ಮಾರುತೇಶ್ ಮೆದಿಕಿನಾಳ ಕವಿತೆ-ಮನಸ್ಸಿನ ಮಾಲೀಕನಾಗು

ಓ ಮನುಷ್ಯನೇ ನೀ ಮನಸ್ಸಿನ ಮಾಲೀಕನಾಗು
ಹಾಕದಿರು ನಾನಾ ತರತರದ ನಾಟಕದ ಸೋಗು
ವಿದ್ಯಾಬುದ್ದಿ ಸಿದ್ಧಿಸಿ ಸಾಧಿಸಿ ನೀತಿವಂತನಾಗು
ಸಂತ ಶರಣ ಗುರುಹಿರಿಯರಿಗೆ ಶಿರಬಾಗು!

ಈ ಚಂಚಲ ಮನಸನು ಒಂದೆಡೆ ಹಿಡಿದು ನಿಲ್ಲಿಸು
ಇಚ್ಛೆಗಳಿಗೆ ಹುಚ್ಚೆದ್ದು ಕುಣಿಯದಂತೆ ರಮಿಸು
ತಡೆದು ತಾಳ್ಮೆಯಿಂದಿರಲು ರೂಢಿ ಮಾಡಿಸು
ಹದ್ದುಮೀರಿ ಮಾರು ಹೋಗದಂತೆ ಬುದ್ಧಿಕಲಿಸು!

ದೇಹದ ಜೊತೆ ಮನಸ್ಸನ್ನು ಸೇರಿಸು ಕೂಡಿಸು
ಅಕ್ರಮ ಅವಗುಣಗಳ ಮೇಲೆ ಸವಾರಿ ಮಾಡಿಸು
ಕೆಟ್ಟಕೇಡು ಮೋಸ ವಂಚನೆಗಳ ಹೊಡೆದೋಡಿಸು
ಅತ್ತಿತ್ತ ಈ ಚಿತ್ತ ಓಡಾಡಬಾರದು ಹಿಡಿದು ಬಂಧಿಸು!

ಪಶುಪಕ್ಷಿ ಪ್ರಾಣಿ ಪರಿಸರ ಪ್ರೀತಿಸಲಿ ಈ ಮನಸು
ಮನ ಕಾಣಲಿ ಸೊಗಸಾದ ದೇಶಭಕ್ತಿಯ ಕನಸು
ಎಲ್ಲರೊಳಗೊಂದಾಗಲಿ ಈ ಮನುಷ್ಯನ ಮನಸು
ಮನದ ಮಾಲೀಕನಾಗಲು ಮಾಡೋಣ ಧ್ಯಾನ ತಪಸ್ಸು!


Leave a Reply

Back To Top