ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


( ಲಕ್ಷ್ಮಣ ಶರೆಗಾರ ಸರ್ ಅವರ ಮಿಸ್ರಾ ತೆಗೆದುಕೊಂಡು ಬರೆದದ್ದು.
ಒಮ್ಮೆ ಹಿಂತಿರುಗಿ ನೋಡಿದ್ದರೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತಿತ್ತೇನೋ..)
ಒಮ್ಮೆ ಹಿಂದಿರುಗಿ ನೋಡಿದ್ದರೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತಿತ್ತೇನೋ
ಮರಣಿಸಿದ ನಿನ್ನ ಆ ಸ್ಮೃತಿಗೆ ಮರುಜನ್ಮ ಸಿಗುತ್ತಿತ್ತೇನೋ
ಒಂದೇ ಕ್ಷಣ ನಿಂತು, ನನ್ನ ಬಿಂಬವ ಕಣ್ತುಂಬಿಕೊಳ್ಳಬೇಕಿತ್ತು
ಆರ್ದ್ರಗೊಂಡ ಮನವು ಮತ್ತೆ ಒಲವಿನೆಡೆಗೆ ವಾಲುತ್ತಿತ್ತೇನೋ
ಚಂದ್ರ ತಾರೆಗಳೂ ಸೋತಿದ್ದವು ನಮ್ಮಿಬ್ಬರ ಬಾಂಧವ್ಯಕೆ
ನೀ ತಲೆ ಎತ್ತಿದ್ದರೆ ಆ ಬಾನು ಬಾಗಿ ಸಾಕ್ಷಿ ಹೇಳುತ್ತಿತ್ತೇನೋ
ಬರಬರನೇ ಹಾಗೆಯೇ ನಡೆದು ಹೋದೆಯಲ್ಲ ನಲ್ಲನೇ
ನಿಂತಿದ್ದರೆ ನನ್ನೂರಿನ ತಂಗಾಳಿ ನಿನ್ನೆದೆಗೆ ಸೋಕುತ್ತಿತ್ತೇನೋ
ಕೆಲ ಮೈಲುಗಳಾದರೂ ವಾಣಿಯ ಕೈ ಹಿಡಿದು ಪಯಣಿಸಿದ್ದೆ
ನಿನ್ನದೇ ಬೆರಳ ನಿಟ್ಟಿಸಿದ್ದರೆ ,ನಿನಗದರ ತವಕ ಕಾಣುತ್ತಿತ್ತೇನೋ
ವಾಣಿ ಯಡಹಳ್ಳಿಮಠ



