ಗೊರೂರುಅನಂತರಾಜುರವರ ಕೃತಿ “ಚುಕ್ಕೆಯೊಂದು ನಿಬ್ಬೆರಗಾಗಿ ನಮ್ಮನೆ ನೋಡುತ್ತಿದೆ ಸಖಿ” ಕುರಿತುನಾರಾಯಣಸ್ವಾಮಿ (ನಾನಿ)ಯವರ ಲೇಖನ

[7:28 pm, 23/01/2024] anantharaju040: ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಬರಹಗಾರರ ಸಂಖ್ಯೆಯು ಹೆಚ್ಚಾಗುತ್ತಿದೆ. ಪ್ರಸ್ತುತ ಸಾಹಿತ್ಯ ಕ್ಷೇತ್ರದಲ್ಲಿ  ಪ್ರತಿಯೊಬ್ಬ ಬರಹಗಾರನಿಗೂ/ಬರಹಗಾರಳಿಗೂ ತಾನು ಕೃತಿಗಳನ್ನುಪ್ರಕಟಿಸಬೇಕು, ಕವಿಯಾಗಿ/ಕವಯತ್ರಿಯಾಗಿ/ ಲೇಖಕ/ಲೇಖಕಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಗೌರವ ಪುರಸ್ಕಾರಗಳಿಗೆ ಭಾಜನರಾಗಬೇಕೆಂಬ ಹಂಬಲ ಹೆಚ್ಚಾಗುತ್ತಿದೆ. ತಾನು ಬರೆದಿರುವ ಪುಸ್ತಕ ಹಲವಾರು ಜನರು ಓದಬೇಕೆಂದು ಬಯಸುವ ಬರಹಗಾರರು ಬೇರೆಯವರು ಬರೆದ ಪುಸ್ತಕಗಳನ್ನು ನಾವೂ ಓದಬೇಕು ಎಂಬ ಮನಸ್ಸು ನಮ್ಮಲ್ಲಿ ಕಾಣೆಯಾಗುತಿದೆ. ಇತ್ತೀಚಿನ ದಿನಮಾನಗಳಲ್ಲಿ ಓದುಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಅದರಲ್ಲೂ ತಾನು ಓದಿದ ಪುಸ್ತಕವನ್ನು ಪರಿಚಯ/ವಿಮರ್ಶೆ  ಮಾಡುವುದಕ್ಕೆ ಯಾರಿಗೂ ಸಮಯವಿಲ್ಲಾ, ತನ್ನ ಸಮಯವನ್ನೆಲ್ಲಾ ಈ ಮೊಬೈಲ್ ಎಂಬ ಮಾಯಲೋಕ ಕಸಿದುಬಿಟ್ಟಿದೆ.
ಹಿಂದಿನ ಕಾಲದಲ್ಲಿ ಒಬ್ಬ ಕವಿ ಅಥವಾ ಲೇಖಕ ಬರೆದ ಬರಹವನ್ನು ಹಿರಿಯ ಲೇಖಕರು ಓದುತ್ತಿದ್ದರು. ಆ ಕೃತಿಯು ಹೊಂದಿದ್ದ ಆಶಯವನ್ನು ವಿಮರ್ಶೆಯ ರೂಪದಲ್ಲಿ ಸಾಹಿತ್ಯ ಲೋಕದಲ್ಲಿ ದಾಖಲಿಸುತ್ತಿದ್ದರು. ಆ ಕೃತಿಯಲ್ಲಿನ ನ್ಯೂನತೆಗಳನ್ನು ಯಾವುದೇ ರಿಯಾಯಿತಿ ನೀಡದೆ ಹೊರಗೆಡವುತ್ತಿದ್ದರು. ಅದಕ್ಕೆ ಕಾರಣ ಆ ಲೇಖಕ ಮುಂದಿನ ಬರಹದಲ್ಲಿ ಆ ನ್ಯೂನತೆಗಳನ್ನು ಸರಿಪಡಿಸಿಕೊಂಡು ತನ್ನ ತಪ್ಪುಗಳನ್ನು ತಿದ್ದಿಕೊಂಡು, ಪ್ರಬುದ್ದತೆಯ ಸಾಹಿತ್ಯದೆಡೆಗೆ ನಡೆಯಲಿ ಎಂಬುದೇ  ವಿಮರ್ಶಕರ ಆಶಯವಾಗಿತ್ತು.
ವಿಮರ್ಶೆಯೆಂದರೆ ಕೃತಿಯು ಬರೆದ ಲೇಖಕನನ್ನೋ ಕೃತಿಯೊಳಗಿನ ಬರಹವನ್ನೋ ಹೊಗಳಿ ಬರೆಯುವುದಲ್ಲ. ಬರಹದೊಳಗಿನ ತಪ್ಪುಗಳನ್ನು ಕಂಡು ಹಿಡಿದು ಮುಂದೆ ಅದೇ ತಪ್ಪುಗಳು ಮುಂದುವರಿಯದಂತೆ ಎಚ್ಚರಿಕೆಯನ್ನು ನೀಡುವುದು. ಆ ಕೃತಿಯೊಳಗಿನ ಒಳ್ಳೆಯ ಸಂದೇಶಗಳನ್ನು ಎತ್ತಿಹಿಡಿದು ಮತ್ತಷ್ಟು ಓದುಗರು ಓದುವಂತೆ ಸಲಹೆ ನೀಡುವುದು. ಆ ಕೃತಿಯಲ್ಲಿನ ಅಂಶಗಳು ಈ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತವೆ ಎಂಬುದನ್ನು  ಓದುಗರ ಮನಕ್ಕೆ ತಲುಪಿಸುವುದನ್ನು ವಿಮರ್ಶೆ ಎನ್ನಬಹುದು.
