ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಜ್ಯೋತಿ ಮಾಳಿಯವರ ಕೃತಿ”ಹಾಳುಗೋಡೆಯಲೊಂದು ಚಿಗುರು(ಗಜಲ್ ಸಂಕಲನ)” ಒಂದುಅವಲೋಕನ ಪ್ರಭಾವತಿ ಎಸ್ ದೇಸಾಯಿ

ಪುಸ್ತಕ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಜ್ಯೋತಿ ಮಾಳಿ “ಹಾಳು ಗೋಡೆಯಲೊಂದು ಚಿಗುರು“ ಕೃತಿ ಶೀಷಿ೯ಕೆ:ಹಾಳು ಗೋಡೆಯಲೊಂದು ಚಿಗುರುಲೇಖಕರು:ಜ್ಯೋತಿ ಮಾಳಿ…..೭೩೩೭೭ ೦೯೫೧೨*ಪ್ರಕಾಶಕರು:ಜ್ಯೋತಿ ಪ್ರಕಾಶನ ಬೆಳಗಾವಿ ೭೩೩೭೭ ೦೯೫೧೨ಪುಸ್ತಕದ ಬೆಲೆ:126=00 ಹಾಳು ಗೋಡೆಯಲಿ ಚಿಗುರಿದ ಪ್ರಕೃತಿಯ ಆತ್ಮಬಲ ತೋರಿಸುವ ಗಜಲ್ ಗಳು… ಗಜಲ್ ಅಂದರೆ ಏನು ? ,ಅದು ಹೇಗೆ ಹುಟ್ಟಿತು ‌ , ಎಲ್ಲಿ ಬೆಳೆದು ಭಾರತಕ್ಕೆ ಹೇಗೆ ಬಂದಿತೆಂದು , ಕನ್ನಡ ಗಜಲ್ ರಚನಾ ಛಂದಸ್ಸು ಏನು, ಹೇಗೆ , ಗಜಲ್ ರಚನಾ ನಿಯಮಗಳು ಹೇಗೆಂದು ಡಾ . ಶಾಂತರಸ ಹೆಂಬೇರಾಳ ಅವರಿಂದ ಪ್ರಾರಂಭವಾದ ಈ ವಿಷಯ ಇಂದಿನ ಎಲ್ಲಾ ಗಜಲ್ ಸಂಕಲಗಳಲ್ಲಿ ವಿವರಣೆ ಸಿಗುತ್ತದೆ. ಆದ ಕಾರಣ ನಾನು ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ . ನನ್ನ ದೃಷ್ಟಿಯಲ್ಲಿ ಗಜಲ್ ಎಂದರೆ ಧ್ಯಾನ , ಆತ್ಮಾನು ಸಂಧಾನ , ನಮ್ಮನ್ನು ನಾವು ಅರಿತುಕೊಳ್ಳುವುದು , ಲೌಕಿಕ ಪ್ರೀತಿಯಿಂದ ಆಧ್ಯಾತ್ಮಿಕ ಪ್ರೀತಿಯಲ್ಲಿ ಕೊನೆಗೊಳ್ಳುವುದು . ನಿರಾಕಾರನಾದ ಆ ಭಗವಂತನೊಂದಿಗೆ ಮಾತನಾಡುವುದು , ನಿವೇದಿಸಿಕೊಳ್ಳುವುದು , ಲಿಂಗಪತಿ ಶರಣ ಸತಿ ಭಾವ ಮೈ ತಾಳುವುದು , ಮೀರಾ ಮಾಧವನ ಭಕ್ತಿಯಂತೆ , ರಾಧಾಕೃಷ್ಣರ ಪ್ರೀತಿಯಂತೆ , ಅಕ್ಕಮಹಾದೇವಿ ಮಲ್ಲಿಕಾರ್ಜುನ ಧ್ಯಾನಿಸಿದಂತೆ . ಗಜಲ್ ಮೃದು ಮಧುರ ಭಾವನೆಗಳನ್ನು ಒಂದು ಹೃದಯ ಇನ್ನೊಂದು ಹೃದಯಕ್ಕೆ ನಿವೇಸದಿಸಿಕೊಳ್ಳು ಕಾವ್ಯ. ಗೇಯತೆ ,ಲಯ, ಮಧುರ , ಮಾಧುರ್ಯ ಉಳ್ಳ ಕಾವ್ಯವಾಗಿದೆ. ಇದು ಹಾಡುಗಬ್ಬ ಇಲ್ಲಿ ಗೇಯತೆ ,ಲಯ ,ಮಾಧುರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ . ಆತ್ಮವೂ ತನ್ನ ಸುತ್ತ ಹೆಣೆದುಕೊಳ್ಳುವ ನೋವು ನಲಿವುಗಳ ಮೋಹಕವಾದ ಪ್ರೇಮಿಗಳ ಪಿಸುಮಾತುಗಳೇ ಗಜಲ್ ಎಂದು ಹೇಳಬಹುದು. ಹೃದಯಗಳನ್ನು ಬೆಸೆಯುವ ಒಂದು ಅದ್ಭುತವಾದ ಶಕ್ತಿ ಇದಕ್ಕಿದೆ ನೋವಿನ ಕಡಲಲ್ಲಿನ ಬದುಕನ್ನು ದಡ ಸೇರಿಸುವ ಸುಖದ ಹಾಯ್ ದೋಣಿ ಇದಾಗಿದೆ.‌ ಧರ್ಮದ ಯಾವ ಕಟ್ಟುಪಾಡುಗಳನ್ನು ಸ್ವೀಕರಿಸದೆ ಸರ್ವರನ್ನು ಮನುಷ್ಯರನ್ನಾಗಿಸುವ ಕರುಣೆ ಸ್ನೇಹ ಅಸಹಾಯಕ ಅನುಕಂಪಗಳಲ್ಲಿ ದೇವರನ್ನು ಕಾಣಿಸುವ ಕಾವ್ಯ ಇದಾಗಿದೆ.. ಗಜಲ್ ಕಾವ್ಯ ನೋಡಲು ಸುಲಭವೆಂದು ಕಂಡರೂ ಇದರ ರಚನೆ ಸುಲಭವಲ್ಲ. ಗಂಭೀರ ಅಧ್ಯಯನ,ದಟ್ಟವಾದ ಅನುಭವ, ಧ್ಯಾನಿಸುವ ಮನೋದರ್ಮ, ಜನಸಾಮಾನ್ಯನ ಎದೆಗೂ ಮುಟ್ಟಿಸಬೇಕೆನ್ನುವ ತುಡಿತ ಸರಳ ಮೃದು ಶಬ್ದಗಳ ಬಳಿಕೆ ಇದ್ದರೆ ಮಾತ್ರ ಗಜಲ್ ರಚನೆ ಸಾಧ್ಯ. ಇದರ ಜೊತೆಗೆ ರಚನಾ ನಿಯಮಗಳನ್ನು ಅರಿತಿರಬೇಕು. ಇಂದು ಅನೇಕರು ಕನ್ನಡ ಗಜಲ್ ಗಳನ್ನು ರಚನೆ ಮಾಡುತ್ತಿದ್ದಾರೆ .ಕೆಲವರಿಗೆ ಮಾತ್ರ ಈ ರಾಣಿ ಒಲೆದಿದ್ದಾಳೆ,ಬಹಳ ಜನ ಎಡವುತಿದ್ದಾರೆ. ವಯಸ್ಸು ಲಿಂಗ ಭೇದವಿಲ್ಲದೆ ಅನೇಕರು ಗಜಲ್ ರಚಿಸಿ ಕೃತಿಗಳನ್ನು ಪ್ರಕಟಿಸಿ ಗಜಲ್ ಕಾರರಾಗಿದ್ದರೆ. ಬೆಳಗಾವಿ ಜಿಲ್ಲೆಯ ಜ್ಯೋತಿ ಮಾಳಿ ಇವರು ತಮ್ಮ ಹಾಳು ಗೋಡೆಯಲೊಂದು ಚಿಗುರು ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಪ್ರೀತಿಯಿಂದ ಓದುಗರ ಬೊಗಸೆಯಲ್ಲಿ ಇಟ್ಟಿದ್ದಾರೆ. ಜ್ಯೋತಿ ಮಾಳಿಯವರು ಈಗಾಗಲೇ ದುರುಡುಂಡೇಶ್ವರ ನಾಮಾಂಕಿತ ಆಧುನಿಕ ವಚನಗಳು ಮತ್ತು ಅಗಣಿತ ಮಹಿಮೆ ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ . ಸದ್ಯ ಬೆಳಗಾವಿಯ ಕೋಟಕ್ ಮಹೀಂದ್ರ ಲೈಫ್ ಇನ್ಸೂರೈನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ . ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ . ಅನೇಕ ಹಿರಿಯರ ಗಜಲ್ ಕೃತಿಗಳನ್ನು ಅಧ್ಯಯನ ಮಾಡಿ ಗಜಲ್ ರಚನಾ ಕ್ರಮವನ್ನು ಅರ್ಥೈಸಿಕೊಂಡು ನಿಯಮಗಳನ್ನು ಪಾಲಿಸಿಕೊಂಡು ಗಜರಗಳನ್ನು ರಚಿಸಿ ಕೃತಿಯನ್ನು ಪ್ರಕಟಿಸಿದ್ದಾರೆ ಬದುಕಿನಲ್ಲಿ ಮಹಿಳಗೆ ಬರುವ ಕಷ್ಟ ,ನೋವು, ತಿರಸ್ಕಾರ ಗಳನ್ನು ವಿಷಯವಾಗಿಟ್ಟುಕೊಂಡು ಗಜಲ್ ಗಳನ್ನು ರಚಿಸಿದ್ದಾರೆ . ಜ್ಯೋತಿ ಮಾಳಿಯವರ ಹಾಳು ಗೋಡೆಯಲೊಂದು ಚಿಗುರು ಗಜಲ್ ಸಂಕಲನಕ್ಕೆ ಶ್ರೇಷ್ಠ ಗಜಲ್ ಕಾರರಾದ ನಾಗೇಶ್ ಜೆ ನಾಯಕ ಅವರು ಅಮೂಲ್ಯವಾದ ಮುನ್ನುಡಿಯನ್ನು ಬರೆದು ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ .‌ ಅದೇ ರೀತಿಯಾಗಿ ಸಿದ್ದರಾಜು ಪೂಜಾರಿ ಅವರು ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ . ಪ್ರಕಟಣೆಗೆ ಮುಂಚಿತವಾಗಿ ಈಶ್ವರ ಮಮದಾಪುರ ಹಾಗೂ ಶ್ರೀಮತಿ ಹಮೀದಾ ಬೇಗಂ ದೇಸಾಯಿ ಇವರುಗಳು ಗಜಲ್ ಗಳನ್ನು ಓದಿ ಶುಭ ಹಾರೈಕೆಯನ್ನು ಬರೆದಿದ್ದಾರೆ . ಜ್ಯೋತಿ ಮಾಳಿ ಇವರ ಕೃತಿ ಹಾಳು ಗೋಡೆಯಲೊಂದು ಚಿಗರು ಗಜಲ್ ಸಂಕಲನದಲ್ಲಿ 103 ಗಜಲ್ ಗಳಿದ್ದು 5 ,7 ,9 ದ್ವಿಪದಿಗಳ ಗಜಲ್ ಗಳಿವೆ. ಮುರದ್ಧಫ್ ಗಜಲ್ ,ಗೈರ್ ಮುರದ್ಧಫ್ ಗಜಲ್ ಗಳಿವೆ ಈ ಸಂಕಲದಲ್ಲಿವೆ. ಇರವ ಗಜಲ್ ಗಳು ಸ್ತ್ರೀ ಸಂವೇದನ ಬದುಕಿನ ತಲ್ಲಣಗಳನ್ನು ವಿಷಯವಾಗಿಟ್ಟುಕೊಂಡು ಗಜಲನ್ನು ರಚಿಸಿದ್ದಾರೆ . ಪುರುಷ ಪ್ರಧಾನವಾದ ಸಮಾಜದ ದೌರ್ಜನ್ಯಗಳನ್ನು, ದಬ್ಬಾಳಿಕೆಯನ್ನು, ಅನುಭವಿಸಿದ ಸಂಕಟ , ಯಾತನೆಗಳನ್ನು ಬಿಚ್ಚಿಟ್ಟಿದ್ದಾರೆ . ಹೆಣ್ಣು ಎಲ್ಲವನ್ನು ಸಹಿಸಿಕೊಂಡು ಬದುಕಿನ ಸವಾಲು ಮೆಟ್ಟಿ ಮುನ್ನ ನಡೆಯುವ ಧೋರಣೆಯನ್ನು ಜ್ಯೋತಿಯವರು ಗಜಲ್ ದಲ್ಲಿ ವ್ಯಕ್ತಪಡಿಸಿದ್ದಾರೆ .ಜ್ಯೋತಿ ಮಾಳಿಯವರು ಗಜಲ್ ಕಾವ್ಯದಲ್ಲಿ ತಮ್ಮ ತಖಲುಸ್ ನಾಮವನ್ನು “ಜ್ಯೋತಿ” ಎಂದು ಉಪಯೋಗಿಸಿದ್ದಾರೆ. ಜ್ಯೋತಿ ಮಾಳಿ ಯವರ ಹಾಳು ಗೋಡೆಯಲೊಂದು ಚಿಗುರು ಗಜಲ್ ಸಂಕಲನದ ಕೆಲವು ಗಜಲ್ ಗಳ ಸಾಲುಗಳ ವಿಶ್ಲೇಷಣೆ…. ಗಾಳಿಗೆ ಕಿಡಿ ಹೊತ್ತಿ ಉರಿಯುಲು ಎಷ್ಟು ಹೊತ್ತು ಬೇಕುನದಿಗೆ ಹರಿಯುತ ಕೊಚ್ಚಿಹೋಗಲು ಎಷ್ಟು ಹೊತ್ತು ಬೇಕು ಮೇಲಿನ ಗಜಲ್ ಓದಿದಾಗ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ನೆನಪಾಯಿತು ,ಬದುಕು ಕಟ್ಟುವುದು ಬಹಳ ಕಷ್ಟ ಆದರೆ ಅದೇ ಬದುಕು ಹಾಳಾಗಲು ಬಹಳ ಸಮಯ ಬೇಕಾಗುವುದಿಲ್ಲ ವೆಂದು ಮನನೊಂದು ವಿವಿಧ ರೀತಿಯ ರೂಪಕಗಳೊಂದಿಗೆ ವ್ಯಕ್ತಪಡಿಸಿದ್ದಾರೆ . ಕೈಯಿಂದ ಜಾರಿದ ಸಣ್ಣ ಬೆಂಕಿ ಕಡ್ಡಿಯ ಕಿಡಿ ಹೊತ್ತಿ ಇಡೀ ಹುಲ್ಲು ಗೂಡನ್ನು ಸುಡಲು ಬಹಳ ಹೊತ್ತು ಹಿಡಿಯುವುದಿಲ್ಲ.. ಅನ್ನೋನ್ಯವಾದ ಸಂಬಂಧಗಳ ಮಧ್ಯೆ ಅನೈತಿಕ ಸಂಬಂಧಗಳು ಇಣುಕಿದಾಗ ಸುಂದರವಾದ ಸಂಸಾರ ಹಾಳಾಗುವುದೆಂದು ಗಜಲ್ ಕಾರ್ತಿಯು ಮನನೊಂದು ಮಾರ್ಮಿಕವಾಗಿ ಗಜಲ್ ದಲ್ಲಿ ರೂಪಕಗಳೊಂದಿಗೆ ವಿವರಿಸಿದ್ದಾರೆ. ಯಾವ ಸುಖಕ್ಕಾಗಿ ಕಮರಿ ಹೋದೆ ಊಮಿ೯ಳೆ?ಲಕ್ಷ್ಮಣ ನಿನಗಾಗಿ ಸಮಯ ನೀಡ ಬೇಕಿತ್ತು ನೊಂದೆ ಏಕೆ? ಯುಗ ಯುಗಗಳಿಂದಲೂ ಪುರುಷ ಪ್ರಧಾನವಾದ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ಅಲಕ್ಷಗಳು ನಡೆದಿದ್ದು ಮಹಿಳೆ ತನ್ನ ಆಸೆ ಆಕಾಂಕ್ಷೆಗಳಿಗೆ ತಿಲಾಂಜನ ಕೊಟ್ಟು ಬದುಕುವುದನ್ನು ಕಲಿತಿದ್ದಾಳೆ. ನಾವು ಪುರಾಣಗಳಲ್ಲಿ ಬರುವ ಪಾತ್ರಗಳಲ್ಲಿ ಇದನ್ನು ಕಂಡುಕೊಂಡಿದ್ದೇವೆ . ಗಜಲ್ ಕಾರ್ತಿಯು ರಾಮಾಯಣದ ಊಮಿ೯ಳೆಯ ಜೀವನದ ಚಿತ್ರಣಯನ್ನು ಉದಾಹರಣೆಯಾಗಿ ಗಜಲ್ ದಲ್ಲಿ ಎತ್ತಿ ತೋರಿಸಿದ್ದಾರೆ. ಹಂಗಿನ ಅರಮನೆ ಕೂಳನೆಂದು ನುಂಗಲಾರೆನುಕಣ್ಣೀರಾಗಿ ರೆಪ್ಪೆ ತೊರೆದು ಜಾರಲಾರೆನು ಈ ಗಜಲ್ ದ ಮತ್ಲಾ ಓದಿದಾಗ ಗಜಲ್ ಕಾರ್ತಿಯು ಸ್ವಾಭಿಮಾನದ ಬದುಕು ಬಾಳ ಬಯಸುವುದು ತಿಳಿಯುತ್ತದೆ . ಹೆಣ್ಣು ಅಬಲೆ ಎಂದು ಸದಾ ಪುರುಷರ ಆಶ್ರಯದಲ್ಲಿ ಇರಬೇಕೆಂದು ಸಮಾಜ ಬಯಸುತ್ತದೆ . ಅದನ್ನು ಖಂಡಿಸಿದ ಗಜಲ್ ಕಾತಿ೯ ಅನ್ಯರ ಹಂಗಿನ ಅರಮನೆ ಕೂಳನೆಂದು ನುಂಗಲಾರೇ ಎಂದು ಮತ್ತು ಎಷ್ಟೇ ದುಃಖ ಇದ್ದರು ಕಣ್ಣೀರನ್ನು ಜಾರಿಸಿ ಅಬಲೆ ಎಂದು ಸಮಾಜದಮುಂದೆ ಸಾರಲು ಬಯಸುವುದಿಲ್ಲ ಎಂದು ಮಾರ್ಮಿಕವಾಗಿ ತಮ್ಮ ದೃಢ ನಿಲುವನ್ನು ಗಜಲ್ ದಲ್ಲಿ ರೂಪಕಗಳೊಂದಿಗೆ ತೋರಿಸಿದ್ದಾರೆ. ಹೆಣ್ಣಾಗಿ ಹುಟ್ಟೋದು ಈ ಭೂಮಿ ಮ್ಯಾಲ ಯಾರಿಗೆ ಬೇಕಿತ್ತು•ಹುಣ್ಣಾಗಿ ಕಂಡು ಆ ತೆಗಳೋ ಮಾತು ಯಾರಿಗೆ ಬೇಕಿತ್ತು* ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಾಗಿ ಹುಟ್ಟುವುದೇ ತಪ್ಪಾಗಿದೆ , ಹೆಣ್ಣಾಗಿ ಹುಟ್ಟುವುದು ಯಾರಿಗೆ ಬೇಕಾಗಿದೆ. ಹುಟ್ಟು ಯಾರ ಕೈಯಲ್ಲಿ ಇಲ್ಲ ಆದರೂ ಹೆಣ್ಣಾಗಿ ಹುಟ್ಟಿದಾಕೆ ಹೆತ್ತವರಿಂದ , ಒಡಹುಟ್ಟಿದವರಿಂದ, ಕೈ ಹಿಡಿದ ಗಂಡಸಿನಿಂದ , ದೌರ್ಜನ್ಯವನ್ನು ಸಹಿಸುತ್ತಾ ಸಮಾಜದ ತೆಗಳಿಕೆಯ ಮಾತುಗಳನ್ನು ಕೇಳುವುದು ಯಾರಿಗೆ ಬೇಕಾಗಿದೆ ಎಂದು ಹೇಳುತ್ತಾ ಈ ಭೂಮಿಯ ಮೇಲೆ ಹೆಣ್ಣಾಗಿ ಹುಟ್ಟಿದ್ದೇ ದೊಡ್ಡ ತಪ್ಪು ಎಂಬ ಭಾವನೆಯಲ್ಲಿ ಗಜಲ್ ನ್ನು ಸುಂದರವಾಗಿ ರೂಪಕಗಳೊಂದಿಗೆ ಮನದ ಮಾತು ಗಜಲ್ ದಲ್ಲಿ ಹೇಳಿದಿದ್ದಾರೆ. ಕಟ್ಟಿಕೊಂಡ ಕನಸುಗಳು ಬಿಕರಿಗೊಂಡವು ಬಾಳ ಬುತ್ತಿಯನು ಬಿಚ್ಚಿಟ್ಟಾಗಗಟ್ಟಿತನದ ಆಸೆಗಳು ನಿರಾಶೆಗೊಂಡವು ನಂಬಿಕೊಂಡದನು ಕೈ ಬಿಡುವಾಗ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೆ ಜೀವನದಲ್ಲಿ ತನ್ನದೇ ಆದ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾನೆ. ಆ ಕನಸುಗಳು ನನಸಾಗದೆ ಬಿಕರಿಯಾದಾಗ ಬದುಕು ಹಾಳ ಸಂತೆಯಾಗುತ್ತದೆ . ತಾ ಬಯಸಿದ ಆಸೆಗಳೆಲ್ಲ ಈಡೆರದೆ ನಿರಾಶೆ ಆಗುತ್ತದೆ. ಬಯಸಿದ ಬದುಕು ಸಿಗದಾಗ ಮನನೊಂದು ನಿರಾಸೆಗೊಂಡು ತಾನು ನಂಬಿದ ಶುದ್ಧವಾದ ಜೀವನ ಸಿಗದೇ ಬದುಕು ಹಾಳಾಗಿದ್ದಕ್ಕೆ ಮರಗುತ್ತದೆ . ಈ ಗಜದಲ್ಲಿ ಗಜಲ್ ಕಾತಿ೯ ನಿರಾಶೆಯ ಭಾವವನ್ನು ರೂಪಕಗಳೊಂದಿಗೆ ವ್ಯಕ್ತಪಡಿಸಿದ್ದಾರೆ. ಜ್ಯೋತಿ ಮಾಳಿಯವರ ಪ್ರಥಮ ಗಜಲ್ ಸಂಕಲನ ಹಾಳು ಗೋಡೆಯಲೊಂದು ಚಿಗುರು ಎಂಬ ಕೃತಿಯಲ್ಲಿ ಸಮಾಜದಲ್ಲಿ ಮಹಿಳೆ ಅನುಭವಿಸಿದ ನೋವು ಅವಮಾನ ,ಮನದ ತಲ್ಲಣಗಳು,ತಣ್ಣನೆಯ ಆಕ್ರೋಶ , ಬಂಡಾಯ ಧ್ವನಿ , ಸಮಾಜದ ಆ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಗೆ ಮಹಿಳೆ ಏನೆಲ್ಲಾ ಸಮಸ್ಯೆ ಬಂದರೂ ಅವುಗಳನ್ನು ಎದುರಿಸಿ ಬದುಕಬಲ್ಲೆ ಎಂಬ ಭಾವಗಳನ್ನು ಎದ್ದು ಕಾಣುವ ಗಟ್ಟಿಯಾದ ಗಜಲ್ ಗಳು ಈ ಸಂಕಲನದಲ್ಲಿ ಬಹಳಷ್ಟು ಸಂಖ್ಯೆಯಲ್ಲಿವೆ. ಜ್ಯೋತಿ ಮಾಳಿ ಅವರ ಹಾಳು ಗೋಡೆಯಲೊಂದು ಚಿಗುರು ಎಂಬ ಕೃತಿಯಲ್ಲಿ ಮಹಿಳೆ ಇಂದು ಹಾಗೂ ಹಿಂದೆ ಅನುಭವಿಸಿದ ನೋವುಗಳನ್ನು ಸಹಜವಾಗಿ ತಾವು ಅನುಭವಿಸಿ ನೋವುಗಳೆಂಬಂತೆ ಈ ಸಂಕಲನದ ಗಜಲ್ ದಲ್ಲಿ ತೋರಿಸಿಕೊಟ್ಟಿದ್ದಾರೆ.. ಭಾವ ತೀವ್ರತೆಯನ್ನು ಓದಗ ಅರ್ಥ ವಾಗುವಂತೆ ರೂಪಕಗಳನ್ನು ಬಳಸಿದ್ದಾರೆ ಜ್ಯೋತಿಯವರುಇನ್ನೂ ಉತ್ತಮವಾದ ಗಜಲ್ ಗಳನ್ನು ಬರೆದು ಕನ್ನಡ ಗಜಲ್ ಕಣಜವನ್ನು ತುಂಬಲೆಂದು ಶುಭ ಹಾರೈಸುತ್ತಾ ವಿರಾಮ ಕೊಡುತ್ತೇನೆ . ಪ್ರಭಾವತಿ ಎಸ್ ದೇಸಾಯಿ

