ಗುರು ಪೂರ್ಣಿಮಾ ವಿಶೇಷ ಸುಜಾತಾ ರವೀಶ್

ಗುರುವಿನುಪದೇಶದಲಿ ಮನದತಮ ಕಳೆಯುವುದು
ಹರಿಯುವುದು ಚೇತನದ ಸವಿಹೊನಲದು
ಪರಿಧಿಯನು ದಾಟುವುವು ಸುಜ್ಞಾನದ ಕಿರಣಗಳು
ತರುತಲಿವೆ ಹೊಸಬೆಳಕು ನರಹರಿಸುತೆ

ಚಿಂತನವು ಸರಿ ದಾರಿ ಹಿಡಿದು ಸಾಗುತಲಿರಲು
ಮಂಥನವು ಸತತವೂ ನಡೆಯುತಿರಲು
ನಿಂತ ನೀರಾಗದೆ ಹರಿದಿರಲು ಬಾಳಿದುವೆ ಸಂತತವು ಗುರುವಿರಲಿ ನರಹರಿಸುತೆ

ಅಕ್ಷರದ ತಿಳಿವದನು ಲಕ್ಷ್ಯದಲಿ ಕಲಿಸುತಲಿ
ಕಕ್ಷೆಯಲಿ ಕಾಪಿಡುತ ನೋಡಿದವರು
ಚಕ್ಷುವಿನ ಮಣಿಯಂತೆ ರಕ್ಷಿಸುವ ರೀತಿಯಲಿ
ಯಕ್ಷಿಣಿಯ ಮಾಡಿದರು ನರಹರಿಸುತೆ

ಅರಿವಿರದಬೋಧರನು ಗುರಿಯೆಡೆಗೆ ಕರೆದೊಯ್ದ
ಗುರುಗಳಿಗೆ ವಂದಿಸುವೆನಭಿಮಾನದಿ
ಅರಿವಿರದ ವೇಳೆಯಲಿ ಕೊರತೆಯನು ತೋರದೆಲೆ
ಪರಿವಿಡಿದಗೆ ವಂದನೆ ನರಹರಿಸುತೆ


2 thoughts on “ಗುರು ಪೂರ್ಣಿಮಾ ವಿಶೇಷ ಸುಜಾತಾ ರವೀಶ್

  1. ಸೊಗಸಾದ ಮುಕ್ತಕಗಳು. ಅರ್ಥಗರ್ಭಿತ ವೈಚಾರಿಕವಾದ ಸಾಲುಗಳು. ಬಹಳ ಪ್ರಿಯವಾಯಿತು

  2. ಬಹಳ ಚೆಂದದ ಮುಕ್ತಕಗಳು.ಅರ್ಥಪೂರ್ಣ ಸಕಾಲಿಕ ಕೂಡಾ

Leave a Reply

Back To Top