ಪುಸ್ತಕ ಸಂಗಾತಿ

ಅಲೆಮಾರಿಯ ದಿನದ ಮಾತುಗಳು

ಅನುದಿನದ ಅನುಭಾದ ನುಡಿಗಳು
(ಗಂಗಾಧರ ಅವಟೇರ ಅವರ “ಅಲೆಮಾರಿಯ ದಿನದ ಮಾತುಗಳು”)

ಪ್ರೊ.ಗಂಗಾಧರ ಆವಟೇರ ಬಹುಕಾಲದ ಗೆಳೆಯ.ಬೊಗಸೆ ತುಂಬ ಪ್ರೀತಿ ತುಂಬಿಕೊಂಡೇ ಮಾತನಾಡುವಾತ. ಮನದಲ್ಲಿ, ಮಾತಲ್ಲಿ ಎರಡಿಲ್ಲದ ನೇರ ನುಡಿಯ ತುಂಬ ಹೋರಾಟದ ಬದುಕನ್ನು ಬದುಕುತ್ತ ಬಂದಾತ.ಅದಕ್ಕೆ ಹಿನ್ನೆಲೆಯಾಗಿಯೇ ಬದುಕಿದಾತ
ಸದ್ಯಕ್ಕೆ ಇತಿಹಾಸ ಪ್ರಸಿದ್ಧ ಕುಕನೂರ ತಾಲೂಕಿನ‌ ಮಹಾದೇವ ದೇವಾಲಯ ನೆಲೆಸಿರುವ ಇಟಗಿಯ ಶ್ರೀ ಮಹೇಶ್ವರ ಪಿ.ಯು.ಕಾಲೆಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮಹಾಲಿಂಗಪೂರದಲ್ಲಿ ಉಪನ್ಯಾಸಕನಾಗಿದ್ದಾಗಿನಿಂದಲೂ ಅವರ ಆತ್ಮೀಯ ಸ್ನೇಹದ ಸವಿ ನನಗೆ ದೊರಕಿದುದುಂಟು.ಅದನ್ನೆಲ್ಲ ಬರೆಯಲು ಇದು ಉಚಿತ ವೇದಿಕೆಯಲ್ಲ.ಸದ್ಯಕ್ಕೆ ‘ಅಲೆಮಾರಿಯ ದಿನದ ಮಾತುಗಳು ‘ಕೃತಿಯನ್ನು ನನ್ನ ಮುಂದಿಟ್ಟುಕೊಂಡು ಆ‌ ಕುರಿತು ನನ್ನ ಅನಿಸಿಕೆ ವ್ಯಕ್ತ ಮಾಡಲು ಹೊರಟಿದ್ದೇನೆ. ಗಂಗಾಧರ ಅವರ ಬಗ್ಗೆ ಬರೆಯುವಾಗ ಬಹುವಚನ ಬಳಸುವದು ಸ್ನೇಹಕ್ಕೆ ಮಾಡಿದ ಅಪಚಾರ ಎಂದು ಞಬಾವಿಸಿ ಏಕವಚನವನ್ನೆ ಬಳಸಿದ್ದೇನೆ.
‌ ಅಲೆಮಾರಿ ಎನ್ನುವ ಪದಕ್ಕು ಗಂಗಾಧರನಿಗೂ ಬಿಡದ ನಂಟು.ಅವನು ಮೂಲತಃ ಅಲೆಮಾರಿಯೇ. ಪ್ರಥಮತಃ ಕವಿಯಾದ ಅವನಲ್ಲೊಂದು ಕವಿ ಜೀವವಿದೆ.ಅದು ಬಡವರ ನೋವಿಗೆ ಮಿಡಿಯುವ,ಅನ್ಯಾಯ ಕಂಡಾಗ ಆಕ್ರೋಶಗೊಳ್ಳುವ ಹೃದಯದ ಮಿಡಿತವಿರುವ ಜೀವ .ಹೀಗಾಗಿ ಇಲ್ಲಿರುವ ದಿನದ ಮಾತುಗಳಲ್ಲಿ ವ್ಯಕ್ತಮಾಡುವ. ವಿಚಾರಗಳು ಗದ್ಯಗಂಧಿಯಾದರೂ ಪದ್ಯದ ಭಾವವನ್ಬು ಬಿಟ್ಟಿಲ್ಲ.
ಇಂದು ನಮ್ಮಯುವಜನಾಂಗ ಅತಿಯಾಗಿ ಓದುವ ಪುಸ್ತಕ ಯಾವಿದಾದರೂ ಅದು ಪೇಸ್ ಬುಕ್.ಅವರು ಎಲ್ಲಿ ಓದುತ್ತಾರೆಯೋಅಲ್ಲಿಯೆ ಅವರಿಗೆ ಒಳಿತಾಗುವಂಥದನ್ನು,ಉಪಯುಕ್ತವಾಗುವದನ್ನು ನೀಡಬೇಕು.ಮತ್ತೆ ದೀರ್ಘವಾದುದನ್ನು ಬರೆದರೆ ಓದಲು ಯಾರಿಗೆ ಪುರುಸೊತ್ತಿದೆ? ಓದುಗರ ನರನಾಡಿ ಗೊತ್ತಿರುವ ಲೇಖಕ ಇಂತಹುದನ್ನು ಪ್ರಯತ್ನ‌ಮಾಡುತ್ತಾನೆ. ಅವಟೇರ ಅದರಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.ದಿನಕ್ಕೊಂದರಂತೆ ತಮ್ಮವ್ಯಾಟ್ಸಪ್ ಮತ್ತು‌ಮುಖಪುಟದಲ್ಲಿ ಬರೆದು ಹಾಕಿದ ಬರಹಗಳನ್ನು ಸಂಗ್ರಹಿಸಿ ಇಲ್ಕಿ ನೀಡಿದ್ದಾರೆ.

