ಚೈತ್ರಮಂಡ್ಯ ಕವಿತೆ-ಕವಿತೆ ಎಂದರೇನು?

ಕವಿತೆ ಎಂದರೇನು ಗೆಳೆಯ?
ನುಡಿವ ಮಾತ ಮುರಿದು ತಿರಿದು
ಹರಿಸೊ ನಿಯತ ಪ್ರಾಸವೇ!

ಕವನ ಎಂದರೇನು ಗೆಳೆಯ?
ಮನದ ಭಾವ ಗದ್ಯರೂಪಿ
ಎಳೆದು ತರುವ ತ್ರಾಸವೇ!

ರಾಗವೆಲ್ಲಿ? ತಾಳವೆಲ್ಲಿ?
ಲಯವು ಎಲ್ಲಿ ಭಾವದಲ್ಲಿ!
ಪದದ ಮೋಡಿ ಚೋದ್ಯವೇ?

ಸುಪ್ತ ಅರ್ಥ ಬಟಾ ಬಯಲು
ಉಕ್ತ ನಿಯಮ ಮರೆಗೆ ಇರಲು
ಬರೆದುದೆಲ್ಲ ವೇದ್ಯವೇ?

ಯತಿಯ ಭಂಗ ಶ್ರುತಿಯ ಸಂಗ
ಸಾರ ತಿರುಳು ಇರದ ರಂಗ
ಗೀಚಿ ಎಸೆಯೊ ಕೂಪವೇ?

ರುಂಡವಿಲ್ಲ ಮುಂಡವಿಲ್ಲ
ಕರವು ಚರವು ಬೇಕೆ ಇಲ್ಲ
ಅದುವೆ ದೇಹ ರೂಪವೇ?

ಹೇಳೊ ಗೆಳೆಯ ಪಂಪ ಬೇಂದ್ರೆ
ಬಿಟ್ಟು ಹೋದ ಭವ್ಯ ತೇರು
ಹೊಸೆಯೆ ಸಿಗದ ಭಾಗ್ಯವೇ?

ತಮಗೆ ತಾವೆ ಕೊಟ್ಟು ಕೊಳುವ
ಬಿರುದು ಹಿರಿದು ಎಂತ ಮೋದ!
ಸರಸಿ ಮೌನ ಯೋಗ್ಯವೇ?


2 thoughts on “ಚೈತ್ರಮಂಡ್ಯ ಕವಿತೆ-ಕವಿತೆ ಎಂದರೇನು?

Leave a Reply

Back To Top