‘ಬಿ.ಶ್ಯಾಮಸುಂದರ ಎಂಬ ಕ್ರಾಂತಿಕಾರಿ ನಾಯಕ’ ವಿಶೇಷ ಲೇಖನ-ಸಿದ್ದಾರ್ಥ ಟಿ ಮಿತ್ರಾ

ಬೆಂಕಿಯನ್ನು ಬಚ್ಚಿಡುವುದು ಸಾಧ್ಯವಿಲ್ಲ  ಎಂಬಂತೆ
 ಹುಟ್ಟು ಹೋರಾಟಗಾರ ಬಿ.ಶ್ಯಾಮಸುಂದರ ಎಂಬ ಕ್ರಾಂತಿಕಾರಿ ನಾಯಕನ  ಹೆಸರು ಜನನಾಯಕನ ಪಟ್ಟಿಯಲ್ಲಿ ಸೇರದಿರುವುದು ತುಂಬಾ ನೋವಿನ ಸಂಗತಿ.

ಮಾನವಸಂಕುಲವನ್ನು ರೂಪಿಸುವುದಕ್ಕೆ ಕುಟುಂಬ ಬುನಾದಿ ಆಗಬಲ್ಲುದೆ? ಅದರಲ್ಲಿ ದಲಿತ ಕುಟುಂಬ ಆಗಿದೆ ಎನ್ನುವುದಕ್ಕೆ ಸಾಕ್ಷಿ ಅಂಬೇಡ್ಕರ್ ಅವರ ಕುಟುಂಬ.   ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಅಪರೂಪದ ದೇಶವಾಗಿದೆ.ಇಲ್ಲಿನ ಸಾಮಾಜಿಕ,ವರ್ಣ ಭೇದ ನೀತಿ, ಮೇಲುಕೀಳು,ಬಡವ, ಕನಿಷ್ಟ, ಅನಿಷ್ಟ, ಇವರೆಲ್ಲಾ ಈ ದೇಶಕ್ಕೆ ಅಂಟಿದ ಬಹು ದೊಡ್ಡ ಪಿಡುಗು.ಇದಕ್ಕೆ ವರ್ಣಾಶ್ರಮ ವ್ಯವಸ್ಥೆಯೇ ಕಾರಣವಾಗಿದೆ ಸಮಾಜದಲ್ಲಿ ಒಡೆದಾಳುವ ನೀತಿಯನ್ನು ಜಾರಿಗೆ ತರಲಾಯಿತು.ಕೇಳವರ್ಗದ ದಲಿತ ಅಸ್ಪ್ರಶ್ಯ ಸಮುದಾಯವನ್ನು ಕೆಟ್ಟದಾಗಿ ಬಳಸಿಕೊಂಡು ಆ ಸಮುದಾಯದ ಜೊತೆಯಲ್ಲಿ ಅಮಾನವೀಯವಾಗಿ ನಡೆದುಕೊಳ್ಳಲಾಯಿತು.ಅತ್ಯಂತ ಕಿಳರಿಮೆಯಿಂದಾಗಿ ಅವಮಾನ, ಶೋಷಣೆಗಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕೊಡುತ್ತಲೇ ಬಂದಿದೆ ಈ ಸಮಾಜ.ಇಂತವರ ನೆರವಿಗೆ ಬಂದವರು ಭಗವಾನ್ ಗೌತಮ ಬುದ್ಧ, ಮಹಾವೀರ, ಬಸವಣ್ಣ, ಕನಕದಾಸರು, ಜ್ಯೋತಿಬಾ ಫುಲೆ, ನಾರಾಯಣಗುರು,ಡಾ ಬಾಬಾಸಾಹೇಬ ಅಂಬೇಡ್ಕರ್,ಬಿ.ಶ್ಯಾಮಸುಂದರರೆಲ್ಲರೂ ಆಯಾ ಕಾಲದ ಒತ್ತಡದ ವಾತಾವರಣದಲ್ಲಿ ಈ ಸಮಾಜವನ್ನು ಪ್ರಶ್ನಿಸುತ್ತಲೇ ಹೊಸದನ್ನು ಬಯಸಲು ಪ್ರಯತ್ನಿಸಿದರು.ಆ ಹೊತ್ತಿಗೆ ಅಷ್ಟೇ ಸುಧಾರಣೆಗೊಂಡು ತದನಂತರ ಸುಧಾರಣೆ ಹಾಗೆ ಉಳಿದಿದ್ದು ಅಕ್ಷರಶಃ ಸತ್ಯ
