
ಅಂಕಣ ಬರಹ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೨

ಇಂಗ್ಲಿಷ್ ವ್ಯಾಕರಣದ ಅನೇಕ ಅಂಶಗಳು ಮತ್ತೊಮ್ಮೆ ಇಲ್ಲಿ ಪುನರಾವರ್ತನೆ ಆದವು. ಸಮಾನಾರ್ಥಕ ವಿರುದ್ಧಾರ್ಥಕ ಪದಗಳ ಪಟ್ಟಿಗಳು ಇಂಗ್ಲಿಷ್ ನಾಣ್ಣುಡಿಗಳು ಪ್ರೋಸ್ಗಳು ಎಲ್ಲವೂ ಕಲಿಸಲ್ಪಟ್ಟವು. ಅಂಕಗಣಿತದ ಸುಮಾರು ಲೆಕ್ಕಗಳನ್ನು ಮಾಡಿಸಿದ್ದರು. ಎಂದೋ ಒಂದು ದಿನ ತರಬೇತಿಗೆ ನಮ್ಮ ಹಾಜರಾತಿ. ಅಂತೂ ಇಂತೂ ಲಿಖಿತ ಪರೀಕ್ಷೆಯ ದಿನ ಹತ್ತಿರ ಬರುತ್ತಿತ್ತು.
ಲಿಖಿತ ಪರೀಕ್ಷೆಯು ಡಿಸೆಂಬರ್ ೧೯೮೫ರ ತಿಂಗಳ ಒಂದು ಭಾನುವಾರ. ಪರೀಕ್ಷೆಯ ದಿನದ ಹಿಂದಿನ ಶುಕ್ರವಾರ ತರಬೇತಿ ತರಗತಿಗಳು ಕೊನೆ ಎಂದು ಹೇಳಿದರು ಒಂದು ರೀತಿಯ ವಿದಾಯ ಸಮಾರಂಭದ ತರಹ ಅಂದು ಇರುತ್ತದೆ ಹಾಗೂ ಲಘು ಉಪಹಾರ ವಿತರಣೆ ಇರುತ್ತದೆ ಎಂದು ತಿಳಿಸಿದರು. ತಿಂಡಿಪೋತಿ ಆದ ನಾನು ಅಂದಿನ ದಿನ ಮಿಸ್ ಮಾಡಿಕೊಳ್ಳದೆ ಗೆಳತಿಯೊಂದಿಗೆ ಹೋದೆ .ಸಂಜೆ ಬಿಸಿ ಬಿಸಿ ಉಪ್ಪಿಟ್ಟು ಕೇಸರಿಬಾತು ಹಾಗೂ ಕಾಫಿ ಸಮಾರಾಧನೆ. ಖುಷಿಯಾಗಿ ತಿಂದು ಪರೀಕ್ಷೆಗೆ ಪರಸ್ಪರ ಶುಭ ಕೋರಿ ಎಲ್ಲರ ಶುಭ ಹಾರೈಕೆಗಳನ್ನು ಪಡೆದು ಹಿಂದಿರುಗಿದೆವು.
