“ಕೆಲವು ವರ್ಷಗಳ ಹಿಂದೆ”ವೀಣಾ ಹೇಮಂತ್‌ ಗೌಡ ಪಾಟೀಲ ಅವರಪರಿಸರ ಕುರಿತವಿಶೇಷ ಲೇಖನ

ಅದೊಂದು ಕಾಲವಿತ್ತು… ಹಳ್ಳಿಗಳಲ್ಲಿ ಚಿಕ್ಕಪುಟ್ಟ ಶಹರಗಳಲ್ಲಿ ಊರ ಹೊರಗಿನ ದೊಡ್ಡ ಆಲದ ಮರದ ಕೆಳಗೆ ಹಿರಿಯರಿಲ್ಲ ಸೇರಿ ಪಂಚಾಯಿತಿ ನಡೆಸುತ್ತಿದ್ದರು. ಊರಿಗೆ ಸಂಬಂಧಪಟ್ಟ ಎಲ್ಲ ಕೆಲಸಗಳ, ವಿಷಯಗಳ ನಿರ್ಣಯ ಅಲ್ಲಿಯೇ ಆಗುತ್ತಿತ್ತು .ಎಲ್ಲ ಘಟನೆಗಳಿಗೂ ಆ ಮರವೇ ಸಾಕ್ಷಿಯಾಗುತ್ತಿತ್ತು.

ಊರ ಮುಂದಣ ಬೇವಿನ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಊರಿನ ಸರ್ವ ಜನರು ಯಾವುದೇ ರೀತಿಯ ಭೇದ ಭಾವಗಳಿಲ್ಲದೆ ಆಟವಾಡುತ್ತಿದ್ದರು. ಇನ್ನು ಊರಿಗೆ ಬರುವ ಯಾರೇ ಆಗಲಿ ಆ ಕಟ್ಟೆಗೆ ಬಂದು ಜನರೊಂದಿಗೆ ಸುಖ ದುಃಖ ಹಂಚಿಕೊಳ್ಳುತ್ತಿದ್ದರು. ಇದೀಗ ಆ ಪರಿಸರವೂ ಇಲ್ಲ ಆ ಜನರೂ ಇಲ್ಲ!.ಬೇಸಿಗೆಯಲ್ಲಿ ನೀರಿಲ್ಲ ಎಂದು ನಾವು ಪ್ರಜೆಗಳು ಬಡಬಡಿಸಿದರೆ ಸರ್ಕಾರ ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಎಂಬಂತೆ ಅಲ್ಲಲ್ಲಿ ನೀರು ಪೂರೈಕೆಗೆ ಅನುಕೂಲ ಮಾಡಿಕೊಡುತ್ತದೆ. ಟ್ಯಾಂಕರ್ ಗಳಲ್ಲಿ ನೀರನ್ನು ತಂದು ಪೂರೈಸುತ್ತದೆ. ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಆದರೂ ಕೂಡ ಜನ ಅನಿವಾರ್ಯವಾಗಿ ಸುಮ್ಮನಾಗಿಬಿಡುತ್ತಾರೆ. ಮುಂದೆ ಮಳೆ ಬಂದ ಕೂಡಲೇ ಬೇಸಿಗೆಯ ನೀರಿನ ಸಮಸ್ಯೆಗಳನ್ನು ಮರೆತುಬಿಡುತ್ತೇವೆ ಕೆರೆಕಟ್ಟೆಗಳನ್ನು ತುಂಬಿಸುವ ಮಳೆ ಮುಂದಿನ ಕೆಲ ತಿಂಗಳುಗಳ ಕಾಲ ಜನರನ್ನು ಶಾಂತವಾಗಿಸುತ್ತದೆ ಎನ್ನುವುದೇನೋ ಸರಿ ಮತ್ತೆ ಡಿಸೆಂಬರ್ ಸುಮಾರಿಗೆ ನೀರಿಲ್ಲದೆ ಕೆರೆಕಟ್ಟೆಗಳು ಒಣಗಿ ಬಾಯಿ ತೆರೆದು ನಿಲ್ಲುತ್ತವೆ ಮತ್ತೆ ಪತ್ರಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದೇ ಸುದ್ದಿ. ಪರಿಸ್ಥಿತಿ ಹೇಗಿದೆ ಎಂದರೆ ನಾವು ಗಡ್ಡಕ್ಕೆ ಬೆಂಕಿ ಹತ್ತಿದೆ ಎಂದಾಗ ಬಾವಿ ತೋಡುವಂತಹ ತಾತ್ಕಾಲಿಕ ಪರಿಹಾರಗಳನ್ನು ಮಾತ್ರ ಯೋಚಿಸುತ್ತಿದ್ದೇವೆ.

