ಪಾತ್ರಧಾರಿಗಳಾದ ವಿಜಯಪುರದ ಶ್ರೀರಂಗ ವಡೇಕರ್ ˌ ಉಡುಪಿಯ ಪುನೀತ್ˌ ಧಾರವಾಡದ ಸಾವಿತ್ರಿ ಮತ್ತು ರಂಜಿತ. ಬಳ್ಳಾರಿಯ ನಂದಕುಮಾರ ಮತ್ತು ರಂಜಿತಾ ಕೊಪ್ಪಳದ ಹುಲ್ಲೇಶ್  ಚಿತ್ರದುರ್ಗದ ಅಮಿತ್ ಇವರ ಅಭಿನಯ ಚನ್ನಾಗಿತ್ತು. ಲವಣ ಕಿಶೋರ ಅವರ ಬೆಳಕಿನ ವಿನ್ಯಾಸ ಭಾವನೆಗಳನ್ನು ಉದ್ದೀಪನಗೊಳಿಸುವಂತಿತ್ತುಥೇಯೇಟರ್ ಸಮುರಾಯ್ ಕಲಾ ತಂಡವು ರಾಜ್ಯದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರಗಳಾದˌ ನೀನಾಸಂ. ರಂಗಾಯಣ. ಶಿವಸಂಚಾರ. ಜಮುರಾ ಮುಂತಾದ ರೆಪರ್ಟಿ ಕಲಾವಿದರಂತೆ ಪ್ರಬುದ್ದತೆಯಿಂದ ಅಭಿನಯಿಸಿತು. ವೆಂಕಟೇಶ ಈಡಿಗರ*ರಾಣೇಬೆನ್ನೂರು**9008698311*

“ವಿಧಿಯಾಟಕ್ಕೆ ಬಲಿಯಾದ ಯುವ ಪ್ರೇಮಿಗಳು. (ಮದುವೆಯ ಹೆಣ್ಣು) — ರಂಗ ವಿಮರ್ಶೆ” ವೆಂಕಟೇಶ ಈಡಿಗರ Read Post »

ಪುಸ್ತಕ ಸಂಗಾತಿ

“ಸಾವಿರದ ಶರಣವ್ವ ಕನ್ನಡದ ತಾಯೇ — ಪುಸ್ತಕ ವಿಶ್ಲೇಷಣೆ” ವೆಂಕಟೇಶ ಈಡಿಗರ

ಪುಸ್ತಕ ಸಂಗಾತಿ ವೆಂಕಟೇಶ ಈಡಿಗರ “ಸಾವಿರದ ಶರಣವ್ವ ಕನ್ನಡದ ತಾಯೇ“ ಅಂಕಿತ ಪ್ರಕಾಶನಪ್ರಕಾಶಕರು ಮತ್ತು ಮಾರಾಟಗಾರರು53ˌ ಶಾಮ್ ಸಿಂಗ್ ಕಾಂಪ್ಲೆಕ್ಸ್ಗಾಂಧಿ ಬಜಾರ್ .ಮುಖ್ಯ ರಸ್ತೆಬಸವನಗುಡಿ. ಬೆಂಗಳೂರುಪುಸ್ತಕದ ಬೆಲೆ — 250 ರೂ ಜನಪದವೇ ಜನಾನುರಾಗದ ಮೂಲಮಂತ್ರ ಎಂದು ನಂಬಿ ಮುನ್ನೆಡೆಯುತ್ತಿರುವ ಬಿತ್ತಿ ಬೆಳೆಸುತ್ತಿರುವ  ಹಿರಿಯ ಸಾಹಿತಿˌ  ನಾಟಕಕಾರರು ಹಾಗೂ ಜನಪದ ಕಲಾವಿದರಾದ ಚಂದ್ರಶೇಖರ ಕಂಬಾರರು ನೆಲಮೂಲ ಸಂಸ್ಕೃತಿಯಲ್ಲಿಯನ್ನೇ ಆಧಾರವಾಗಿಟ್ಟುಕೊಂಡು ನಾಟಕˌ ಕಾವ್ಯ. ಕಾದಂಬರಿ ಕಥೆ. ರೂಪಕ ಮುಂತಾದ ಸಾಹಿತ್ಯ ಪ್ರಕಾರದ ಕೃತಿಗಳನ್ನು ರಚಿಸಿದ್ದಾರೆ ಮತ್ತು ರಚಿಸುತ್ತಿದ್ದಾರೆ. ರಂಗಭೂಮಿˌ ಸಿನಿಮಾ ಪತ್ರಿಕೆ ಮುಂತಾದ ಹಲವು ಮಾಧ್ಯಮಗಳಲ್ಲಿ ತಮ್ಮ ಆಶಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎಲ್ಲಾ ಕಲೆಗಳ ತಾಯಿಬೇರಿನಂತಿರುವ ಜನರ ಜೀವನ ವಿಧಾನದ ಮೂಲ ಸೆಲೆ ಜನಪದ ಚಟುವಟಿಕೆಗಳು ಜೀವನುತ್ಸಾಹದ ಸೆಲೆಗಳು ಎಂಬುದನ್ನು ಸಮಾಜಕ್ಕೆ ತಿಳಿಸುತ್ತಿದ್ದಾರೆ.  ಜೀವನದ ಜೀವಾಳ ಎಂದಿದ್ದಾರೆ.ಕನ್ನಡ ರಂಗಭೂಮಿಯ ಹಿರಿಮೆ ಪಾಲುದಾರರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರು ನಾಡು ಕಂಡ ಶ್ರೇಷ್ಠ ಜನಪದ ವಿದ್ವಾಂಸರು. ನೆಲಮೂಲ ಸಂಸ್ಕೃತಿಯನ್ನು ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟು ಅದರ ಸೊಗಸನ್ನು ಮುಂದಿನ ಪೀಳಿಗೆಗೆ ಧಾರೆಯಾಗಿ ಎರೆದವರು. ಜನಪದ ಸಂಗೀತˌ ಜನಪದ ಸಾಹಿತ್ಯ ಹಾಗೂ ಜನಪದ ನಾಟಕಗಳನ್ನು ರಚಿಸುವುದರಿಂದಲೇ ನಾಡಿನ ನೆಲಮೂಲ ಸಂಸ್ಕೃತಿಗೆ ಘನತೆ ತಂದವರು. ಅದರಲ್ಲೂ ನಾಟಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಹಿರಿಯರಿಗಾಗಿ ಅನೇಕ ಪತಿಹಾಸಿಕ. ಜನಪದ. ವಾಸ್ತವವಾದಿ ಮುಂತಾದ ವಿಷಯಗಳನ್ನಿಟ್ಟುಕೊಂಡು ನಾಟಕ ರಚಿಸಿದವರು. ಬೆಳೆಯುವ ಸಿರಿ ಮೊಳಕೆಯಲ್ಲಿ ಆಗಿರುವುದರಿಂದ   *ಸಾವಿರದ ಶರಣವ್ವ ಕನ್ನಡದ ತಾಯೇ* ಎಂಬ ಏಕಾಂಕ ನಾಟಕಗಳ ಸಂಕಲವನ್ನು  ಮಕ್ಕಳಿಗಾಗಿ ರಚಿಸಿದ್ದಾರೆ. ಇನ್ನೂರ ನಾಲ್ಕು ಪುಟಗಳಿರುವ ಈ ಪುಸ್ತಕವನ್ನು ಕ್ರಿ ಶ 2023 ರಲ್ಲಿ  ಅಂಕಿತ ಪ್ರಕಾಶನವು ಮುದ್ರಣಗೊಳಿಸಿದೆ. ಮಕ್ಕಳಿಗಾಗಿಯೇ ರಚನೆಗೊಂಡ ಈ ಕೃತಿಯು ಹನ್ನೆರಡು ಏಕಾಂಕ ನಾಟಕಗಳನ್ನು ಒಳಗೊಂಡಿದೆ.ಮಕ್ಕಳ ರಂಗಭೂಮಿಯಲ್ಲಿ ಮಕ್ಕಳಿಗಾಗಿ ಮತ್ತು ಮಕ್ಕಳು ಪ್ರದರ್ಶನ ಮಾಡುವ  ಮಕ್ಕಳ ನಾಟಕಗಳೇ ರಚನೆಯಾಗುತ್ತಿಲ್ಲ. ಮತ್ತು  ರಚಿಸುವವರಿಲ್ಲ ಎಂಬ ಕೊರಗನ್ನು ಚಂದ್ರಶೇಖರ ಕಂಬಾರರು ಹೋಗಲಾಡಿಸಿದವರು. ಕಂಬಾರರೇ ರಚಿಸಿರುವ ಅಲಿಬಾಬ ಮತ್ತು 40 ಜನ ಕಳ್ಳರು. ಪುಷ್ಪರಾಣಿ ಮುಂತಾದ ಮಕ್ಕಳ ನಾಟಕಗಳಿವೆ. ಇವುಗಳ ಜೊತೆಗೆ ಮಕ್ಕಳು ಸುಲಭವಾಗಿ ಅಭಿನಯಿಸಬಹುದಾದ ಹನ್ನೆರಡು ನಾಟಕಗಳನ್ನು *ಸಾವಿರದ ಶರಣವ್ವ ಕನ್ನಡದ ತಾಯೆ* ಎಂಬ ಶೀರ್ಷಿಕೆಯ ಅಡಿಯಲ್ಲಿ ಮಕ್ಕಳ ರಂಗಭೂಮಿಗೆ ಕೊಡುಗೆ ನೀಡಿದ್ದಾರೆ. ಇವು ಜನಪದˌ ಪೌರಾಣಿಕ. ಐತಿಹಾಸಿಕ ನಾಟಕಗಳ ವಸ್ತು ಒಳಗೊಂಡವುಗಳಾಗಿವೆ.ತಂದೆ ಮಾತನ್ನು ಪರಿಪಾಲಿಸಿ ತಾಯಿಯ ಶಿರವನ್ನು ಕಡಿದ ಪರಶುರಾಮˌ  ವೀರ ಮೈಯೂರˌ ಚಾಲುಕ್ಯರ ಚಕ್ರೇಶ್ವರˌ ರಾಷ್ಟೃಕೂಟ ದೊರೆ ಅಮೋಘವರ್ಷ ನೃಪತುಂಗˌ ಬಾಹುಬಲಿˌ ಕಲ್ಯಾಣದ ಕೂಗುˌ  ಜಕಣಾಚಾರ್ಯˌ ಸಾಮ್ರಾಜ್ಯದ ಕತೆ. (ವಿಜಯನಗರ ಸಾಮ್ರಾಜ್ಯ ಸ್ಥಾಪನೆ)ˌ ಪುರಂದರದಾಸರುˌ ಸಾವಳಿಗಿ ಶಿವಲಿಂಗˌ ಕೆಂಪೇಗೌಡ ಹಾಗೂ ಕಿತ್ತೂರು ಚನ್ನಮ್ಮ  ಎಂಬ ಹನ್ನೆರಡು ನಾಟಕಗಳು ಮಕ್ಕಳಲ್ಲಿ ಕನ್ನಡ ನಾಡಿನ ವಿವಿಧ ಕಾಲಘಟ್ಟದ ಸಾಮಾಜಿಕ. ರಾಜಕೀಯˌ ಸಂಸ್ಕೃತಿˌ ಸಂಪ್ರದಾಯ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಯನ್ನು ತಿಳಿಸಲು ಸಹಕಾರಿಯಾಗಿವೆ.ಪಿತೃ ವಾಕ್ಯ ಪರಿಪಾಲಕನಾಗಿ ತಾಯಿಯ ಶಿರವನ್ನೇ ಕಡಿದ ಪರಶುರಾಮನ ಕತೆಯು ಕೊನೆಗೆ ತಾಯಿಯ ಜೀವವನ್ನೇ ವರವಾಗಿ ಪಡೆದು ತನ್ನ ಮಾತೃಹತ್ಯೆಯ ದೋಷದಿಂದ ಮುಕ್ತನಾಗುವ ಕತೆ ತಂದೆ ಮತ್ತು ತಾಯಿಯ ಮಹತ್ವವನ್ನು ಸಾರುತ್ತದೆ. ಕನ್ನಡದ ಮೊದಲ ಸಾಮ್ರಾಜ್ಯವೆಂದೆ ಹೇಳಿಕೊಳ್ಳಬಹುದಾದ ಕದಂಬ ವಂಶ ಸಂಸ್ಥಾಪಕನಾದ ಮೈಯೂರ ವರ್ಮ ಮೈಯೂರಶರ್ಮನಾಗಿ ಸಾಮ್ರಾಜ್ಯ ಕಟ್ಟಿದ ಕತೆಯಾಗಿದೆ. ಚಾಲುಕ್ಯ ಚಕ್ರೇಶ್ವರ ಎಂದು ಖ್ಯಾತನಾದ ಹಿಮ್ಮಡಿ ಪುಲಿಕೇಶಿಯು ದಕ್ಷಿಣ ಪಥೇಶ್ವರನಾಗಿ ಉತ್ತರದ ಹರ್ಷವರ್ಧನನ್ನು ಸೋಲಿಸಿದ ಸಾಹಸದ ಕತೆಯನ್ನು ಮನೋಜ್ಞವಾಗಿ ವಿವರಿಸಲಾಗಿದೆ.   ರಾಷ್ಟೃಕೂಟರ ಸಂಸ್ಥಾಪಕ ಅಮೋಘವರ್ಷ ನೃಪತುಂಗನು ಕನ್ನಡವನ್ನು ಹೇಗೆ ಉತ್ತುಂಗ ಮಟ್ಟಕ್ಕೆ ಹೊಯ್ದನು ಎಂದು ತಿಳಿಸುತ್ತದೆ.ಭರತ ಮತ್ತು ಬಾಹುಬಲಿಯ ಕತೆಯಂತೂ ತಿಳಿಯೇ ಇದೆ . ಚಕ್ರರತ್ನದ ಮೂಲಕ ಸಹೋದರರೆಲ್ಲರನ್ನೂ ಜಯಿಸಿದ ಭರತ ತಮ್ಮ ಬಾಹುಬಲಿಯನ್ನು ಸಕಲ ಯುದ್ದದಲ್ಲೂ ಗೆಲ್ಲಲಾಗದೆ ಕೊನೆಗೆ ಅಣ್ಣ ಭರತನಿಗೆ ಸಾಮ್ರಾಜ್ಯವನ್ನೇ ಬಿಟ್ಟು ಬಾಹುಬಲಿ ಶ್ರವಣಬೆಳಗೋಳಕ್ಕೆ ಹೋದ ಕತೆಯನ್ನು ಹೇಳುತ್ತದೆ. *ಕಲ್ಯಾಣದ ಕೂಗು* ನಾಟಕವು ಹನ್ನೆರಡನೇ ಶತಮಾನದ ಕಲ್ಯಾಣದ ಕ್ರಾಂತಿಯ ವಸ್ತುವನ್ನು ಹೊಂದಿದೆ. ಅಂತರ್ಜಾತಿ ವಿವಾಹ ಮಾಡಿ ಕ್ರಿಂತಿಗೆ ಕಾರಣನಾದ ಬಸವಣ್ಣ ಮತ್ತು ಶರಣರನ್ನು  ಬ್ರಾಹ್ಮಣ ಕುಲದವರು ಹೇಗೆ ಓಡಾಡಿಸಿ ಕೊಂದರು ಎಂಬ ಕತೆಯನ್ನು ವಿವರಿಸುತ್ತದೆ. ಶಿಲ್ಪಕಲೆಯ ಜತುರನಾದ ಜಕಣಾಚಾರ್ಯ ಮತ್ತು ಆತನ ಕೌಟುಂಬಿಕ ಕತೆಯನ್ನು ಅರುಹುವ *ಜಕಣಿಚಾರ್ಯ* ನಾಟಕವು ಕಲೆ ರಕ್ತಗತವಾಗಿ ಬರುತ್ತದೆ ಎಂಬುದರ ಜೊತೆಗೆ ತನ್ನ ಹೆಂಡತಿಯ ಮೇಲೆ ಸಂಶಯ ಪಟ್ಟು ಕುಟುಂಬವನ್ನೇ ತೊರೆದು ಬಂದು ಹೊಯ್ಸಳರ ಆಸ್ಥಾನದಲ್ಲಿದ್ದ ಜಕಣಾಚಾರ್ಯರು ಕೊನೆಗೆ ತಂದೆಯನ್ನು ಹುಡುಕಿಕೊಂಡು ಬಂದ ಡಂಕಣನು ತಂದೆಯನ್ನು ಮೀರಿಸುವಷ್ಟು ಶಿಲ್ಪಕಲಾ ಪಂಡಿತನಂತೆ ಬೆಳೆಯುತ್ತಾನೆ.  *ಸಾಮ್ರಾಜ್ಯದ ಕತೆ* ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕಬುಕ್ಕರ ಜೀವನ ಮತ್ತು ಸಾಮ್ರಾಜ್ಯ ಕಟ್ಟಿದ ಪರಿಯನ್ನು ವಿವರಿಸುತ್ತದೆ. *ಪುರಂದರದಾಸರು* ನಾಟಕವೂ ಇದೆ ಹನ್ನೆರಡನೆಯ ಶತಮಾನದ ಕತೆಯಾಗಿದ್ದು ಶ್ರೀನಿವಾಸನಾಯಕ ಎಂಬ ಶ್ರೀಮಂತ ಬಂಗಾರದ ವ್ಯಾಪಾರಿಯೊಬ್ಬನು ಜೀವನದಲ್ಲಿ ಭಕ್ತಿಯನ್ನು ಹೊತ್ತಿಸಿಕೊಂಡು ದಾಸನಾಗುತ್ತಾನೆ. ಅವನೇ ಪುರಂದರದಾಸ. ಈ ಕತೆಯನ್ನು ವಿವರಿಸುತ್ತದೆ.  ಕೆರೆಗೆ ಹಾರವಾದ ಕತೆಯಂತೆ ಬೆಳಗಾವಿಯ ಭಾಗದಲ್ಲೂ ಈ ಘಟನೆ ನಡೆಯುತ್ತದೆ. ಹಿಂದು — ಮುಸ್ಲಿಂ ಬೇಧವನ್ನು ತೊಡೆದು ಹಾಕಲು ಸೂಫಿ ಮತ್ತು ಭಕ್ತಿಪಂಥಗಳು ಉದಯವಾಗುತ್ತವೆ. ಅಂತೆಯೇ ಸಾವಳಿಗಿ ಶಿವಲಿಂಗನೂ ಸಾಮರಸ್ಯದ ಬದುಕಿಗೆ ನಾಂದಿಯಾಡುತ್ತಾನೆ.ಕನ್ನಡ ನಾಡಿನ ಹೆಮ್ಮೆಯ ಪುತ್ರ ಕೆಂಪೇಗೈಡರನ್ನು ವಿಜಯನಗರದ ಸಾಮಂತ ಅರಸರಾಗಿ ಬೆಂಗಳೂರನ್ನು ನಿರ್ಮಾಣ ಮಾಡಿದ ಹಾಗೂ ಕೆರೆ ಕಟ್ಟೆ. ಕೋಟೆ ಅರಮನೆಗಳನ್ನು ಕಟ್ಟಿ ನಾಡಿನ ಸಮೃದ್ದಿಗೆ ಕಾರಣರಾದ ಇತಿಹಾಸವನ್ನು ಈ ನಾಟಕ ತಿಳಿಸಿಕೊಡುತ್ತದೆ.ಇಲ್ಲಿರುವ ಹನ್ನೆರಡು ನಾಟಕಗಳಲ್ಲಿ ಹಲವು ಜಾನಪದ ಕತೆಯ ಮೂಲವನ್ನು ಹೊಂದಿವೆ. ಕೆಲವು ಇತಿಹಾಸದ ವಸ್ತುವನ್ನು ಹೊಂದಿದ್ದು ಮತ್ತೆ ಕೆಲವು ಪೌರಾಣಿಕ ವಿಷಯಾಧಾರಿತ ನಾಟಕಗಳಾಗಿವೆ. ಎಲ್ಲವೂ ಮಕ್ಕಳಲ್ಲಿ ನೈತಿಕ ಮೌಲ್ಯವನ್ನು ಬಿತ್ತುವಂತವುಗಳೇ ಆಗಿವೆ. ಜನಪದ ಉಳಿದರೆ ಎಲ್ಲವೂ ಉಳಿದು ಬೆಳೆಯುತ್ತದೆ ಎಂಬ ಲೇಖಕರ ಆಶಯ ಇಲ್ಲಿನ ಎಲ್ಲಾ ನಾಟಕಗಳಲ್ಲಿ ಎದ್ದು ಕಾಣುತ್ತದೆ. ನಾಟಕಗಳ ಮೂಲಕ ಮಕ್ಕಳಲ್ಲಿ  ನೈತಿಕ ಪ್ರಜ್ಞೆ. ಇತಿಹಾಸದ ಜ್ಞಾನ ಹಾಗೂ ಪೌರಾಣಿಕ ಕತೆಗಳ ಅರಿವನ್ನು ಮೂಡಿಸುವ ಮೂಲಕ ವಿಚಾರವಂತರನ್ನಾಗಿ ಮಾಡಬೇಕೆಂಬ ಆಶಯ ಲೇಖಕರದ್ದಾಗಿದೆ. ಕದಂಬˌ ಚಾಲುಕ್ಯˌ  ರಾಷ್ಟೃಕೂಟರು ವಿಜಯನಗರ ಸಾಮ್ರಾಜ್ಯ. ಬಸವಣ್ಣನವರ ಕಾಲˌ ಕೆಂಪೆಗೌಡ ಹಾಗೂ ಕಿತ್ತೂರರಾಣಿ ಚನ್ನಮ್ಮ ಇವರ ಕಾಲದ ಐತಿಹಾಸಿಕ ಜ್ಞಾನವನ್ನು ತಮ್ಮ ನಾಟಕಗಳ ಮೂಲಕ ತಿಳಿಸಿದ್ದಾರೆ. ಹಾಗೆಯೇ ಪುರಂದರದಾಸರು. ಬಾಹುಬಲಿ. ಸಾವಳಿಗಿ ಶಿವಲಿಂಗ ಜಕಣಾಚಾರ್ಯರಂತವರ ಜೀವನ ಸಾಧನೆಯನ್ನೂ ಕತೆಯಾಗಿ ರೂಪಾಂತರಿಸಲಾಗಿದೆ.ಇಲ್ಲಿರುವ ಹನ್ನೆರಡು ನಾಟಕಗಳೂ ಏಕಾಂಕ ನಾಟಕಗಳಾಗಿದ್ದು ಶಾಲಾ ಕಾಲೇಜುಗಳಲ್ಲಿ ಮತ್ತು ಸಣ್ಣ ಪುಟ್ಟ ತಂಡಗಳಲ್ಲಿ ನಾಟಕ ತಯಾರಿಸಿ ಪ್ರದರ್ಶಿಸಲು ಅನುಕೂಲವನ್ನು ಹೊಂದಿವೆ. ಅತ್ಯಂತ ಸರಳ ಬಂಧದಲ್ಲಿ ರಚನೆಗೊಂಡಿರುವ ನಾಟಕಗಳು ಕತೆಯಂತೆ ನಿರಂತರವಾದ ದೃಶ್ಯಗಳನ್ನು ಹೊಂದಿರುವುದರಿಂದ ಪ್ರದರ್ಶನದ ತಾಂತ್ರಿಕ ತೊಂದರೆ ಎದ್ದು ಕಾಣುತ್ತದೆ. ದೃಶ್ಯಗಳು ಒಂದರ ನಂತರ ಒಂದಾಗಿ ಬರುವುದರಿಂದ ನಟರಿಗೆ ಅಭಿನಯಿಸಲು ತೊಂದರೆಯೂ ಆಗಬಹುದು ಎನಿಸುತ್ತದೆ. ಒಂದು ದೃಶ್ಯದಲ್ಲಿರುವ ಪಾತ್ರಧಾರಿಗಳು ಮುಂದೆ ಬರುವದೃಶ್ಯದಲ್ಲಿಯೂ ಬರುವುದರಿಂದ ನಿರಂತರವಾಗಿ ಅದೆ ಪಾತ್ರಗಳು ಅಭಿನಯಿಸಲು ತೊಡಕಾಗಬಹುದು ಎನಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಬದಲಿ ಪಾತ್ರಗಳು ಬರುವಂತೆ ಇದ್ದರೆ ಮತ್ತು ಮಧ್ಯೆ ಮಧ್ಯೆ ಸಂಗೀತ ಹಾಗೂ ನಾಟಕೀಯ ಸನ್ನಿವೇಷ ಬಂದರೆ ಅಭಿನಯಿಸಲು ಅನುಕೂಲವಾಗಹುದು ಎನಿಸುತ್ತದೆ. ಆದರೆ…ˌ ಇವು ಪಠ್ಯ ನಾಟಕಗಳಾದ್ದರಿಂದ ಹೀಗಿರಬಹುದು. ಪ್ರದರ್ಶಕ್ಕೆ ಬಂದಾಗ ನಿರ್ಧೇಶಕ ಮತ್ತು ನಟರ ಜಾಣ್ಮೆಯಿಂದ ಸಂಗೀತˌ ನಾಟಕೀಯತೆ ಹಾಗೂ ನಿರಂತರತೆಯ ತಾತ್ರಿಕ ದೋಷಗಳು ನಿವಾರಣೆಯಾಗಹುದು. ಲೇಖಕರ ಮತ್ತೊಂದು ಸಂತೃಪ್ತ ಭಾವ ಯಾವುದೆಂದರೆ ಇಂತಹ ಮಹನೀಯರೆಲ್ಲಾ ಕನ್ನಡದ ನೆಲದಲ್ಲಿ ಹುಟ್ಟಿ ಬೆಳೆದು ಘನವಾದ ಸಾಧನೆ ಮಾಡಿದ್ದಾರೆಲ್ಲ ಅದೆ ಕನ್ನಡದ ಹಿರಿಮೆ ಎನ್ನುತ್ತಾರೆ. ಅಂತಹ ಹಿರಿಮೆಯುಳ್ಳ ಕನ್ನಡ ನಾಡಿನಲ್ಲಿ ಹುಟ್ಟಿರುವುದೂ ನಮ್ಮ ಪುಣ್ಯ ಎಂಬ ಭಾವನೆ ನಮ್ಮಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ತಮ್ಮ ನಾಟಕಗಳನ್ನು ಮಕ್ಕಳಿಗೆ ಅನುಕೂಲವಾಗುವಂತೆ ರಚಿಸಿದ್ದಾರೆ. ನಾಡು ನುಡಿ ನೆಲ ಜಲದ ವಿಷಯ ಹಾಗೂ ಸಂಸ್ಕೃತಿಕಯನ್ನು ಕಾಪಾಡುವ ಜವಾಬ್ದಾರಿಯನ್ನು ನಾವು ಬೆಳೆಸಿಕೊಳ್ಳಬೇಕಿದೆ ಎಂಬುದನ್ನು ನಾಟಕಗಳು ತಿಳಿಸುತ್ತವೆ. ನಾಡಿನ ಸಮಸ್ತ ಕಲಾವಿದರು. ನಿರ್ದೇಶಕರುˌ ನಾಟಕ ತಂಡಗಳು ಹಾಗೂ ಪೋಷಕರು ಮಕ್ಕಳು. ಶಾಲಾ ಕಾಲೇಜಿನ ಶಿಕ್ಷಕರು ಈ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಲಿ ಎಂಬ ಆಶಯ ಈ ಲೇಖನದ್ದಾಗಿದೆ. ವೆಂಕಟೇಶ ಈಡಿಗರರಾಣೇಬೆನ್ನೂರು