ಯಾರದೋ ಮುತುವಜಿ೯ಗೆ ಬಿದ್ದೋ, ಇಲ್ಲ ನನ್ನ ಸಂಬಂಧಿಕರು ಇಲ್ಲ, ನನ್ನ ಸ್ನೇಹಿತರೋ ಎಂದು ತಿಳಿದು ಅವರು ಬರೆದ ಕೃತಿಯನ್ನು ಬರೀ ಹೊಗಳಿಕೆಯ ರೂಪದಲ್ಲಿ ವಿಮರ್ಶೆ ಬರೆದರೆ ಪರಿಚಯ ಮಾಡಿದರೆ ಅದು ವಿಮರ್ಶೆ  ಎನಿಸಿಕೊಳ್ಳುವುದಿಲ್ಲ. ಅದು ಕೃತಿಯ ಮಾರಾಟಕ್ಕೆ  ಜಾಹಿರಾತು ನೀಡಿದಂತೆ ಆಗುತ್ತದೆ.
ವಿಮರ್ಶೆ ಅಂದಾಗ ನನಗೆ ಒಂದು ಘಟನೆ ನೆನಪಾಯಿತು. ನಾನು ಹೊಸದಾಗಿ ಸಾಹಿತ್ಯ ಲೋಕಕ್ಕೆ ಬಂದಿದ್ದೆ. ಒಬ್ಬರು ಕವಯತ್ರಿ ಒಂದು ಕವಿತೆ ಕಳುಹಿಸಿ, ಈ ಕವಿತೆಯ ಬಗ್ಗೆ ನಿಮ್ಮ ವಿಮರ್ಶೆ ಬರೆಯಿರಿ ಅಂದರು. ನಾನು ನನ್ನ ಜ್ಞಾನದ ಮಟ್ಟಿಗೆ ಆ ಕವಿತೆಯೊಳಗಿನ ಲೋಪಗಳನ್ನು ಕಂಡು ಹಿಡಿದು ಹೇಳಿದ್ದೆ. ಆಗ  ಆ ಕವಿತೆ ಬರೆದ ಕವಯತ್ರಿ ನನ್ನ ಪ್ರಶ್ನೆ ಮಾಡಿದರು. ನಿಮಗೆ ವಿಮರ್ಶೆ  ಮಾಡುವುದು ಬರುತ್ತಾ? ನಿಮಗೆ ವಿಮರ್ಶೆ  ಮಾಡುವುದು ಗೊತ್ತಿದ್ದರೆ ಈ ಕವಿತೆಯ ಬಗ್ಗೆ  ನೀವು ಈ ರೀತಿಯಾಗಿ ಬರೆಯುತ್ತಿರಲಿಲ್ಲ ಅಂತ ಕೋಪಿಸಿಕೊಂಡರು. ಆಗ ನಾನು ಅವರಿಗೆ ಹೇಳಿದೆ “ಕವಿತೆ ಬರೆಯುವವರೆಗೆ ಮಾತ್ರ ಅದು ಕವಿಯ ಸ್ವತ್ತು, ಅದು ಹೊರಬಂದ ನಂತರ ಅದು ಓದುಗನ ಸೊತ್ತು ಅಂತ ಹಿರಿಯರು ಹೇಳಿದ್ದಾರೆ. ಪ್ರತಿಯೊಬ್ಬರ ಮನಸ್ಥಿತಿಯೂ ಒಂದೇ ತೆರನಾಗಿ ಇರಲಾರದು. ನಿಮ್ಮ  ಕವಿತೆಯನ್ನು ಓದಿದಾಗ ನನ್ನ ಮನದಲ್ಲಿ ಮೂಡಿದ ಭಾವನೆಗಳನ್ನು ಹೊರಹಾಕಿದ್ದೇನೆ ಅಷ್ಟೇ. ನಿಮ್ಮ ಕವಿತೆಯನ್ನು ಹೊಗಳಿ ಬರೆದಿದ್ದರೆ ಈ ಮಾತು ನೀವು ನನ್ನ ಕೇಳುತ್ತಿರಲಿಲ್ಲ ಅದರೆ ನಾನು ನನ್ನ ಭಾವನೆಗಳನ್ನು ಹೊರಹಾಕಿದ್ದೇನೆ ನೀವು ನನ್ನ ವಿಮರ್ಶೆಯನ್ನು ಒಪ್ಪಬಹುದು ಬಿಡಬಹುದು ಎಂದು ಹೇಳಿದೆ. ಮತ್ತೆಂದು ಅವರು ನನ್ನನ್ನು ವಿಮರ್ಶೆ ಮಾಡಲು ಕೇಳಲಿಲ್ಲ. ಅವರ ಕವಿತೆಯನ್ನು ಹೊಗಳಿ ಬರೆಯದಿದ್ದೆ ನನ್ನ ತಪ್ಪಾಯಿತು ಅನಿಸುತ್ತದೆ. ಬರಹಗಾರನ ಮನಸ್ಥಿತಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಬೆಳೆಯುವ ಗುಣಗಳನ್ನು ಬೆಳೆಸಿಕೊಂಡು ಮುಂದೆ ಸಾಗಬೇಕು.