ಅಂದು ಪ್ರತಿ ಮನೆಗಳಲ್ಲೂ ಬಾವಿಗಳನ್ನು ಹೊಂದಿರುತ್ತಿದ್ದರು ಬಾವಿ ಇಲ್ಲದ ಮನೆಗೆ ಮಗಳನ್ನು ಕೊಡುತ್ತಿರಲಿಲ್ಲ. ಮನೆಯ ಹಿತ್ತಲ ಬಾವಿಯ ಬಳಿ ಇರುವ ಒಗೆಯುವ ಕಟ್ಟೆ ಹೆಣ್ಣು ಮಕ್ಕಳ ಹರಟೆಗೂ ಆಸರೆಯ ತಾಣವಾಗುತ್ತಿತ್ತು. ಮತ್ತೆ ಕೆಲ ಯುವತಿಯರಿಗೆ ಕನಸು ಕಾಣಲು ಕೂಡ! ಬಾವಿಯ ಕಟ್ಟೆಯ ಬಳಿ ಮನೆಯ ಪಾತ್ರೆ ಬಟ್ಟೆಗಳೆಲ್ಲ ಸ್ವಚ್ಛವಾಗುತ್ತಿದ್ದವು. ಮನೆಯ ಪುರುಷರು ಕೂಡ ಬಾವಿಯ ಕಟ್ಟೆಯ ಬಳಿಯೇ ಸ್ನಾನ ಇತ್ಯಾದಿಗಳನ್ನು ಪೂರೈಸಿಕೊಳ್ಳುತ್ತಿದ್ದರು.ಇನ್ನು ಪೂಜೆಗೆ ಬೇಕಾದ ಮಡಿ ನೀರಿಗೆ,ಅಡುಗೆಗೆ ಬೇಕಾದ ಸಿಹಿ ನೀರಿಗೆ ಬಾವಿಯ ನೀರೇ ಗತಿ. ಮನೆಯಲ್ಲಿ ಇರುವ ದನ ಕರುಗಳಿಗೆ ಕಲಗಚ್ಚನ್ನು ಕಲಸಲು, ಕೆಲಸದ ಆಳುಗಳಿಗೆ ಕೈ ಕಾಲು ತೊಳೆಯಲು ಕೂಡ ಬಾವಿಯ ನೀರು ಬೇಕೇ ಬೇಕು. ಒಂದೆರಡು ಮಳೆಗೆ ಭೂಮಿಯ ಅಂತರ್ಜಲ ಹೆಚ್ಚಿ ಬಾವಿಯಲ್ಲಿ ಸದಾಕಾಲ ನೀರಿರುತ್ತಿತ್ತು. ಬಹುತೇಕ ಮನೆಗಳಲ್ಲಿ ಬಾವಿಯ ನೀರು ಬದುಕಿನ ಆಧಾರ ಸ್ತಂಭವಾಗಿರುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಇರುವ ಬಾವಿಗಳನ್ನು ಮುಚ್ಚಿ ಅದರ ಮೇಲೆ ಮನೆ ಕಟ್ಟುವ ಜನರನ್ನು ನಾವು ನೋಡುತ್ತಿದ್ದೇವೆ.

 ಈ ಹಿಂದೆ ಕಾಡಿನಲ್ಲಿನ ಒಣಮರಗಳನ್ನು ಮಾತ್ರ ಕಡಿದು ಮಾರುತಿದ್ದರು ಆದರೆ ಇಂದು ಮಾನವನ ದುರಾಸೆಗೆ ಕಾಡಿಗೆ ಕಾಡೇ ಬಲಿಯಾಗುತ್ತಿದೆ. ಕೆಲವೇ ವರ್ಷದ ಇಂತಿಷ್ಟು ದಿನಗಳು ಕೆರೆಗಳ ಹಳ್ಳಗಳ ನೀರನ್ನು ಬಳಸುವುದು ನಿಶಿದ್ಧವೆಂದು ಕಾರಣ ಆ ಸಮಯದಲ್ಲಿ ಜಲಚರಗಳ ಸಂತಾನೋತ್ಪತ್ತಿಗೆ ಅನುಕೂಲವಾಗಲೆಂದು ಪ್ರಕೃತಿಯೊಂದಿಗೆ ಈ ರೀತಿಯ ಸಮನ್ವಯತೆಯನ್ನು ಮನುಷ್ಯ ಕಾಯ್ದು ಕೊಂಡಿದ್ದನು.