ಇವು ಕವಿತೆಗಳೇ? ಗದ್ಯದ ತುಣುಕಗಳೇ?
ಚಿಂತನೆಗಳೇ? ಹಾಗೆ ನೋಡಿದರೆ ಎಲ್ಲವೂ ಹೌದು.ಆದ್ದರಿಂದ ಬೆನ್ನುಡಿ ಬರೆದ ಹಿರಿಯ ಕವಿಮಿತ್ರ ಡಾ.ಗುಂಡಣ್ಣ ಕಲಬುರ್ಗಿ ಗದ್ಯಗಂಧಿ ಇವುಗಳನ್ನು ಬರಹಗಳು ಎಂದಿದ್ದಾರೆ.ಕನ್ನಡದಲ್ಲಿ ಗಪದ್ಯ ಎಂಬ ಪ್ರಕಾರವೊಂದಿದೆ ಅಂತಹ ಪ್ರಕಾರಕ್ಕೆ ಸೇರಬಹುದಾದ ಲೇಖಗಳಿವು ಎನ್ನಬಹುದು.

ಆದರೆ ಇಲ್ಲೊಂದು ಅಪಾರ ಓದಿನ ಅನುಭವದ ಮೂಸೆಯಲ್ಲಿ ಹೃದ್ಯಗೊಂಡ ಮನಸ್ಸಿದೆ. ಕವಿತ್ವದ ಮೂಸೆಯಲ್ಲಿ ಹದಗೊಂಡ ದನಿಯಿದೆ.
ಕನ್ನಡದಲ್ಲಿ ಇಂತಹದೊಂದು ಸಂಕಲನ ಬಂದಿದೆಯೇ ? ಅಥವಾ ಇದೇ ಮೊದಲಿನದೆ ?ಪ್ರಾಜ್ಞರು ಹೇಳಬೇಕು.ನಾನು ಬಲ್ಲಂತೆ ಇದು ಪ್ರಥಮ ಪ್ರಯತ್ನವೇ ಇರಬೇಕು.

ಅಲೆಮಾರಿ ಮಾತ್ರ ಬದುಕಿನ ಆಳವಾದ ಅನುಭವ ಗಳಿಸಬಲ್ಲ.ನಮ್ಮ ಹಿಂದಿನ ಹಿರಿಯರು ದೇಶ ಸುತ್ತಬೇಕು,ಕೋಶ ಓದಬೇಕು ಎನ್ನುತ್ತಿದ್ದರು.ಗಂಗಾಧರ ಅವರು ಬರೀ ದೇಶ ಸುತ್ತಿಲ್ಲ ಅವರ ಬದುಕುನಿಡಸೂರಿನಿಂದ ಆರಂಭವಾಗಿಅಮೀನಗಡ ಹುನಗುಂದ,ಧಾರಚಾಡ,ಮೂಡಲಗಿ,ತೇರಸ
ದಾಳ,ರಬಕವಿ,ಮಹಾಲಿಂಗಪೂರ,ಕೆಸರಗೊಪ್ಪ,ಈಗ ಸದ್ಯಕ್ಕೆ ಇಟಗಿಯಲ್ಲಿ ನೆಲೆನಿಂತಿದೆ.ಬದುಕಿನ ಅನ್ನಕ್ಕಾಗಿ ಅವರು ಮಾಡಿದ ಸಾಹಸವೂ ಕೂಡ ಒಂದು ದೊಡ್ಡ ಪ್ರಬಂಧದ ವಸ್ತುವಾದೀತು.