ಜ್ಯೋತಿ ಮಾಳಿಯವರ ಕೃತಿ”ಹಾಳುಗೋಡೆಯಲೊಂದು ಚಿಗುರು(ಗಜಲ್ ಸಂಕಲನ)” ಒಂದುಅವಲೋಕನ ಪ್ರಭಾವತಿ ಎಸ್ ದೇಸಾಯಿ Read Post »

ಪುಸ್ತಕ ಸಂಗಾತಿ

ಲೇಖಕ ಡಾ. ಹೊನ್ಕಲ್ ಅವರ ಹತ್ತನೇ ಪ್ರವಾಸ ಕಥನ “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ”ಲೋಕಾರ್ಪಣೆ

ಪುಸ್ತಕ ಸಂಗಾತಿ ಲೇಖಕ ಡಾ. ಹೊನ್ಕಲ್ ಅವರ ಹತ್ತನೇ ಪ್ರವಾಸ ಕಥನ “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ” ಲೋಕಾರ್ಪಣೆ ಯಾದಗಿರಿ:- ಇತ್ತೀಚೆಗೆ ಇಲ್ಲಿಗೆ ಸಮೀಪದ ಗುರುಮಠಕಲ್ ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡದ ಅಸ್ಮಿತೆ ಕಾರ್ಯಕ್ರಮದಲ್ಲಿ ಲೇಖಕ ಡಾ. ಸಿದ್ಧರಾಮ ಹೊನ್ಕಲ್ ಅವರ *ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ..* ಎಂಬ ಅವರ ಹತ್ತನೇ ಪ್ರವಾಸ ಕಥನವನ್ನು ಸಾನಿಧ್ಯ ವಹಿಸಿದ ಪರಮಪೂಜ್ಯ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವೇದಿಕೆಯಲ್ಲಿದ್ದ ಡಾ.ಜೆ.ವಿ.ಪುರುಷೋತ್ತಮ ಅವರು ಹಾಗೂ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ ಡಾ.ಎಂ.ಎಸ್.ಶಿರವಾಳ,ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಾಬುರಾಯ ದೊರೆ, ಇಂಗ್ಲಿಷ್ ಉಪನ್ಯಾಸಕರಾದ ಮಹೇಶ ಚಂದಾಪುರ ಮುಂತಾದವರು ಲೋಕಾರ್ಪಣೆ ಮಾಡಿದರು.ಲೇಖಕ ಸಿದ್ಧರಾಮ ಹೊನ್ಕಲ್ ಉಪಸ್ಥಿತರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಈ ಹಿಂದೆ ಪ್ರಶಸ್ತಿ ಪಡೆದ ಅವರ ಪ್ರವಾಸ ಕೃತಿ ಪಂಚನದಿಗಳ ನಾಡಿನಲ್ಲಿ, ಗುಲ್ಬರ್ಗಾ ವಿವಿಯ ಪ್ರಶಸ್ತಿ ಪಡೆದ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ, ಗಾಂಧೀಯ ನಾಡಿನಲ್ಲಿ, ಕಲ್ಬುರ್ಗಿಯಿಂದ ಕಾಠಮಂಡುವಿನವರೆಗೆ, ಪಂಚವಟಿಯ ನೆಲದಲ್ಲಿ, ಮೂರು ದೇಶ ನೂರೊಂದು ಅನುಭವ, ಲಕ್ನೋ ಸಾಂಸ್ಕೃತಿಕಯಾನ, ಲೋಕ ಸಂಚಾರಿ, ಹೀಗೆ ವೈವಿಧ್ಯಮಯ ಪ್ರದೇಶಗಳ, ವಿದೇಶಗಳ ಪ್ರವಾಸ ಕಥನ ಬರೆದು ನಾಡಿನಲ್ಲಿ ಅತ್ಯಂತ ಹೆಚ್ಚು ಪ್ರವಾಸ ಕಥನ ಬರೆದ ಲೇಖಕರ ಸಾಲಿನಲ್ಲಿ ಇರುವ ಲೇಖಕ ಸಿದ್ಧರಾಮ ಹೊನ್ಕಲ್ ಅವರ ಹೊಸ ಕೃತಿ  “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ” ಇಂದು ತಮ್ಮ ಕಾಲೇಜಿನಲ್ಲಿ,  ಅದು ಈ ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆ ಕುರಿತ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಆದದ್ದೂ ತುಂಬಾ ಸಂತೋಷ ಎಂದು ಪ್ರಾಚಾರ್ಯರಾದ ಡಾ.ಜೆ.ವಿ.ಪುರುಷೋತ್ತಮ ಅವರು ಲೇಖಕ ಸಿದ್ಧರಾಮ ಹೊನ್ಕಲ್ ಅವರಿಗೆ ಅಭಿನಂದಿಸಿದರು.ಅವರ ಪ್ರವಾಸ ಕಥನಗಳು ಅನೇಕ ವಿಶ್ವ ವಿದ್ಯಾಲಯಗಳಲ್ಲಿ ಪಠ್ಯವಾಗಿ ರೋದು ಈ ಗಿರಿ ನಾಡಿಗೆ ಸಂದ ಗೌರವ ಎಂದು ಮುಂದುವರಿದು  ಕೃತಿ ಕುರಿತು ಮಾತನಾಡಿದರು. ಪೂಜ್ಯರಾದ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಸಿದ್ಧರಾಮ ಹೊನ್ಕಲ್ ರು ಈಗಾಗಲೇ ಎಂಬತ್ತು ಕೃತಿ ರಚಿಸಿ ಗಡಿನಾಡಿನ ಈ ಜಿಲ್ಲೆಗೆ ಹೆಸರು ತಂದಿದ್ದಾರೆ.ಅವರು ನೂರು ಕೃತಿ ತರಲಿ ಎಂದು ಶುಭಾಶೀರ್ವಾದ ಮಾಡಿ ಅಭಿನಂದಿಸಿದರು.

ಲೇಖಕ ಡಾ. ಹೊನ್ಕಲ್ ಅವರ ಹತ್ತನೇ ಪ್ರವಾಸ ಕಥನ “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ”ಲೋಕಾರ್ಪಣೆ Read Post »

ಪುಸ್ತಕ ಸಂಗಾತಿ

 ಬಿ. ಆರ್. ಲಕ್ಷ್ಮಣರಾವ್ ಅವರ ಕಿರುಕಾದಂಬರಿ “ಎಂಥಾ ಮೋಜಿನ ಕುದುರಿ!” ಅವಲೋಕನ ವಿಮಲಾರುಣ ಪಡ್ಡoಬೈಲು

ಪುಸ್ತಕ ಸಂಗಾತಿ ವಿಮಲಾರುಣ ಪಡ್ಡoಬೈಲು  ಬಿ. ಆರ್. ಲಕ್ಷ್ಮಣರಾವ್ “ಎಂಥಾ ಮೋಜಿನ ಕುದುರಿ!” ಕೃತಿ: *ಎಂಥಾ ಮೋಜಿನ ಕುದುರಿ!* ಕಿರು ಕಾದಂಬರಿಲೇಖಕರು; ಬಿ. ಆರ್. ಲಕ್ಷ್ಮಣರಾವ್ಬೆಲೆ: 60 ರೂದೂರವಾಣಿ:9845693614 *ರಸಗವಳ  ಎಂಥಾ ಮೋಜಿನ ಕುದುರಿ!*                  ಪ್ರೇಮಕವಿ ಎಂದೇ ಚಿರಪರಿಚಿತರಾದ ಶ್ರೀ ಬಿ.ಆರ್. ಲಕ್ಷ್ಮಣ ರಾವ್ ಅವರ ಸಾಹಿತ್ಯ ಸೃಜನಶೀಲತೆ ಸದಾ ಭಾವಲೋಕವನ್ನು ಆಳವಾಗಿ ತಟ್ಟುವ ಶಕ್ತಿಯನ್ನು ಹೊಂದಿದೆ. ಅವರ ಕವಿತೆಗಳು ಹಾಗೂ ಭಾವಗೀತೆಗಳು ಓದುಗರ ಮನಸ್ಸಿನಲ್ಲಿ ಪ್ರೀತಿಯ ಸೂಕ್ಷ್ಮತೆಯನ್ನು ಮೂಡಿಸುವಂತೆ, ಅವರ ಕಿರು ಕಾದಂಬರಿ “ಎಂಥಾ ಮೋಜಿನ ಕುದುರಿ” ಕೂಡ ಕಲ್ಪನೆ, ರಸಿಕತೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆಯ ಮೂಲಕ ವಿಭಿನ್ನ ಅನುಭವವನ್ನು ನೀಡುತ್ತದೆ.ಶೀರ್ಷಿಕೆ ಸೂಚಿಸುವಂತೆ ” ಎಂಥಾ ಮೋಜಿನ ಕುದುರಿ!” ಹಲವು ದಿಕ್ಕುಗಳಲ್ಲಿ ತನ್ನ ಪಯಣವನ್ನು ವಿಸ್ತರಿಸುತ್ತದೆ.ಈ ಕಾದಂಬರಿಯ ಕಾಲಯಂತ್ರದ  ಕೇಂದ್ರಬಿಂದು ‘ಮನಸ್ಸು’ ಆಗಿದೆ. ಆ ಮನಸ್ಸಿಗೆ ಕಡಿವಾಣ ಹಾಕಲು ಯತ್ನಿಸುತ್ತಾ, ಅನೇಕ ಅವಘಡಗಳನ್ನು ಎದುರಿಸುವ ಮೂಲಕ ಕಾಲಯಂತ್ರದ ಅನುಭವ ಮತ್ತು ಸಂಕಷ್ಟಕರ ಪರಿಸ್ಥಿತಿಗಳನ್ನು ಲೇಖಕರು ಓದುಗರ ಮುಂದೆ ತೆರೆದಿಟ್ಟಿದ್ದಾರೆ. ಭೌತಶಾಸ್ತ್ರಜ್ಞ ಪ್ರೊಫೆಸರ್ ನರಸಿಂಗರಾಯರ ಕಾಲಯಂತ್ರ ಎಂಬ ಕಲ್ಪನೆಯೇ ಕಾದಂಬರಿಯ ಪ್ರಮುಖ ಆಧಾರ. ಈ ಕಾಲಯಂತ್ರ ಕೇವಲ ವೈಜ್ಞಾನಿಕ ಉಪಕರಣವಷ್ಟೇ ಅಲ್ಲದೆ, ಕಥಾನಾಯಕನ ಅಂತರಂಗದ ಮನೋಯಾನಕ್ಕೆ ದಾರಿ ಮಾಡಿಕೊಡುತ್ತದೆ. ಕಾದಂಬರಿಯ ಪ್ರತಿಯೊಂದು ತಿರುವು ಓದುಗರಲ್ಲಿ ‘ಮುಂದೇನು?’ ಎಂಬ ಕುತೂಹಲವನ್ನು ಜೀವಂತವಾಗಿಡುತ್ತದೆ.               ಸುಂದರ ಮೈಮಾಟದ ಲಲನೆಯರನ್ನು ಕಂಡಾಗ ಚಂಚಲಗೊಳ್ಳುವ ಮನಸ್ಸು, ಪ್ರೀತಿಸಿದ ಹುಡುಗಿ ‘ಮಿನಿ’ಯ ನೆನಪು ಬಂದಾಗ ಅವಳ ಪ್ರೀತಿಗೆ ತನ್ನನ್ನು ತಾನೇ ನಿಯಂತ್ರಿಸುವ ಕಥಾನಾಯಕನ ಯತ್ನ, ಮಾನವ ಮನಸ್ಸಿನ ಸಹಜ ದ್ವಂದ್ವವನ್ನು ಸುಂದರವಾಗಿ ಅನಾವರಣಗೊಳಿಸುತ್ತದೆ. ಕಾಮಕ್ಕಿಂತ ಪ್ರೀತಿಗೆ ಹೆಚ್ಚಿನ ಗೌರವ ನೀಡುವ ಕಥಾನಾಯಕನ ಶೀಲ, ಕೃತಿಗೆ ನೈತಿಕ ಘನತೆಯನ್ನು ನೀಡುತ್ತದೆ.ಕಾದಂಬರಿಯಲ್ಲಿನ ಪ್ರತಿಯೊಂದು ಘಟನೆಯಲ್ಲಿ ಹೆಣ್ಣಿನ ಭಾವೋದ್ರೇಕದ ಮನಸ್ಸು ಸೂಕ್ಷ್ಮವಾಗಿ ಚಿತ್ರಿತವಾಗಿದೆ. ಹಳ್ಳಿಯಿಂದ ಪಟ್ಟಣದವರೆಗೆ, ಅಲ್ಲಿಂದ ಪುರಾಣದ ಸುರ -ಅಸುರರ ಆಸ್ಥಾನಗಳವರೆಗೆ ಕಥೆ ಸಾಗಿದರೂ, ಎಲ್ಲೆಡೆಯೂ ಹೆಣ್ಣಿನ ಮನಸ್ಸಿನ ಹರೆಯದ ಭಾವನೆಗಳು ಹಾಗು ಅವಳ ಮನಸ್ಸಿನ ಹಳಹಳಿಕೆ, ಕಾಮ ದಹನಕೆ ಸೂಕ್ತ ವ್ಯಕ್ತಿಯ ತಡಕಾಟದಲ್ಲಿ  ಸಾಗುತ್ತಾ  ಕಥಾ ನಾಯಕನೇ ಬಲಿಪಶುವಾಗುವುದು. ರೋಮಾಂಚನ ನೀಡುವ ಈ ರಸಮಯ ಕ್ಷಣಗಳು  ಖುಷಿ ಕೊಟ್ಟರು, ಕ್ಷಣದಲ್ಲಿ ಜಾಗೃತನಾಗುತ್ತ ಮೂಲ ಸ್ಥಿತಿಗೆ ಮರಳುವುದು  ಹೀಗೆಯೇ ಕಾದಂಬರಿಯ  ಉದ್ದಕ್ಕೂ  ನಾಯಕನ ಸೂತ್ರದಾರಿಕೆಯಲ್ಲಿ ಕಥೆ ಸಾಗುತ್ತದೆ.  ಈ ಕೃತಿ ಕೇವಲ ಕಾಲಯಾನ ಕಥೆಯಾಗದೆ, ಮಾನವ ಮನಸ್ಸಿನ ಅಧ್ಯಯನವಾಗುತ್ತದೆ.       ಕಾಲತಂತ್ರವೆಲ್ಲಾ ಕಲ್ಪನೆಯೇ ಎಂಬ ಅರಿವು ಇದ್ದರೂ, ಕಥಾನಾಯಕನಲ್ಲಿ ಮೂಡುವ ತೃಪ್ತಭಾವ ಗಮನಾರ್ಹ. ಭ್ರಮಾಲೋಕದಲ್ಲಿ ವಿಹರಿಸಿದ ಹನ್ನೆರಡು ತಾಸುಗಳು ಹಲವಾರು ದಿನಗಳಂತೆ ಅನುಭವವಾಗುವುದು ಕಾಲದ ಅನಿಶ್ಚಿತತೆಯ ಭಾವವನ್ನು ಮೂಡಿಸುತ್ತದೆ. ಕಾಲ್ಪನಿಕ ವೈಜ್ಞಾನಿಕ ತಂತ್ರ ವಾಸ್ತವ ಬದುಕಿನಲ್ಲಿ ಅಸ್ತಿತ್ವಕ್ಕೆ ಬಂದರೆ ಜೀವನ ಹೇಗಿರಬಹುದು? ಎಂಬ ಪ್ರಶ್ನೆಯನ್ನು ಕಾದಂಬರಿ ಓದುಗರ ಮುಂದಿಡುತ್ತದೆ. ಹಾಗು ಓದುಗನಿಗೂ ಆ ಕ್ಷಣಗಳು ರೋಮಾಂಚನಗೊಳಿಸುತ್ತದೆ.ಈ ಕಿರು ಕಾದಂಬರಿ ಸರಳವಾದರೂ ಅರ್ಥಪೂರ್ಣವಾದ ಭಾಷಾಶೈಲಿ, ಕಾದಂಬರಿಯನ್ನು ಒಂದೇ ಉಸಿರಲ್ಲಿ ಓದಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ.ಒಟ್ಟಿನಲ್ಲಿ “ಎಂಥಾ ಮೋಜಿನ ಕುದುರಿ!”  ಕಿರು ಕಾದಂಬರಿಯು ಭ್ರಮಾ ಲೋಕಕ್ಕೆ  ಸೆಳೆದೊಯ್ದು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತಾ ಮನ   ಮುದಗೊಳಿಸುವ ಕೃತಿ. ಚಂಚಲ ಮನಸ್ಸನ್ನು ಹತ್ತೋಟಿ ಇಡುವುದರಲ್ಲಿಯು  ಕಥಾನಾಯಕ ಗೆದ್ದಿದ್ದಾನೆ.  ಕಾಲ್ಪನಿಕವಾದ ಈ ಕಾದಂಬರಿ  ಓದುಗರ ಮನಸ್ಸಿನಲ್ಲಿ ಬೆಚ್ಚನೆಯ ತಾಪವನ್ನುಂಟುಮಾಡಿ,   ನಂತರ ತಂಪಾಗಿ ನೆಲೆಸುವ ಕೃತಿ.  ತಮಗೆ ಅಭಿನಂದನೆಗಳು ಸರ್ ವಿಮಲಾರುಣ ಪಡ್ಡoಬೈಲು

 ಬಿ. ಆರ್. ಲಕ್ಷ್ಮಣರಾವ್ ಅವರ ಕಿರುಕಾದಂಬರಿ “ಎಂಥಾ ಮೋಜಿನ ಕುದುರಿ!” ಅವಲೋಕನ ವಿಮಲಾರುಣ ಪಡ್ಡoಬೈಲು Read Post »

