ಎ.ಎನ್.ರಮೇಶ್.ಗುಬ್ಬಿ ಕವಿತೆ- ಅಂತಿಮ ಸತ್ಯ.!

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ

ಅಂತಿಮ ಸತ್ಯ.!

ನಾವು ಕಳೆದುಕೊಳ್ಳಲೆಂದೆ ಬಂದವರಿಲ್ಲಿಗೆ
ಉಳಿವುದಾದರೇನಿದೆ ಇಲ್ಲಿ ಕಟ್ಟ ಕಡೆಗೆ
ಕೇವಲ ದಿಗಂಬರ ನಡಿಗೆ ಮಸಣದೆಡೆಗೆ
ಬದುಕು ಬಿರುಕು ಬಾಧೆಯೇಕೆ ಅಡಿಗಡಿಗೆ.!

ಬಯಸಿದ್ದೆಲ್ಲ ಸಿಕ್ಕುವುದಿಲ್ಲ ಬುವಿಯೊಳಗೆ
ಸಿಕ್ಕಿದ್ದೆಲ್ಲವು ದಕ್ಕುವುದಿಲ್ಲ ಬದುಕೊಳಗೆ
ಬರೆದಂತಾದೀತು ಭಗವಂತ ಹಣೆಯೊಳಗೆ
ನಿರ್ಲಿಪ್ತ ನಿರ್ಮೋಹಿಯಾಗಿಬಿಡು ನಿನ್ನೊಳಗೆ.!

ಅಂಟಿಕೊಂಡಷ್ಟು ನರಳಿಕೆಯೀ ಬದುಕಿಗೆ
ನಂಟು ಕಳಚಿಕೊಂಡರಷ್ಟೇ ದಾರಿ ಬೆಳಕಿಗೆ
ದೇಹಾತ್ಮಗಳೇ ಬೇರಾಗುವವು ಸಾವಿನಘಳಿಗೆಗೆ
ನನದೆನ್ನುವ ಭ್ರಮೆಯೇತಕೋ ನಶ್ವರ ಬಾಳಿಗೆ.!


ಎ.ಎನ್.ರಮೇಶ್.ಗುಬ್ಬಿ.

Leave a Reply

Back To Top