ಇತ್ತೀಚೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶ ಕರು ಕಡಿಮೆಯಾಗುತ್ತಿದ್ದಾರೆ. ಕೆಲವರು ಪುಸ್ತಕಗಳ ಪರಿಚಯವನ್ನು ಅಷ್ಟೇ ಮಾಡುತ್ತಿದ್ದಾರೆ. ಪುಸ್ತಕದೊಳಗಿನ ಬರಹದ ಗಟ್ಟಿತನವನ್ನು ಪ್ರಬುದ್ಧತೆಯ ಬರಹದೆಡೆಗೆ ಯುವ ಬರಹಗಾರರಿಗೆ ದಾರಿ ತೋರುವ ಪ್ರಯತ್ನ ಇಂದಿನ ಸಾಹಿತ್ಯ ಕ್ಷೇತ್ರದಲ್ಲಿ ನಡೆಯುತ್ತಿಲ್ಲ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ಲೋಕಾರ್ಪಣೆ ಮಾಡಿ ಹಿರಿಯ ಬರಹಗಾರರೆಂದೆ ಗುರುತಿಸಿ ಕೊಂಡಿರುವ ಗೊರೂರು ಅನಂತರಾಜು ಹಲವಾರು ಪುಸ್ತಕ ವಿಮರ್ಶೆಯ ಕೃತಿಗಳನ್ನು ಹೊರತಂದು ಇತ್ತೀಚೆಗೆ ಕನ್ನಡ ಸಾಹಿತ್ಯ ವಲಯದಲ್ಲಿ ವಿಮರ್ಶಕರೆಂದೆ ಗುರುತಿಸಿಕೊಂಡಿದ್ದಾರೆ. ಇವರು ಚುಕ್ಕಿಯೊಂದು ನಿಬ್ಬೆರಗಾಗಿ ನಮ್ಮನ್ನೆ ನೋಡುತಿದೆ ಸಖಿ ಎಂಬ ವಿಮರ್ಶಾ ಕೃತಿಯಲ್ಲಿ ತಾವು ಓದಿದಂತಹ ಹಲವಾರು ಕೃತಿಗಳ ಬಗ್ಗೆ ಬಹಳಷ್ಟು ಸೊಗಸಾಗಿ ತಕ೯ಬದ್ದವಾಗಿ ಪ್ರತಿಯೊಂದು ಕೃತಿಯೊಳಗಿನ ಅಂಶಗಳನ್ನು ಆವಲೋಕಿಸುತ್ತಾರೆ.
ಗೊರೂರು ಅನಂತರಾಜು ರವರು ಈ ಕೃತಿಯಲ್ಲಿ ಸುಮಾರು  34 ಕೃತಿಗಳ ಬಗ್ಗೆ  ಬಹು ವಿಸ್ತಾರವಾಗಿ, ಆ ಕೃತಿಗಳ ಲೇಖಕರನ್ನು, ಆ ಕೃತಿಯೊಳಗೆ ತನ್ನ ಮನವನ್ನು ಕಾಡಿದ ಸಾಲುಗಳನ್ನು ಉಲ್ಲೇಖಿಸುತ್ತಾರೆ. ಕೃತಿಯಲ್ಲಿನ ಪ್ರತಿಯೊಂದು ವಿಷಯಗಳನ್ನ ವಿವರಿಸುತ್ತಾ ಅದರ ಮೌಲ್ಯವನ್ನು ಹೆಚ್ಚಿಸುತ್ತಾ ಸಾಗುತ್ತಾರೆ.
ಈ ಕೃತಿಗೆ ನನ್ನ  ಅಂತರಂಗದ ಧ್ಯಾನ ಗಜಲ್ ಯೆಂಬ ಗಜಲ್ ಕೃತಿಯೊಳಗಿನ ಒಂದು ಗಜಲ್ ಸಾಲನ್ನು ಈ ವಿಮರ್ಶಾ   ಕೃತಿಗೆ ಹೆಸರನ್ನಾಗಿ ಬಳಸಿಕೊಂಡಿದ್ದು ಖುಷಿಯ ವಿಚಾರ. ಮತ್ತು ನನ್ನ ಗಜಲ್ ಸಾಲು ಚಿರಶಾಶ್ವತವಾಗಿ ಉಳಿಯುವಂತೆ ಮಾಡಿದ ಗೊರೂರು ಅನಂತರಾಜು ರವರಿಗೆ ತುಂಬು ಹೃದಯ ಧನ್ಯವಾದಗಳು.  ಈ ಕೃತಿಯಲ್ಲಿನ ಮೊದಲ ಬರಹ, ನನ್ನ ಮೊದಲ ವಿಮರ್ಶಾ ಕೃತಿಯಾದ ಹಲವು ಪುಸ್ತಕಗಳ ಅವಲೋಕನ ಕೃತಿಯ ಬಗ್ಗೆ ಅವರು ಬರೆದಿರುವ ಸಾಲುಗಳಿದ್ದರೂ ಕೂಡ, ನಾನು ಆ ಸಾಲುಗಳನ್ನು ಉಲ್ಲೇಖಿಸದೇ ಇತರ ಬರಹದ ಕಡೆಗೆ ಸಾಗುವೆ.
