ಗಂಗಾಧರ ಬಿ.ಎಲ್ ನಿಟ್ಟೂರ್ ಕವಿತೆ-ಮರುಜೀವ ಬಂದೈತಿ

ಸದಾ ಹಸನ್ಮುಖಿ ನೀ
ನಿನಗ್ಯಾವ ಚಿಂತಿನೂ ಇಲ್ಲ ಬಿಡು
ನೀ ರಾಜ ಇದ್ದಂಗ
ಎಂದ್ಹೇಳೊ ನಿನ್ನ ನುಡಿ ಕೇಳಿ
ಎದೆಯೊಳಗೊಂದು
ಸಣ್ಣ ಕಿರುನಗೆ ಹೊಮ್ಮೇತಿ.

ನಿನ್ ಕಂಡ್ರೆ ಭಾಳ
ಖುಷಿಯಕ್ಕಾತಿ ಅನ್ನೊ
ನಿನ್ ಮಾತ್ ಕೇಳಿ
ಮರು ಜೀವ ಬಂದಂಗಾಗೈತಿ.

ನಿನ್ ಕಣ್ಣಿಗೆ ನಾ ಹಂಗ
ಕಂಡಿನಲ್ಲ ಸಾಕ್ ಬಿಡು
ಸಾರ್ಥಕವಾತೀ ಜನ್ಮ
ಬಲು ಸಂತಸ ಆಗೈತಿ.

ಒಳಗ ಏಟರಾ ನೋವಿರಲಿ
ಈ ಮನಸು ಹೊರಗೊಂದೀಟರ
ನಗು ಚೆಲ್ಲೈತಲ್ಲ ಸಾಕ್ ಬಿಡು
ಪಾವನವಾತೀ ಜೀವ ಅಂತ
ಜೀವನೋತ್ಸಾಹ ಪುಟಿದೆದ್ದೈತಿ.

ಒಂದೇ ಮಾತ್ನ್ಯಾಗ ಖರೆ ಹೇಳ್ತಿನಿ ಗೆಳತಿ
ಮುರಿದ ಮನಸ್ಸು ಜಜ್ಜಿದ ಹೃದಯಕ್ಕೆ
ನಿನ್ನಾಗಮನ ಟಾನಿಕ್ ಆಗೈತಿ


ಗಂಗಾಧರ ಬಿ.ಎಲ್ ನಿಟ್ಟೂರ್

Leave a Reply

Back To Top