ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ29

ಆತ್ಮಾನುಸಂಧಾನ

ಯಕ್ಷಗಾನದ ಹುಚ್ಚು ಹಿಡಿಸಿದ ದಿನಗಳು

Yakshagana – SDMIT

ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವಾಗ ಆಯ್ದುಕೊಂಡ ಮುಖ್ಯ ಐಚ್ಛಿಕ ವಿಷಯ ಕನ್ನಡ, ಆಗ ನಮಗೆ ಕನ್ನಡ ಕಲಿಸಲು ಕಾಲೇಜಿನಲ್ಲಿ ಪ್ರೊ. ವಿ.ಏ, ಜೋಶಿ ಮತ್ತು ಪ್ರೊ. ಕೇ.ವಿ. ನಾಯಕ ಎಂಬ ಇಬ್ಬರು ಉಪನ್ಯಾಸಕರಿದ್ದರು. ಇಬ್ಬರೂ ಕನ್ನಡ ವಿಷಯ ಬೋಧನೆಯಲ್ಲಿ ಪರಿಣಿತರಾಗಿದ್ದರು.

ಹಳಗನ್ನಡ – ಹೊಸಗನ್ನಡ ಕಾವ್ಯಗಳನ್ನು ಜೋಶಿಯವರು ಲೀಲಾಜಾಲವಾಗಿ ಪಾಠ ಮಾಡುತ್ತಿದ್ದರೆ, ನಡುಗನ್ನಡ ಕಾವ್ಯಗಳನ್ನು, ಗದ್ಯ ಮತ್ತು ವ್ಯಾಕರಣಗಳನ್ನು ಅತ್ಯಂತ ಸುಲಲಿತವಾಗಿ ಪ್ರೊ. ಕೇ.ವಿ. ನಾಯಕ ಕಲಿಸುತ್ತಿದ್ದರು. ನಿಜವಾಗಿ ನನಗೂ, ನನ್ನಂಥ ಅನೇಕ ಗೆಳೆಯರಿಗೂ ಕನ್ನಡ ಕಲಿಕೆಯ ಸಾಕ್ಷಾತ್ಕಾರವಾದದ್ದೇ ಇಲ್ಲಿಂದ ಎಂದು ಹೇಳಬಹುದು. ಹಳೆಗನ್ನಡ ಕಾವ್ಯವನ್ನು ಓದುವ ಕ್ರಮ ಮತ್ತು ಗ್ರಹಿಕೆಯ ರೀತಿಯನ್ನು ಮೊದಲ ಬಾರಿಗೆ ಜೋಶಿಯವರಿಂದ ಕಲಿತೆವು. ಕನ್ನಡ ಛಂದಸ್ಸು ಮತ್ತು ಕೇಶಿರಾಜನ ಶಬ್ದಮಣಿದರ್ಪಣ ಎಂಬ ಶುಷ್ಕ ವ್ಯಾಕರಣ ಶಾಸ್ತ್ರ ಗ್ರಂಥವನ್ನು ನಾವೆಲ್ಲ ತಲೆ ತಿನ್ನುವ ವಿಷಯಗಳೆಂದೇ ಭಾವಿಸಿ ಅವುಗಳಿಂದ ಸಾಧ್ಯವಾದಷ್ಟು ದೂರವೇ ಇರುತಿದ್ದೆವು. ಆದರೆ ವ್ಯಾಕರಣದ ಈ ಶುಷ್ಕ ವಿಷಯಗಳನ್ನೂ ತಮ್ಮ ವಿಶಿಷ್ಟ ಶೈಲಿ ಮತ್ತು ಆಕರ್ಷಕ ವ್ಯಕ್ತಿತ್ವದಿಂದ ನಾಯಕರು ನಮ್ಮ ಅಭಿರುಚಿ, ಆಸಕ್ತಿಗಳು ವೃದ್ಧಿಸುವ ರೀತಿಯಲ್ಲಿ ನಮಗೆ ಪಾಠ ಮಾಡಿದರು.

ಈ ಉಭಯ ವಿಭಾಗಗಳ ಕಲಿಕೆ ನನ್ನಲ್ಲಿ ಯಕ್ಷಗಾನ ಪ್ರಸಂಗ ರಚನೆಗೆ ಪ್ರೇರಣೆಯಾಯಿತು.

