ವ್ಯಾಸ ಜೋಶಿ ಅವರ ತನಗಗಳು

ಅದೃಷ್ಟದ ಮರಕೆ
ಬಳ್ಳಿಯ ಆಲಿಂಗನ,
ನಿತ್ಯ ಪಡೆಯುತಿದೆ
ಸುಮದ ಸುವಾಸನೆ.

ಬಳ್ಳಿಯು, ನೀರುಣಿಸಿ
ಸಾಕಿದ ಕುವರಿಗೆ
ಮರಳಿ ನೀಡುತಿದೆ
ವಾಸನೆಯ ಮಲ್ಲಿಗೆ.

ಚಂದದ ಗುಲಾಬಿಯು
ಆಕ್ರಮಣಕಂಜಿದೆ.
ಒಡಹುಟ್ಟಿದ ಮುಳ್ಳು
ಕಾವಲು ಕಾಯುತಿದೆ.

ಬಿದಿರ ಮಡಿಲಲಿ
ಚಿಗುರಿದ ಕಳಿಲು
ಬಲಿತು ಉಲಿಯಿತು
ಮಧುರದಿ ಕೊಳಲು.

ಹಸಿಯಾದ ಭೂಮಿಯು
ಹಾತೊರೆದು ಬೀಜಕೆ.
ಬೀಜ ಅನ್ನವ ಮಾಡಿ
ಸಲಹೋದು ಜಗಕೆ.

Preview in new tab

ಮೊಗ್ಗಿನ ಬಳಿ ಬಂದು
ಗುಂಯೆಂದ ಮಧುಕರ.
ಆಲಿಸಿದ ಆ ಮೊಗ್ಗು
ಹೂವಾಗಿ ಅರಳಿತು.

ಗುಂಯನ್ನೋದ ನಿಲ್ಲಿಸಿ
ದುಂಬಿ ಬಂತು ಮೆಲ್ಲಗೆ,
ಮೌನ ಸಮ್ಮತಿಯಲಿ
ಘಮಿಸಿತು ಮಲ್ಲಿಗೆ.


Leave a Reply

Back To Top