ಈ ಸಮಾಜ ಸುಧಾರಕರಲ್ಲಿ ಬಿ.ಶ್ಯಾಮಸುಂದರ ಅವರೊಬ್ಬರು ಡಾ.ಅಂಬೇಡ್ಕರ ಅವರ ನಂತರದಲ್ಲಿ ಅವರ ತತ್ವ ಸಿದ್ಧಾಂತಗಳನ್ನು ಜಾರಿಗೆ ತಂದಿದ್ದಾರೆ.ಅಂಬೇಡ್ಕರ ಅವರದು ಸೌಮ್ಯವಾದಿಯ ಚಿಂತನೆಯು ಪ್ರಗತಿಪರವಾಗಿದ್ದರೆ.ಶ್ಯಾಮಸುಂದರ ಅವರದ್ದು ನಿರ್ಭಿಡೆಯ ಚಿಂತನೆಯ ಪ್ರಗತಿಪರ ಚಿಂತನೆಯ ವಿಚಾರಧಾರೆಗಳು ಹೊರಹಾಕಿದ್ದಾರೆ.ಅಂತೆಯೇ ಮೊಟ್ಟ ಮೊದಲ ತರುವಾಯದ ದಲಿತ ಸಾಹಿತ್ಯ ಚಳುವಳಿಯಲ್ಲಿ ಮೊದಲಿಗರು ಬಿ.ಶ್ಯಾಮಸುಂದರವರು ಆಗಿದ್ದಾರೆ . ಅದಕ್ಕೆ ಅವರನ್ನು ದಲಿತ ಸಾಹಿತ್ಯದ ಪಿತಾಮಹ ಎಂದು ಕರೆದಿದ್ದಾರೆ.ದಕ್ಷಿಣ ಭಾರತದ ದಲಿತ ಚಳುವಳಿಯ  ನೇತಾರರು.ಇವರು ಉರ್ದು,ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಬಲ್ಲವರಾಗಿದ್ದರು.ಆಯಾ ಭಾಷೆಗಳಲ್ಲಿ ಹದಿನಾರಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.ಕನ್ನಡವನ್ನು ಬಿಟ್ಟು ಬೇರೆ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ.ಅವರು ಮೂಲತಃ ಹೋರಾಟಗಾರರು ಐವತ್ತರ ದಶಕದಲ್ಲಿ ಸಾಹಿತ್ಯ ರಚಿಸಿದ್ದಾರೆ.ಕನ್ನಡದ ನೆಲದಲ್ಲಿಯೇ  ಭೀಮ ಸೇನೆ ಎಂಬ ಸಂಘಟನೆ ಸ್ಥಾಪಿಸಿದರು.ಇದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೊಂದಿದ ಪ್ರೀತಿ ಒಂದೆಡೆಯಾದರೆ ಇಂದಿನ ದಲಿತರನ್ನು ಅಂದೆ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ತನ್ನ ಜೀವಿತಾವಧಿಯಲ್ಲಿ ಬ್ರಹ್ಮಚಾರಿಯಾಗಿ ಉಳಿದುಕೊಂಡು ತನ್ನ ಸಮುದಾಯಕ್ಕೆ ಎದುರಾದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಹಲವು ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ.ಹೈದ್ರಬಾದ ನಿಜಾಮನ ಸಂಸ್ಥಾನದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದರು . ವಿಶೇಷವೆಂದರೆ ಇವರ ಒಂದು ಭಾಷಣ ಕೇಳಿದರೆ ಸಾಕು ಅಂದಿನ ದಲಿತ ಯುವ ಸಮುದಾಯದಲ್ಲಿ ಸಂಚನಲನ ,ಕಿಚ್ಚು ಹಚ್ಚುತ್ತಿತ್ತು.ದಲಿತ ಚಳುವಳಿ ಭೀಮಸೇನೆಯನ್ನು ಕಟ್ಟಿ ಕನ್ನಡ ನಾಡಿನಲ್ಲಿ ಆದರಲ್ಲೂ ಬೀದರ್ ಗುಲ್ಬರ್ಗಾ ಪ್ರದೇಶದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ.