ಪುಸ್ತಕ ಸಂಗಾತಿ

ವಾಣಿ ಭಂಡಾರಿ ಅವರ ಕೃತಿ “ಮಲ್ನಾಡು ಕವಳ” ಅವಲೋಕನ ಗಣೇಶ್ ವಂದಗದ್ದೆ

ಪುಸ್ತಕ ಸಂಗಾತಿ ಗಣೇಶ್ ವಂದಗದ್ದೆ ವಾಣಿ ಭಂಡಾರಿ “ಮಲ್ನಾಡು ಕವಳ”       ಮಲೆನಾಡಿನ ಮೂಲೆಯಾದ ರಿಪ್ಪನ್ ಪೇಟೆಯಲ್ಲಿ ಜನಿಸಿದ ಶ್ರೀಮತಿ ವಾಣಿ ಭಂಡಾರಿ ಅವರು ಬಹುಮುಖ ಪ್ರತಿಭೆಯ ಸಾಹಿತಿ. ತಮ್ಮ ಶಾಲಾ ದಿನಗಳಿಂದಲೂ ಸಾಹಿತ್ಯ,ಸಂಸ್ಕೃತಿ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಆಸಕ್ತಿ ವಹಿಸುತ್ತಿದ್ದ ಶ್ರೀಮತಿ ವಾಣಿಯವರು  ಕನ್ನಡದ ಹೆಸರಾಂತ ಲೇಖಕಿಯಾಗಿ ಹೊರಬಂದಿರುವುದಲ್ಲಿ ಆಶ್ಚರ್ಯವೇನಿಲ್ಲ. ಈಗಾಗಲೇ ಇವರ ಲೇಖನಿಯಿಂದ ಕಥೆ, ಕವನ,ಚುಟುಕು, ಗಜಲ್ ,ಭಾವಗೀತೆ ಮುಂತಾದ ಅನೇಕ ಪ್ರಕಾರದ  ಕೃತಿಗಳು ಹೊರಬಂದಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಮನೆ ಮಾತಾಗಿದ್ದಾರೆ. ಈಗ ಹೊರ ತರುತ್ತಿರುವ “ಮಲೆನಾಡು ಕವಳ” ಪ್ರಬಂಧ ಸಂಕಲನದಲ್ಲಿ ತಾವು ಕಂಡು, ಕೇಳಿದ ಅನುಭವಿಸಿದ ಘಟನೆಗಳನ್ನು ರಸವತ್ತಾಗಿ ಹೊರ ಚೆಲ್ಲುತ್ತಾ ಹೋಗಿದ್ದಾರೆ.      . ” ಮಲೆನಾಡು ಕವಳ” ಕೃತಿಯನ್ನು ಈಗ ತಾನೇ ಓದಿ ಮುಗಿಸಿದೆ. ಈ ಕೃತಿಯಲ್ಲಿ ಮಲೆನಾಡಿನ ಕವಳದ ತರ ತರದ ಸವಿಯನ್ನು  ತರತರವಾಗಿ ಚಿತ್ರಿಸುತ್ತಾ ಹೋಗಿದ್ದಾರೆ.  ಅವರಂತೆ ನಾನು ಕೂಡ ಮಲೆನಾಡಿನಿಂದಲೇ ಬಂದಿರುವುದರಿಂದ ನನಗೂ ಕೂಡ ಆ ಕವಳದ ಸವಿ, ಏನು ಎಂಬುದು ಚೆನ್ನಾಗಿ ಅನುಭವ ವಾಗುತ್ತಿದೆ. ಈ ದಿಸೆಯಲ್ಲಿ ಡಾ ಶಂಕರ್ ಶಾಸ್ತ್ರಿ ಎನ್ನುವವರು ಒಂದು “ಕವಳ” ಎಂಬ ಕವನ ಸಂಕಲನವನ್ನು ಹೊರತಂದಿರುತ್ತಾರೆ. ಎರಡು ಕೃತಿಗಳ ಹೂರಣವೂ ಒಂದೇ ತರನಾಗಿದ್ದರು ಡಾ. ಶಾಸ್ತ್ರೀಯವರ ಅನುಭವ ಪದ್ಯ ರೂಪದಲ್ಲಿದ್ದರೆ ಈ ಲೇಖಕಿಯ ಅನುಭವ ಗದ್ಯ ರೂಪದಲ್ಲಿದೆ.     ಸರಿಸುಮಾರು 25 ವಿಷಯಗಳು ಆರಿಸಿಕೊಂಡಿರುವ ಈ ಸಂಕಲನದಲ್ಲಿ ಎಲ್ಲಾ ಘಟನೆಗಳು ಚಿರಪರಿಚಿತವಾದದ್ದೆ. ಎಲ್ಲೂ ಬೇಸರವಾಗುವಂತೆ  ಲೇಖನಗಳನ್ನು ಎಳೆದುಕೊಂಡು ಹೋಗಿಲ್ಲ. ಹೇಳಬೇಕಾದ ವಿಷಯಗಳನ್ನು ಚಿಕ್ಕದಾಗಿ ಚೊಕ್ಕದಾಗಿ ನಿರೂಪಿಸುತ್ತಾ ಹೋಗಿರುತ್ತಾರೆ. ಹಾಗಾಗಿ ಕೃತಿ ಮುಂದುವರಿದಂತೆ ಓದುಗರ ಆಸಕ್ತಿ ಹೆಚ್ಚುತ್ತಾ ಹೋಗುತ್ತದೆ.  ಒಂದೆರಡು ಘಟನೆಗಳನ್ನು ಇಲ್ಲಿ ಮೆಲುಕು ಹಾಕಲು ಪ್ರಯತ್ನಿಸುತ್ತೇನೆ.        ಸಂತೃಪ್ತ ದಾಂಪತ್ಯಕ್ಕೆ ತಾಳ್ಮೆ, ಶ್ರಮ,ತ್ಯಾಗ, ಸಮಾಧಾನ ಮುಂತಾದವು ತುಂಬಾ ಅವಶ್ಯಕ ಎಂಬ  ಸೂತ್ರಗಳನ್ನು ಒಪ್ಪುತ್ತಾ ಅದಕ್ಕೆ ನನ್ನ ತಂದೆ ತಾಯಿಯಂದಿರೆ ಉದಾಹರಣೆ ಎನ್ನುತ್ತಾರೆ. ತಮ್ಮ ಅಪ್ಪ ಅಮ್ಮ ಅದೆಷ್ಟು ಅನ್ಯೋನ್ಯವಾಗಿದ್ದರು ಎಂದರೆ ಅಪ್ಪ ಹೋದ ಮೂರೇ ತಿಂಗಳಿಗೆ ಅಮ್ಮನೂ ತನ್ನ ಬದುಕಿನ ಯಾತ್ರೆಯನ್ನು ಮುಗಿಸಿಬಿಟ್ಟಳು ಎನ್ನುತ್ತಾರೆ. ಬಕೆಟ್ ಹಿಡಿಯುವುದರ ಬಗ್ಗೆ ಬರೆಯುತ್ತಾ ಅದು ಜೀವನದ ಒಂದು ಭಾಗವೋ ಎಂಬಂತೆ  ಸ್ಪಷ್ಟವಾಗಿ  ಹೇಳುತ್ತಾರೆ. ತಾವು ಸೈಕಲ್ ಕಲಿತ ಅನುಭವವನ್ನು  ಹಂಚಿಕೊಳ್ಳುತ್ತಾ ಅದೆಷ್ಟು ತಾನು ಅದರೊಂದಿಗೆ ಹೊಂದಿಕೊಂಡಿದ್ದೆ ಎಂಬುದನ್ನು ಹೇಳುತ್ತಾ ನಿರ್ಜೀವ ವಸ್ತುಗಳೇ ಆದರೂ ಅವು ಹೇಗೆ ನಮ್ಮೊಂದಿಗೆ ಸಜೀವ ವಸ್ತುಗಳಂತೆ ಹೊಂದಿಕೊಳ್ಳುತ್ತವೆ ಎಂಬುದನ್ನು ಜೀವಂತವಾಗಿಯೇ ಚಿತ್ರಿಸುತ್ತಾರೆ. ಕೆಲವು ವಸ್ತುಗಳನ್ನು ನಾವು ತುಂಬಾ ಹಚ್ಚಿಕೊಂಡರೆ ಅವು ಜೀವ ಇರುವ ವಸ್ತುಗಳಂತೆ ನಮಗೆ ಕಾಣಿಸುತ್ತದೆ ಅಷ್ಟೇ ಅಲ್ಲ ಅವು ನಮ್ಮ ಜೀವನದ ಒಂದು ಭಾಗವೇ ಆಗಿಬಿಡುತ್ತವೆ ಎನ್ನುತ್ತಾರೆ.        “ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ”ಎಂಬ ಅಭಿಪ್ರಾಯವನ್ನು ಸಾರಾ ಸಗಟಾಗಿ ತಿರಸ್ಕರಿಸುತ್ತಾ ಮಾನವ ಹೆಣ್ಣಿಗೆ ಎರಡನೇ ಸ್ಥಾನ ಕೊಟ್ಟು, ದೂರ ತಳ್ಳುತ್ತಿರುವುದು ಖಂಡಿತ ಸಾಧುವಲ್ಲ ಎಂದು ವಾದಿಸುತ್ತಾರೆ. ಇವರ ಬರಹಗಳೇ ಹಾಗೆ, ಹೆಚ್ಚಾಗಿ ಹೆಣ್ಣಿನ ಪರವಾಗಿಯೇ ವಾದಿಸುತ್ತಾ  ಹೋಗುತ್ತಾರೆ.     ಒಟ್ಟಿನಲ್ಲಿ ಅವರು ವಸ್ತುಗಳಿಗಾಗಿ ಪರದಾಡಲೇ ಇಲ್ಲ ಕೈಗೆ ಸಿಕ್ಕಿದ ವಸ್ತುಗಳನ್ನು ಆರಿಸಿಕೊಂಡು ಅದಕ್ಕೆ ಉಡುಗೆ ತೊಡುಗೆಗಳನ್ನು ತೊಡಿಸಿ ತಮ್ಮ ಹಾಸ್ಯಲೇಪನವನ್ನು ಸವರುತ್ತಾ ನಮ್ಮ ಮುಂದೆ ನೈಜ ಘಟನೆಗಳೋ ಎಂಬಂತೆ ತೆರೆದಿಡುತ್ತಾ ಹೋಗುತ್ತಾರೆ. ಅದು ಗೊರಕೆ ಹೊಡೆಯುವವರ ಕಾಟ, ಬೀದಿ ನಾಯಿಯ ಪುರಾಣ ಮುಯಿಗೆ ಮುಯಿ ತೋರಿಸುವ ಛಲ, ಪಂಕ್ತಿ ಊಟದಲ್ಲಿ ಆಗುವ ತೊಂದರೆ,  ಕಟ್ಟೆಯ ಬುಡದಲ್ಲಿ ಪಾರತಕ್ಕನಂತವರ  ಹರಟೆ ಪುರಾಣ ಮುಂತಾದವುಗಳನ್ನು ಕಾಣಬಹುದು. ಒಟ್ಟಿನಲ್ಲಿ ಜೀವನದಲ್ಲಿ ನಾವು ಅನುಭವಿಸಿದ, ಎದುರಿಸಿದ ಅನೇಕ ಘಟನೆಗಳನ್ನು ಅವರು ಮೆಲುಕು ಹಾಕುವಂತೆ ಮಾಡಿದ್ದಾರೆ. ಹಾಗಾಗಿ ಈ ಲೇಖನಗಳು ನಮ್ಮನ್ನು ಜೀವಂತವಾಗಿ ಇಡುತ್ತವೆ ಎಂಬ ಮಾತುಗಳು ಖಂಡಿತ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಇಂತಹ ಕೃತಿಗಳು ಇವರಿಂದ ಇನ್ನಷ್ಟು ಮಗದಷ್ಟು ಹೊರಬರಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ. ಗಣೇಶ್ ವಂದಗದ್ದೆ

ವಾಣಿ ಭಂಡಾರಿ ಅವರ ಕೃತಿ “ಮಲ್ನಾಡು ಕವಳ” ಅವಲೋಕನ ಗಣೇಶ್ ವಂದಗದ್ದೆ Read Post »

ಪುಸ್ತಕ ಸಂಗಾತಿ

“ಡಾ.ಶೇಖರ.ಡಿ.ಸಜ್ಜನರ ಕೃತಿ “ಮಾಹಿತಿ ಹಕ್ಕು ಅಧಿನಿಯಮ-2005ಒಂದು ವಿಶ್ಲೇಷಣೆ ( ತಿದ್ದುಪಡಿ 2019 ಸಹಿತ)” ಕೃತಿ ಪರಾಮರ್ಶೆ, ಪ್ರೊ ಶಕುಂತಲಾ. ಸಿಂಧೂರ ಗದಗ