ಪರೀಕ್ಷೆ ಬೆಂಗಳೂರಿನಲ್ಲಿ ಬೆಳಗ್ಗೆ 10 ಗಂಟೆಗೆ ಇದ್ದಿದ್ದರಿಂದ ಹಿಂದಿನ ದಿನ ಶನಿವಾರವೇ ಅಣ್ಣ ಅಂದರೆ ನಮ್ಮ ತಂದೆ ಮತ್ತು ನಾನು ಬೆಂಗಳೂರಿಗೆ ಹೊರಟೆವು. ನಮ್ಮ ತಾಯಿಯ ಅಕ್ಕ ಸುಮಿತ್ರಮ್ಮ ಅವರ ಮನೆ ಬೆಂಗಳೂರಿನ ನಗರ್ತಪೇಟೆಯಲ್ಲಿಯೇ ಇದ್ದುದರಿಂದ ಅವರಲ್ಲಿಗೆ ಹೋಗುವುದು ಎಂದು ನಿರ್ಧರಿಸಿಯಾಯಿತು. ಮಧ್ಯಾಹ್ನ ಊಟ ಮುಗಿಸಿ ಎರಡುವರೆ ಗಂಟೆಯ ರೈಲಿಗೆ ಬೆಂಗಳೂರಿಗೆ ತಲುಪಿಯಾಯಿತು. ನಮ್ಮ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಪಾಸ್ ಸಿಗುತ್ತಿತ್ತು ಹಾಗಾಗಿ ನಮ್ಮ ಬೆಂಗಳೂರಿನ ಓಡಾಟವೆಲ್ಲ ರೈಲು ಮೂಲಕವೇ ನಡೆಯುತ್ತಿದ್ದುದು. ದೊಡ್ಡಮ್ಮನ ಮನೆಗೆ ನಮ್ಮ ಸೋದರ ಮಾವನ ಮಗಳು ಸಹ ಇದೇ ಪರೀಕ್ಷೆ ಬರೆಯಲು ಬಂದಿದ್ದಳು. ನನಗಿಂತ 25 ದಿನ ಮಾತ್ರ ಚಿಕ್ಕವಳು ಅವಳು. ಹಾಗಾಗಿ ನಾವಿಬ್ಬರು ಒಂದೇ ದೋಣಿಯ ಪಯಣಿಗರು. (ಮುಂದೆ ಅವಳಿಗೆ ಪೋಸ್ಟಲ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಸಿಕ್ಕಿತು.) ಅಲ್ಲಿಯೂ ಸಹ ಇದೇ ರೀತಿ ತರಬೇತಿಗಳು ನಡೆಯುತ್ತಿದ್ದು ಅವಳು ಮಾಡಿಕೊಂಡಿದ್ದ ನೋಟ್ಸ್ ಗಳ ಗಾತ್ರಕ್ಕೆ ನನಗೆ ಆಶ್ಚರ್ಯವಾಗಿತ್ತು ಮತ್ತು ಸೀರಿಯಸ್ಸಾಗಿ ಅಭ್ಯಾಸ ಮಾಡುತ್ತಿದ್ದಾಗ ನಾನು ತುಂಬಾ ಬೇಜವಾಬ್ದಾರಿ ಅಂತ ನನಗೆ ಅನಿಸಿತು ಪರೀಕ್ಷೆ ಪಾಸ್ ಆಗುತ್ತೇನೋ ಇಲ್ಲವೋ ಎನ್ನುವ ಸಂದೇಹವು ಶುರುವಾಯಿತು ಆದರೆ ಅದಕ್ಕೆಲ್ಲ ಆಗ ಅಷ್ಟೊಂದು ಗಮನ ಕೊಡದ ಬುದ್ದಿ. ಅವಳು ಪರೀಕ್ಷೆಗೆ ಓದಿಕೊಳ್ಳುತ್ತಿದ್ದರೆ ನಾನು ನನ್ನ ದೊಡ್ಡಮ್ಮನ ಮಗಳ ಜೊತೆ ಟಿವಿ ನೋಡುತ್ತಾ ಕುಳಿತಿದ್ದೆ.
ಪರೀಕ್ಷೆ ಇದ್ದಿದ್ದು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ. ನನ್ನ ಕಸಿನ್ ಸಂಧ್ಯಾಳ ಹಾಲ್ ಟಿಕೆಟ್ ನಂಬರ್ ಪಕ್ಕದ ಬೇರೊಂದು ಬಿಲ್ಡಿಂಗ್ ನಲ್ಲಿ ಇತ್ತು. ನಮ್ಮ ತಂದೆ ನನ್ನನ್ನು ನಮ್ನ ಹಾಲ್ ಟಿಕೆಟ್ ನಂಬರ್ ಇದ್ದ ಕಟ್ಟಡದಲ್ಲಿ ಬಿಟ್ಟು ಅವಳನ್ನು ಬೇರೆ ಕಡೆಗೆ ಕರೆದುಕೊಂಡು ಹೋದರು. 