ಜಗತ್ತಿನಲ್ಲಿ ಮೇಲ್ವರ್ಗದವರಿಂದ ಹಲವಾರು ಬಗೆಯಲ್ಲಿ ತುಳಿತಕ್ಕೊಳಗಾದ ಜನರ ಏಳಿಗೆಗಾಗಿ,ದಿನ ದಲಿತರ ಸೇವೆ ಹಾಗೂ ಉದ್ಧಾರಕ್ಕಾಗಿ ತಮ್ಮ ಬದುಕನ್ನೇ ಮೀಸಲಿಟ್ಟು,ಅವರ ತೃಪ್ತಿಯಲ್ಲಿಯೇ ತಮ್ಮ ಸಾರ್ಥಕತೆಯನ್ನು ಕಂಡುಕೊಂಡು ಹಲವಾರು ಮಹಾಪುರಷರನ್ನು ನೋಡಿದ್ದೇವೆ . ಅವರಲ್ಲಿ ಮಹಾತ್ಮಾ ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಬಾಬಾಸಾಹೇಬ ಅಂಬೇಡ್ಕರ್ ಮತ್ತು ಬಿ.ಶ್ಯಾಮಸುಂದರ,ಅವರು ಪ್ರಮುಖರ ಸಾಲಿನಲ್ಲಿ ನಿಲ್ಲುತ್ತಾರೆ.  ಅಂಬೇಡ್ಕರ್‌ ಪ್ರೇರಿತ ದಲಿತ ಚಳವಳಿಯನ್ನು ಯಶಸ್ವಿಯಾಗಿ ಮುನ್ನಡೆಸಿದ ಬಿ.ಶ್ಯಾಮಸುಂದರ್‌  ಒಬ್ಬ ದೇಶ ಕಂಡ ಬಹುದೊಡ್ಡ ನಾಯಕ. ಅಪ್ರತಿಮ ಸಾಧನೆಗಳ ನಡುವೆಯೂ ಅವರು ಜನನಾಯಕನ ಪಟ್ಟಿಯಿಂದ ಹೊರಗೆ ಉಳಿದು ಬಿಟ್ಟರು,ಯಾಕೋ?
