ಗಾಂಧಿ ವಿಶೇಷ

ಗಾಂಧಿ ದಿಗ್ದರ್ಶನ

ಕಲಿಸಿಕೊಟ್ಟ ಪಾಠ ಶೂನ್ಯ
ಹಣದಾಹ, ಅಧಿಕಾರ ಮೋಹಕ್ಕೆ ನಾಗಾಲೋಟ
ಬೆಟ್ಟದಷ್ಟು ಪಾಪಕ್ಕೆ
ಕ್ಷಮೆಯೂ ಸಿಗಲಿಕ್ಕಿಲ್ಲ !
ವಿದ್ಯೆ ವಂಚಿತ ಬಾಲಕರ
ಶೋಷಿತ ಕಿಶೋರಿಯರ
ಹಸಿದ ಕಣ್ಬೆಳಕಲ್ಲಿ ಜಗದ ಹೆಣವೇ ಕಾಣುತಿದೆ;
ಗಾಳಿಯಲ್ಲಾದರೂ ಗಾಂಧಿವಾದ ತೀಡಬಾರದೇ
ನೆರಳು ಬಿಸಿಲಿನ ನಡುವೆ
ದಣಿದ ದೀನರಿಗೆ ಭಾಗ್ಯ ಯೋಜನೆ
ಮರಿಚಿಕೆಯಾಗಿ, ಮಸಲತ್ತು ನಡೆದಿದೆ
ಇನ್ಯಾರದೊ ಜೇಬಿಗೆ ತುತ್ತಾಗಿದೆ.
ಭ್ರಷ್ಟ ನೋಡುವುದೇ ಕಷ್ಟ
ಹಗಲಿನಲ್ಲೇ ಒಂಟಿ ಹೆಣ್ಣು ತಿರುಗಾಡುವಂತಿಲ್ಲ
ಇನ್ನೆಲ್ಲಿ ರಾಮರಾಜ್ಯ! ಕನಸೇ ಅದು
ಭಗ್ನ ರಾಜಕಾರಣ,ಸೊರಗು ದೇಶಪ್ರೇಮ
ಸಾವಿಗೆ ಶರಣಾಗುವ ಅನ್ನದಾತರು
ವ್ಯಸನಿ ಯುವಕರು, ಢೊಂಗಿ ದಾನಿಗಳು
ಅಮಾನವೀಯ ಅಂಧಾನುಕರಣೆಗೆ
ಚೂರಾದರೂ ಗಾಂಧಿತತ್ವ ನೆನಪಾಗಲಿ…
ಶ್ವೇತಕಾಯ,ನಡುವಲ್ಲಿ ಕೆಂಪುಬತ್ತಿ ತಿರುಗುತ್ತ
ಕೇ ಕೇ ಹಾಕುತ್ತ ರಥಗಳ ಹಿಂಡು
ದೊರಗು ಖಾದಿ,ಅಲ್ಲ ಮೆರಗು,ಪೊಗರು
ಧರಿಸಿದ ನಾಯಕರು !
ಸಿಂಹಾಸನಕ್ಕೆ ವರಗಿ,ಹಾರಕ್ಕೆ ಕೊರಳೊಡ್ಡಿ
ಮೈಕಾಸುರನ ಮೇಲೆರಗಿ
ಭಾಷಣಶೂರರು,ಹೊಗಳುಭಟ್ಟರು
ಮಹಾತ್ಮನೆಂದು ಜಪಿಸುತ್ತಾರೆ.
ಗಾಂಧಿನಿಯಮ ಯಾರಿಗೂ ಬೇಕಿಲ್ಲ
ನಡೆಯುವುದೆಲ್ಲ ನಿಯಮಬಾಹಿರವೇ !
ಇತ್ತೀಚೆಗೆ ಹೊಸ ಚಹಾದ ಪರಿಮಳ ಸೂಸಿದೆ
ಸ್ವಚ್ಛಭಾರತದ ಪೊರಕೆಗಳು ಅಲ್ಲಲ್ಲಿ ಸೆಳೆಯುತ್ತಿವೆ
ಕೊಳೆಯಾಗಿದ್ದ ನನ್ನ ಚಿತ್ರ ಈಗ ಗರಿಗರಿ
ನವರಂಗುಗಳಲ್ಲಿ ಓಡಾಡುತ್ತಿವೆ.
ನಕಲಿ ಫೋಟೊಗಳು ಇದ್ದಂತಿಲ್ಲ
ಒಂದೇಕಡೆ ಬೀಗಜಡಿದು ಕೂತಿಲ್ಲವೆಂದು
ಸ್ವಲ್ಪ ನಿಟ್ಟುಸಿರು ಬಿಟ್ರೇ…‌…
ಹಗರಣಗಳು, ಪ್ರಕರಣಗಳು ಚಳುವಳಿ ರೂಪತಾಳಿ
ಮೀ ..ಟೂ ಮೆನ್ ಟೂ ಗಳ ಕೂಗಾಟ
ಧರ್ಮದ ಮೆಟ್ಟಿಲಿಗೆ ಕ್ರಾಂತಿಹೆಜ್ಜೆಯ ಹುನ್ನಾರ
ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳು ಗಾಳಿಗೆ ತೂರಿವೆ
ಶಿಕ್ಷಣದಲ್ಲಿ ಸಮಾನತೆ,ದುರ್ಬಲರ ಸಂರಕ್ಷಣೆ,
ಗಡಿಕಾಯ್ವ ಯೋಧರ ಸ್ಥಿತಿಗತಿಗಳ ಚಿಂತನೆಯಿಲ್ಲ.
ಭಾರತೀಯತೆ, ಮಾನವೀಯತೆಯನ್ನೇ…
ಮರೆತಿದ್ದಾರೆ !!! ಹೇ ರಾಮ ಹೇ ರಾಮ

*************************************

ವಿಭಾ ಪುರೋಹಿತ್

Leave a Reply

Back To Top