10 ಗಂಟೆಯಿಂದ ಒಂದು ಗಂಟೆಯವರೆಗೆ ಮೊದಲ ಅಂಕಗಣಿತದ ಪರೀಕ್ಷೆ ನಂತರ ಒಂದು ಗಂಟೆ ವಿರಾಮ ಹಾಗೂ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಇಂಗ್ಲೀಷ್ ಪತ್ರಿಕೆ. ದೊಡ್ಡಮ್ಮ ಮಧ್ಯಾನ ತಿನ್ನಲು ಸಹ ಒಂದು ಡಬ್ಬಿ ತಯಾರು ಮಾಡಿ ಕೊಟ್ಟಿದ್ದರು ಜೊತೆಗೆ ನೀರು, ಬೆಳಗಿನ ಪೇಪರ್ ಬರೆಯಲು ಸನ್ನದ್ಧಳಾಗಿ ಕೊಠಡಿಯ ಕಡೆಗೆ ಹೊರಟೆ. ಅದು ಅಷ್ಟೊಂದು ದೊಡ್ಡ ಕಟ್ಟಡವಾಗಿದ್ದರು ಅಂದು ಪರೀಕ್ಷಾರ್ಥಿಗಳಿಂದ ತುಂಬಿ ಗಿಜಿ ಗಿಜಿ ಎನ್ನುತ್ತಿದ್ದುದು ನೋಡಿ ಇಷ್ಟೊಂದು ಜನ ಪರೀಕ್ಷೆ ಬರೆಯುತ್ತಾರಲ್ಲ ಇವರ ಮಧ್ಯೆ ನಾನು ಆಯ್ಕೆಯಾಗುವುದು ಸಾಧ್ಯವೇ ಎಂಬ ಒಂದು ಸಣ್ಣ ಆತಂಕ .ಅಲ್ಲದೆ ಅದೇ ಮೊದಲ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಒಂದು ಕಳವಳ ಎಲ್ಲವೂ ಕೂಡಿ ನನ್ನ ಕ್ರಮಾಂಕ ಇದ್ದ ಬೆಂಚಿನಲ್ಲಿ ಕುಳಿತೆ .ನನ್ನ ಆರಾಧ್ಯ ದೈವ ಶ್ರೀ ರಾಘವೇಂದ್ರರನ್ನು ಒಮ್ಮೆ ನೆನೆಸಿಕೊಂಡು ಉತ್ತರ ಪತ್ರಿಕೆಯಲ್ಲಿ ನನ್ನ ಪರೀಕ್ಷಾ ಕ್ರಮಾಂಕ ಬರೆದೆ ಎಂದಿಗೂ ನೆನಪಿದೆ ನನ್ನ ಪರೀಕ್ಷಾ ಕ್ರಮಾಂಕದ ಸಂಖ್ಯೆ ೫೯೧.
ಪ್ರಶ್ನೆ ಪತ್ರಿಕೆ ಕೈಗೆ ಬಂತು. ವಾಡಿಕೆಯಂತೆ ಇಡೀ ಪ್ರಶ್ನೆ ಪತ್ರಿಕೆಯಲ್ಲಿ ಮೇಲೆ ಕಣ್ಣಾಡಿಸಿದೆ ಅಂತಹ ಏನು ಕಷ್ಟದ ಲೆಕ್ಕಗಳು ಎನಿಸಲಿಲ್ಲ.
ನೆನಪಿರುವ ಪ್ರಕಾರ ಒಂದು ಲೆಕ್ಕ ಮೂಲದರವನ್ನು ಕಂಡುಹಿಡಿಯುವಂತಹದ್ದು .ಲಾಭ ಸೇರಿಸಿ ಬರುವ ನಿವ್ವಳ ಮೊತ್ತವನ್ನು ಕೊಟ್ಟಿರುತ್ತಾರೆ. ಎಷ್ಟು ವಸ್ತುಗಳು ಎಂಬುದನ್ನು ಕೊಟ್ಟಿರುತ್ತಾರೆ. ಪ್ರತ್ಯೇಕ ಒಂದು ವಸ್ತುವಿನ ದರ ಕಂಡುಹಿಡಿಯ ಬೇಕಾಗಿರುತ್ತದೆ ಆ ರೀತಿಯ ಸಮಸ್ಯೆಗೆ ವಸ್ತುವಿನ ದರ 100 ಎಂದಿರಲಿ ಎಂದು ಆರಂಭಿಸಿ ಕಡೆಗೆ ಅದರ ಸರಿಯಾದ ದರವನ್ನು ಕಂಡುಹಿಡಿಯಬೇಕು ಇಂತಹ ಲೆಕ್ಕಗಳು ನನಗೆ ಒಂದು ರೀತಿಯಲ್ಲಿ ಹುರಿದ ಕಡಲೆಯಂತೆ . ಹಾಗೆಯೆ ಮಾಡಿ ಮುಗಿಸಿದ ನಂತರ ಸ್ವಲ್ಪ ಧೈರ್ಯ ಬಂದಿತು.