ಇಪ್ಪತ್ತನೆಯ ಶತಮಾನದ ಭಾರತದಲ್ಲಿ ಜೀವಪರ ಜನಪರ ,ಬಹುದೊಡ್ಡ ಹೋರಾಟ, ಸಂಘಟನಾತ್ಮಕ ಚಿಂತನೆ ನಡೆಸಿದ ಪ್ರಮುಖರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಮುಖರು. ನೊಂದವರ, ದುಡಿಯುವ ವರ್ಗಗಳ, ಶೋಷಿತರ ದೀನದಲಿತರ ಬಾಳಿಗೆ ಬೆಳ್ಳಿಚುಕ್ಕೆಯಾಗಿ ಅವರು ಬೆಳಗಿದ್ದಾರೆ. ಅವರಂತೆಯೆ ಅಸಮಾನತೆಯನ್ನು ಕಿತ್ತೆಸೆದು ಸಮಸಮಾಜ ಕಟ್ಟುಬಯಸಿದ, ಪ್ರಭಾವ ಬೀರಿದ ಮಹಾತ್ಮ ಜ್ಯೋತಿಬಾ ಫುಲೆ, ಛತ್ರಪತಿ ಶಾಹೂ ಮಹಾರಾಜ್, ನಾರಾಯಣ ಗುರು, ಪೆರಿಯಾರ್, ಲೋಹಿಯಾ ಮುಂತಾದ ಸಮಾಜ ಸುಧಾರಕರು ಜೀವಪರ ಚಳವಳಿಯ ಪ್ರಮುಖ ನೇತಾರರಾಗಿದ್ದಾರೆ.ಇಂತಹ ಮಹನೀಯರ ವಿಚಾರ ಕ್ರಾಂತಿಗಳಿಂದ ಹೊತ್ತಿಸಿದ ಜಾಗೃತಿಯ ಜ್ಯೋತಿಯನ್ನು ಬಿ. ಶ್ಯಾಮಸುಂದರ್ ಅವರು ಮುಂದಿನ ತಲೆಮಾರಿಗೆ ಯಶಸ್ವಿಯಾಗಿ ದಾಟಿಸಿದವರು. ಈ ಕಾರಣಕ್ಕಾಗಿ ಬಿ. ಶ್ಯಾಮಸುಂದರ್ ಅವರನ್ನು ‘ದಲಿತ ಚಳವಳಿ’ಯ ಪಿತಾಮಹ ಎಂದು ಅಂಬೇಡ್ಕರೋತ್ತರ ದಲಿತ ಚಳವಳಿಯ ಮಹಾನಾಯಕನೆಂದೂ ಪರಿಗಣಿಸಲಾಗುತ್ತದೆ. ದಲಿತರ, ಕಾರ್ಮಿಕರ ಮಹಿಳೆಯರ ಏಳ್ಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟುಕೊಂಡು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ, ಕೆಳವರ್ಗದವರನ್ನು ಸಬಲೀಕರಣಗೊಳಿಸಲು ಅವಿರತವಾಗಿ ದುಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಂಘಟನೆ, ಹೋರಾಟ, ಸಾಹಿತ್ಯ ರಚನೆ, ಕಾನೂನು ಸಮರದ ಮೂಲಕ ಭಾರತದ ಶೋಷಿತ ದಲಿತ ಸಮುದಾಯಗಳನ್ನು ಒಗ್ಗೂಡಿಸಲು ಹಗಲಿರುಳು ಶ್ರಮಿಸಿದವರು ಅವರು. ಆದರೆ, ಇಂತಹ ಜನನಾಯಕನ ಚರಿತ್ರೆಯೇ ದಾಖಲಾಗಿಲ್ಲ. ಬೆಂಕಿಯನ್ನು ಬಚ್ಚಿಡುವುದು ಸಾಧ್ಯವಿಲ್ಲ ಎಂಬಂತೆ ಶ್ಯಾಮಸುಂದರ್ ಅವರ ಹೋರಾಟದ ಕ್ರಾಂತಿ ಜ್ವಾಲೆಗಳು ದೇದೀಪ್ಯಮಾನವಾಗಿ ಬೆಳಗಿವೆ.