“ಸಾವಿರದ ಶರಣವ್ವ ಕನ್ನಡದ ತಾಯೇ — ಪುಸ್ತಕ ವಿಶ್ಲೇಷಣೆ” ವೆಂಕಟೇಶ ಈಡಿಗರ Read Post »

ಪುಸ್ತಕ ಸಂಗಾತಿ

“ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩” ವೈ.ಎಂ.ಯಾಕೊಳ್ಳಿ

ಪುಸ್ತಕ ಸಂಗಾತಿ ವೈ.ಎಂ.ಯಾಕೊಳ್ಳಿ “ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩”      ಕನ್ನಡದಲ್ಲಿ ಹೈಕು ಕಾವ್ಯ ಬಂದು ಅರ್ಧಶತಮಾನವೇ ಆಗಿರಬೇಕು. ೧೭೦ ರ ದಶಕದಲ್ಲಿ ಡಾ.ಕೆ.ಬಿ ಬ್ಯಾಳಿಯವರು ಮೊದಲ ಬಾರಿಗೆ ಕನ್ನಡದಲ್ಲಿ ಹೈಕು ಬರೆದರು . ಮತ್ತು ಕೆಲವು ಹೈಕುಗಳನ್ನು ಅನುವಾದ ಮಾಡುವ ಮೂಲಕ ಹೈಕು ಕಾವ್ಯವನ್ನು ಪರಿಚಯಿಸಿದರು . ಇದು ಮೂಲತ: ಜಪಾನಿ ಭಾಷೆಗೆ ಸೇರಿದ ಕಿರು ಪದ್ಯ ಪ್ರಕಾರ. ಇದನ್ನು ಭಾರತಕ್ಕೆ ತಂದವರು ವಿಶ್ವ ಕವಿ ರವೀಂದ್ರರೇ ಎಂದು ಹೇಳಲಾಗುತ್ತದೆ.     ಡಾ. ಬ್ಯಾಳಿಯವರ ನಂತರದಲ್ಲಿ ಹಲವಾರು ಜನ ಹೈಕು ಬರೆಯತೊಡಗಿದರು. ಈಗಂತೂ ಹೈಕು ಕಾವ್ಯ ಬರೆಯಲೆಂದೇ ಹುನಗುಂದದ ಸಿದ್ದಲಿಂಗಪ್ಪ ಬೀಳಗಿಯಂಥವರು ಸಾಮಾಜಿಕ ಜಾಲತಾಣಗಳ ಗುಂಪನ್ನೆ ರಚಿಸಿದರು. ಒಬ್ಬೊಬ್ಬರೆ ನಾಲ್ಕು ಹ್ಯಕು ಸಂಕಲನಗಳನ್ನು ತಂದ ಉದಾಹರಣೆಗಳು ಇವೆ. ಚಿತ್ರದುರ್ಗದ ಮನೋಜ್ ಮಕರಂದ, ಹುನಗುಂದದ ಸಿದ್ದಲಿಂಗಪ್ಪ ಬೀಳಗಿಯವರು,ಬಾಗಲಕೋಟೆಯ ಶ್ರೀ ಬಿ .ಎಸ್ .ಬಿಜಾಪೂರ ಅವರು  ಈ ದಿಶೆಯಲ್ಲಿ ಅತಿ ಹೆಚ್ಚು ಹೈಕು ಸಂಕಲನಗಳನ್ನು ಕೊಟ್ಟಿದ್ದಾರೆ. ಈಗ ಹತ್ತಾರು ಜನರ ಹೈಕು ಸಂಕಲನಗಳು ಬಂದಿವೆ.           ಹೈಕು ೫/೭/ ೫ ಸಿಲೆಬಲ್ ಗಳ ಗಳಲ್ಲಿ ರಚಿತವಾಗುವ ಮೂರು ಸಾಲಿನ ಚಂದೋಪ್ರಕಾರ ಆದರೆ ಕನ್ನಡದಲ್ಲಿ ಸಿಲೆಬಲ್ ಗಳನ್ನು ಅಕ್ಷರಗಳೆಂದು ತಿಳಿದು ೫/೭/೫ ಅಕ್ಷರಗಳಿಗೆ ಸೀಮಿತಗೊಳಿಸಿದ ಹೈಕು ಕಾವ್ಯವನ್ನು ಬರೆಯುವ ಪದ್ಧತಿಯನ್ನು ಡಾ ಕೆ .ಬಿ ಬ್ಯಾಳಿಯವರು ಹಾಕಿದರು . ಅವರ ದಾರಿಯಲ್ಲಿ ಇಂದು ನೂರಾರು ಜನ ಹೈಕು ಬರೆಯುತ್ತಿದ್ದಾರೆ. ಹತ್ತರು ಹೈಕು ಸಮಕಲನಗಳೂ ಬಂದಿವೆ. ಆದರೆ ಇನ್ನೊಂದು ಬರ್ಗ ಇದೆ./. ಡಾ. ಸಿ ರವೀಂದ್ರನಾಥ, ರಮ್ಜಾನ್ ಹೆಬಸೂರ,ದೊಡ್ಡಣ್ನ ಗದ್ದನಕೇರಿ, ಡ ಪ್ರಕಸ ಖಾಡೆ, ಮನೋಜ ಮಕರಂದ  ಮೊದಲಾದವರು ಮೂರು ಸಾಲಿನ ಕಿರು ಪದ್ಯಪ್ರಕಾರವನ್ನು ಇರಿಸಿಕೊಂಡು ೫/೭/೫ ಅಕ್ಷರಗಳಿಗೆ ಅಷ್ಟು ಮಹತ್ವ ಕೊಡದೆ ಮೂರು ಸಾಲುಗಳ ಕವಿತೆಯನ್ನು ಹೈಕು ಎಂದು ಕರೆದು ಸಂಕಲನ ತಂದಿದ್ದಾರೆ. ಕೆಲವರು ಈ ಪದ್ದತಿಯನ್ನೂ ಅನುಸರಿಸಿರುವದು ಉಂಟು. ಒಟ್ಟಿನಲ್ಲಿ ಈ ಎರಡೂ ಬಗೆಯ ಹೈಕು ಸಂಲನಗಳು ಈಗ ಕನ್ನಡದಲ್ಲಿ ಬರುತ್ತಿವೆ. ಇದೆ ಸಾಲಿಗೆ ಸೇರಿದವರು ಧಾರವಾಡದ ಶ್ರೀ ರಾಮಚಂದ್ರ ಕುಲಕರ್ಣಿಯವರು. ವೃತ್ತಿಯಿಂದ ಬ್ಯಾಂಕ್ ಅಧಿಕಾರಿಯಾಗಿ ಈಗ ತಮ್ಮ ಸೇವೆಗೆ ರಾಜಿನಾಮೆ ಕೊಟ್ಟು ಪೂರ್ಣ ಸಾಹಿತ್ಯ ಸೇವೆಗೆ ಸಮರ್ಪಿಸಿಕೊಂಡಿರುವ ಶ್ರೀಯುತರ ಹೈಕುಗಳ ಮೂರು ಸಂಕಲನ ತಂದಿದ್ದಾರೆ. ಇನ್ನೆರಡು ಸಮಕಲನ ಪ್ರಕಟಣೆಯ ಹಂತದಲ್ಲಿವೆ.  ಅವು ೫/೭/೫ ಅಕ್ಷರಗಳ ಪರಿಮಿತಿಗೆ ಸೇರಿದ ಹೈಕುಗಳಲ್ಲ. ಮೂರು ಸಾಲಿನ ಸ್ವತಂತ್ರ ಮುಕ್ತಕಗಳು ಎನ್ನುವದನ್ನು ಗಮನಿಸಬೇಕು. ಅಕ್ಷರಮಿತಿಕಾವ್ಯಕ್ಕೆ ಕುತ್ತು ಹಾಗಾಗಿನಾ ಲಂಘನ ಮಾಡಿದೆ (ನನ್ನ ರಚನೆ) ಎನ್ನುವದು ಅವರ ವಿಚಾರ. ಇಲ್ಲಿ ಮೂರು ಸಾಲಿವೆ ಅದರೆ ಅಕ್ಷರಗಳ ಮಿತಿಯಿಲ್ಲದ ರಚನೆಗಳು.      ಹಾಗೆ ನೋಡಿದರೆ ಈ ಬಗೆಯ ಹೈಕುಗಳನ್ನು ಪ್ರಯೋಗ ಮಡಿದ ಸಿ ರವೀಂದ್ರನಾಥ  ಮೊದಲಾದವರಿಗಿಂತ ಮುಂಚೆಯೇ ಹೈಕು ಬರೆದವರು ಶ್ರೀ ರಾಮಚಂದ್ರ ಕುಲಕರ್ಣಿಯವರು ೧೯೯೯ ರಲ್ಲಿಯೇ ಅಂದರೆ ಇಂದಿಗೆ ೨೫ ವರ್ಷಗಳ ಹಿಂದೆಯೇ   ಅವರ ಹೈಕು ಸಂಕಲಕನ ಬಂದಿದ್ದವು.  ಒಂದೆರಡು ಸಂಕಲನಗಳಂತೂ ಮೂರು ಮೂರು ಮುದ್ರಣ ಕಂಡಿದ್ದವು.  ಹಾಯ್ ಹಾಯ್ಕು ಸರಣಿಯಲ್ಲಿ ಐದು ಸಂಕಲನಗಳನ್ನು ಅವರು ತಯಾರಿಸಿದ್ದಾರೆ ಈಗಾಗಲೇ ಮೂರು ಪ್ರಕಟವಾಗಿದ್ದು ಇನ್ನೆರಡು ಪ್ರಕಟಣೆಯ ಹಂತದಲ್ಲಿವೆ. ಅವರೇ ಹೇಳಿಕೊಂಡಂತೆ ಸುಮರು ೨೫೦೦ ಹೈಕುಗಳನ್ನು ರಚಿಸಿದ ಹೈಕು ಕವಿ ಅವರಾಗಿದ್ದಾರೆ.        ಹಾಯ್ ಹಾಯಕು -೩  ಸಂಕಲನ ಈಗ ನನ್ನ ಕ್ಯಲಿದೆ. ಅವರ ಹಾಯ್ ಹಾಯಕು ಸೀರಿಸ್ ನಲ್ಲಿ ಇದು ಮೂರನೆಯ ಕೃತಿಯಾಗಿದೆ. ಇಲ್ಲಿ ಸುಮಾರು ೪೫೦ ರಷ್ಟು ಹೈಕುಗಳನ್ನು ಒಂಬತ್ತು ಭಾಗವಾಗಿಸಿದ್ದಾರೆ ಮೊದಲ ಭಾಗಕ್ಕೆ ಯಾವುದೆ ಹೆಸರು ಕೊಡದೆ ಇರುವ ಕವಿ ನಂತರದಲ್ಲಿ ಉಲ್ಕಾಪಾತ(೨೬ ಹೈಕು)ದಿನದರ್ಶಿಕೆ ( ೧೭) ಮೋಡಗಳು (೧೪ ಹೈಕು)ನಿದ್ರೆ ( ೪೦  ಹೈಕುಗಳು) ಗಾಳಿಪಟ ( ೧೬ ಹೈಕುಗಳು )ಗುಡ್ಡ (೧೬ ಹೈಕುಗಳು),ಮೀನು ಮಾರ್ಕೆಟ್ಟು ( ೨೯ ಹೈಕುಗಳು)ಆಕಾಶ (೮ ಹ್ಯಕುಗಳು) ಹೀಗೆ ಬೇರೆಬೇರೆ ಭಾಗವಾಗಿಸಿ ಸಮಕಲನದಲಕ್ಲಿ ನೀಡಿದ್ದಾರೆ.      ರಾಮಚಂದ್ರ ಕುಲಕರ್ಣೀಯವರು ಬರೀ ಹೈಕು ಕವಿಗಳಲ್ಲ, ಹೈಕು ಮೀಮಾಂಸಕರೂ ಹೌದು. ಅವರ ಸಂಕಲನಗ ಆರಂಭದ ಪ್ರಸ್ತಾವಣೆಯಲ್ಲಿ ಹೈಕು ಕಾವ್ಯ ರಚಿನೆ ಕುರಿತ ಚಿಮತನೆ ಮೂಡಿ ಬಂದಿರುವದು ಉಪಯುಕ್ತವಾಗಿದೆ. ಅವರ ಹುಕುಗಳಲ್ಲಿ ಝೆನ್ ತತ್ವಜ್ಞಾನ ಅವಲಂಬಿಸಿದ ಬುದ್ದನ ತತ್ವಗಳನ್ನು ಸಾರುವ ಹಾಗೆಯೇ ನಿಸರ್ಗದ ಅಂತಸತ್ವ ಹೊಂದಿದ ಹೈಕು ಕಾವ್ಯ ತುಂಬ ತಾಜಾ ಸರಸ ಸುಂದರವಾಗಿ ಅರಳಿವೆ. ಬದುಕಿನ ತಾತ್ವಿಕ ಚಿಂತನೆ ಮಡುವ ಅನುಭಾವ ಪೂರ್ಣ ಹ್ಯಕಿಗೆ ಉದಾಹರಣೆಯಾಗಿ ಎಲ್ಲರೂ ಸಾಯುತ್ತೇವೆ.ಒಬ್ಬರಿಗೂ ನೆನಪಿಲ್ಲ ‘ಹಃ’ಮರೆವು ಸಾವಿಗೆ ವರ ಎಂಥ ಸುಂದರ ಸತ್ಯ! ಮರೆತಿದ್ದೇವೆ ಎಂತಲೇ ನಾವು ಆರಾಮ ಇದ್ದೇವೆ.   ಗೊತ್ತೇ ಸಖಿ ? ಹಕ್ಕಿಪಕ್ಕಿನಮಗಿಂತ ಮೊದಲೇಎದ್ದಿವೆ! ಗೆದ್ದಿವೆ! ಎದ್ದಿವೆ ಎನ್ನುವದು ಮತ್ರವಲ್ಲ ನಮ್ಮ ಮೇಲೆ ನಿಸರ್ಗ ಮಡಿದ ವಿಜಯ ಗೆದ್ದಿವೆ ಕೂಡಾ! ಇದೇ ನಿಜವಾದ ಸತ್ಯ. ಎಷ್ಟೆಲ್ಲ ಹೊಸರೋಗ!ಏನೆಲ್ಲ ಔಷಧಿ!ಪಥ್ಯ !ನರಳಿಕೆಯೊಂದೇ ಸತ್ಯ ವಾಸ್ತವವನ್ನು ಹೇಳುವ ಹೈಕು ಇದು. ನಾವು ನಿಸರ್ಗಕ್ಕೆ ಮಡಿದ ಅಘಾತದಿಂದ ಇಂದು ಪ್ರಾಣಿ ಪಕ್ಷಿಗಳು ಮನುಷ್ಯನ ಹೆಜ್ಜೆ ಕಂಡರೂ ಸಹಿಸಿಲಾರವು ಅವು ನಮ್ಮನ್ನಗಲಿ ದೂರ ಹೋಗಿವೆ. ಅವಕ್ಕೆ ತಮ್ಮದೇ ಜಾಗ ಬೇಕಾಗಿದೆ ಎನ್ನುವ ಕವಿ ಗುಬ್ಬಿ ಗುಳೆ ಹೋಗಿವೆತಮ್ಮ ಎದೆ ಬಡಿತಕೇಳಿಸುವಲ್ಲಿ ! ಪ್ರಾಣಿ ಪಕ್ಷಿಗಳನ್ನು ನೆಮ್ಮದಿಯಿಂದ ಬದುಕದಂತೆ  ಮಾಡಿದ ಮನುಷ್ಯ ಅವು ಗಡಿಪಾರು ಅಗುವಂತೆ ಮಡಿದ್ದಾನೆ ಎನ್ನುವದನ್ನು ಈ ಹೈಕು ಸೂಚಿಸುತ್ತದೆ.  ಆದರೆ ನಿಸರ್ಗಕ್ಕೆ ಅಂತ್ಯವಿಲ್ಲ ಅದು ಮತ್ತೆ ಚಿಗುರುತ್ತದೆ ಎನ್ನುವದಕ್ಕೆ ಮೊನ್ನೆ ಉರುಳಿತು ಮರಇಂದು ಮೋಟು ನೆತ್ತಿಯ ಮೇಲೆಕುಸುರು ಕುಸುರು ಚಿಗುರ ಎಂಥ ಅದ್ಭುತ ಅಲ್ಲವೇ!  ಲೌಕಿಕದ ಸತ್ಯಗಳಣ್ನೂ ಕಾಣವು ಕವಿ ಪ್ರೀತಿ ಯ ಬಗ್ಗೆ ಸಾಲು ಗಳು ಎಷ್ಟು ಮಾರ್ಮಿಕ ವಾಗಿವೆ ನೋಡಿ. ಒಲವು ಮಹಾ ಕೊಲೆಗಾರಪ್ರಾಣ ಹೀರಿದೆ ಎಷ್ಟೋಕಾಣುವಂತೆ! ಕಾಣದಂತೆ!! ಕಾಣುವಂತೆ ಸತ್ತವು ಕೆಲವು ಜೀವಗಳಾದರೆ ಕಾಣದಂತೆ, ಮುಚ್ಚಿಟ್ಟು ಸತ್ತವು ಎಷ್ಟೋ ಏನೋ? ಎನ್ನುವ ಉದ್ಘಾರ ಕವಿಯದು. ಕಾಣು ಪದವನ್ನು ದುಡಿಸಿಕೊಂಡ ರೀತಿಯಲ್ಲಿಯೆ ಕವಿತೆ ಅಡಗಿರುವದು. ಮೀನು ಮಾಕೇಟ್ಟಿನಲ್ಲಿ ಸಾಲಾಗಿ ಸತ್ತು ಮಲಗಿದ ಮೀನು ಗಳನ್ನು ಕಂಡ ಕವಿ   ಸಾವಿನ ಕಂತೆಸಾಲಾಗಿ ಮಲಗಿದೆಸಾವಿಗೂ ಬೆಲೆಯಿದೆ , ಸಂತೆ! ಮಾರಾಟಕ್ಕಿಟ್ಟ ಮೀನಿನ ಗುಂಪು ಕವಿಯಲ್ಲಿ ಮೂಡಿಸುವ ಆಘಾತ ಕವಿತೆಯಾಗಿ ಹೊರಹೊಮ್ಮಿದೆ.  ಕೌಟುಂಬಿಕ ಪರಿಸರವನ್ನು ಚಿತ್ರಿಸುವ ಹೈಕುಗಳಲ್ಲಿ ಹೆಂಡತಿಯ ಮೌನವನ್ನು ಕುರಿತು ಅವರು ಬರೆದ ಹೈಕು ಹೀಗಿದೆ. ನೀ ಸುಮ್ಮನಿದ್ಧೀ ಎಂದರೆನನಗೇನೋ ಗುಮಾನಿ!ಏನೋ ಆಟ, ಏನೋ ಬೇಟ ನಾಳೆ ಈ ಹೊತ್ತಿಗೆ! ಪ್ರತಿಯೊಂದು ಭಾಗದ ಹೈಕುಗಳೂ ಅರ್ಥಪೂರ್ಣ ರಚನೆಗಳಾಗಿರುವದು ಅವರ ಕಾವ್ಯ ಸಂಕಲನದ ಮಹತ್ವ ಹೆಚ್ಚಿಸಿವೆ.  ಸುಮ್ಮನೇ ಹೆಸರಿಸುತ್ತ ಹೋಗುವದಾದರೆ ಉಲ್ಕಾಪಾತಕ್ಕೆ ಉರುಳಿದ ಉಲ್ಕೆಯಪತನಕ್ಕೆ ಉಳಿದ ತಾರೆಗಳುಪಾಪ ! ಎಂದವು ದಿನದರ್ಶಿಕೆ ಭಾಗದ ಒಂದು ಹೈಕು ಆಸೆಯನ್ನೆ ತೂಗು ಬಿಟ್ಟೆನನ್ನೆದೆಯ ಗೋಡೆ ಮೊಳೆಗೆಈ ವರ್ಷ ಕೂಡ ಬದುಕುವೆ ಎಷ್ಟೊಂದು ಧನಾತ್ಮಕವಾದ ಚಿಂತನೆ! ಇನ್ನೊಂದು ಇದೆಬಾಗದ ಹೈಕು ವರ್ಷಕ್ಕೊಂದು ಹೊಸ ಕ್ಯಾಲೆಂಡರ್ಗರಿಗರಿ ಮುಗುಚುತ್ತದೆದುರ್ಬಲ ಸೋತ ಕೈಗಳು ಹೀಗೆ ಇಲ್ಲಿ ಹೈಕುಗಳು ಅವರೇ ಹೇಳಿದಂತೆ ‘ಕಿರಿದರಲ್ಲಿ ಪಿರಿದರ್ಥ’ ನೀಡಿವೆ. ಅವರು “ಹೈಕು ತತ್ ಕ್ಷಣಕ್ಕೆ ಮಿಂಚಿ ಮರೆಯಾಗುವ ಕಾವ್ಯಪ್ರಕಾರ ಅಲ್ಲ. ಅಂತರಾಳಕ್ಕೆ ಹೋಗಿ ಆನಂದದ ಸೆಲೆಯಾಗಿ ಚಿಮ್ಮಿಸುವ ಸಾಧನವಾಗಿ ಬಳಕೆಯಾಗುತ್ತದೆ” ಎಂದು ಹೇಳುವ ಅವರು ತೋರುವ ವಿನಯ ದೊಡ್ಡದು. “ಇಲ್ಲಿನ ನನ್ನೆಲ್ಲ ಹೈಕುಗಳನ್ನು ಅಪ್ಪಟ ಹಾಯ್ಕು ಗಳೆನ್ನುವ ಹಕ್ಕು ಧೈರ್ಯ ನನಗಿಲ್ಲ .. ಅರಿವುದಕ್ಕೆ ಇನ್ನೂ ಇದೆ. ಆ ಮಾರ್ಗದ ನವಿರುಯ ಅನುಭವಗಳ ಸರಳ ಅಭಿವ್ಯಕ್ತಿಗಳೇ ಈ ನನ್ನ ಹಾಯ್ಕುಗಳು” ಎನ್ನುವ ಮಾತು ಮುಖ್ಯವಾಗಿ ಕಾಣಿಸುತ್ತದೆ.  ಡಾ ವೈ.ಎಂ.ಯಾಕೊಳ್ಳಿ