ಕೆಲವೆಡೆ ವರ್ಷದ ಇಂತಿಷ್ಟು ದಿನಗಳು ಕೆರೆಗಳ ಹಳ್ಳಗಳ ನೀರನ್ನು ಬಳಸುವುದು ನಿಷೇಧವಿತ್ತು ಕಾರಣ ಆ ಸಮಯದಲ್ಲಿ ಜಲಚರಗಳ ಸಂತಾನೋತ್ಪತ್ತಿ ಕ್ರಿಯೆ ಜರುಗುತ್ತಿತ್ತು ಪ್ರಕೃತಿಯೊಂದಿಗೆ ಈ ರೀತಿಯ ಸಮನ್ವತೆಯನ್ನು ಮನುಷ್ಯ ಕಾಯ್ದುಕೊಂಡಿದ್ದ.

ನಮ್ಮ ಬದುಕಿಗೆ ಮುಖ್ಯವಾದ ನೀರು, ಆಹಾರ, ನೆರಳು ನಮಗೆ ದೊರೆಯುವುದು ಪ್ರಕೃತಿಯಿಂದಲೇ. ನಾವು ನಡೆಯುವ ನೆಲ, ಕುಡಿಯುವ ಜಲ, ಉಸಿರಾಡುವ ಗಾಳಿ ಎಲ್ಲವೂ ಪ್ರಕೃತಿಯ ದೇಣಿಗೆ. ಹುಟ್ಟಿನಿಂದ ಸಾಯುವವರೆಗೂ ನಮ್ಮನ್ನು ಕೊರೆಯುವ ಈ ಪ್ರಕೃತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಮತ್ತು ಅತ್ಯವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಮೊದಲೆಲ್ಲ ಕೆರೆ, ಬಾವಿಗಳಲ್ಲಿ ಸಿಗುತ್ತಿದ್ದ ನೀರು ಇಂದು ಕ್ಯಾನುಗಳಲ್ಲಿ ದೊರೆಯುತ್ತಿದೆ. ಕೆಲವೇ ದಿನಗಳಲ್ಲಿ ಲೋಟಗಳಲ್ಲಿ ಕಾಣುವುದು ಕೂಡ ಕಷ್ಟವೇನೋ? ಎಂಬ ಪರಿಸ್ಥಿತಿ.

ಅಂದು ಐವತ್ತರವತ್ತು ಅಡಿಗೆ ಬೋರ್ ಹಾಕಿದಾಗ ದೊರೆಯುವ ನೀರು ಎಂದು ಏಳೆಂಟು ನೂರು ಅಡಿ ಕೊರೆದರೂ ಅಂತರ್ಜಲ ಸಿಗುತ್ತಿಲ್ಲ . ನಗರೀಕರಣದ, ಅಭಿವೃದ್ಧಿಯ ನೆಪದಲ್ಲಿ ಎಲ್ಲೆಡೆ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿತ್ತು.ಮಳೆಯ ನೀರು, ಹರಿದು ಹೋಗಿ ಚರಂಡಿಯನ್ನು ಸೇರುತ್ತಿದೆ. ಮಳೆಯ ನೀರನ್ನು ಹಿಂಗಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವಾಗಿ ಭೂಮಿಗೆ ಬೀಳುವ ಒಂದೆರಡು ಮಳೆಯಿಂದಲೇ ಮನುಷ್ಯರ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುತ್ತಿದ್ದು ಮಳೆ ನೀರು ಕೊಯ್ಲು ಎಂಬ ಸರ್ಕಾರದ ಯೋಜನೆಯು ಕೇವಲ ಸರ್ಕಾರಿ ಕಡತಗಳಲ್ಲಿ ಮಾತ್ರ ಜೀವಂತವಾಗಿದೆ.