ಮಹಾರಾಷ್ಟ್ರದ ಔರಂಗಾಬಾದ್ ಮೂಲದ ಶ್ಯಾಮಸುಂದರ್ ಅವರು ಹುಟ್ಟಿದ್ದು 1908ರ ಡಿಸೆಂಬರ್ 21ರಂದು. ಅವರ ತಂದೆ ಬದುಲಾ ಮಾಣಿಕ್ಯಂ, ತಾಯಿ ಮರಿಗೆಮ್ಮಾ. ಅಸ್ಪೃಶ್ಯ ಜಾತಿಗೆ ಅವರು ಸೇರಿದ್ದರು. ಶ್ಯಾಮಸುಂದರ್ ಅವರು ಪ್ರಾಥಮಿಕ ಶಿಕ್ಷಣವನ್ನು ಕ್ರೈಸ್ತ ಮಿಷನರಿಯ ಸೆವೆನ್ ಫ್ಲವರ್ ಶಾಲೆಯಲ್ಲಿ ಪೂರೈಸಿ, ಮಾಧ್ಯಮಿಕ ಶಿಕ್ಷಣವನ್ನು ಮುಸ್ಲಿಂ ಶಾಲೆಗಳಲ್ಲಿ ಪೂರ್ಣಗೊಳಿಸಿದರು. ಒಳ್ಳೆಯ ಪ್ರಾಧ್ಯಾಪಕನಾಗಬೇಕೆಂಬ ಮಹತ್ವಾಕಾಂಕ್ಷೆ ಅವರದಾಗಿತ್ತು. ಜ್ಞಾನದ ಮೂಲಕ ಆತ್ಮಗೌರವ ಸಂಪಾದಿಸಬೇಕೆಂಬ ಅವರ ಭಾವನೆಗೆ ನೀರೆರೆದದ್ದು ಕ್ರೈಸ್ತ ಮಿಷನರಿ ಹಾಗೂ ಮುಸ್ಲಿಂ ಶಾಲೆಗಳು ಎಂಬುದು ಗಮನಾರ್ಹ. ಹಿಂದೂ ಶಿಕ್ಷಣ ಸಂಸ್ಥೆಗಳಾವುವೂ ಇವರಿಗೆ ಓದಲು ಅವಕಾಶ ನೀಡಲಿಲ್ಲ. ಅವರ ತಂದೆ ರೈಲ್ವೆ ಇಲಾಖೆಯಲ್ಲಿ ಇದ್ದುದರಿಂದ ಔರಂಗಾಬಾದ್‍ನಿಂದ ಹೈದರಾಬಾದ್‌ಗೆ ವರ್ಗಾವಣೆಗೊಂಡರು. ಶ್ಯಾಮಸುಂದರ್ ಹೈದರಾಬಾದ್‌ನಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿದರು. ಮುಂದೆ ಬಹುದೊಡ್ಡ ಅಪ್ರತಿಮ ಮೇಧಾವಿ ಆದರು.

ಉಳ್ಳವರ ಸೊತ್ತಾಗಿದ್ದ ಶಿಕ್ಷಣ ಮಡಿವಂತರ ಹಿಡಿತದಲ್ಲಿತ್ತು. ಅದನ್ನರಿತ ಶ್ಯಾಮಸುಂದರ್ ಅವರು ನಿಜಾಮ ಸಂಸ್ಥಾನದಲ್ಲಿರುವ 40 ಲಕ್ಷಕ್ಕೂ ಹೆಚ್ಚಿದ್ದ ಅಸ್ಪೃಶ್ಯರನ್ನು ವಿಮೋಚನೆಗೊಳಿಸಲು ಹತ್ತು ಹಲವು ಮೌಲಿಕ ಕಾರ್ಯಕ್ರಮಗಳನ್ನು ರೂಪಿಸುವಂತೆ ಸಂಸ್ಥಾನದ ದೊರೆಯನ್ನು ಪ್ರೇರೇಪಿಸಿದರು. ಇವರ ಹೋರಾಟಗಳನ್ನು ಅರಿತಿದ್ದ ದೊರೆ ಒಂದು ಕೋಟಿ ರೂಪಾಯಿಯ ನಿಧಿಯನ್ನು ಸ್ಥಾಪಿಸಿ ಅದಕ್ಕೊಂದು ಟ್ರಸ್ಟ್ ಮಾಡಿ ಶ್ಯಾಮಸುಂದರ್ ಅವರನ್ನೇ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಿಸಿದರು.