“ರಾಮಚಂದ್ರ ಕುಲಕರ್ಣಿಯವರ ಹಾಯ್ ಹಾಯ್ಕು -೩” ವೈ.ಎಂ.ಯಾಕೊಳ್ಳಿ Read Post »

ಪುಸ್ತಕ ಸಂಗಾತಿ

ವನಜಾ ಜೋಶಿ ಅವರ ಕೃತಿ “ನಕ್ಕುಬಿಡು ಬಾನಕ್ಕಿ” ( ಗಜಲ್ ಸಂಕಲನ )ಅವಲೋಕನ ಎ.ಹೇಮಗಂಗಾ

ಪುಸ್ತಕ ಸಂಗಾತಿ ಎ.ಹೇಮಗಂಗಾ ವನಜಾ ಜೋಶಿ “ನಕ್ಕುಬಿಡು ಬಾನಕ್ಕಿ” ( ಗಜಲ್ ಸಂಕಲನ )ಅವಲೋಕನ *ಮನಸಿಗೆ ಮುದ ತಂದ ವನಸುಮದ ಕಂಪು* *ಶೀರ್ಷಿಕೆ: ನಕ್ಕುಬಿಡು ಬಾನಕ್ಕಿ* ( ಗಜಲ್ ಸಂಕಲನ )*ಕವಯಿತ್ರಿ : ಶ್ರೀಮತಿ ವನಜಾ ಜೋಶಿ**ಚರವಾಣಿ: 99012 39477**ಪ್ರಕಾಶಕರು : ಸಂಸ್ಕೃತಿ ಬುಕ್ ಏಜೆನ್ಸೀಸ್, ಮೈಸೂರು**ಪ್ರಥಮ ಮುದ್ರಣ: 2025*ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಓದುಗರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆದಿರುವ, ಸೆಳೆಯುತ್ತಲೇ ಇರುವ ‘ ಕಾವ್ಯದ ರಾಣಿ ‘ ಗಜಲ್ ನ ರಚನೆಯಲ್ಲಿ ತೊಡಗಿರುವ ಕವಿ, ಕವಯಿತ್ರಿಯರ ಸಂಖ್ಯೆ ಸಾವಿರಕ್ಕೂ ಹೆಚ್ಚೆಂಬುದು ತಿಳಿದು ಬಂದಿದೆ. ವೃತ್ತಿಯಲ್ಲಿ ಸುಮಾರು ಮೂವತ್ತೈದು ವರ್ಷಗಳ ಕಾಲ ಶಿಕ್ಷಕಿಯಾಗಿದ್ದು ಈಗ ನಿವೃತ್ತ ಜೀವನವನ್ನು ತಮ್ಮ ಆಸಕ್ತಿಯ ಓದು ಹಾಗೂ ಬರವಣಿಗೆಯ ಮೂಲಕ ಅರ್ಥಪೂರ್ಣವಾಗಿ ಕಳೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಶ್ರೀಮತಿ ವನಜಾ ಜೋಶಿಯವರು ಸಾಮಾಜಿಕ ಜಾಲತಾಣದ ವಾಟ್ಸ್ ಆ್ಯಪ್ ಗುಂಪುಗಳಲ್ಲಿ ‘ ವನಸುಮ ‘ ಎಂಬ ತಖಲ್ಲುಸ್ ನಿಂದ ಗಜಲ್ ಕವಯಿತ್ರಿಯಾಗಿ ಪರಿಚಿತರಾಗಿದ್ದಾರೆ. ಅಂತೆಯೇ, ತಮ್ಮ ರಚನೆಗಳಿಂದ ಇತರರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಪ್ರೌಢ ಶಾಲಾ ದಿನಗಳಿಂದಲೇ ಸಾಹಿತ್ಯದಲ್ಲಿ ಅಭಿರುಚಿಯನ್ನು ಹೊಂದಿದ್ದು ಕಾಲಕ್ರಮೇಣ ಪ್ರಬುದ್ಧ ಕವಯಿತ್ರಿಯಾಗಿ ಗುರುತಿಸಿಕೊಂಡ ಇವರಿಗೆ ಛಂದೋಬದ್ಧವಾದ ಮುಕ್ತಕ ಮತ್ತು ಷಟ್ಪದಿಗಳ ರಚನೆಯ ಕಲೆಯೂ ಒಲಿದಿದೆ. ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ವನಜಾ ಜೋಶಿಯವರು 2025 ರಲ್ಲಿ ಪ್ರಕಟಿಸಿದ ‘ ನಕ್ಕುಬಿಡು ಬಾನಕ್ಕಿ ‘ ಗಜಲ್ ಸಂಕಲನವು ತನ್ನ ಶೀರ್ಷಿಕೆ , ಸುಂದರ ಮುಖಪುಟ ಹಾಗೂ ಉತ್ತಮ ಮುದ್ರಣದಿಂದ ಮೊದಲ ನೋಟಕ್ಕೇ ಎಲ್ಲರ ಮನಗಳನ್ನು ಸೆಳೆಯುತ್ತದೆ. ಕೃತಿಯನ್ನು ವಿದ್ಯೆಯೆಂಬ ಅಮೃತವನ್ನಿತ್ತು ಅರಿವು ಮೂಡಿಸಿ ಬೆಳೆಸಿದ, ಹರಸಿದ ಎಲ್ಲ ಗುರುಗಳಿಗೆ ಅರ್ಪಿಸಿದ್ದಾರೆ. ಖ್ಯಾತ ಗಜಲ್ ಕವಿ, ಕನ್ನಡ ಪ್ರಾಧ್ಯಾಪಕ ಮತ್ತು ವಿಮರ್ಶಕರಾದ ಡಾ. ಮಲ್ಲಿನಾಥ ಎಸ್. ತಳವಾರ ಅವರ ಮುನ್ನುಡಿಯ ಜೊತೆಗೆ ಗಜಲ್ ಕಾವ್ಯದ ಮೂಲ, ಬೆಳವಣಿಗೆ ಹಾಗೂ ರಚನೆಯ ನಿಯಮಗಳ ಬಗ್ಗೆ ಬೆಳಕು ಚೆಲ್ಲುವ ಅವರದೇ ಲೇಖನವೂ ಇರುವುದೊಂದು ವಿಶೇಷ. ಪ್ರಸಿದ್ಧ ಕಲಾವಿದ , ಸಂಶೋಧಕ ಮತ್ತು ಯಕ್ಷಗಾನ ಕ್ಷೇತ್ರದ ವಿಮರ್ಶಕರಾದ ಡಾ.ಎಂ. ಪ್ರಭಾಕರ ಜೋಶಿಯವರ ಬೆನ್ನುಡಿ ಕೃತಿಯ ಮೌಲ್ಯವನ್ನು ವೃದ್ಧಿಸಿದೆ. ‘ ನಕ್ಕುಬಿಡು ಬಾನಕ್ಕಿ’ ಸಂಕಲನದಲ್ಲಿ ಗಜಲ್ ಕವಯಿತ್ರಿ ( ಗಜಲ್ ಗೋ ) ಐದು, ಆರು, ಏಳು ಹಾಗೂ ಒಂಬತ್ತು ಷೇರ್ ಗಳನ್ನುಳ್ಳ ಮುರದ್ದಫ್, ಗೈರ್ ಮುರದ್ದಫ್, ಜುಲ್ ಕಾಫಿಯಾ, ತರಹೀ , ಸಂಪೂರ್ಣ ಮತ್ಲಾವನ್ನು ಒಳಗೊಂಡ ನೂರ ಇಪ್ಪತ್ತೊಂದು ಗಜಲ್ ಗಳ ಗುಚ್ಛವನ್ನೇ ಹೆಣೆದಿದ್ದಾರೆ. ಪ್ರೀತಿ, ವಿರಹ ,ಅಗಲಿಕೆ, ಪ್ರಕೃತಿ ಪ್ರೇಮ, ಪರಿಸರ ಪ್ರಜ್ಞೆ, ತಾಯ್ತನದ ಸಂಭ್ರಮ, ವೈಧವ್ಯ, ರವಿ, ಮಳೆ, ಬಾಳಿನ ನಶ್ವರತೆ….. ಮುಂತಾದ ವಿವಿಧ ವಸ್ತು, ವಿಷಯಗಳ ಬಗ್ಗೆ ನಿಯಮಬದ್ಧವಾಗಿ ಮೂಡಿ ಬಂದಿರುವ ಗಜಲ್ ಗಳು ‘ ಕವಿಯ ಕಲ್ಪನೆ ಸೀಮಾತೀತ ‘ ಎಂಬ ನುಡಿಯನ್ನು ಬಿಂಬಿಸಿವೆ. ಈ ಸಂಕಲನದ ಕೆಲವು ಗಜಲ್ ಗಳ ಸಾಲುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ. ಕರಪಿಡಿದು ನಡೆವ ಜೋಡು ಜೀವಕೆ ಒಲವೇ ಬಲ ತಾನಾದಾಗಬಾನ ತಾರೆಗಳ ಸಾಲು ಹುಟ್ಟಿವೆ ನಿನ್ನ ನೆನಪಲಿ ನಾನಿರುವಾಗ                               ( ಗಜಲ್ 2 ) ಸುಖದ ಅತಿಯಾಸೆಗೆ ಕಳೆಯಿತೆಲ್ಲವೂಭೂಮಿ ಬಿರುಕುಗಳು ಎಚ್ಚರ ಕೊಡುತಿವೆ                         ( ಗಜಲ್ 9 )                             ಕೈ ಚೆಲ್ಲಿ ಕೂರುವುದ ತೊರೆದು ಮುಂದಡಿ ಇಡಬೇಕುಸಂದೇಹಗಳ ನಿವಾರಿಸಬೇಕು ಬದುಕಿನ ಪ್ರೀತಿಯಲಿ                               ( ಗಜಲ್ 18 )                       ಮದವೇರಿದ ಹೋರಿಯಾಗಿದೆ ನಿನ್ನ ನೆನಪುಎದೆಯೊಳಗೆ ಗೋರಿಯಾಗಿದೆ ನಿನ್ನ ನೆನಪು                                ( ಗಜಲ್ 21 ) ಕರುಳಲಿ ಚಿಗುರಿದ ಹೊಸ ಜೀವ ಮರೆಸುವುದು ಜಗವವನಸುಮದ ನಿತ್ಯ ಗೆಲುವಿನಲಿ ಇದೆ ಎಂಥ ಹರುಷ                               ( ಗಜಲ್ 33 ) ವಿಹಗ ಬೃಂದವು ಔತಣಕೆ ಬಂದಿಹುದು ಕೂ ಕುಕುಲು ಕೂಬಗೆಬಗೆಯ ಶುಭ ಗೀತವ ಹಾಡಿಹುದು ಕೂ ಕುಕುಲು ಕೂ                               ( ಗಜಲ್ 62 ) ನನ್ನವ್ವ ಇರಬೇಕಿತ್ತು ನೆಲತಾಯಿ ಹೊಸ ಕುಸುರಿಟ್ಟ ಸಮಯದಾಗಎಂಥ ಚೆಲುವು ಇಂದು ತೋರಿದೆ ಅವನಿ ಹಸಿರುಟ್ಟ ಸಮಯದಾಗ                                  ( ಗಜಲ್ 63 ) ಹುಟ್ಟುವಾಗಲೇ ನಿಶ್ಚಯವಾಗಿದೆ ಸಾವುನಾಲ್ಕು ದಿನದ ಬಾಳಲಿ ಆಗದಿರು ಬೇವು ( ಗಜಲ್ 67 ) ನೋಡುಗರ ಕಣ್ಮನ ತಣಿಸುವ ಅಲಂಕಾರವದುಅತ್ತಿತ್ತ ಸರಿವ ನೋಟದಿ ಚೇಳು ಹಾವುಗಳ ಕಂಡೆ                                 ( ಗಜಲ್ 91 ) ದೂರ ದೂರ ನಾವು ಹಾರಬೇಕಿದೆ ನಿತ್ಯ ನಕ್ಕುಬಿಡು ಬಾನಕ್ಕಿಜಗದ ಬಿತ್ತರವನೆಲ್ಲ ನೋಡಬೇಕಿದೆ ನಿತ್ಯ ನಕ್ಕುಬಿಡು ಬಾನಕ್ಕಿ( ಗಜಲ್  117 )ಭಾವಗಳನ್ನು ಸುಲಲಿತವಾಗಿ, ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವುದನ್ನು ಕರಗತ ಮಾಡಿಕೊಂಡಿರುವ ವನಜಾ ಜೋಶಿಯವರ ಗಜಲ್ ಗಳಲ್ಲಿ ಕಾವ್ಯ ಪ್ರತಿಭೆ ಮಿಂಚಾಗಿ ಹೊಳೆದಿದೆ. ಅರಿವಿನ ವ್ಯಾಪ್ತಿಯನ್ನು ವರ್ಣಿಸುವ ಅಪರೂಪದ ಶಬ್ದಗಳ ಭಂಡಾರವೇ ಅವರಲ್ಲಿದೆ ಎಂಬುದನ್ನು ಕೆಲವು ರಚನೆಗಳಲ್ಲಿ ಬಳಸಲ್ಪಟ್ಟಿರುವ ತೇಜ, ಕದಿರು, ಹದುಳ, ವಲ್ಲರಿ, ಸಲಿಲ, ಸುಮಸಾರ, ಜವನಿಕೆ , ಜಾಳಿಗೆ, ಅಣ್ಣಿ….ಇತ್ಯಾದಿ ಪದಗಳು ಸಾಬೀತುಪಡಿಸಿವೆ. ಗಜಲ್ 62 ನೆಯ ರದೀಫ್ ‘ ಕೂ ಕುಕುಲು ಕೂ ‘ ಬಹಳ ವಿಶಿಷ್ಟವಾಗಿದ್ದು ಗಜಲ್ ವಾಚನಕ್ಕೆ ಹೊಸ ಮೆರುಗನ್ನು ತರುತ್ತದೆ ಎಂಬುದಂತೂ ಸತ್ಯ. ನಲ್ಮೆಯ ಸಹೋದರಿ ವನಜಾ ಜೋಶಿಯವರ ಲೇಖನಿಯ ತೇವವೆಂದೂ ಆರದಿರಲಿ. ಭವಿತವ್ಯದಲ್ಲಿ ಅವರಿಂದ ಮತ್ತಷ್ಟು ಸತ್ವಪೂರ್ಣ ಗಜಲ್ ಸಂಕಲನಗಳು ಪ್ರಕಟಗೊಂಡು ಕಲಿಕಾರ್ಥಿಗಳಿಗೆ ಮಾರ್ಗದರ್ಶನ ನೀಡಲಿ. ತಾಯಿ ಸರಸ್ವತಿಯ ಆಶೀರ್ವಾದ ನಿರಂತರವಾಗಿ ಅವರ ಮೇಲಿದ್ದು ಎಲ್ಲ ಆಶೋತ್ತರಗಳು ಈಡೇರಲಿ ಎಂದು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ. ಎ. ಹೇಮಗಂಗಾ                            

