ಗೀತಾ ನಾಗಭೂಷಣರವರ ಕಾದಂಬರಿ ‘ಬದುಕು’ ಒಂದು ವಿಹಂಗಮ ನೋಟ-ಲಲಿತಾ ಪ್ರಭು ಅಂಗಡಿ ಮುಂಬಯಿ ಅವರಿಂದ

ಲೋಹಿಯಾ ಪ್ರಕಾಶನದ ಈ ಕಾದಂಬರಿಯನ್ನು , ಗೀತಾ ನಾಗಭೂಷಣ ಅವರು ಅಸಂಖ್ಯಾತ ಝೋಪಡಪಟ್ಟಿಯ ಶೂದ್ರ,ದಲಿತ ಹೆಣ್ಣುಮಕ್ಕಳಿಗೆ ಅರ್ಪಿಸಿ, ಘನತೆಯನ್ನು ಮೆರೆದಿದ್ದಾರೆ.ಹೈದರಾಬಾದ್ ಕರ್ನಾಟಕದ ಕಲಬುರ್ಗಿ ಇವರ ಮಾತ್ತೃಭೂಮಿ‌ಯಾಗಿರುವದರಿಂದ ಹಿಂದಿ, ಉರ್ದು ಶಬ್ದಗಳಿಂದ, ಮತ್ತು  ಮರಾಠವಾಡಕ್ಕೆ ಹತ್ತಿರವಾಗಿರುವದರಿಂದಅಲ್ಲಿಯ ಭಾಷ ಶೈಲಿಯಲ್ಲಿ , ಅಜ್ಜಿ ಗೆ ಆಯಿ ಅನ್ನೋದು, ಎರಡು ಎನ್ನುವುದಕ್ಕೆ ದೋನಸೆ ಅನ್ನೋದು, ಸೆಣ ಮಾಡೋದು ಅಂದ್ರೆ ನಮಸ್ಕಾರ ಮಾಡೋಕೆ, ಹೀಗೆ ಯಥೇಚ್ಛವಾಗಿ ಬಳಕೆಯಾಗುತ್ತವೆ,

ಕಾದಂಬರಿಯ ಮೊದಲು ಗುಡ್ಡದ ನೆತ್ತಿಯ ಮೇಲಿನ ಆಕಾಸದ ಮಾರಿಯೆಲ್ಲ ಜಾಜ ಒರೆಸಿದಂಗ ಕೆಂಪಗೆ ಲಾಲ್ ಆಗಿತ್ತಂತ ಹೇಳುವ ಲೇಖಕಿ ಪಾದಕ್ಕಂಟಿಕೊಂಡಿರುವ ಶಿವಳ್ಳಿಯ ಮನೆ ಗುಡಿಸಲುಗಳು,ಹಕ್ಕಿಪಕ್ಕಿಗಳ ಚೀಂ,ಪಿ,ಚೀಂ,ಪಿ ಮಾಡುವ , ವರ್ಣನೆ, ಮತ್ತು ಹೊಳೆ ದಂಡೆ ದಾಟಿ  ಸೇಂದಿ ಬನದ ಕಡೆಗೆ ಹೊಂಟಿದ್ದ ಮಲ್ಲಪ್ಪ ಜಮಾದಾರ ಮತ್ತು ಸಾಬಯ್ಯನವರ ಸಂಭಾಷಣೆ ಯೊಂದಿಗೆ ಸುರುವಾಗುವ ಮಾತುಗಳಲ್ಲಿ,ಈ ಜಿಂದಗಾನಿ ಅಂಬಾದೇ ಒಂದು ಯಾವ್ಯಾರ,ಯಾಪಾರ ಇದ್ದಂಗ,ಒಂದು ಕೊಟ್ಟು ಇನ್ನೊಂದು ಪಡಕ್ಕೊಳ್ಳಾದು,,ಅಂದರೇ ಸಂಬಂಧಗೋಳು ಛಲೋ ಇರ್ತಾವ,ಅನ್ನುವ ಮಲ್ಲಪ್ಪನ ಮಾತು,
ಹಳ್ಳಿ ಜೀವನದ ಯಥಾ ಚಿತ್ರಣ, ಕೆಳವರ್ಗದವರ,ದಲಿತರ ಬಡವರ, ನಿರ್ಗತಿಕರ ಧಾರುಣ ಚಿತ್ರ,
ಸಂಪ್ರದಾಯ, ಆಚರಣೆ ರೀತಿ ನೀತಿಗಳು, ಮೂಢನಂಬಿಕೆಯ ಹೇಳುವ, ವೈಚಾರಿಕ ಪ್ರಜ್ಞೆ ಪ್ರಸ್ತುತಪಡಿಸುವ ಕಾದಂಬರಿ ಓದುಗರನ್ನು ಬಿಡದೆ ಓದಿಸಿಕೊಂಡು ಹೋಗುತ್ತದೆ,