ಗಡಿಯಾರದ ಚಲನೆಯ ಲೆಕ್ಕಾಚಾರದ ಬಗ್ಗೆ ಒಂದು ಲೆಕ್ಕ ಇತ್ತು. ಮತ್ತೊಂದು ನೆನಪಿನಲ್ಲಿರುವ ಲೆಕ್ಕವೆಂದರೆ ಒಂದು ಗೋಡೆಗೆ ಏಣಿಯನ್ನು ಒರಗಿಸಿ ನೆಲದಿಂದ ಗೋಡೆಗೆ ಇರುವ ಅಂತರ ಕೊಟ್ಟಿದ್ದರು. ಏಣಿಯ ಉದ್ದವನ್ನು ಕಂಡುಹಿಡಿಯಬೇಕಿತ್ತು ಪೈಥಾಗರಸ್ ಪ್ರಮೇಯದ ಸಿದ್ಧಾಂತವನ್ನು ಅವಲಂಬಿಸಿ ಮಾಡಬೇಕಾದ ಈ ಲೆಕ್ಕವೂ ಸಹ ನನಗೆ ತುಂಬಾ ಖುಷಿ ಕೊಟ್ಟಿತು ಮುಂದೆ ಮೊದಲನೆಯ ಅಂಕಗಣಿತದ ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿಯೇ ಮಾಡಿದ್ದೆ ಎಂಬ ಸಂತೋಷದಿಂದ ಪರೀಕ್ಷಾ ಕೊಠಡಿಯಿಂದ ಹೊರಗೆ ಬಂದೆ.
ಮೊದಲೇ ಮಾತನಾಡಿಕೊಂಡ ಸ್ಥಳದಲ್ಲಿ ನಮ್ಮ ಮಾವನ ಮಗಳು ಬಂದಳು. ಇಬ್ಬರು ತಿಂಡಿ ತಿಂದು ನೀರು ಕುಡಿದು ಮತ್ತೆ ಶುಭ ಕೋರಿ ಎರಡನೆಯ ಪರೀಕ್ಷೆ ಎದುರಿಸಲು ಹೊರಟೆವು ಇಂಗ್ಲಿಷ್ ವ್ಯಾಕರಣದ ಹಲವಾರು ಒಂದು ಅಂಕದ ಪ್ರಶ್ನೆಗಳು ಎರಡು ಅಂಕದ ಪ್ರಶ್ನೆಗಳು ಸುಲಭವಾಗಿದ್ದವು.ಪ್ರಬಂಧ ಬರೆಯಲು ಜನಸಂಖ್ಯಾ ಸ್ಪೋಟ ಈ ವಿಷಯ ಆರಿಸಿಕೊಂಡಿದ್ದೆ ಎಂದು ನೆನಪು ಶಾಲೆ ಕಾಲೇಜಿನ ಎಕನಾಮಿಕ್ಸ್ ವಿಷಯದಲ್ಲಿ ಇದರ ಬಗ್ಗೆ ವಿವರವಾಗಿ ಓದಿದ್ದರಿಂದ ಈ ವಿಷಯದ ಬಗ್ಗೆ ನಿರರ್ಗಳವಾಗಿ ಬರೆಯಲು ಸಾಧ್ಯವಾಯಿತು ತರಬೇತಿಯಲ್ಲಿ ಮೊದಲೇ ತಿಳಿಸಿದಂತೆ ಪೀಠಿಕೆ ವಿಷಯ ಉಪಸಂಹಾರ ಇವೆಲ್ಲವುಗಳನ್ನು ತುಂಬಾ ಎದ್ದು ಕಾಣುವಂತೆ ಬರೆದು ಶೀರ್ಷಿಕೆಗಳಿಗೆ ಕೆಂಪು ಪೆನ್ನಿನಿಂದ ಗೆರೆಗಳನ್ನು ಎಳೆದು ಆಕರ್ಶಕವನ್ನಾಗಿಸಿ ಆ ಪರೀಕ್ಷೆಯನ್ನು ಮುಗಿಸಿ ಆಯಿತು.