ವನಜಾ ಜೋಶಿ ಅವರ ಕೃತಿ “ನಕ್ಕುಬಿಡು ಬಾನಕ್ಕಿ” ( ಗಜಲ್ ಸಂಕಲನ )ಅವಲೋಕನ ಎ.ಹೇಮಗಂಗಾ Read Post »

ಪುಸ್ತಕ ಸಂಗಾತಿ

ಎಂ.ಬಿ.ಸಂತೋಷ್‌ ಅವರ ಕೃತಿ,”ವಚನ ಸುಧೆ”ಗೊಂದು ಮುನ್ನುಡಿ,ಶೋಭಾ ನಾಗಭೂಷಣ ಅವರಿಂದ

ಪುಸ್ತಕ ಸಂಗಾತಿ ಶೋಭಾ ನಾಗಭೂಷಣ ಎಂ.ಬಿ.ಸಂತೋಷ್‌ ಅವರ ಕೃತಿ, “ವಚನ ಸುಧೆ”ಗೊಂದು ಮುನ್ನುಡಿ,  ಪ್ರಥಮವಾಗಿ ತಮ್ಮ ನಲವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ತಮ್ಮ ಏಳನೇ ಆಧುನಿಕ ವಚನ ಸಂಕಲನವಾದ ‘ವಚನ ಸುಧೆ’ ಕೃತಿಯನ್ನು ಲೋಕಾರ್ಪಣೆ ಮಾಡುತ್ತಿರುವ  ಗುರುಗಳಾದ ಶ್ರೀ ಎಂ ಬಿ ಸಂತೋಷ್ ಅವರಿಗೂ ಹಾಗೂ ಗುರುಮಾತೆಯಾದ ಶ್ರೀಮತಿ ರೇಖಾ ಸಂತೋಷ್ ಅವರಿಗೂ ವಿವಾಹ ವಾರ್ಷಿಕ ಮಹೋತ್ಸವಕ್ಕೆ ಶುಭಾಷಯಗಳನ್ನು ಕೋರುತ್ತೇನೆ.  ತಮ್ಮ ಈ ವಚನ ಸುಧೆ ಕೃತಿಗೆ ಮುನ್ನುಡಿ ಬರೆಯಬೇಕೆಂದು ಸೂಚಿಸಿ ಗುರುಗಳು ನನ್ನ ಸಾಹಿತ್ಯ ಕೃಷಿಗೆ ಆಶೀರ್ವದಿಸಿದ್ದಾರೆ. ಈ ವಚನ ಸುಧೆಗೆ ಮುನ್ನುಡಿಯನ್ನು ಬರೆಯುವುದು ನನಗೆ ಗರ್ವ ಮತ್ತು ಗೌರವ ಎರಡನ್ನೂ ಸಹ ತಂದುಕೊಟ್ಟಿದೆ. ನಾನು ಅವರಿಗೆ ಸದಾ ಕೃತಜ್ಞಳಾಗಿದ್ದೇನೆ.  ಮನುಜನ  ಜೀವನವು ಅನೇಕ ಅನುಭವಗಳ ಅಲೆಯಲ್ಲಿ ತೇಲುವ ಒಂದು ನಿರಂತರ ಪಯಣ.  ಈ ಪಯಣದಲ್ಲಿ ಕೆಲವೊಮ್ಮೆ ಸಂತೋಷದ ಹೊಳೆ ಹರಿದರೆ, ಮತ್ತೊಮ್ಮೆ ಸಂಕಟಗಳ ನೆರಳು ಆವರಿಸುತ್ತದೆ. ಇಂತಹ ಬದುಕಿನ ತಿರುವುಗಳಲ್ಲಿ ದಾರಿತೋರುವ ದೀಪವಾಗಿ, ಮನಸ್ಸಿನ ಮೌನಕ್ಕೆ ಮಾತಾಗುವ ಚಿಂತನೆಯಾಗಿ ಮೌಲ್ಯಗಳ ಮಣ್ಣಿನಲ್ಲಿ ಅರಳುವ ಜ್ಞಾನಪುಷ್ಪವಾಗಿ ನಮ್ಮೊಂದಿಗೆ ಸಾಗುವವು ವಚನಗಳು. ವಚನವೆಂದರೆ ಕೇವಲ ಪದಗಳ ಜೋಡಣೆಯಲ್ಲ; ಅದು ಬದುಕಿನ ಸತ್ಯಕ್ಕೆ ಸಾಕ್ಷಿಯಾದ ಅನುಭವದ ನಾದ, ಅಂತರಂಗದ ಅರಿವಿಗೆ ದಾರಿಯಾದ ಚಿಂತನೆಯ ಚಿಲುಮೆ.  ಕಾಲ ಬದಲಾಗುತ್ತಿದೆ. ಬದುಕಿನ ವೇಗ ಹೆಚ್ಚುತ್ತಿದೆ. ತಂತ್ರಜ್ಞಾನದ ಬೆಳಕಿನಲ್ಲಿ ಮನುಷ್ಯನು ಹೊರಜಗತ್ತನ್ನು ಗೆಲ್ಲುವ ಹಾದಿಯಲ್ಲಿ ಸಾಗುತ್ತಿದ್ದರೂ, ತನ್ನೊಳಗಿನ ಮನುಷ್ಯತ್ವವನ್ನು ಅರಸುವ ಪ್ರಯತ್ನ ಕೆಲವೊಮ್ಮೆ ಮಸುಕಾಗುತ್ತಿದೆ. ಸಂಬಂಧಗಳು ಯಾಂತ್ರಿಕವಾಗುತ್ತಿರುವ, ಮೌಲ್ಯಗಳು ಪ್ರಶ್ನಿಸಲ್ಪಡುತ್ತಿರುವ, ಆತ್ಮಸಂತೋಷವನ್ನು ಹುಡುಕಾಡುತ್ತಿರುವ ಸಂದರ್ಭದಲ್ಲಿ ವಚನಸಾಹಿತ್ಯದ ಪ್ರಸ್ತುತತೆ ಇನ್ನಷ್ಟು ಗಾಢವಾಗುತ್ತವೆ. ಏಕೆಂದರೆ ವಚನಗಳು ಕೇವಲ ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿ ಬೋಧಿಸಲ್ಪಟ್ಟವುಗಳಲ್ಲ, ಅವು ಸಮಾನತೆ, ಮಾನವೀಯತೆ, ಸತ್ಯನಿಷ್ಠೆ ಹಾಗೂ ಬದುಕಿನ ಶುದ್ಧತೆಗೆ ಕರೆ ನೀಡುವ ಆತ್ಮಧ್ವನಿಗಳಾಗಿವೆ.   ಪೂಜ್ಯ ಗುರುಗಳಾದ ಶ್ರೀ ಎಂ ಬಿ ಸಂತೋಷ್ ಅವರ ಏಳನೇ ಆಧುನಿಕ ವಚನಸಂಕಲನವಾದ ಈ ವಚನ ಸುಧೆ ಕೃತಿಯು, ಅಮೃತಧಾರೆಯನ್ನು ಇಂದಿನ ಓದುಗರ ಮನಗಳಿಗೆ ತಲುಪಿಸುವ ವಿನಮ್ರ ಸಾಹಿತ್ಯರತ್ನವಾಗಿದೆ. ಈ ಕೃತಿಯಲ್ಲಿ ಅಡಕವಾಗಿರುವ ಪ್ರತಿಯೊಂದು ವಚನವೂ ಜೀವನದ ಯಾವುದೋ ಒಂದು ಮೌಲ್ಯವನ್ನು ಅನಾವರಣಗೊಳಿಸುವ ಕನ್ನಡಿಯಾಗಿದೆ. ಕೆಲವೊಮ್ಮೆ ಅವು ಪ್ರಶ್ನಿಸುತ್ತವೆ, ಕೆಲವೊಮ್ಮೆ ಎಚ್ಚರಿಸುತ್ತವೆ, ಕೆಲವೊಮ್ಮೆ ಕಿವಿಮಾತನ್ನು ಹೇಳುತ್ತಾ ಮನಸ್ಸಿಗೆ ನೆಮ್ಮದಿಯನ್ನು ನೀಡುವ ಮಾತುಗಳಾಗುತ್ತವೆ. ಜೀವನದ ಗೊಂದಲಗಳ ನಡುವೆ ಅರ್ಥಪೂರ್ಣವಾದ ಬದುಕಿನ ದಿಕ್ಕನ್ನು ತೋರಿಸುವ ಶಕ್ತಿಯನ್ನು ವಚನಗಳು ಹೊಂದಿವೆ.    *ವಚನಸುಧೆ* – ‘ಸುಧೆ’ ಎಂದರೆ ಅಮೃತ. ಅಮೃತವು ನಿರ್ಜೀವದ ಸ್ಥಿತಿಗೆ ಜೀವಂತಿಕೆಯನ್ನು ನೀಡುವಂತಹದ್ದು. ಹಾಗೆಯೇ ಈ ವಚನ ಸುಧೆಯು ಮನಸ್ಸಿಗೆ ಅಮರತ್ವವನ್ನು ನೀಡುವಂತಹ ಅದೆಷ್ಟೋ ಜೀವನದ ಸತ್ಯಗಳನ್ನು ತಿಳಿಸುತ್ತಾ ಬದುಕನ್ನು ಮುನ್ನಡೆಸಲು ದೀವಟಿಗೆಯಾಗಿ ನಿಲ್ಲುತ್ತದೆ. ಬುದ್ಧಿ, ಮಾತು, ಹೆಣ್ಣು, ತಾಯಿ, ಸಂಸಾರ, ದಾಂಪತ್ಯ, ಮಾನವ ಸಂಬಂಧ, ಮೂಢನಂಬಿಕೆ ಹೀಗೆ ಇನ್ನೂ ಹಲವು ವಿಷಯಗಳ ಹಾಗೂ ಜೀವನದ ಸತ್ಯಗಳನ್ನು ತಿಳಿಸುವ ವಚನಗಳು ಈ ವಚನ ಸುಧೆಯಲ್ಲಿ ಹನಿ ಹನಿಯಾಗಿ ಕೂಡಿವೆ. ‘ಜಗದೀಶ’ ಎನ್ನುವ ಅಂಕಿತದೊಂದಿಗೆ ಸಾವಿರಾರು ವಚನಗಳನ್ನು ರಚಿಸಿರುವ ಶ್ರೀ ಎಂ ಬಿ ಸಂತೋಷ್ ಅವರು ತಮ್ಮ ಅಮೂಲ್ಯವಾದ ವಚನಗಳಿಂದ ಅದೆಷ್ಟೋ ಶರಣ ಸಹೃದಯರಿಗೆ ಸುಧೆಯನ್ನು ಉಣಬಡಿಸಿದ್ದಾರೆ. ಬಲವಂತದಿಂದ ಪಡೆದದ್ದುಬಹುಕಾಲ ಉಳಿಯುವುದಿಲ್ಲಇನ್ನೊಬ್ಬರ ಮನವ ನೋಯಿಸಿ ಪಡೆದದ್ದುನಮ್ಮನ್ನು ಹಾಳು ಮಾಡದೆ ಬಿಡುವುದಿಲ್ಲಕಷ್ಟಪಟ್ಟು ದುಡಿದದ್ದು ಎಂದಿಗೂ  ನಮ್ಮನ್ನು ಬಿಟ್ಟು ಹೋಗುವುದಿಲ್ಲ-ಜಗದೀಶ  ಈ ವಚನವು ದುಡಿಮೆಯ ಮಹತ್ವವನ್ನು ತಿಳಿಸುತ್ತದೆ. ಹತ್ತನೆಯ ಶತಮಾನದಿಂದಲೂ ಬಸವಣ್ಣನವರಾದಿಯಾಗಿ ದುಡಿಮೆಯ ಅಂದರೆ ಕಾಯಕದ ಮಹತ್ವವನ್ನು ಸಾರುತ್ತಲೇ ಬಂದಿದ್ದಾರೆ. ಕಾಯಕದ ಮೂಲಕವೇ ನಾವು ಕೈಲಾಸವನ್ನು ಕಾಣಬೆಕು ಎನ್ನುವ ಆದ್ಯ ವಚನಕಾರರ ಸಂದೇಶವನ್ನು ತಿಳಿಸುವ ಮತ್ತೊಂದು ವಚನ ಇಲ್ಲಿ ಮೂಡಿಬಂದಿದೆ. ನಾವು ಯಾವಾಗಲೂ ದುಡಿದು ತಿನ್ನಬೇಕೇ ಹೊರತು ಮತ್ತೊಬ್ಬರಿಂದ ಬಲವಂತವಾಗಿ ಕಿತ್ತು ತಿನ್ನುವ ಬುದ್ಧಿಯನ್ನು ಬಿಡಬೇಕು. ‘ಪರರ ಸ್ವತ್ತು ಪಾಶಾಣ’ ಎನ್ನುವುದನ್ನು ಅರಿಯಬೇಕು. ಬೇರೆಯವರನ್ನು ನೋಯಿಸಿ ಅವರ ಸ್ವತ್ತನ್ನು ಕಿತ್ತು ಅನುಭವಿಸಿದರೆ ಅವರ ನಿಟ್ಟುಸಿರು ನಮ್ಮನ್ನು ತಟ್ಟಿಯೇ ತೀರುತ್ತದೆ. ಈ ಸತ್ಯವು ಇಂದಿನ ಜನಮನಕ್ಕೆ ತಿಳಿದಿದ್ದರೂ ಅದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೇ ಪಾಪ ಪುಣ್ಯಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ತಾನು ಬದುಕುವುದಕ್ಕಾಗಿ ಸ್ವಾರ್ಥತೆಯಿಂದ ಕೊಲೆ, ಸುಲಿಗೆ, ದರೋಡೆಗಳನ್ನು ಮಾಡುತ್ತಿರುವುದನ್ನು ನಾವು ಕಾಣಬಹುದು. ಅಂತಹ ಮನಸ್ಥಿತಿಗೆ ಈ ವಚನ ಕಿವಿ ಹಿಂಡಿ ಬುದ್ಧಿ ಹೇಳುತ್ತದೆ. ಆದಿ ಮತ್ತು ಅಂತ್ಯನೀನೇ ಆಗಿರುವಾಗಹೇ ದೇವ; ನನ್ನದೇನಿದೆನೀ ತೋರಿದ ದಾರಿಯಲ್ಲಿನಡೆಯುವುದಷ್ಟೇ ನನ್ನ ಕೆಲಸವಾಗಿದೆ – ಜಗದೀಶ   ಇಲ್ಲಿ ಮನುಷ್ಯ ತಾನು ಏನೇ ಸಾಧಿಸಿದ್ದರೂ ಸಹ ಸೃಷ್ಟಿ ನಿಯಮದಡಿ ಆ ದೈವ ಮಹಿಮೆಯ ಮುಂದೆ ಅವನು ಅಲ್ಪನೇ. ಜೀವನದ ಆದಿ ಅಂತ್ಯಗಳನ್ನು ನಿರ್ಧರಿಸುವವನು ಅವನೇ. ಹುಟ್ಟು ಉಚಿತ ಸಾವು ಖಚಿತ ಎನ್ನುವಂತೆ; ಹುಟ್ಟು ಎನ್ನುವ ಪ್ರಕೃತಿಯ ನಿಯಮವನ್ನು ಮೀರಿ ತನಗೆ ಬೇಕಾದ ಹಾಗೆ ನಿರ್ಧರಿಸಲು ಸಾಧ್ಯವೇ ಇಲ್ಲ. ಈಗ ಐವಿಎಫ್‌ನಂತಹ ತಂತ್ರಜ್ಞಾನದ ಮೂಲಕ ಅಥವಾ ಟೆಸ್ಟ್ ಟ್ಯೂಬ್ ಬೇಬಿ ಎನ್ನುವ ಪರಿಕಲ್ಪನೆ ಇದ್ದರೂ ಸಹ ಅದೂ ಕೂಡ ದೈವ ಕೃಪೆಯ ಜೀವಾಣುಗಳಿಂದ ಸೃಷ್ಟಿಸಲು ಸಾಧ್ಯವೇ ಹೊರತು ಜೀವಾಣುಗಳನ್ನು ಮನುಷ್ಯ ಸೃಷ್ಟಿಸಲು ಸಾಧ್ಯವಿಲ್ಲ. ಹಾಗೆಯೇ ಸುದೀರ್ಘ ಆಯಸ್ಸಿಗಾಗಿ ಮನುಷ್ಯ ತನ್ನ ದೇಹದಾರ್ಢ್ಯತೆಯನ್ನು ಕಾಪಾಡಿಕೊಳ್ಳಲು ಏನೇ ಕಸರತ್ತು ಮಾಡಿದರೂ, ಇತ್ತೀಚಿನ ಹಲವಾರು ಅಕಾಲಿಕ ಮರಣಗಳ ಉದಾಹರಣೆಗಳನ್ನು ನಾವು ಕಾಣಬಹುದು. ಹೀಗಿರುವಾಗ ಸಿಕ್ಕಿರುವ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತಾ ದೇವರು ತೋರಿದ ಹಾದಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಸಾಗುವುದಷ್ಟೇ ನಮ್ಮ ಕಾಯಕವಾಗಬೇಕು ಎನ್ನುವ ಅಪೂರ್ವವಾದ ಸಂದೇಶವನ್ನು ತಿಳಿಸುವ ಈ ವಚನವು ಸಕಾಲಿಕವಾಗಿದೆ. ಸಂಬಂಧಗಳು ಹೇಗಿರಬೇಕೆಂದರೆಶ್ರೀಗಂಧದಂತೆ ಸುವಾಸನೆ ಬೀರಬೇಕುಸಂಬಂಧಗಳನ್ನು ಮುರಿಯುವ ಪ್ರಯತ್ನಯಾರೇ ಮಾಡಿದರೂ ಸುವಾಸನೆ ಮಾತ್ರಹಾಗೇ ಉಳಿಯಬೇಕು- ಜಗದೀಶ  ಇತ್ತೀಚೆಗೆ ವಿಭಕ್ತ ಕುಟುಂಬಗಳೇ ಹೆಚ್ಚುತ್ತಿರುವ ಈ ಜಗತ್ತಿನಲ್ಲಿ ಪರಸ್ಪರ ಮಾನವನ ಸಂಬಂಧಗಳ ನಡುವೆ ಬಿರುಕು ಉಂಟಾಗುತ್ತಿದೆ ಅಥವಾ ಈ ಸಂಬಂಧಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ ಎಂದೇ ಹೇಳಬಹುದು. ಗಂಡ ಹೆಂಡತಿ ಮಗು ಮಾತ್ರ ಜೊತೆಗಿದ್ದರೇ ಅದೇ ಅವಿಭಕ್ತ ಕುಟುಂಬ ಎನ್ನುವ ಕಾಲ ಇದಾಗಿದೆ. ಇಲ್ಲಿ ತಂದೆ-ತಾಯಿ-ಮಕ್ಕಳು, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತಿಗೆ-ನಾದಿನಿ, ಅತ್ತೆ-ಸೊಸೆ ಎನ್ನುವ ಸಂಬಂಧವು ಅದರ ಬೆಲೆಯನ್ನು ಕಳೆದುಕೊಂಡಿದೆ. ಕೇವಲ ಹಣದ ದಾಹ ಆಸ್ತಿಯ ಮೋಹವು ಈ ಎಲ್ಲಾ ಸಂಬಂಧವನ್ನು ದೂರ ಮಾಡುತ್ತಿದೆ. ಸಂಪತ್ತಿನ ಹಿಂದೆಯೇ ಓಡುತ್ತಿರುವ ಈ ಜಗತ್ತು ಸಂಬಂಧದ ಕಡೆಗೆ ಕಣ್ಪಟ್ಟಿಯನ್ನು ಕಟ್ಟಿಕೊಂಡಿದೆ. ಹಣಕ್ಕಾಗಿ, ಪತಿಷ್ಟೆಗಾಗಿ ಈ ಸಂಬಂಧಗಳು ಕಚ್ಚಾಡುವುದಷ್ಟೇ ಅಲ್ಲ ಜೀವ ತೆಗೆಯುತ್ತಿರುವ ಅನೇಕ ಘಟನೆಗಳು ನಮ್ಮ ಕಣ್ಣಮುಂದೆಯೇ ನಡೆಯುತ್ತಿವೆ ಅನೈತಿಕ ಸಂಬಂಧಗಳ ಅಟ್ಟಹಾಸವು ಇಂದು ಅನಾಚಾರಗಳಿಗೆ ಎಡೆಮಾಡಿಕೊಡುತ್ತಿವೆ. ಇಂತಹ ಸಂಬಂಧದಲ್ಲಿ ಶ್ರೀಗಂಧದಹಾಗೆ ಸುವಾಸನೆ ಬೀರುಂತೆ ಸಂಬಂಧಗಳು ಇರಬೇಕು ಎನ್ನುವ ವಚನಗಾರರ ಭಾವ ನಿಜಕ್ಕೂ ಸಂದರ್ಭೋಚಿತವಾಗಿದೆ. ಹೆಸರಿಗೆ ಮಾತ್ರ ಹಣ ಆಸ್ತಿಗಾಗಿ ಮಾತ್ರ ಸಂಬಂಧಗಳನ್ನು ನಿಭಾಯಿಸುತ್ತಾ ಬಾಳುವ ಜನರಿಗೆ ಪಾಠ ಹೇಳುವ ಮತ್ತೂ ಕೆಲವು ವಚನಗಳು ಕೂಡ ಇಲ್ಲಿವೆ. ಅಂತಹದ್ದೇ ಮತ್ತೊಂದು ವಚನವನ್ನು ನೋಡುವುದಾದರೆ, ಇಂದು ನಮ್ಮಲ್ಲಿರುವ ಸಂಪತ್ತುನಾಳೆ ಇಲ್ಲದೇ ಇರಬಹುದುಇಲ್ಲದ ಸಂಪತ್ತು ನಾಳೆಒಂದು ವೇಳೆ ಸಿಕ್ಕರೂ ಸಿಗಬಹುದುಆದರೆ ಪ್ರೀತಿ, ವಿಶ್ವಾಸ, ನಂಬಿಕೆಒಮ್ಮೆ ಕಳೆದುಕೊಂಡರೆ ಮತ್ತೆಜೀವನದಲ್ಲಿಬಾರದು- ಜಗದೀಶ  ಇಲ್ಲಿ ವಚನಕಾರರು ಇಂದಿನ ಪೀಳಿಗೆಯವರಿಗೆ ಜೀವನದಲ್ಲಿ ಯಾವುದು ಪ್ರಮುಖ ಎನ್ನುವುದರ ಬಗೆಗೆ ಕಿವಿಮಾತನ್ನು ಹೇಳುತ್ತಿದ್ದಾರೆ. ಹಣದ ಹಿಂದೆಯೇ ಬಿದ್ದಿರುವ ಜಗತ್ತಿಗೆ ಸಂಪತ್ತು ಎನ್ನುವುದು ಕ್ಷಣಿಕವಾದದ್ದು ಎನ್ನುತ್ತಾರೆ. ಸಂಪತ್ತು ಇಂದು ನಮ್ಮ ಬಳಿ ಅಗಾಧವಾಗಿರುತ್ತದೆ. ಆದರೆ ನಾಳೆ ಇಲ್ಲದೇ ಹೋಗಬಹುದು ಅಥವಾ ಇಂದು ಬಡವನಾದವನು ನಾಳೆ ಬಲ್ಲಿದನಾಗಬಹುದು. ನಾವು ನಮ್ಮ ಬಳಿ ಇರುವ ಸಂಪತ್ತನ್ನು ಕಳೆದುಕೊಂಡರೆ  ಯಾವುದೇ ನಷ್ಟವಿಲ್ಲ ಆದರೆ, ಜನರ ನಡುವೆ ಬದುಕುತ್ತಿರುವ ನಾವು ಅವರೊಂದಿಗೆ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಹೊಂದಿರಬೇಕು. ಏಕೆಂದರೆ ಒಮ್ಮೆ ನಾವು ಇವುಗಳನ್ನು ಕಳೆದುಕೊಂಡರೆ ಎಂದಿಗೂ ಮತ್ತೆ ಪಡೆಯಲು ಸಾಧ್ಯವಿಲ್ಲ. ಇದನ್ನು ನಾವು ನೆನಪಿನಲ್ಲಿ ಇಟ್ಟುಕೊಂಡಿರಬೇಕು ಎಂದು ಹೇಳುವ ಈ ವಚನವು ಸಮಯೋಚಿತವಾದದ್ದು. ಸಾವಿರ ತಪ್ಪುಗಳನ್ನು ಮಾಡಿದ್ದರೂಕ್ಷಮಿಸುವ ಮತ್ತು ಬೆಳೆಸುವಗುಣವಿರುವುದು ಕೇವಲ ಜನ್ಮಕೊಟ್ಟತಂದೆ ತಾಯಿಗೆ ಮಾತ್ರ ಹಾಗಾಗಿತಂದೆ ತಾಯಿಯನ್ನು ಗೌರವಿಸುವಜವಾಬ್ದಾರಿ ನಮ್ಮದಾಗಬೇಕು- ಜಗದೀಶ   ಆಧುನಿಕತೆಯ ಈ ಜಗತ್ತಿನಲ್ಲಿ ಇಂದು ಸಾಂಪ್ರದಾಯಿಕ ಮನಸ್ಸಿನ ತಂದೆ ತಾಯಿ ಆಧುನಿಕತೆಯ ಸೋಗಿನಲ್ಲಿರುವ ಮಕ್ಕಳು ಇಂದು ತಂದೆ ತಾಯಿಯರನ್ನು ಹಲವಾರು ರೀತಿಯಲ್ಲಿ ದೂರುವುದನ್ನು ಕಾಣುತ್ತೇವೆ. ಮಕ್ಕಳು ಹುಟ್ಟಿದಾಗಿನಿಂದ ಏನೇ ತಪ್ಪುಮಾಡಿದ್ದರೂ, ಎಷ್ಟೇ ಕಷ್ಟಗಳನ್ನು ನೀಡಿದ್ದರೂ ತಂದೆ ತಾಯಿಯರು ಮಕ್ಕಳನ್ನು ಕ್ಷಮಿಸುತ್ತಾ, ಹೊಂದಾಣಿಕೆ ಮಾಡಿಕೊಳ್ಳುತ್ತಾ ತಾವು ಹಸಿದಿದ್ದರೂ ಮಕ್ಕಳ ಹೊಟ್ಟೆ ತುಂಬಿಸುತ್ತಾ ಅವರ ಏಳಿಗೆಗಾಗಿಯೇ ತಮಗೆ ಎಷ್ಟೇ ಕಷ್ಟವಾದರೂ ಶ್ರಮಿಸುತ್ತಾರೆ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅವರ ಯಶಸ್ಸನ್ನು ಕಾಣುವಲ್ಲಿ ತಮ್ಮ ಸ್ವಂತ ಸುಖವನ್ನೇ ಮರೆಯುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು ಮಕ್ಕಳನ್ನು ಸಾಕಿದ ನಂತರ ವೃದ್ದಾಪ್ಯದಲ್ಲಿ ಮಕ್ಕಳು ತಮಗೆ ಆಸರೆಯಾಗುತ್ತಾರೆ ಎನ್ನುವ ಒಂದೇ ಒಂದು ನಿರೀಕ್ಷೆಯಷ್ಟೇ ಅವರದ್ದಾರುತ್ತದೆ. ಇಂದಿನ ಝೆನ್ ಜೀ ಮಕ್ಕಳು ಇದನ್ನು ಅರ್ಥಮಾಡಿಕೊಂಡರಷ್ಟೇ ಸಾಕು. ಆದರೆ, ಈಗ ನಡೆಯುತ್ತಿರುವುದಾದರೂ ಏನು? ತಂದೆ ತಾಯಿಯ ಕನಸನ್ನು ಈಡೇರಿಸಬೇಕಾಗಿದ್ದ ಮಕ್ಕಳು ತಾವು ವಿದ್ಯಾವಂತರಾಗಿ ಒಳ್ಳೆಯ ಕೆಲಸಕ್ಕೆ ಸೇರಿ ಹೆಚ್ಚು ಹಣಸಂಪಾದಿಸಿದ ನಂತರ ತಂದೆ ತಾಯಿಗಳಿಂದ ದೂರವಾಗುತ್ತಿದ್ದಾರೆ. ಅವರಿಗೆ ವೃದ್ಧಾಪ್ಯದಲ್ಲಿ ಆಸರೆಯಾಗಬೇಕಾಗಿದ್ದ ಮಕ್ಕಳು ಇಂದು ಅವರಿಗೆ ಎರಡು ಹೊತ್ತಿನ ಊಟ ಹಾಕಲೂ ಕೂಡ ಹಿಂದೆ ಮುಂದೆ ನೋಡುತ್ತಿರುವ ಮಕ್ಕಳನ್ನು ನೋಡುತ್ತಿದ್ದೇವೆ.  ಮಕ್ಕಳ ದೊಡ್ಡ ನಗರ ಜೀವನದ ವ್ಯಾಮೋಹ ಅಥವಾ ವಿದೇಶೀ ವ್ಯಾಮೋಹದಿಂದ ಮಕ್ಕಳು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಸೇರಿಸಿ ಅಥವಾ ಅವರನ್ನು ಒಂಟಿಯಾಗಿ ಬಿಟ್ಟು ಕಡೆಗಣಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹವರಿಗೆ ಬುದ್ಧಿವಾದ ಹೇಳುವಂತಹ ವಚನ ಇದಾಗಿದೆ. ಈ ವಚನದಲ್ಲಿ ತಂದೆ ತಾಯಿಯ ಜೀವನದ ಬಗ್ಗೆ ಆತಂಕವಿದೆ. ವೃದ್ಧಾಪ್ಯದ ಬಗ್ಗೆ ಕಾಳಜಿ ಇದೆ. ಇದರ ಮೂಲಕ ಸಮಾಜವನ್ನು ತಹಬದಿಗೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ನೀತಿಯುಕ್ತ ಜೀವನವನ್ನು ನಡೆಸುವ ಮಾರ್ಗದರ್ಶನವನ್ನು ತಮ್ಮ ವಚನಗಳಲ್ಲಿ ಮಾಡಿದ್ದಾರೆ. ಪ್ರೀತಿ ವಿಶ್ವಾಸವಿರಲಿನೋವು-ನಲಿವಾಗಲಿ ಪತಿ-ಪತ್ನಿಇಬ್ಬರೂ ಗೌರವದಿಂದ ಸಮನಾಗಿಹಂಚಿಕೊಂಡಾಗಲೇ ನಮ್ಮೀ ಬದುಕುಸುಂದರವಾಗುವುದಲ್ಲವೇ – ಜಗದೀಶ      ತಮ್ಮ ನಲವತ್ತನೇ ವರ್ಷದ ದಾಂಪತ್ಯದ ತುಂಬು ಜೀವನವನ್ನು ಸಂಭ್ರಮಿಸುತ್ತಿರುವ ಆಧುನಿಕ ವಚನಕಾರರಾದ ಶ್ರೀ ಎಂ.ಬಿ.ಸಂತೋಷ್ ಅವರು ದಾಂಪತ್ಯದ ಬಗ್ಗೆ ಹಲವು ಸಲಹೆಗಳು ಹಾಗೂ ಮಾರ್ಗದರ್ಶನವನ್ನು ತಮ್ಮ ವಚನಗಳ ಮೂಲಕ ಮಾಡಿದ್ದಾರೆ. ಬೆಳಿಗ್ಗೆ ಮದುವೆ ಸಂಜೆ ವಿಚ್ಚೇದನ ಎಂದಿರುವ ಈ ಕಾಲದಲ್ಲಿಗಂಡ ಹೆಂಡತಿಯರ ನಡುವಿನ ಸಂಬಂಧವು ಬೀದಿಗೆ ಬಂದು ನಿಂತಿದೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಸುಳ್ಳಾಗಿದೆ. ಇಂದು ಪ್ರೀತಿ ಪ್ರೇಮ ಮದುವೆಗಳು ನಡೆಯುವಷ್ಟೇ ವೇಗವಾಗಿ ವಿಚ್ಛೇದನಗಳು ನಡೆಯುತ್ತಿವೆ.  ಅಲ್ಲದೆ ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ಅಹಂ ಭಾವ, ಸಂದೇಹ, ಮದುವೆಯಾಚೆಗಿನ ಅನೈತಿಕ ಸಂಬಂಧಗಳು, ಹಣದಾಸೆ ಇವೆಲ್ಲವೂ ಹೆಚ್ಚಾಗಿದೆ. ಇದರಿಂದ ಹೆಂಡತಿ ಗಂಡನನ್ನು ಗಂಡ ಹೆಂಡತಿಯನ್ನು ದಾರುಣವಾಗಿ ಕೊಲೆಗೈಯ್ಯಲೂ ಸಹ ಹಿಂಜರಿಯದೇ ಇರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ. ಇಂತಹ ಘಳಿಗೆಯಲ್ಲಿ ಯುವ ಜನತೆಗೆ ದಾಂಪತ್ಯ ಎನ್ನುವುದು ಯಶಸ್ವಿಯಾಗಬೇಕಾದರೆ ಪ್ರೀತಿ-ವಿಶ್ವಾಸ, ನೋವು ನಲಿವು ಇವೆಲ್ಲದರಲ್ಲಿಯೂ ಪತಿ-ಪತ್ನಿ ಪರಸ್ಪರ ಗೌರವದಿಂದ ಸಮಾನತೆಯಿಂದ ಬದುಕಿದಾಗಲೇ ಈ ಬದುಕು ಸುಂದರ ಎನ್ನುವ ಮಾರ್ಗದರ್ಶನ ಮಾಡುವವರ ಅವಶ್ಯಕತೆ

ಎಂ.ಬಿ.ಸಂತೋಷ್‌ ಅವರ ಕೃತಿ,”ವಚನ ಸುಧೆ”ಗೊಂದು ಮುನ್ನುಡಿ,ಶೋಭಾ ನಾಗಭೂಷಣ ಅವರಿಂದ Read Post »

