ಭಾರತಿ ಕೊಲ್ಲರಮಜಲು ಕವಿತೆ-ಶುಭದೊಸಗೆ

ಹೊಸ ವರುಷ ಹೊಸ ನೋಟದಲ್ಲದ್ದಿ
ಹೊಸ ಚಿಗುರಿನಲಿ ಹೊಸತನವನಪ್ಪಿ
ಹರುಷವ ಚೆಲ್ಲುತ್ತ ಬೊಗಸೆ ತುಂಬುತ
ಪದತಲಕೆ ನಮಿಸಿ ಆಶಯವ ಬೇಡಿ..

ಹೊಸ ದಿನವು ನೀಡುತ್ತ ಮತಿಯನ್ನು
ಕಾಯಕದಿ ತೊಡಗು ನೀ ಚೈತನ್ಯದಲ್ಲಿ
ಭಕುತಿ ಭಾವದ ಪೂಜೆ ನಿನ್ನೆದೆಯಲ್ಲಿ
ತರದಿಹುದೆ ಸುಖವ ಬದುಕಿನೊಳಗೆ

ಕವಿದಿರುವ ಕತ್ತಲೆಯ ಬದಿಗೊತ್ತರಿಸಿ
ಮುನ್ನುಗ್ಗಲು ನೀನಿಂದು ಹಗಲಿನತ್ತ
ಸುತ್ತು ಕಿರಣಗಳು ಬಳಸಿ ನಿಂತಿರಲು
ಇನ್ನೇಕೆ ತಡಮಾಡುವೆ ಬದಲಾಗಲು

ಬೇವು ಬೆಲ್ಲಗಳ ಜೊತೆಜೊತೆಯಲ್ಲಿ
ಸಹನೆ ಶಾಂತಿಗಳ ಧಾರಣೆಯಲ್ಲಿ
ನವ ಪಲ್ಲವಗಳು ಚಿಗುರೊಡೆಯುತ್ತ
ಹೂವರಳಿ ಗಂಧಬೀರಿ ಬಾಳಿನುದ್ದ

ಸುಖ ಸಮೃದ್ಧಿ ಸಂದೇಶ ಮಿಳಿತದಲಿ
ಹಬ್ಬದಡುಗೆಯ ಸವಿಯನ್ನು ಬೆರೆಸಿ
ಸಾಮರಸ್ಯದ ಹಾದಿಯದು ಎದುರು
ಹಿಂತಿರುಗಿ ನೋಡದಿರು ಇನ್ನೆಂದೂ

ಬರಮಾಡು ನಾಳೆಯ ನಗುಮೊಗದಿ
ಮರೆಯದೆಯೆ ನಿನ್ನೆಗಳ ನಡೆಯನ್ನು
ಬಾಳು ಸಾಗಲಿ ನಿಂತ ನೀರಾಗದೆಯೆ
ಹರಿಯುತ್ತ ಹರಿಸಲಿ ಭಾವನಾ ತಂತು


4 thoughts on “ಭಾರತಿ ಕೊಲ್ಲರಮಜಲು ಕವಿತೆ-ಶುಭದೊಸಗೆ

  1. ಹೊಸ ವರುಷ ಬರುತ್ತಿರಲಿ ಕವಿತೆಗಳು ಚೆಲ್ಲುತ್ತಾ ಹರುಷ ಭಾವನೆಗಳ ಸುತ್ತಮುತ್ತ , ನಿತ್ಯ ನೂತನವಾಗಲಿ ಜೀವನ , ಚಿಗುರೊಡೆಯಲಿ ಬಾಂಧವ್ಯ , ಇದು ಜಗದೊಡೆಯ ನಮಗಿತ್ತ ಬದುಕು.ಶುಭವಾಗಲಿ ಅನವರತ.

Leave a Reply

Back To Top