ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಅಂತರಗಂಗೆ…

ಕಷ್ಟವಾದರೂ ಸರಿ
ಇಷ್ಟವಾದರೂ ಸರಿ
ಅಡಿಗೆ ಮಾಡಿ ಬಡಿಸಬಹುದು ಉಣ್ಣಿಸಲೂಬಹುದು
ಹಸಿವೆ ಇದ್ದಾಗ ಮಾತ್ರ

ಬಿಗಿದು ಅಪ್ಪಿಕೊಳ್ಳಬಹುದು
ಒಪ್ಪಿಕೊಳ್ಳಬಹುದು
ಸಿಡಿಮಿಡಿ ಗೊಳ್ಳಬಹುದು
ಪ್ರೀತಿಯ ಮಳೆಗೆರೆಯಬಹುದು ಮನಸ್ಸಿನೊಳಗೆ
ಪ್ರೀತಿ ಒಲವು
ತುಂಬಿದ್ದಾಗ ಮಾತ್ರ

ಕರಗಬಹುದು
ಮರುಗಬಹುದು
ನೋವ ನೀಗಬಹುದು
ಒಲವ ತೋರಬಹುದು
ಸ್ಪಂದಿಸುವ ಹೃದಯ
ಜೊತೆಗೆ ಇದ್ದಾಗ ಮಾತ್ರ

ಇರದ ಪ್ರೀತಿಗೆ
ಮೊಳ ಉದ್ದ ಮಲ್ಲಿಗೆ
ಕೆಂಪು ಗುಲಾಬಿ
ಎಲ್ಲವೂ ವ್ಯರ್ಥ
ಅರ್ಥವಿಲ್ಲದ
ಹುಚ್ಚು ಕನಸಿಗೆ

ಮಾತಲ್ಲಿ ನಯವಿರಲಿ
ಮುಖದಲ್ಲಿ ನಗುವಿರಲಿ
ಅಂಥ:ಕರಣದಲಿ
ಪ್ರೀತಿ ತುಂಬಿರಲಿ
ಒಲವ ಒರತೆ
ಜಿನುಗುತ್ತಿರಲಿ
ಪ್ರೀತಿಯ ಅಂತರಗಂಗೆ
ತುಂಬಿ ತುಳುಕುತ್ತಿರಲಿ

ಬಾಗಿ ಮಾಗಿದಾಗ
ಬದುಕುವುದ ಕಲಿತಾಗ
ಇಂಚಿಂಚೂ ಜೀವಿಸಿದಾಗ
ಸೋಲು ಗೆಲುವು ಯಾವಲೆಕ್ಕ
ಬದುಕು ಚೊಕ್ಕ ಚೊಕ್ಕ
ಎಲ್ಲವೂ ಪಕ್ಕಾ ಪಕ್ಕಾ

————————–

One thought on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಅಂತರಗಂಗೆ…

  1. ಬದುಕು ಎಂದರೆ ನಾಳಿನ ಒಲುಮೆ. ಬದುಕು ಎಂದರೆ ಎಲ್ಲವುಗಳ ನಡುವೆ ಇರುವ ಬಾಂಧವ್ಯದ ಬೆಸುಗೆ. ಮಾತು, ಮೌನ, ಪ್ರೀತಿ ಅಭಿಮಾನದ ಪರಿಭಾಷೆ. ಅಸ್ತಿತ್ವದಲ್ಲಿ ಅದರ ಅಂತರಂಗದ ಖುಷಿಯ ಸಾಕ್ಷಿಗಳು ಮನದಿ ಸದಾ ಜೀವಂತ. ಸೋಲು ಗೆಲುವಿನ ನಡುವೆ ಏನಿದ್ದರೂ ನೋಟ ಭಾವಕ್ಕೊಂದು ಹೊಸ ಮುನ್ನುಡಿ…….ಬದುಕು ಚೆಂದ ಬದುಕಲು ಎನ್ನುವ ಕವನದ ಅಂತರಾಳ ಸುಂದರ……. ಅಷ್ಟೇ ಸರಳ ……

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ.
    ಕುಮಟಾ.

Leave a Reply

Back To Top