ವಿಪರೀತ ನೀರಿನ ಕೊರತೆಯಿಂದ ಒದ್ದಾಡಿದ ಸರ್ಕಾರ ಮತ್ತು ಜನಗಳು ಇದೀಗ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಕೆರೆಕಟ್ಟೆಗಳ ನಿರ್ಮಾಣವನ್ನು ಮಾಡಿದ್ದಾರೆ ಆದರೆ ಅವುಗಳ ಸೂಕ್ತ ನಿರ್ವಹಣೆ ಹೂಳು ನಿವಾರಣೆ ಮುಂತಾದ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದಾಗದೆ ನಿಗದಿತ ಪ್ರಮಾಣದ ನೀರು ಸಂಗ್ರಹವಾಗದೆ ಇರುವುದು ಕೂಡ ಪರಿಸ್ಥಿತಿಯ ಗಂಭೀರತೆಯನ್ನು ತೋರುತ್ತದೆ.
ಕೇವಲ ಬೆಂಗಳೂರು ನಗರ ಒಂದರಲ್ಲಿಯೇ ನಗರೀಕರಣ ಮಾಡುವ ಭರದಲ್ಲಿ ಸಾವಿರಾರು ಕೆರೆಗಳನ್ನು ಮುಚ್ಚಲಾಗಿದ್ದು ಇದೀಗ ಕೇವಲ ಎರಡು ನೂರು ಕೆರೆಗಳು ಮಾತ್ರ ಇವೆ ಅವುಗಳಲ್ಲಿ 150 ಕೆರೆಗಳು ಮಾತ್ರ ಸುಸ್ಥಿತಿಯಲ್ಲಿವೆ.ಬೃಹತ್ ಬೆಂಗಳೂರು ನಗರದ ನೀರಿನ ಬವಣೆಯನ್ನು ತೀರಿಸಲು ಈ ಕೆರೆಗಳಿಂದ ಸಾಧ್ಯವಿಲ್ಲ ಅಂತೆಯೇ ಬೇರೆಯವರ ಪಾಲಿನ ನೀರನ್ನು ಕೂಡ ಬೆಂಗಳೂರು ಮಹಾನಗರಕ್ಕೆ ಹರಿಸಲಾಗುತ್ತಿದೆ. ದೀಪದ ಅಡಿಯಲ್ಲಿ ಕತ್ತಲು ಎಂಬಂತೆ ನದಿಗಳಿಗೆ ಅಡ್ಡಲಾಗಿ ಬ್ಯಾರೇಜುಗಳನ್ನು, ಜಲಾಶಯಗಳನ್ನು ಕಟ್ಟಲು ತಮ್ಮ ಹೊಲಗದ್ದೆಗಳನ್ನು ಕಳೆದುಕೊಂಡ ಜನರಿಗೆ ಕುಡಿಯುವ ನೀರು ದೊರೆಯದೆ ಇರುವುದು ಪರಿಸ್ಥಿತಿಯ ವಿಪರ್ಯಾಸತೆಯನ್ನು ತೋರುತ್ತದೆ.

ಸರ್ಕಾರ ಜನರ ವ್ಯವಸಾಯಕ್ಕೆ ಅನುಕೂಲವಾಗಲಿ ಎಂದು ರೈತರ ಹೊಲಗಳಲ್ಲಿ ಚೆಕ್ ಡ್ಯಾಮ್ ಗಳನ್ನು ಕಟ್ಟಿಸಲು ಸಹಾಯಧನ ನೀಡುತ್ತಿತ್ತು ಅಲ್ಲವೇ ಇಲ್ಲೂ ಕೂಡ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಸಹಾಯಧನ ಪಡೆದು ಕೃಷಿ ಹೊಂಡಗಳನ್ನು ಮಾಡಿಕೊಳ್ಳುವ ಜನರು ಅವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು ಅಲ್ಲವೇ?