ಬಿ.ಏ. ಅಂತಿಮ ವರ್ಷದ ಓದಿನವರೆಗೂ ನಾನು ಯಕ್ಷಗಾನ ಬಯಲಾಟಗಳನ್ನು ನೋಡುತ್ತಿದ್ದೆನಾದರೂ ಅಲ್ಲಿ ಅಭಿನಯಿಸುವ ಆಸೆ ಎಂದೋ ಕಮರಿ ಹೋಗಿತ್ತು. ಕಾಲೇಜಿನಲ್ಲಿ ಕನ್ನಡ ಓದಿನ ಪ್ರಭಾವದಿಂದ ಛಂದಸ್ಸಿಗೆ ಅನುಗುಣವಾಗಿ ಪ್ರಸಂಗ ಪದ್ಯವನ್ನು ಬರೆಯುವ ಗೀಳು ಹುಟ್ಟಿಕೊಂಡಿತು. ಭಾಮಿನಿ, ವಾರ್ಧಕ, ಷಟ್ಪದಿಗಳನ್ನು ಮಾತ್ರೆಗಳೂ, ಗಣಗಳ ಆಧಾರದಿಂದ ಬರೆಯುವುದು, ಪ್ರಾಸಕ್ಕೆ ತಕ್ಕ ಪದಗಳನ್ನು ಹುಡುಕಿ ಹೊಂದಿಸಿ ಬರೆಯುವುದು ಒಂದು ಆಟದಂತೆ ನನ್ನ ಮನಸ್ಸನ್ನು ಆವರಿಸಿತು. ಜೊತೆಯಲ್ಲಿ ನಮ್ಮ ಊರಿನ ಪರಿಸರದಲ್ಲಿ ಆಗಾಗ ಕಾಣಿಸಿಕೊಳ್ಳುವ ಧರ್ಮಸ್ಥಳ, ಮಂಗಳೂರು, ಕೊಲ್ಲೂರು, ಕೊಳಗಿಬೀಸ್ ಮುಂತಾದ ಯಕ್ಷಗಾನ ಮೇಳದ ಆಟಗಳು ನನಗೆ ಪರೋಕ್ಷವಾಗಿ ರಂಗ ಪ್ರಯೋಗದ ತಂತ್ರಗಳನ್ನು ಕಲಿಸಿದವು..

ಶ್ರೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ, ಗೋವಿಂದ ಭಟ್, ಕುಂಬ್ಳೆ ಸುಂದರ ರಾವ್, ಕೊಳ್ಳೂರು ರಾಮಚಂದ್ರ ಮೊದಲಾದ ತೆಂಕು ತಿಟ್ಟಿನ ಕಲಾವಿದರ ವಾಗ್ವಿಲಾಸ, ರಾಮಚಂದ್ರ ಹೆಗಡೆ ಚಿಟ್ಟಾಣಿ, ಜಲವಳ್ಳಿ, ಎಕ್ಟರ್ ಜೋಷಿ, ಗಜಾನನ ಭಂಡಾರಿ, ಆರಾಟೆ ಮಂಜುನಾಥ, ಎಂ.ಏ. ನಾಯ್ಕ, ಮುರೂರು ದೇವರು ಹೆಗಡೆ, ಈಶ್ವರ ಹೆಗಡೆ ಮುಂತಾದ ಬಡಕು ತಿಟ್ಟಿನ ಕಲಾವಿದರ ನೃತ್ಯಾಭಿನಯದ ಚೆಲುವು ನನಗೆ ಯಕ್ಷಗಾನದ ಹುಚ್ಚು ಹಿಡಿಸಿದಂತೆ ಪ್ರಭಾವಿಸಿದವು.

ನಮ್ಮ ಊರಿನಲ್ಲಿ ಎಲ್ಲಾ ಜಾತಿಯ ಜನರೂ ತಮ್ಮದೇ ಆದ ಬಯಲಾಟ ಮೇಳ ಕಟ್ಟಿಕೊಂಡು ವರ್ಷಕ್ಕೊಮ್ಮೆಯಾದರೂ ಬಯಲಾಟ ಪ್ರದರ್ಶನ ಏರ್ಪಡಿಸುವ ಕಾಲ ಅದು. ನಮ್ಮ ಕೇರಿಯಲ್ಲೂ ನಮ್ಮ ತಂದೆ ಗಣಪು ಮಾಸ್ತರರಿಂದ ತರಬೇತಿ ಪಡೆದು ವಾರ್ಷಿಕ ಹರಕೆ ಬಯಲಾಟ ನಡೆಯುತ್ತಿತ್ತು.