 ಟಿ ಶಂಕರಪ್ಪನವರು ಬರೆದಿರುವ ಜೀವನ ನಿರಂತರ ಎಂಬ ಕೃತಿಗೆ “ಹುಚ್ಚು ಕೊಡಿ ಮನಸ್ಸು ಅದು ಹದಿನಾರರ ವಯಸ್ಸು” ಎಂಬ ಶೀರ್ಷಿಕೆಯನ್ನು ಕೊಟ್ಟು ಬರೆದಿರುವಂತಹ ಕಾದಂಬರಿಯ ಪರಿಚಯವನ್ನ ಮಾಡುತ್ತಾ, ಈ ಕಾದಂಬರಿಯು ಪ್ರೀತಿ ಪ್ರೇಮ ತ್ಯಾಗದ ಪ್ರತಿಕವಾಗಿದೆ.  ಈ ಕಥಾನಕದಲ್ಲಿ ಪ್ರೇಮದ ಭಾವನೆಗಳಿಂದ ದೂರವಿದ್ದ ಯುವಕ. ಪ್ರೇಮದ ಮೋಹದ ಜಾಲದಲ್ಲಿ ಸಿಲುಕುತ್ತಾನೆ. ತನ್ನ ಪ್ರೀತಿಯು ಫಲಿಸದೆ ಭಗ್ನ ಪ್ರೇಮಿಯಾಗಿ ನೋವನ್ನು ಅನುಭವಿಸುತ್ತಾನೆ. ಕೊನೆಗೆ ತನ್ನ ಪ್ರೀತಿ ಬಯಸಿ ಬಂದ ಹುಡುಗಿಯನ್ನ ನಿರಾಕರಿಸಿ,  ತನ್ನ ಜಾತಿಯ ಹುಡುಗಿಯನ್ನೇ  ಮದುವೆಯಾಗಿ ತಂದೆ ತಾಯಿಯ  ಆಶಯವನ್ನು ಈಡೇರಿಸುತ್ತಾನೆ. ಈ ಕೃತಿಯು ಜೀವನ ಕ್ಷಣಿಕವಲ್ಲಾ, ಅದೊಂದು ಭಾವನಾತ್ಮಕ ಬದುಕು ಎಂಬುದನ್ನ ನಿರೂಪಿಸುತ್ತದೆ. ಈ  ಕಾದಂಬರಿಯಲ್ಲಿ ಭಾವನಾತ್ಮಕ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ವಿವಿಧ ಆಯಾಮಗಳಿವೆ
ಎಂಬುದನ್ನು ಈ ಕೃತಿಯು ಸಾರುತ್ತದೆ ಎಂಬುದನ್ನು ವಿಮರ್ಶಕರು ಬಹಳಷ್ಟು ಸೊಗಸಾಗಿ ಪುಸ್ತಕವನ್ನು ಪರಿಚಯಿಸಿದ್ದಾರೆ.
“ತಲೆ ಸವರಿ ಕಳುಹಿಸಿ ಕೊಟ್ಟಿದ್ದ ಆ ಜೀವಾತ್ಮ ಕೊನೆಯುಸಿರೆಳೆದಿತ್ತು”. ಎಂಬ ಶೀರ್ಷಿಕೆಯಲ್ಲಿ ಬರೆದ ಈ ಸಾಲುಗಳು ಸೀತಮ್ಮ ವಿವೇಕ್ ರವರು ಬರೆದ ಮೂರನೇ ಕೃತಿಯಾಗಿದ್ದು, ಇದು ಇವರ ಮೊದಲ ಕವನ ಸಂಕಲನ.  ಲೇಖಕರು ಇತಿಹಾಸ ಸ್ನಾತಕೋತ್ತರ ಪದವಿದರರು ಕ್ರೀಡಾಪಟು ಸಹ ಆಗಿದ್ದರು. ತನ್ನ ಕ್ರೀಡಾಲೋಕದ ಬಗ್ಗೆ ಕವಿತೆಯ ಸಾಲುಗಳನ್ನ  ಈ ಕೃತಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.


 “ಅಂದು ನಾನು ಬೆನ್ನತ್ತಿದ ಕ್ರೀಡೆ ಭಜಿ೯ ಎಸೆತ
ಇಂದು ನನನ್ನು ಮಾಡಿದೆ ಪ್ರಫುಲ್ಲ ಪುಳಕಿತ”


ಎಂದು  ಹೇಳಿಕೊಳ್ಳುತ್ತಾರೆ. ನಾನು ಬಾಲ್ಯದಲ್ಲಿ ತೊಡಗಿಸಿಕೊಂಡಿದ್ದ ಕ್ರೀಡೆ, ಇಂದು ನನ್ನ  ಭವಿಷ್ಯವನ್ನು  ಬೆಳಗಿದೆ ಎಂದು ಸಾರುವ ಕೃತಿಯ ಸಾಲುಗಳನ್ನು  ಪರಿಚಯಿಸುತ್ತಾ, ಕೃತಿಯನ್ನು ಓದಿದಾಗ ತನ್ನ  ಮನದಾಳದಲ್ಲಿ ಮೂಡಿದ ಭಾವನೆಗಳನ್ನ ವಿಮರ್ಶಕರಾದ ಗೊರೂರು ಅನಂತರಾಜುರವರು ಓದುಗರ ಮನದಾಳಕ್ಕೆ ತಲುಪಿಸಲು ಪ್ರಯತ್ನಪಟ್ಟಿದ್ದಾರೆ.
ಹೇಮಾವತಿ ತೀರ ಅಕ್ಕಿ ಹೆಬ್ಬಾಳು ಶೀರ್ಷಿಕೆಯಲ್ಲಿ ಬರೆದಂತಹ  ವಿಮರ್ಶೆಯು ಹೇಮಾವತಿ ತೀರದ ಲೇಖಕ ಮಹಮ್ಮದ್ ಅಜುರುದ್ಧಿನ್ ಅವರ ಕೃತಿಯಾಗಿದ್ದು  ಈ ಕೃತಿಯು ಅಕ್ಕಿ ಹೆಬ್ಬಾಳು ನಾಲೆಯ ಬಗ್ಗೆ, ಆ ಪ್ರದೇಶದ ಸಾಂಸ್ಕೃತಿಕ ಲೋಕದ ಬಗ್ಗೆ, ಆ ಪ್ರದೇಶದಲ್ಲಿರುವ  ದೇವಸ್ಥಾನಗಳು, ಧಾಮಿ೯ಕತೆಯ ರೀತಿ ನೀತಿಯ ಬಗ್ಗೆ ಇರುವ ಇತಿಹಾಸವನ್ನು ಸಾರುವ ಕೃತಿಯಾಗಿದೆಯೆಂದು ಸೊಗಸಾಗಿ ವಿಮರ್ಶಿಸಿದ್ದಾರೆ ವಿಮರ್ಶಕರು.
 ನಂತರದಲ್ಲಿ “ಇಪ್ಪತ್ತೆಂಟು ಹಳ್ಳಿಗಳ ಕತ್ತರಿಘಟ್ಟ ಹರಿಸೇವೆ” ಎಂಬ ಶೀರ್ಷಿಕೆಯಲ್ಲಿ ಬರೆದ ವಿಮರ್ಶೆಯು ಹಾಸನ ಜಿಲ್ಲೆಯ ಪಂಡಿತ ಸ್ವಾಮಿಗೌಡರ ಧಾರ್ಮಿಕ ವಿಚಾರಗಳನ್ನ ಪ್ರಸ್ತುತಪಡಿಸುವಂತಹ ಕೃತಿಯಾಗಿದ್ದು ಸ್ವಾಮಿಯ ಅಥವಾ ವೆಂಕಟೇಶ್ವರನ ಭಕ್ತಿ ಪೂಜೆಗಳು, ಅವನ ಮಹಿಮೆ ಮತ್ತು ದೇವಸ್ಥಾನದಲ್ಲಿ ತಾಮ್ರದ ಕಳಸದ ಪ್ರತಿಷ್ಠಾಪನೆ ಮುಂತಾದ ವಿಷಯಗಳ ಮೇಲೆ ಈ ಕೃತಿಯು ಬೆಳಕು ಚೆಲ್ಲುತ್ತದೆ.
 “ಡಾ ಮಳಲಿ ವಸಂತಕುಮಾರ್ -ನಾಡಪ್ರಭು ಕೆಂಪೇಗೌಡ” ಶೀರ್ಷಿಕೆಯಲ್ಲಿ ಬರೆದ ಬರಹದಲ್ಲಿ ಬೆಂಗಳೂರನ್ನು ಕಟ್ಟಿ ಬೆಳೆಸಿದ ಕರುನಾಡಿನ ಪ್ರಭು ಕೆಂಪೇಗೌಡರ ಆಳ್ವಿಕೆಯಲ್ಲಿ ನಾಡಿನ ಜನರಿಗೆ ಜೀವನದ ಪರಿಸ್ಥಿತಿ, ಆಡಳಿತದ ರೀತಿ
ನೀತಿಗಳನ್ನು, ಕೆಂಪೇಗೌಡನ ಆಳ್ವಿಕೆಯಲ್ಲಿ ಇದ್ದ ಬೆಂಗಳೂರಿನ ಅಕ್ಕಪಕ್ಕದ ಇತರ ಪ್ರದೇಶಗಳು, ಮಾಗಡಿ ರಾಜವಂಶದ ರಾಜರುಗಳು ಅಳ್ವಿಕೆಯ ಮೇಲೆ ಈ ಕೃತಿಯು ಬೆಳಕು ಚೆಲ್ಲುತ್ತಿದ್ದು ಈ ಕೃತಿಯಲ್ಲಿ ಕೆಂಪೇಗೌಡರ ಇತಿಹಾಸದ ಚರಿತ್ರೆಯನ್ನು ತಮ್ಮ ಕೃತಿ ಪರಿಚಯ ವಿಷಯದಲ್ಲಿ ಗೊರೂರು ಅನಂತರಾಜು ರವರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
 ನಂತರದಲ್ಲಿ ಬರುವ ಕನಕದಾಸರ ಭಾವಧಾರಿತ ಬರಹವು ದಾಸ ಪರಂಪರೆ ಮತ್ತು ಕನಕದಾಸರ ಖಂಡೋಕ್ತಿಗಳನ್ನು ತಿಳಿಸಿದರೆ, ಡಿ ಆರ್. ನಾಯ್ಕ ಕುಮಟದ ಹೊಳೆಗದ್ದೆಯವರು ಬರೆದಿರುವ ಪಾಟಿ ಚೀಲ ಮಕ್ಕಳ ಕವಿತೆಗಳು ಕೃತಿಯು ಬಾಲ್ಯದ ದಿನಗಳ ಪುಸ್ತಕಗಳಲ್ಲಿ ಓದುತ್ತಿದ್ದ ಕವಿತೆಗಳು ನೆನಪಾಗುತ್ತವೆ. ಈ ಕೃತಿಯಲ್ಲಿರುವ ಸಾಲುಗಳು ಮಕ್ಕಳ ಮನದಲ್ಲಿ ಉಳಿಯುವ ಕವಿತೆಗಳಾಗಿವೆ ಎನ್ನುತ್ತಾರೆ ವಿಮರ್ಶಕರು.
ನಗೆಯ ಲೇಪನ ಅಪ್ಪ-ಮಗ ಹ್ಯಾಗ್ ಸತ್ತ” ಇದೊಂದು ಹಾಸ್ಯ ಪೇರಿತವಾದ ನಾಟಕ ಕೃತಿಯಾಗಿದ್ದು ಇದರಲ್ಲಿ ಬರುವ ಸಂಭಾಷಣೆಯು ಮೂರು ಪಾತ್ರಗಳಲ್ಲಿ ನಾಟಕವನ್ನು ಆವರಿಸಿಕೊಂಡಿದೆ. ಹಾಸ್ಯ ರಸಾಯನ ದೃಶ್ಯಗಳು ಚಂದವಾಗಿ ಈ ಕೃತಿಯಲ್ಲಿ ನಿರೂಪಿತವಾಗಿವೆ. ಕನ್ನಡ ಇಂಗ್ಲಿಷ್ ಭಾಷಾ ಮಿಶ್ರಣದಲ್ಲಿ ನಗೆ ಉಕ್ಕಿಸುವ ಪ್ರಯತ್ನವಿದೆಯೆಂದು ಸುಂದರವಾಗಿ ವಿವರಿಸುತ್ತಾ ಸಾಗುತ್ತಾರೆ ಲೇಖಕರು.