ಅಲ್ಲಲ್ಲಿ ಕಂಡ ಕಾರ್ಮಿಕ ಸಂಘದ ಸದಸ್ಯರುಗಳು ಪರೀಕ್ಷೆ ಹೇಗೆ ಮಾಡಿದ್ದೀರಿ ಎಂದು ವಿಚಾರಿಸಿಕೊಳ್ಳುತ್ತಿದ್ದರು ಮೈಸೂರಿನಿಂದ ಬಂದಿದ್ದ ನನ್ನ ಪರಿಚಯದ ಉದ್ಯೋಗಿಯು ಸಹ ಹೇಗೆ ಮಾಡಿದೆ ಎಂದು ವಿಚಾರಿಸಿಕೊಂಡರು. ಎಲ್ಲರಿಗೂ ತುಂಬಾ ಚೆನ್ನಾಗಿ ಮಾಡಿದೆ ಎಂದೇ ಹೇಳಿದೆ ಆ ಭರವಸೆ ನನಗಿತ್ತು. ನನ್ನ ಕಸಿನ್ ಸಹ ಪರೀಕ್ಷೆ ಚೆನ್ನಾಗಿ ಮಾಡಿರುವೆ ಎಂದಳು. ಇಬ್ಬರಿಗೂ ಸಮಾಧಾನವಾಗಿತ್ತು.
ನಮ್ಮನ್ನು ಕರೆದುಕೊಂಡು ಹೋಗಲು ಮತ್ತೆ ನಮ್ಮ ತಂದೆ ಬಂದಿದ್ದರು ನಂತರ ದೊಡ್ಡಮ್ಮನ ಮನೆಯಲ್ಲಿ ಎಲ್ಲಾ ಸೇರಿ ನಂತರ ಸೆಕೆಂಡ್ ಶೋ ಸಿನಿಮಾ ಸಹ ನೋಡಿ ಮಾರನೆಯ ದಿನ ಮೈಸೂರಿಗೆ ವಾಪಸ್ ಬಂದದ್ದು. ಅಲ್ಲಿಗೆ ನಾನು ಅದನ್ನು ಮರೆತೇ ಬಿಟ್ಟಿದ್ದೆ ಎಂದರೆ ಇಂದಿನ ಸಣ್ಣದಕ್ಕೂ ಕಳವಳಗೊಳ್ಳುವ ಈಗಿನ ನನ್ನ ಸ್ವಭಾವ ಅಂದು ಇರಲಿಲ್ಲವೇ ಎಂದು ನನ್ನನ್ನೇ ಪ್ರಶ್ನೆ ಕಾಡುತ್ತದೆ ಅಥವಾ ಅಪ್ಪ-ಅಮ್ಮ ಇರುವ ತನಕ ನಮ್ಮನ್ನು ಆವರಿಸಿಕೊಂಡಿರುವ ಆ ಸುಭದ್ರತೆಯ ಕೋಟೆ ನಮ್ಮ ಅಳುಕುಗಳನ್ನೆಲ್ಲ ಮರೆಮಾಡಿ ನಮ್ಮನ್ನು ನಿರಾಳವಾಗಿ ಇಟ್ಟಿರುತ್ತದೋ ಏನೋ.
ಸುಜಾತಾ ರವೀಶ್

ನೋಟ-02
ಸುಂದರ ಪೂರಕ ಚಿತ್ರಗಳೊಂದಿಗೆ ಅಂಕಣ ಬರಹ ಪ್ರಕಟಿಸಿದ ಸಂಪಾದಕರಿಗೆ ಅನಂತ ಧನ್ಯವಾದಗಳು.
ಸುಜಾತಾ ರವೀಶ್
ನೀವು ಎಲ್ಲಾವುದರಲ್ಲೂ ಬುದ್ಧಿವಂತೆ ಯಾವುದರಿಂದ ಎಲ್ಲಾ ಪರೀಕ್ಷೆ ಚೆನ್ನಾಗಿ ಮಾಡಿದ್ರಿ. ಕೆಲಸ ಸಿಗುತ್ತೆ ಅಂತ ಕಾನ್ಫಿಡೆಂಟ್
ಆಗಿದ್ರೇನೊ.ಕೆಲಸ ಸಿಕ್ಕಿದೆ.