ನಾನು ಬಿ.ಏ. ಅಂತಿಮ ವರ್ಷದಲ್ಲಿ ಓದುವ ಸಂದರ್ಭ ಡಾ. ರಾಜಕುಮಾರ – ಕಲ್ಪನಾ ಅಭಿನಯಿಸಿದ ‘ಮಹಾಸತಿ ಅರುಂಧತಿ’ ಎಂಬ ಚಲನ ಚಿತ್ರವೊಂದು ತುಂಬ ಜನಪ್ರಿಯವಾಗಿತ್ತು. ಅದರ ಸೊಗಸಾದ ಕಥಾವಸ್ತು ಯಕ್ಷಗಾನಕ್ಕೆ ತುಂಬ ಹೊಂದಿಕೆಯಾಗುವಂತೆ ಕಂಡು ಅದೇ ಕಥೆಯನ್ನು ಆಯ್ದುಕೊಂಡು ನಾನು ‘ಗೌತಮಿ ಮಹಾತ್ಮೆ’ ಎಂಬ ಹೆಸರಿನಲ್ಲಿ ಪ್ರಸಂಗ ರಚನೆ ಮಾಡಿದೆ. ನಮ್ಮ ತಂದೆಯವರು ಅದನ್ನು ತಿದ್ದಿ ಪರಿಷ್ಕರಿಸಿ ನಮ್ಮ ಊರಿನ ಹುಡುಗರು-ಹಿರಿಯರಿಗೆ ತರಬೇತಿ ನೀಡಿ ಪ್ರದರ್ಶನಕ್ಕೆ ಅಣಿಗೊಳಿಸಿದರು. ನನ್ನ ಗೆಳೆಯರೊಂದಿಗೆ ನಾನೇ ಇಲ್ಲಿಯ ಮುಖ್ಯ ಪಾತ್ರ ನಿರ್ವಹಿಸಿ ಪ್ರದರ್ಶನ ನೀಡಿದೆವು. ತುಂಬ ಯಶಸ್ವಿಯಾಗುವುದರೊಂದಿಗೆ ನೆರೆ ಹೊರೆಯ ಕೆಲವು ಊರುಗಳಿಂದಲೂ ಪ್ರದರ್ಶನದ ಬೇಡಿಕೆಗಳು ಬಂದವು. ನಾನು ಪ್ರಸಂಗ ಕರ್ತನಾಗಿ ಸಣ್ಣದೊಂದು ಹೆಸರು ಸಂಪಾದಿಸುವ ಅವಕಾಶ ಪಡೆದೆ, ಮಾತ್ರವಲ್ಲ ಯಕ್ಷಗಾನ ನಟನಾಗಿ ಯಶಸ್ಸು ಪಡೆದ ಮೊದಲ ಹೆಜ್ಜೆಯಾಯಿತು.

ಅದೇ ವರ್ಷ ಅಂಕೋಲೆಯ ‘ನೀಲಂಪುರ’ ಎಂಬ ಗ್ರಾಮದ ವಾರ್ಷಿಕ ಹರಕೆ ಆಟದಲ್ಲಿ ಒಂದು ಪಾತ್ರ ನಿರ್ವಹಿಸುವಂತೆ ಅಲ್ಲಿಯ ಸಂಘಟಕ ರಿಂದ ಆಹ್ವಾನ ಬಂದಿತು. ಧೈರ್ಯ ಮಾಡಿ ಈ ಆಹ್ವಾನವನ್ನು ಒಪ್ಪಿಕೊಂಡು ಅಲ್ಲಿ ‘ಚಂದ್ರಹಾಸ ಚರಿತ್ರೆ ಆಖ್ಯಾನದಲ್ಲಿ ಚಂದ್ರಹಾಸ ಪಾತ್ರ ಮಾಡಿದೆ. ನನ್ನ ಕಲ್ಪನೆಗೂ ಮೀರಿ ನಾನು ಪಾತ್ರ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದೆ. ಇದರ ಪರಿಣಾಮದಿಂದ ಮರು ವರ್ಷದಿಂದಲೇ ಅಂಕೋಲಾ ತಾಲೂಕಿನ ಹಳ್ಳಿ ಹಳ್ಳಿಗಳಿಂದ ನನಗೆ ಆಹ್ವಾನಗಳು. ಬರಲಾರಂಭಿಸಿದವು. ಬಂದ ಆಹ್ವಾನಗಳನ್ನು ಒಪ್ಪಿಕೊಳ್ಳುತ್ತ, ವಿವಿಧ ಪಾತ್ರಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತ ತನ್ಮಯತೆಯಿಂದ ಎಲ್ಲ ಪಾತ್ರಗಳನ್ನು ನಿರ್ವಹಿಸತೊಡಗಿದೆ. ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಗಳು, ಸಂಘಟಕರ ಪ್ರೀತಿ-ಆದರಗಳು, ಕೈಗೆ ಸಿಗುವ ಸಂಭಾವನೆಗಳಿಂದ ನನಗೆ ಯಕ್ಷಗಾನದ ಹುಚ್ಚು ಹೆಚ್ಚತೊಡಗಿತು.