 “ಪ್ರಜಾಮುಖಿಯೊಂದಿಗೆ ಮುಖಾಮುಖಿ ಶೀರ್ಷಿಕೆ
ಯಲ್ಲಿ  ಬರೆದ ಈ ಕೃತಿಯು ಒಂದು ಸಂಪಾದಿತ ಕೃತಿಯಾಗಿದೆ. ಇದರ ಸಂಪಾದಕರು Ramesh ಸುವೇ೯ ಕನ್ನಡ  ಸಂಘಟಕರಾಗಿದ್ದು  ಅವರು ನಡೆಸಿದ ಕಾರ್ಯಕ್ರಮಗಳಲ್ಲಿ ನಡೆದ ಕವಿಗೋಷ್ಠಿ ಮತ್ತು ಹಲವು ಚುಟುಕು ಪದ್ಯಗಳು ಈ ಕೃತಿಯಲ್ಲಿ ಇದ್ದು ಓದುಗರ ಮನವನ್ನ ಸೆಳೆಯುತ್ತವೆ.
“ಎಕ್ಸ್ ಪ್ಲೆಸಿಸ್ ಪದ್ಯಗಳ ಕಾವ್ಯ” ಮೈಸೂರಿನ ಜಿ.ರಾಮೇಗೌಡರು ವಾಟ್ಸಪ್ ಚಿತ್ರಗಳಿಗೆ ಕಾವ್ಯ ರಚಿಸಿ ಸೃಷ್ಟಿ ಸಂದೇಶಕ್ಕೆ ಅಕ್ಷರಗಳ ರೂಪವನ್ನ ಕೊಟ್ಟ ನೂರ ಅರವತ್ತು ನಾಲ್ಕು  ದೃಶ್ಯ ಕಾವ್ಯಗಳು ಈ ಸಂಕಲನದಲ್ಲಿ  ಪ್ರಕಟವಾಗಿದೆ.
 “ನಿಂತು ಹೋದ ರಂಗಭೂಮಿ ಪತ್ರಿಕೆಯ ಲೇಖನ ಸಂಗ್ರಹ”  ಬರಹದಲ್ಲಿ ರಂಗಭೂಮಿ ಕಲಾವಿದರು ಸಲ್ಲಿಸಿದ ಸೇವೆ, ಹಲವಾರು ಮಹನೀಯರ ವ್ಯಕ್ತಿ ಚಿತ್ರಣ ಚಿತ್ರಿತವಾಗಿ ಅವರ ಪರಿಚಯವನ್ನು ಈ ಕೃತಿಯು ಹೊರ ಜಗತ್ತಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
” ಕಾಡು ಪ್ರೀತಿಯ ಗುಬ್ಬಚ್ಚಿ ಗೂಡು” ಚೆನ್ನರಾಯಪಟ್ಟಣದ ಎ.ಜಿ. ರಾಜು ಬರೆದ ಈ ಕಾದಂಬರಿಯು ಪ್ರಕೃತಿ ಮಾತೆಯ ಮೇಲೆ ಮನುಜ ನಿರಂತರವಾಗಿ ನಡೆಸುತ್ತಿರುವ ದೌರ್ಜನ್ಯಕ್ಕೆ ಆ ಪ್ರಕೃತಿ ಮಾತೆಯು ಮುನಿದು ಪ್ರಸ್ತುತ ಭೂಮಿಯ ಮೇಲೆ ಆವಘಡಗಳು ಅನಾಹುತಗಳು ಸಂಭವಿಸುತ್ತವೆ ಎಂದು ತಿಳಿಸುತ್ತಾ ಒಂದು ಸಂದೇಶವನ್ನು ನೀಡುತ್ತಾರೆ. ಒಂದು ಮರವನ್ನ ಕಡಿದರೆ ಆ ಕಡಿದ ಮರಕ್ಕೆ ಪ್ರತಿಯಾಗಿ ಒಂದು ಗಿಡವನ್ನು ಬೆಳೆಸುವ ಸಂದೇಶ. ಮುಂದಿನ ಮಕ್ಕಳಿಗೂ ಪ್ರಕೃತಿ ಮಾತೆ ನೆರವಾಗಲಿ ಎಂಬ ಆಶಯವನ್ನು ಲೇಖಕರು ವಿವರಿಸಿದ್ದಾರೆ
“ಯುವಕವಿಗಳ ಭಾವಾಭಿವ್ಯಕ್ತಿ ಕಾವ್ಯದೀವಿಗೆ” ಈ ಶೀರ್ಷಿಕೆಯಲ್ಲಿ ಬರೆದ ಕವನ ಸಂಕಲನದ ಕೃತಿಯಲ್ಲಿ ಸುಮಾರು 62 ಹೊಸ ತಲೆಮಾರಿನ ಕವಿಗಳ ಕವಿತೆಗಳು ಈ ಸಂಕಲನದಲ್ಲಿದೆ. ಈ ಕವಿತೆಗಳಲ್ಲಿ   ಮೈಮನಗಳ ತುಮುಲುಗಳಿಂದ ಹಿಡಿದು ಸಮಕಾಲಿನ ಸಾಮಾಜಿಕ, ರಾಜಕೀಯ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತಾ, ಓದುಗರನ್ನು ಭಾವ ಜಗತ್ತಿನ ನೋಡುವಂತೆ ಮಾಡಿಸುತ್ತವೆ ಎಂದು ಪುಸ್ತಕ ಪರಿಚಯಿಸಿದ್ದಾರೆ ಲೇಖಕರು.