ಅಭಿನಂದನೆಗಳು
ಧನ್ಯವಾದಗಳು. ಆದರೆ ಅಷ್ಟು ಸುಲಭದಲ್ಲಿ ಆಗಲಿಲ್ಲ. ಮುಂದಿನ ಕಂತುಗಳನ್ನು ಓದಿ ದಯವಿಟ್ಟು
ಹೌದು… ಅಪ್ಪ ಅಮ್ಮಮಕಳಿಗೆರಡು ಸುಭದ್ರತೆಯ ತಾಣಗಳು..!
ಓದಿ ಖುಷಿಗೊಂಡೆ…
ಹೃನ್ಮನಪೂರ್ವಕ ವಂದನೆಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು ಸುಜಾತಾ ಮೇಡಂ ಅವರಿಗೆ..!
ನಿಮ್ಮ ಓದು ಹಾಗೂ ಸವಿ ಸ್ಪಂದನೆ ತುಂಬಾ ಸಂತೋಷ ಕೊಟ್ಟಿತು. ಧನ್ಯವಾದಗಳು ಸರ್.
ಸುಜಾತಾ ರವೀಶ್
ಸುಭದ್ರತೆಯ ಕೋಟೆ,ಅಳುಕು ಪರಸ್ಪರ ವಿರುದ್ಧ ಸ್ವಭಾವಗಳನ್ನು ಒಟ್ಟಿಗೆ ಸೇರಿಸಿದ ರೀತಿ ಚೆಂದ.ಅಪ್ಪ ಸುಭದ್ರ ಕೋಟೆಯೇ.ಮಗಳು ಅಳುಕು ಕಳವಳದ ಗುಣದವಳು ಎಲ್ಲವೂ ಪೂರಕ ಸಂಕಥನ. ಇದೊಂಥರ ಹಾದಿಗುಂಟ ಪಯಣದ ಸಂಚಾರೀ ಗುಣದ ಸಲೀಸು ಲೇಖನ. Journey need not to be allways in vehicles, Saga of Life itself is a tool of vehicle with wheels ಅಲ್ವೇ.
ವಾವ್! ಎಷ್ಟು ಸುಂದರ ಮತ್ತು ಅರ್ಥಪೂರ್ಣ ಪ್ರತಿಕ್ರಿಯೆ ಶ್ರೀನಿವಾಸ ಪ್ರಸಾದ್. ನನ್ನ ಲೇಖನಕ್ಕಿಂತ ನಿಮ್ಮ ಪ್ರತಿಕ್ರಿಯೆಯೇ ಓದಲು ಚೆನ್ನಾಗಿದೆ. ಧನ್ಯವಾದಗಳು ತುಂಬಾ ಸಣ್ಣ ಪದ. ನಿಮ್ಮ ಓದು ಹಾಗೂ ಪ್ರೋತ್ಸಾಹದಾಯಕ ನುಡಿಗಳಿಗೆ ನಾನು ಆಭಾರಿ.
ಸುಜಾತಾ ರವೀಶ್
ಪ್ರತಿಯೊಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಂಡು ಇಂದು ಅಲ್ಲ ಈಗ ನಡೆಯಿತೆನೋ ಎಂಬಂತೆ ಕಣ್ಣ ಮುಂದೆ ನಡೆದ ಘಟನೆಗಳು ಹಾದು ಹೋಗುವಂತೆ ಬಹಳ ನಾಜೂಕಾಗಿ ಸರಳವಾಗಿ ಬರೆದಿರುವಿರಿ ನಿಮ್ಮ ಅಂದಿನ ಘಟನೆ ಇಂದಿನವರಿಗೆ ಇತಿಹಾಸವಾಗಿದೆ
ನೀವು ಬಾಲ್ಯದಿಂದಲೂ ಬುದ್ಧಿವಂತೆಯಾದುದರಿಂದ ಆತ್ಮವಿಶ್ವಾಸದೊಡನೆ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಯಿತು ಸುಜಾತಾ….. ಅಭಿನಂದನೆಗಳು ನಿಮಗೆ.
ಅಂದಿನ ಭಾವನೆಗಳನ್ನು ಮತ್ತೊಮ್ಮೆ ಅಂದಿನಂತೆಯೆ ತೆರೆದಿಟ್ಟಿರುವಿರಿ.ತುಂಬ ಚಂದದ ನಿರೂಪಣೆ.