ಪುಸ್ತಕ ಸಂಗಾತಿ

ಶ್ರೀಕಾಂತ್‌ ಪತ್ರೆಮರ ಅವರ ಕೃತಿ “ವ್ಯಕ್ತಪತ್ರೆಗಳು” ಒಂದು ಅವಲೋಕನ ಅಭಿಜ್ಞಾ ಪಿ.ಎಂ ಗೌಡ

ಪುಸ್ತಕ ಸಂಗಾತಿ ಅಭಿಜ್ಞಾ ಪಿ.ಎಂ ಗೌಡ ಶ್ರೀಕಾಂತ್‌ ಪತ್ರೆಮರ “ವ್ಯಕ್ತಪತ್ರೆಗಳು” *ವ್ಯಕ್ತಪತ್ರೆಗಳ ಒಳ ಹೊಕ್ಕಾಗ*                ವ್ಯಕ್ತಪತ್ರೆಗಳು ಎಂಬ ಶೀರ್ಷಿಕೆಯೆ ಬಹಳ ಅರ್ಥಪೂರ್ಣವಾಗಿದೆ. ಈ ಕವನ ಸಂಕಲನವು ಶ್ರೀಕಾಂತ್ ಪತ್ರೆಮರ ರವರ ಚೊಚ್ಚಲ ಕೃತಿಯಾಗಿದ್ದು ಇದು ನೂರಕ್ಕೂ ಅಧಿಕ ಕವನಗಳನ್ನು ತನ್ನ ಒಡಲಿನೊಳಗೆ ಇಟ್ಟುಕೊಂಡಿರುವ ಅದ್ಭುತ ಕೃತಿ ಎಂದರೆ ತಪ್ಪಾಗಲಾರದು. ಇದರೊಳಗಿರುವ ಒಂದೊಂದು ಕವನಗಳು ಕೂಡ ಒಂದೊಂದು ಕಥೆಯನ್ನು ಹೇಳುವಂತಿವೆ.ಇಲ್ಲಿನ ಕವನಗಳಲ್ಲಿ ಭಾವನೆಗಳು, ಕಲ್ಪನೆಗಳು ಮತ್ತು ಆಲೋಚನೆಗಳನ್ನು ಅತ್ಯಂತ ಸುಂದರ ಹಾಗೂ ಅರ್ಥಗರ್ಭಿತ ಪದಗಳಲ್ಲಿ ವ್ಯಕ್ತಪಡಿಸಿರುವುದನ್ನು ನೋಡುತ್ತಿದ್ದರೆ ಮನಸ್ಸಿಗೆ ಏನೋ ಒಂಥರಾ ಆನಂದ. ಈ ಸಂಕಲನದಲ್ಲಿ ಶ್ರೀಕಾಂತ್ ಪತ್ರೆಮರ ರವರು ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು, ಭಾವನೆಯನ್ನು ತುಂಬಿ ಕವನಗಳ ರಚನೆ ಮಾಡಿರುವುದನ್ನು ಕಾಣಬಹುದು. ಈ ಸಂಕಲನದಲ್ಲಿನ ಕವನಗಳಲ್ಲಿ ಪ್ರೀತಿ, ಕರುಣೆ, ಕೋಪ, ದುಃಖ, ದೇಶಭಕ್ತಿ, ಪ್ರಕೃತಿಯ ಸೌಂದರ್ಯವನ್ನು ಮನಮುಟ್ಟುವಂತೆ ಹೇಳಿರುವುದಲ್ಲದೆ;ಕೆಲವೊಂದು ಕವನಗಳು ಲಯಬದ್ಧವಾಗಿ ರಚಿಸಿದ್ದಾರೆ. ಹಾಗಾಗಿ ಇಲ್ಲಿನ ಕೆಲವು ಕವನಗಳು ರಾಗವಾಗಿ ಹಾಡಲು ಮನಸ್ಸಿಗೆ ಮುದ ನೀಡುವಂತಿವೆ.ಪತ್ರೆಮರ ರವರು ​ತಮ್ಮ ಕಲ್ಪನಾ ಲೋಕದ ಮೂಲಕ ಸಾಮಾನ್ಯ ಸಂಗತಿಗಳಿಗೂ ಒಂದು ವಿಶಿಷ್ಟ ರೂಪವನ್ನು ಕೊಟ್ಟಿರುವುದು ಹಾಗು ಸುದೀರ್ಘವಾದ ಕಥೆಯನ್ನು ಹೇಳುವ ಬದಲು, ಕೆಲವೇ ಸಾಲುಗಳಲ್ಲಿ ಇಡೀ ಭಾವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ಶ್ಲಾಘನೀಯವೆನಿಸಿದೆ.ಅದರ ಜೊತೆಗೆ ಪ್ರಕೃತಿಯ ಐಸಿರಿ , ವಸುಂಧರೆಯ ಸೌಂದರ್ಯ; ಅವಳ ಅನನ್ಯ ಅಪ್ರತಿಮ ಒಡಲಿನಲಿ ತುಂಬಿರುವ ಅಗಾಧ ಅಂಶಗಳನ್ನು ಹೊತ್ತಿ ತರುವುದರ ಮೂಲಕ ಒಂದು ಪ್ರಚಲಿತ ವಿಚಾರಧಾರೆಗಳನ್ನು ಪ್ರಸ್ತುತಪಡಿಸುವ ವಿಧಾನ ನಾಡುನುಡಿಯ ಬಗ್ಗೆ ಗೌರವ, ಆದರಗಳು ಇತ್ಯಾದಿಗಳನ್ನು ಬಹಳ ಅಚ್ಚುಕಟ್ಟಾಗಿ ಹೆಣೆದಿದ್ದಾರೆ.“ಮನಸ್ಸಿನ ಆಳದಿಂದ ಉಕ್ಕಿ ಬರುವ ಭಾವನೆಗಳಿಗೆ ಶಬ್ದಗಳ ಬಣ್ಣ ಹಚ್ಚಿ, ಲಯದ ಚೌಕಟ್ಟಿನಲ್ಲಿ ಪೋಣಿಸಿರುವುದನ್ನು ಕೂಡ ಈ ಕೃತಿಯಲ್ಲಿ ನೋಡಬಹುದಾಗಿದೆ.                 ಪತ್ರೆಮರ ರವರು ತಮ್ಮ ಆಂತರ್ಯದ ಮೌನ, ಪ್ರೀತಿ, ವಿರಹ, ಹಳಹಳಿಕೆ, ಸಾಮಾಜಿಕ ಚಿಂತನೆಗಳನ್ನು ವ್ಯಕ್ತಪಡಿಸುತ್ತಾ ಪತ್ರಗಳ ರೂಪದಲ್ಲಿ ಕಾವ್ಯವಾಗಿಸಿ ವ್ಯಕ್ತಪಡಿಸಿರುವುದನ್ನು ಈ ಕವನಗಳನ್ನು ಓದುತ್ತಿದ್ದಂತೆಯೇ ಗೊತ್ತಾಗುವುದು.ಭಾವನೆಗಳನ್ನು ವ್ಯಕ್ತಪಡಿಸಿರುವ ಈ ಕವನಗಳು ಸಾಮಾನ್ಯವಾಗಿ ಓದುಗನಿಗೆ ನೇರವಾಗಿ ಕವಿಯು ತನ್ನೊಳಗಿನ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿರುವಂತೆಯೆ  ಆಪ್ತವೆನಿಸುವವು.                 ಪತ್ರೆಮರ ರವರು ತಮ್ಮ ಕವನ ಸಂಕಲನದಲ್ಲಿ ನಮ್ಮೊಳಗಿನ ಅಹಂಕಾರವನ್ನು ಕರಗಿಸಿ, ಭಗವಂತನಲ್ಲಿ ಶರಣಾಗುವ ದಿವ್ಯ ಮಾರ್ಗವನ್ನು ತೋರುವಂತಹ ಭಕ್ತಿ ಸುಧೆಯನ್ನು ಹರಿಸಿರುವುದನ್ನು ಕಾಣಬಹುದು.ಬದುಕಿನ ಏಳು ಬೀಳುಗಳನ್ನು ಕಂಡಂತಹ ಆಪ್ತ ವಿಷಯಗಳನ್ನು ಕಥನ ರೂಪದಲ್ಲಿ ಬಿಂಬಿಸಿರುವುದು ಅರ್ಥಗರ್ಭಿತವಾಗಿದೆ. ಅಪ್ಪನ ನೋವು, ಹೆತ್ತವ್ವನ ಕಷ್ಟ,ಜೀವಸಖಿಯ ಗೀತೆಗಳನ್ನು ಎಳೆ ಎಳೆಯಾಗಿ ರಚಿಸಿದ್ದಾರೆ. ಈ ಕೃತಿಯಲ್ಲಿರುವ ಎಲ್ಲಾ ಕವನಗಳು ತುಂಬಾ ಅರ್ಥಪೂರ್ಣವಾಗಿ ರಚನೆಗೊಂಡಿದೆ ಅದರಲ್ಲಿ ಕೆಲವೊಂದುಷ್ಟು ಕವನಗಳ ಸಾಲುಗಳು ತುಂಬಾ ಆಪ್ತವೆನಿಸಿತ್ತಿವೆ  *ತಾವರೆ ನಾವಾದರೆ* ಸುತ್ತಣ ಸುಂದರವಿದೆ ಒಳಗಣ ಅಂದಗೆಟ್ಟಿದೆಹಾಗೆಂದು ಅರಳದೇನು? ತಾವರೆ ಜೀವ ಚೈತನ್ಯದ ಚಾರುಲತೆ?       ಕವಿಯ ಈ ಸಾಲುಗಳಲ್ಲಿ ಅದೆಷ್ಟು ಅರ್ಥ ತುಂಬಿದ ನುಡಿಗಳಿವೆ. ನಮ್ಮ ಸುತ್ತಲಿನ ಪರಿಸರ ಎಷ್ಟೇ ಸುಂದರವಾಗಿದ್ದರೂ, ನಮ್ಮೊಳೊಗಿನ ಮನಸ್ಸು ಕುಸಿದಿರಬಹುದು; ಹಾಗೆಂದ ಮಾತ್ರಕ್ಕೆ ಬದುಕಿನ ಚೈತನ್ಯದ ಸಂಕೇತವಾದ ತಾವರೆ ಅರಳುವುದನ್ನು ನಿಲ್ಲಿಸುವುದಿಲ್ಲ.ನಾವು ತಾವರೆಯಂತಾದರೆ, ಎಂತಹ ಕಷ್ಟದ (ಕೆಸರಿನ) ಪರಿಸ್ಥಿತಿಯಲ್ಲೂ ಧೃತಿಗೆಡದೆ ನಮ್ಮೊಳಗಿನ ಜೀವಕಳೆಯನ್ನು ಜಾಗೃತವಾಗಿಟ್ಟುಕೊಂಡು ಮುನ್ನಡೆಯುತ್ತ,ನಮ್ಮನ್ನು ನೋಡುವ ಇಡೀ ಜಗತ್ತಿಗೆ ನಮ್ಮ ಮುಖದಲ್ಲಿನ ನಗು ಮತ್ತು ಸಕಾರಾತ್ಮಕತೆ ಸದಾ ಸ್ಪೂರ್ತಿ ನೀಡುವಂತಿರಬೇಕು ಎಂಬುದನ್ನ ತುಂಬಾ ಸೊಗಸಾಗಿ ಹೇಳಿದ್ದಾರೆ.  *ದೀವಟಿಕೆ*  ಮಾತಿರದ ಮೌನದಲಿ ಅರಳಿಸಿಹಳು ಹಣತೆಗಳೊಳಗಿಂದ ಬೆಳಕಿನ ಸಿಂಚನ ಮಾತಿರುವ ಮುನಿಸಿರುವ ಬದುಕಿನಲಿ ಪ್ರೀತಿಯ ಎದೆಗೂಡಲಿ ಮುಡಿದಿಹಳು ಜೀವಾತ್ಮದ ಜ್ಯೋತಿ ಸುಚೇತನವನು ಮಿಡಿದಿಹಳು ಸಖಳಾಗಿ ಸಕಲಕೆಲ್ಲಕು ದೀವಟಿಕೆ ಕವನದಲ್ಲಿ ಹೆಣ್ಣನ್ನು ಹಣತೆಗೆ ಹೋಲಿಸಿರುವ ಅವರ ಸಾಲುಗಳು ತುಂಬಾ ಚೆನ್ನಾಗಿವೆ ಮಾತುಗಳಿಲ್ಲದ ನಿಶ್ಯಬ್ದದ ಪರಿಸ್ಥಿತಿಯಲ್ಲಿ ಆಕೆ ಪ್ರೀತಿಯ ಹಣತೆಯನ್ನಿಟ್ಟು, ಬದುಕಿನಲ್ಲಿ ಜ್ಞಾನ ಮತ್ತು ಸಂತೋಷದ ಬೆಳಕನ್ನು ಚೆಲ್ಲುತ್ತ,ಮೌನದ ಬೆಳಕನ್ನು,ಪ್ರೀತಿಯ ಆಸರೆಯನ್ನು, ಆತ್ಮದ ಜಾಗೃತಿಯನ್ನು ಮಾಡುತ್ತಾ, ಕೊನೆಗೆ ತನ್ನ ಬದುಕಿನ ಪ್ರತಿಯೊಂದು ಅಣು-ಅಣುವಿನಲ್ಲೂ ತುಂಬಿ ಹೋಗಿ, ಜೀವನದ ಸಕಲಕ್ಕೂ ತಾನೇ ಸರ್ವಸ್ವವಾಗಿದ್ದಾಳೆ ಎಂಬುವುದನ್ನು ಈ ಸಾಲುಗಳಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ. ಅಮೂರ್ತ ಚಿಂತನೆಗೆ ಮೂರ್ತ ರೂಪ ನೀಡುವ ಇವರ ಕವನದ ಸಾಲುಗಳು, ಸಡಗರದ ಸಂಕ್ರಾಂತಿಯ ಕಿಚ್ಚು. ಎಳ್ಳು ಬೆಲ್ಲ ಸವಿಯುವ ಮೆಚ್ಚು, ಸಹಬಾಳ್ವೆ,ಸಮಾನತೆ,ಸಹಬಂಧಗಳ ಬಗ್ಗೆ ಮೂಡಿ ಬಂದಿರುವ ಸಾಲುಗಳ ತೇರು. ಕನ್ನಡ ನುಡಿ,ನಾಡಿನ ಕೆಚ್ಚೆದೆಯ ಬಗೆಗಿನ ಬರಹ ಅರ್ಥಪೂರ್ಣವಾಗಿದೆ.  *ಕನ್ನಡ ನುಡಿ* ವಿಶಾಲ ಕರುನಾಡಿನ ಊರು ಕೇರಿಗಳಲ್ಲಿಬಡವರ ಒಡಲುಗಳಲ್ಲಿ ಮಣ್ಣಿನ ಮಕ್ಕಳಲ್ಲಿಶ್ರಮಿಕ ಕಾರ್ಮಿಕರ ಉಸಿರಿನಲ್ಲಿ ಮತ್ತೆಲ್ಲರತುಟಿಗಳಲ್ಲಿ ನಲಿದಾಡುತಿರೆ ಭಯವೇಕೆ? ಕನ್ನಡ ನಾಡಿನ ಹಳ್ಳಿ-ಹಳ್ಳಿಗಳಲ್ಲಿ, ಬಡವರ ಹಾಗೂ ರೈತರ ಹೃದಯಗಳಲ್ಲಿ,ಕಷ್ಟಪಟ್ಟು ದುಡಿಯುವ ಕಾರ್ಮಿಕರ ಉಸಿರಿನಲ್ಲಿ ಕನ್ನಡ ನುಡಿ ರಾರಾಜಿಸುತ್ತಿದೆ. ಈ ಮಣ್ಣಿನ ಪ್ರತಿಯೊಬ್ಬರ ತುಟಿಗಳ ಮೇಲೂ ಕನ್ನಡವೇ ನಲಿದಾಡುತ್ತಿರುವಾಗ, ನಮ್ಮ ಭಾಷೆಗೆ ಯಾವುದೇ ಆಪತ್ತು ಬರುತ್ತದೆ ಎಂಬ ಭಯ ಪಡುವ ಅಗತ್ಯವೇ ಇಲ್ಲ. ಜನಸಾಮಾನ್ಯರ ಬದುಕಿನೊಂದಿಗೆ ಬೆರೆತುಹೋಗಿರುವ ಕನ್ನಡ ಭಾಷೆ ಸದಾ ಸುರಕ್ಷಿತ ಮತ್ತು ಚಿರಂತನ ಎಂಬುವುದನ್ನು ಅದ್ಭುತವಾಗಿ ತಮ್ಮ ಕವನದ ಸಾಲುಗಳಲ್ಲಿ ಹೇಳಿದ್ದಾರೆ.       