ಬೇಸಿಗೆಯಲ್ಲಿ ಅಬ್ಬಬ್ಬಾ! ಅದೆಷ್ಟು ಬಿಸಿಲು ಎಂದು ನಾವು ಫ್ಯಾನ್ ಕೂಲರ್ ಮತ್ತು ಎಸಿಗಳ ಮೊರೆ ಹೋಗುತ್ತೇವೆ, ಹೊರತು ಒಂದೆರಡು ಗಿಡಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡಿ ಅದರ ನೆರಳಿನಲ್ಲಿ ಧಗೆ ಆರಿಸಿಕೊಳ್ಳಲು ಕೊಡುವುದಿಲ್ಲ ಮನೆಯ ಸುತ್ತಲೂ ಗಿಡ ನೆಟ್ಟು ಪೋಷಿಸಲು ತೊಂದರೆಯನ್ನು ಹೇಳಿಕೊಳ್ಳುವ ತಾಯಂದಿರಿಗೆ ನೀರಿಗಿಂತ ಹೆಚ್ಚಿನ ತೊಂದರೆ ಇರುವುದು ಕಾಂಕ್ರೀಟ ಮಯವಾಗಿರುವ ತಮ್ಮ ಕಾಂಪೌಂಡ್ ನಲ್ಲಿ ಬೀಳುವ ಎಲೆಗಳ ಕಸದಿಂದ. ಪೂಜೆಗಾಗಿ ಬೇಕಾಗುವ ಒಂದೆರಡು ಗಿಡಗಳನ್ನು ಬೆಳೆಸುವ ಪರಿಪಾಠ ನಮ್ಮಲ್ಲಿ ಬೆಳೆದು ಬಂದಿದೆ ಎಂಬುದನ್ನು ಬಿಟ್ಟರೆ ಪರಿಸರದ ಉಳಿವಿಗಾಗಿ ನಾವೇನೂ ನೀಡುತ್ತಿಲ್ಲ.
ಪ್ರಸಕ್ತ ವರ್ಷದ ವರದಿಯಂತೆ ಈ ವರ್ಷದ ಬೇಸಿಗೆಯಲ್ಲಿ 48 ರಿಂದ 54° ಸೆಂಟಿಗ್ರೇಡ್  ಉಷ್ಣತೆ ಹೆಚ್ಚಾಗಿದ್ದು ಜನರ ಆಹಾಕಾರ ಮುಗಿಲು ಮುಟ್ಟಿತ್ತು. ಆದರೆ ಸುದೀರ್ಘವಾದ ಸೈಕ್ಲೋನ್ಗಳು ಚಂಡಮಾರುತಗಳ ಪ್ರಭಾವದಿಂದಾಗಿ ಕಳೆದ ತಿಂಗಳು ಮಳೆ ತನ್ನ ಪ್ರಭಾವವನ್ನು ತೋರಿ ಇದೀಗ ದೇಶದ ಕೆಲ ಪ್ರಾಂತ್ಯಗಳಲ್ಲಿ ಸಾಕಷ್ಟು ಮಳೆಯಾಗಿದ್ದು ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಹೀಗೆ ಪ್ರವಾಹ ಉಂಟಾಗಲು ಕಾರಣ ಕೂಡ ನಮ್ಮ ಅವೈಜ್ಞಾನಿಕ ರಸ್ತೆಯ ಮಾದರಿಗಳು ಡ್ರೈನೇಜ್ ನಿರ್ವಹಣೆ ಮತ್ತು ಮಳೆ ನೀರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೆ ಹರಿದು ಹೋಗಲು ಬಿಟ್ಟು ಬಿಡುತ್ತಿರುವ ರೀತಿ. ಮೊದಲಾದರೆ ಮಣ್ಣು ನೆಲ ನೀರನ್ನು ಹೀರಿಕೊಂಡು ಭೂಮಿಯ ಅಂತರ್ಜಲವನ್ನು ಹೆಚ್ಚಿಸುವಲ್ಲಿ ತನ್ನ ಕಾಣಿಕೆಯನ್ನು ನೀಡುತ್ತಿತ್ತು ಆದರೆ ಕಾಂಕ್ರೀಟ್ ಮಯವಾಗಿರುವ ರಸ್ತೆಗಳು ನೀರನ್ನು ಹೀರಿಕೊಳ್ಳುವುದಂತೂ ದೂರ. ಹೀಗಾಗಿ ಮಳೆಯ ನೀರು ಹರಿದು ಚರಂಡಿಯನ್ನು ಸೇರುತ್ತದೆ. ಮತ್ತೆ ನಾವು ನೀರಿಲ್ಲ ಎಂದು ಬಾಯಿ ಬಡೆದುಕೊಳ್ಳುತ್ತೇವೆ.