ಸನ್ನಿವೇಶಗಳನ್ನು ಕಣ್ಣಮುಂದೆ ಕಟ್ಟುವಂತ ಬರಹದ ವಿಶೇಷತೆ,ಅದುಪ್ರೇಮವಾಗಿರಬಹುದು,ವಿರಹವಾಗಿರಬಹುದು,ಹಾದರ ವಾಗಿರಬಹುದು, ಶೋಷಣೆ ಆಗಿರಬಹುದು,ಕಳವು ಆಗಿರಬಹುದು, ಮಹಿಳೆಗೆ ಆಗುವ ಅತ್ಯಾಚಾರ ಆಗಿರಲಿ, ಹೆಣ್ಣನ್ನು ಒಡೆದಾಳುವ ದೌರ್ಜನ್ಯ ಆಗಿರಲಿ, ಹೆಣ್ಣು ನೋವು ತಿನ್ನೋ ಹೆರಿಗೆ ಸಮಯದಲ್ಲಿ,ಅವಳಿಗಾಗುವ ಬೇನೆಗಳ ಸೂಕ್ತ ಸಲಹೆಗಳನ್ನು ಸಹ ತುಂಬಾ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ,

ಚುಂಚುರು ಮಾಪರ ತಾಯಿಗೆ ಬಿಡುವ  (ಹೆಣ್ಣನ್ನು)ಹರಕೆ ಜೋಗಣಿ ಪದ್ಧತಿಯ ವಿರುದ್ಧ ಆಕ್ರೋಶ ವಿದ್ಯೆ,ಹರಕೆ ಬಿಟ್ಟ ನೀಲವ್ವನ ಆತ್ಮಹತ್ಯೆ ಅಸಹಾಯಕತೆಯ ಸಾವು, ಒಂದೊಂದು ಪಾತ್ರಗಳು ವೈಚಾರಿಕತೆಯ ನೆಲೆಗಟ್ಟಿನಲ್ಲಿ ನಿಂತು ಕಾಣಿಸುತ್ತವೆ,ನಡಕನಡಕ ಹಾಸ್ಯದ ಚಟಾಕಿಗಳು, ಕಾಶವ್ಯನ ನೋಡಿ ತಿಪ್ಯಾ ಹಾಡುವ ಸಿಂಗಾರದ ಜಾನಪದ ಶೈಲಿಯ ಹಾಡು,ಅಜ್ಜಿಯ ಬಾಯಿಂದ ಬರುವ ,ಬೇಬಿ ಬೇಬಿ ಸಣ್ಣಾಕಿ, ಪೆಪ್ಪರ್ ಮಿಂಟ್ ತಿನ್ನಾಕಿ ಗಂಡನ್ನ ಕಟ್ಟಿಕೊಂಡು ಓಡಾಕಿ,ಇದರೊಟ್ಟಿಗೆ ಸಾಮಾಜಿಕ ಕಳಕಳಿಯು,ಮೇಲು ಕೀಳು, ಜಾತಿ ವ್ಯವಸ್ಥೆಯ ಬಗ್ಗೆ ಅದರಲ್ಲೂ ಮಹಿಳೆ ಅನುಭವಿಸುವ ದೈಹಿಕವಾಗಿ ಮಾನಸಿಕವಾಗಿ, ತಲ್ಲಣಗೊಳಿಸಿದ ಘಟನೆಗಳು ವಿಚಾರಸ್ಪದವಾಗಿವೆ,