1942ರಲ್ಲಿ ಆ ನಿಧಿಯಿಂದ ನಿಜಾಮ ಸಂಸ್ಥಾನದ ವ್ಯಾಪ್ತಿಯಲ್ಲಿ ಸುಮಾರು 28 ವಸತಿ ಶಾಲೆಗಳನ್ನು ಶ್ಯಾಮಸುಂದರ್‌ ಪ್ರಾರಂಭಿಸಿದರು. ಔರಂಗಾಬಾದಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ಥಾಪಿಸಿದ (All India Peoples Education) ಶಿಕ್ಷಣ ಸಂಸ್ಥೆಗೆ 12 ಲಕ್ಷ ರೂಪಾಯಿ ಧನಸಹಾಯ ನೀಡಿದರು. Madrasa-E-Akwam ಎಂಬ ಹೆಸರಿನಲ್ಲಿ ಅಸ್ಪೃಶ್ಯ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಪ್ರಾರಂಭಿಸಿದರು. ಅಲ್ಲಿನ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 4, 6 ಮತ್ತು 8 ರೂಪಾಯಿಗಳಂತೆ ವಿದ್ಯಾರ್ಥಿ ವೇತನ ನಿಗದಿಗೊಳಿಸಿ ಮಂಜೂರು ಮಾಡಿದರು.
ಅಸ್ಪೃಶ್ಯರು ಹೊಸ ಬಟ್ಟೆ ಧರಿಸುವಂತಿರಲಿಲ್ಲ. ಮೀಸೆ ಬೆಳೆಸುವಂತಿರಲಿಲ್ಲ. ಕಾಲಲ್ಲಿ ಚಪ್ಪಲಿ (ಚಡಾವು) ಧರಿಸುವಂತಿರಲಿಲ್ಲ. ಕೈಯಲ್ಲಿ ಕೋಲು (ಬಡಿಗೆ) ಹಿಡಿಯುವಂತಿರಲಿಲ್ಲ ಎಂಬ ಮನುಸ್ಮೃತಿ ಆಧಾರಿತ ನಿಯಮಗಳು ಆಗ ಜಾರಿಯಲ್ಲಿದ್ದವು. ಇಂತಹ ಅನಾಗರಿಕ  ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ 1946ರಲ್ಲಿ ಮಹಾರಾಷ್ಟ್ರದ ನಾಂದೇಡದಲ್ಲಿ ಸಮ್ಮೇಳನವೊಂದನ್ನು ಏರ್ಪಡಿಸಿದರು. ಸಮ್ಮೇಳನಕ್ಕೆ ಬರುವ ದಲಿತ ಯುವಕರು, ಮುಖದ ಮೇಲೆ ಮೀಸೆ ಬೆಳೆಸಿರಬೇಕು, ಹೊಸಬಟ್ಟೆ ಧರಿಸಿರಬೇಕು, ಕಾಲಲ್ಲಿ ಚಪ್ಪಲಿ ಹಾಕಿರಬೇಕು, ಕೈಯಲ್ಲಿ ಕೋಲು (ಬಡಿಗೆ) ಹಿಡಿದು ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಸುತ್ತೋಲೆ ಹೊರಡಿಸಿ, ಬದಲಾವಣೆ ಗಾಳಿ ಬೀಸುವಂತೆ ಮಾಡಿದರು.