ದಾರಿಯೆಂದರೆ ಬದುಕಿಗ ಸಂಬಂಧಿಸಿದ್ದು.ಅದು ಚಲನಶೀಲರಿಗೆ ಮಾತ್ರ ದಕ್ಕಿದ್ದು.

ಅಲೆದಾಡಬೇಕು
ನೆಲೆಯಿಲ್ಲದ ಅಲೆಮಾರಿಯಂತೆ

ಎನ್ನುವ ವಾಕ್ಯದಂತೆ ಆರಂಭವಾಗುವ ಈ ಅನುಭವೋಕ್ತಿಗಳು ಬದುಕಿನ ಸೂತ್ರಗಳನ್ನು ವಿವರಿಸುತ್ತವೆ.ಸೋಲುಗಳನ್ನು ಎದುರಿಸಿ ,ಎದುರಿಸಿ ಗಟ್ಟಿಗೊಂಡ ಮನಸ್ಸುಕೊನೆಗೆ ಈ ಸ್ಥಿತಿ ಮುಟ್ಟುತ್ತದೆ.

ಸೋಲು ಪ್ರತಿಯೊಬ್ಬರನ್ನು
ಕ್ಷಣ ಕಾಲ ಅಸ್ತಿತ್ವವನ್ನೂ ಅಲುಗಾಡಿಸುತ್ತದೆ ನಿಜ.
ಆದರೆ ಅದೇ ಅಂತಿಮವಲ್ಲ ಎಂಬ ತಿಳಿವಳಿಕೆ ಇರಬೇಕು

ಹೀಗೆ ಅನುಭವ ಹರಳುಗಟ್ಟಿದಾಗ ಮಾತ್ರ ಇಂತಹ ಸೂಕ್ತಿಗಳು ಬರಲು ಸಾಧ್ಯ.ಮಾಡಿದ ಉಪಕಾರವನ್ನು ಮರೆಯುವದು ಎಷ್ಟು ಕೃತಘ್ನತೆಯರೂಪ ಎನ್ನುವದನ್ನು ವಿವರಿಸಲು

ಮತ್ತೊಬ್ಬರು‌ ಮಾಡಿದ
ಉಪಕಾರವನ್ನು ಮರೆತವರು
ಹೆತ್ತ ತಂದೆ ತಾಯಿಗಳನ್ನು
ಮರೆತರೆ ಆಶ್ಚರ್ಯ ಪಡಬೇಕಾಗಿಲ್ಲ

ಇಂತಹ ಮಾತುಗಳು ಇಂದಿನ ಜನಾಂಗಕ್ಕೆಒಂದಿಷ್ಟಾದರೂ ಯೋಚನೆ ಮಾಡಲು ಹಚ್ಚುತ್ತವೆ.ಮನೆ, ಕುಟುಂಬ,ತಂದೆ, ತಾಯಿ ಇತ್ಯಾದಿ ಮೌಲ್ಯಗಳನ್ನು ಮರೆಯುತ್ತಿರುವ ಜನಕ್ಕೆ ಹಿತವಚನ‌ ನೀಡುತ್ತವೆ.