ಪುಸ್ತಕ ಸಂಗಾತಿ ಪ್ರೊ ಶಕುಂತಲಾ. ಸಿಂಧೂರ ಗದಗ “ಡಾ.ಶೇಖರ.ಡಿ.ಸಜ್ಜನರ ಕೃತಿ “ಮಾಹಿತಿ ಹಕ್ಕು ಅಧಿನಿಯಮ-2005ಒಂದು ವಿಶ್ಲೇಷಣೆ ( ತಿದ್ದುಪಡಿ 2019 ಸಹಿತ)” ಕೃತಿ ಪರಾಮರ್ಶೆ,   ‘ಮಾಹಿತಿ ಹಕ್ಕು ಅಧಿನಿಯಮ-2005 ಒಂದು ವಿಶ್ಲೇಷಣೆ ‘ (The Right to Information Act-2005 An Analysis) ಇದು ಕಾನೂನಿನ ಅರಿವು ಮೂಡಿಸುವ ಗ್ರಂಥಪುಷ್ಪ. ಈ ಕ್ರೃತಿಯು ಸಾರ್ವಜನಿಕ ನಾಗರಿಕರ ಮನಪರಿವರ್ತಿಸಿ, ಪ್ರಚಲಿತ ಕಾಯ್ದೆ ಕಾನೂನುಗಳ ಬಗ್ಗೆ ತಿಳುವಳಿಕೆ ಸ್ಪುರಿಸಿ ಜಾಗ್ರತರನ್ನಾಗಿಸುವಂತಿದೆ. ಮನುಕುಲದವರಲ್ಲಿ ಜಾತ್ಯಾತೀತ ವರ್ಗ-ವರ್ಣರಹಿತ ಭಾವೖಕ್ಯತಾ ಬಾಂಧವ್ಯ ವರ್ಧಿಸುವ, ಭ್ರಷ್ಟಾಚಾರ ಮುಕ್ತವಾದ ದಟ್ಟ ಪರಿಸರ ಹುಟ್ಟುಹಾಕುವ ಸದಾಶಯವುಳ್ಳ ವಸ್ತುವಿಷಯವನ್ನು ತುಂಬಾ ಪರಿಣಾಮಕಾರಿಯಾಗಿ ಲೇಖಕರು ವಿಶ್ಲೇಷಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮವನ್ನು ಕಾನೂನುಬದ್ಧವಾಗಿ, ಪಾರದರ್ಶಕವಾಗಿ ಪರಿಪಾಲಿಸುವ, ಧ್ಯೇಯೋದ್ದೇಶಗಳಿಂದೊಡಗೂಡಿರುವ ಕೖದೀವಿಗೆಯಂತಿದೆ.                     ವಿಶ್ರಾಂತ ಮಾನ್ಯ ಮಾಹಿತಿ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗದ ಡಾ.ಶೇಖರ.ಡಿ.ಸಜ್ಜನರ ಅವರು ಈ ಕ್ರೃತಿರತ್ನದ ಕರ್ತೃ.ಲೇಖಕರು  ಗದಗನಲ್ಲಿ 40 ವರ್ಷಗಳಿಂದ ಖ್ಯಾತ ವೖದ್ಯಕೀಯ ವ್ರತ್ತಿ ಪ್ರೀಯರಾಗಿದ್ದರೂ ಕೂಡ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡವರು.  ಕರ್ನಾಟಕ ಮಾಹಿತಿ ಆಯುಕ್ತರಾಗಿಯಲ್ಲದೇ ಪ್ರಭಾರಿ ಮುಖ್ಯ ಮಾಹಿತಿ ಆಯುಕ್ತರಾಗಿಯೂ ನೇಮಕಗೊಂಡು ಸೇವೆ ಸಲ್ಲಿಸಿದ್ದು ಅಭಿನಂದನಾರ್ಹವಾದುದಲ್ಲದೆ “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ”ಎಂಬ ಶರಣರ ವಾಣಿಗೆ ಸಾಕ್ಷಿಯಂತಿದೆ.            ಮೂಲತಃ ವೖದ್ಯರಾದ ಶ್ರೀಯುತರಿಗೆ ಕಾನೂನು ಪರಿಭಾಷೆಯ ಪರಿಚಯ ಅಷ್ಟಾಗಿ ಇರದಿದ್ದರೂ ಕೂಡಾ ವಕೀಲರು, ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳವರಿಗಿಂತ ಮಿಗಿಲಾಗಿ ಆಸಕ್ತರಾಗಿರುವ ಡಾ.ಶೇಖರವರು ಸತತ ಪರಿಶ್ರಮದಿಂದ ಅಧ್ಯಯನಶೀಲರಾಗಿ ಈ ಕಾನೂನನ್ನು ಸುಲಿದ ಬಾಳೆಯಹಣ್ಣಿನಂದದಿ ಆರ್ಥೖಸಿಕೊಂಡು ಆತ್ಯುತ್ತಮವೆನ್ನಬಹುದಾದ ಅನೇಕ ಮಹತ್ವದ ತೀರ್ಪುಗಳನ್ನಿತ್ತಲ್ಲದೇ ಈ ಕಾನೂನು ಹೆಬ್ಬೊತ್ತಿಗೆಯನ್ನು ಪ್ರಕಟಿಸಿ ಸರ್ವರ ಕೖಗೆಟಕುವಂತೆ ಪರಿಶ್ರಮಿಸಿರುವದು ಕಾನೂನು ಪರಿಪಾಲಿಸುವಂತಹ ಜ್ಞಾನತ್ರಷೆಯುಳ್ಳವರಿಗೆ ಅನುಕರಣೀಯವಾದುದು.ಅವರ ಅನುಭವ ಅಧ್ಯಯನದ ಮೂಸೆಯಲ್ಲಿ ಸಮರ್ಪಕವಾಗಿ ಸ್ರಜಿಸಲ್ಪಟ್ಟಿರುವ ಉತ್ತಮ ದಾರಿದೀಪದಂತಹ ಕ್ರೃತಿಯಿದಾಗಿದೆಯೆಂಬುದರಲ್ಲಿ ಉತ್ಪ್ರೆಕ್ಷೆಯೇನಿಲ್ಲ.                         ” ಈ ಕ್ರೃತಿಯಲ್ಲಿ ಮಾಹಿತಿ ಎಂದರೇನು ಎನ್ನುವುದರಿಂದ ಪ್ರಾರಂಭವಾಗಿ ಈ ಕಾನೂನಿನ ವ್ಯಾಪ್ತಿ ನಿಯಮಗಳು ನಾಗರಿಕರು ಮಾಹಿತಿ ಪಡೆಯುವ ವಿಧಾನ, ಅಧಿಕಾರಿಗಳ ಕರ್ತವ್ಯಗಳು, ವಿನಾಯಿತಿಯ ಸಂದರ್ಭಗಳು, ಕಡತಗಳ ಸಂರಕ್ಷಣೆ, ಇವುಗಳ ಸಮರ್ಪಕ ವಿವರಣೆಯನ್ನು ಕೊಟ್ಟಿರುವುದಲ್ಲದೆ ರಾಜ್ಯ ಮಾಹಿತಿ ಆಯೋಗ ಕೇಂದ್ರ, ಮಾಹಿತಿ ಆಯೋಗ ಹಾಗೂ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪುಗಳ ಸಾರಾಂಶಗಳನ್ನು ಉಲ್ಲೇಖಿಸಿದ್ದಾರೆ ಅಲ್ಲದೆ ಸಂಪೂರ್ಣ ಕಾನೂನನ್ನು ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿಯೂ ಬರೆದಿರುವರಲ್ಲದೆ  ಟಿಪ್ಪಣಿಗಳನ್ನು ಬರೆಯುವಾಗ ಅವಶ್ಯವಿದ್ದಲ್ಲಿ ಕನ್ನಡವನ್ನು ಬಳಸಿರುವುದು ಇಂಗ್ಲಿಷ್ ಭಾಷೆಯ ಜ್ಞಾನ ಹೆಚ್ಚಿಗೆ ಇಲ್ಲದವರಿಗೆ ಉಪಯುಕ್ತವಾಗಿದೆ. ಹೀಗಾಗಿ ಇದು ಜನಸಾಮಾನ್ಯರ ಅಳವಿಗೆ ನಿಲುಕುವ ಜನಸ್ನೇಹಿ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು” ಎಂಬುದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ.ಅರಳಿ ನಾಗರಾಜ ಅವರ ಅಭಿಪ್ರಾಯವಾಗಿರುತ್ತದೆ.           ರಾಜ್ಯ ಮಾಹಿತಿ ಹಕ್ಕು ಕಾಯ್ದೆ ಕುರಿತು ಬೆಳಗಾಂವಿಯಲ್ಲಿ ಅಧಿಕಾರಿಗಳಿಗೆ ಲೇಖಕರುತರಬೇತುದಾರರಾಗಿದ್ದರು.ಈ ಸಂದರ್ಭದಲ್ಲಿ ಡಾ.ಶೇಖರ ಸಜ್ಜನರವರು ನೀಡುತ್ತಲಿರುವ ತರಬೇತಿಯಲ್ಲಿ ಪಾಲ್ಗೊಂಡ ಅಧಿಕಾರಿಯೊಬ್ಬರು ತರಬೇತಿಯ ಪ್ರೇರಣೆಯಿಂದ ಪ್ರಭಾವಿತರಾದುದರ ಫಲಶ್ರತಿಯಾಗಿ,ತಾವೇ ಈ ಕಾಯ್ದೆಗಳ ಮಾಹಿತಿ ಕುರಿತು ಸವಿಸ್ತಾರವಾಗಿ ಗ್ರಂಥ ರಚಿಸಿದರೆ ಸಾರ್ವಜನಿಕರಿಗಷ್ಟೇ ಅಲ್ಲದೇ ಕಾನೂನು ವಿದ್ಯಾರ್ಥಿಗಳಿಗೆ,ನ್ಯಾಯವಾದಿಗಳಿಗೆ,ಆಡಳಿತಾಧಿಕಾರಿಗಳಿಗೆ,ಜನಪ್ರತಿನಿಧಿಗಳಿಗೆ,ಎಲ್ಲ ವರ್ಗಗಳ ಅಧ್ಯಯನಾಸಕ್ತರಿಗೆ ಅತ್ಯುಪಯುಕ್ತವಾದ ಮಾರ್ಗದರ್ಶಕ ಪುಸ್ತಕವಾಗುತ್ತದೆ ಎಂದು ತಮ್ಮಪ್ರಶಂಸಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದುದರಿಂದ, ಈ ಅಮೂಲ್ಯ ಸತ್ಪ್ರೇರಣೆಯ ನುಡಿಗಡಣದಂತೆ,ಮಾಹಿತಿ ಹಕ್ಕು ಕಾಯ್ದೆ 2005 ರ ಒಂದು ವಿಶ್ಲೇಷಣೆ ಹೊತ್ತಿಗೆಯು ಈಗ ನಾಲ್ಕನೆಯ ಆವ್ರೃತ್ತಿಗಳನ್ನು ಯಶಸ್ವಿಯಾಗಿ ಮುದ್ರಿಸಿ ಲೋಕಾರ್ಪಣೆಗೊಳಿಸಿರುವ ಸಂತ್ರೃಪ್ತಿ ನನಗಿದೆ ಎಂಬುದು ಈ ಕ್ರೃತಿಯ ಲೇಖಕರ ಅಭಿಪ್ರಾಯವಾಗಿರುತ್ತದೆ.                 ನಮ್ಮ ದೇಶ ಸ್ವಾತಂತ್ರ್ಯ ನಂತರ ಅಂಗೀಕರಿಸಿದ ಸಂವಿಧಾನದನ್ವಯ ನಮ್ಮಲ್ಲಿರುವುದು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ.ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹಳ್ಳಿಯಿಂದ ದಿಲ್ಲಿಯವರೆಗೆ ಆಡಳಿತದ ಸೂತ್ರವನ್ನು ಹಿಡಿದರು. ಆಡಳಿತದ ಸಂಬಂಧ ಜನಪ್ರತಿನಿಧಿಗಳು, ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಣಯಗಳು, ಹೊರಡಿಸುವ ಆದೇಶಗಳು, ಜನಸಾಮಾನ್ಯರ ಮೇಲೆ ವಿವಿಧ ರೀತಿಯ ಪರಿಣಾಮವನ್ನುಂಟು ಮಾಡುತ್ತವೆ. ಆದ್ದರಿಂದ ಆಡಳಿತದಲ್ಲಿ ಪಾರದರ್ಶಕತೆ ಉತ್ತರದಾಯಿತ್ವ ಹಾಗೂ ನಾಗರೀಕರ ಪಾಲ್ಗೊಳ್ಳುವಿಕೆಯನ್ನು ತರುವ ಮೂಲಕ ಭ್ರಷ್ಟಾಚಾರವನ್ನು ತಡೆಗಟ್ಟುವ ಸದುದ್ದೇಶದಿಂದ ನಮ್ಮ ಕೇಂದ್ರ ಸರಕಾರವು  ಆತ್ಯುಪಯುಕ್ತವಾದ, ಬ್ರಹ್ಮಾಸ್ತ್ರ ಸ್ವರೂಪವಾದ ಶಾಸನ ” ಮಾಹಿತಿ ಹಕ್ಕು ಅಧಿನಿಯಮ 2005″ ನ್ನು ಅಕ್ಟೋಬರ್ 25 ರಂದು ಜಾರಿಗೆ ತಂದಿತು. ಜಾರಿಗೊಂಡ ಎರಡು ದಶಕಗಳ ಅವಧಿಯಲ್ಲಿ ಈ ಕಾನೂನಿನ ಸದುಪಯೋಗಪಡಿಸಿಕೊಂಡ ನಾಗರಿಕರು ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆ ತಂದು ಭ್ರಷ್ಟ ಆಡಳಿತಗಾರರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಅವರಿಗೆ ಶಿಕ್ಷೆಯಾಗುವಂತೆ ಮಾಡಿದ್ದು ಸರ್ವ ವಿಧಿತ ಸಂಗತಿ.                  ನಮ್ಮ ರಾಜ್ಯದ ಹಾಗೂ ದೇಶದ ನಾಗರಿಕರಿಗೆ ಈ ಕಾಯ್ದೆಯ ಉಪಯೋಗ ಪಡೆದುಕೊಳ್ಳುವವರಿಗೆ ಮತ್ತು ಈ ಕಾಯ್ದೆಯಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಾರ್ವಜನಿಕ ಅಧಿಕಾರಿಗಳಿಗೆ ಈ ಕಾಯ್ದೆಯ ಪರಿಚಯ ಮಾಡಿಕೊಳ್ಳುವುದು ಸುಲಭಸಾಧ್ಯವಾಗಿರುವ ನಿಟ್ಟಿನಲ್ಲಿ ಅತ್ಯುಪಯುಕ್ತ ಮಾಹಿತಿ ಗ್ರಂಥವಿದಾಗೀದೆವೆಂಬುದರಲ್ಲಿ ಎರಡು ಮಾತಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವವರಿಗೆ ರಾಮಬಾಣ ಬ್ರಹ್ಮಾಸ್ತ್ರಗಳಂತೆ ಉಪಯೋಗಿಸಬಹುದಾದ ಪ್ರಸ್ತುತ ಕಾಯ್ದೆಯ ಸಂಪೂರ್ಣ ಪರಿಚಯವನ್ನು ವಿಶ್ಲೇಷಣಾತ್ಮಕವಾಗಿ ಓದುಗರಿಗೆ ಮಾಡಿಕೊಡುವಲ್ಲಿ ಈ ಕೃತಿಯ ಕರ್ತೃ ಡಾ. ಶೇಖರ. ಡಿ.ಸಜ್ಜನರವರು ಯಶಸ್ವಿಯಾಗಿದ್ದಾರೆ ಎಂಬುದು ಮುನ್ನುಡಿ ಬರಹಗಾರರಾದ ನ್ಯಾಯಮೂರ್ತಿ ಶ್ರೀ. ಅರಳಿ ನಾಗರಾಜರ ಅಭಿಪ್ರಾಯ ಈ ಕ್ರೃತಿಗೆ ಕಳಶಪ್ರಾಯದಂತಾಗಿದೆ. ಕಾನೂನಿನ ಅರಿವು ಮೂಡಿಸಲು, ಅರ್ಥೖಸಲು ಕಾನೂನು ಪದವೀಧರರೇ ಆಗಿರಬೇಕೆಂದಿಲ್ಲಾ. ಆ ವ್ಯಕ್ತಿಯಲ್ಲಿ ವಿಷಯದ ಬಗ್ಗೆ ಜ್ಞಾನತ್ರೃಷೆ ಅದನ್ನು ಅರ್ಥೖಸುವ   ಉತ್ಸುಕತೆ,ಬದ್ಧತೆ ಮತ್ತು ಸೇವಾಭಾವನೆಯ ವ್ಯಕ್ತಿತ್ವ ಇದ್ದರೆ ಸಾಕು.ತಮ್ಮಲ್ಲಿರುವ ಸಂಪೂರ್ಣ ಜ್ಞಾನದಾಹವನ್ನು ಸಾರ್ವಜನಿಕರಿಗೆ ತಿಳಿಯಪಡಿಸಿದರೆ, ಅಂತರಾಳದಲ್ಲಿ ಹುದುಗಿರುವಂತಹ ಆ ಅಪೂರ್ವ ಜ್ಞಾನವು ಬಾವಿಯೊಳಗಿರುವ ನೀರಿನ ಸೆಲೆಯಂತೆ ಧಾರಾಕಾರವಾಗಿ ಸುರಿಯುತ್ತಾ ಇಮ್ಮಡಿ ಮುಮ್ಮಡಿಗೊಳ್ಳುತ್ತಲಿರುತ್ತದೆಂಬುದನ್ನರಿತ  ಡಾ.ಸಜ್ಜನರವರು 2011 ರಿಂದ ಐದು ವರ್ಷಗಳವರೆಗೆ ಆಯುಕ್ತರಾಗಿ ರಾಜ್ಯದ ಜನರ ಸೇವೆಯನ್ನು ಮಾಡಿದ್ದುದರ ಪ್ರತೀಕವಾಗಿ ಒಟ್ಟು ಆರು ಅಧ್ಯಾಯಗಳುಳ್ಳ ಈ ಗ್ರಂಥ ಸಾರ್ವಜನಿಕರಿಗೆ ಕೖಗೆಟಕುವಂತಾಗಿರುವದು ಸ್ತುತ್ಯಾರ್ಹವಾದುದು ಎಂಬುದಾಗಿ ಇನ್ನೋರ್ವ ನ್ಯಾಯಮೂರ್ತಿಗಳಾದ ಶ್ರೀ.ಜಿ.ಎಸ್.ಪಲ್ಲೇದ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ರೃತಿಯ ಮೂಲಕ ತಮ್ಮ ಅಪಾರ ಅನುಭವವನ್ನು ಮಾಹಿತಿ ಹಕ್ಕು ಕಾಯ್ದೆ 2005 ರ ಒಂದು ವಿಶ್ಲೇಷಣೆ ಗ್ರಂಥದ ನಾಲ್ಕು ಆವ್ರೃತ್ತಿಗಳನ್ನು ಪ್ರಕಟಿಸಿ ಸಾರ್ವಜನಿಕ ರಂಗದ ಪರವಾಗಿರುವ ತಮ್ಮ ಅನುಪಮ ಬದ್ಧತೆಯನ್ನು ಆಚರಣೆಗೊಳಿಸುವ ಮುಖೇನ ಕ್ರೃತಿಯ ರೂಪದಲ್ಲಿ  ಪ್ರದರ್ಶಿಸಿರುವದು ದಾಖಲಾರ್ಹವೇ ಸರಿ.                 ಸರ್ಕಾರಿ ವ್ಯವಸ್ಥೆಯಲ್ಲಿನ ಆಡಳಿತ ಹಾಗೂ ಅಧಿಕಾರಿಗಳ ಜೊತೆಗೆ ಸಾರ್ವಜನಿಕರು ಕಾನೂನಿನ ಅರಿವುಳ್ಳವರಾಗಬೇಕಾಗಿದೆ.  ಪಾರದರ್ಶಕತೆಯಿಂದ ಕೂಡಿರುವದರ ಮಾಹಿತಿ ಬಗ್ಗೆ ತಿಳುವಳಿಕೆ ಅಧಿಕವಾಗಿಸಿಕೊಳ್ಳುವ ಸದುದ್ದೇಶದಿಂದಾಗಿಯೇ 2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.ಇದಕ್ಕೂ ಮೊದಲು ಬ್ರಿಟೀಷರ ಕಾಲದಲ್ಲಿ ಆಫೀಸಿಯಲ್ ಸಿಕ್ರೇಟ್ Act 1923 ರಲ್ಲಿ ಜಾರಿಯಲ್ಲಿತ್ತು.ಇದು ಆಡಳಿತ ಮತ್ತು ಅಧಿಕಾರ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು.ದೇಶದಲ್ಲಿ ಮಾಹಿತಿ ಹಕ್ಕು ಜಾರಿಯಾದಾಗಿನಿಂದ ದೇಶದ ಅನೇಕ ಹಗರಣಗಳು ಹೊರಗೆ ಬರುವಂತಾಯಿತು.ಇದರ ಪರಿಣಾಮವಾಗಿ ಸರಕಾರ ಬದಲಾವಣೆಯಾದವು.ದೆಹಲಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಾಗ ಮೊದಲ ಬಾರಿಗೆ ಅರ್ಜಿ ಹಾಕಿದವರೇ ಮಾಜಿ ಮುಖ್ಯಮಂತ್ರಿಗಳಾದ ಶ್ರೀ.ಅರವಿಂದ ಕ್ರೇಜಿವಾಲ ಅವರು.ಇದರ ಪರಿಣಾಮದಿಂದಾಗಿ ಕಲ್ಲಿದ್ದಲು 2 ಜಿ ಸ್ಪ್ರೆಕ್ಟ್ರಂ, ಕಾಮನ್ ವೆಲ್ತ್ ಹಗರಣಗಳು ಬಹಿರಂಗಗೊಂಡವು. ‘ಪರಿವರ್ತನೆ ಜಗದ ನಿಯಮ’ ಎಂಬ ಉಕ್ತಿಯಂತೆ ಈ ಸಣ್ಣ ಕಾಯ್ದೆ ಸರಕಾರವನ್ನೇ ಬದಲಾಯಿಸಿತು.               ಇಂದಿನ ದಿನಮಾನದಲ್ಲಿ ಕಾನೂನಿನ ಅರಿವು ಮೂಡಿಸುವದು ತುಂಬಾ ಅತ್ಯವಶ್ಯಕವಾಗಿರುತ್ತದೆ.ಮಾಹಿತಿ ಹಕ್ಕು ಕಾಯ್ದೆ 2005 ಇಲ್ಲದ ಸಂದರ್ಭದ ದೇಶವನ್ನು ನೆನಪಿಸಿಕೊಂಡರೆ ಬೇಜಾರಾಗುವದು ಸರ್ವರ  ಸಹಜಾನುಭವ.ಈ ಕಾಯ್ದೆ ಜಾರಿಯಲ್ಲಿದ್ದರೂ ಕೂಡಾ ಜಾತೀಯತೆ,ಭ್ರಷ್ಟಾಚಾರ ನಿಯಂತ್ರಣಕ್ಕೆ ಬಾರದಂತಾದುದು ಖಂಡನಾರ್ಹ.ಈ ಕಾಯ್ದೆ ಕುರಿತು ಅಪಾರ ಜನತೆಗೆ ತಿಳುವಳಿಕೆಯಿಲ್ಲದಿರುವದು ವಿಷಾದನೀಯ ಸಂಗತಿ.ಪ್ರತಿಯೊಂದು ಜಿಲ್ಲೆ ತಾಲೂಕು ಹೋಬಳಿಗಳ ಶಾಲೆ ಕಾಲೇಜ ಹಾಗೂ ಆಯಾ ಸಂಘಸಂಸ್ಥೆಗಳ ಸಂಘಟನೆಗಳಲ್ಲಿ ಆಗಾಗ ತರಬೇತಿ ಶಿಬಿರ, ಕಾರ್ಯಾಗಾರ,ಉಪನ್ಯಾಸ, ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ‘ಸರ್ವೆ ಜನಃ ಸುಖಿನೋ ಭವಂತು’ ಎಂಬ ಹೇಳಿಕೆಯಂತೆ ಸಾರ್ವಜನಿಕರಲ್ಲಿ ಸ್ನೇಹಿ ಪರಿಸರ ಹುಟ್ಟುಹಾಕುತ್ತಾ ಸರ್ವರಿಗೂ ‘ಸಮಪಾಲು ಸರ್ವರಿಗೂ ಸಮಬಾಳು’ ತತ್ವದಂತೆ ಮುಗ್ಧ ಜನತೆಯಲ್ಲಿ ಜಾಗ್ರತಿ ಬಲಪಡಿಸುತ್ತಾ, ಗಮನ ಸೆಳೆಯುವಂತಾದರೆ ಮಾತ್ರ, ನಮ್ಮ ದೇಶ ನಂಬರ್ ಒನ್ ಸ್ಥಾನ ಪಡೆಯುವದರಲ್ಲಿ ಎಳ್ಳಷ್ಟೂ ಸಂದೇಹವೇ ಇಲ್ಲ.          ಪ್ರಾಮಾಣಿಕತೆಯ ಸದುದ್ದೇಶವುಳ್ಳ ಸಾರ್ವಜನಿಕ ಹಿತಾಸಕ್ತಿ ಹೊಂದಿದ ನಾಗರಿಕರು ಈ ಕಾಯ್ದೆಯನ್ನು ಸದ್ಬಳಕೆ ಮಾಡಿಕೊಂಡಲ್ಲಿ ಆಡಳಿತದಲ್ಲಿ ಪ್ರಾಮಾಣಿಕತೆ ಪಾರದರ್ಶಕತೆ ನಿಷ್ಪಕ್ಷಪಾತತನ ಮುಂತಾದವುಗಳನ್ನು ತರುವುದರ ಮೂಲಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಾ ಹಂತಗಳಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ವ್ಯಾಪಕವಾಗಿರುವ ಅದರ ನಿರ್ಮೂಲನೆ ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ಹೋಗಿರುವ, ಭ್ರಷ್ಟಾಚಾರವನ್ನು ಸಮರ್ಪಕವಾಗಿ ನಿಯಂತ್ರಿಸುವುದು ಸಾಧ್ಯ. ನಮ್ಮ ದೇಶವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಮೂಲ ಭ್ರಷ್ಟಾಚಾರ. ಅದೊಂದು ಮಾತ್ರ ನಿರ್ಮೂಲನಗೊಂಡರೆ ಅಥವಾ ಗಣನೀಯವಾಗಿ ನಿಯಂತ್ರಣಕ್ಕೆ ಬಂದರೆ ನಮ್ಮ ದೇಶ ವಿಶ್ವದ ಯಾವ ರಾಷ್ಟ್ರಕ್ಕೂ ಕಡಿಮೆಯಿಲ್ಲದಂತೆ ಸರ್ವತೋಮುಖ ಶ್ರೇಯೋಭಿವ್ರೃದ್ಧಿ ಸಾಧಿಸುವದರಲ್ಲಿ ಎಳ್ಳಷ್ಟೂ ಸಂದೇಹವೇ ಇಲ್ಲ.           ಮಾಹಿತಿ ಹಕ್ಕು ಅಧಿನಿಯಮ-2005 ಕ್ಕೆ 2019 ನೇ ಇಸ್ವಿಯಲ್ಲಿ ತಿದ್ದುಪಡಿ ತರಲಾಗಿದೆ.ಕಲಂ 13,16,27 ಗಳಲ್ಲಿ ಮಾತ್ರ ತಿದ್ದುಪಡಿ ಮಾಡಲಾಗಿದ್ದು,ಸದರ ತಿದ್ದುಪಡಿ-2019(24 OF 2019) ಯು ದಿ.01-08-2019 ರಂದು ಅಂಗೀಕಾರಗೊಂಡು,24-10-2019 ರಂದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ.ಜಮ್ಮು ಕಾಶ್ಮೀರದಲ್ಲಿ ಚಾಲ್ತಿಯಲ್ಲಿದ್ದ ಸಂವಿಧಾನದ ಅನುಚ್ಛೇದ-370 ನ್ನು, ತೆರವುಗೊಳಿಸಲಾಗಿದ್ದು (34 OF 2019 w.e.f. 31-10-2019), ಇವೆಲ್ಲವುಗಳನ್ನೂ ಈ ಆವ್ರೃತ್ತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆ ದೇಶದಲ್ಲಿ 20 ವರ್ಷಗಳಿಂದ ಜಾರಿಯಲ್ಲಿದ್ದರೂ ಕೂಡಾ ಇನ್ನೂ ಸಾರ್ವಜನಿಕರಲ್ಲಿ ಹಾಗೂ ಮಾಹಿತಿ ಅಧಿಕಾರಿಗಳಲ್ಲಿ ಅನೇಕ ದ್ವಂದ್ವಗಳು ಹಾಗೂ ಕಾಯಿದೆಯ ಬಗ್ಗೆ ಸ್ಪಷ್ಟತೆಯ ಅರಿವು ಇಲ್ಲದೆ ಇರುವುದರಿಂದ ಅವಶ್ಯಕತೆಯಿರುವವರು ಡಾ.ಸಜ್ಜನ ಅವರನ್ನು ಸಂಪರ್ಕಿಸಿ ಅನೇಕ ದ್ವಂದ್ವ ಹಾಗೂ ಸಂದೇಹಗಳಿಗೆ ಮಾಹಿತಿ ಪಡೆಯುತ್ತಲಿರುವಂತೆ ಇಲ್ಲವೇ ಈ ಕ್ರೃತಿಯನ್ನು ಅಧ್ಯಯನಗೖದು ಉಪಯುಕ್ತ ಮಾಹಿತಿವುಳ್ಳವರಾಗುವಂತಾಗಲು ಈ ಹೆಬ್ಬೊತ್ತಿಗೆಯು ತುಂಬಾ ಸಹಾಯಕಾರಿಯಾಗುವದಂತೂ ಖಚಿತ.ಅನೇಕ ಕಾನೂನು ತಜ್ಞರು, ಕರ್ನಾಟಕ ಮಾಹಿತಿ ಆಯೋಗದ ಮಾಜಿ ಹಾಗೂ ಹಾಲಿ ಆಯುಕ್ತರುಗಳು ಈ ಕ್ರೃತಿಯ ಮಾಹಿತಿ ಅಧ್ಯಯನಗೖದು ಮೆಚ್ಚುಗೆ ಅಭಿವ್ಯಕ್ತಪಡಿಸಿರುವರಲ್ಲದೆ,ಕರ್ನಾಟಕದ ರಾಜ್ಯಪಾಲರಾದ ಸನ್ಮಾನ್ಯ ಶ್ರೀ.ವಜುಭಾಯಿ ವಾಲಾರವರೂ ಕೂಡಾ ವೖದ್ಯರಾದ ಡಾ. ಶೇಖರ ಸಜ್ಜನರವರು ಕಾನೂನು ಗ್ರಂಥ ರಚಿಸಿರುವದಕ್ಕೆ ಹ್ರೃತ್ಪೂರ್ವಕವಾಗಿ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಭಿಮಾನದ ಸಂಗತಿಯೇ ಸರಿ.              2005ರಲ್ಲಿ ಜಾರಿಗೊಂಡ ಈ ಮಾಹಿತಿ ಹಕ್ಕನ್ನು ಈ ವರೆಗೂ ಸಂಪೂರ್ಣವಾಗಿ ಯಾರು ಅರ್ಥೈಸಿಕೊಂಡಿಲ್ಲ.ಮಾಹಿತಿ ಕೇಳುವವರು ಮತ್ತು ಪೂರೈಸುವವರು ಇಂದಿಗೂ ಸರಿಯಾದ ಮಾರ್ಗದರ್ಶನ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ಕೃತಿ ಅವರ ಎಲ್ಲ ಸಂದೇಹಗಳಿಗೆ ನಿವಾರಣೆ ನೀಡಬಲ್ಲ ಉಪಯುಕ್ತ ಕೃತಿಯೆನಿಸಿದೆ. ಅದರಲ್ಲಿಯೂ ಸರ್ವೋಚ್ಛ ಹಾಗೂ ಉಚ್ಚ ನ್ಯಾಯಾಲಯಗಳ ತೀರ್ಪುಗಳ ಉಲ್ಲೇಖ, ಕೇಂದ್ರ- ರಾಜ್ಯ ಮಾಹಿತಿ ಆಯೋಗಗಳ ತೀರ್ಪುಗಳ ಉಲ್ಲೇಖ, ಸರಕಾರದ ಸುತ್ತೋಲೆಗಳು ಇತ್ಯಾದಿ ಸಮಗ್ರ ಮಾಹಿತಿಗಳು ಇಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಹೀಗಾಗಿ ಇದೊಂದು ಸಮಯೋಚಿತ, ಸಾರ್ವಜನಿಕ ಹಿತಾಸಕ್ತಿ ಹೊಂದಿದ ಉಪಯುಕ್ತ ಕ್ತೃತಿಯಾಗಿದ್ದು, ತನ್ಮೂಲಕ ಕಾಯ್ದೆ ಸದ್ಬಳಕೆಯಾಗುವದರಲ್ಲಿ ಸಂಶಯವಿಲ್ಲ ಎಂಬುದು ಘನ ಕರ್ನಾಟಕ ಉಚ್ಛ ನ್ಯಾಯಾಲಯ,ಮಾಜಿ ಅಧ್ಯಕ್ಷರು,ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ,ಬೆಂಗಳೂರು ಮಾಜಿ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಶ್ರೀ.ಚಂದ್ರಶೇಖರಯ್ಯ (ನಿ)ಅವರ ಅಭಿಪ್ರಾಯವಾಗಿರುತ್ತದೆ.            ವೖದ್ಯಕೀಯ ಕ್ಷೇತ್ರದಿಂದ ಕಾನೂನು ಕ್ಷೇತ್ರಕ್ಕೆ ದಾಪುಗಾಲಿಟ್ಟು ಅಲ್ಲಿಯ ವಿಷಯಗಳನ್ನರಗಿಸಿಕೊಂಡು ಕಾನೂನು ಗ್ರಂಥ ರಚಿಸಿರುವರಲ್ಲದೆ ಇದು ನಾಲ್ಕನೆಯ ಆವ್ರತ್ತಿಯಲ್ಲಿ ಪಾದಾರ್ಪಣೆಗೊಂಡಿರುವದು ಅಂತರ್ಜಾಲದ ಹಾವಳಿಯ ತಂತ್ರಜ್ಞಾನದ ಈ ಯುಗದಲ್ಲಿ ಓದುಗರ ಸಂಖ್ಯೆಯು ಕ್ಷೀಣಿಸುತ್ತಲಿದೆ ಎಂಬ ಹೇಳಿಕೆ ಅಲ್ಲಗಳೆದಿರುವದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಾಖಲಾರ್ಹ

“ಡಾ.ಶೇಖರ.ಡಿ.ಸಜ್ಜನರ ಕೃತಿ “ಮಾಹಿತಿ ಹಕ್ಕು ಅಧಿನಿಯಮ-2005ಒಂದು ವಿಶ್ಲೇಷಣೆ ( ತಿದ್ದುಪಡಿ 2019 ಸಹಿತ)” ಕೃತಿ ಪರಾಮರ್ಶೆ, ಪ್ರೊ ಶಕುಂತಲಾ. ಸಿಂಧೂರ ಗದಗ Read Post »

ಪುಸ್ತಕ ಸಂಗಾತಿ

ಉಷಾ ರವಿ ಅವರ ಕೃತಿ”ಆತ್ಮಾನುಸಂಧಾನ”ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ

ಪುಸ್ತಕ ಸಂಗಾತಿ ವರದೇಂದ್ರ ಕೆ ಮಸ್ಕಿ ಉಷಾ ರವಿ “ಆತ್ಮಾನುಸಂಧಾನ” “ಆತ್ಮಾವಲೋಕನಕ್ಕೆ ದಾರಿಯಾದ ಆತ್ಮಾನುಸಂಧಾನ”  ಆತ್ಮಾನುಸಂಧಾನಕೃತಿಕಾರರು : ಉಷಾರವಿಬೆಲೆ : 250/- “ಆತ್ಮಾವಲೋಕನಕ್ಕೆ ದಾರಿಯಾದ ಆತ್ಮಾನುಸಂಧಾನ”      ಕೃತಿ ಲೋಕಾರ್ಪಣೆಗೊಂಡು ತಿಂಗಳು ಕಳೆಯುವಷ್ಟರಲ್ಲೇ ಎರಡನೇ ಮುದ್ರಣ ಕಂಡ ಅಪರೂಪದ, ಅನುರೂಪವಾದ ಕಾದಂಬರಿ ಉಷಾರವಿ ಅವರ “ಆತ್ಮಾನುಸಂಧಾನ”.    ಮೊದಲ ಕೃತಿ “ಅಂತರಪಟ” ಕಾದಂಬರಿ ಮೂಲಕ ರಾಜ್ಯದ ಮನೆಮಾತಾಗಿದ್ದ ನನ್ನ ನೆಚ್ಚಿನ ಬರಹಗಾರ್ತಿ ಸಹೋದರಿ ಶ್ರೀಮತಿ ಉಷಾ ರವಿ ಅವರು ಈಗ ಎರಡನೇ ಕೃತಿ ಆತ್ಮಾನುಸಂಧಾನದ ಮುಖೇನ ರಾಜ್ಯದ ಓದುಗರ ಮನಮಾತಾಗಿದ್ದಾರೆ.   ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಆರಾಧಿಸುವ, ಪ್ರೀತಿಸುವ ಮೇರು ವ್ಯಕ್ತಿತ್ವದ ಪಾತ್ರಗಳ ಹೃದಯದೊಂದಿಗಿನ ಸಂಧಾನ ಈ ಕಾದಂಬರಿಯಲ್ಲಿ ಮುನ್ನೆಲೆಗೆ ಬರುತ್ತದೆ. ಇದನ್ನೆಲ್ಲಾ ನಾವು ಓದುತ್ತಾ ಹೋದರೆ ಅಕ್ಷರಶಃ ಪಾತ್ರಗಳೊಂದಿಗೆ ನಾವೂ ಆತ್ಮಾನುಸಂಧಾನ ಬೆಸೆದುಕೊಳ್ಳುತ್ತಾ ಸಾಗುತ್ತೇವೆ.    ನಾವು ಸಂಪೂರ್ಣ ಸಂಧಾನಕ್ಕೊಳಪಡಲು ಕೃತಿಯನ್ನು ತಾಂತ್ರಿಕ ಮನಸಿನಿಂದ ಓದದೆ ಪ್ರಾರ್ಥನೆಯಂತೆ, ತಪಸ್ಸಿನಂತೆ ಓದಬೇಕು. ಆಗ ಮಾತ್ರ ಈ ಸಂಧಾನ ಅನುಭವಕ್ಕೆ ಬಂದು ಸಂತುಷ್ಟತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಹೇಗೆ ಎಂಬುದನ್ನು ಕೃತಿಯ ಭಾವದೊಂದಿಗೆ ನಾನೂ ಸಂಧಾನಕ್ಕೊಳಪಟ್ಟು ಸಾಧ್ಯವಾದಷ್ಟು ತಮ್ಮ ಮುಂದೆ ಅಭಿವ್ಯಕ್ತಿಸಲು ಪ್ರಯತ್ನಿಸುತ್ತೇನೆ‌.                       ***     ಮನಸು ಎಂಬ ಅತ್ಯಮೂಲ್ಯವಾದ ಕಪ್ಪೆ ಚಿಪ್ಪಿನೊಳಗಿನ ಮುತ್ತನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಅದರೊಳಗಿನ ಮುತ್ತನ್ನು ಕೇವಲ ಕಾಮದ, ಧನದ ಮತ್ತಿರುವವರಿಗೆ ಎಟಕುವಂತೆ ಮಾಡಿದರೆ ಆಗುವ ಅನಾಹುತ ತುಂಬಾ ಘೋರವಾದುದು. ಇಂತಹ ಘೋರತೆಯನ್ನು ಜೀವನದಲ್ಲಿ ಅನುಭವಿಸಿದ ಹೆಣ್ಣಿನ ಬದುಕಿನ ಸುತ್ತ ಸುತ್ತಿರುವ ಈ ಆತ್ಮಾನುಸಂಧಾನ ಕಾದಂಬರಿ ವಿಶೇಷತೆಯಿಂದ ಕೂಡಿದೆ.     ಐಶ್ವರ್ಯ ಮತ್ತು ವಿಕಾಸ್ ಎಂಬ ಪಾತ್ರಗಳಿಂದ ಪ್ರಾರಂಭವಾಗುವ ಕಾದಂಬರಿ ನಿಜವಾಗಲೂ ನಮ್ಮೊಳಗೆ ಮೌಲ್ಯಗಳ ಐಶ್ವರ್ಯವನ್ನು ತುಂಬಿ ನಮ್ಮ ವ್ಯಕ್ತಿತ್ವ ವಿಕಸನಗೊಳಿಸಿ ಹೊಸ ಭಾವವನ್ನು ವಿಕಾಸಗೊಳಿಸುತ್ತದೆ.    ವಿಕಾಸ್ ಐಶ್ವರ್ಯಳನ್ನು ಪ್ರೇಮಿಸುತ್ತಿದ್ದರೆ ಐಶ್ವರ್ಯ ಅಜ್ಞಾತ ಕವಿಯ ಸಾಹಿತ್ಯಕ್ಕೆ ಮಾರು ಹೋಗಿ ಅಜ್ಞಾತ ಕವಿಯನ್ನು ಪ್ರೇಮಿಸುತ್ತಾಳೆ. ಪ್ರಾರಂಭದಲ್ಲಿ ಹರ್ಷ(ಐಶ್ವರ್ಯಳ ತಮ್ಮ)ನಿಗೆ ಅನ್ನಿಸಿದಂತೆ ವಿಕಾಸನೇ ಅಜ್ಞಾತ ಕವಿಯಾಗಿರಬಹುದೇ ಎಂದು ಓದುಗನಿಗೂ ಭಾಸವಾಗುತ್ತದೆ. ವಿಕಾಸನ ನಿಷ್ಕಲ್ಮಶ ಪ್ರೇಮದ ಪರಿ ಓದಿದ ನಮಗೆ ಎಲ್ಲಿ ಐಶ್ವರ್ಯ ವಿಕಾಸನಿಂದ ದೂರವಾಗುತ್ತಾಳೋ ಅಜ್ಞಾತ ಕವಿಯನ್ನು ವಿವಾಹವಾಗುತ್ತಾಳೋ ಎಂಬ ಬೇಸರವೂ ಮೂಡುತ್ತದೆ.     ಕಾದಂಬರಿ ಸಾಗಿದಂತೆ ಓದುಗರಿಗೆ ಅಜ್ಞಾತ ಕವಿಯ  ಪರಿಚಯವಾದಂತೆ ಕಾದಂಬರಿಯಲ್ಲಿ ಮುಖ್ಯ ಪಾತ್ರಗಳ  ಬದುಕು ಅನಾವರಣಗೊಳ್ಳುತ್ತದೆ.                   ***     ಹರೆಯದಲ್ಲಿ ಮನಸು ಬೇಡಿದ್ದನ್ನು ನಾವು ನಮ್ಮ ಬುದ್ಧಿಯನ್ನು ಉಪಯೋಗಿಸಿ ನೀಡಬೇಕು. ಅದರಲ್ಲೂ ಮನಸು ಪ್ರೇಮದ ಕಡೆಗೆ ವಾಲಿದರೆ, ನಮ್ಮ ಪ್ರೇಮವನ್ನು ಯೋಗ್ಯರಿಗೆ ಮಾತ್ರ ಧಾರೆ ಎರೆಯಬೇಕು. ಹೀಗೆ ಹರೆಯದಲ್ಲಿ ಈ ಕಾದಂಬರಿಯ ನಾಯಕಿ ಆರುಷಿ ರಶ್ಮಿ ಅನಾಮತ್ತಾಗಿ, ರಾಕ್ಷಸೀ ಪ್ರವೃತ್ತಿವುಳ್ಳ ವ್ಯಕ್ತಿಗೆ ತನ್ನ ಪ್ರೇಮವನ್ನು ಮತ್ತು ತನ್ನನ್ನು ಅರ್ಪಿಸಿದ ಪರಿಣಾಮವಾಗಿ ಎದುರಿಸಿದ ರೌರವ ನರಕದ ಬದುಕಿಗೆ ಸಾಕ್ಷಿಯಾಗಿ ಈ ಆತ್ಮಾನಂಧಾನ ಕೃತಿ ನಮ್ಮ ಕಣ್ಣ ಮುಂದೆ ಗೋಚರಗೊಳ್ಳುತ್ತದೆ.     ಕಾದಂಬರಿಯ ಶೀರ್ಷಿಕೆಗೆ ಸಹಸಂಬಂಧ ಕಲ್ಪಿಸಿಕೊಂಡು ಓದುವ ಓದುಗ ವರ್ಗಕ್ಕೆ, ಇಂತಹ ದುಸ್ಥಿತಿಯಲ್ಲಿ ಸಿಲುಕಿದ ಹೆಣ್ಣಿನ ಕಥೆಗೆ ಆತ್ಮಾನುಸಂಧಾನ ಹೆಸರು ಹೇಗೆ ಸರಿಹೊಂದುತ್ತದೆ? ಎಂಬ ಆಲೋಚನೆ ಹುಟ್ಟುತ್ತದೆ.     ಹೌದು ಇಲ್ಲಿ ಕಥಾ ನಾಯಕಿ ಸೂರ್ಯನೆಂಬ ಧೂರ್ತ ಹುಡುಗನನ್ನು ಮದುವೆಯಾಗಿ ತನ್ನ ವೈವಾಹಿಕ ಬದುಕಲ್ಲಿ ಎದುರುಗೊಂಡ ಎಲ್ಲ ತೊಡರುಗಳಲ್ಲಿ ಸಿಕ್ಕು, ಬಳಲಿ ಅದರಿಂದ ಹೊರಬಂದ ನಂತರ ಒಂದು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ತಾನಷ್ಟೇ ಹೊಸ ಬದುಕನ್ನು ಕಟ್ಟಿಕೊಂಡಳು ಎಂದರೆ ತಪ್ಪಾದೀತು. ತನ್ನ ಬದುಕನ್ನು ಬರಹದ ರೂಪದಲ್ಲಿ ಲೋಕಾರ್ಪಣೆಗೊಳಿಸಿ ತಪ್ಪು, ಒಪ್ಪುಗಳನ್ನು ಅಕ್ಷರ ರೂಪದಲ್ಲಿ ಬಿತ್ತರಿಸಿ ಅನೇಕ ಓದುಗರ ಮನಃಪರಿವರ್ತನೆಗೆ ದಾರಿಯಾಗುತ್ತಾಳೆ.    ಅಕ್ಕನ ಮಗಳನ್ನೇ ವರಿಸುವ ಬಯಕೆಯಿಂದ ಯಾವಾಗಲೂ ಮಲ್ಲಿಗೆ ಹೂವಿಡಿದು ಬರುತ್ತಿದ್ದ ಕಥಾ ನಾಯಕ ರವಿಗೆ ಕಥಾ ನಾಯಕಿ ಆರುಷಿಯಿಂದ ಆದದ್ದು ಆಘಾತವಲ್ಲ, ಮೋಸವೂ ಅಲ್ಲ ಎಂದು ಓದುಗನಿಗೆ ಅನಿಸುತ್ತದೆಯಾದರೂ ಸೂರ್ಯನ ಬದಲಾಗಿ  ಸೋದರ ಮಾವ ರವಿಯನ್ನು ಕೈ ಹಿಡಿದಿದ್ದರೆ ನಮ್ಮ ಕಥಾ ನಾಯಕಿ ಹೇಗೆ ಸಂತೃಪ್ತಿಯಾಗಿ ಜೀವನ ನಡೆಸುತ್ತಿದ್ದಳು ಎಂದು ಮಧ್ಯೆ ಮಧ್ಯೆ ಅಪೇಕ್ಷಿತವಾಗಿ ಆಲೋಚಿಸುತ್ತಾನೆ.    ರವಿಯೊಂದಿಗೆ ದಾಂಪತ್ಯದ ಭಾವನೆಯನ್ನೇ ಬೆಳೆಸಿಕೊಳ್ಳದ ಆರುಷಿ ಸಹಜವಾಗಿಯೇ ಸೂರ್ಯನೊಂದಿಗೆ ಪ್ರೀತಿಯಲ್ಲಿ ಲೀನವಾಗುತ್ತಾಳೆ.ಆದರೆ ರವಿಗೆ ಆರುಷಿಯಲ್ಲಿ ಪ್ರೇಮವಿತ್ತು, ಅಕ್ಕರೆಯಿತ್ತು, ಕೃತಿಕಾರರೇ ಕೊನೆಯಲ್ಲಿ ಹೇಳುವಂತೆ ತಾಯಿಯ ಮಮಕಾರವೂ ಇತ್ತು. ಇದೆಲ್ಲದಕ್ಕೂ ಮಿಗಿಲಾಗಿ ಆತ್ಮ ಬಂಧನವಿತ್ತು ಎಂಬುದು ನಮ್ಮ ಗಮನಕ್ಕೂ ಬರುತ್ತದೆ.     ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬಂತೆ ಆರುಷಿಗೆ ಮದುವೆಯ ನಂತರವೇ ಸೂರ್ಯನ ನಿಜಮುಖ, ಸಂಸ್ಕಾರವಿಲ್ಲದ ನಡೆ ತಿಳಿಯುತ್ತದೆ. ರವಿ ಆರುಷಿಯನ್ನು ಹೃದಯಕ್ಕೆ ಹತ್ತಿರವಾಗಿಸಿಕೊಳ್ಳಲು ಬಯಸಿದರೆ ಸೂರ್ಯ ದೇಹಕ್ಕೆ ಹತ್ತಿರವಾಗಿಸಿಕೊಳ್ಳಲೆಂದೇ ಅವಳನ್ನು ಮದುವೆಯಾಗಿದ್ದು ಎಂದು ತಿಳಿದಾಗ ಓದುಗನ ರಕ್ತವೇ  ಕುದಿಯುತ್ತದೆ ಎಂದರೆ ಆರುಷಿಯ ಮನಸಿಗೆ ಎಷ್ಟು ಘಾಸಿಯಾಗಿರಬಹುದು ಎಂದು ಊಹಿಸಬಹುದಾಗಿದೆ.         ಈ ಕಾದಂಬರಿಯಲ್ಲಿ ಬರುವ ರವಿ, ಸೂರ್ಯ ಇಬ್ಬರೂ ಸಮಾನಾರ್ಥಕ ಹೆಸರನ್ನು ಹೊಂದಿದ್ದರೂ ಅವರ ವ್ಯಕ್ತಿತ್ವ, ನಡೆ, ನುಡಿ, ಪ್ರೇಮವನ್ನು ವ್ಯಕ್ತಪಡಿಸುವ ಪರಿ ಸಂಪೂರ್ಣ ತದ್ವಿರುದ್ಧವಾಗಿವೆ. ತ್ರಿಕೋನ ಪ್ರೇಮದ ಈ ಕಾದಂಬರಿಯ ನಾಯಕಿ ಆರುಷಿ ರಶ್ಮಿ ವಯೋಸಹಜದ ಆಕರ್ಷಣೆಗೊಳಗಾಗಿ ಅನ್ಯ ಮತದ ಸೂರ್ಯನನ್ನು, ಜಾತಿಯನ್ನೂ ಮೀರಿ ಪ್ರೀತಿಸಿ, ಎಂತದ್ದೇ ಕಷ್ಟ, ನಿಂದನೆ ಬಂದರೂ ಎದುರಿಸಲು ಸನ್ನದ್ಧವಾಗಿ ಮದುವೆಯಾಗುತ್ತಾಳೆ. ತಂದೆ, ತಾಯಿಯ ಪ್ರೀತಿಗಿಂತ ಪಕ್ಕದ ಮನೆಯ ಪ್ರೇಮಿ ಸೂರ್ಯನ ಪ್ರೀತಿಯೇ ಮಿಗಿಲು ಎಂದು ಸೂರ್ಯನನ್ನು ನಂಬಿ ಹಸ್ತ ಜೋಡಿಸುತ್ತಾಳೆ. ಈ ಸಂದರ್ಭದಲ್ಲಿ ಆರುಷಿ ಸೂರ್ಯ ಮದುವೆ ಆಗುವ ಕೊನೆಯ ಕ್ಷಣದವರೆಗೂ ಆರುಷಿ ಸೂರ್ಯನನ್ನು ಮದುವೆ ಆಗದೇ ಇರಲಿ ಎಂದು ಓದುಗ ಪ್ರತಿ ಹಂತದ ಓದಿನಲ್ಲೂ ಪ್ರಾರ್ಥಿಸುತ್ತಲೇ ಸಾಗುತ್ತಾನೆ‌. ಆದರೆ ರವಿ ಆರುಷಿಯ ವ್ಯಕ್ತಿತ್ವ ಲೋಕಕ್ಕೆ ಪರಿಚಯವಾಗಲೆಂದೇ ವಿಧಿ ಸೂರ್ಯ ಆರುಷಿಯ ವಿವಾಹವಾಗುವಂತೆ ಮಾಡಿದೆ ಅನಿಸುತ್ತದೆ.    ಸೂರ್ಯನ ಎಲ್ಲಾ ಆಟಾಟೋಪಗಳನ್ನು ಸಹಿಸಿಕೊಂಡೇ ಆರುಷಿ ಜೀವನ ಸಾಗಿಸುತ್ತಿದ್ದಳು. ಸೂರ್ಯ ಇವತ್ತಲ್ಲಾ ನಾಳೆ ಬದಲಾಗಬಹುದೆಂಬ ಆರುಷಿಯ ನಂಬಿಕೆ, ತಾಳ್ಮೆ ಕೊನೆಯವರೆಗೂ ಗೆಲ್ಲವುದೇ ಇಲ್ಲ. ಬದಲಿಗೆ ಆರುಷಿ ಮೆತ್ತಗಾದಷ್ಟು ಸೂರ್ಯ ಅಡ್ಡದಾರಿಯಲ್ಲಿ ಬಲಿಯುತ್ತಲೇ ಸಾಗುತ್ತಾನೆ. ವೈವಾಹಿಕೇತರ ಸಂಬಂಧದಲ್ಲೂ ಮುಂದುವರೆಯುತ್ತಾನೆ. ಇದನ್ನೆಲ್ಲಾ ಸಹಿಸಿಕೊಂಡ ಆರುಷಿಗೆ ಸೂರ್ಯನ ಅನುಮಾನದ ಮನ ಮಾತ್ರ ಬಹಳ ಬಾಧಿಸುತ್ತದೆ. ಎಲ್ಲಿ ಹೋದರೂ ಪರರ ಜೊತೆ ಸಂಬಂಧ ಕಲ್ಪಿಸಿ ಮಾತನಾಡುತ್ತಿದ್ದ ಸೂರ್ಯನ ನಡೆ ನಿಜಕ್ಕೂ ಓದಗನಿಗೂ ಕೂಡ ಅಸಹನೀಯವೆನಿಸುತ್ತದೆ.      ಅಂತೂ ಒಂದು ಸಮಯದಲ್ಲಿ ಸೂರ್ಯನ ಬದುಕು ಅಂತ್ಯವಾದರೆ, ಆರುಷಿಯ ಬದುಕು ಹೊಸ ಹಂತದತ್ತ ಸಾಗುತ್ತದೆ. ಅವಳ ಲೇಖನಿಯಿಂದ ಬಂದ ಅನೇಕ ಲೇಖನಗಳು ಪರರ ಬದುಕಿಗೆ ದಾರಿದೀಪವಾಗುತ್ತವೆ.     ಸೂರ್ಯ ಸಾಯುವ ಮುನ್ನ ತನ್ನ ಹೆಂಡತಿ, ಮಗಳನ್ನೇ ಮಾರುವಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾನೆ. ಮಾರುತ್ತಾನೆ ಕೂಡ. ಇತ್ತ ಬೆಂಕಿ ಅಪಘಾತದಲ್ಲಿ ಸೂರ್ಯ ಮತ್ತು ಸೂರ್ಯನೊಡನೆ ಅನೈತಿಕ ‌ಸಂಬಂಧ ಇಟ್ಟುಕೊಂಡ ಪರಿಮಳ ಅನ್ನೋ ಹೆಂಗಸು ಸಾಯುತ್ತಾಳೆ. ಲೋಕದ ದೃಷ್ಟಿಯಲ್ಲಿ ಸೂರ್ಯನೋಡನೆ ಆರುಷಿ ಮತ್ತು ಮಗಳು ರಶ್ಮಿಕಾ ಇಬ್ಬರೂ ಬೆಂಕಿಯಲ್ಲಿ ದಹಿಸಿಹೋದರು ಎಂಬಂತೆ ಭಾಸವಾಗುತ್ತದೆ.    ಮಾರಾಟಗೊಂಡು ದುಷ್ಟರ ಕೈಯಿಂದ ತಪ್ಪಿಸಿಕೊಂಡು ಬಂದ ಆರುಷಿ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ರವಿಯಿಂದನೂ ಅನೇಕ ವರ್ಷ ದೂರವಾಗಿ ಉಳಿಯುತ್ತಾಳೆ. ಆರುಷಿಯ ಮಗಳು ಆರುಷಿಗೆ ಸದಾ ಸಹಾಯಕಳಾಗಿದ್ದ ಸಾಕಮ್ಮಜ್ಜಿಯ ಸಹಾಯದಿಂದ ಬದುಕುಳಿದು ಆರುಷಿಯ ಗೆಳತಿ ಬೇಬಿಯ  ಸುಪರ್ದಿಯಲ್ಲಿ ಬೆಳೆಯುತ್ತಾಳೆ.      ರವಿ ಮುಂದೆ ಅಪ್ಪಾಜಿಯಾಗಿ ಎಲ್ಲರಿಗೂ ಬೇಕಾಗುತ್ತಾರೆ, ನಂತರ ಒಂದು ಸಂದರ್ಭದಲ್ಲಿ ಆರುಷಿಗೆ ರವಿಯ ಭೇಟಿ ಆಗುತ್ತದೆ. ಆರುಷಿ, ರವಿ, ವಿಕಾಸ್, ಐಶ್ವರ್ಯ, ಆತ್ಮಾರಾಮ ಎಲ್ಲರ ಒಡನಾಟದಲ್ಲಿ ಎಲ್ಲರಿಗೂ ಆರುಷಿಯ ಇತಿಹಾಸ ತಿಳಿಯುತ್ತದೆ. ಆರುಷಿಯ ತಂದೆ ತಾಯಿ ಎಲ್ಲರೂ ಆರುಷಿ ಸತ್ತಿದ್ದಾಳೆ ಎಂದು ಭಾವಿಸಿದರೆ ರವಿ ಮಾತ್ರ ಅದನ್ನು ನಂಬಿರಲಿಲ್ಲ. ಆರುಷಿ ಇಲ್ಲವಾದ ಸಂದರ್ಭದಲ್ಲಿ ನಾನೂ ಇಲ್ಲವಾಗುತ್ತೇನೆ ಎಂಬಷ್ಟು ಪ್ರೇಮಿಸಿದ್ದ ರವಿಯ ನಂಬಿಕೆ ನಿಜವಾಗುತ್ತದೆ.    ಪ್ರಸ್ತುತ ಆರುಷಿಯ ಎರಡನೇ ಮಗ ಕಿರಣ (ಸೂರ್ಯನಿಂದ ದೂರವಾಗುವ ಸಂದರ್ಭದಲ್ಲಿ ಸೂರ್ಯನಿಂದ ಗರ್ಭಿಣಿಯಾಗಿರುತ್ತಾಳೆ) ಐಶ್ವರ್ಯ, ವಿಕಾಸ ಎಲ್ಲರೂ ರವಿ ಆರುಷಿಗೆ ಮದುವೆ ಮಾಡಿಸಬೇಕೆಂದು ಹವಣಿಸುತ್ತಾರೆ. ಆದರೆ ಆರುಷಿ ರವಿಯ ಸಂಬಂಧ ಮದುವೆಗೂ ಮೀರಿದ್ದು, ದೈಹಿಕ ಸಂಬಂಧಕ್ಕೂ ಮಿಗಿಲಾದುದು ಎಂಬ ಅರಿವು ಎಲ್ಲರಿಗೂ ಕೊನೆಯಲ್ಲಿ ತಿಳಿಯುತ್ತದೆ.   ಅನೇಕ ತಿರುವನ್ನೊಳಗೊಂಡ ಕಾದಂಬರಿಯ ಕೊನೆಯಲ್ಲಿ ಓದುಗನಿಗೆ ಕೃತಿಕಾರರು ಅಚ್ಚರಿಯ ತಿರುವನ್ನು ನೀಡುತ್ತಾರೆ. ಸಾಕಮ್ಮಜ್ಜಿಯ ಸಹಾಯದಿಂದ ಬದುಕುಳಿದ ಆರುಷಿಯ ಮಗಳು ರಶ್ಮಿಕಾಳೇ ಈ ಐಶ್ವರ್ಯ, ಈಗಿನ ಆರುಷಿಯ ತಾಯಿ ಭಾರ್ಗವಿಯೇ ಆರುಷಿಯ ಗೆಳತಿ ಬೇಬಿ ಎಂದು ತಿಳಿದು ಓದುಗ ರೋಮಾಂಚನಗೊಳ್ಳುತ್ತಾನೆ.      ಸೂರ್ಯನ ಸಾವಿಗೆ ಆರುಷಿಯೇ ಕಾರಣ ಎಂದು ತಿಳಿದಿದ್ದ ಸೂರ್ಯನ ತಾಯಿ ‌ಸರೋಜಮ್ಮ ಕೊನೆಯಲ್ಲಿ ಆರುಷಿ ಬೆನ್ನಿಗೆ ಚೂರಿ ಹಾಕುತ್ತಾಳೆ. ರವಿಯ ತೊಡೆಯ ಮೇಲೆಯೇ ಆರುಷಿ ಕೊನೆ ಉಸಿರೆಳೆದರೆ ಆರುಷಿಯನ್ನು ಮಲಗಿಸಿಕೊಂಡ ರವಿ ಆರುಷಿ ಹಣೆಗೆ ಮುತ್ತಿಟ್ಟು ಅಲ್ಲೇ ಪ್ರಾಣ ಬಿಡುತ್ತಾನೆ. ಇಬ್ಬರ ನಡುವಿನ ಪ್ರೇಮದ ಸಂಧಾನ ಆತ್ಮಾನುಸಂಧಾನದಲ್ಲಿ ಮಿಲನವಾಗುತ್ತವೆ ಎನ್ನುವಲ್ಲಿ ಅಲ್ಲಿಯ ಪಾತ್ರಗಳ ಜೊತೆಗೆ ಓದುಗನ ಕಣ್ಣುಗಳೂ ತೇವವಾಗುತ್ತವೆ.     ತನ್ನ ಹೆತ್ತ ತಾಯಿ ಎಂದು ತಿಳಿದುಕೊಂಡ ಕೆಲವೇ ಕ್ಷಣಗಳಲ್ಲಿ ಐಶ್ವರ್ಯ ತಾಯಿಯನ್ನು ಮತ್ತೆ ಶಾಶ್ವತವಾಗಿ ಕಳೆದುಕೊಳ್ಳುತ್ತಾಳೆ.    ಬೇಬಿ ತನ್ನ ಆತ್ಮೀಯ ಗೆಳತಿಯನ್ನು ಕಳೆದುಕೊಂಡು ನೋವು ಪಟ್ಟರೆ, ಕಿರಣನಿಗೆ ತಾಯಿ ದೂರವಾದರೂ ತಾಯಿ ಸ್ಥಾನದಲ್ಲಿ ಒಡಹುಟ್ಟಿದ ಅಕ್ಕ, ಅಜ್ಜ, ಅಜ್ಜಿ ಎಲ್ಲರೂ ಸಿಗುತ್ತಾರೆ.    ರವಿಯ ಆದರ್ಶಗಳನ್ನೇ ತುಂಬಿಕೊಂಡಿದ್ದ ವಿಕ್ಕಿ, ಪ್ರೀತಿಯ ಅಭಿಮಾನದ ಅಪ್ಪಾಜಿಯನ್ನು ಕಳೆದುಕೊಂಡು ದುಃಖಿಸುತ್ತಾನೆ.                    ***   ಈ ಕಾದಂಬರಿಗೆ ಅಂತ್ಯವಿದೆ, ಕೃತಿಕಾರರೇನೋ ಕಾದಂಬರಿಗೆ ಮುಕ್ತಾಯ ಹಾಡಿ ಕಥೆ ಮುಗಿಸಿದರೂ ಕಾದಂಬರಿಯನ್ನು ಓದಿದ ಓದುಗನೆದೆಯಲ್ಲಿ ಪಾತ್ರಗಳು ಜೀವಂತಾವಾಗಿಯೇ ಉಳಿಯುತ್ತವೆ.    ರವಿಯ ಪ್ರೀತಿಸುವ ಪರಿ, ಪ್ರೀತಿ ಕೊಡಬೇಕು ಪ್ರತಿಯಾಗಿ ಬಯಸಬಾರದು ಎಂಬ ಸತ್ಯತೆ, ಆರುಷಿಯ ತಾಳ್ಮೆ, ಆತ್ಮಾರಾಮರ ಜೀವನ ದೃಷ್ಟಿಕೋನ ಎಲ್ಲವೂ ಓದುಗನಲ್ಲಿ ನಿರಂತರವಾಗಿ ಉಳಿಯುತ್ತವೆ.    ಶ್ರೀಮತಿ ಉಷಾ ರವಿ ಅವರ ಬರಹದ ವೈಖರಿ, ಕಥೆ ಕಟ್ಟುವ ವಿಧಾನಕ್ಕೆ ಓದುಗ ಖಂಡಿತ ಶರಣಾಗುತ್ತಾನೆ. ಇಡೀ ಕಾದಂಬರಿ ನನ್ನ ಹೃದಯದಲ್ಲಿದ್ದರೂ ಕೆಲ ಸಂದರ್ಭಗಳನ್ನು ಮಾತ್ರ ನಾನು ಇಲ್ಲಿ ಪರಿಚಯಿಸಲೆತ್ನಿಸಿದ್ದೇನೆ. ಅಜ್ಞಾತ ಕವಿಯನ್ನರಸಿ ಹೊರಟ ಐಶ್ವರ್ಯಳಿಗೆ ಸಿಕ್ಕಿದ್ದು ಯಾರು? ಕೊನೆಗೆ ಐಶ್ವರ್ಯ ಯಾರನ್ನು ಮದುವೆಯಾಗುತ್ತಾಳೆ? ಸೂರ್ಯನನ್ನು ಮದುವೆಯಾದ ಬಳಿಕ ಆರುಷಿ ಅನುಭವಿಸಿದ ಯಾತನೆ, ಮಗಳ ಈ ನಡೆಯಿಂದ ಆರುಷಿಯ ತಂದೆ, ತಾಯಿ, ಅಣ್ಣ ಪಟ್ಟ ಸಂಕಟ, ಆರುಷಿಯ ಜೀವನದ ಪ್ರತಿ ಹೆಜ್ಜೆಯಲ್ಲೂ ಅವಳ ಅರಿವಿಗೆ ಬಾರದಂತೆ ರವಿ ಹೇಗೆ ಸಾತಿಕೊಟ್ಟು ಅವಳ ಬದುಕನ್ನು ಗಟ್ಟಿಗೊಳಿಸುತ್ತಾನೆ. ಈ ಎಲ್ಲವೂ ನನ್ನ ಆತ್ಮದಲ್ಲಿ ಬಂಧನವಾಗಿವೆ ಅಲ್ಲದೆ ಈ ಕೃತಿಯ ಅನೇಕ ಸಾಲುಗಳು ಅನೇಕ ಬಾರಿ ನನ್ನನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆಯೂ ಮಾಡಿವೆ.    ನಿಮಗೂ ಈ ಆತ್ಮಾನುಸಂಧಾನದ