ಬೆಳ್ಳಿಯ ಗರತಿ ಬಾಳು, ಮಲ್ಲಪ್ಪನ ಅವಮಾನ, ಸಾವು, ಕಲ್ಯಾಣಿಯ ಜೈಲು ವಾಸ,ಬದುಕಿನ ನೆಲೆಯಲ್ಲಿ ಏನೆಲ್ಲಾ, ಘಟನೆಗಳು, ಧಾರುಣ ಚಿತ್ರಗಳು,ಮಲ್ಲಪ್ಪನ ಮಗಳು ಕಾಶಮ್ಮ, ಸವಕಾರನ ಮಗ ಲಿಂಗರಾಜ  ಕಾದಂಬರಿಯ ಕೇಂದ್ರ ಬಿಂದು, ಬದುಕು ಹೇಗಿದೆ ನೋಡಿ ವಿಪರ್ಯಾಸ ಅಂದ್ರೆ,ಮದುವೆಯಾದ ಮಾರ್ತಾಂಡನನ್ನು ಬಿಟ್ಟು ಸವಕಾರನ ತೋಟದ ಮನೆಯಲ್ಲಿ ಬಂದರೂ, ಮಾರ್ತಾಂಡ ಬಂದು ಭಿಕ್ಷೆ ಬೇಡೋದು ನೀನ್ಬೇಕು ನನಗೆ ಕಾಶಿ ಅಂತ ಕೇಳೋದು,

ಈಕಡೆ ಮದುವೆಯಾದ ಲಿಂಗರಾಜು ಗೆ ಹೆಂಡ್ತಿನೂ ಬೇಕು, ಮನದನ್ನೆ ಕಾಶಿನೂ ಬೇಕು ಅಂವಗ ,
ಮದುವೆಯಾದ ನೀಲವ್ವ( ತನ್ನ ಗಂಡ) ತನ್ನ ವಸ್ತುವು ಇನ್ನೋರ್ವ ಹೆಣ್ಣು ಹಂಚಿಕೊಳ್ಳುವುದು ಇಷ್ಟಇಲ್ಲ,ಕಾಶಮ್ಮ ಮಾಡಿಕೊಂಡ ಗಂಡನಿಗೆ ಹೇಳುತ್ತಾಳೆ,ನೀ ನನ್ನ ಮರೆತು ಬೇರೆ ಮದುವೆ ಮಾಡಿಕೊಂಡು ಸುಖವಾಗಿರು ಅಂತ,ಬದುಕಿನ ನಾನಾ ಬಗೆಯ ಮುಖಗಳ ಅನಾವರಣದ ಮೂಲಕ ಕಾದಂಬರಿ ಅದ್ಭುತ ಪಾತ್ರಗಳ
 ಮೂಲಕ ಸಮಾಜದ ಎಲ್ಲಾ ವರ್ಗದ ಜನರ ಮುಖವಾಡಗಳನ್ನು ಕಾದಂಬರಿ ಒಳಗೊಂಡಿದೆ, ಅದಕ್ಕಾಗಿಯೇ, ಹೆಸರಾಂತ ವಿದ್ವಾಂಸರು, ವಿಮರ್ಶಕರು ಮೆಚ್ಚಿ,ತಮ್ಮ ಅನಿಸಿಕೆಗಳನ್ನು ಅನಾವರಣ ಗೊಳಿಸಿದ್ದು , ತುಂಬಾ ಸಂತೋಷ,
ಲೇಖಕಿ ಕಂಡುಂಡ ಅನುಭವಗಳ ,ಅವರೆ ಹೇಳಿರುವಂತೆ ನನ್ನ ಜಿಲ್ಲೆಯ ಕಪ್ಪು ಮಂದಿಯ ಖರೇ ಜವಾರಿ ಕತೆ,ಕಾಮ ಕುಡಿತ ಹಸಿವು ಇವು ಮೂರು ಈ ಮಂದಿಯ ಅವಿಭಾಜ್ಯ ಅಂಗಗಳು, ಬಹುಶಃ ಎಲ್ಲ ಮಂದಿಯ ಬಾಳಿನದೂ ಕೂಡ ಎಂದಿದ್ದಾರೆ, ಮತ್ತೆ ಮತ್ತೆ ಓದಲೇಬೇಕಾದ ಕಾದಂಬರಿ,ನೀವೇಲ್ರೂನು ಓದಿದ್ದೀರಿ ಅಂತ ಅನ್ಕೊಂಡಿರುವೆ,


Leave a Reply

Back To Top