ನಮಗೆ ದ್ವೇಷ ಮಾಡಲು
ಬಹಳಷ್ಟು ದಿನ ಇಲ್ಲ
ಇರುವಷ್ಟು ದಿನ
ಎಲ್ಲರನ್ನು ಪ್ರೀತಿಸೋಣ

ಇಂಥ ಮಾತುಗಳು ಏಲ್ಲೊ ಓದಿದ ಮಾತು ಎನಿಸುತ್ತವೆ.ಆದರೂ ಒಂದು ಸಂದೇಶ ಅಲ್ಕಿ ಇದ್ದೇ ಇದೆ.ಉಪನ್ಯಾಸಕರಾಗಿ ಹತ್ತಾರು ವರುಷ ಕಳೆದಿರುವ ಗಂಗಾಧರ ಅಂಥವರಿಗೆ ಮಾತ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರ ನಡುವಿನ ಈ ಅಂತರ ಹೊಳೆಯಲು ಸಾಧ್ಯ

ವಿದ್ಯಾರ್ಥಿಗಳು
ಎಂದರೆ
ಸುಂದರವಾದ ಕನಸುಗಳ‌ಮೇಲೆ ಸವಾರಿ ಮಾಡುವ ಸರದಾರರು
ವಿದ್ಯಾರ್ಥಿನಿಯರು
ಎಂದರೆ
ವಾಸ್ತವವನ್ನು ಅರಗಿಸಿಕೊಂಡು ನೆಲದ ಮೇಲೆ
ಹೂವು ಭಾರವಾದ ಹೆಜ್ಜೆ ಹಾಕುವ ಶ್ರಮಜೀವಿಗಳು

ಕಾಲೆಜು ಹಂತದ ಹುಡುಗ ಹುಡುಗಿಯರ ಮನಸ್ಥಿತಿಯನ್ಬು ಅರಿತ ಆವಟೇರ‌ ಅವರು ಹುಡುಗರು ಹೇಗೆ ಕನಸುಗಳಲ್ಲಿ ಕರಗಿ ಹೋಗುತ್ತಾರೆ?ಹುಡುಗಿಯರು ಹೇಗೆ ವಾಸ್ತವ ಅರಿತು ಶ್ರಮ‌ಹಾಕಿ ಮುಂದೆ ಬರುತ್ತಾರೆ ಎನ್ನುವದನ್ನು ಸೂಕ್ಷ್ಮವಾಗಿ ಗುರುತಿಸುತ್ತಾರೆ.ಇಂದು ಕಾಲೇಜುಗಳ‌ ಫಲಿತಾಂಶವನ್ನು ನೋಡಿದಾಗ ಈ ಅನಭವೋಕ್ತಿ ನಿಜ ಎನಿಸುತ್ತದೆ.ಬಹಳ ಹಿಂದೆ ಕವಿ ಡುಂಡಿರಾಜ್

ಹುಡುಗಿಯರು ಮುಂದೆ ಮುಂದೆ
ಹುಡುಗರು ಅವರ ಹೊಂದೆ ಹಿಂದೆ

ಎಂಬ ಚುಟುಕು ಬರೆದಿದ್ದನ್ನು ನೆನಪಿಸಬಹುದು.ಎಲ್ಲ ಕಲೆಗಳಿಗಿಂತ ಜೀವನ ಎಂಬುದು ಪರಮ ಕಲೆ.ಅದನ್ನು ಹೇಳಿ ಕೊಡಲು ಮಾತ್ರ ಯಾವುದೆ ಶಾಲೆ‌ ಕಾಲೆಜು ಗಳಿಲ್ಲ. ಅದರಲ್ಲಿ ಯಶಸ್ವಿಯಾದವರಿಗೆ ಯಾವುದೆ ವಿಶ್ವ ವಿದ್ಯಾಲಯ ದ ಪ್ರಮಾಣ ಪತ್ರದ ಅಗತ್ಯವಲ್ಲ.

ಬದುಕುವ ಕಲೆ
ಕರಗತ ಮಾಡಿಕೊಂಡವರಿಗೆ
ಯಾವುದೆ ವಿಶ್ವ ವಿದ್ಯಾಲಯದ
ಅರ್ಹತೆಯ ಪ್ರಮಾಣ ಪತ್ರದ ಅಗತ್ಯವಿಲ್ಲ