ಅಸ್ಪೃಶ್ಯರು ಉದ್ಧಾರವಾಗಬೇಕಾದರೆ ಶಿಕ್ಷಣದಷ್ಟೇ ಮಹತ್ವದ್ದು ಭೂಒಡೆತನ. ಸಾಮಾಜಿಕ, ಆರ್ಥಿಕವಾಗಿ ಬೆಳವಣಿಗೆ ಹೊಂದಬೇಕಾದರೆ ಭೂಮಿ ಹಂಚಿಕೆಯಾಗಬೇಕೆಂಬುದು ಅವರ ನಿಲುವಾಗಿತ್ತು. ಪ್ರಬಲ ಜಾತಿಯ ಒಡೆತನದಲ್ಲಿರುವ ಭೂಮಿ ಹಂಚಿಕೆಯಾಗಿ ‘ಉಳುವವನೇ ಭೂಮಿಯ ಒಡೆಯ’ ನಿಯಮವನ್ನು ತರುವಲ್ಲಿ ಶ್ರಮಿಸಿದರು. ಹಾಗೆಯೇ ನಿಜಾಮ ಸರ್ಕಾರದ ಬಳಿಯಿದ್ದ ಖಾಲಿ ಭೂಮಿಯನ್ನು ಅಸ್ಪೃಶ್ಯರಿಗೆ ಹಂಚಿಕೆ ಆಗುವಂತೆ ಶ್ರಮಿಸಿದ ಮಹಾನ್‌ ಸುಧಾರಣಾವಾದಿ ಅವರಾಗಿದ್ದರು.  1947ರಲ್ಲಿ ನಿಜಾಮ ಸರ್ಕಾರದ ವತಿಯಿಂದ ವಿಶ್ವಸಂಸ್ಥೆಗೆ ನಿಯೋಗವೊಂದನ್ನು ಕಳುಹಿಸಲಾಯಿತು. ಅದರ ನೇತೃತ್ವವನ್ನು ಶ್ಯಾಮಸುಂದರ್ ವಹಿಸಿಕೊಂಡು ಯುರೋಪ್‌ನ ಹತ್ತಾರು ರಾಷ್ಟ್ರಗಳಿಗೆ ಭೇಟಿ ನೀಡಿದರು ಇವರ ಚಾಣಾಕ್ಷತನಕ್ಕೆ ಅನೇಕ  ರಾಜಕೀಯ ಗಣ್ಯರು ಇವರ  ಸಂಪರ್ಕ ಸಾಧಿಸಿದರು. ಚೀನಾದ ಚೌ, ವಿಯಟ್ನಾಂನ ಹೋ ಚಿ ಮಿನ್ ಮತ್ತು ಇಂಗ್ಲೆಂಡ್‌ನ ವಿನ್‍ಸ್ಟನ್ ಚರ್ಚಿಲ್ ಮೊದಲಾದ ನಾಯಕರ ಜೊತೆ ದೇಶದ ಸಾಮಾಜಿಕ ವ್ಯವಸ್ಥೆ ಕುರಿತು ಸುದೀರ್ಘವಾಗಿ ಚರ್ಚಿಸಿದ್ದರು.
1957-1962ರವರೆಗೆ ಮೈಸೂರು ವಿಧಾನಸಭೆಗೆ ಬೀದರ್‌ ಜಿಲ್ಲೆಯ ಭಾಲ್ಕಿ ಕ್ಷೇತ್ರದಿಂದ ಪ್ರತಿನಿಧಿಯಾಗಿದ್ದರು. ಅಪಾರ ಅನುಭವ, ಅಧ್ಯಯನಶೀಲತೆ, ವಿದ್ವತ್ತು, ವಾಕ್‍ಚಾತುರ್ಯ, ರಾಜಕೀಯ ಪ್ರೌಢಿಮೆಯಿಂದಾಗಿ ವಿಧಾನಸಭೆಯಲ್ಲೂ ಎತ್ತರದ ಸ್ಥಾನ ಪಡೆದುಕೊಂಡರು. ಸಾಮಾಜಿಕ ಹಿತಕ್ಕಾಗಿ ವಿಧಾನಸಭೆಯ ಒಳಗೂ ಹೊರಗೂ ಧ್ವನಿಯೆತ್ತಿದರು.
 ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯನ್ನು ತಾರ್ಕಿಕ ನೆಲೆಯಲ್ಲಿ ಖಂಡಿಸುತ್ತಾ (We are Mool Bharatis, Original Sons of the Soil; ನಾವು ಮೂಲ ಭಾರತೀಯರು, ಈ ಮಣ್ಣಿನ ಮಕ್ಕಳು) ಎಂದು ದಲಿತರನ್ನು ಬಡಿದೆಚ್ಚರಿಸಿದರು. ಅವರ ರಾಜಕೀಯ ಘೋಷಣೆ ಎಷ್ಟು ಸ್ಪಷ್ಟ ಮತ್ತು ಗಂಭೀರವಾಗಿತ್ತೆಂದರೆ ‘ಖೋಯಾ ಹುವಾ ರಾಜ್ ಮಾಂಗನೆ ಸೇ ನಹಿ ಮಿಲ್ತಾ, ಉಸೆ ಛೀನಾ ಜಾತಾಹೈ’ (ಕಳೆದುಹೋದ ರಾಜ್ಯಾಧಿಕಾರ ಬೇಡುವುದರಿಂದ ಕೈಗೆಟುಕುವುದಿಲ್ಲ, ಬದಲಿಗೆ ಅದನ್ನು ಆಳುವ ವರ್ಗದ ಕೈಯಿಂದ ಕಿತ್ತುಕೊಳ್ಳಬೇಕು) ಎಂದು ಅಭಿಪ್ರಾಯಪಟ್ಟಿದ್ದರು. ಗುಲಾಮಗಿರಿಯ ಹಂಗು ತೊರೆದು ದಲಿತರ ಏಳ್ಗೆಗಾಗಿ ಎದೆಯೆತ್ತಿ ಅವಿರತವಾಗಿ ಹೋರಾಡಿದರು ಶ್ಯಾಮಸುಂದರ್‌. ದಲಿತರ, ಕಾರ್ಮಿಕ, ಹಿಂದುಳಿದವರ ಏಳ್ಗೆಯು ಶಿಕ್ಷಣ ಸಂಘಟನೆ, ಹೋರಾಟದ ಅರಿವಿನಿಂದ ಮಾತ್ರ ಸಾಧ್ಯವೆಂದು ಸಾರಿದವರು. ಅಂಬೇಡ್ಕರ್ ಅವರ ಪ್ರತ್ಯೇಕ ಪ್ರತಿನಿಧಿತ್ವ ಬೇಡಿಕೆಯ ಮುಂದುವರಿಕೆ ಎಂಬಂತೆ ಶ್ಯಾಮಸುಂದರ್ ಅವರು ಈ ದೇಶದ ದಲಿತ-ದಮನಿತರಿಗೆ ಪ್ರತ್ಯೇಕ ಹಳ್ಳಿಗಳು, ಅವರ ಶಿಕ್ಷಣಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯಗಳು ಬೇಕು ಎಂದು ಪ್ರತಿಪಾದಿಸಿದ್ದರು.ಸ್ವಾತಂತ್ರ್ಯಾ ನಂತರದಲ್ಲಿ ದಲಿತರನ್ನು ಸಂಘಟಿಸಿ ಅನೇಕ ಅರಿವಿನ ಕಾರ್ಯಕ್ರಮಗಳನ್ನು ರೂಪಿಸಿದರು. ಹಲವಾರು ಚಿಂತನಾಪರ ಕೃತಿಗಳನ್ನು ರಚಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ದಲಿತ ಚಳವಳಿಗೆ ನಾಂದಿ ಹಾಡಿದರು. ಆ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರ 77ನೇ ಹುಟ್ಟುಹಬ್ಬದ ಅಂಗವಾಗಿ ‘ಭಾರತೀಯ ಭೀಮಸೇನೆ’ ಎಂಬ ಸಂಘಟನೆಯನ್ನು ಕಟ್ಟಿ, ವೈಚಾರಿಕ, ಪ್ರಗತಿಪರ ಚಿಂತನೆಯ ಕಿಚ್ಚು ಹೊತ್ತಿಸಿದರು. ತಮ್ಮ ಜೀವಿತದ ಉದ್ದಕ್ಕೂ ಜನಹಿತ, ಸಮಾಜದ ಹಿತರಕ್ಷಣೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡ ಅಪರೂಪದ ತ್ಯಾಗಮಯಿ ಹೋರಾಟಗಾರ ಶ್ಯಾಮಸುಂದರ್ ಎಂಬುದನ್ನು ಮರೆಯುವಂತಿಲ್ಲ.


Leave a Reply

Back To Top