ಹಾಗೆಯೇ ಲೌಕಿಕ ಮತ್ತು ಅಲೌಕಿಕ ಎಂಬ ಎರಡು ವಿಭಿನ್ನ ತತ್ವಗಳನ್ನು ಸರಳವಾಗಿ ಅರ್ಥೈಸುವ ಇವರ ಕವನದ  ಸಾಲುಗಳನ್ನು ಓದಲೇಬೇಕು.”ವ್ಯಕ್ತಿಯು ತನ್ನ ಅಸ್ಮಿತೆ  ಮತ್ತು ಕಣ್ಣೀರಿನ ಮೂಲಕ ತನ್ನೊಳಗಿನ ದುಃಖ-ದುಮ್ಮಾನಗಳನ್ನು ಅರಿತುಕೊಳ್ಳುವ ಬಗ್ಗೆ,ಪ್ರಕೃತಿಯ ಮುಗ್ಧತೆ (ಹಕ್ಕಿಯ ಹಾಡು) ಹಾಗೂ ಜೀವನದ ಸಂತೋಷದ ಸಾಕಾರ ರೂಪವಾದ ನಗುವಿನಲ್ಲೇ (ಸಿರಿ ನಿನ್ನ ನಗುವಿನಲ್ಲಿದೆ) ನಿಜವಾದ ಸಂಪತ್ತನ್ನು ಕಂಡುಕೊಳ್ಳುವ ಬಗ್ಗೆಗಿನ ಸಾಲುಗಳನ್ನು ಕಾಣಬಹುದು ಮತ್ತು ಈ ರೀತಿ ತನ್ನನ್ನು ತಾನು ಗೆದ್ದು, ಜಗತ್ತಿಗೆ ಪ್ರೀತಿ ಮತ್ತು ಜ್ಞಾನವನ್ನು ಹಂಚುವ ಮೂಲಕವೆಮನುಷ್ಯ ಕೊನೆಗೆ ‘ವಿಶ್ವಗುರು’ ಆಗುತ್ತ ಉದಾತ್ತ ಎತ್ತರಕ್ಕೆ ಬೆಳೆಯುವ ಈ ಕವನದ ಸಾಲುಗಳನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಅರ್ಥಪೂರ್ಣವಾದ ಸಾಲುಗಳಿವು.​ಒಟ್ಟಾರೆಯಾಗಿ ಅಸ್ತಿತ್ವ, ಪ್ರಕೃತಿ, ಭಾವನೆ, ಆನಂದ ಮತ್ತು ಆಧ್ಯಾತ್ಮಿಕ ಉನ್ನತಿಯ ವಿಭಿನ್ನ ಹಂತಗಳನ್ನು ಧ್ವನಿಸುವಂತಿವೆ. ಮುಂದುವರೆದಂತೆ ಈ ಎಲ್ಲ ಪರಿಕಲ್ಪನೆಗಳು ಮನುಷ್ಯನ ಜೀವನದ ಸುದೀರ್ಘ ಪಯಣವನ್ನು ಮತ್ತು ಅದರಲ್ಲಿ ಎದುರಾಗುವ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವಂತಿರುವುದನ್ನು ನೋಡಬಹುದು. ಜಗತ್ತಿನ ಸತ್ಯವನ್ನು ಹುಡುಕುವ ‘ಶೋಧನಾ ಸವಾರಿ’ ಮತ್ತು ಸಾವಿನೆಡೆಗೆ ಸಾಗುವ ‘ಬಾಳಯಾನ’ಗಳು ‘ವಿಧಿ ಲಿಖಿತ’ದ ಚೌಕಟ್ಟಿಗೆ ಒಳಪಟ್ಟಿದ್ದರೂ, ಬದುಕು ಸಾರ್ಥಕವಾಗುವುದು ಪ್ರೀತಿಯ ಜ್ವಾಲೆಯಾದ ‘ಒಲುಮೆಯ ಕುಲುಮೆ’ಯಲ್ಲಿ ಬೆಂದು ಪಕ್ವವಾದಾಗ ಮಾತ್ರ. ಅಂತಿಮವಾಗಿ, ಜಗದ್ಜ್ಯೋತಿ ಬಸವೇಶ್ವರರು ತೋರಿದ ಕಾಯಕ, ಸಮಾನತೆ ಮತ್ತು ಭಕ್ತಿಯ ಮಾರ್ಗವು ಈ ಇಡೀ ಜೀವನದ ಪಯಣಕ್ಕೆ ಒಂದು ಸುಂದರವಾದ ಅರ್ಥವನ್ನು ಹಾಗೂ ಮುಕ್ತಿಯ ದಾರಿಯನ್ನು ಕಲ್ಪಿಸಿಕೊಡುತ್ತದೆ. ಇಂತಹ ಹಲವಾರು ಕವನಗಳನ್ನು ಓದಬೇಕಾದರೆ ಈ ಸಂಕಲನವನ್ನು ಖಂಡಿತ ಕೊಂಡು ಓದಿರಿ. ಅಷ್ಟೇ ಅಲ್ಲದೆ ಈ ಕೃತಿಯಲ್ಲಿ ಹಲವಾರು ಮಹಾನ್ ಕವಿಗಳು, ಸಂಗೀತಗಾರರ,ಬಗ್ಗೆ ತುಂಬಾ ಚೆಂದದ ಕವನಗಳಿವೆ.  *ಸಂಚಲನ* ಸಂಚಲನ ಕವನದಲ್ಲಿ ಮೂಡಿ ಬಂದಿರುವಂತಹ ಈ ಸಾಲುಗಳು ಮನಸ್ಸಿಗೆ ಮುದ ನೀಡುವಂತಿವೆ.“ದಟ್ಟ ಕಾನನದಿ ಫಲಪುಷ್ಪಗಳ ತೊನೆದ ತರುಲತೆಗಳು ತಂಗಾಳಿಗೆ ತೂಗುತ ತೇಲುತ ಜೀಕುವ ಜೋಗುಳದ ತರಂಗ ಲಾಲಿ ನಿತ್ಯ ಲೀಲೆ.” ಈ ಸಾಲುಗಳು ದಟ್ಟವಾದ ಅರಣ್ಯದಲ್ಲಿ ಪ್ರಕೃತಿ ಮತ್ತು ತಂಗಾಳಿಯ ನಡುವೆ ನಡೆಯುವ ಅದ್ಭುತ ಸುಂದರ ಬಾಂಧವ್ಯವನ್ನು ವರ್ಣಿಸುತ್ತಿವೆ. ಹೂವು-ಹಣ್ಣುಗಳಿಂದ ತುಂಬಿದ ಗಿಡಮರಗಳು ತಂಗಾಳಿಯ ಸೌಮ್ಯ ಸ್ಪರ್ಶಕ್ಕೆ ಲಯಬದ್ಧವಾಗಿ ತೂಗುತ್ತಾ, ಪ್ರಕೃತಿಯೇ ಒಂದು ದಿವ್ಯ ಜೋಗುಳವನ್ನು ಹಾಡುತ್ತಿರುವಂತೆ ಭಾಸವಾಗುತ್ತಿವೆ. ಕಾಡಿನ ಈ ಧ್ವನಿ ಮತ್ತು ಹಸಿರಿನ ನೃತ್ಯವು ಮನಸ್ಸಿಗೆ ಶಾಂತಿಯನ್ನು ನೀಡುವ ಜೋಗುಳದ ತರಂಗದಂತಿದೆ. ಯಾವುದೇ ಹಸ್ತಕ್ಷೇಪವಿಲ್ಲದ ನಿಗೂಢ ಕಾನನದಲ್ಲಿ ಈ ನೈಸರ್ಗಿಕ ಸೌಂದರ್ಯವು ಪ್ರತಿದಿನವೂ ನಿರಂತರವಾಗಿ ನಡೆಯುವ ಒಂದು ದೈವಿಕ ಲೀಲೆಯಾಗಿದೆ ಎಂಬುವುದನ್ನು ತುಂಬಾ ಸುಂದರವಾಗಿ ಹೇಳುತ್ತಾ, ಇಲ್ಲಿ ಪ್ರತಿದಿನ ಪ್ರಕೃತಿಯ ಸಂಚಲನ ಹೇಗಾಗುತ್ತಿದೆ ಎಂಬುದನ್ನು ಈ ಸಾಲುಗಳಲ್ಲಿ ಬಿಂಬಿಸಿದ್ದಾರೆ.            ಇಲ್ಲಿನ ಕವನಗಳಲ್ಲಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಶ್ರೀಕಾಂತ್ ಪತ್ರೆಮರ ರವರು ಯಾವುದೇ ತ್ರಾಸಕ್ಕೆ ಬೀಳದೆ ಹೆಚ್ಚಿನ ಪ್ರಾಸವಿಲ್ಲದೆ ಅರ್ಥಪೂರ್ಣವಾದಂತಹ ಕವನಗಳನ್ನು ನೀಡಿದ್ದಾರೆ. ಹಾಗೆಯೇ ತಮ್ಮ ಕವನಗಳಲ್ಲಿ ರೂಪಕ ಉಪಮೇಗಳನ್ನು ಅಲ್ಲಲ್ಲಿ ಸೇರಿಸಿ ಉತ್ತಮ ನಿದರ್ಶನಗಳೊಂದಿಗೆ ಸಾಲುಗಳನ್ನು ಹೆಣೆಯುತ್ತ ಹಲವಾರು ಕವನಗಳನ್ನು ರಚಿಸಿದ್ದಾರೆ. ಇಲ್ಲಿ ಭಾವ ತುಂಬಿದ ಸಾಲುಗಳಿದ್ದು,ಪ್ರಸ್ತುತ ವಿಚಾರಗಳನ್ನ ಸೇರಿಸುತ್ತಾ ಅರ್ಥಪೂರ್ಣವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ರಚಿಸಿದ್ದಾರೆ.                ಕವಿತೆ ಕಟ್ಟಲು ಒಬ್ಬ ಕವಿಗೆ ತನ್ನೆಲ್ಲ ಅಭಿಷ್ಟಗಳಿಗಿಂತಲೂ ಮುಖ್ಯವಾಗಿ ತಾಳ್ಮೆ ಇರಬೇಕು. ಇಲ್ಲಿ ಶ್ರೀಕಾಂತ್ ಪತ್ರೆಮರ ರವರ ಕವನಸಂಕಲನದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಭಕ್ತಿಸುಧೆ, ಬದುಕಿನ ಏಳುಬೀಳಿಗೆ ಸಂಬಂಧಪಟ್ಟಂತಹ ಕವನಗಳು, ಹೆಣ್ಣು, ಕನ್ನಡ ನುಡಿ, ಮಹಾನ್ ವ್ಯಕ್ತಿಗಳ ಸಾಲುಗಳು, ಕಾಣದ ವೈರಾಣು, ನೀರಾಗಬೇಕು,ಕಂಬನಿ, ಹೊರಟೆ ಏಕೆ ನಿಷ್ಕಾರಣ.? ಜೋಪಡಿ, ಹುಲಿ ಉಳಿಸಿ, ಮದರಂಗಿ, ಮೇಘ ಮನ, ಕೊನೆಯೆಂದು,ಸ್ವಯಂ ಪ್ರೀತಿ,ನಿರುತ್ತರ, ನಿರಾಸೆ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತಹ ಕವನಗಳನ್ನು ನೋಡಬಹುದಾಗಿದೆ. ಕುತೂಹಲ ಭರಿತ ವಿಚಾರಗಳನ್ನ ನೀವು ತಿಳಿಯಬೇಕಾದರೆ ಈ ಸಂಕಲನವನ್ನು ಖಂಡಿತ ಓದಲೇಬೇಕು.ಈ ಅಂದರೆ ನೋವು, ನೋಲಿವು, ಅಕ್ಕರೆ, ಸಕ್ಕರೆ. ಹುರುಪು, ಉತ್ತೇಜನ. ಉತ್ಸಾಹ, ಧೈರ್ಯ, ಉಲ್ಲಾಸ, ಆಸೆ, ಆಕಾಂಕ್ಷೆ, ಅಭಿಷ್ಟಗಳು, ಹೆಣ್ಣು,ಪ್ರಕೃತಿ,ಗೆಳೆಯ, ಗೆಳತಿ ಹೀಗೆ ಎಲ್ಲಾ ರೀತಿಯ ಕವಿತೆಗಳು ಸಹ ಇಲ್ಲಿವೆ..       ಈ ಸಂಕಲನವು ಸುಮಾರು 100 ಕ್ಕು ಹೆಚ್ಚು ಕವನಗಳನ್ನು ಒಳಗೊಂಡಿದ್ದು ;ಇದರೊಳಗೆ ಓದುಗರ ಮನಸ್ಸಿನಲ್ಲಿ ಉಳಿಯುವ ಕವನಗಳನ್ನು ನೋಡಬಹುದಾಗಿದೆ. ಅಂದ ಹಾಗೆ ಎಲ್ಲಾ ಕವನಗಳು ಉತ್ತಮ ರಚನೆಗಳಾಗಿದ್ದು ಮುಂಬರುವ ಹೊತ್ತಿಗೆಯಲ್ಲಿ ಮತ್ತಷ್ಟು ಹೊಸತನ, ಲಯಬದ್ದ ಕವನಗಳು ಹಾಗೂ ಒಂದಷ್ಟು ಛoದೋಬದ್ದ ಕವನಗಳನ್ನು ಹೊತ್ತು ತರಲೆಂದು ಆಶಿಸುವೆ.ಈ ಒಂದು ಕೃತಿಗೆ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಸಿ.ಬಿ ಶೈಲಾ ಜಯಕುಮಾರ್ ರವರು ಅಮೂಲ್ಯವಾದ ನುಡಿತೋರಣವನ್ನು ಮುನ್ನುಡಿಯೊಂದಿಗೆ ಕಟ್ಟಿಕೊಟ್ಟಿರುವರು. ಹಾಗೂ ಈ ಕೃತಿಗೆ ತಮ್ಮದೇ ಬೆನ್ನುಡಿಯಿದ್ದು ತುಂಬಾ ಸೊಗಸಾಗಿದೆ.ಹೀಗೆಯೆ ತಮ್ಮ ಸಾಹಿತ್ಯ ಸೇವೆ ಮುಂದುವರಿಯಲಿ ಶುಭವಾಗಲಿ ಸರ್.ನಿಮ್ಮಿಂದ ಮತ್ತಷ್ಟು ಕವನ ಸಂಕಲನಗಳು ಕನ್ನಡ ಸಾಹಿತ್ಯದ ಒಡಲಿನಲ್ಲಿ ಸೇರಿಕೊಳ್ಳಲೆಂದು ಹಾರೈಸುವೆ… ಅಭಿಜ್ಞಾ ಪಿ.ಎಂ ಗೌಡಮಂಡ್ಯ