” ಗುರುಗಳಿರಲಿ.. ನಮಿಸು ಕಂದಾ ನಗುತಲಿ”  ಎಂಬ ಶೀರ್ಷಿಕೆಯಲ್ಲಿ  ಬರೆದ ಬರಹವು ಶ್ರೀಮತಿ ಸುಶೀಲ ಸೋಮಶೇಖರ್ ರವರ ವಚನಗಳ ಸಮುಚ್ಚಯವಾಗಿದ್ದು,  ಮಕ್ಕಳು ಓದಲು ಸುಲಭವಾದ ಪದ್ಯಗಳಿವೆ ಈ ಕೃತಿಯಲ್ಲಿ..ಈ ವಚನ ಸಂಕಲನದಲ್ಲಿ ವಚನಗಳಿಗೆ ತಕ್ಕ ರೇಖಾ ಚಿತ್ರಗಳು ಕೂಡ ಕೂಡ ಓದುಗರ ಗಮನ ಸೆಳೆಯುತ್ತವೆ ಎಂದು ಹೇಳುತ್ತಾರೆ.
 ಚುಕ್ಕಿಯೊಂದು ನಿಬ್ಬೆರಗಾಗಿ ನಮ್ಮನ್ನೇ ನೋಡುತಿದೆ..ಎಂಬ ವಿಮರ್ಶಾ ಕೃತಿಯಲ್ಲಿನ ಎಲ್ಲಾ ಬರಹಗಳನ್ನು ಪರಿಚಯ ಮಾಡುತ್ತಾ ಹೋದಂತೆ ಓದುಗನಲ್ಲಿ ಮುಂದೆ ಓದಲು ನಿರಾಸಕ್ತಿ ಮೂಡಬಹುದು ಎಂಬ ಭಾವನೆಯಿಂದ ಸರಳಿಕರಿಸುತ್ತಾ “ಬದುಕು ಚಕ್ಕಡಿ ಬಾಳ್ವೆ ತಕ್ಕಡಿ” ಬರಹ ಎ. ಸಿ. ರಾಜಪ್ಪನವರ ಕವನ ಸಂಕಲನವಾಗಿದೆ. “ಹಳ್ಳಿಯ ಬದುಕಿನ ನೈಜ ಚಿತ್ರ, ಮುದುಕಿಗೂ ಮುದುಕನಿಗೂ ಎಲ್ಲೆಲ್ಲಿ ಮಾತಾಯಿತು, ಒಬ್ಬರೊಬ್ಬರು ಹಾರಬಲ್ಲೆವು, ಶಾಸಕರ ಕೃಷಿ ಕಾಯಕವೆಂಬ ಬರಹ, ಅನುಭವಸಾರ ಬಣ್ಣದ ಬದುಕು ಯಾಕೂಬ  ರಂಗಕಲಾವಿದರ ರಂಗಭೂಮಿ ರಂಗಾಂತರಂಗ ಡಾಕ್ಟರ್ ಪ್ರದೀಪ್ ಕುಮಾರ್ ಹೆಬ್ರಿ ಮಂಡ್ಯ,  ಕಾಲ ಕಾಲವನ್ನೇ ನುಂಗಿ ಹಾಕುತ್ತದೆ ಹೊಟ್ಟೆ ಪಾಡಿದ maraket ನಲ್ಲಿ ಸುಳ್ಳಿನ ಮಾರಾಟ, ವಾಚಕರ ಕಲ್ಪನೆ ಸದಾ ಎಚ್ಚೆತ್ತಿರಬೇಕು ಗ್ರಂಥಾಲಯ..ಬಾ.ನಂ ಲೋಕೇಶ್,  ದೇಶ ಭಾವಗಳ ಆತ್ಮಾಭಿಮಾನ ಮಾನವ ಜನ್ಮ ದೊಡ್ಡದು, ನಗುವಿನ ಚಿತ್ತಾರ- ಸನ್ಮಾನ  ಪ್ರಶಸ್ತಿ ಪರಂತು, ಕಾವೇರಿಯ ಹರಿವು ಅರಿವು– ಸಂಗಮ. ಮುಂತಾದ ಶೀರ್ಷಿಕೆಯಲ್ಲಿ ಬರೆದ ವಿಮರ್ಶಾತ್ಮಕ ಲೇಖನಗಳು ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.
 “ಸಾಧಕರ ಸೇವೆಯ ಹಾದಿಯಲಿ” ಎಂಬ ಕೃತಿಯು ಗೊರೂರು ಅನಂತರಾಜು ಬರೆದಿದ್ದಾರೆ. ಈ ಕೃತಿಯನ್ನು ಶಿಕ್ಷಕರು ಶ್ರೀಮತಿ ಸಾವಿತ್ರಮ್ಮ  ಓಂಕಾರ್ ಬರೆದಿದ್ದು ಈ ಕೃತಿಯು ಅನಂತರಾಜುರವರ ಐವತ್ತನೇ ಕೃತಿಯಾಗಿದ್ದು ಈ ಕೃತಿಯಲ್ಲಿ ಹಲವು ಲೇಖಕರು ಸಾಧಕರನ್ನ ಲೇಖಕರು ಪರಿಚಯ ಮಾಡಿದ್ದಾರೆ ಎಂದು ಸಾವಿತ್ರಮ್ಮ ಓಂಕಾರ್ ರವರು ಈ ಕೃತಿಗೆ ಸೊಗಸಾಗಿ ವಿಮರ್ಶೆ  ಬರೆದಿದ್ದಾರೆ.
