ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮರದ ಕೆಳಗೆ ಹೂವು ಉದುರಿ ಬಿದ್ದಿವೆ ಯಾಕೆಂದು ಕೇಳಬೇಡ
ಮತ್ತೆ‌ ಅಲ್ಲೆರಡು ಕಣ್ಣು ಬೆದರಿ ನೋಡಿವೆ ಯಾಕೆಂದು ಕೇಳಬೇಡ

ಕೆಲವು ಪ್ರಶ್ನೆಗಳಿಗೆ ಉತ್ತರ ಸರಳ ಮತ್ತೆ ಹಲವಕೆ ಉತ್ತರವೇ ಇಲ್ಲ
ಗುಬ್ಬಚ್ಚಿ ಗೂಡಲಿ ಮುದುರಿ ಕುಳಿತಿವೆ ಯಾಕೆಂದು ಕೇಳಬೇಡ

ಚುಕ್ಕಿ ಇರುವ ಬಾನು ರೆಕ್ಕೆ ಇರದ ಹಕ್ಕಿಗೆ ಬಲು ದೂರ ಗೆಳೆಯ
ಮಳೆ ಬರುವ ಹೊತ್ತು ಮೋಡ ಚದುರಿ ಹೋಗಿವೆ ಯಾಕೆಂದು ಕೇಳಬೇಡ

ಸೆರಗ ಬೀಸಿ ಲಾಲಿ ಹಾಡಿದೆ ತಂಗಾಳಿ ಒಳಗಿದೆ ಕುದಿವ ಬೆಂಕಿ
ಮಾತುಕತೆ ಕೃತಕ ನಗೆ ಮಾದರಿ ಆಗಿವೆ ಯಾಕೆಂದು ಕೇಳಬೇಡ

ಬಾಳ ಹೋರಾಟದಲಿ ಪ್ರತಿ ಸಲವೂ ಸೋಲು ಇರುವುದಿಲ್ಲ ತಿಳಿ
ಅರುಣಾ ನಕ್ಕರೆ ನೋವು ಹೆದರಿ ನಡೆದಿವೆ ಯಾಕೆಂದು ಕೇಳಬೇಡ


ಮನದ ತುಂಬ ನಿನ್ನ ನೆನಹು ಚೆದುರಿವೆ ಯಾಕೆಂದು ಕೇಳಬೇಡ
ನೀ ಇದ್ದು ಎದ್ದು ಹೋದುದ ನೆನಪಿಸಿವೆ ಯಾಕೆಂದು ಕೇಳಬೇಡ

ಊರ ತುಂಬ ಜಾತ್ರೆಯ ಸಂಭ್ರಮ ಗದ್ದಲದೊಳಗೂ ನೋವು
ನನ್ನೊಳಗೆ ನಾ ಮುದುರಿ ಕುಳಿತಿರುವೆ ಯಾಕೆಂದು ಕೇಳಬೇಡ

ಹೂವು ಇರದ ಬಳ್ಳಿ ಹಣ್ಣು ಇರದ ಮರ ಭೂಮಿಗೆ ಭಾರ ಗೆಳತಿ
ಮಳೆ ತರದ ಮೋಡ ಮದುರಿ ಕುಳಿತಿವೆ ಯಾಕೆಂದು‌ ಕೇಳಬೇಡ

ಹೊದ್ದ ವಸ್ತ್ರ ಗಾಳಿಗೆ ತೂರಿದರೆ ಅಂಬರಕೆ ಉರಿ ಹತ್ತೀತು ಜೋಕೆ
ಮತದ ಬೆಂಕಿಯಲಿ ಮನಗಳು ಬೆಂದಿವೆ ಯಾಕೆಂದು ಕೇಳಬೇಡ

ನೂರು ಸಲ ಹೋರಾಡು ಒಮ್ಮೆಯಾದರೂ ಜಯ ಸಿಕ್ಕೀತು ಗೆಳತಿ
‘ಯಯಾ’ ನ ಮಾತು ಸುಳ್ಳಲ್ಲ ಸತ್ಯವಾಗಿವೆ ಯಾಕೆಂದು ಕೇಳಬೇಡ


About The Author

Leave a Reply

You cannot copy content of this page

Scroll to Top