ಕೇವಲ ಮೂರು ದಶಕಗಳ ಹಿಂದೆ ಇದೇ ರೀತಿ ಮನುಷ್ಯ ಪ್ರಕೃತಿಯನ್ನು ನಾಶಗೊಳಿಸುತ್ತಾ ಹೋದರೆ ಮುಂದೆ ಭಯಂಕರ ಪರಿಣಾಮಗಳನ್ನು ಕಾಣಬಹುದು ಎಂದು ಜಾಗತಿಕ ಹವಾಮಾನ ಇಲಾಖೆಯ ತಜ್ಞರು ಮತ್ತು ಪರಿಸರ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ. ಎಲ್ಲ ರೀತಿಯ ಎಚ್ಚರಿಕೆಗಳ ಹೊರತಾಗಿಯೂ ಮನುಷ್ಯನ ವಿಸ್ಮೃತಿಯ ಕಾರಣದಿಂದಾಗಿ ಆಗುತ್ತಿರುವ ಯಾವುದೇ ತೊಂದರೆಗಳು ನಮ್ಮದಲ್ಲ ಮತ್ತು ನಮದಲ್ಲ ಎಂಬ ಭಾವದಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.ಹಿಮ ಪ್ರದೇಶಗಳಲ್ಲಿ ಸಾವಿರಾರು ವರ್ಷಗಳಿಂದ ಸ್ಥಿತವಾಗಿರುವ ಬೃಹತ್ ಹಿಮದ ನೀರ್ಗಲ್ಲುಗಳು ಉಷ್ಣತೆಯಿಂದಾಗಿ ಕರಗಿ ಸಮುದ್ರವನ್ನು ಸೇರುತ್ತಿವೆ ಇದರಿಂದಾಗಿ ಭೂಮಿಯ ಮೇಲೆ ಪ್ರವಾಹ ಪರಿಸ್ಥಿತಿ ಏರ್ಪಡಬಹುದು ಎಂಬುದು ಪರಿಸರ ತಜ್ಞರ ಭಯ.

 ಪರಿಸರಕ್ಕೆ ಮತ್ತಷ್ಟು ಹಾನಿಯಾಗುತ್ತಿರುವುದು ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ. ದಿನವೊಂದಕ್ಕೆ ಇಡೀ ಜಗತ್ತಿನಲ್ಲಿ 20 ಲಕ್ಷ ಟನ್ ಗಿಂತಲೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ ಎಂದರೆ ನಾವು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳಬೇಕು. ಈ ಹಿಂದೆ ಅಮೆರಿಕಾದ ಒಂದು ಪ್ರಾಂತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೂಳಿದ ಜಾಗದಲ್ಲಿ ವಾಸವಾಗಿದ್ದ ಜನರ ಮಕ್ಕಳ ಅನುವಂಶೀಯ ಬೆಳವಣಿಗೆಯಲ್ಲಿ ವ್ಯತ್ಯಾಸವಾಗಿದ್ದು ಇತ್ತೀಚಿಗೆ ಅಲ್ಲಿ ಹುಟ್ಟಿದ ಮಕ್ಕಳು ದೈಹಿಕ ನ್ಯೂನ್ಯತೆಗಳನ್ನು ಹೊಂದಿದ್ದಾರೆ ಈ ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮಾಡಿದಾಗ ಹೊರ ಬಿದ್ದ ಆಘಾತಕಾರಿ ವಿಷಯ ಪ್ಲಾಸ್ಟಿಕ್ ತ್ಯಾಜ್ಯದ ಕಾರಣದಿಂದಾಗಿ ಹೊರಹೊಮ್ಮುವ ವಿಷಕಾರಿ ಅನಿಲಗಳು ಆ ಭೂಮಿಯನ್ನು ಹಾಳುಗೆಡವಿದ್ದು ಇದು ಮಕ್ಕಳ ಪಾಲಕರ ವಂಶವಾಹಿಗಳ ಮೇಲೆ ಪರಿಣಾಮವನ್ನು ಬಿರಿದ್ದು ಇತ್ತೀಚೆಗೆ ಹುಟ್ಟಿದ ಮಕ್ಕಳು ನ್ಯೂನತೆಗಳನ್ನು ಹೊಂದಿರಲು ಕಾರಣವಾಗಿದೆ. ಮತ್ತೆ ಬೃಹತ್ ನಗರಗಳ ಕೆಲವೆಡೆಗಳಲ್ಲಿ ಬೃಹದಾಕಾರದ ಪ್ಲಾಸ್ಟಿಕ್ ತ್ಯಾಜ್ಯಗಳ ಬೆಟ್ಟಗಳು ಉಂಟಾಗಿದ್ದು ಅಲ್ಲಿ ಸಾಮಾನ್ಯವಾಗಿ  ಪಕ್ಷಿಗಳು ತಮ್ಮ ಆಹಾರಕ್ಕಾಗಿ ಹಾರಾಡುತ್ತಿರುತ್ತವೆ. ಇಂತಹ ಪಕ್ಷಿಗಳ ಹಾರಾಟದಿಂದಾಗಿ ಅಲ್ಲಿ ಹಾರುವ ವಿಮಾನಗಳು ಅತಿ ವೇಗದಲ್ಲಿ ಹಾರುವ ಸಮಯದಲ್ಲಿ ಈ ಪಕ್ಷಿಗಳು ಅಡ್ಡ ಬರುವ ಕಾರಣ ಅಪಘಾತಗಳು ಉಂಟಾಗುವ ಸಾಧ್ಯತೆಗಳು ಕೂಡ ಇವೆ.