ಬದುಕು ಸರಳ ರೇಖೆಯಲ್ಲ
ಅದರಲ್ಲಿಯೂ ಆಗಾಗ ವಕ್ರರೇಖೆಯ
ಪ್ರತಿಪಫಲನಗಳು ಉಂಟಾಗುತ್ತವೆ

ಇಂತಹ ಮಾತುಗಳು ಬದುಕಿನ ವ್ಯಾಖ್ಯಾನ‌ಮಾಡಲು ಹವನಿಸುತ್ತವೆ.ಯೋಗ ಎಂಬ‌ ಮಾತಿಗೆ ಅರ್ಥ ಹೇಳುತ್ತ

ಯೋಗ ವ್ಯಾಯಾಮವಲ್ಲ
ದೇಹ ಮತ್ತು ಮನಸ್ಸುಗಳ
ನಿಯಂತ್ರಣ ಮಾಡುವ ಸಾಧನ

ಎಂದು ವಿವರಿಸಿರುವದು ಒಂದು ರೀತಿಯಲ್ಲಿ ಯೋಗ ಚಿತ್ತವೃತ್ತಿ ನಿರೋಧ ಎಂಬ ಪರಂಪರೆಯ ಮಾತನ್ನು ನೆನಪಿಸುತ್ತದೆ.ಮಾತಿನ‌ ಬಗೆಗಿನ ಅವರ ಚಿಂತನೆ ಹೀಗಿದೆ.

ನಾವು ಆಡುವ ಮಾತು
ಉದಯಿಸುವ ಸೂರ್ಯನ ಕಿರಣಗಳಂತೆ
ಹೊಳೆಯುತ್ತಿರಲಿ,
ಆದರೆ
ಅವುಗಳು ಯಾರನ್ನು ಸುಡದಿರಲಿ

ಎನ್ನುವ ಚಿಂತನೆ ಮಾತು ಸುಡುವ ಬೆಂಕಿಯಾ ಗಬಾರದು, ಬೆಳಗುವ ಹಣತೆಯಾಗಬೇಕು ಎನ್ನುವ ದನ್ನು ನೆನಪಿಸುತ್ತದೆ.ಹೀಗೆ ಇಲ್ಲಿನ ಮಾತುಗಳು ಸಂಕ್ಷಿಪ್ತವಾಗಿದ್ದಂತೆ ಕಾವ್ಯಾತ್ಮಕವಾಗಿವೆ.ಆದರೆ ದೀರ್ಘವಾಗುತ್ತಾ ಹೋದಂತೆ ಜಾಳು ಜಾಳು ಎನಿಸುತ್ತವೆ .ಕವಿತೆಯೆ ಆಗಲಿ,ಒಂದು ಸೂಕ್ತಿಯೇ ಆಗಲಿ ಅದು ವಿವರಣೆಯಾಗುತ್ತಾ ನಡೆದಂತೆ ಅವುಗಳ ಅರ್ಥ ಸಾಂದ್ರತೆ ಕಡಿಮೆಯಾಗುತ್ತದೆ. ದೇವರು,ಧರ್ಮ ಇಂತಹ ಅನುಭಾವದ ಮಾತುಗಳೂ ಇವೆ.

ಪ್ರೊ.ಗಂಗಾಧರ ಅವಟೇರ ಅವರ ಸ್ನೇಹವಲಯ ದೊಡ್ಡದು.ಹೀಗಾಗಿ ಅರವತ್ತು ಪುಟಗಳ ಈ -ಅಲೆಮಾರಿಯ ದಿನದ ಮಾತುಗಳು -ಸಂಕಲನ ಕ್ಕೆ ೩೬ ಪುಟಗಳ ಬೇರೆಯವರ ಅಭಿಪ್ರಾಯ, ಮುನ್ನುಡಿ ಪ್ರಸ್ತಾವನೆಗಳೇ ಇವೆ.ಮೂಗುತಿ ಮುಂಭಾರ ಎನ್ನುವಂತೆ! ಇರಲಿ ಪ್ರೀತಿಯ ಭಾರ ತುಸು ಹೆಚ್ಚಾದರೂ ತಡೆಯಬಹಯದಲ್ಲವೇ.
ಮೊಬಾಯಲ ಮಾಧ್ಯಮದ ಮೂಲಕ ಜೀವನ ಸಂದೇಶ ಹಂಚಿದ ಗೆಳೆಯರನ್ನು ಅಭನಂದಿಸುತ್ತೇನೆ.ನನಗೆ ಕವಿ ಗಂಗಾಧರ ಆವಟೇರ ಇಷ್ಟ.ಅವರು ಇನ್ನಷ್ಟು ಕವಿತೆ ಬರೆಯಲಿ ಎಂದು ಹಾರೈಸುತ್ರೇನೆ.

*********

ಡಾ.ಯ.ಮಾಯಾಕೊಳ್ಳಿ

Leave a Reply

Back To Top