ಉಷಾ ರವಿ ಅವರ ಕೃತಿ”ಆತ್ಮಾನುಸಂಧಾನ”ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ Read Post »

ಪುಸ್ತಕ ಸಂಗಾತಿ

ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ)

ಪುಸ್ತಕ ಸಂಗಾತಿ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) ಹೆಚ್. ಎಸ್.ಪ್ರತಿಮಾ ಹಾಸನ್ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪ್ರತಿ ಬೋಧಪುಸ್ತಕದ ಪ್ರಥಮ ಮುದ್ರಣ-2024ಪುಸ್ತಕದ ಮುಖಪುಟ ವಿನ್ಯಾಸ –ಪ್ರಕಾಶನ -ಅನ್ನಪೂರ್ಣ ಪಬ್ಲಿಷಿಂಗ್ ಹೌಸ್.ಪುಸ್ತಕದ ಬೆಲೆ-250 ರೂ.ಪುಟಗಳ ಸಂಖ್ಯೆ-224ಮುನ್ನುಡಿ -ಖ್ಯಾತ ಹಿರಿಯ ಸಾಹಿತಿಗಳಾದ ಶ್ರೀ.ಹರಿನರಸಿಂಹ ಉಪಾಧ್ಯಾಯ ಅವರು ಈ ಲೇಖನ ಸಂಕಲನ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದು ಶುಭ ಕೋರಿರುವರು  ಇತ್ತೀಚಿಗೆ ಎಲ್ಲೆಡೆಯೂ  ರಾಜ್ಯದ್ಯಂತ  ಹೆಸರು ಮಾಡುತ್ತಾ  ಶತಕಕ್ಕಿಂತ ಹೆಚ್ಚಿನ ಪ್ರಶಸ್ತಿಯನ್ನು ಪಡೆದಂತಹ ಹೆಮ್ಮೆಯ ಹಾಸನದ  ಮೂಲದವರಾದ  ಹಾಸನದ  ಹೆಮ್ಮೆಯ ಪುತ್ರಿ  ಶ್ರೀಮತಿ ಹೆಚ್ ಎಸ್ ಪ್ರತಿಮಾ  ಹಾಸನ್ ರವರುಮುಕ್ತಕ ಕವಯಿತ್ರಿ, ಶಿಕ್ಷಕಿ, ಸಮಾಜ ಸೇವಕಿ, ಸಂಘಟಕಿ,  ಪತ್ರಕರ್ತೆ, ಅಂಕಣಗಾರ್ತಿ, ಸಾಮಾಜಿಕ ಚಿಂತಕಿ, ಗಾಯಕಿ, ಸಾಹಿತಿ, ಬರಹಗಾರ್ತಿ,ಯಾಗಿ ಅಷ್ಟೇ ಅಲ್ಲದೆ  ಹಲವಾರು ಸಂಘ ಸಂಸ್ಥೆಗಳಲ್ಲಿ  ಜಿಲ್ಲೆ ಹಾಗೂ ರಾಜ್ಯ ಘಟಕಗಳಲ್ಲಿ ಪದಾಧಿಕಾರವನ್ನು ಪಡೆದು ಕಾರ್ಯ ಕಾರ್ಯನಿರ್ವಹಿಸುತ್ತಾ  ‘ ಬಹುಮುಖ ಪ್ರತಿಭೆ ‘ ಯಾಗಿ ಹೊರಹೊಮ್ಮಿದ್ದಾರೆ. ಇವರ ಬಹುಮುಖ ಪ್ರತಿಭೆಯನ್ನು ಕಂಡಾಗ ಉದಿಸಿ ಬಂದ ನುಡಿಗಳು ಹಲವಾರು.” ಆಗದು ಎಂಬ ಕಾರ್ಯವ ಆಗುವುದೆಂಬುದನ್ನು ತೋರಿದವಳು ಎಲ್ಲೆಡೆಯೂ ಪ್ರಸಿದ್ಧಿಯಾದವಳು   ಇಂದಿನ ಪೀಳಿಗೆಗೆ ಪ್ರೇರಣೆಯಾಗಿರುವಳು ಸದಾ ಕಾಲ ಸಮಾಜದ ಏಳಿಗೆಗಾಗಿ  ತುಡಿಯುವಂತಹ ಹೃದಯವ ಹೊಂದಿರುವ ಮಹಿಳಾ ಸಾಧಕಿ ಇವಳು “ಇವರ ಸಾಹಿತ್ಯ ಲೋಕದಲ್ಲಿನ ಸೇವೆಯು  ಇವರಿಂದ 11 ಕೃತಿಗಳು  ಸಾಹಿತ್ಯ ಲೋಕಕ್ಕೆ ಲೋಕಾರ್ಪಣೆಗೊಂಡಿದೆ. ಅದರಲ್ಲಿ ಪ್ರತಿ ಬೋಧವೂ ಒಂದು 224 ಪುಟಗಳನ್ನು ಒಳಗೊಂಡಿದೆ. 250 ರೂಪಾಯಿಯಾಗಿದ್ದು. ಬೆನ್ನುಡಿಯನ್ನು ಪ್ರೋ. ಸಮತಾ ದೇಶ ಮಾನೆ  ರವರು ಬರೆದಿದ್ದು  ಪ್ರೋತ್ಸಾಹವನ್ನು ನೀಡುತ್ತಾ  ಕಾರ್ಯವನ್ನು ಮಾಡಿದ್ದಾರೆ. ಇದು 2024ರ ಆವೃತ್ತಿಯಾಗಿದ್ದು. ಅರ್ಪಣೆಯನ್ನು ತನ್ನ ತಂದೆಯಾದಂತಹ ದಿವಂಗತ ಸುರೇಶ್ ರವರಿಗೂ ತಾಯಿ ನೀಲಮ್ಮ ಸುರೇಶ್ ರವರಿಗೆ ಹಾಗೂ ಅಚ್ಚುಮೆಚ್ಚಿನ ಪ್ರೋತ್ಸಾಹದಾಯಕರಾಗಿ ತನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಅಣ್ಣನಾದ ಶ್ರೀ ಹೆಚ್. ಎಸ್ ಮಂಜುನಾಥ್( ಆರೋಗ್ಯ ನಿರೀಕ್ಷಣಾಧಿಕಾರಿ ) ರವರಿಗೂ  ಅರ್ಪಿಸಿದ್ದಾರೆ. ಈ ಕೃತಿಯಲ್ಲಿ ನವಳಗುಳಿದವರು ಆಶಯ ನುಡಿಯ ಮೂಲಕ ಆಶೀರ್ವದಿಸಿದ್ದಾರೆ. ಅತ್ಯಂತ ಮುಖ್ಯವಾಗಿ  ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದಂತಹ  ಶ್ರೀ ಉದಯಕುಮಾರ್ ರವರು ಆಶಯ ನುಡಿಯನ್ನು  ಬರೆದಿದ್ದಾರೆ. ಆನಂತರದಲ್ಲಿ ಮನದಾಳದ ಮಾತಿನಲ್ಲಿ ತನ್ನ ಸಾಧನೆಯ ದಾರಿಯಲ್ಲಿ ಅಡೆತಡೆಯನ್ನು ನೀಡಿದಂತಹ ಹಾಗೂ ಪ್ರೋತ್ಸಾಹಿಸಿದಂತಹ  ಎಲ್ಲರಿಗೂ ಧನ್ಯವಾದಗಳನ್ನು ಲೇಖಕಿ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರು  ತಿಳಿಸಿದ್ದಾರೆ. ನಂತರದಲ್ಲಿ ಮುನ್ನುಡಿಯನ್ನು  ಹರಿ ನರಸಿಂಹ ಉಪಾಧ್ಯಾಯರು ಬರೆದಿದ್ದಾರೆ. ಆನಂತರದಲ್ಲಿ ಪರಿವಿಡಿಯಲ್ಲಿ 45 ಲೇಖನಗಳನ್ನು ಒಳಗೊಂಡಂತಹ  ಅ ಲೇಖನಗಳಲ್ಲಿ ಕಥೆ, ಪ್ರಸ್ತುತ ದಿನಮಾನಕ್ಕೆ ಹೋಲಿಕೆ ಮಾಡುವಂತಹ ಲೇಖನಗಳು, ಮಂಗಳಮುಖಿಯರ ಬಗ್ಗೆ  ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಂತಹ ಲೇಖನಗಳು ಇವೆ. ಇದರಲ್ಲಿ ಇರುವಂತಹ  ಪ್ರತಿಯೊಂದು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಕನ್ನಡ ಸಾಹಿತ್ಯವು ಇಂದು ಸೊರಗುತ್ತಿದೆ ಎಂಬ ಕೂಗು ಕೇಳಿ ಬರುವ ಹೊತ್ತಿನಲ್ಲಿ ಅದೆಷ್ಟೋ ಕವಿಗಳು, ಕವಯಿತ್ರಿಯರು, ಲೇಖಕ ಲೇಖಕಿಯರು ಕನ್ನಡದಲ್ಲಿ ಬರೆಯುತ್ತಿರುವುದು ಕಂಡು ಬರುತ್ತಿದೆ. ಇದನ್ನು ನೋಡಿದಾಗ ಕನ್ನಡದ ಜನರು ಕನ್ನಡವನ್ನು ಎಂದಿಗೂ ಹಿಂದೆ ಉಳಿಯಲು ಬಿಡುವ ಮಾತೇ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಅದರಂತೆ ಇಂದು ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬಂದು ತಮ್ಮ ಸಾಹಿತ್ಯ ಅಭಿರುಚಿಯನ್ನು ತೋರಿಸುತ್ತಿರುವುದು ಹೆಮ್ಮೆಯ ವಿಚಾರ. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕೃಷಿ ಮಾಡುವಲ್ಲಿ  ಹೆಜ್ಜೆ ಹಾಕುವ ಅನೇಕರಲ್ಲಿ ಒಬ್ಬರು ಹಾಸನದ ಶ್ರೀಮತಿ ಪ್ರತಿಮಾ.ಹೆಚ್.ಎಸ್ ರವರು. ಈಗಾಗಲೇ ಹಲವು ಕೃತಿಗಳನ್ನು ಹೊರ ತಂದಿರುವ ಇವರು ಈಗ ಮುಕ್ತಕ ಸಂಕಲನ ಕೃತಿಯನ್ನು ತರುವಲ್ಲಿ ಆಸಕ್ತಿ ತೋರಿರುವುದು ಆ ಸಾಹಿತ್ಯ ಪ್ರಕಾರಕ್ಕೊಂದು ಹೆಚ್ಛಿನ ಗರಿಯಿಟ್ಟಂತಾಗುವುದು. ಶ್ರೀಮತಿ  ಹೆಚ್ ಎಸ್ ಪ್ರತಿಮಾ ಹಾಸನ್ ರವರು  ಈ ಮುಕ್ತಕ ಕೃತಿ *ಅಂತರಂಗ ಪ್ರತಿರವ* ದಲ್ಲಿ ಸುಮಾರು ನೂರು ಮುಕ್ತಕಗಳಿದ್ದು ಜೊತೆಗೆ ಓದಿ ಆರ್ಥೈಸಿಕೊಳ್ಳಲು ಸುಲಭವಾಗುವಂತೆ ಭಾವಾರ್ಥವನ್ನೂ ಬರೆದಿರುವುದನ್ನು ಕಾಣುತ್ತೇವೆ. ಕವಿಭಾವವನ್ನು ಅರ್ಥ ಮಾಡಿಕೊಳ್ಳುವುದು ಕೆಲವೊಮ್ಮೆ ಸುಲಭವಲ್ಲದ ಕಾರಣ ಓದುಗರು ಗೊಂದಲಕ್ಕೆ ಈಡಾಗಬಾರದು, ಓದಿದ ಪ್ರತಿಯೊಂದು ವಿಷಯಗಳೂ ಬೇಗ ಮನನವಾಗಲಿ ಎಂಬ ಉದ್ದೇಶದಿಂದ ಸರಳವಾಗಿ ಕೆಲವು ಸಾಲುಗಳಲ್ಲಿ ಅರ್ಥವನ್ನೂ ಇಲ್ಲಿ ನೀಡಿರುವುದು ಕೃತಿಯ ವಿಶೇಷತೆ.ಇಲ್ಲಿರುವ ಮುಕ್ತಕಗಳಲ್ಲಿ ಕೆಲವನ್ನು ನೋಡುವುದಾದರೆ…ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) ಸದ್ದಿರದೆ ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ ಕಪಿಲನಗರದರಸು ಗೌತಮಬುದ್ಧ ಮನೆಯನು ಬಿಟ್ಟು ಬೋಧಿವೃಕ್ಷದ ಕೆಳಗೆಸಿದ್ಧಿಗಳಿಸಲು ಕುಳಿತ ಲಕ್ಷ್ಮಿದೇವಿ  ಭಾವಾರ್ಥ:  ಪ್ರಪಂಚದಲ್ಲಿ ಎಲ್ಲರೂ  ಯಾವುದೇ ಶಬ್ದ ಮಾಡದೆ ರಾತ್ರಿ ವೇಳೆ ಶಾಂತಿಯಿಂದ ನಿದ್ದೆ ಮಾಡುತ್ತಿರುತ್ತಾರೆ. ಆದರೆ ಗೌತಮ ಕಪಿಲ ನಗರದ  ಅರಸ ಬೋಧಿವೃಕ್ಷದ ಕೆಳಗೆ  ಕುಳಿತು ಧ್ಯಾನ ಮಾಡುತ್ತ ಶಾಂತಿಯನ್ನು ಗಳಿಸುತ್ತಾನೆ . ಅದರಿಂದ ಸಿದ್ಧಿ ಪಡೆಯಬೇಕೆಂದು ಆಶಿಸುತ್ತಾನೆ. ಲೋಕದ ಸಾವು ನೋವುಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ನಡು ರಾತ್ರಿ ಮನೆ ಬಿಟ್ಟು ಹೋಗುತ್ತಾನೆ.  ಬೋಧಿವೃಕ್ಷದ ಕೆಳಗೆ  ಸಿದ್ದಿಗಳಿಸಲು ತಪಸ್ಸಿಗೆ ಕುಳಿತುಬಿಡುತ್ತಾನೆ.ಕನ್ನಡಕೆ ಕೈಯೆತ್ತು ಗೌರಿ ಶಿಖರದ ಹಾಗೆಕನ್ನಡಕೆ ಕೊರಳೆತ್ತು ಪಾಂಚಜನ್ಯಕನ್ನಡವ ನೆನೆಯುತ್ತ ಕನ್ನಡಾಂಬೆಗೆ ನಮಿಸುಕನ್ನಡವೆ ಚೆನ್ನುಡಿಯು ಲಕ್ಷ್ಮಿ ದೇವಿಭಾವಾರ್ಥ: ನಮ್ಮ ಕನ್ನಡ  ನಮ್ಮ ಆಸ್ತಿ. ಅದನ್ನು ಉಳಿಸಿಕೊಳ್ಳುವ ಕೆಲಸ ನಮ್ಮಿಂದಲೇ ಆಗಬೇಕೇ ಹೊರತು ಬೇರೆಯವರು ಅದನ್ನು ಉಳಿಸಲು ಬರುವುದಿಲ್ಲ. ಕನ್ನಡಕ್ಕೆ ಕೈ ಎತ್ತು  ಗೌರಿ ಶಿಖರದ ಹಾಗೆ  ಕನ್ನಡಕ್ಕೆ ಕೊರಳೆತ್ತು  ಪಾಂಚಜನ್ಯದ ರೀತಿಯಲ್ಲಿ ಎಂಬಂತೆ ಕನ್ನಡವನ್ನೇ ಉಸಿರಾಗಿಸಿಕೊಂಡು  ಕನ್ನಡವನ್ನೇ ಬೆಳೆಸಲು  ಹೋರಾಟವನ್ನು ಮಾಡಬೇಕಾಗುತ್ತದೆ. ಕನ್ನಡವ ನೆನೆಸುತಲಿ  ಕನ್ನಡಾಂಬೆಗೆ ನಮಿಸುತ್ತಲಿ  ತಾಯಿಯ ಋಣ ತೀರಿಸಲಾಗದೆಂದು  ನನ್ನ ಕನ್ನಡ ನನಗೆ ಹೆಮ್ಮೆ ಎಂದು ಹೇಳುತ್ತಾ ಸಾಗುವ ದಾರಿಯಲ್ಲಿ ಕನ್ನಡಾಂಬೆಯನ್ನು ನಮಿಸುತ್ತಾ ಕನ್ನಡವೇ ಚೆನ್ನುಡಿಯು ಎಂದು ಹೇಳುತ್ತಾ  ಎಲ್ಲೆಡೆಯೂ ಪ್ರೀತಿ ವಿಶ್ವಾಸದಲ್ಲಿ ಬಾಳಬೇಕಾಗಿದೆ. ಪ್ರತಿ ಮನೆ ಮನೆಗಳಲ್ಲೂ ಕನ್ನಡದ ಕಹಳೆಯನ್ನು ಕೂಗ ಬೇಕಾಗಿದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡವೇ ನಮ್ಮಮ್ಮ, ಅವಳೇ ನಮ್ಮ ಉಸಿರಮ್ಮ ಎಂದು ಜೀವನದಲ್ಲಿ ಸಾಗ ಬೇಕಾಗುತ್ತದೆ.ಕೂಲಿನಾಲಿಯ ಮಾಡಿ ಮಕ್ಕಳಿಗೆ ಮುದನೀಡಿಪಾಲಿಸಿದ ತಾಯ್ತಂದೆ ನಿಜದೇವರುಹಾಲುಣಿಸಿ ತುತ್ತುಣಿಸಿ ಗೌರವವ ಹೆಚ್ಚಿಸಿದನೀಲಮ್ಮನಿಗೆ ಶರಣು ಲಕ್ಷ್ಮಿದೇವಿಭಾವಾರ್ಥ: ಯಾರೇ ಆಗಲಿ ಜನಿಸಿದ ಮಕ್ಕಳನ್ನು ಸಾಕುವಾಗ ತಮ್ಮ ಕುಡಿಗಳೆಂದು ಪ್ರೀತಿಯಿಂದ ಸಾಕುತ್ತಾರೆ.  ಯಾವುದೇ ಕಷ್ಟಗಳನ್ನು ತೋರಿಸಿಕೊಳ್ಳದಂತೆ ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕುತ್ತಾರೆ. ಅವರೇ ನಿಜವಾದ ದೇವರು. ಅವರ ಕಷ್ಟಗಳು ಎಷ್ಟೇ ಇದ್ದರೂ  ನಗುನಗುತ ಪ್ರೀತಿಯಿಂದ ಊಟ ಮಾಡಿಸುತ್ತಾರೆ. ಅಂತಹ ದೇವರುಗಳನ್ನು  ಚೆನ್ನಾಗಿ ನೋಡಿಕೊಳ್ಳುವ ರೀತಿಯಲ್ಲಿ  ಕೃತಜ್ಞತೆಯನ್ನು ತೋರಬೇಕು.  ಅಂತಹ ನನ್ನ ತಾಯಿಯು ಸಹ ಎದೆ ಹಾಲು ನೀಡುತ್ತಾ ಗೌರವ ನೀಡುತ್ತ ಪ್ರೀತಿ ಪ್ರೇಮದಲಿ ಸಾಕು  ಹೂವಂತೆ ಸಂರಕ್ಷಿಸುತ  ನನ್ನ ಎಲ್ಲಾ ಕಾರ್ಯಗಳಲ್ಲಿ ಜೊತೆಯಾಗಿ ನಿಲ್ಲುತ್ತಾ ನನಗೆ ಯಶಸ್ಸನ್ನು ನೀಡುತ್ತಿರುವ  ನನ್ನ ತಾಯಿ ನೀಲಮ್ಮಗೆ ಶರಣು.        ಕೃತಿಯೊಳಗಿನ ಎಲ್ಲಾ ಮುಕ್ತಕಗಳಿಂದ ಆಯ್ದು ಬೆರಳೆಣಿಕೆಯಷ್ಟನ್ನು ಮಾತ್ರ ಇಲ್ಲಿ ಉದಾಹರಿಸಿದ್ದೇನೆ. ಈ ಎಲ್ಲ ರಚನೆಗಳನ್ನು ಕಂಡಾಗ ಕವಯಿತ್ರಿಯು ಎಷ್ಟು ವಿಶಾಲ ಚಿಂತನೆಯುಳ್ಳವರಾಗಿದ್ದಾರೆ ಎಂದು ಅರ್ಥವಾಗುತ್ತದೆ. ಪ್ರತಿಯೊಂದು ಮುಕ್ತಕಗಳಲ್ಲಿಯೂ ವಿವಿದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾಹಿತ್ಯದ ವಿಸ್ತಾರವನ್ನು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಪ್ರೀತಿ, ಒಳಿತು ಕೆಡುಕು, ಬುದ್ಧಿವಾದ, ಅಮ್ಮ, ಸ್ನೇಹ ಮೊದಲಾದ ಸಾಕಷ್ಟು ವಿಷಯಗಳು ಹಾಸುಹೊಕ್ಕಾಗಿವೆ. ಬದುಕಿನ ಆಗು ಹೋಗುಗಳಿಗೆ ಸ್ಪಂದಿಸುತ್ತವೆ. ಸಂಬಂಧ, ಪರಿಸರ ಕಾಳಜಿ, ಕನ್ನಡದ ಹಿರಿಮೆ, ದುಃಖ, ಭಕ್ತಿ, ಕಲಿಕೆ, ತಾಳ್ಮೆಯ ಕುರಿತು ಬೆಳಕು ಚೆಲ್ಲುವ ಹಲವು ಮುಕ್ತಕಗಳು ಮನಸ್ಸಿಗೆ ನಾಟುತ್ತವೆ. ಆಧುನಿಕ ವಚನದಂತೆ ಕಂಗೊಳಿಸುವ ನಾಲ್ಕು ಸಾಲಿನ ಮುಕ್ತಕಗಳು ಲಕ್ಷ್ಮಿದೇವಿ ಅಂಕಿತದಿಂದ ಕೊನೆಗೊಳ್ಳುತ್ತವೆ. ಈಗಾಗಲೇ ನೀಲ ಪ್ರತಿಮಾನ ಮಂಜು ಕವನ ಸಂಕಲನ, ಪಂಚ ಮುಕ್ತಕ ಮಾಲೆ, ಹಾಗೂ ಮನದಾಳದ ಪ್ರತಿಬಿಂಬ ಲೇಖನ ಸಂಕಲನ, ಪ್ರತಿಮಾವಲೋಕನ (ಕೃತಿ ವಿಮರ್ಶನ ಸಂಕಲನ), ಭಾವನೆಗಳ ಪ್ರತಿಬಿಂಬ, ಬಣ್ಣದ ಪ್ರತಿ ಡಬ್ಬಿ (ಶಿಶು ಗೀತೆ), ಪ್ರತಿಮಾನತರಂಗ (ಸಮಗ್ರಲೇಖನ ಸಂಗ್ರಹ ), ಪ್ರತಿ ಮುಕ್ತ ಸಿರಿ, ಕೃತಿಗಳನ್ನು ಹೊರತಂದಿರುವ ಇವರು ಪ್ರತಿಮಾ ಸಾಮಾಜಿಕ, ಸಾಂಸ್ಕ್ರತಿಕ ಟ್ರಸ್ಟ್ (ರಿ)ರಾಜ್ಯ ಘಟಕ. ಹಾಸನ ಜಿಲ್ಲೆ. ಯ ಸಂಸ್ಥಾಪಕಿಯೂ ಹೌದು. ಈ ಪ್ರತಿಷ್ಠಾನದ ಮೂಲಕ ಅನೇಕ ಸಮಾಜ ಸೇವೆಯನ್ನು ಮಾಡಿ ಗೌರವಕ್ಕೆ ಪಾತ್ರರಾಗಿರುವುದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಸಮಾಜ ಸೇವೆ ಹಾಗೂ ಸಾಹಿತ್ಯ ಸೇವೆಗೆ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಚಾರ. ಈಗ ಈ ಮತ್ತೊಂದು ಕೃತಿಯೂ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಕೀರ್ತಿ, ಸಮ್ಮಾನಗಳು ಅರಸಿ ಬರಲಿ ಎಂದು ಆಶಿಸುತ್ತಾ ಈ ಕೃತಿಯಲ್ಲಿನ ಉತ್ತಮ ಜೀವನ ಮೌಲ್ಯಗಳನ್ನು ಸಂದೇಶಗಳು ಜನತೆಗೆ ದಾರಿ ದೀಪವಾಗಲಿ. ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ ರವರು ಇನ್ನಷ್ಟು ಹೆಚ್ಚು ವೈವಿಧ್ಯಮಯ ಸಾಹಿತ್ಯ ರಚನೆಯಾಗಲಿ, ತಾಯಿ ಭುವನೇಶ್ವರಿಯ ಆಶೀರ್ವಾದ ಸದಾ ಇವರಿಗೆ ಪ್ರಾಪ್ತವಾಗಲಿ ಎಂದು ಹೃನ್ಮನದಿಂದ ಹಾರೈಸುತ್ತೇನೆ. ಸಿರಿಗನ್ನಡಂ ಗೆಲ್ಗೆಸಿರಿಗನ್ನಡಂ ಬಾಳ್ಗೆ ಸಹೃದಯ ಓದುಗರು ಸಾಹಿತ್ಯಾಸಕ್ತರು ಪ್ರತಿಭೋದ ಲೇಖನ ಸಂಕಲನ ಕೃತಿಯ ಕೊಂಡು ಓದುವ ಮೂಲಕ ಸೃಜನಶೀಲ ಬರಹಗಾರ್ತಿಯಾದ ಬಹುಮುಖ ಪ್ರತಿಭೆಯ ಪ್ರತಿಭಾನ್ವಿತೆಯಾದ ಶ್ರೀಮತಿ ಪ್ರತಿಮಾ ಹಾಸನ ಇವರನ್ನು ಹರಸಿ ಹಾರೈಸಿ ಶುಭ ಕೋರಿ ಈ ಲೇಖನ ಸಂಕಲನ ಕೃತಿಯ ಕೊಂಡು ಕೊಳ್ಳಲು ಸಂಪರ್ಕಿಸಬೇಕಾದ ಲೇಖಕಿಯ ಮೊಬೈಲ್ ಸಂಪರ್ಕ ಸಂಖ್ಯೆ- +91 96115 34526 ಪೂರ್ಣಿಮಾ ರಾಜೇಶ್

ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) Read Post »

ಪುಸ್ತಕ ಸಂಗಾತಿ

“ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಕೆ ಎನ್ ಚಿದಾನಂದ

ಪುಸ್ತಕಸಂಗಾತಿ ಕೆ ಎನ್ ಚಿದಾನಂದ “ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಇತಿಹಾಸವು ಆಧಾರಗಳಿಂದಲೇ ಸೃಷ್ಟಿಯಾಗಿದೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ಒಂದು ಸ್ಥಳದಲ್ಲಿ ದೊರೆತ ಸಾಹಿತ್ಯ, ನಾಣ್ಯ, ಶಾಸನ, ಸ್ಮಾರಕ, ದೇವಾಲಯ, ಮುಂತಾದವುಗಳು ತನ್ನದೇ ಚರಿತ್ರೆಯನ್ನು ಜಗತ್ತಿಗೆ ಸಾರುತ್ತವೆ. ಕಾಲ ಎಲ್ಲವನ್ನು ಮೆರೆಸುತ್ತದೆ ಮತ್ತು ಎಲ್ಲವನ್ನು ಮರೆಸುತ್ತದೆ. ಆದರೆ ಅಲ್ಲಿ ಉಳಿಯುವ ಸಾಕ್ಷಿಗಳು ಮತ್ತೆ ಮತ್ತೆ ನೆನಪುಗಳನ್ನು ಮರುಕಳಿಸುತ್ತದೆ. ಕಾಲದ ಹೆಜ್ಜೆ ಗುರುತುಗಳನ್ನು ಹುಡುಕುವುದು ಎಂದರೆ ಒಂದು ಅನ್ವೇಷಣೆಯೇ ಸರಿ. ​”ದೇಶ ಸುತ್ತು ಕೋಶ ಓದು” ಎಂಬ ಜನಜನಿತವಾದ ಗಾದೆ ಮಾತು ಕೇವಲ ಜ್ಞಾನಾರ್ಜನೆಯ ಮಾರ್ಗವಲ್ಲ; ಅದು ಮನುಷ್ಯನ ಅಸ್ತಿತ್ವದ ವಿಸ್ತರಣೆಯ ಸಂಕೇತವೂ ಹೌದು. ಇಡೀ ಪ್ರಪಂಚವನ್ನು ಒಂದು ಮಹತ್ತರವಾದ ಗ್ರಂಥವೆಂದು ಭಾವಿಸುವುವಾದರೆ, ಪ್ರೇಕ್ಷಣೀಯ ಸ್ಥಳಗಳು ಆ ಗ್ರಂಥದ ಒಂದೊಂದು ಅಮೂಲ್ಯವಾದ ಅಧ್ಯಾಯಗಳು ಎನ್ನಬಹುದು. ನಾಗರಿಕತೆಯ ಆರಂಭದಿಂದ ಇಂದಿನ ಆಧುನಿಕ ಯುಗದವರೆಗೆ, ಮನುಷ್ಯ ಹೊಸತನ್ನು ಹುಡುಕುತ್ತಾ, ಪ್ರಕೃತಿಯ ಸೊಬಗನ್ನು ಆರಾಧಿಸುತ್ತಾ ಮತ್ತು ಪೂರ್ವಜರು ಬಿಟ್ಟು ಹೋದ ಸ್ಮಾರಕಗಳ ಮೌನ ಸಂಭಾಷಣೆಯನ್ನು ಆಲಿಸುತ್ತಾ ಸಾಗಿದ್ದಾನೆ. ​ಪ್ರವಾಸವೆಂಬುದು ಹೊಸ ಚೇತನವನ್ನು ತುಂಬುವ ಪಯಣವಾಗಿದೆ. ​ಪ್ರವಾಸವೆಂದರೆ ಕೇವಲ ಒಂದು ಭೌಗೋಳಿಕ ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಚಲಿಸುವುದಲ್ಲ. ಅದು ನಮ್ಮೊಳಗಿನ ಸಂಕುಚಿತ ಭಾವನೆಗಳನ್ನು ಕಿತ್ತೆಸೆದು, ವಿಶಾಲವಾದ ವಿಶ್ವದೊಂದಿಗೆ ಮೇಳೈಸುವ ಪ್ರಕ್ರಿಯೆಯಾಗಿದೆ. ಒಂದು ಕಲ್ಲಿನ ಕೆತ್ತನೆಯಲ್ಲಿ ಅಡಗಿರುವ ಶಿಲ್ಪಿಯ ಶ್ರಮ, ಗೋಪುರದ ಭವ್ಯತೆ ಅಥವಾ ಪ್ರಕೃತಿಯ ಮಡಿಲಲ್ಲಿ ಹರಿಯುವ ಜಲಪಾತದ ನಿನಾದ ಇವೆಲ್ಲವೂ ನಮಗೆ ಬದುಕಿನ ಅರ್ಥವನ್ನು ಹೊಸದಾಗಿ ಕಲಿಸಿಕೊಡುತ್ತವೆ. ನನ್ನ ಹಿತೈಷಿ  ಸ್ನೇಹಿತರಾದ ಗೊರೂರು ಅನಂತರಾಜು ಅವರು ಹೆಸರೇ ಹೇಳುವಂತೆ ಗೊರೂರಿನವರು. ಇವರ ಬರಹದ ಹವ್ಯಾಸ ನಿಲ್ಲದ ಪಯಣವಾಗಿದೆ. ತನಗೆ ಗೊತ್ತಿರುವ ವಿಷಯದೊಂದಿಗೆ ಮತ್ತಷ್ಟು ಅಧ್ಯಯನ, ವಿಷಯ ಸಂಗ್ರಹದ ಮೂಲಕ ಲೇಖನಗಳನ್ನು ಪ್ರಕಟಿಸುತ್ತಿರುವ ಇವರು ಅವೆಲ್ಲವನ್ನು ಒಟ್ಟಾಗಿಸಿ ಓದುಗರಿಗೆ ಒಂದೆಡೆ ಸಿಗುವಂತೆ ಮಾಡಿರುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದುದು. ಗೊರೂರು ಅನಂತರಾಜುರವರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಸುಮ್ಮನಾಗಲಿಲ್ಲ : ಬದಲಾಗಿ ಆ ಸ್ಥಳದ ಕುರಿತು ಮಾಹಿತಿ ಸಂಗ್ರಹಿಸಿ ಓದುಗ ಬಳಗಕ್ಕೆ ಉಣಬಡಿಸಿದ್ದಾರೆ. ಎಡತೊರೆ ಎನಿಸಿದ ಕಾವೇರಿ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಅರ್ಕೇಶ್ವರ ದೇವಾಲಯ ಕುರಿತ ಮಾಹಿತಿ ನೀಡಿದ್ದಾರೆ. ಮೂಗೂರಿನ ತ್ರಿಪುರ ಸುಂದರಿ ದೇವಾಲಯದ ಕುರಿತ ಮಾಹಿತಿ ವಿಚಾರ ಪೂರ್ಣವಾಗಿದೆ. ತಲಕಾಡಿನಲ್ಲಿ ಪಂಚಲಿಂಗ ದರ್ಶನದ ಬಗೆಗೆ ನೀಡಿರುವ ಮಾಹಿತಿ, ಅಲಮೇಲಮ್ಮನ ವಿಚಾರ, ಕಾವೇರಿ ತಟದಲ್ಲಿನ ಮರಳರಾಶಿ, ಗಂಗ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿರುವರು. ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆಸಿರುವ ರಂಗನಾಥ ಸ್ವಾಮಿಯ ದೇವಾಲಯದ ಕುರಿತು ನೀಡಿರುವ ಮಾಹಿತಿ ಓದುಗರಿಗೆ ಅತ್ಯುಪಯುಕ್ತವಾಗಿದೆ. ಬೆಲಗೂರಿನ ಹಾಲು ರಾಮೇಶ್ವರ ದೇವಾಲಯದ ಐತಿಹ್ಯವನ್ನು ತಿಳಿಯುುತ್ತಾ ಓದು ಮುಂದುವರಿದಾಗ ಅನಂತರಾಜುರವರ ಹುಟ್ಟೂರಾದ ಗೊರೂರಿನ ತ್ರಿಕೂಟಲಿಂಗೇಶ್ವರ ದೇವಾಲಯ ಮಾಹಿತಿ ದೊರಕುತ್ತದೆ. ಪ್ರವಾಸಿ ತಾಣಗಳ ಕುರಿತು ತಿಳಿಯುವ ನಮ್ಮ ಓದುವ ಪಯಣ, ಗೊರೂರಿನ ರಥಚಕ್ರಗಳ ಕುರಿತಂತೆ ತಿಳಿಸುತ್ತದೆ. ಚುಂಚನಕಟ್ಟೆಯ ಕೋದಂಡರಾಮನ ದೇವಾಲಯದ ವಿಚಾರವನ್ನು ಲೇಖಕರಾದ ಗೊರೂರು ಅನಂತರಾಜು ರವರು ತುಂಬಾ ಚೆನ್ನಾಗಿ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಈ ಪ್ರವಾಸ ಕಥನ ಕೇವಲ ಕರ್ನಾಟಕದ ಸ್ಥಳಗಳನ್ನು ಮಾತ್ರವಲ್ಲದೇ ತಮಿಳುನಾಡಿನ ಕುಂಭಕೋಣಂನ ನವಗ್ರಹ ದೇವಾಲಯಗಳವರೆಗೂ ಕರೆದೊಯ್ಯುತ್ತದೆ. ​ಒಟ್ಟಿನಲ್ಲಿ ಈ ಕೃತಿಯ ಆಶಯವೇನೆಂದರೆ, ಈ ಕೃತಿಯು ಕೇವಲ ಪ್ರವಾಸಿ ತಾಣಗಳ ಪಟ್ಟಿಯಲ್ಲ; ಇದು ಇತಿಹಾಸ ಮತ್ತು ವರ್ತಮಾನದ ನಡುವಿನ ಸೇತುವೆ. ನಮ್ಮ ನಾಡಿನ ಅಪ್ರತಿಮ ವಾಸ್ತುಶಿಲ್ಪ, ಪ್ರಕೃತಿಯ ಅಚ್ಚರಿಗಳು ಮತ್ತು ಧಾರ್ಮಿಕ ಕೇಂದ್ರಗಳ ಹಿಂದಿರುವ ತಾತ್ವಿಕ ಹಿನ್ನೆಲೆಯನ್ನು ಓದುಗರಿಗೆ ಮನದಟ್ಟು ಮಾಡುವ ಪ್ರಯತ್ನ ಇಲ್ಲಿ ನಡೆದಿದೆ. ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ಕಥೆಯಿದೆ, ತನ್ನದೇ ಆದ ನೋವು-ನಲಿವುಗಳಿವೆ. ಆ ಸ್ಥಳಗಳ ಮೌನದಲ್ಲಿ ಅಡಗಿರುವ ಇತಿಹಾಸದ ಚೀತ್ಕಾರವನ್ನು ಅಥವಾ ಶಾಂತಿಯನ್ನು ಗುರುತಿಸುವ ದೃಷ್ಟಿಕೋನವನ್ನು ಈ ಬರಹಗಳು ನೀಡುತ್ತವೆ. ಪ್ರವಾಸೀ ತಾಣಗಳು ಸಂಸ್ಕೃತಿಯ ಪ್ರತಿಬಿಂಬವಾಗಿವೆ.​ಒಂದು ಪ್ರೇಕ್ಷಣೀಯ ಸ್ಥಳವು ಒಂದು ಜನಾಂಗದ ಸಂಸ್ಕೃತಿ ಮತ್ತು ಕಲಾಪ್ರೌಢಿಮೆಯ ಕೈಗನ್ನಡಿಯಾಗಿರುತ್ತದೆ. ಹಳೇಬೀಡು-ಬೇಲೂರಿನ ಶಿಲ್ಪಕಲೆಗಳು ಕೇವಲ ಕಲ್ಲುಗಳಲ್ಲ, ಅವು ಅಂದಿನ ಕಾಲದ ಜನರ ಸೌಂದರ್ಯ ಪ್ರಜ್ಞೆಯ ಸಾಕಾರ ರೂಪಗಳು. ಹಾಗೆಯೇ, ಪಶ್ಚಿಮ ಘಟ್ಟಗಳ ಹಸಿರು ಕೇವಲ ಅರಣ್ಯವಲ್ಲ, ಅದು ನಮ್ಮ ಜೀವಸಂಕುಲದ ಅಸ್ತಿತ್ವದ ಮೂಲ. ಇವುಗಳನ್ನು ರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹೊತ್ತಿಗೆಯು ಆ ಜವಾಬ್ದಾರಿಯನ್ನು ಪ್ರತಿಯೊಬ್ಬ ಓದುಗನಲ್ಲೂ ಜಾಗೃತಗೊಳಿಸುತ್ತದೆ ಎಂಬ ನಂಬಿಕೆ ನನಗಿದೆ.​ಪ್ರವಾಸವು ಮನುಷ್ಯನನ್ನು ವಿನಮ್ರನನ್ನಾಗಿ ಮಾಡುತ್ತದೆ. ಜಗತ್ತು ಎಷ್ಟು ವಿಶಾಲವಾಗಿದೆ ಮತ್ತು ಅದರ ಮುಂದೆ ತಾನು ಎಷ್ಟು ಸಣ್ಣವನು ಎಂಬ ಸತ್ಯದ ದರ್ಶನ ಪ್ರವಾಸಿಗನಿಗಾಗುತ್ತದೆ. ಈ ಕೃತಿಯ ಪುಟಗಳನ್ನು ತಿರುವಿದಾಗ ಓದುಗರು ಕೇವಲ ಮಾಹಿತಿಯನ್ನು ಪಡೆಯದೆ, ಆಯಾ ಸ್ಥಳಗಳ ಅನುಭೂತಿಯನ್ನು ಪಡೆಯಲಿ ಎಂಬುದು ನನ್ನ ಆಶಯ. ಆಗ ಮಾತ್ರ ಗೊರೂರು ಅನಂತರಾಜುರವರು ಹೊರತರುತ್ತಿರುವ ಈ ಕೃತಿಯ ಉದ್ದೇಶ ಸಾಧಿತವಾದಂತೆ. ಕಾಲದ ಪ್ರವಾಹದಲ್ಲಿ ಅಳಿಯದೆ ಉಳಿದಿರುವ ಈ ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳತ್ತ ಒಂದು ಅರ್ಥಪೂರ್ಣ ಪಯಣ ಬೆಳೆಸಲು ಈ ಕೃತಿ ನಿಮಗೆ ಪ್ರೇರಣೆಯಾಗಲಿ. ಕೆ. ಎನ್. ಚಿದಾನಂದಸಹ ಶಿಕ್ಷಕರುಜಿ. ಜಿ. ಜೆ. ಸಿ., ಪ್ರಧಾನ ಪ್ರೌಢಶಾಲಾ ವಿಭಾಗಆರ್. ಸಿ. ರಸ್ತೆ, ಹಾಸನ -573201

“ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಕೆ ಎನ್ ಚಿದಾನಂದ Read Post »

ಪುಸ್ತಕ ಸಂಗಾತಿ

“ಜಗತ್ತೇ ಒಂದು ರಂಗಮಂಟಪ ನಾವೆಲ್ಲ ನಟರು-ಶೇಕ್ಸಪಿಯರ್”ಪಾರ್ವತಿ ಎಸ್ ಬೂದೂರು

ಪುಸ್ತಕ ಸಂಗಾತಿ ಪಾರ್ವತಿ ಎಸ್ ಬೂದೂರು “ಜಗತ್ತೇ ಒಂದು ರಂಗಮಂಟಪ ನಾವೆಲ್ಲ ನಟರು-ಶೇಕ್ಸಪಿಯರ್” ಇಂಗ್ಲೆಂಡ್ ನ ಜಗತ್ಪ್ರಸಿದ್ಧ ನಾಟಕಕಾರ ಹಾಗು ಕವಿ ವಿಲಿಯಮ್ ಶೇಕ್ಸಪಿಯರವರು ಈ ದೇಹದಲಿ ಉಸಿರಿರುವ ತನಕ ಸವೆಯುವ ಗಳಿಗೆಗಳನೆ ನಾಟಕ ಎಂದಿರುವರು ಹಾಗಾದರೆ ಈ ನಾಟಕ (Drama) ಎನ್ನುವ ಪದದ ಆಳವನು ನೋಡಲೆತ್ನಿಸಿದಾಗ, ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಜೀವಂತಿಕೆಯಲ್ಲಿಯೆ ವಿಶಿಷ್ಟವಾದ ಮಾನವ ಸಂವೇದನೆಯ ಪ್ರತಿಬಿಂಬವಾಗಿದೆ.ಕವಿತೆ ಓದಿಸಿಕೊಂಡು ಹೋಗುತ್ತದೆ, ಕಾದಂಬರಿ ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ಆದರೆ ನಾಟಕವು ಕಣ್ಣೆದುರೇ ಘಟಿಸುವ ‘ವರ್ತಮಾನ’. ಸಂಸ್ಕೃತದ ಅಲಂಕಾರಿಕರು ನಾಟಕವನ್ನು ‘ದೃಶ್ಯಕಾವ್ಯ’ಎಂದಿರುವರು.ನಾಟಕವು ಕೇವಲ ಲೇಖಕನ ಕಲ್ಪನೆಯಲ್ಲ ಪ್ರೇಕ್ಷಕರ ಎದುರು ರಂಗಮಂಟಪದ ಮೇಲೆ ಸೃಷ್ಟಿಯಾಗುವ ಮಾಯಾ ಪ್ರಪಂಚ.ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ನಾಟಕಕ್ಕಿದೆ. ಮನುಷ್ಯನ ಅಂತರಂಗವನ್ನು ಶೋಧಿಸುವ, ಸಮಾಜದ ಮೌಲ್ಯಗಳನ್ನು ಪ್ರಶ್ನಿಸುವ ಮತ್ತು ಬದುಕುವ ಕಲೆಯನ್ನು ಕಲಿಸುವ ಒಂದು ಸತ್ವಯುತ ಕಲಾ ಪ್ರಕಾರವಾಗಿದೆ. ಅಕ್ಷರ ಮತ್ತು ಅಭಿನಯದ ಈ ಸಮಾಗಮವೇ ನಾಟಕವನ್ನು ಅಮರವಾಗಿಸಿದೆ.‘ನಾಟಕ’ ಎಂಬ ಪದವು ಸಂಸ್ಕೃತದ ‘ನಟ್’ (ನಟಿಸು ಅಥವಾ ಚಲಿಸು) ಎಂಬ ಧಾತುವಿನಿಂದ ಬಂದಿದೆ.ಭರತಮುನಿಯು ತನ್ನ ‘ನಾಟ್ಯಶಾಸ್ತ್ರ’ದಲ್ಲಿ ನಾಟಕವನ್ನು ‘ಪಂಚಮ ವೇದ’ ( ಋಗ್ವೇದದ ಪಠ್ಯ, ಸಾಮವೇದದ ಗಾಯನ, ಯಜುರ್ವೇದದ ಅಭಿನಯ, ಅಥರ್ವ ವೇದದ ರಸವನು ಪಡೆದುದೆ ನಾಟಕ ) ಎಂದು ಕರೆದಿದ್ದಾರೆ ಇದು ಸಮಾಜದ ಎಲ್ಲಾ ವರ್ಗದ ಜನರಿಗೂ ಜ್ಞಾನ ಮತ್ತು ಮನರಂಜನೆ ನೀಡುವ ಶಕ್ತಿಯನ್ನು ಹೊಂದಿದೆ.ನವರಸಗಳ ಮೂಲಕ ಪ್ರೇಕ್ಷಕನಲ್ಲಿ ಭಾವನಾತ್ಮಕ ಬದಲಾವಣೆ ತರುವುದು ಇದರ ಮುಖ್ಯ ಗುರಿ.ಪೌರಾಣಿಕ: ಐತಿಹಾಸಿಕ: ಸಾಮಾಜಿಕ: ದುರಂತ. ಸುಖಾಂತ, ಹಾಸ್ಯ ಇವೆಲ್ಲ ನಾಟಕದ ಪ್ರಾಕಾರಗಳು.ಮನುಷ್ಯನ ಸಂಘರ್ಷಗಳು ಸೋಲು-ಗೆಲುವುಗಳು ಮತ್ತು ಭಾವನೆಗಳನ್ನು ಅಭಿನಯದ ಮೂಲಕ ಮರುಸೃಷ್ಟಿಸುವ ಕಲೆ. “ಜಗತ್ತೇ ಒಂದು ರಂಗಮಂಟಪ, ನಾವೆಲ್ಲರೂ ನಟರು” ಎಂಬ ಶೇಕ್ಸ್‌ಪಿಯರ್‌ನ ಮಾತು ನಾಟಕದ ವ್ಯಾಪ್ತಿಯನ್ನು ಅದ್ಭುತವಾಗಿ ವರ್ಣಿಸುತ್ತದೆ. ನಮ್ಮ ಸಗರನಾಡಿನ ಸಾಹಿತಿ, ಸಂಶೋದಕ, ಶಿಕ್ಷಕರಾದ ಶ್ರೀಯುತ ಶ್ರೀ ನಿಂಗನಗೌಡ ದೇಸಾಯಿ ಅವರು ರಚಸಿದ ನಾಟಕ ಕೃತಿಯ ಅವಲೋಕನ. ಕಲಿಯಿರಿ ಕಲಿಸಿರಿ (ಸಾಮಾಜಿಕ ನಾಟಕ) ಲೇಖಕರು: ನಿಂಗನಗೌಡ ದೇಸಾಯಿ.ಪ್ರಥಮ ಮುದ್ರಣ: 2010.ಶಿಕ್ಷಣ ಎಂಬುದು ಕೇವಲ ಅಕ್ಷರ ಕಲಿಯುವುದಲ್ಲ, ಅದು ಬದುಕುವ ದಾರಿಯನ್ನು ತೋರಿಸುವ ಬೆಳಕು. ಈ ಆಶಯವನ್ನು ಹೊತ್ತು ಹೊರಬಂದಿರುವ ನಾಟಕವೇ ‘ಕಲಿಯಿರಿ ಕಲಿಸಿರಿ’. ಕಲ್ಬುರ್ಗಿಯ ಬಸವ ಪ್ರಕಾಶನದಿಂದ ಪ್ರಕಟಗೊಂಡ ಈ ಕೃತಿಗೆ ಖ್ಯಾತ ಮಕ್ಕಳ ಸಾಹಿತಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಂಗತ ಚಂದ್ರಕಾಂತ್ ಕರದಳ್ಳಿ ಅವರು ಮುನ್ನುಡಿ ಬರೆದಿದ್ದಾರೆ. ಸುರಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಾಂತಗೌಡ ಪಾಟೀಲ್ ಅವರ ಪ್ರೋತ್ಸಾಹ ಹಾಗೂ ಕಂಚ್ಯಾಣಿ ಶರಣಪ್ಪ ಅವರ ಬೆನ್ನುಡಿಯೊಂದಿಗೆ ಈ ನಾಟಕವು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುತ್ತದೆ.ಇಂದಿನ ನಗರೀಕರಣದ ಅಬ್ಬರದಲ್ಲಿ ಯುವಜನತೆ ಹಳ್ಳಿಯನ್ನು ಮರೆತು ನಗರಗಳತ್ತ ಓಡುತ್ತಿದ್ದಾರೆ. “ಎಲ್ಲವನ್ನೂ ಸರ್ಕಾರವೇ ಮಾಡಲಿ” ಎಂಬ ಅಸಹಾಯಕ ಮನೋಭಾವದ ನಡುವೆ, ಈ ನಾಟಕದ ನಾಯಕ ರವಿ ಒಬ್ಬ ಆದರ್ಶ ಯುವಕನಾಗಿ ಕಾಣಿಸಿಕೊಳ್ಳುತ್ತಾನೆ. ಎಂ.ಎಸ್ಸಿ ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ, ತನ್ನ ಹಳ್ಳಿಯ ಅಭಿವೃದ್ಧಿಯ ಬಗ್ಗೆ ಅವನಿಗೆ ಅಪಾರ ಕಾಳಜಿಯಿಂದ ಹಳ್ಳಿಗೆ ಬರುವನು.ಧರ್ಮಪ್ಪನವರ ಹಟ ಮತ್ತು ಕಹಿ ನೆನಪುಗಳುಗ್ರಾಮದ ಶ್ರೀಮಂತ ಹಿರಿಯರಾದ ಧರ್ಮಪ್ಪ ಅನಕ್ಷರಸ್ಥರಾದರೂ ತನ್ನ ಮಕ್ಕಳನ್ನು ಓದಿಸಿದವರು. ಆದರೆ ವಿಧಿಯಾಟ ಬೇರೆಯೇ ಇತ್ತು:ನೌಕರಿ ಹಿಡಿದ ಮಗ ಮತ್ತು ಸೊಸೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದುತ್ತಾರೆ.ಎಂ.ಎ ವರೆಗೆ ಓದಿದ ಮಗಳು ರಾಣಿ ಭಯದಿಂದ ಮನೆಯಲಿ ಪ್ರೇಮ ವಿಷಯ ತಿಳಿಸದೆ ಪ್ರೀತಿಸಿದವನ ಜೊತೆ ಹೋಗುತ್ತಾಳೆ. ಅಲ್ಲದೆ ಪಕ್ಕದ ಗ್ರಾಮದ ಪರುತಗೌಡ ಸಾಲ ಮಾಡಿ ಮಗನಿಗೆ ಶಾಲೆ ಕಲಿಸಿದರು ಮಗ ದಂಡಪಿಂಡನಾಗಿ ಊರಮುಂದೆ ಕುಳಿತ ವ್ಯರ್ಥ ಸಮಯ ಸವೆಸುವದು ಕಂಡ ಈ ಎಲ್ಲ ಘಟನೆಗಳಿಂದ ನೊಂದ ಧರ್ಮಪ್ಪ, “ಶಿಕ್ಷಣವೇ ಎಲ್ಲಾ ಅನಾಹುತಗಳಿಗೆ ಕಾರಣ” ಎಂದು ನಂಬಿ ಬಿಡುತ್ತಾರೆ. ತನ್ನ ಮೊಮ್ಮಕ್ಕಳಾದ ಶಂಕರನನ್ನು ದನಕಾಯಲು ಮತ್ತು ರಾಧಾಳನ್ನು ಅಡುಗೆ ಮಾಡಲು ಹಚ್ಚುತ್ತಾರೆ. ಶಾಲೆಗೆ ಕಳಿಸದ ಮೊಮ್ಮಗಳಿಗೆ ಓದಿದ ನೌಕರಿದಾರ ವರನನ್ನು ತಂದು ಮದುವೆ ಮಾಡುವ ಆಸೆ ಪಡುತ್ತಾರೆ ಆದರೆ ಅವಳ ಅನಕ್ಷರತೆ ಅದಕ್ಕೆ ಅಡ್ಡಿಯಾಗುತ್ತದೆ.ರವಿಯ ಜ್ಞಾನ ಮತ್ತು ತಾರ್ಕಿಕ ಉತ್ತರಗಳುರಜೆಯ ಮೇಲೆ ಊರಿಗೆ ಬಂದ ಅದೆ ಗ್ರಾಮದ ಶಿಕ್ಷಿತ ಯುವಕ ರವಿ, ಧರ್ಮಪ್ಪನವರ ಭೇಟಿಗೆ ಬಂದಾಗ ಗೌಡರ ಈ ಮೌಡ್ಯಯುತ ನಿರ್ಧಾರವನ್ನು ಕಂಡು ಪ್ರತಿಭಟಿಸುತ್ತಾನೆ. ಆಗ ಅವರ ನಡುವೆ ನಡೆಯುವ ಸಂಭಾಷಣೆ ಮಾರ್ಮಿಕವಾಗಿದೆ. “ಶಾಲೆ ಕಲಿತರೆ ಹೆಣ್ಣುಮಕ್ಕಳು ದಾರಿ ತಪ್ಪುತ್ತಾರೆ” ಎಂಬ ಧರ್ಮಪ್ಪನವರ ಮಾತಿಗೆ ರವಿ ಕೇಳುವ ಪ್ರಶ್ನೆಗಳು ಕಣ್ಣು ತೆರಿಸುವಂತಿವೆ:

“ಜಗತ್ತೇ ಒಂದು ರಂಗಮಂಟಪ ನಾವೆಲ್ಲ ನಟರು-ಶೇಕ್ಸಪಿಯರ್”ಪಾರ್ವತಿ ಎಸ್ ಬೂದೂರು Read Post »

ಪುಸ್ತಕ ಸಂಗಾತಿ

ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ

ಪುಸ್ತಕ ಸಂಗಾತಿ ಅಂಬಿಕಾ ಅವಟಿ ಚಡಚಣ ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ “ಅಂತರಂಗದ ಪ್ರಣತಿ” ಅವಲೋಕನ ಅಂತರಂಗದ ಪ್ರಣತಿ… ಅಲ್ಪಾಕ್ಷರಗಳಲ್ಲಿ ಅನಂತದರ್ಶನಕನ್ನಡ ಸಾಹಿತ್ಯ ಲೋಕಕ್ಕೆ ‘ತನಗ’  ಎಂಬ ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನು ಪರಿಚಯಿಸಿ, ಅದರಲ್ಲಿ ದೇಸೀ ಸೊಬಗನ್ನು ತುಂಬಿದವರು ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ (ಕನ್ನಡದ ಕಂದ). ಈ ಕೃತಿಯನ್ನು ಲೇಖಕರು ಅತ್ಯಂತ ಪ್ರೀತಿ ಮತ್ತು ಸ್ನೇಹಪೂರ್ವಕವಾಗಿ ನನಗೆ ಉಡುಗೊರೆಯಾಗಿ ಕಳಿಸಿಕೊಟ್ಟಿದ್ದು, ಇದನ್ನು ಓದಿದಾಗ ಮನಸ್ಸಿಗೆ ಅಪಾರ ಸಂತೋಷವಾಯಿತು. ಅವರ ‘ಅಂತರಂಗದ ಪ್ರಣತಿ’ ಸಂಕಲನವು ಕೇವಲ ನಾಲ್ಕು ಸಾಲುಗಳಲ್ಲಿ ಬದುಕಿನ ಮಹೋನ್ನತ ಸತ್ಯಗಳನ್ನು ಹಿಡಿದಿಡುವ ಅದ್ಭುತ ಪ್ರಯತ್ನವಾಗಿದೆ. “ಕಡಿಮೆ ಪದಗಳಲ್ಲಿ ಹೆಚ್ಚಿನ ಅರ್ಥ”  ಇದು ಆಲಮೇಲರ ಕಾವ್ಯದ ಮಂತ್ರ. ಸಾಗರದ ಅಲೆಗಳು ಮೌನವಾಗಿ ತೇರನ್ನು ಎಳೆಯುವಂತೆ, ಇವರ ತನಗಗಳು ಓದುಗರ ಮನಸ್ಸನ್ನು ಮೌನವಾಗಿ ಆವರಿಸಿಕೊಳ್ಳುತ್ತವೆ. ಇಲ್ಲಿ ಶಬ್ದಗಳ ಆರ್ಭಟವಿಲ್ಲ, ಬದಲಾಗಿ ಅರ್ಥದ ಗಾಂಭೀರ್ಯವಿದೆ. ಮುಂಜಾನೆಯ ಮಂಜಿನ ಚೆಲ್ಲಾಟದಿಂದ ಹಿಡಿದು ಋತುಮಾನಗಳ ಬದಲಾವಣೆಯವರೆಗೆ ಪ್ರಕೃತಿಯ ಪ್ರತಿ ಚಲನೆಯನ್ನು ಇವರು ಕಾವ್ಯವಾಗಿಸಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಬಣ್ಣಿಸುತ್ತಲೇ, ಬದುಕಿನ **”ಹೊಸತನದ ಹಂದರ”**ವನ್ನು ಕವಿ ಇಲ್ಲಿ ಅನಾವರಣಗೊಳಿಸುತ್ತಾರೆ. ಜಗತ್ತು ಎಂಬ ಮಾಯಾಜಾಲದಲ್ಲಿ ಮನುಷ್ಯ ಅನುಭವಿಸುವ ಒದ್ದಾಟ, ದುಶ್ಚಟಗಳು, ಮೋಸ ಮತ್ತು ಅಸತ್ಯಗಳ ಕುರಿತು ಈ ತನಗಗಳು ಎಚ್ಚರಿಸುತ್ತವೆ.   ಗುರುವಿನ ಮಹತ್ವ ಮತ್ತು ಜ್ಞಾನದ ಅಗತ್ಯವನ್ನು ಶಕ್ತವಾಗಿ ಪ್ರತಿಪಾದಿಸಲಾಗಿದೆ.  ಜನನ ಮರಣಗಳ ನಡುವಿನ ಹೋರಾಟ, ನಂಬಿಕೆ ಮತ್ತು ವಿಶ್ವಾಸಗಳ ಮಹತ್ವವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಸೂರ್ಯ, ಚಂದ್ರ ಹಾಗೂ ಹೆಣ್ಣಿನ ಸೌಂದರ್ಯವನ್ನು ಕೇವಲ ನಾಲ್ಕು ಸಾಲುಗಳಲ್ಲಿ ಹಿಡಿದಿಡುವುದು ಒಂದು ಸವಾಲೇ ಸರಿ. ಆದರೆ ಆಲಮೇಲರು ಪ್ರೀತಿಯ ಉತ್ತುಂಗವನ್ನು ಮತ್ತು ಪ್ರಕೃತಿಯ ಚೆಲುವನ್ನು ಸೋಜಿಗವೆನಿಸುವಂತೆ ಅಲ್ಪ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಡಾ. ಮಲ್ಲಿಕಾರ್ಜುನ ಸರ್ ಅವರಿಗೆ ಒಂದೆರಡು ಚೆನ್ನುಡಿಗಳು. ಅಕ್ಷರಗಳ ಹಣತೆಯಲ್ಲಿ ಜ್ಞಾನದ ಎಣ್ಣೆ ಹೊಯ್ದು, ಸ್ನೇಹದ ಬತ್ತಿಯ ಮೂಲಕ ‘ಅಂತರಂಗದ ಪ್ರಣತಿ’ಯನ್ನು ಬೆಳಗಿದ್ದೀರಿ ಸರ್. ನಿಮ್ಮ ಈ ಕೃತಿ ಕೇವಲ ಕಾವ್ಯವಲ್ಲ, ಅದು ಬದುಕಿನ ದಾರಿದೀಪ. ತನಗ ಸಾಹಿತ್ಯದ ಮೂಲಕ ಕನ್ನಡದ ಕಣಜಕ್ಕೆ ಹೊಸ ಮೆರುಗು ನೀಡಿದ ನಿಮ್ಮ ಲೇಖನಿ ಹೀಗೆಯೇ ನಿರಂತರವಾಗಿ ಸಾಗಲಿ. ಒಟ್ಟಾರೆಯಾಗಿ ಹೇಳಬೇಕು ಅಂದರೆ‘ಅಂತರಂಗದ ಪ್ರಣತಿ’ ಕೃತಿಯು ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ವಾಸ್ತವಗಳನ್ನು ಕನ್ನಡಿಯಂತೆ ಪ್ರತಿಫಲಿಸುತ್ತದೆ. ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನೇ ಬಳಸಿ ಕನ್ನಡ ಕಾವ್ಯದ ಕಣಜವನ್ನು ಶ್ರೀಮಂತಗೊಳಿಸಿರುವ ಡಾ. ಮಲ್ಲಿಕಾರ್ಜುನ ಆಲಮೇಲರ ಪ್ರಯತ್ನ ಶ್ಲಾಘನೀಯ. ಇದು ಅಂತರಂಗವನ್ನು ಬೆಳಗುವ ನಿಜವಾದ ಪ್ರಣತಿ… ಅಂಬಿಕಾ ಅವಟಿ ಚಡಚಣ.

ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ Read Post »

You cannot copy content of this page

Scroll to Top