ಪರಿಸರ ಹಾನಿಗೆ ಸಾವಿರಾರು ಕಾರಣಗಳಿವೆ
ಆದರೆ ಅದನ್ನು ಉಳಿಸಿಕೊಳ್ಳಲು ನಾವು ಕೈಗೊಳ್ಳಬೇಕಾದ ಒಂದೇ ಒಂದು ಕಾರ್ಯವೆಂದರೆ ಗಿಡಗಳನ್ನು ನೆಟ್ಟು ಪೋಷಿಸುವುದು ತನ್ನ ಮೂಲಕ ಜೀವ ವೈವಿಧ್ಯಗಳ ರಕ್ಷಣೆ ಮಾಡುವುದು.
ಪರಿಸರ ರಕ್ಷಣೆಗೆ ಸರಪಳಿ ಕ್ರಿಯೆಯ ಮೊದಲ ಕೊಂಡಿ ನಾವಾಗಬೇಕು ವರ್ಷಕ್ಕೊಮ್ಮೆ ಕೇವಲ ಒಂದು ಗಿಡವನ್ನು ನೂರು ಜನ ಸೇರಿ ನೆಟ್ಟು ಫೋಟೋ ತೆಗೆಸಿಕೊಂಡು ಪೇಪರುಗಳಲ್ಲಿ ಹಾಕುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸುವ ಬದಲಾಗಿ ನಮ್ಮ ನಮ್ಮ ಮನೆಯಂಗಳದಲ್ಲಿ ಕುಟುಂಬದ ಸದಸ್ಯರಷ್ಟೇ ಸಂಖ್ಯೆಯ ಗಿಡಗಳನ್ನು ಪ್ರತಿ ವರ್ಷವೂ ನೆಡಬೇಕು. ಮನೆಯಲ್ಲಿ ಸಾಧ್ಯವಾಗದಿದ್ದರೆ ರಸ್ತೆಯ ಇಕ್ಕೆಲಗಳಲ್ಲಿ ನೆಡಬಹುದು. ನಮ್ಮ ಸುತ್ತಲಿನ ಪರಿಸರವನ್ನು ಸಾಧ್ಯವಾದಷ್ಟು ಚೊಕ್ಕಟವಾಗಿ ಇಟ್ಟುಕೊಳ್ಳಬೇಕು. ಹೆಚ್ಚು ಹೆಚ್ಚು ಗಿಡಮರಗಳು ಇದ್ದರೆ ಅತಿಯಾದ ವಾಹನ ದಟ್ಟಣೆಯಿಂದ ಉಂಟಾಗುವ ಇಂಗಾಲದ ಪ್ರಮಾಣವನ್ನು ಗಿಡ ಮರಗಳು ಹೀರಿಕೊಳ್ಳುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು.

 ಸಾಮುದಾಯಿಕ ಆಸ್ತಿಗಳೆಂದು ಪರಿಗಣಿಸಿ ನಮ್ಮ ನೀರಿನ ಮೂಲಗಳನ್ನು ಸಂರಕ್ಷಿಸಬೇಕು. ನಮ್ಮ ಮನೆಯ ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆ ಜೊತೆಗೆ ನೀರಿನ ಮೂಲಗಳಾದ  ಕೆರೆ,ಕಟ್ಟೆ,ನದಿಗಳಲ್ಲಿ ಪೂಜೆಯ ನೈರ್ಮಾಲ್ಯಗಳನ್ನು ಎಸೆಯದೆ ಕಾರ್ಖಾನೆಯ ರಾಸಾಯನಿಕಗಳನ್ನು ಎಸೆಯದೆ ಇರುವಂತೆ ಕ್ರಮಗಳನ್ನು ಕೈಗೊಳ್ಳಬೇಕು.

