ಸುಧಾ ಪಾಟೀಲ್ ಕವಿತೆ-ಹೇಳಹೊರಟಿರುವೆ

ಸೌಜನ್ಯದ ಪಾಠವನು
ಸಮುಚ್ಚಯದ ಒಗ್ಗಟ್ಟನು
ತ್ಯಜಿಸದೆ
ವಾಚಾಳಿತನದ ಉಮೇದಿಯನು
ಮೂಢನಂಬಿಕೆಯ
ಪಿಡುಗನು
ಕ್ಷೀಣಗೊಳಿಸುತ್ತಾ
ಸಾಗೆಂದು
ಹೇಳಹೊರಟಿರುವೆ
ಬರೀ ಭಂಡಾಟಗಳ
ಈ ಜಗದಲಿ
ದಿಗ್ಗಜನಾಗಿ ಹೊರಡದೆ
ಕನ್ನಡದ ಆರತಿಯನ್ನು
ಎತ್ತಲು
ಉತ್ಕರ್ಷದ ಹಾದಿಯಲಿ
ಚಂದ್ರಹಾರದಂತೆ
ಕಂಗೊಳಿಸಿ
ಎಲ್ಲರಿಗೂ
ದಾರಿದೀಪವಾಗೆಂದು
ಹೇಳಹೊರಟಿರುವೆ
ಅಪ್ರಮೇಯನಾಗಿ
ಅಪ್ರತಿಮ ಕಾರ್ಯಗಳ
ಅನುವರ್ತಿಸು
ನಿರಂತರ
ಎಲ್ಲರ ಅನುಮೋದನೆಯಲಿ
ಸಾಕಾರಗೊಳಿಸು
ಜೊತೆಗಿದ್ದವರ ಅಭಿಲಾಷೆಯ
ಕೃತಜ್ಞತೆಯ
ಒಡಮೂಡಿಸಲು
ನೆರವಾಗುವ
ಪರಿಯಲಿ
ಬದುಕೆಂದು
ಹೇಳಹೊರಟಿರುವೆ
ನಾಗಾಲೋಟದ ಈ
ಜಗದಲಿ
ಅವಸರಿಸದೆ
ಪೇಳು ನಿನ್ನೊಳಗಿನ
ಅನುಭಾವವ
ಕಟ್ಟಿಕೊಡು
ಶರಣರ ವಚನಗಳ
ಸಾರದ ಬುತ್ತಿಯನು
ಅನುಸರಿಸು
ಅನವರತ ಶಾಂತಿ
ಸಮತೆಯ ಎಂದು
ಹೇಳಹೊರಟಿರುವೆ


One thought on “ಸುಧಾ ಪಾಟೀಲ್ ಕವಿತೆ-ಹೇಳಹೊರಟಿರುವೆ

Leave a Reply

Back To Top