” ಹುಟ್ಟಿದವನಿಗೂ ಅಥ೯ವಾಗದ ಕವಿತೆಗಳು ನಿದ್ರೆಗೆ ಜಾರಿವೆ” ಶೀರ್ಷಿಕೆಯಲ್ಲಿ ಬರೆದ ಪುಸ್ತಕ ಪರಿಚಯವು ಹಿರಿಯ ಕವಿ ಸಂಗಾತಿ ಪತ್ರಿಕೆಯ ಸಂಪಾದಕರಾದ ಕು. ಸ. ಮಧುಸೂದನ್ ರವರ ಕವಿತೆಗಳನ್ನು ಅಥ೯ಪೂಣ೯ವಾಗಿ ವಿಶ್ಲೇಷಣಾತ್ಮಕವಾಗಿ ಬರೆದಿದ್ದಾರೆ.  ಕು. ಸ.  ಮಧುಸೂದನ್ ರವರ ಕವಿತೆಗಳು ವಿಶಿಷ್ಟವಾಗಿರುತ್ತದೆ. ನಾನು ಕೂಡ ಅವರ ಕವಿತೆಗಳ ಅಭಿಮಾನಿಯಾಗಿದ್ದೆ. ಗೊರೂರು ಅನಂತರಾಜು ಅವರ ಕವಿತೆಗಳ ಮಾಧುರ್ಯತೆಯನ್ನು ಸೊಗಸಾಗಿ ವಿವರಿಸಿದ್ದಾರೆ. ಕು.ಸ.ಮಧುಸೂದನ್ ರವರ ಒಂದು  ಕವಿತೆಯನ್ನು ನೋಡುವುದಾದರೆ
ನನ್ನ ಕಡು ಪಾಪದ ಕವಿತೆಗಳೂ
 ನಿನ್ನ ಪ್ರಖರ ಪುಣ್ಯದ ಕವಿತೆಗಳೂ
 ಒಂದಾದ ದಿನ ಹುಟ್ಟಿದ ಹೊಸ ಕವಿತೆ
ಕವಿತೆ ಅಂತಲೇ ಹೆಸರಿಡೋಣವೆ ?

ಗೊರೂರು ಅನಂತರಾಜು ಹಿರಿಯ ಲೇಖಕರಾದರೂ ಕೂಡ ಹೊಸದಾಗಿ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿರುವ ಯುವ ಪ್ರತಿಭೆಗಳನ್ನು ಪರಿಚಯ ಮಾಡುತ್ತಾ, ಅವರ ಪುಸ್ತಕಗಳನ್ನು ಓದಿ ವಿಮರ್ಶೆ  ಮಾಡುತ್ತಾ, ತಾನು ಬರೆದ ವಿಮರ್ಶೆಗಳನ್ನು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾ ಪ್ರೋತ್ಸಾಹ ನೀಡುವ ಪರಿಯು ಮೆಚ್ಚುವಂತದ್ದು ಮತ್ತು ಆಭಿನಂದನಾಹ೯ವಾಗಿದೆ.
ನನ್ನಂತಹ ಕಿರಿಯ ಬರಹಗಾರನಿಗೂ ತಮ್ಮ ಕೃತಿಗೆ ಬರೆಯಲು ಅವಕಾಶ ಕೊಟ್ಟಿರುವ ಗೊರೂರು ಅನಂತರಾಜುರವರಿಗೆ ನಾನು ಧನ್ಯವಾದಗಳು ಸಲ್ಲಿಸಲೇಬೇಕು. ಇದು ನನ್ನ ಮೊದಲ ಮುನ್ನುಡಿ, ನನಗೆ ಬದುಕಿನ ಕೊನೆಯಗಾಲದವರೆಗೂ ನೆನಪಿನಲ್ಲಿ ಉಳಿಯುವಂಥದ್ದು. ಅಂತಹ ಒಂದು ಸದಾವಕಾಶವನ್ನು ಕೊಟ್ಟ ಲೇಖಕರಿಗೆ ನನ್ನ ತುಂಬು ಹೃದಯದ ಧನ್ಯವಾದ ತಿಳಿಸುತ್ತಾ ಇವರು ಇನ್ನಷ್ಟು ಕೃತಿಗಳನ್ನು ಹೊರ ತರಲಿ ಇವರಿಗೆ ಕರುನಾಡಿನಲ್ಲಿ ಗೌರವ ಪುರಸ್ಕಾರಗಳು ಸಿಗಲಿ ಎಂದು ಹಾರೈಸುತ್ತಾ, ನನ್ನ ತೊದಲು ನುಡಿಯ ಸಾಲುಗಳಿಗೆ ವಿರಾಮ ಕೊಡುತ್ತಿದ್ದೇನೆ.


One thought on “ಗೊರೂರುಅನಂತರಾಜುರವರ ಕೃತಿ “ಚುಕ್ಕೆಯೊಂದು ನಿಬ್ಬೆರಗಾಗಿ ನಮ್ಮನೆ ನೋಡುತ್ತಿದೆ ಸಖಿ” ಕುರಿತುನಾರಾಯಣಸ್ವಾಮಿ (ನಾನಿ)ಯವರ ಲೇಖನ

  1. ಮುನ್ನುಡಿ ಮುಂದಿನ ಹೊನ್ನುಡಿಯಾಗಲಿ
    ‌ ‌ ‌ ೦೦೦
    ಜಿ.ಎಸ್.ಪ್ರಕಾಶ್,ಬೆಂಗಳೂರು-೯೭

Leave a Reply

Back To Top