ಶ್ರೀಕಾಂತ್‌ ಪತ್ರೆಮರ ಅವರ ಕೃತಿ “ವ್ಯಕ್ತಪತ್ರೆಗಳು” ಒಂದು ಅವಲೋಕನ ಅಭಿಜ್ಞಾ ಪಿ.ಎಂ ಗೌಡ Read Post »

ಪುಸ್ತಕ ಸಂಗಾತಿ

ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ”ಹರಿನರಸಿಂಹ ಉಪಾಧ್ಯಾಯ ಶಂಭೂರು

ಪುಸ್ತಕ ಸಂಗಾತಿ ಹರಿನರಸಿಂಹ ಉಪಾಧ್ಯಾಯ ಶಂಭೂರು ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ” ಅಂಬುಧಿಯ ಆಳಗಲ ಆಗಸದ ವಿಸ್ತಾರಕಾವ್ಯ ಕನ್ನಿಕೆ ಚೆಲುವ ಅಳೆಯಲುಂಟೇನು?ದೂರದೃಷ್ಟಿಯ ಬೀರಿ ಚಿತ್ತವನು ಹರಿಸಿದೊಡೆಜಗವೊಂದು ಹಿಡಿ ತಾನೆ? ಚಕ್ರಪಾಣಿ || ಸಾಗರದ ಆಳ ಅಗಲ ಅಳೆದಷ್ಟೂ ಅಗಾಧ, ಆಗಸವನ್ನು ಶೋಧಿಸಿದಷ್ಟೂ ವಿಸ್ತಾರಗೊಳ್ಳುವಂತೆ ಸಾಹಿತ್ಯದಲ್ಲಿ ಕಾವ್ಯ ಕನ್ನಿಕೆಯ ಚೆಲುವನ್ನು ಬಣ್ಣಿಸಲು ಸಾಧ್ಯವಿಲ್ಲ. ದೂರದೃಷ್ಟಿಯಿಂದ ತನ್ನ ಚಿತ್ತವನ್ನು ಅತ್ತ ಹರಿಸಿದ್ದೇ ಆದರೆ ಆಗ ಅವೆಲ್ಲವೂ ಹಿಡಿ ಗಾತ್ರದಂತೆ ಭಾಸವಾಗದೆ ಇರದು. ಆದರೆ ಅದಕ್ಕೆ ಉದಾತ್ತತೆಯ ಗುಣ ನಮ್ಮಲ್ಲಿರಬೇಕು ಎಂಬ ಸಾರಾಂಶ ಹೊಂದಿರುವ ಮೇಲಿನ ರಚನೆ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲ ರವರ ಚೋಕಾ ಸಾಹಿತ್ಯ ಪ್ರಕಾರವನ್ನು ಕಂಡಾಗ ನನ್ನಲ್ಲಿ ಉದಿಸಿಬಂದದ್ದು ಸತ್ಯ. ಇತ್ತೀಚೆಗೆ ಅಂತರ್ಜಾಲದ ಪ್ರಭಾವದಿಂದ ನಮ್ಮ ಕನ್ನಡ ಸಾಹಿತ್ಯದ ಹಲವಾರು ಕವಿಮಿತ್ರರು ದೇಶೀಯ ಸಾಹಿತ್ಯ ಪ್ರಕಾರಗಳಲ್ಲದೆ ವಿದೇಶಿ ಸಾಹಿತ್ಯದಲ್ಲೂ ಆಸಕ್ತಿ ತೋರುತ್ತಿರುವುದು ಒಂದು ವಿಶೇಷವೇ ಸರಿ. ಸಾಹಿತ್ಯ ನಿಂತ ನೀರಲ್ಲ, ಸದಾ ಹರಿಯುವ ತೊರೆಯಾಗಿ ಇರುವಾಗ ಸಾಹಿತ್ಯ ತನ್ನನ್ನು ತಾನು ವಿಸ್ತಾರಗೊಳಿಸಿಕೊಂಡು ಹೊಸ ಹೊಸ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಮೊದಲೇ ಹೇಳಿದಂತೆ ಮೊದಲನೆಯದಾಗಿ ಅಂತರ್ಜಾಲ. ಹಾಗೆಯೇ ಕವಿಗಳ ಆಸಕ್ತಿ, ಹೊಸತನ್ನು ಕಲಿಯುವ, ಅದರ ಬಗ್ಗೆ ತಿಳಿಯುವ ಮತ್ತು ಅದನ್ನು ಅಳವಡಿಸಿಕೊಂಡು ತಮ್ಮ ಕೃಷಿಯನ್ನು ವಿಸ್ತರಿಸಿಕೊಳ್ಳುವ ಹಂಬಲವೇ ಇಂದು ಜಪಾನಿ ಸಾಹಿತ್ಯ, ಪರ್ಷಿಯನ್ ಸಾಹಿತ್ಯ ಪ್ರಕಾರಗಳು ಕನ್ನಡಕ್ಕೆ ಇಳಿದು ಬರಲು ಸಾಧ್ಯವಾಗಿದೆ. ಜಪಾನಿ ಸಾಹಿತ್ಯ ಪ್ರಕಾರಗಳಲ್ಲಿ ಹಾಯ್ಕು, ತಾಂಕಾ, ಚೋಕ ಇತ್ಯಾದಿ ಪುಟ್ಟ ಪ್ರಕಾರಗಳು ಹೆಚ್ಚಿನ ಅರ್ಥ ಕೊಡುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಇದು ನಮ್ಮವರನ್ನು ತನ್ನತ್ತ ಆಕರ್ಷಿಸಿ ಅದಕ್ಕೆ ಹೊಸ ರೂಪ ಕೊಡಲು ಪ್ರೇರಣೆ ನೀಡಿರುವುದರಿಂದ ಇಂದು ಕನ್ನಡದಲ್ಲಿಯೂ ಹಾಯ್ಕು, ಚೋಕಾಗಳು ಚಿಗುರೊಡೆಯುತ್ತಿವೆ. ಇವುಗಳು ಮೂಲದಲ್ಲಿ ಸಿಲಬಲ್ ಗಳಿಂದ ರಚನೆಗೊಂಡಿರುವುದಾದರೂ ಕನ್ನಡದಲ್ಲಿ ಅಕ್ಷರಗಳ ಸಂಖ್ಯೆಗಳ ಅಳತೆಯಿಂದ ರಚನೆಗೊಳ್ಳುತ್ತಿವೆ. ಹಾಗೆಯೇ ಚೋಕಾ ಪ್ರಕಾರದ ಕಾವ್ಯಾತ್ಮಕ ಅಳತೆಯು ೫/೭/೫/೭/೫/೭/೫/೭/೭ ಎಂದು ಪರಿಗಣಿಸಲ್ಪಟ್ಟಿದೆ. ಇದರಂತೆ ಡಾ. ಮಲ್ಲಿಕಾರ್ಜುನ ರವರು ತಮ್ಮ ಚೋಕಾ ರಚನೆಗಳನ್ನು ಒಳಗೊಂಡ ತಮ್ಮ ಕೃತಿಯನ್ನು   ಹೊರ ತರುವ ಈ ಸಂದರ್ಭದಲ್ಲಿ ಅವರ “ಚೋಕಾ- ಕಾವ್ಯಧಾರೆ” ಕೃತಿಯು ಕನ್ನಡ ಸಾಹಿತ್ಯದಲ್ಲಿ ಮೊದಲ ಚೋಕಾ ಕೃತಿ ಎಂಬ ಹಿರಿಮೆಗೆ ಪಾತ್ರವಾಗುತ್ತದೆ. ಶ್ರೀಯುತ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರು ವೃತ್ತಿಯಿಂದ ವ್ಯಾಪಾರಿಯಾಗಿದ್ದು ಕಲಬುರ್ಗಿಯ ಯಡ್ರಾಮಿ ಊರಿನವರು. ಸಣ್ಣವರಿದ್ದಾಗ ನಡೆದ ಒಂದು ಘಟನೆ ಇವರನ್ನು ಬರೆವಣಿಗೆ ಕೃಷಿಗೆ ಕರೆತಂದಿತು. ಆ ಘಟನೆಯಿಂದ ನೊಂದ ಇವರು ಸತ್ಯಾಂಶವನ್ನು ಜನತೆಗೆ ತಿಳಿಸುವ ಸಲುವಾಗಿ ಬರೆಯತೊಡಗಿದರು. ಮುಂದೆ ಇದು ಹವ್ಯಾಸವಾಗಿ ಬೆಳೆದು ನಿಂತಿತು. ಶ್ರೀಯುತರ ಹವ್ಯಾಸಕ್ಕೆ ಈಗ ಎರಡು ದಶಕಗಳ ಸಂಭ್ರಮ. ಕನ್ನಡ ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಿದ ಇವರನ್ನು ಗೌರವ ಡಾಕ್ಟರೇಟ್ ಕೂಡ ಅರಸಿ ಬಂದಿದೆ. ಅಲ್ಲದೆ ಚುಟುಕು ರತ್ನ, ಸಾಹಿತ್ಯ ಕೇಸರಿ, ಸ್ವರ್ಣಭೂಮಿ ಸೇವಾರತ್ನ, ಕಾವ್ಯ ಕಣಜ, ನುಡಿಚೇತನ ಮೊದಲಾದ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಚೋಕಾ ಕಾವ್ಯಧಾರೆ ಕೃತಿಗೆ ಮುನ್ನುಡಿ ಬರೆದುಕೊಡಬೇಕು ಎಂದು ನನ್ನಲ್ಲಿ ಕೇಳಿಕೊಂಡಾಗ ಇದೊಂದು ಸಾಹಿತ್ಯ ಸೇವೆ ಎಂದು ಪರಿಗಣಿಸಿ ಶ್ರೀಯುತ ಮಲ್ಲಿಕಾರ್ಜುನ ರವರ ಈ ಕೃತಿಯ ಕುರಿತು ನನ್ನ ಒಂದಿನಿತು ಅನಿಸಿಕೆಗಳನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ವಸ್ತು ವಿಷಯಗಳಲ್ಲಿ ವೈವಿಧ್ಯತೆಯನ್ನು ತೋರುವ ಚೋಕಾಗಳು ಇಲ್ಲಿ ಏಕತಾನತೆಗೆ ಅವಕಾಶ ನೀಡದೆ ಓದುಗರನ್ನು ಎಲ್ಲ ದಿಕ್ಕಿನಿಂದಲೂ ಚಿಂತಿಸುವಂತೆ ಮಾಡುತ್ತವೆ ಆ ನಿಟ್ಟಿನಲ್ಲಿ ಲೇಖಕರ ಶ್ರಮ ಬಹುತೇಕ ಸಾರ್ಥಕವಾಗಿದೆ ಎಂದು ಮೊದಲೇ ಹೇಳಲು ಇಚ್ಛಿಸುತ್ತೇನೆ. ಗುರುಚರಣ ಎಂಬ ಚೋಕಾದಲ್ಲಿ… ಮುನಿದರೇನು/ ದೇವಗಣ; ಗುರುವು/ ಕಾಯುವವನು/ ಗುರುವೇ ಮುನಿದರೆ/ನರಮಾನವ/ ನಿನ್ನಾರು ಕಾಯುವರು/ಗುರುಚರಣ/ ಅನುದಿನ ಪೂಜಿಸು/ನೀನೇ ಶ್ರೇಷ್ಠನಾಗುವೆ// ಮೇಲಿನ ರಚನೆಯು ದೇವರು ಮುನಿದರೆ ಗುರುವು ಕಾಯಲು ಇದ್ದಾರೆ, ಆದರೆ ಗುರುವೇ ಮುನಿಸಿಕೊಂಡರೆ ಗುರಿ ತೋರುವವರು ಇಲ್ಲದೆ ನಿನ್ನನ್ನು ಕಾಪಾಡಲು ಯಾರೂ ಇರಲಾರರು. ಆದ್ದರಿಂದ ನಿತ್ಯ ಗುರುಚರಣ ಸೇವಿಸಿದಲ್ಲಿ ಶ್ರೇಷ್ಟನಾಗಬಹುದು, ವಿಶೇಷನಾಗಬಹುದು ಎಂಬ ಸುಂದರ ವಿಚಾರ ಇಲ್ಲಿ ತಿಳಿಸಿದ್ದಾರೆ. ಇದನ್ನೇ ಅಲ್ಲವೇ ದಾಸರು ಹೇಳಿದ್ದು, “ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕುತಿ” ಎಂದು. ಇನ್ನೊಂದು ರಚನೆ: ನಾ ಹೇಗೆ ಹೋರಾಡಲಿ…. ಅಂಧಕಾರವೇ/ ತುಂಬಿರೋ ಬದುಕಲ್ಲಿ/ ಹೊಂಬೆಳಕನ್ನು / ನಾನೆಲ್ಲಿ ಹುಡುಕಲಿ/ಸತ್ಯದ ಸಾವು/ ಸಂಭವಿಸಿರುವಾಗ/ಸದ್ಧರ್ಮಕ್ಕಾಗಿ/ ನಾ ಹೇಗೆ ಹೋರಾಡಲಿ/ಹೇಳು ನೀ ಸೃಷ್ಟಿಕರ್ತ // ಇಲ್ಲಿ ಬದುಕಿನ ತೊಳಲಾಟವನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಬದುಕಿನಲ್ಲಿ ಅಂಧಕಾರ ತುಂಬಿರುವಾಗ ಉಜ್ವಲವಾಗುವುದಾದರೂ ಹೇಗೆ? ಲೋಕದಲ್ಲಿ ಸತ್ಯಕ್ಕೆ ಜಯ ಸಿಗದೆ ಸುಳ್ಳು ಮೆರೆದಾಡುತ್ತಿದೆ. ಹೀಗಿರುವಾಗ ಧರ್ಮಕ್ಕಾಗಿ, ನ್ಯಾಯಕ್ಕಾಗಿ ಹೋರಾಡುವುದಾದರೂ ಹೇಗೆ? ಹೇ ಭಗವಂತ ನೀನೇ ಇದಕ್ಕೆ ಉತ್ತರಿಸಬೇಕು ಎಂಬ ಆರ್ತನಾದ ಇಲ್ಲಿ ವ್ಯಕ್ತವಾಗಿದೆ. ಮಾನವೀಯತೆ/ ಮಣ್ಣಲ್ಲಿ ಮಣ್ಣಾದಾಗ/ ಕರುಣೆಯೆಂಬ/ ಕಡಲು ಬತ್ತಿದಾಗ/ ಅಧರ್ಮಗಳು/ ಅಟ್ಟಹಾಸ ಗೈದಾಗ/ ಅಂತಿಮವಾಗಿ / ಸದ್ಧರ್ಮ ಸ್ಥಾಪನೆಗೆ/ಧರ್ಮಯುದ್ಧವೇ ಅಸ್ತ್ರ// ಭಗವದ್ಗೀತೆಯ ಸಾಲು ಇಲ್ಲಿ ನೆನಪಿಗೆ ಬರುತ್ತದೆ. ಧರ್ಮಗ್ಲಾನಿ ಉಂಟಾದಾಗ ಮತ್ತೆ ಧರ್ಮ ಸ್ಥಾಪನೆಗಾಗಿ ಭಗವಂತ ಅವಿರ್ಭವಿಸುತ್ತಾನೆ ಎಂಬ ಮಾತಿನಂತೆ ಲೋಕದಲ್ಲಿ ಮಾನವೀಯತೆ, ಕರುಣೆ ನಾಶವಾಗಿ ಅಧರ್ಮವೇ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಧರ್ಮ ಸ್ಥಾಪನೆಗೆ ಧರ್ಮಯುದ್ಧವೇ ಪ್ರಬಲವಾದ ಅಸ್ತ್ರ. ಅದನುಳಿದು ಬೇರೆ ಇಲ್ಲ ಎಂಬ ತೀರ್ಮಾನ ಇಲ್ಲಿ ವ್ಯಕ್ತವಾಗಿದೆ. ಬೆಳದಿಂಗಳ/ ಬೆಳ್ಳಿ ಬೆಳಕಿನಲ್ಲಿ/ ಅರಳಿ ನಿಂತ/ ಸುಕೋಮಲ ಪುಷ್ಪವೇ/ ಲಲಿತಾಂಗಿಯೇ/ ಏನೆಂದು ಬಣ್ಣಿಸಲಿ/ ಆಶಕ್ಯವಿದೆ/ ನಿನ್ನಂದಕೆ ಸಾಟಿಯೇ/ ಶಶಿ ಕರಗಿದನು// ಇಲ್ಲಿ ಕವಿಯ ಅಲಂಕಾರ ಭಾವ ವ್ಯಕ್ತವಾಗಿದೆ. ಒಂದು ಕಡೆಯಿಂದ ಬೆಳದಿಂಗಳ ಬೆಳಕಿನಲ್ಲಿ ಹೂವು ಸೊಗಸಾಗಿ ಅರಳಿ ನಿಂತ ಪರಿಯನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ ಎಂಬುದಾಗಿಯೂ ಮತ್ತೊಂದು ದೃಷ್ಟಿಯಿಂದ ಅದೇ ಬೆಳದಿಂಗಳ ಛಾಯೆಯಲ್ಲಿ ಸುಕೋಮಲೆಯಾದ ಹೆಣ್ಣು ಮೈ ತುಂಬಿ ನಿಂತಾಗ ಆ ಸೊಬಗಿಗೆ ಸೋತ ಗಂಡು ಆಕೆಯ ಸೌಂದರ್ಯವನ್ನು ಹೊಗಳಲು ಪದಗಳಿಗೆ ಪರದಾಡುವ ಸ್ಥಿತಿಯಲ್ಲಿ ಇದ್ದಾಗ, ತಾನೇನು, ಈ ಚೆಲುವಿಗೆ ಶಶಿಯೇ ಸೋತು ಕರಗಿದನು ಎಂದು ವರ್ಣಿಸುವ ಕಾವ್ಯಾತ್ಮಕ  ಪರಿ ಅತ್ಯಂತ ಸೊಗಸಾಗಿದೆ. ಸ್ತ್ರೀ ಅಂದರೇನು/ ಕೇವಲ ಅವಳೊಂದು/ ಹೆಣ್ಣಾಗಿಹಳೇ/ ಕೂಸುಗಳನ್ನು ಮಾತ್ರ/ ಹೆತ್ತು ಕೊಡುವ/ ಸಾಧನವಾಗಿಹಳೇ / ಕಾಮ ತೀರಿಸೋ/ ಭೋಗ ವಸ್ತುವೇ?; ಅಲ್ಲ/ ಜಗದ್ದಾತ್ರಿಯವಳು// ಹಿಂದಿನ ಚೋಕಾದಲ್ಲಿ ಹೆಣ್ಣಿನ ಸೌಂದರ್ಯವನ್ನು ಹೊಗಳಿದ ಕವಿಯು ಇಲ್ಲಿ ಹೆಣ್ಣಿನ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಸಮಾಜವು ಇಂದು ಯಾವ ರೀತಿ ಹೆಣ್ಣನ್ನು ನೋಡುತ್ತಿದೆ ಎನ್ನುವುದನ್ನು ಅರಿತು ಅದರ ವಿರುದ್ಧ ಧ್ವನಿ ಎತ್ತಿರುವುದನ್ನು ಇಲ್ಲಿ ಕಾಣಬಹುದು. ಆಕೆ ಕೇವಲ ಭೋಗವಸ್ತು ಎಂದು ತಿಳಿಯದೆ, ಅವಳೊಂದು ಶಕ್ತಿ, ಜಗದ್ಧಾತ್ರಿ ಎನ್ನುವುದನ್ನು ತಿಳಿದು ಅಕೆಯನ್ನು ಗೌರವದಿಂದ ಕಾಣುವ ದೃಷ್ಟಿ ಹೊಂದಬೇಕು ಎಂದು ಪ್ರತಿಪಾದಿಸಿದ್ದಾರೆ. ಇದು ಇಂದಿನ ದಿನಮಾನಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಇನ್ನು ಬೇರೆಯವರ ದುಡ್ಡು ತಿಂದು ಎಷ್ಟು ದಿನ ಸುಖವಾಗಿ ಇರಬಹುದು ಎನ್ನುವುದರ ಬಗ್ಗೆ ಹೀಗೆ ಹೇಳುತ್ತಾರೆ. ಪರ ದುಡ್ಡಲ್ಲಿ/ ಮೋಜು ಮಸ್ತಿಯ ಮಾಡಿ/ ತಮ್ಮ ಬೇಳೆಯ/ ಬೇಯಿಸಿಕೊಳ್ಳುವಂತ/ ನರಾಧಮರು/ ಜಗದ ತುಂಬೆಲ್ಲವೂ/ ತುಂಬಿರುವಾಗ / ಸುಜನರ ಏಳ್ಗೆಯು/ ಬುವಿಯಲ್ಲಿ ಆದೀತೇ// ಸ್ವಾರ್ಥವೇ ತುಂಬಿರುವ ಜನರು ಇಂದು ಸುಲಿಗೆ ಮೋಸ ವಂಚನೆಯಲ್ಲಿ ತೊಡಗಿರುವಾಗ ಅಂಥ ನರಾಧಮರು ತಮ್ಮ ಮೋಜು ಮಸ್ತಿಗಾಗಿ ಬೇರೆಯವರ ದುಡ್ಡು ತಿಂದು ಮೋಸ ಮಾಡುವುದನ್ನು ಕಾಣುತ್ತವೆ. ಇಂಥ ನೀಚರೇ ಎಲ್ಲೆಲ್ಲೂ ತುಂಬಿ ಹೋಗಿದ್ದಾರೆ. ಹೀಗಿರುವಾಗ ಲೋಕ ಹೇಗೆ ಉದ್ದಾರ ಆದೀತು ಎಂಬ ಕಳವಳ ಕವಿಯಲ್ಲಿ ಮಾತ್ರವಲ್ಲ , ನಮ್ಮಲ್ಲೂ ಮೂಡದೆ ಇರಲು ಸಾಧ್ಯವೇ ಹೇಳಿ. ದೇಶಪ್ರೇಮ ಇರದವನು ದೇಶಿಗನು ಆಗಲು ಸಾಧ್ಯವಿಲ್ಲ. ಹಾಗೆಯೇ ಇಲ್ಲೊಂದು ದೇಶಪ್ರೇಮ ಮೆರೆವ ಯೋಧರ ಕುರಿತಾದ ರಚನೆ ನೋಡೋಣ. ಭಾರತಾಂಬೆಯ / ಮುಕುಟದಿ ಶೌರ್ಯದಿ /ನಿಂತ ಯೋಧರು/ ಹಿಮವನ್ನೇ ಹಾಸಿಗೆ/ ಮಾಡಿಕೊಂಡರು/ ಕೊರೆವ ಚಳಿಯನ್ನೇ/ ಹೊದ್ದುಕೊಂಡರು / ಕೆಚ್ಚೆದೆಯಿಂದ ವೈರಿ/ ನಾಶಕ್ಕೆ ಕಾದಿಹರು// ಇಂದು ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದಾದರೆ ಅದು ಗಡಿಯಲ್ಲಿ ಕಾಯುವ ಯೋಧರ ಕೊಡುಗೆ. ನಾವು ಬೆಚ್ಚಗೆ ಮಲಗಿದ್ದರೆ ಅಲ್ಲಿ ಯೋಧರು ಹಿಮವನ್ನೇ ಹೊದ್ದುಕೊಂಡು ವೈರಿಗಳ ನುಸುಳುವಿಕೆಯನ್ನು ತಡೆಯಲು ಕಾಯುತ್ತಿದ್ದಾರೆ ಅಲ್ಲವೇ. ಅವರ ದೇಶ ಪ್ರೇಮ, ಸೇವಾ ನಿಷ್ಠೆ, ಕಾರ್ಯ ತತ್ಪರತೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಲ್ಲವೇ.. ಕವಿಯ ದೇಶಪ್ರೇಮ ಇಲ್ಲಿ ಉತ್ಕಟವಾಗಿದೆ. ಇಷ್ಟೇ ಅಲ್ಲದೆ ಕವಿಯ ಚಿತ್ತ ದಶದಿಕ್ಕುಗಳಿಗೂ ಹರಿದು, ದೃಷ್ಟಿಗೆ ಗೋಚರಿಸಿದ ಬಹಳಷ್ಟು ವಿಚಾರಗಳನ್ನು ತಮ್ಮ ಲೇಖನಿಯ ಮೂಲಕ ಇಳಿಸಿದ್ದಾರೆ. ಕರುನಾಡಿನ ಕುರಿತು, ಕನ್ನಡದ ಕುರಿತು ಬರೆಯದ ಕವಿ ಕನ್ನಡಿಗನು ಹೇಗಾದಾನು. ಅಂತೆಯೆ ಕನ್ನಡ ನಾಡು ನುಡಿಯ ಬಗ್ಗೆಯೂ ಇಲ್ಲಿ ನಾವು ನೋಡಬಹುದಾಗಿದೆ. ಇನ್ನು ಗುರುಗಳು, ಶರಣರು, ಮಹಾತ್ಮರ ಕುರಿತಾದ ಚೋಕಾಗಳು ಮನಸೆಳೆಯುತ್ತವೆ. ಭಾರತದ ನೆಲದಲ್ಲಿ ಅಧ್ಯಾತ್ಮಕ್ಕೆ ಮಹತ್ವದ ಸ್ಥಾನ ಇದೆ. ಅಂತೆಯೇ ಇಲ್ಲಿ ಕವಿಗಳ ಭಗವಂತನ ಕುರಿತು, ರಾಮನ ಕುರಿತು ಬರೆದ ರಚನೆಗಳು ಭಕ್ತಿ ಭಾವದಿಂದ ಓದುವಂತೆ ಮಾಡಿವೆ. ಕವಿಯಾದವನಿಗೆ ಪ್ರಕೃತಿ ನೀಡಿದಷ್ಟು ಪ್ರೋತ್ಸಾಹ ಮತ್ತೆಲ್ಲೂ ಸಿಗಲಾರದು. ಅಂದ ಮೇಲೆ ಪ್ರಕೃತಿ ಸೌಂದರ್ಯ ಇಲ್ಲೂ ನಳನಳಿಸಿದೆ, ಒಲವಿನ ಸುಧೆ ಹರಿಸಿದೆ. ಹಾಗೆಯೇ ಬದುಕಿನ ನೋವು ನಲಿವುಗಳು ಪ್ರತಿದ್ವನಿಸಿವೆ. ಆದರೆ ಇವೆಲ್ಲವುಗಳನ್ನು ಓದಿ ಮನನಮಾಡಿಕೊಳ್ಳುವ ಹೃದಯ ಇರಬೇಕು ಅಷ್ಟೇ. ಒಟ್ಟಿನಲ್ಲಿ “ಚೋಕಾ- ಕಾವ್ಯಧಾರೆ” ಕೃತಿಯು ತನ್ನ ಪ್ರತಿ ಪುಟದಲ್ಲೂ ಓದುಗನ ಹೃದಯಕ್ಕೆ ನಾಟುವಂತಹ ವಿಶಿಷ್ಟ ಜಪಾನಿ ಸಾಹಿತ್ಯದ ಕನ್ನಡ ಪ್ರಕಾರದಿಂದ ಪ್ರಕಾಶಿತಗೊಳ್ಳುತ್ತಿರುವುದು ಕನ್ನಡ ಸಾಹಿತ್ಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತೆ ಎನ್ನಬಹುದು. ಕವಿ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರ ಈ ಕೃತಿಯು ಓದುಗರ ಜ್ಞಾನದಾಹವನ್ನು ತಣಿಸಲಿ. ಕೃತಿಕಾರರಿಗೆ ಯಶಸ್ಸು ಕೀರ್ತಿ ಅರಸಿ ಬರಲಿ. ಮತ್ತಷ್ಟು ಅಧ್ಯಯನದೊಂದಿಗೆ ಬರೆವಣಿಗೆ ಮುಂದುವರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಮನೆಮಾತಾಗಲಿ ಎಂದು ಹಾರೈಸುತ್ತೇನೆ. ಹರಿನರಸಿಂಹ ಉಪಾಧ್ಯಾಯ(ಕವಿಗಳು)ಶಂಭೂರು, ಬಂಟ್ವಾಳ ತಾಲ್ಲೂಕು. ದ.ಕ.ಜಿಲ್ಲೆ+೯೧ ೯೯೮೦೯೨೧೧೧೧

ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ”ಹರಿನರಸಿಂಹ ಉಪಾಧ್ಯಾಯ ಶಂಭೂರು Read Post »

You cannot copy content of this page

Scroll to Top