ರೆಡ್ಯೂಸ್, ರಿ ಯೂಸ್ ಮತ್ತು ರಿಸೈಕಲ್ ಎಂಬ ಮೂರು ಪದಗಳನ್ನು ನಮ್ಮ ದೈನಂದಿನ ಬದುಕಿನ ಮಂತ್ರಗಳಾಗಿಸಬೇಕು.
ಅತಿಯಾಗಿ  ಸಂಪನ್ಮೂಲಗಳನ್ನು ಫೋಲು ಮಾಡದೆ ಎಷ್ಟು ಬೇಕೋ ಅಷ್ಟೇ ಬಳಕೆ ಮಾಡುವ ಮೂಲಕ ನಮ್ಮ ಬಳಕೆಯನ್ನು ಕಡಿಮೆಗೊಳಿಸಬೇಕು (ರೆಡ್ಯೂಸ್) ಅಂದರೆ  ಪುನರ್ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವ ಎಲ್ಲ ವಸ್ತುಗಳನ್ನು ಮರುಬಳಕೆ (ರಿ ಯೂಸ್ )ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ. ಮುಖ್ಯವಾಗಿ ಬಳಸಿ ಬಿಸಾಡುವ ವಸ್ತುಗಳ ಬಳಕೆಯನ್ನು ಕಡಿಮೆಗೊಳಿಸಬೇಕು. ಪರಿಸರದಲ್ಲಿ ವಿಲೀನಗೊಳ್ಳುವ ಕರಗಿ ಹೋಗುವ ವಸ್ತುಗಳ ಬಳಕೆ ಹೆಚ್ಚಾಗಬೇಕು. ಮೂರನೆಯದಾಗಿ ರೀ ಸೈಕಲ್ ಅಂದರೆ ಕೆಲವು ಸಂಪನ್ಮೂಲಗಳನ್ನು ಮತ್ತೆ ಪುನರುಪಿಸಿ ಬಳಸಲು ಅನುವು ಮಾಡಿಕೊಳ್ಳಬೇಕು ಈ ರೀತಿ ಮಾಡುವ ಮೂಲಕ ನಾವು ನಮ್ಮ ಮೂಲಭೂತ ಸವಲತ್ತುಗಳ ಉಳಿಸಿಕೊಳ್ಳಬೇಕು.

ಪರಿಸರಕ್ಕೆ ಹಾನಿಯಾಗುವ ವಸ್ತುಗಳ ಬಳಕೆಯನ್ನು ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿಸಬೇಕು ಸಾಧ್ಯವಾದಷ್ಟು ವಸ್ತುಗಳನ್ನು ಪುನರ್ ಬಳಕೆ ಮಾಡಬೇಕು ಮತ್ತು ಪುನರ್ಬಳಕೆ ಸಾಧ್ಯವಾಗುವ ವಸ್ತುಗಳನ್ನು ಹೆಚ್ಚು ಬಳಸಬೇಕು ತನ್ಮೂಲಕ ನಮ್ಮ ಗ್ರಾಮವನ್ನು ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮುಂದೆ ಪರಿಸ್ಥಿತಿ ಗಂಭೀರವಾಗದಿರಲು ಭಾರತ ದೇಶಕ್ಕೆ ಐದು ನೂರು ಕೋಟಿ ಮರಗಳ ಅವಶ್ಯಕತೆ ಇದೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ಗಿಡಮರಗಳು ನಮ್ಮ ಬದುಕಿಗೆ ಜೀವದಾಯಿನಿಗಳು ಎಂಬುದನ್ನು ಅರಿತು ಪ್ರತಿ ಮನೆಯ ಮುಂದೆ ಒಂದು ಪುಟ್ಟ ತೋಟವನ್ನು ಮಾಡಿಕೊಂಡು ಗಿಡಮರಗಳನ್ನು ಬೆಳೆಸಿ ಪರಿಸರವನ್ನು ನಮ್ಮ ಕೈಲಾದಷ್ಟು ಉಳಿಸಿ ಬೆಳೆಸೋಣ.


Leave a Reply