ನಂತರ ಎಂ.ಏ. ಓದಲು ನಿರ್ಧರಿಸಿ ಎರಡು ವರ್ಷ ಧಾರವಾಡದಲ್ಲಿ ಕಳೆಯಬೇಕಾದ್ದರಿಂದ ನನ್ನ ವೇಷಗಾರಿಕೆಗೆ ಕಡಿವಾಣ ಹಾಕಲೇ ಬೇಕಾಯಿತು. ಆದರೂ ಆ ಎರಡು ವರ್ಷಗಳ ಅವಧಿಯಲ್ಲಿ ರಾಮಾಯಣದ ವಾಲಿಯ ಸಮಗ್ರ ಬದುಕಿನ ಕತೆಯನ್ನು ಆಯ್ದುಕೊಂಡು ‘ವೀರ ವಾಲಿ’ ಎಂಬ ಪ್ರಸಂಗವನ್ನು, ಒಂದು ಜನಪದ ಕತೆಯನ್ನು ಆಧರಿಸಿ ‘ನಾಗ ಲೋಕ ವಿಜಯ’ ಎಂಬ ಪ್ರಸಂಗವನ್ನು ಬರೆದು ಸಿದ್ಧಪಡಿಸಿದೆ. ಎರಡೂ ಪ್ರಸಂಗಗಳಲ್ಲಿ ಮುಖ್ಯ ಪಾತ್ರ ನಿರ್ವಹಿಸಿದೆ. ಎರಡೂ ಪ್ರಸಂಗಗಳ ಯಶಸ್ಸಿನಲ್ಲಿ ನಮ್ಮ ತಂದೆಯವರು, ಚಿಕ್ಕಪ್ಪಂದಿರು, ಭಾವ ಹೊನ್ನಪ್ಪ ಮಾಸ್ತರ, ಸಹೋದರ ನಾಗೇಶ ಗುಂದಿ ಮುಂತಾದವರ ಪಾತ್ರ ನಿರ್ವಹಣೆ, ಕೃಷ್ಣ ಮಾಸ್ಕೇರಿ, ಸಿದ್ದಾಪುರದ ಹೆಮ್ಮನಬೈಲು ಮತ್ತು ಸತೀಶ ಹೆಗಡೆ ದಂಟಕಲ್, ನನ್ನ ಸೋದರ ಮಾವ ಹಿಲ್ಲೂರಿನ ಗೋಯ್ದು ಆಗೇರ ಮುಂತಾದವರ ಭಾಗವತಿಕೆಯೂ ಪೂರಕವಾಯಿತು ಎಂಬುದು ನಿಸ್ಸಂದೇಹ.

ನನ್ನ ಯಕ್ಷರಂಗದ ಯಾತ್ರೆ ಆರಂಭವಾದದ್ದು ಹೀಗೆ. ರಂಗದ ಬದುಕಿನ ಏಳುಬೀಳುಗಳನ್ನು ಮುಂದೆ ಪ್ರಸ್ತಾಪಿಸುವೆ.

***************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

3 thoughts on “

  1. ಗುರೂಜಿ,
    ಅಂತೂ ಯಕ್ಷಗಾನದ ಹುಚ್ಚು ಬಿ.ಎ. ಒದಿ ನೊಂದಿಗೆ ಹೆಜ್ಜೆ ಹಾಕಿದ್ದೀರಿ. ನಿಮ್ಮ ಯಕ್ಷಗಾನ ಹುಚ್ಚು ಸ್ವತಃ ರಚಿಸಿ ಪ್ರದರ್ಶನ ಮಾಡುವಷ್ಟು ಮಟ್ಟಿಗೆ ಬೆಳೆಯಿತು ಎಂದರೆ ಇದು ದೊಡ್ಡ ಸಾಧನೆ.
    ಮನಸ್ಸಿದಲ್ಲಿ ಮಾರ್ಗ ಎಂಬ ಗಾದೆ ಸುಳ್ಳಲ್ಲ……

    ಮುಂದುವರಿದ ಸಂಚಿಕೆ
    ಎದುರಾಗಿರುವೆ…….

    1. ಧನ್ಯವಾದಗಳು ಸರ್, ನಿಮ್ಮ “ಆತ್ಮಕಥನ”ಓದಿ ತುಂಬಾ ಸಂತೋಷವಾಯಿತು.

  2. ತಮ್ಮ ಯಕ್ಷಗಾನದ ಉಗಮದ ಬಗೆಗೆ ಹಾಗೂ ಬೆಳವಣಿಗೆ ಕುರಿತಾದ ವಿವರಗಳು ತಿಳಿದಿರಲಿಲ್ಲ. ನಿರೂಪಣೆ ಚೆನ್ನಾಗಿದೆ.

Leave a Reply

Back To Top