ಅನುರಾಧಾ ರಾಜೀವ್ ಸುರತ್ಕಲ್ ಹೊಸ ಕವಿತೆ

ಇಬ್ಬನಿ ಹನಿಗಳ ಲಯಕೆ ಹೊಸತೇನು
ಬರೆದೆ ನೀನು
ಹಬ್ಬಿದ ಒಲವಿನ ಬಳ್ಳಿಗೆ ಸವಿಸಿಂಚನ
ಎರೆದೆ ನೀನು

ಎದೆಯ ಮಾತುಗಳ ಪದದ ರೂಪದಿ
ಹಂದರವ ಕಟ್ಟಿದೆಯಲ್ಲಾ
ಮಧುರ ಭಾವಗಳ ಮೋಹದಿ ಸನಿಹಕೆ
ಕರೆದೆ ನೀನು

ಮಬ್ಬಿನ ಬೆಳಕಲಿ ಓಡುವ ಮನಸಿಗೆ
ಕಡಿವಾಣ ಬೇಕು
ತುಂಬುತ ಬೊಗಸೆ ಪ್ರೇಮ ಹೃದಯವ
ತೆರೆದೆ ನೀನು

ತಬ್ಬಿದೆ ಹಿತವಾಗಿ ನಿಶ್ಚಿಂತೆ ಎನಿಸಲು
ಭಾರವ ಮರೆಯಬೇಕು
ಕಬ್ಬಿನ ಸಿಹಿಯನು ಬಾಳಲಿ ನೀಡುತ
ಮೆರೆದೆ ನೀನು

ನಂಬಿಕೆ ಮೂಡಿದೆ ರಾಧೆಗೆ ಸಾಂಗತ್ಯದಿ
ಭರವಸೆಯ ಬೆಳಕಾಗಿ
ಕಂಬನಿ ಒರೆಸುತ ಕರವನು ಹಿಡಿದು
ಪೊರೆದೆ ನೀನು


Leave a Reply

Back To Top